ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 9, 2020

Mahabharata Tatparya Nirnaya Kannada 2048_2051

 

ಪಿತೃಷ್ವಸುರ್ಮ್ಮಿತ್ರವಿನ್ದಾ ಸುತಾ ಚ ಕೃಷ್ಣೇ ಮಾಲಾಮಾಸಜದ್ ರಾಜಮದ್ಧ್ಯೇ ।

ವಿನ್ದಾನುವಿನ್ದೌ ಭ್ರಾತರಾವೇವ ತಸ್ಯಾ ನ್ಯಷೇಧತಾಂ ಧಾರ್ತ್ತರಾಷ್ಟ್ರಾರ್ತ್ಥಮುಗ್ರೌ ॥೨೦.೪೮॥

 

ಶ್ರೀಕೃಷ್ಣನ ಅತ್ತೆಯ (ರಾಜಾಧಿದೇವೀ ವಸುದೇವನ ತಂಗಿ, ಆವಂತಿ ರಾಜ ಜಗತ್ಸೇನನ ಪತ್ನಿ) ಮಗಳಾದ ಮಿತ್ರವಿನ್ದೆಯು ಎಲ್ಲಾ ರಾಜರ ಮಧ್ಯದಲ್ಲಿ ಶ್ರೀಕೃಷ್ಣನಿಗೆ ಮಾಲೆಯನ್ನು ಹಾಕಿದಳು. ತಾಮಸರಾಗಿದ್ದ(ಉಗ್ರೌ) ಅವಳ ಅಣ್ಣಂದಿರಾಗಿರುವ ವಿನ್ದ ಮತ್ತು ಅನುವಿನ್ದರು ದುರ್ಯೋಧನನಿಗಾಗಿ ಅವಳನ್ನು ನಿಗ್ರಹ ಮಾಡಿದ್ದರು. (ಕೃಷ್ಣನನ್ನು ಮದುವೆಯಾಗಬಾರದು, ಆಗುವುದಾದರೆ ದುರ್ಯೋಧನನನ್ನು ಆಗಬೇಕು ಎಂದು).

 [ಈ ಕುರಿತು ಭಾಗವತ ವಾಕ್ಯ ಹೀಗಿದೆ : ‘ವಿನ್ದಾನುವಿನ್ದಾವಾವನ್ತ್ಯೌ ದುರ್ಯೋಧನವಶಾನುಗೌ । ಸ್ವಯಂವರೇ ಸ್ವಭಗಿನೀಂ ಕೃಷ್ಣಕಾಮಾಂ ನ್ಯಷೇಧತಾಮ್’ (೧೦.೬೧.೩೪)]

 

ಜಿತ್ವಾssವನ್ತ್ಯೌ ತೌ ನೃಪತೀಂಶ್ಚೈವ ಸರ್ವಾನಾದಾಯ ತಾಂ ಪ್ರಯಯೌ ವಾಸುದೇವಃ ।

ಪಿತೃಷ್ವಸುಸ್ತನಯಾಂ ಚ ದ್ವಿತೀಯಾಂ ಭದ್ರಾಂ ದತ್ತಾಮಗ್ರಹೀದ್ ಭ್ರಾತೃಭಿಃ ಸಃ ॥೨೦.೪೯ ॥

 

ಶ್ರೀಕೃಷ್ಣನು ಆವಂತಿ ದೇಶದ ರಾಜಕುಮಾರರಾದ ವಿನ್ದಾsನುವಿನ್ದರನ್ನು ಗೆದ್ದು, ಜೊತೆಗೆ  ಉಳಿದ ಎಲ್ಲಾ ರಾಜರನ್ನೂ ಗೆದ್ದು, ಮಿತ್ರವಿನ್ದೆಯೊಂದಿಗೆ ದ್ವಾರಕೆಗೆ ತೆರಳಿದನು. ಶ್ರೀಕೃಷ್ಣನ ಇನ್ನೊಬ್ಬ ಅತ್ತೆಯ (ಶ್ರುತಕೀರ್ತಿ ವಸುದೇವನ ಇನ್ನೊಬ್ಬ ತಂಗಿ, ಕೈಕೇಯ ರಾಜ ಧೃಷ್ಟಕೇತುವಿನ ಪತ್ನಿ) ಮಗಳಾಗಿರುವ ಭದ್ರೆಯನ್ನು, ಆಕೆಯ ಸಹೋದರರೇ ಕರೆತಂದು ಪರಮಾತ್ಮನಿಗೆ ಒಪ್ಪಿಸಿದರು. ಶ್ರೀಕೃಷ್ಣ ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದ.

 

ವಿಶ್ವೇಷಾಂ ದೇವಾನಾಮವತಾರಾ ಹಿ ಪಞ್ಚ ತೇ ಕೈಕೇಯಾ ಭ್ರಾತರೋsಸ್ಯಾ ಹರೇಶ್ಚ ।

ಭಕ್ತಾ ನಿತ್ಯಂ ಪಾಣ್ಡವಾನಾಂ ಚ ತಾತೋsಪ್ಯೇಷಾಂ ವಶೇ ಶೈವ್ಯನಾಮರ್ಭುರಗ್ರೇ ॥೨೦.೫೦॥

 

ಐದು ಜನ ಕೈಕೇಯರು ವಿಶ್ವೇದೇವತೆಗಳ ಅವತಾರಭೂತರು. ಅವರು ಈ ಭದ್ರೆಯ ಅಣ್ಣಂದಿರು. ಅವರು ಪರಮಾತ್ಮನ ನಿತ್ಯಭಕ್ತರು. ಪಾಂಡವರ ಅನುಯಾಯಿಗಳು ಮತ್ತು ಭಕ್ತರೂ ಕೂಡಾ. ಇವರ ತಂದೆ ಶೈವ್ಯ ಎನ್ನುವ ಹೆಸರಿನ ಋಭುದೇವತೆಯಾಗಿದ್ದ[1]. ಅವನ ಮಕ್ಕಳಾಗಿ ಐದು ಜನ ವಿಶ್ವೇದೇವತೆಗಳು ಹುಟ್ಟಿದ್ದರು. ಅವರ ತಂಗಿಯಾಗಿ ಹುಟ್ಟಿರುವ ಷಣ್ಮಹಿಷಿಯರಲ್ಲಿ ಒಬ್ಬಳಾದ ಭದ್ರೆಯನ್ನು ಅವರು ಪರಮಾತ್ಮನಿಗೆ ಅರ್ಪಿಸಿದರು.

[‘ಶ್ಯೆವ್ಯಸ್ಯ ಚ ಸುತಾಂ ತನ್ವೀಂ ರೂಪೇಣಾಪ್ಸರಸೋಪಮಾಮ್’ ಎಂದು ಹರಿವಂಶದಲ್ಲಿದೆ(ವಿಷ್ಣುಪರ್ವಣಿ ೬೦.೪೩). ಈ ಶ್ಯೆವ್ಯನನ್ನೇ ಗೀತೆಯಲ್ಲಿ ‘ಶ್ಯೆವ್ಯಶ್ಚ[2] ನರಪುಙ್ಗವಃ’ ಎಂದಿರುವುದು]

 

ಸ್ವಯಮ್ಬರೋ ಲಕ್ಷಣಾಯಾಸ್ತಥಾssಸೀದ್ ಯಥಾ ದ್ರೌಪದ್ಯಾ ಲಕ್ಷವೇಧಾತ್ಮಕಃ ಸಃ ।

ಮದ್ರೇಷು ತಸ್ಯಾಶ್ಚ ಪಿತಾ ಪಿನಾಕಂ ಸ್ವಯಮ್ಬರಾರ್ಥಂ ಜಗೃಹೇ ಗಿರೀಶಾತ್ ॥೨೦.೫೧॥

 

ಯಾವರೀತಿ ದ್ರೌಪದಿಯ ಸ್ವಯಮ್ಬರವು ಗುರಿಯನ್ನು ಭೇದಿಸಬೇಕು ಎಂಬುದಾಗಿ ಆಗಿತ್ತೋ, ಹಾಗೆಯೇ ಲಕ್ಷಣಾ ಎನ್ನುವವಳ  ಸ್ವಯಮ್ಬರವು ನಡೆದಿತ್ತು. ಅವಳ ತಂದೆಯು(ಬೃಹತ್ಸೇನನು) ಮದ್ರದೇಶದಲ್ಲಿ ಸ್ವಯಮ್ಬರ ಮಾಡಲಿಕ್ಕಾಗಿಯೇ ರುದ್ರನಿಂದ ಪಿನಾಕವೆಂಬ ಧನುಸ್ಸನ್ನು ಪಡೆದುಕೊಂಡಿದ್ದ. 

[ಹರಿವಂಶದಲ್ಲಿ(ವಿಷ್ಣುಪರ್ವಣಿ ೬೦.೪೨) ‘ಸಾತ್ರಾಜಿತೀಂ ಸತ್ಯಭಾಮಾಂ ಲಕ್ಷಣಾಂ ಚಾರುಹಾಸಿನೀಮ್’ ಎಂದಿದ್ದಾರೆ. ಲಕ್ಷಣೆಯ ಇನ್ನೊಂದು ಹೆಸರು ಚಾರುಹಾಸಿನಿ. ವಿಷ್ಣುಪುರಾಣದಲ್ಲಿ  ಇದನ್ನು ಹೇಳಿದ್ದಾರೆ: ‘ಭಗವತೋsಪ್ಯತ್ರ ಮರ್ತ್ಯಲೋಕೇsವತೀರ್ಣಸ್ಯ ಷೋಡಶಸಹಸ್ರಾಣ್ಯಷ್ಟೋತ್ತರಶತಾಧಿಕಾನಿ ಸ್ತ್ರೀಣಾಮಭವನ್ । ತಾಸಾಂ ಚ ರುಗ್ಮಿಣೀಸತ್ಯಭಾಮಾಜಾಮ್ಬವತೀಚಾರುಹಾಸಿನೀಪ್ರಮುಖಾ ಅಷ್ಟೌ ಪತ್ನ್ಯಃ  ಪ್ರಧಾನಾಃ’  ಹದಿನಾರು ಸಾವಿರದ ನೂರಕ್ಕೂ ಹೆಚ್ಚು ಮಂದಿ ಶ್ರೀಕೃಷ್ಣನ ಪತ್ನಿಯರಾದರು. ಅವರಲ್ಲಿ ರುಗ್ಮಿಣೀ, ಸತ್ಯಭಾಮಾ, ಜಾಮ್ಬವತೀ, ಚಾರುಹಾಸಿನಿ(ಲಕ್ಷಣೆ), ಮುಂತಾದ ಎಂಟು ಜನ ಪ್ರಧಾನರು].



[1]ಋಭು, ವಿಭ್ವಾ ಮತ್ತು ವಾಜಶ್ರೇತಿ  ಎನ್ನುವ ದೇವತೆಗಳು ತಾರತಮ್ಯದಲ್ಲಿ ಹದಿನೆಂಟನೇ ಕಕ್ಷೆಯಲ್ಲಿದ್ದಾರೆ.   

[2] ಶ್ಯೆವ್ಯ ಸರಿಯಾದ ಪ್ರಯೋಗ. ಕೆಲವರು ಶ್ಯಬ್ಯ ಎನ್ನುತ್ತಾರೆ.

No comments:

Post a Comment