ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 2, 2020

Mahabharata Tatparya Nirnaya Kannada 2029_2032

 [ಈ ಸಮಯದಲ್ಲಿ ದ್ವಾರಕೆಯಲ್ಲಿ ಏನು ನಡೆಯುತ್ತಿತ್ತು ಎನ್ನುವುದನ್ನು ವಿವರಿಸುತ್ತಾರೆ:]

 

ಕೃಷ್ಣೋsಪಿ ಗತ್ವಾ ದ್ವಾರವತೀಂ ಸರಾಮಃ ಸತ್ಯಾಪಿತುರ್ವಧಕರ್ತ್ತಾರಮೇವ ।

ಶತಧನ್ವಾನಂ ಹನ್ತುಮೈಚ್ಛತ್ ಸ ಚೈವ ಯಯಾಚೇsಕ್ರೂರಂ ಕೃತವರ್ಮ್ಮಾನುಯುಕ್ತಮ್ ॥೨೦.೨೯॥

 

ಇತ್ತ ದ್ವಾರಕಾ ಪಟ್ಟಣಕ್ಕೆ ತೆರಳಿದ ಶ್ರೀಕೃಷ್ಣನು, ಬಲರಾಮನಿಂದ ಕೂಡಿಕೊಂಡು ಸತ್ಯಭಾಮೆಯ ತಂದೆಯಾದ ಸತ್ರಾಜಿತನ ಕೊಲೆಮಾಡಿರುವ ಶತಧನ್ವನನ್ನು ಕೊಲ್ಲಲು ಬಯಸಿದನು. ಶತಧನ್ವನಾದರೋ, ಕೃತವರ್ಮನಿಂದ ಕೂಡಿರುವ ಅಕ್ರೂರನನ್ನು ರಕ್ಷಣೆಗಾಗಿ ಬೇಡಿದನು.

 

ತಾವಬ್ರೂತಾಂ ಸರ್ವಲೋಕೈಕಕರ್ತ್ತುರ್ನ್ನಾsವಾಂ ವಿರೋಧಂ ಮನಸಾsಪಿ ಕುರ್ವಃ ।

ಕೃಷ್ಣಸ್ಯ ಸರ್ವೇಶಿತುರಿತ್ಯನೂಕ್ತ ಆರುಹ್ಯ ಚಾಶ್ವೀಂ ಭಯತಃ ಪರಾದ್ರವತ್ ॥೨೦.೩೦॥

 

ಆಗ ಕೃತವರ್ಮ ಹಾಗೂ ಅಕ್ರೂರ ಹೇಳುತ್ತಾರೆ: ‘ಸಮಸ್ತ ಲೋಕದ ಸೃಷ್ಟಿ-ಸ್ಥಿತಿ-ಲಯಗಳನ್ನೂ ಮಾಡುವ ನಾರಾಯಣನ ವಿರೋಧವನ್ನು ನಾವಿಬ್ಬರು ಮನಸ್ಸಿನಿಂದಲೂ ಚಿಂತಿಸಲಾರೆವು’ ಎಂದು. ಈ ರೀತಿಯಾಗಿ ಹೇಳಲ್ಪಟ್ಟವನಾದ ಶತಧನ್ವ,  ಭಯದಿಂದ ಹೆಣ್ಣು  ಕುದುರೆಯನ್ನು ಏರಿ ಅಲ್ಲಿಂದ ಓಡಿದನು. 

 

ಅನ್ವೇವ ತಂ ಕೃಷ್ಣರಾಮೌ ರಥೇನ ಯಾತೌ ಶತಂ ಯೋಜನಾನಾಂ ದಿನೇನ ।

ಗತ್ವಾ ಮೃತಾಯಾಂ ಬಡಬಾಯಾಂ ಪದೈವ ಸ ಪ್ರಾದ್ರವತ್  ಕೃಷ್ಣ ಏನಂ ಪದಾsಗಾತ್ ॥೨೦.೩೧॥

 

ಅವನನ್ನು ಅನುಸರಿಸಿ ಕೃಷ್ಣ-ರಾಮರು ರಥದಲ್ಲಿ  ತೆರಳಿದರು. ಒಂದು ದಿವಸದಲ್ಲಿಯೇ ನೂರು ಯೋಜನಗಳ ತನಕ ಓಡಿ, ಅದಕ್ಕಿಂತ ಮುಂದೆ ಓಡಲಾಗದೇ, ಎದೆಯೊಡೆದು ಸತ್ತ ಕುದುರೆಯಿರುತ್ತಿರಲು,  ಶತಧನ್ವ ಕಾಲ್ಗಳಿಂದಲೇ  ಓಡಲಾರಮ್ಭಿಸಿದ. ಆಗ ಶ್ರೀಕೃಷ್ಣನು ರಥದಿಂದ ಇಳಿದು ಕಾಲ್ಗಳಿಂದಲೇ  ಅವನನ್ನು ಅನುಸರಿಸಿದ.    

[ಆ ಕುದುರೆಯ ಹೆಸರು ‘ಹೃದಯಾ’ ಎಂದು, ಅದು ದಿನಕ್ಕೆ ನೂರು ಯೋಜನಾ ಓಡುವಷ್ಟು ಸಮರ್ಥವಾಗಿತ್ತಂತೆ, ವಿಷ್ಣುಪುರಾಣದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ, ಅವನ ಚಾಟಿ ಏಟನ್ನು ಸಹಿಸಲಾಗದೇ, ಬಾಯಲ್ಲಿ ನೊರೆಯನ್ನು ಕಕ್ಕುತ್ತಾ, ಎದೆಯೊಡೆದು ಪ್ರಾಣಬಿಟ್ಟಿತಂತೆ ಆ ಹೆಣ್ಣು ಕುದುರೆ.  ಬ್ರಹ್ಮಾಂಡ ಪುರಾಣದ ಉಪೋದ್ಗತಪಾದದಲ್ಲೂ(೭೧.೭೨) ಈ ವಿವರ ಕಾಣಸಿಗುತ್ತದೆ: ‘ವಿಖ್ಯಾತಾ ಹೃದಯಾ ನಾಮ ಶತಯೋಜನಗಾಮಿನೀ । ಭೋಜಸ್ಯ ಬಡಬಾ ದಿವ್ಯಾ ಯಯಾ ಕೃಷ್ಣಮಯೋಧಯತ್’]   

 

ಛಿತ್ವಾ ಶಿರಸ್ತಸ್ಯ ಚಕ್ರೇಣ ಕೃಷ್ಣೋ ಜಾನನ್ನಕ್ರೂರೇ ಮಣಿಮೇನೇನ ದತ್ತಮ್ ।

ಅಪ್ಯಜ್ಞವಲ್ಲೋಕವಿಡಮ್ಬನಾಯ ಪರೀಕ್ಷ್ಯ ವಾಸೋsತ್ರ ನೇತ್ಯಾಹ ರಾಮಮ್ ॥೨೦.೩೨॥

 

ಶತಧನ್ವನ ಕತ್ತನ್ನು ಕೃಷ್ಣ ಚಕ್ರದಿಂದ ಕತ್ತರಿಸಿ, ಅಕ್ರೂರನಲ್ಲಿ ಈ ಶತಧನ್ವನಿಂದ ಮಣಿಯು ಕೊಡಲ್ಪಟ್ಟಿತು ಎಂದು ತಿಳಿದವನಾದರೂ, ಅರಿಯದವನಂತೆ, ಲೋಕದ ವಿಡಂಬನೆಗಾಗಿ ಶತಧನ್ವನ ಬಟ್ಟೆಗಳನ್ನೆಲ್ಲಾ ಪರೀಕ್ಷೆ ಮಾಡಿ, ಬಲರಾಮನ ಬಳಿ ಬಂದು ಮಣಿ ಇಲ್ಲವೆಂದು ಹೇಳಿದ.  


No comments:

Post a Comment