ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 15, 2020

Mahabharata Tatparya Nirnaya Kannada 2072_2082

 

ತಯೋಕ್ತೋsಹಂ ನಾವತಾರೇಷು ಕಶ್ಚಿದ್ ವಿಶೇಷ ಇತ್ಯೇವ ಯದುಪ್ರವೀರಮ್ ।

ಸರ್ವೋತ್ತಮೋsಸೀತ್ಯವದಂ ಸ ಚಾsಹ ನ ಕೇವಲಂ ಮೇsಙ್ಕಗಾಯಾಃ ಶ್ರಿಯೋsಹಮ್ ॥೨೦.೭೨॥

 

ಸದೋತ್ತಮಃ ಕಿನ್ತು ಯದಾ ತು ಸಾ ಮೇ ವಾಮಾರ್ದ್ಧರೂಪಾ ದಕ್ಷಿಣಾನಾಮಧೇಯಾ ।

ಯಸ್ಮಾತ್ ತಸ್ಯಾ ದಕ್ಷಿಣತಃ ಸ್ಥಿತೋsಹಂ ತಸ್ಮಾನ್ನಾಮ್ನಾ ದಕ್ಷಿಣೇತ್ಯೇವ ಸಾ ಸ್ಯಾತ್ ॥೨೦.೭೩ ॥

 

ಈ ರೀತಿಯಾಗಿ ಯಜ್ಞನಾಮಕ ಲಕ್ಷ್ಮೀದೇವಿಯಿಂದ ಹೇಳಲ್ಪಟ್ಟ ನಾನು(ನಾರದರು), ಶ್ರೀಹರಿಗೆ ಅವತಾರಗಳಲ್ಲಿ ಯಾವುದೇ ಭೇದವಿಲ್ಲವೆಂದೇ  ಯದುಶ್ರೇಷ್ಠ ಶ್ರೀಕೃಷ್ಣನನ್ನು ಕುರಿತು ‘ನೀನು ಉತ್ಕೃಷ್ಟ’ ಎಂದು ಹೇಳಿದೆ. ಆಗ ಅವನು ಹೀಗೆ ಹೇಳಿದ: ‘ಕೇವಲ ನನ್ನ ತೊಡೆಯಲ್ಲಿರುವ ಲಕ್ಷ್ಮೀದೇವಿಯಿಂದ ಮಾತ್ರ ನಾನು ಉತ್ಕೃಷ್ಟನಲ್ಲ,  ನನ್ನ ಎಡಗಡೆ ಭಾಗವೇ ಅವಳಾಗಿರುತ್ತಾಳೆ. ಯಾವ ಕಾರಣದಿಂದ ಅವಳ ಬಲಗಡೆ ನಾನಿದ್ದೇನೋ ಅದಕ್ಕಾಗಿ ಅವಳು ‘ದಕ್ಷಿಣಾ’ ಎಂದೇ ಹೆಸರಾಗಿದ್ದಾಳೆ.  

 

ಸಾ ದಕ್ಷಿಣಾಮಾನಿನೀ ದೇವತಾ ಚ ಸಾ ಚ ಸ್ಥಿತಾ ಬಹುರೂಪಾ ಮದರ್ದ್ಧಾ ।

ವಾಮಾರ್ದ್ಧೋ ಮೇ ತತ್ಪ್ರವಿಷ್ಟೋ ಯತೋ ಹಿ ತತೋsಹಂ ಸ್ಯಾಮರ್ದ್ಧನಾರಾಯಣಾಖ್ಯಃ ॥೨೦.೭೪॥

 

ದಕ್ಷಿಣೆಗೆ(ಮೂಲಭೂತವಾಗಿ ವೇದಜ್ಞಾನಕ್ಕೆ)  ಅಭಿಮಾನಿನಿಯಾಗಿರುವ ಅವಳು ಬಹಳ ರೂಪವುಳ್ಳವಳಾಗಿ ನನ್ನ ಅರ್ಧರೂಪದಿಂದ ಇದ್ದಾಳೆ. ನನ್ನ ಎಡಭಾಗವು ಅವಳಲ್ಲಿ ಪ್ರವೇಶವನ್ನು ಹೊಂದಿದೆ. ಆಕಾರಣದಿಂದ ನಾನು ‘ಅರ್ಧನಾರಾಯಣ’ ಎನ್ನುವ ಹೆಸರುಳ್ಳವನಾಗಿದ್ದೇನೆ.

 

ತದಾsಪ್ಯಸ್ಯಾ ಉತ್ತಮೋsಹಂ ಸುಪೂರ್ಣ್ಣೋ ನ ಮಾದೃಶಃ ಕಶ್ಚಿದಸ್ತ್ಯುತ್ತಮೋ ವಾ ।

ಇತ್ಯೇವಾವಾದೀದ್ ದಕ್ಷಿಣಾಭಿಃ ಸಹೇತಿ ಸರ್ವೋತ್ತಮತ್ವಂ ದಕ್ಷಿಣಾನಾಂ ಸ್ಮರನ್ತ್ಸಃ ॥೨೦.೭೫॥

 

ಆಗಲೂ ಕೂಡಾ ಅವಳಿಂದ ನಾನು ಪೂರ್ಣನಾಗಿದ್ದೇನೆ, ಉತ್ಕೃಷ್ಟನಾಗಿದ್ದೇನೆ. ನನಗೆ ಸದೃಶನಾಗಲೀ, ಉತ್ತಮನಾದವನಾಗಲೀ ಯಾರೂ ಇಲ್ಲ’. ಈ ರೀತಿಯಾದ ಅಭಿಪ್ರಾಯದಿಂದಲೇ ಶ್ರೀಕೃಷ್ಣ ‘ದಕ್ಷಿಣೆಯ ಜೊತೆಗೆ’ ಎಂದು ಹೇಳಿದ. (ಲಕ್ಷ್ಮಿಗಿಂತ ನಾನು ಯಾವಾಗಲೂ ಶ್ರೇಷ್ಠನಾಗಿದ್ದೇನೆ  ಎನ್ನುವ ಅಭಿಪ್ರಾಯದಲ್ಲಿ ಶ್ರೀಕೃಷ್ಣ ಈ ರೀತಿ ಹೇಳಿದ ಎಂದು ವಿವರಿಸಿದ್ದಾರೆ ನಾರದರು).

 

ತಾಭಿಶ್ಚೈತಾಭಿರ್ದ್ದಕ್ಷಿಣಾಭಿಃ ಸಮೇತಾದ್ ವರಿಷ್ಠೋsಹಂ ಜಗತಃ ಸರ್ವದೈವ ।

ಮತ್ಸಾಮರ್ತ್ಥ್ಯಾನ್ನೈವ  ಚಾನನ್ತಭಾಗೋ ದಕ್ಷಿಣಾನಾಂ ವಿದ್ಯತೇ ನಾರದೇತಿ ॥೨೦.೭೬॥

 

‘ಓ ನಾರದನೇ, ದಕ್ಷಿಣಾದೇವಿಯ ಎಲ್ಲಾ ರೂಪಗಳಿಂದ ಕೂಡಿರುವ ಈ ಜಗತ್ತಿನಿಂದ ಯಾವಾಗಲೂ ನಾನು  ಉತ್ಕೃಷ್ಟನಾಗಿದ್ದೇನೆ. ನನ್ನ ಸಾಮರ್ಥ್ಯದ ಅನಂತ ಭಾಗದ ಏಕದೇಶವೂ ಕೂಡಾ ದಕ್ಷಿಣಾದೇವಿಯರಿಗೆ(ಬಹುರೂಪಳಾದ ಶ್ರೀಲಕ್ಷ್ಮಿಗೆ) ಇಲ್ಲ’.  

 

ಉಕ್ತಂ ಕೃಷ್ಣೇನಾಪ್ರತಿಮೇನ ಭೂಪಾ ಅನ್ಯೋತ್ತಮತ್ವಂ ದಕ್ಷಿಣಾನಾಂ ಚ ಶಶ್ವತ್ ।

ಸೇಯಂ ಭೈಷ್ಮೀ ದಕ್ಷಿಣಾ ಕೇಶವೋsಯಂ ತಸ್ಯಾಃ ಶ್ರೇಷ್ಠಃ ಪಶ್ಯತ ರಾಜಸಙ್ಘಾಃ ॥೨೦.೭೭॥

 

ಇದು ಶ್ರೀಕೃಷ್ಣ ಹೇಳಿದ ಮಾತು ಎಂದು ಹೇಳಿದ ನಾರದರು, ಎಣೆಯಿರದ ಕೃಷ್ಣನಿಂದ ಯಾವಾಗಲೂ ಲಕ್ಷ್ಮೀದೇವಿಗೆ ಉಳಿದವರಿಗಿಂತ ಉತ್ತಮತ್ವವು ಹೇಳಲ್ಪಟ್ಟಿದೆ. ಎಲೋ ಅರಸರೇ, ಈ ರುಗ್ಮಿಣಿಯೇ ದಕ್ಷಿಣಾ. ಇವನೇ(ಶ್ರೀಕೃಷ್ಣನೇ) ಆ ನಾರಾಯಣ.

 

ಪ್ರತ್ಯಕ್ಷಂ ವೋ ವೀರ್ಯ್ಯಮಸ್ಯಾಪಿ ಕುನ್ತ್ಯಾ ಯುಧೇsರ್ತ್ಥಿತಃ ಕೇಶವೋ ವೀರ್ಯ್ಯಮಸ್ಯೈ ।

ಅದರ್ಶಯತ್ ಪಾಣ್ಡವಾನ್ ಧಾರ್ತ್ತರಾಷ್ಟ್ರಾನ್ ಭೀಷ್ಮದ್ರೋಣದ್ರೌಣಿಕೃಪಾನ್ ಸಕರ್ಣ್ಣಾನ್ ।

ನಿರಾಯುಧಾಂಶ್ಚಕ್ರ ಏಕಃ ಕ್ಷಣೇನ ಲೋಕಶ್ರೇಷ್ಠಾನ್ ದೈವತೈರಪ್ಯಜೇಯಾನ್ ॥೨೦.೭೮॥

 

ಇವನ ವೀರ್ಯವು ನಿಮಗೇ ಪ್ರತ್ಯಕ್ಷವಾಗಿದೆ’ ಎಂದು ಹೇಳಿ ನಾರದರು ತನ್ನ ಮಾತನ್ನು ನಿಲ್ಲಿಸಿದರು. ಆಗ ಕುಂತಿಯಿಂದ ಯುದ್ಧಕ್ಕಾಗಿ ಪ್ರಾರ್ಥಿಸಲ್ಪಟ್ಟ ಕೇಶವನು, ಕುಂತಿಗಾಗಿ ತನ್ನ ಬಲವನ್ನು ತೋರಿಸಿದನು. ಪಾಂಡವರನ್ನು, ಧೃತರಾಷ್ಟ್ರನ ಮಕ್ಕಳನ್ನು, ಭೀಷ್ಮ-ದ್ರೋಣ-ಅಶ್ವತ್ಥಾಮ-ಕೃಪಾಚಾರ್ಯ, ಕರ್ಣ, ಮೊದಲಾದ ಎಲ್ಲಾ ಲೋಕಶ್ರೇಷ್ಠರಾಗಿರುವ ವೀರರನ್ನು ಶ್ರೀಕೃಷ್ಣ ಒಬ್ಬನೇ ಒಂದೇ ಕ್ಷಣದಲ್ಲಿ ನಿರಾಯುಧರನ್ನಾಗಿ ಮಾಡಿದನು.

[ ಇದನ್ನು ಮಹಾಭಾರತದಲ್ಲೇ ಹೀಗೆ ಹೇಳಿದ್ದಾರೆ: ಅಥ ಗಾಣ್ಡೀವಧನ್ವಾನಂ ಕ್ರೀಡಾರ್ಥಂ ಮಧುಸೂದನಃ । ಜಿಗಾಯ ಭರತಶ್ರೇಷ್ಠ ಕುಂತ್ಯಾಶ್ಚ ಪ್ರಮುಖೇ ವಿಭುಃ । ದ್ರೌಣಿಂ ಕೃಪಂ ಚ ಕರ್ಣಂ ಚ ಭೀಮಸೇನಂ ಸುಯೋಧನಮ್(ಸಭಾಪರ್ವ ೬೧.೧೪-೧೫). ತದನಂತರ ಅರ್ಜುನನನ್ನು ಕೃಷ್ಣನು ಲೀಲೆಯಿಂದ ಗೆದ್ದ. ಕುಂತಿಯ ಸನ್ನಿಧಾನದಲ್ಲಿ ಅಶ್ವತ್ಥಾಮ, ಕೃಪಾಚಾರ್ಯ, ಕರ್ಣ, ಭೀಮಸೇನ, ದುರ್ಯೋಧನ, ಹೀಗೆ ಎಲ್ಲರನ್ನೂ ಗೆದ್ದ.  

ಹರಿವಂಶದ ವಿಷ್ಣುಪರ್ವದಲ್ಲಿ ಹೇಳುವಂತೆ:  ‘ತಥಾ ಗಾಣ್ಡೀವಧನ್ವಾನಂ ಕ್ರೀಡನ್ತಂ ಮಧುಸೂಧನಃ । ಜಿಗಾಯ ಭರತಶ್ರೇಷ್ಠಂ ಕುನ್ತ್ಯಾಃ ಪ್ರಮುಖತೋ ವಿಭುಃ । ದ್ರೋಣಂ ದ್ರೌಣಿಂ ಕೃಪಂ ಕರ್ಣಂ ಭೀಷ್ಮಂ ಚೈವ ಸುಯೋಧನಂ । ಚಕ್ರಾನುಯಾನೇ ಪ್ರಸ್ರವಣೇ ಜಿಗಾಯ ಪುರುಷೋತ್ತಮಃ’ (೧೦೨.೧೭-೧೮). ಮಹಾಭಾರತದ ಸಭಾಪರ್ವದಲ್ಲಿ ಭೀಮಸೇನನ ಕುರಿತು ಹೇಳಿದ್ದಾರೆ ಆದರೆ ಹರಿವಂಶದಲ್ಲಿ ಭೀಮಸೇನನ ಪಾಲ್ಗೊಳ್ಳುವಿಕೆಯನ್ನು ಹೇಳಲಿಲ್ಲ. ಇದು ವಿರೋಧ ಎನಿಸುತ್ತದೆ. ಆದರೆ ಆಚಾರ್ಯರು ಆ ಕುರಿತು ವಿವರಣೆ ನೀಡಿರುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

 

ವ್ರತಂ ಭೀಮಸ್ಯಾಸ್ತಿ ನೈವಾಭಿ ಕೃಷ್ಣಮಿಯಾಮಿತಿ ಸ್ಮಾsಜ್ಞಯಾ ತಸ್ಯ ವಿಷ್ಣೋಃ ।

ಚಕ್ರಂ ರಥಸ್ಯಾಗ್ರಹೀತ್ ಸಃ ಪ್ರಣಮ್ಯ ಕೃಷ್ಣಂ ಸ ತಂ ಕೇಶವೋsಪಾಹರಚ್ಚ ॥೨೦.೭೯॥

 

‘ಕೃಷ್ಣನನ್ನು ಎದುರುಗೊಳ್ಳಲಾರೆ’ ಎನ್ನುವುದು ಭೀಮಸೇನನ ವ್ರತ. ಆದರೆ ಕೃಷ್ಣ ಯುದ್ಧಮಾಡುವಂತೆ  ಆಜ್ಞೆಮಾಡಿದಾಗ ಭೀಮ ನಮಸ್ಕರಿಸಿ, ರಥದ ಚಕ್ರವನ್ನು ಹಿಡಿದು ನಿಂತ. ಆಗ ಅವನನ್ನು ಕೃಷ್ಣ ತಳ್ಳಿ, ಮುಂದಕ್ಕೆ ಯುದ್ಧಕ್ಕೆಂದು ಹೋದ.

[ಪರಮಾತ್ಮನ ಆಜ್ಞೆಯಿಂದಾಗಿ ಭೀಮ ಯುದ್ಧದಲ್ಲಿ ಪಾತ್ರಧಾರಿಯಾದ ಎನ್ನುವುದನ್ನು ಮಹಾಭಾರತ ಸೂಚಿಸಿದೆ. ಮಾನಸಿಕವಾಗಿ ಭೀಮ ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ ಮತ್ತು ಆಯುಧವನ್ನು ಹಿಡಿಯಲಿಲ್ಲ. ಆದ್ದರಿಂದ ಹರಿವಂಶದಲ್ಲಿ ಭೀಮನ ಹೆಸರನ್ನು ಹೇಳಲಿಲ್ಲ ಎನ್ನುವುದು ಆಚಾರ್ಯರ ನಿರ್ಣಯದಿಂದ ನಮಗಿಲ್ಲಿ ತಿಳಿಯುತ್ತದೆ.]

 

ಏವಂ ಕ್ರೀಡನ್ತೋsಪ್ಯಾತ್ಮಶಕ್ತ್ಯಾ ಪ್ರಯತ್ನಂ ಕುರ್ವನ್ತಸ್ತೇ ವಿಜಿತಾಃ ಕೇಶವೇನ ।

ತತಃ ಸರ್ವೇ ನೇಮುರಸ್ಮೈ ಪೃಥಾ ಚ ಸವಿಸ್ಮಯಾ ವಾಸುದೇವಂ ನನಾಮ ॥೨೦.೮೦॥

 

ಈರೀತಿಯಾಗಿ ಅವರು ಕ್ರೀಡಿಸಿದರೂ ಕೂಡಾ, ಎಲ್ಲಾ ಅರಸರು ತಮ್ಮ ಪೂರ್ಣಬಲದಿಂದ ಪ್ರಯತ್ನಪಟ್ಟರು. ಆದರೆ ಕೃಷ್ಣನಿಂದ ಸುಲಭವಾಗಿ ಸೋತರು ಕೂಡಾ. ಸೋತ ಎಲ್ಲರೂ ಕೃಷ್ಣನಿಗೆ ನಮಸ್ಕರಿಸಿದರು. ಕುಂತಿಯೂ ಕೂಡಾ ಅಚ್ಚರಿಯಿಂದ ಕೂಡಿ, ಕೃಷ್ಣನಿಗೆ ನಮಿಸಿದಳು.

 

ಏವಂವಿಧಾನ್ಯದ್ಭುತಾನೀಹ ಕೃಷ್ಣೇ ದೃಷ್ಟಾನಿ ವಃ ಶತಸಾಹಸ್ರಶಶ್ಚ ।

ತಸ್ಮಾದೇಷ ಹ್ಯದ್ಭುತೋsತ್ಯುತ್ತಮಶ್ಚೇತ್ಯುಕ್ತಾ ನೇಮುಸ್ತೇsಖಿಲಾ ವಾಸುದೇವಮ್ ॥೨೦.೮೧॥

 

‘ಈ ರೀತಿಯಾಗಿರುವ ಅದ್ಭುತಗಳು ಕೃಷ್ಣನಲ್ಲಿ ಲಕ್ಷಾನುಗಟ್ಟಲೆ ಕಾಣಲ್ಪಟ್ಟಿವೆ. ಆ ಕಾರಣದಿಂದ ಇವನು ಆಶ್ಚರ್ಯ ಹಾಗೂ ಅತ್ಯುತ್ತಮನಷ್ಟೇ’ ಎಂದು ಹೇಳಲ್ಪಟ್ಟ ಆ ಎಲ್ಲಾ ರಾಜರು ನಾರಾಯಣನಿಗೆ ನಮಸ್ಕರಿಸಿದರು.

 

ವಾಯ್ವಾಜ್ಞಯಾ ವಾಯುಶಿಷ್ಯಃ ಸ ಸತ್ಯಮಿತ್ಯಾದ್ಯುಕ್ತ್ವಾ ನಾರದೋ ರುಗ್ಮಿಣೀಂ ಚ ।

ಸ್ತುತ್ವಾ ಪುಷ್ಪಂ ಪಾರಿಜಾತಸ್ಯ ದತ್ವಾ ಯಯೌ ಲೋಕಂ ಕ್ಷಿಪ್ರಮಬ್ಜೋದ್ಭವಸ್ಯ ॥೨೦.೮೨॥

 

ವಾಯುದೇವರ ಆಜ್ಞೆಯಂತೆ, ವಾಯುದೇವರ ಶಿಷ್ಯರಾಗಿರುವ ನಾರದರು ‘ಇದು ಸತ್ಯಾ’ ಎಂದು, ಇವೇ ಮೊದಲಾದವುಗಳನ್ನು ಹೇಳಿ, ರುಗ್ಮಿಣೀದೇವಿಯನ್ನು ಸ್ತುತಿಸಿ, ದೇವಿಗೆ ಪಾರಿಜಾತದ ಹೂವನ್ನು ಕೊಟ್ಟು, ಕೂಡಲೇ ಬ್ರಹ್ಮನ ಲೋಕವನ್ನು ಕುರಿತು  ತೆರಳಿದರು.

[ಹರಿವಂಶದಲ್ಲಿ ಈ ಕುರಿತು ವಿವರಣೆ ಕಾಣಸಿಗುತ್ತದೆ: ‘ವಸತಸ್ತಸ್ಯ ಕೃಷ್ಣಸ್ಯ ಸದಾರಸ್ಯಾಮಿತೌಜಸಃ  । ಸಹಾsಸೀನಸ್ಯ  ರುಗ್ಮಿಣ್ಯಾ ನಾರದೋsಭ್ಯಾಯಯೌ ಮುನಿಃ । ಆಗತಂ ಚಾಪ್ರಮೇಯಾತ್ಮಾ ಮುನಿಮಿನ್ದ್ರಾನುಜಸ್ತದಾ । ಶಾಸ್ತ್ರದೃಷ್ಟೇನ ವಿಧಿನಾ  ಹ್ಯರ್ಚಯಾಮಾಸ ಕೇಶವಃ । ಸೋsರ್ಚಿತೋ ವಾಸುದೇವೇನ ಮುನಿರರ್ಚ್ಯತಮಃ ಸತಾಮ್ । ಪಾರಿಜಾತತರೋಃ ಪುಷ್ಪಂ ದದೌ ಕೃಷ್ಣಾಯ ಭಾರತ । ತದ್ ವೃಕ್ಷರಾಜಕುಸುಮಂ ರುಗ್ಮಿಣ್ಯಾಃ ಪ್ರದದೌ ಹರಿಃ’ (ವಿಷ್ಣುಪರ್ವಣಿ ೬೫.೧೨-೧೫) ]

No comments:

Post a Comment