ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 21, 2021

Mahabharata Tatparya Nirnaya Kannada 21: 133-138

 

ಇತೀರಿತೋsಸೌ ಮಗಧಾಧಿಪೋ ರುಷಾ ಜಗಾದ ನಾಹಂ ಶಿವಯಾಗಯುಕ್ತಾನ್ ।

ಮೋಕ್ಷ್ಯೇ ಪಶೂನ್ ಯುಗಪದ್ ವಾ ಕ್ರಮೇಣ ಯೋತ್ಸ್ಯೇ ಚ ವೋsಥಾಪಿ ಚಮೂಸಹಾಯಾನ್ ೨೧.೧೩೩

 

ಈರೀತಿಯಾಗಿ ಕೃಷ್ಣ ನುಡಿದಾಗ ಜರಾಸಂಧ ಸಿಟ್ಟಿನಿಂದ ಮಾತನಾಡುತ್ತಾನೆ: ‘ನಾನು ಸದಾಶಿವನ ಯಾಗದಲ್ಲಿ ಮೀಸಲಾಗಿಟ್ಟಿರುವ ಪಶುಗಳನ್ನು ಬಿಡುವುದಿಲ್ಲ. ನೀವು ಮೂವರ ವಿರುದ್ಧ ಏಕಕಾಲದಲ್ಲಿ ಅಥವಾ ಕ್ರಮವಾಗಿ ಒಬ್ಬರಾದ ಮೇಲೆ ಒಬ್ಬರೊಂದಿಗೆ ಅಥವಾ ನೀವು ಸೇನಾ ಸಹಾಯದಿಂದ ಕೂಡಿ ಬಂದರೂ ಕೂಡಾ ನಾನು ಯುದ್ಧ ಮಾಡುತ್ತೇನೆ.

 

ನಿರಾಯುಧಃ ಸಾಯುಧೋ ವಾ ಯುಷ್ಮದಿಷ್ಟಾಯುಧೇನ ವಾ ।

ಏಕೋsಪಿ ಸಕಲೈರ್ಯ್ಯೋತ್ಸ್ಯೇ ಸಸೇನೋ ವಾ ಸಸೈನಿಕಾನ್   ೨೧.೧೩೪

 

ನಿರಾಯುಧನಾಗಿ ಆಗಲೀ ಅಥವಾ ಆಯುಧ ಸಹಿತನಾಗಿ ಆಗಲೀ ಅಥವಾ ನಿಮಗೆ ಯಾವ ಆಯುಧ ಇಷ್ಟವೋ ಆ ಆಯುಧದಿಂದಾಗಲೀ ನಾನು ಯುದ್ಧ ಮಾಡುತ್ತೇನೆ. ನೀವು ಸೈನ್ಯದಿಂದ ಬಂದರೆ ನಾನೊಬ್ಬನೇ ಎಲ್ಲರ ಜೊತೆಗೆ ಹೋರಾಡುತ್ತೇನೆ ಅಥವಾ ನನ್ನ ಸೈನ್ಯದೊಂದಿಗೆ ಬರಬೇಕೆಂದರೆ ಅದಕ್ಕೂ ನಾನು ಸಿದ್ಧ’.

 

ಇತ್ಯುಕ್ತವನ್ತಮವದದಜಿತೋರುಬಲೋ ಹರಿಃ ।

ಏಹ್ಯೇಕಮೇಕೋ ವಾsಸ್ಮಾಸು ಸಸೈನ್ಯೋ ವಾ ರಣೇ ನೃಪ             ೨೧.೧೩೫

 

ಈ ರೀತಿಯಾಗಿ ಹೇಳುತ್ತಿರುವ ಜರಾಸಂಧನನ್ನು  ಕುರಿತು ಯಾರೂ ಸೋಲಿಸಲಾಗದ  ಬಲವುಳ್ಳ ಕೃಷ್ಣ ಪರಮಾತ್ಮನು ಹೀಗೆ ಹೇಳಿದ: ‘ಎಲೈ ರಾಜನೇ, ನಮ್ಮಲ್ಲಿ ಒಬ್ಬನನ್ನು ನೀನು ಆರಿಸಿಕೋ. ಸೈನ್ಯದೊಂದಿಗಾಗಲೀ  ಅಥವಾ ನೀನೊಬ್ಬನೇ ಆಗಲೀ.

 

ಯೇನ ಕಾಮಯಸೇ ಯೋದ್ಧುಂ ತಂ ನ ಆಸಾದಯ ದ್ರುತಮ್ ।

ನಿರಾಯುಧಃ ಸಾಯುಧೋ ವಾ ತ್ವದಭೀಷ್ಟಾಯುಧೇನ ವಾ ೨೧.೧೩೬

 

ನಮ್ಮ ಮೂವರಲ್ಲಿ ಯಾರೊಂದಿಗೆ ನೀನು ಯುದ್ಧ ಮಾಡಲು ಇಚ್ಛಿಸುವೆಯೋ ಅವನನ್ನು ನೀನು ಹೊಂದು. ಆಯುಧ ರಹಿತನಾಗಿ ಆಗಲೀ ಆಯುಧದಿಂದ ಕೂಡಿದವನಾಗಿ ಆಗಲೀ ನಿನಗೆ ಇಷ್ಟವಾದ ಆಯುಧದಿಂದಾಗಲೀ’.

 

ಇತ್ಯಾsಹ ಭಗವಾಞ್ಛತ್ರುಂ ಯಶೋ ಭೀಮೇ ವಿವರ್ದ್ದಯನ್ ।

ಘಾತಯಿತ್ವಾ ಸ್ವಶತ್ರುಂ ಚ ಭೀಮೇನಾನುಗ್ರಹಂ ಪರಮ್      ೨೧.೧೩೭

 

ಭೀಮಸ್ಯ ಕರ್ತ್ತುಮಿಚ್ಛಂಶ್ಚ ಭಕ್ತಿಜ್ಞಾನಾದಿವರ್ದ್ಧನಮ್[1]

ತೃಣೀಕರ್ತ್ತುಂ ರಿಪುಂ ಚೈವ ನಿರಾಯುಧತಯಾsಗಮತ್             ೨೧.೧೩೮

 

ಈರೀತಿಯಾಗಿ ತನ್ನ ಶತ್ರುವಾದ ಜರಾಸಂಧನನ್ನು ಭೀಮನಿಂದ  ಕೊಲ್ಲಿಸುವ ಮುಖೇನ ಭೀಮನ ಕೀರ್ತಿಯನ್ನು ಹೆಚ್ಚಿಸಲು, ಅವನಿಗೆ ಪರಮಾನುಗ್ರಹ ಮಾಡಲು, ಜ್ಞಾನ ಭಕ್ತಿ  ಮೊದಲಾದವುಗಳನ್ನು ಭೀಮನಲ್ಲಿ ಮತ್ತಷ್ಟು ಬೆಳೆಸಲು(/ಅನಾವರಣಗೊಳಿಸಲು) ಮತ್ತು ಶತ್ರುವಾಗಿರುವ ಜರಾಸಂಧನನ್ನು ಕಡೆಗಣಿಸಲು ಶ್ರೀಕೃಷ್ಣ ನಿರಾಯುಧನಾಗಿ ಜರಾಸಂಧನಲ್ಲಿಗೆ ಬಂದಿದ್ದ.



[1] -ಭಕ್ತಿಜ್ಞಾನಾಭಿವರ್ದ್ಧನಮ್’ ಇತಿಚ


No comments:

Post a Comment