ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 30, 2021

Mahabharata Tatparya Nirnaya Kannada 21: 157-167

 

ಸಞ್ಚೂರ್ಣ್ಣಿತಗದೌ ವೀರೌ ಜಘ್ನತುರ್ಮ್ಮುಷ್ಟಿಭಿರ್ಮ್ಮಿಥಃ ।

ಬ್ರಹ್ಮಾಣ್ಡಸ್ಫೋಟಸಙ್ಕಾಶೈರ್ಯ್ಯಥಾ ಕೇಶವಕೈಟಭೌ               ೨೧.೧೫೭

 

ಪುಡಿಯಾದ ಗದೆಯುಳ್ಳ(ಪರಸ್ಪರ ಗದೆಯನ್ನು ಕಳೆದುಕೊಂಡ) ಆ ಇಬ್ಬರು ವೀರರು ಕೇಶವ-ಕೈಟಭರಂತೆ ಮುಷ್ಟಿಗಳಿಂದ ಕಾದಾಡಲು ಆರಂಭಿಸಿದರು. ಆಗ ಅಲ್ಲಿ ಬ್ರಹ್ಮಾಂಡ ಬಿರಿಯಿತೋ ಎನ್ನುವಂತೆ ಶಬ್ದ ಆಗುತ್ತಿತ್ತು.

 

[ಭಾಗವತದಲ್ಲಿ(೧೦.೮೦.೩೮)  ಭೀಮ-ಜರಾಸಂಧರ ಯುದ್ಧದ ಕುರಿತು ಹೀಗೆ ಹೇಳಿದ್ದಾರೆ: ‘ಇತ್ಥಂ ತಯೋಃ ಪ್ರಹತಯೋರ್ಗದಯೋರ್ನೃವೀರೌ ಕೃದ್ಧೌ ಸ್ವಮುಷ್ಟಿಭಿರಯಃಸ್ಪರುಶೈರ್ವ್ಯಪಿಷ್ಟಾಮ್’].  

 

ಚಚಾಲ ಪೃಥ್ವೀ ಗಿರಯಶ್ಚ ಚೂರ್ಣ್ಣಿತಾಃ ಕುಲಾಚಲಾಶ್ಚೇಲುರಲಂ ವಿಚುಕ್ಷುಭುಃ ।

ಸಮಸ್ತವಾರಾಮ್ಪತಯಃ ಸುರಾಸುರಾ ವಿರಿಞ್ಚಶರ್ವಾದಯ ಆಸದನ್ನಭಃ             ೨೧.೧೫೮

 

ಅವರಿಬ್ಬರ ಮುಷ್ಟಿಯುದ್ಧದ ರಭಸಕ್ಕೆ ಭೂಮಿಯು ನಡುಗಿತು. ಪರ್ವತಗಳು ನಲುಗಿದವು. ಪುಟ್ಟಪುಟ್ಟ ಗುಡ್ಡಗಳು ಪುಡಿಪುಡಿಯಾದವು. ಸಮುದ್ರಗಳು ಅಲ್ಲೋಲ ಕಲ್ಲೋಲಗೊಂಡವು. ದೇವತೆಗಳು, ಅಸುರರು ಬ್ರಹ್ಮ-ರುದ್ರಾದಿಗಳು ಆಕಾಶದಲ್ಲಿ ನೆರೆದರು.

 

ಸುರಾಸ್ತು ಭೀಮಸ್ಯ ಜಯಾಭಿಕಾಙ್ಕ್ಷಿಣಸ್ತಥಾsಸುರಾದ್ಯಾ ಮಗಧಾಧಿಪಸ್ಯ ।

ಪಶ್ಯನ್ತಿ ಸರ್ವೇ ಕ್ರಮಶೋ ಬಲಂ ಸ್ವಂ ಸಮಾದದೇ ಮಾರುತನನ್ದನೋsಪಿ             ೨೧.೧೫೯

 

ದೇವತೆಗಳು ಭೀಮಸೇನನಿಗೆ ಗೆಲುವಾಗಲಿ ಎಂದು ಬಯಸಿದರೆ,  ಅಸುರಾದಿಗಳು ಜರಾಸಂಧನ ಗೆಲ್ಮೆಯಾಗಲಿ ಎಂದು ಬಯಸಿ ಅವರಿಬ್ಬರ ಯುದ್ಧವನ್ನು ನೋಡುತ್ತಿದ್ದರು. ಭೀಮಸೇನನಾದರೋ, ಕ್ರಮವಾಗಿ ತನ್ನ ಸ್ವರೂಪಭೂತವಾದ ಬಲವನ್ನು ತೆಗೆದುಕೊಳ್ಳಲಾರಂಭಿಸಿದನು(ಅಭಿವ್ಯಕ್ತಗೊಳಿಸಿದನು).

[ಪ್ರಾಣದೇವರು ಅವತಾರದಲ್ಲೂ ಸ್ವಇಚ್ಛೆಯಿಂದ ಯಾವರೀತಿ ಮೂಲರೂಪದ ಬಲವನ್ನು ಸ್ವೀಕರಿಸಬಹುದು, ಉಳಿದ ದೇವತೆಗಳಲ್ಲಿ ಇದು ಹೇಗೆ ಭಿನ್ನ, ಇತ್ಯಾದಿ ವಿವರವನ್ನು ಮುಂದಿನ ಅಧ್ಯಾಯಗಳಲ್ಲಿ ನಾವು ಕಾಣಬಹುದು].

 

ಮಾನಯಿತ್ವಾ ವರಂ ಧಾತುರ್ದ್ದಿವಸಾನ್ ದಶ ಪಞ್ಚ ಚ ।

ವಾಸುದೇವಾಜ್ಞಯಾ ಭೀಮಃ ಶತ್ರುಂ ಹನ್ತುಂ ಮನೋ ದಧೇ             ೨೧.೧೬೦

 

ಸ ಪ್ರಣಮ್ಯ ಹೃಷೀಕೇಶಂ ಹರ್ಷಾದಾಶ್ಲಿಷ್ಯ ಫಲ್ಗುನಮ್ ।

ರಿಪುಂ  ಜಗ್ರಾಹ ಮುಕುಟೇ ವಾರಣಂ ಮೃಗರಾಡಿವ                   ೨೧.೧೬೧

 

ಬ್ರಹ್ಮದೇವರ ವರವನ್ನು ಹದಿನೈದು ದಿನಗಳ ಕಾಲ ಗೌರವಿಸಿ ಯುದ್ಧಮಾಡಿದ ಭೀಮಸೇನನು, ವಾಸುದೇವನ ಆಜ್ಞೆಯಿಂದ ಶತ್ರುವಾದ ಜರಾಸಂಧನನ್ನು ಕೊಲ್ಲಲು ನಿಶ್ಚಯಿಸಿದನು.

ಭೀಮಸೇನನು  ಕೃಷ್ಣನನ್ನು ನಮಿಸಿ, ಅರ್ಜುನನನ್ನು ಸಂತಸದಿಂದ ಆಲಂಗಿಸಿ, ಸಿಂಹವೊಂದು ಆನೆಯನ್ನು ಹಿಡಿಯುವಂತೆ ಶತ್ರುವನ್ನು ತಲೆಯಲ್ಲಿ ಹಿಡಿದನು.

 

[ಮಹಾಭಾರತ: ಕಾರ್ತ್ತಿಕಸ್ಯ ತು ಮಾಸಸ್ಯ ಪ್ರವೃತ್ತಂ ಪ್ರಥಮೇsಹನಿ  ತದಾ ತದ್ಯುದ್ಧಮಭವದ್ ದಿನಾನಿ ದಶ ಪಞ್ಚ ಚ’ (ಸಭಾಪರ್ವ ೨೪.೩೩)- ಕಾರ್ತಿಕಮಾಸದ ಶುಕ್ಲಪಕ್ಷದ ಪಾಡ್ಯ ಪ್ರಾರಂಭವಾಗಿ ಹದಿನೈದು ದಿನಗಳ ಕಾಲ ಯುದ್ಧ ನಡೆಯಿತು. ‘ಚತುರ್ದಶ್ಯಾಂ ನಿಶಾಯಾಂ  ತು ನಿವೃತ್ತೋ ಮಾಗಧಃ ಕ್ಲಮಾತ್ । ತಂ ರಾಜಾನಂ ತಥಾ ಕ್ಲಾನ್ತಂ ದೃಷ್ಟ್ವಾ ರಾಜನ್ ಜನಾರ್ದನಃ । ಉವಾಚ ಭೀಮಕರ್ಮಾಣಂ ಭೀಮಂ ಸಮ್ಬೋಧಯನ್ನಿವ’ (೩೪-೩೫). ‘ಯತ್ತೇ ದೈವಂ ಪರಂ ಸತ್ವಂ ಯಚ್ಚ ತೇ ಮಾತರಿಶ್ವನಃ  । ಬಲಂ ಭೀಮ ಜರಾಸಂಧೇ ದರ್ಶಯಾsಶು ತದದ್ಯ  ವೈ (೨೫.೪) ಹದಿನಾಲ್ಕನೇ ದಿನ ರಾತ್ರಿ ಜರಾಸಂಧನು ಆಯಾಸಗೊಂಡು ಹಿಂದೆ ಸರಿದನು. ಆಗ ಶ್ರೀಕೃಷ್ಣ ‘ನಿನ್ನ ಸ್ವರೂಪ ಬಲವನ್ನು ಸ್ವೀಕರಿಸು’ ಎಂದು ಭೀಮನಲ್ಲಿ ಹೇಳಿದ. ‘ಏವಮುಕ್ತಸ್ತತೋ ಭೀಮೋ ಮನಸಾ ಚಿಂತ್ಯ ಮಾರುತಮ್ ।  ಜನಾರ್ದನಂ ನಮಸ್ಕೃತ್ಯ ಪರಿಶ್ವಜ್ಯ ಚ ಫಲ್ಗುನಮ್ । ಪ್ರಭಞ್ಜನಬಲಾವಿಷ್ಟೋ ಜರಾಸನ್ಧಮರಿನ್ದಮಃ । ಉತ್ಕ್ಷಿಪ್ಯ  ಭ್ರಾಮಯಾಮಾಸ  ಬಲವನ್ತಮರಿನ್ದಮಃ’( ೨೫.೮-೯)- ಮನಸ್ಸಿನಿಂದ ತನ್ನ ಸ್ವರೂಪವನ್ನು ಚಿಂತಿಸಿ, ಕೃಷ್ಣನಿಗೆ ನಮಸ್ಕರಿಸಿ, ಅರ್ಜುನನನ್ನು ಆಲಂಗಿಸಿದ ಭೀಮ, ಜರಾಸಂಧನನ್ನು ಹಿಡಿದು ಮೇಲಕ್ಕೆತ್ತಿ ಗರಗರನೆ ತಿರುಗಿಸಿದನು,]

 

ಪೃಷ್ಠೇsಸ್ಯ ಜಾನುಮಾಧಾಯ ಕೂರ್ಮ್ಮದೇಶಂ ಬಭಞ್ಜ ಹ ।

ಮೃತಿಕಾಲೇ ಪುನರ್ದ್ದೇಹಂ ವಿದದಾರ ಯಥಾ ಪುರಾ                 ೨೧.೧೬೨

 

ಜರಾಸಂಧನ ಬೆನ್ನು ಹುರಿಯ ಮೂಳೆಯಲ್ಲಿ ತನ್ನ ಮೊಣಕಾಲನ್ನಿಟ್ಟು ಅವನ ಕೂರ್ಮದೇಶವನ್ನು(ಸೊಂಟವನ್ನು) ಭೀಮಸೇನ ಸೀಳಿದನು. ಹುಟ್ಟುವಾಗ ಯಾವ ರೀತಿ ದೇಹ ಸೀಳಿತ್ತೋ ಅದೇ ರೀತಿ ಮರಣಕಾಲದಲ್ಲಿ ಅವನ ದೇಹವನ್ನು ಭೀಮ ಸೀಳಿದ.

 

ಮರ್ಮ್ಮಣ್ಯೇವ ನ ಹನ್ತವ್ಯೋ ಮಯಾsಯಮಿತಿ ಮಾರುತಿಃ ।

ಸ್ವಪೌರುಷಪ್ರಕಾಶಾಯ ಬಭಞ್ಜೈನಮಮರ್ಮ್ಮಣಿ                     ೨೧.೧೬೩

 

ಈ ಜರಾಸಂಧನು ನನ್ನಿಂದ ಮರ್ಮಸ್ಥಾನವನ್ನು ಬಳಸಿ ಕೊಲ್ಲಲು ಯೋಗ್ಯನಲ್ಲ [ಮರ್ಮಸ್ಥಾನಕ್ಕೆ ಹೊಡೆದು ಯಾರು ಬೇಕಾದರೂ ಗೆಲ್ಲಬಹುದು. ಉದಾಹರಣೆಗೆ ಹಿಂದೆ ಆಕಸ್ಮಿಕವಾಗಿ ಕರ್ಣ ಜರಾಸಂಧನ ಮರ್ಮಸ್ಥಾನಕ್ಕೆ ಹೊಡೆದು ಗೆಲುವನ್ನು ಕಂಡಿದ್ದನ್ನು ನಾವು ನೋಡಿದ್ದೇವೆ. ಆದರೆ ಭೀಮ ಹಾಗೆ ಮಾಡಲು ಇಷ್ಟಪಡದೇ] ತನ್ನ ಬಲ ಎಷ್ಟಿದೆ ಎಂದು ಜಗತ್ತಿಗೆ ತೋರಿಸಲು, ಜರಾಸಂಧನಲ್ಲಿ ಯಾವುದು ಮರ್ಮಸ್ಥಾನ ಅಲ್ಲವೋ ಅಲ್ಲಿಗೇ ಹೊಡೆದ.

[ಭಾಗವತ: ‘ಏಕಂ ಪಾದಂ ಪದಾssಕ್ರಮ್ಯ ದೊರ್ಭ್ಯಾಮನ್ಯಂ ಪ್ರಗೃಹ್ಯ ಸಃ । ಗುದತಃ ಪಾಠಯಾಮಾಸ ಶಾಖಾಮಿವ ಮತಙ್ಗಜಃ (೧೦.೮೦.೪೩) – ಅವನ ಒಂದು ಕಾಲಿಗೆ ಇವನ ಒಂದು ಕಾಲನ್ನು ಒತ್ತಿ, ಇನ್ನೊಂದು ಕಾಲನ್ನು ಹಿಡಿದುಕೊಂಡು ದೇಹವನ್ನು ಸೀಳಿಬಿಟ್ಟ. ಒಂದು ಆನೆ ಮರದ  ಕೊಂಬೆಯನ್ನು ಸೀಳುವಂತೆ ಸೀಳಿದ.  ತತಸ್ತ್ವಾಜ್ಞಾಯ ತಸ್ಯೈವ ಪಾದಮುತ್ಕ್ಷಿಪ್ಯ ಮಾರುತಿಃ । ದ್ವಿಧಾ ಬಭಞ್ಜ ತದ್ ಗಾತ್ರಂ ಪ್ರಾಕ್ಷಿಪದ್ ವಿನನಾದ ಚ । ಪುನಃ ಸನ್ಧಾಯ ತು ತದಾ ಜರಾಸನ್ಧಃ ಪ್ರತಾಪವಾನ್ । ಭೀಮೇನ ಚ ಸಮಾಗಮ್ಯ ಬಾಹುಯುದ್ಧಂ ಚಕಾರ ಹ ಮಹಾಭಾರತ(ಸಭಾಪರ್ವ ೨೫.೧೬-೧೭). ಒಮ್ಮೆ ಸೀಳಿದ-ಮತ್ತೆ ಜರಾಸಂಧನ ದೇಹ ಸೇರಿತು. ಆಗ ಅವನು ಮತ್ತೆ ಯುದ್ಧಕ್ಕೆ ಬಂದ  ಭೀಮಸೇನಸ್ತದಾ ಜ್ಞಾತ್ವಾ ನಿರ್ಬಿಭೇದ ಚ ಮಾಗಧಂ । ದ್ವಿಧಾ ವ್ಯತ್ಯಸ್ಯ ಪಾದೇನ ಪ್ರಾಕ್ಷಿಪಚ್ಚ ನನಾದ ಹ (೨೦) ಮತ್ತಿನ್ನೊಮ್ಮೆ ಬಂದ ಜರಾಸಂಧನ ದೇಹವನ್ನು ಭೀಮಸೇನ ಸೀಳಿ ಬೇರೆಬೇರೆ ಕಡೆ ಹಾಕಿದ]

 

ಭಜ್ಯಮಾನೇ ಶರೀರೇsಸ್ಯ ಬ್ರಹ್ಮಾಣ್ಡಸ್ಫೋಟಸನ್ನಿಭಃ ।

ಬಭೂವ ರಾವೋ ಯೇನೈವ ತ್ರಸ್ತಮೇತಜ್ಜಗತ್ತ್ರಯಮ್             ೨೧.೧೬೪

 

ಈ ಜರಾಸಂಧನ ದೇಹವು ಸೀಳಲ್ಪಡುತ್ತಿರಲು ಬ್ರಹ್ಮಾಂಡವೇ ಸ್ಪೋಟಗೊಂಡಂತೆ ಶಬ್ದವಾಯಿತು. ಆ ಶಬ್ದದಿಂದ ಮೂಜಗವೂ ಕೂಡಾ ಭಯಗ್ರಸ್ಥವಾಯಿತು.

 

ನಿಹತ್ಯ ಕೃಷ್ಣಸ್ಯ ರಿಪುಂ ಸ ಭೀಮಃ  ಸಮರ್ಪ್ಪಯಾಮಾಸ ತದರ್ಚ್ಚನಂ ಹರೇಃ ।

ಕೃತಾಂ ಹಿ ಭೀಮೇನ ಸಮರ್ಚ್ಚನಾಂ ತಾಂ ಸಮಕ್ಷಮಾದಾತುಮಿಹಾsಗತೋ ಹ್ಯಜಃ ೨೧.೧೬೫

 

ಕೃಷ್ಣನೆದುರು ಶತ್ರುವನ್ನು ಕೊಂದ ಭೀಮಸೇನ, ಎಲ್ಲವನ್ನೂ ಪರಮಾತ್ಮನ ಪೂಜೆ ಎಂದು ಶ್ರೀಕೃಷ್ಣನಿಗೆ  ಅರ್ಪಿಸಿದ. ಭೀಮಸೇನನಿಂದ ಮಾಡಲ್ಪಟ್ಟ ಆ ಪೂಜೆಯನ್ನು ಪ್ರತ್ಯಕ್ಷವಾಗಿ ಸ್ವೀಕರಿಸಲೆಂದೇ ಶ್ರೀಕೃಷ್ಣನು ಬಂದಿದ್ದನಷ್ಟೇ.

[ತಸ್ಮಿನ್”ನಪೋ ಮಾ”ತರಿಶ್ವಾ” ದಧಾತಿ ಎನ್ನುವ ಈಶಾವಾಸ್ಯ ಉಪನಿಷತ್ತಿನ ಮಾತೂ ಕೂಡಾ ಇಲ್ಲಿ ಅನ್ವಯವಾಗುತ್ತದೆ. ಬ್ರಹ್ಮಾಂಡದಲ್ಲಾಗಲೀ, ಪಿಂಡಾಂಡದಲ್ಲಾಗಲೀ ಮುಖ್ಯಪ್ರಾಣದೇವರು ತಮ್ಮ ಪ್ರತಿಯೊಂದು ಕಾರ್ಯವನ್ನೂ ಸದಾ ಭಗವಂತನ ಪೂಜಾರೂಪವಾಗಿಯೇ ಮಾಡುತ್ತಾರೆ.]

 

ಸ್ವೀಕೃತ್ಯ ಪೂಜಾಂ ಚ ವೃಕೋದರಸ್ಯ ದೃಢಂ ಸಮಾಶ್ಲಿಷ್ಯ ಚ ತಂ ಜನಾರ್ದ್ದನಃ ।

ಪ್ರೀತೋ ನಿತಾನ್ತಂ ಪುನರೇವ ಕೃಷ್ಣಂ ನನಾಮ ಭೀಮಃ ಪ್ರಣತೋsರ್ಜ್ಜುನೇನ ೨೧.೧೬೬

 

ಹೀಗೆ ಜನಾರ್ದನನು ಭೀಮಸೇನನ ಪೂಜೆಯನ್ನು ಸ್ವೀಕರಿಸಿ, ಅವನನ್ನು ಗಟ್ಟಿಯಾಗಿ ಆಲಂಗಿಸಿ ಸಂತುಷ್ಟನಾದ. ಭೀಮಸೇನನು ಅರ್ಜುನನಿಂದ ನಮಸ್ಕಾರವನ್ನು ಸ್ವೀಕರಿಸಿ, ಮತ್ತೆಮತ್ತೆ ಕೃಷ್ಣನಿಗೆ ನಮಸ್ಕರಿಸಿದ.

 

ಜಗ್ಮುಃ ಸುರಾಶ್ಚಾತಿತರಾಂ ಪ್ರಹೃಷ್ಟಾ ಬ್ರಹ್ಮಾದಯೋ ದೀನತರಾಶ್ಚ ದೈತ್ಯಾಃ ।

ಬಲಾದುಮೇಶಸ್ಯ ವರೇ ಪ್ರಭಗ್ನೇ ವೃಕೋದರೇಣಾಚ್ಯುತಸಂಶ್ರಯೇಣ             ೨೧.೧೬೭

 

ಕೃಷ್ಣನನ್ನು ಆಶ್ರಯಿಸಿದ ಭೀಮಸೇನನಿಂದ ರುದ್ರನ ಅಜೇಯತ್ವ ವರವು ನಾಶವಾಗಲು, ಬ್ರಹ್ಮಾದಿ ದೇವತೆಗಳು ಅತ್ಯಂತ ಸಂತಸಗೊಂಡು ತೆರಳಿದರೆ, ದೈತ್ಯರು ದುಃಖಿತರಾಗಿ ತೆರಳಿದರು.

No comments:

Post a Comment