ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 9, 2021

Mahabharata Tatparya Nirnaya Kannada 21: 106-112

                       ಯುಧಿಷ್ಠಿರೇ ಬ್ರುವತ್ಯಜಂ ಮಖೇನ ಮೇ ತ್ವಲಂ ತ್ವಿತಿ ।

ತಮಾಹ ಮಾರುತಾತ್ಮಜೋ ನಿಹನ್ಮಿ ಮಾಗಧಂ ರಣೇ             ೨೧.೧೦೬

 

ಯುಧಿಷ್ಠಿರನು ಭಗವಂತನನ್ನು ಕುರಿತು ‘ನನಗೆ ಈ ಯಾಗ ಬೇಕಿಲ್ಲ ಎಂದು ಹೇಳುತ್ತಿರಲು,  ಭೀಮಸೇನ ‘ಯುದ್ಧದಲ್ಲಿ  ಜರಾಸಂಧನನ್ನು ಕೊಲ್ಲುತ್ತೇನೆ’ ಎಂತನ್ದನು.

 

ಇತೀರಿತೇsವದದ್ಧರಿರ್ವ್ರಜಾಮಹೇ ವಯಂ ತ್ರಯಃ ।

ಅಹಂ ಚ ಭೀಮಫಲ್ಗುನೌ ನಿಹನ್ತುಮೇವ ಮಾಗಧಮ್     ೨೧.೧೦೭

 

ಈರೀತಿಯಾಗಿ ಭೀಮಸೇನನಿಂದ ಹೇಳಲ್ಪಡುತ್ತಿರಲು, ಶ್ರೀಕೃಷ್ಣ : ‘ನಾನು, ಭೀಮ ಮತ್ತು ಅರ್ಜುನ-ಮೂವರೂ ಜರಾಸಂಧನನ್ನು ಕೊಲ್ಲಲಿಕ್ಕಾಗಿಯೇ ಹೋಗುವೆವು’ ಎಂದ. 

ವೃಕೋದರೇಣ ಹನ್ಯತೇ ಯದಿ ಸ್ಮ ಮಾಗಧಾಧಿಪಃ ।

ಮಖಶ್ಚ ಸೇತ್ಸ್ಯತೇ ದ್ಧ್ರುವಂ ಜಗಚ್ಚ ತೇ ವಶೇ ಭವೇತ್   ೨೧.೧೦೮

 

‘ಒಂದುವೇಳೆ ಜರಾಸಂಧನು ಭೀಮಸೇನನಿಂದ ಸಂಹರಿಸಲ್ಪಟ್ಟರೆ ಆಗ ನಿನಗೆ ರಾಜಸೂಯ ಯಾಗ ಸುಲಭವಾಗಿ ಸಿದ್ಧಿಸುತ್ತದೆ. ಇಡೀ ಜಗತ್ತು ನಿನ್ನ ವಶಕ್ಕೆ ಬರುತ್ತದೆ’.

[ಈಗಾಗಲೇ ೨೨,೮೦೦ ಮಂದಿ ರಾಜರು ಜರಾಸಂಧನ ಸೆರೆಯಲ್ಲಿದ್ದಾರೆ. ಜರಾಸಂಧನನ್ನು ಕೊಂದಾಗ ಎಲ್ಲರೂ ನಿರಾಯಾಸವಾಗಿ ಯುಧಿಷ್ಠಿರನಿಗೆ ಕಪ್ಪ ಕೊಡುತ್ತಾರೆ].

 

ಇತೀರಿತೇ ತು ಶೌರಿಣಾ ಜಗಾದ ಧರ್ಮ್ಮನನ್ದನಃ।

ಸ ಶೂರಸೇನಮಣ್ಡಲಪ್ರಹಾಣತೋ ಹರೇಸ್ತ್ರಸನ್          ೨೧.೧೦೯

 

ಈರೀತಿಯಾಗಿ ಶ್ರೀಕೃಷ್ಣ ಹೇಳಲು, ಯಾದವರು ಮಧುರಾ ನಗರವನ್ನು ಬಿಟ್ಟದ್ದರಿಂದ ಪರಮಾತ್ಮನ ಬಗೆಗೆ ಭಯಪಡುತ್ತಾ(ಜರಾಸಂಧನ ಮೇಲಿನ ಭಯದಿಂದ ಯಾದವರು ಮಧುರೆಯನ್ನು ಬಿಟ್ಟಿರುವುದು ಎಂಬ ತಪ್ಪು ಕಲ್ಪನೆಯಿಂದ) ಧರ್ಮರಾಜನು ಮಾತನಾಡಿದನು:

 

ಭಯಾದ್ಧಿ ಯಸ್ಯ ಮಾಧುರಂ ವಿಹಾಯ ಮಣ್ಡಲಂ ಗತಾಃ ।

ಭವನ್ತ ಏವ ಸಾಗರಂ ತತೋ ಬಿಭೇಮ್ಯಹಂ ರಿಪೋಃ     ೨೧.೧೧೦

 

‘ಯಾರ ಭಯದಿಂದ ನೀವೂ (ಯಾದವರೂ) ಕೂಡಾ ಮಧುರೆಯನ್ನು ಬಿಟ್ಟು ಸಮುದ್ರವನ್ನು ಸೇರಿದಿರೋ, ಆ ಕಾರಣದಿಂದ ನಾನು ಜರಾಸಂಧನಿಂದ ಭಯಪಡುತ್ತಿದ್ದೇನೆ.

 

ಇಮೌ ಹಿ ಭೀಮಫಲ್ಗುನೌ ಮಮಾಕ್ಷಿಣೀ ಸದಾ ಪ್ರಭೋ ।

ಮನೋನಿಭೋ ಭವಾನ್ ಸದಾ ನ ವೋ ವಿನಾsಸ್ಮ್ಯತಃ ಪುಮಾನ್             ೨೧.೧೧೧

 

ಈ ಭೀಮಾರ್ಜುನರು ನನ್ನ ಕಣ್ಣಿನಂತೆ. ನೀನು ಮನಸ್ಸಿನಂತೆ. ಅದರಿಂದ ನಿಮ್ಮನ್ನು ಬಿಟ್ಟು ನಾನಿಲ್ಲ.

[‘ಭೀಮಾರ್ಜುನಾವುಭೌ ನೇತ್ರೇ ಮನೋ ಮನ್ಯೇ ಜನಾರ್ದನಮ್ । ಮನಶ್ಚಶುರ್ವಿಹೀನಸ್ಯ ಕೀದೃಶಂ ಜೀವಿತಂ ಭವೇತ್’ (ಸಭಾಪರ್ವ ೧೬.೨)    ಭೀಮಾರ್ಜುನರು ನನಗೆ ಕಣ್ಗಳಿದ್ದ ಹಾಗೆ. ಕೃಷ್ಣ ನನ್ನ ಮನಸ್ಸಿದ್ದ ಹಾಗೆ. ಮನಸ್ಸು ಕಣ್ಣು ಇಲ್ಲದೇ ಹೋದರೆ ಹೇಗೆ ಜೀವಿತಕ್ಕೆ ಅರ್ಥವಿಲ್ಲದ್ದಾಗುತ್ತದೋ ಹಾಗೇ  ನೀವು ಮೂವರು ನನ್ನ ಬಾಳಲ್ಲಿ ಇಲ್ಲದೇ ಹೋದರೆ ನನ್ನ ಜೀವನಕ್ಕೆ ಅರ್ಥವೇನು ಎಂದು ಕೇಳುತ್ತಾನೆ ಯುಧಿಷ್ಠಿರ].

 

ಅತೋ ನ ಜೀವಿತಾತ್ ಪ್ರಿಯಾನಹಂ ರಿಪೋರ್ಬಲೀಯಸಃ ।

ಸಕಾಶಮಾತ್ಮಹೇತುತಃ ಪ್ರಯಾತಯಾಮಿ ವೋ ವಿಭೋ             ೨೧.೧೧೨

 

ಆ ಕಾರಣದಿಂದ ನನ್ನ ಪ್ರಾಣಕ್ಕಿಂತಲೂ ಕೂಡಾ ಮಿಗಿಲಾಗಿರುವ ನಿಮ್ಮನ್ನು ನನ್ನ ಒಂದು ಕೀರ್ತಿಗಾಗಿ (ರಾಜಸೂಯ ಯಾಗ ಮಾಡಿದ್ದಾನೆ ಎನ್ನುವ ಯಶಸ್ಸಿಗಾಗಿ) ಬಲಿಷ್ಠನಾದ ಶತ್ರುವಿನ ಬಳಿಗೆ ಕಳುಹಿಸುವುದಿಲ್ಲ’.

No comments:

Post a Comment