ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, May 28, 2023

Mahabharata Tatparya Nirnaya Kannada 27-138-142

 

ತಂ ಶಙ್ಕಿತಂ ಕರ್ಣ್ಣಜಯೇ ಸ್ವಿನ್ನಗಾತ್ರಂ ಹರಿಸ್ತದಾ ।

ಸಙ್ಕೀರ್ತ್ತ್ಯ ಪೂರ್ವಕರ್ಮ್ಮಾಣಿ ನರಾವೇಶಂ ವಿಶೇಷತಃ ।

ವ್ಯಞ್ಜಯಾಮಾಸ ಧೈರ್ಯ್ಯಂ ಚ ತಸ್ಯಾSಸೀತ್ ತೇನ ಸುಸ್ಥಿರಮ್ ॥೨೭.೧೩೮ ॥

 

ಕರ್ಣನನ್ನು ಗೆಲ್ಲುತ್ತೇನೋ ಇಲ್ಲವೋ ಎಂದು ಭಯಗೊಂಡು, ಬೆವರಿಳಿದ ಮೈಯ್ಯವನಾದ ಅರ್ಜುನನನ್ನು ಪರಮಾತ್ಮನು ಅವನು ಮಾಡಿದ ಹಿಂದಿನ ಕೆಲಸಗಳನ್ನು ನೆನಪಿಸಿ, ಅವನಲ್ಲಿ ನರನ ಆವೇಶ ಇದೇ ಎನ್ನುವುದನ್ನೂ ಹೇಳಿ, ಅವನಲ್ಲಿದ್ದ ನರಾವೇಶವನ್ನು ಉಕ್ಕುವಂತೆ ಮಾಡಿದ.  ಆಗ ಅರ್ಜುನನಿಗೆ ಸ್ಥಿರವಾದ ಧೈರ್ಯ ಬಂದಿತು.

 

ಭೀಮಸ್ತದಾ ಶತ್ರುಬಲಂ ಸಮಸ್ತಂ ವಿದ್ರಾವಯಾಮಾಸ ಜಘಾನ ಚಾSಜೌ ।

ವೀರಾನ್ ರಣಾಯಾಭಿಮುಖಾನ್ ಸ್ವಯನ್ತ್ರಾ ಕುರ್ವಂಶ್ಚ ವಾರ್ತ್ತಾ ರಮಮಾಣ ಏವ ॥೨೭.೧೩೯ ॥

 

ಅಷ್ಟು ಹೊತ್ತಿಗೆ ಇಲ್ಲಿ ಭೀಮಸೇನನು ಯುದ್ಧದಲ್ಲಿ ಎಲ್ಲಾ ಶತ್ರುಗಳ ಪಡೆಯನ್ನು ಓಡಿಸಿ, ಉಳಿದವರನ್ನು ಕೊಂದ ಕೂಡಾ. ಭೀಮಸೇನನು ಅಭಿಮುಖವೀರರೊಂದಿಗೆ ಕಾದುತ್ತಾ,  ವಿಶೋಕನೊಂದಿಗೆ ಹರಟೆ ಹೊಡೆಯುತ್ತಾ, ಆನಂದದಿಂದ ಶತ್ರುಗಳನ್ನು ಕೊಲ್ಲುತ್ತಿದ್ದ.

[ಮಹಾಭಾರತದಲ್ಲಿ (೮೦.೧೫) ಈ ಪ್ರಸಂಗವನ್ನು ವರ್ಣಿಸಿದ್ದಾರೆ- ಸರ್ವಾಂಸ್ತೂಣಾನ್ ಸಾಯಕಾನಾಮವೇಕ್ಷ್ಯ ಕಿಂ ಶಿಷ್ಟಂ ಸ್ಯಾತ್ ಸಾಯಕಾನಾಂ ರಥೇ ಮೇ। ಕಾ ವಾ ಜಾತಿಃ ಕಿಂ ಪ್ರಮಾಣಂ ಚ ತೇಷಾಂ ಜ್ಞಾತ್ವಾ ವ್ಯಕ್ತಂ ತನ್ಮಮಾSಚಕ್ಷ್ವ ಸೂತ। ಕತಿ ವಾ ಸಹಸ್ರಾಣಿ ಕತಿ ವಾ ಶತಾನಿ ಹ್ಯಾಚಕ್ಷ್ವ ಮೇ ಸಾರಥೇ ಕ್ಷಿಪ್ರಮೇವ]

 

ತದಾSSಸದತ್ ತಂ ಶಕುನಿಃ ಸಸೈನ್ಯೋ ದುರ್ಯ್ಯೋಧನಸ್ಯಾವರಜೈರುಪೇತಃ ।

ತಂ ಭೀಮಸೇನೋ ವಿರಥಂ ನಿರಾಯುಧಂ ವಿಧಾಯ ಬಾಣೈರ್ಭುವಿ ಚ ನ್ಯಪಾತಯತ್ ॥೨೭.೧೪೦ ॥

 

ಆಗ ದುರ್ಯೋಧನನ ತಮ್ಮನ್ದಿರೊಂದಿಗೆ ಮತ್ತು ಸೈನ್ಯದಿಂದ ಕೂಡಿದ ಶಕುನಿಯು ಭೀಮಸೇನನನ್ನು ಎದುರುಗೊಂಡ. ಭೀಮಸೇನನು ತನ್ನ ಬಾಣಗಳಿಂದ ಅವನನ್ನು ಆಯುಧಹೀನನನ್ನಾಗಿಯೂ, ರಥಹೀನನನ್ನಾಗಿಯೂ ಮಾಡಿ ಭೂಮಿಯಲ್ಲಿ ಕೆಡವಿದನು.

 

ನ ಜಘ್ನಿವಾಂಸ್ತಂ ಸಹದೇವಭಾಗಂ ಪ್ರಕಲ್ಪಿತಂ ಸ್ವೇನ ತದಾSಕ್ಷಗೋಷ್ಠ್ಯಾಮ್ ।

ತಂ ಮೂರ್ಚ್ಛಿತಂ ಶ್ವಾಸಮಾತ್ರಾವಶೇಷಂ ದುರ್ಯ್ಯೋಧನಃ ಸ್ವರಥೇನಾಪನಿನ್ಯೇ ॥೨೭.೧೪೧ ॥

 

ಸಹದೇವನು ಶಕುನಿಯನ್ನು ತಾನು ಕೊಲ್ಲುತ್ತೇನೆ ಎಂದು ಹಿಂದೆ ಪ್ರತಿಜ್ಞೆ ಮಾಡಿದ್ದರಿಂದ ಭೀಮಸೇನ ಅವನನ್ನು ಕೊಲ್ಲಲಿಲ್ಲ. ಮೂರ್ಛೆ ಹೊಂದಿರುವ ಕೇವಲ ಶ್ವಾಸಮಾತ್ರ ಉಳಿದಿರತಕ್ಕ ಶಕುನಿಯನ್ನು ದುರ್ಯೋಧನ ತನ್ನ ರಥದಲ್ಲಿರಿಸಿಕೊಂಡು ಆಚೆ ಕೊಂಡೊಯ್ದ.

 

ದುರ್ಯ್ಯೋಧನಸ್ಯಾವರಜಾ ದಶಾತ್ರ ಪ್ರದುದ್ರುವುರ್ಭೀಮಸೇನಂ ವಿಹಾಯ ।

ತದಾSರ್ಜ್ಜುನಂ ವಾಸುದೇವಂ ಚ ದೃಷ್ಟ್ವಾ ಪ್ರೀತಃ ಶ್ರುತ್ವಾ  ಧರ್ಮ್ಮರಾಜಪ್ರವೃತ್ತಿಮ್ ॥೨೭.೧೪೨ ॥

 

ದುರ್ಯೋಧನನ ಹತ್ತು ಮಂದಿ ತಮ್ಮಂದಿರು ಭೀಮಸೇನನನ್ನು ಬಿಟ್ಟು ಓಡಿಹೋದರು.  ಆಗ ಭೀಮಸೇನ, ಬರುತ್ತಿರುವ ಅರ್ಜುನ ಹಾಗೂ ಶ್ರೀಕೃಷ್ಣನನ್ನು ನೋಡಿ, ಧರ್ಮರಾಜನ ಕ್ಷೇಮಸಮಾಚಾರವನ್ನು ಅವರಿಂದ ತಿಳಿದು ಸಂತುಷ್ಟನಾದನು.

No comments:

Post a Comment