ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 12, 2019

Mahabharata Tatparya Nirnaya Kannada 11.170-11.173


ನೈಷಾ ವಿರೋಧೇ  ಕುರುಪಾಣ್ಡವಾನಾಂ ತಿಷ್ಠೇದಿತಿ ವ್ಯಾಸ ಉದೀರ್ಣ್ಣಸದ್ಗುಣಃ ।   
ಸ್ವಮಾತರಂ ಸ್ವಾಶ್ರಮಮೇವ ನಿನ್ಯೇ ಸ್ನುಷೇ ಚ ತಸ್ಯಾ ಯಯತುಃ ಸ್ಮ ತಾಮನು ॥೧೧.೧೭೦

ಉತ್ಕೃಷ್ಟವಾದ ಗುಣವುಳ್ಳ ವೇದವ್ಯಾಸರು, ಮುಂದೆ ನಡೆಯಲಿರುವ  ಕೌರವ ಹಾಗು ಪಾಂಡವರ ಕಾಳಗವನ್ನು (ವಿರೋಧ ಪ್ರಾಪ್ತವಾಗುವುದನ್ನು)ತಾಯಿ ಸತ್ಯವತಿ ನೋಡಬಾರದು ಎಂದು(ಹಸ್ತಿನಾವತಿಯಲ್ಲಿ ಆಕೆ ಇರಬಾರದೆಂದು), ಆಕೆಯನ್ನು ತನ್ನ ಆಶ್ರಮಕ್ಕೆ ಕರೆದೊಯ್ದುರು. ಸತ್ಯವತಿಯ ಸೊಸೆಯರಿಬ್ಬರು (ಮತ್ತು ವಿದುರನ ತಾಯಿಯೂ), ಅವಳನ್ನು ಅನುಸರಿಸಿ ತೆರಳಿದರು.

ಸುತೋಕ್ತಮಾರ್ಗ್ಗೇಣ ವಿಚಿನ್ತ್ಯ ತಂ ಹರಿಂ ಸುತಾತ್ಮನಾ ಬ್ರಹ್ಮತಯಾ ಚ ಸಾ ಯಯೌ ।       
ಪರಂ ಪದಂ ವೈಷ್ಣವಮೇವ ಕೃಷ್ಣಪ್ರಸಾದತಃ ಸ್ವರ್ಯ್ಯಯತುಃ ಸ್ನುಷೇ ಚ ॥೧೧.೧೭೧     

ಸತ್ಯವತಿಯು, ಮಗನಾದ ವ್ಯಾಸರಿಂದ ಹೇಳಪಟ್ಟ ರೀತಿಯಿಂದ ನಾರಾಯಣನನ್ನು ಚಿಂತಿಸಿ, ವೇದವ್ಯಾಸರನ್ನು ಪುತ್ರಭಾವದಿಂದಲೂ, ಪರಬ್ರಹ್ಮಭಾವದಿಂದಲೂ ಅನುಸಂಧಾನ ಮಾಡಿ ಧ್ಯಾನಿಸಿ, ವೈಷ್ಣವ ಲೋಕವನ್ನು ಸೇರಿದಳು. ಆಕೆಯ ಸೊಸೆಯಂದಿರೂ ಕೂಡಾ  ನಾರಾಯಣನ ಅನುಗ್ರಹದಿಂದ ಸ್ವರ್ಗಲೋಕವನ್ನು ಹೊಂದಿದರು.

ಮಾತಾ ಚ ಸಾ ವಿದುರಸ್ಯಾsಪ ಲೋಕಂ ವೈರಿಞ್ಚಮನ್ವೇವ ಗತಾsಮ್ಬಿಕಾಂ ಸತೀ ।    
ವ್ಯಾಸಪ್ರಸಾದಾತ್ ಸುತಸದ್ಗುಣೈಶ್ಚ ಕಾಲೇನ ಮುಕ್ತಿಂ ಚ ಜಗಾಮ ಸನ್ಮತಿಃ ॥೧೧.೧೭೨    

ವಿದುರನ ತಾಯಿಯೂ ಕೂಡಾ, ಅಂಬಿಕೆಯನ್ನು ಅನುಸರಿಸಿ ಹೋದವಳಾಗಿ, ವೇದವ್ಯಾಸರ ಅನುಗ್ರಹದಿಂದ ಮತ್ತು  ವಿದುರನ ಸದ್ಗುಣಗಳಿಂದ, ಬ್ರಹ್ಮದೇವರ ಲೋಕವನ್ನು ಸೇರಿದಳು. ಕಾಲಕ್ರಮೇಣ, ಶುದ್ಧವಾದ ಭಗವದ್ಭಕ್ತಿಯುಳ್ಳವಳಾಗಿ ಮುಕ್ತಿಯನ್ನೂ ಸೇರಿದಳು.
[ಮುಕ್ತಿ ಪ್ರಾಪ್ತಿಯಾಗುವುದು ಕಲ್ಪಾಂತ್ಯದಲ್ಲಿ ಚತುರ್ಮುಖನ ಜೊತೆಗೇ. ಆದರೆ ಇಲ್ಲಿ ‘ಮುಕ್ತಿಯನ್ನು ಹೊಂದಿದರು’ ಎಂದು ಹೇಳಲಾಗಿದೆ. ಇದರ ಅರ್ಥ ಇಷ್ಟು: ಮುಕ್ತಿಯೋಗ್ಯರಿಗೆ  ಮುಕ್ತಿಪ್ರಾಪ್ತಿ ಕಲ್ಪಾಂತ್ಯದಲ್ಲೇ. ಮಧ್ಯದಲ್ಲಿ ಮುಕ್ತಿ ಎಂದರೆ: ಪ್ರಾರಾಭ್ದಕರ್ಮದ ಭೋಗಕ್ಕಾಗಿ ಮತ್ತೆ ಹುಟ್ಟದೇ ಇರುವುದು ಎಂದರ್ಥ. ಅಂದರೆ ಕಲ್ಪಾಂತ್ಯದ ತನಕ ತಮಗೆ ಪ್ರಾಪ್ತವಾದ ಊರ್ಧ್ವಲೋಕದಲ್ಲಿದ್ದು , ಕಲ್ಪಾಂತ್ಯದಲ್ಲಿ ಚತುರ್ಮುಖನೊಂದಿಗೆ ಮುಕ್ತಿಯನ್ನು ಪಡೆಯುತ್ತಾರೆ ಎನ್ನುವುದು ತಾತ್ಪರ್ಯ]

ಅಮ್ಬಾಲಿಕಾsಪಿ ಕ್ರಮಯೋಗತೋsಗಾತ್ ಪರಾಂ ಗತಿಂ ನೈವ ತಥಾsಮ್ಬಿಕಾ ಯಯೌ ।
ಯಥಾಯಥಾ ವಿಷ್ಣುಪರಶ್ಚಿದಾತ್ಮಾ ತಥಾತಥಾ ಹ್ಯಸ್ಯ ಗತಿಃ ಪರತ್ರ ॥೧೧.೧೭೩

ಅಮ್ಬಾಲಿಕೆಯೂ ಕೂಡಾ ಕ್ರಮೇಣ ಭಕ್ತಿಯಲ್ಲಿ ಬೆಳೆಯುತ್ತಾ, ವೈಷ್ಣವಲೋಕವನ್ನು ಹೊಂದಿದಳು. ದುರ್ಬುದ್ಧಿಯಾದ  ಅಂಬಿಕೆಯು ಇವರಿಬ್ಬರ ಹಾಗೆ ಈ ಹಂತದಲ್ಲಿ ಪರಮಗತಿಯನ್ನು ಹೊಂದಲಿಲ್ಲ!  ಹೀಗಾಗಲು ಕಾರಣವೇನು ಎನ್ನುವುದನ್ನು ಆಚಾರ್ಯರು ವಿವರಿಸುತ್ತಾ ಹೇಳುತ್ತಾರೆ: ‘ಸಾಧಕರು ಇಲ್ಲಿ ಹೇಗೆಹೇಗೆ ಭಗವಂತನನ್ನು ಉಪಾಸನೆ ಮಾಡುತ್ತಾರೋ, ಹಾಗೆಹಾಗೆ ಮುಂದಿನ ಗತಿಯನ್ನು ಹೊಂದುತ್ತಾರೆ’ ಎಂದು.
[ಅಂಬಿಕೆ ದುರ್ಬುದ್ಧಿಯಿಂದ ಮತ್ತು ವೇದವ್ಯಾಸರ ಮೇಲಿನ ಭಯದಿಂದ, ದಾಸಿಯನ್ನು ನಿಯಮಿಸಿದ್ದುದರಿಂದ ಈ ಹಂತದಲ್ಲಿ ಅವಳಿಗೆ ಪರಮಗತಿ ಪ್ರಾಪ್ತವಾಗಲಿಲ್ಲಾ] 

No comments:

Post a Comment