ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, January 29, 2019

Mahabharata Tatparya Nirnaya Kannada 11.199-11.201


ಯ ಉಗ್ರಸೇನಃ ಸುರಗಾಯಕಃ ಸ ಜಾತೋ ಯದುಷ್ವೇಷ ತಥಾಭಿಧೇಯಃ ।
ತವೈವ ಸೇವಾರ್ತ್ಥಮಮುಷ್ಯ ಪುತ್ರೋ ಜಾತೋsಸುರಃ ಕಾಲನೇಮಿಃ ಸ ಈಶ ॥೧೧.೧೯೯    

ಉಗ್ರಸೇನನೆಂಬ ದೇವತೆಗಳ ಹಾಡುಗಾರ ಯಾರಿದ್ದಾನೋ, ಅವನು ನಿನ್ನ ಸೇವೆಗಾಗಿ ಯಾದವರಲ್ಲಿ ಅದೇ ಹೆಸರುಳ್ಳವನಾಗಿ (ಉಗ್ರಸೇನ ಎಂಬ ಹೆಸರುಳ್ಳವನಾಗಿ) ಹುಟ್ಟಿದ್ದಾನೆ. ಎಲೋ ಈಶನೇ,  ಈ ಉಗ್ರಸೇನನ  ಮಗನಾಗಿ ಕಾಲನೇಮಿ ಅಸುರ ಹುಟ್ಟಿದ್ದಾನೆ.

ಯಸ್ತ್ವತ್ಪ್ರಿಯಾರ್ತ್ಥಂ ನ ಹತೋ ಹಿ ವಾಯುನಾ ಭವತ್ಪ್ರಸಾದಾತ್ ಪರಮೀಶಿತಾsಪಿ ।
ಸ ಏಷ ಭೋಜೇಷು ಪುನಶ್ಚ ಜಾತೋ ವರಾದುಮೇಶಸ್ಯ ಪರೈರಜೇಯಃ ॥೧೧.೨೦೦

ನಿನ್ನ ಅನುಗ್ರಹದಿಂದ ಅತ್ಯಂತ ಸಮರ್ಥನಾಗಿರುವ ಮುಖ್ಯಪ್ರಾಣ,  ನಿನ್ನ ಪ್ರೀತಿಗಾಗಿ ಯಾರನ್ನು ಹಿಂದೆ ಕೊಲ್ಲಲಿಲ್ಲವೋ,  ಅಂತಹ ಆ ಕಾಲನೇಮಿ, ಇದೀಗ  ಭೋಜರಲ್ಲಿ(ಯಾದವರಲ್ಲಿ) ಹುಟ್ಟಿದ್ದಾನೆ. ರುದ್ರನ ವರದಿಂದ ಆತ ಬೇರೊಬ್ಬರಿಂದ ಜಯಿಸಲಸಾಧ್ಯನಾಗಿ (ಅಜೇಯನಾಗಿ) ಉಳಿದಿದ್ದಾನೆ.

[ಮಹಾಭಾರತದ ಆದಿಪರ್ವದಲ್ಲಿ(೬೮.೬೭) ಈ ಪ್ರಮೇಯವನ್ನು ‘ಕಾಲನೇಮಿರಿತಿ ಖ್ಯಾತೋ ದಾನವಾನಾಂ ಮಹಾಬಲಃ ಸ ಕಂಸ ಇತಿ ವಿಖ್ಯಾತ ಉಗ್ರಸೇನಸುತೋ ಬಲೀ’ ಎಂದು ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ. ಅದೇ ರೀತಿ ಬ್ರಹ್ಮಪುರಾಣದಲ್ಲೂ(೧೮೧.೧) ಕೂಡಾ ಈ ವಿವರ ಕಾಣಸಿಗುತ್ತದೆ: ‘ಕಾಲನೇಮಿರ್ಹತೋ ಯೋsಸೌ ವಿಷ್ಣುನಾ ಪ್ರಭವಿಷ್ಣುನಾ  ಉಗ್ರಸೇನಸುತಃ ಕಂಸಃ  ಸಂಭೂತಃ ಸ ಮಹಾಸುರಃ’.

ಆದರೆ ಮಹಾಭಾರತದ ಆದಿಪರ್ವದಲ್ಲಿ(೬೮.೧೨-೧೩) ಉಗ್ರಸೇನನ ಕುರಿತು ‘ಸ್ವರ್ಭಾನುರಿತಿ ವಿಖ್ಯಾತಃ ಶ್ರೀಮಾನ್ ಯಸ್ತು ಮಹಾಸುರಃ  ಉಗ್ರಸೇನ ಇತಿ ಖ್ಯಾತಃ’ ಎಂದು ಹೇಳಿದ್ದಾರೆ.  ಇಲ್ಲಿ ‘ಸ್ವರ್ಭಾನು’ ಎನ್ನುವ ದೈತ್ಯ ಉಗ್ರಸೇನ ಎಂದು ಖ್ಯಾತನಾಗಿದ್ದಾನೆ ಎಂದು ಹೇಳಲಾಗಿದೆ. ಇದು ಮೇಲಿನ ವಿವರಣೆಗೆ ವಿರುದ್ಧವಲ್ಲವೇ? ಅಲ್ಲ! ಏಕೆಂದರೆ  ಇಲ್ಲಿ ಹೇಳಿರುವುದು ಅಸುರ ಆವೇಶವನ್ನು. ಅಂದರೆ: ಉಗ್ರಸೇನನಲ್ಲಿ ‘ಸ್ವರ್ಭಾನು’ ಎನ್ನುವ ಅಸುರನ ಆವೇಶವಿತ್ತು ಎನ್ನುವುದಷ್ಟೇ ಈ ಮಾತಿನ ತಾತ್ಪರ್ಯ. ಅಸುರಾವೇಶದಿಂದಲೇ ಉಗ್ರಸೇನನಿಗೆ ಕಂಸನನ್ನು ಪಾಲನೆ ಮಾಡಬೇಕು ಎನ್ನುವ ಅಭಿಲಾಷೆ ಬಂದಿರುವುದು. ಅಷ್ಟೇ ಅಲ್ಲ, ‘ಸ್ಯಮಂತಕ ಮಣಿ ನನಗೇ ಬೇಕು’ ಎಂಬಿತ್ಯಾದಿ  ಶ್ರೀಕೃಷ್ಣನ ವಿರುದ್ಧ ನಡೆಯನ್ನು ಆತ ತೋರಿರುವುದೂ ಅಸುರ ಆವೇಶದಿಂದಲೇ.]

ಸ ಔಗ್ರಸೇನೇ ಜನಿತೋsಸುರೇಣ ಕ್ಷೇತ್ರೇ ಹಿ ತದ್ರೂಪಧರೇಣ ಮಾಯಯಾ
ಗನ್ಧರ್ವಿಜೇನ ದ್ರಮಿಳೇನ ನಾಮ್ನಾ ಕಂಸೋ ಜಿತೋ ಯೇನ ವರಾಚ್ಛಚೀಪತಿಃ ೧೧.೨೦೧

ಉಗ್ರಸೇನನ ಹೆಂಡತಿಯಲ್ಲಿ,  ಕಪಟ ವಿದ್ಯೆಯಿಂದ ಉಗ್ರಸೇನನ ವೇಷವನ್ನು ಧರಿಸಿದ್ದ, ಗಂಧರ್ವಿಯಲ್ಲಿ ಹುಟ್ಟಿರುವ, ದ್ರಮಿಳನೆಂಬ ಅಸುರನಿಂದ ಹುಟ್ಟಿದ  ‘ಕಂಸ’, ರುದ್ರನ ವರಬಲದಿಂದ ಶಚೀಪತಿಯನ್ನೂ ಗೆದ್ದಿದ್ದಾನೆ. 
[ಒಮ್ಮೆ ಉಗ್ರಸೇನನ ಪತ್ನಿ ತವರು ಮನೆಗೆ ಹೋಗಿದ್ದ ಸಮಯದಲ್ಲಿ, ಗಂಧರ್ವಿಯಲ್ಲಿ ಹುಟ್ಟಿರುವ ದ್ರಮಿಳನೆನ್ನುವ ದೈತ್ಯನ ಕಣ್ಣಿಗೆ ಬೀಳುತ್ತಾಳೆ. ಆಕೆಯ ಸೌಂದರ್ಯವನ್ನು ಕಂಡ ಅಸುರ, ಉಗ್ರಸೇನನ ವೇಷವನ್ನು ಧರಿಸಿ, ಕಪಟವಾಗಿ ಬಂದು ಅವಳನ್ನು ಸೇರುತ್ತಾನೆ. ಈ ರೀತಿ  ಉಗ್ರಸೇನನ ಪತ್ನಿಯಲ್ಲಿ ದ್ರಮಿಳನಿಂದ ಕಾಲನೇಮಿಯು ಕಂಸ ಎನ್ನುವ ಹೆಸರಿನಿಂದ ಹುಟ್ಟುತ್ತಾನೆ].

No comments:

Post a Comment