ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, October 3, 2022

Mahabharata Tatparya Nirnaya Kannada 22-294-299

ತದ್ರೂಪವೃದ್ಧಿಂ ಭೀಮಸೇನೋsಥ ದೃಷ್ಟ್ವಾ ಶ್ರುತ್ವಾ ಹನೂಮನ್ಮುಖತಃ ಕಥಾಶ್ಚ ।

ರಾಮಸ್ಯ ತಚ್ಚಾತುರಾತ್ಮ್ಯಂ ಚ ದಿವ್ಯಂ ಚಾತುರ್ಯ್ಯುಗಂ ಧರ್ಮ್ಮಮಪ್ಯಗ್ರ್ಯಮೇವ ॥೨೨.೨೯೪॥

 

ದ್ವಜಾದ್ ಬೀಭತ್ಸೋರ್ಗ್ಗರ್ಜ್ಜನೇನೈವ ಶತ್ರುಪರಾಭವೇ ತೇನ ದತ್ತೇsರ್ಜ್ಜುನಸ್ಯ ।

ಯಯೌ ಪ್ರಣಮ್ಯೈನಮಾಶ್ವೇವ ಭೀಮಃ ಸೌಗನ್ಧಿಕಂ ವನಮತ್ಯಗ್ರ್ಯರೂಪಮ್ ॥೨೨.೨೯೫॥

 

ಭೀಮಸೇನನು ಹನುಮಂತನ ಆಕಾರವೃದ್ಧಿಯನ್ನು ಕಂಡು, ಹನುಮಂತನ ಮುಖದಿಂದ ರಾಮಾಯಣದ ಕಥೆಗಳನ್ನು ಕೇಳಿ, ಶ್ರೀರಾಮಚಂದ್ರನ  ಚತುರ್ಯುಗ ನಿಯಾಮಕತ್ವವನ್ನೂ ಕೇಳಿ, ನಾಲ್ಕೂ ಯುಗಗಳಲ್ಲಿ ವಿಹಿತವಾಗಿರುವ, ಅಲೌಕಿಕವಾಗಿರುವ, ಶ್ರೇಷ್ಠವಾಗಿರುವ ಧರ್ಮವನ್ನೂ ಕೇಳಿ, ಅರ್ಜುನನ ಧ್ವಜದಲ್ಲಿ ನಿಂತು ಕೇವಲ ಹುಂಕಾರದಿಂದ ಶತ್ರುಗಳನ್ನು ಸೋಲುವಂತೆ ಮಾಡುವೆನೆಂಬ ವರವು ಅರ್ಜುನನಿಗೆ ಕೊಡಲ್ಪಡುತ್ತಿರಲು, ಹನುಮಂತನಿಗೆ ನಮಸ್ಕರಿಸಿ, ಅತ್ಯಂತ ಶ್ರೇಷ್ಠವಾದ ಆಕೃತಿಯುಳ್ಳ ಸೌಗಂಧಿಕ ಪುಷ್ಪಗಳ ಕಾಡನ್ನು ಕುರಿತು ತೆರಳಿದನು.

 

ನರಾಗಮ್ಯಾಂ ನಳಿನೀಮೇತ್ಯ ತತ್ರ ದೃಷ್ಟ್ವಾ ಪದ್ಮಾನ್ಯದ್ಭುತಾಕಾರವನ್ತಿ ।

ಹೈಮಾನಿ ದಿವ್ಯಾನ್ಯತಿಗನ್ಧವನ್ತಿ ಸಮಾಸದದ್ ವಾರ್ಯ್ಯಮಾಣೋ ನರಾಶೈಃ ॥೨೨.೨೯೬॥

 

ಭೀಮಸೇನನು ಮನುಷ್ಯರು ಹೋಗಲಾಗದ ಆ ಸರೋವರವನ್ನು ಹೊಂದಿ, ಸರೋವರದಲ್ಲಿ ಅತ್ಯದ್ಭುತವಾದ ಆಕಾರವುಳ್ಳ, ಅಲೌಕಿಕವಾಗಿರುವ, ಅತ್ಯಂತ ಪರಿಮಳವನ್ನು ಬೀರುವ, ಪುಟಕ್ಕಿಟ್ಟಿರುವ ಬಂಗಾರದಂತೆ ಕೆಂಪಾಗಿರುವ ತಾವರೆಗಳನ್ನು ತೆಗೆದುಕೊಳ್ಳಲು, ನರಭಕ್ಷಕರಿಂದ ತಡೆಯಲ್ಪಟ್ಟರೂ  ಕೂಡಾ  ಸರೋವರಕ್ಕಿಳಿದ.

 

ತೇ ಭೀಮಮಾತ್ತಾಯುಧಮುಗ್ರರೂಪಂ ಮಹಾಬಲಂ ರೂಪನವಾವತಾರಮ್ ।

ನ್ಯವಾರಯನ್ ಕ್ರೋಧವಶಾಃ ಸಮೇತಾಃ ಶತಂ ಸಹಸ್ರಾಣ್ಯಜಿತಾನಿ ಸಙ್ಖೇ ॥೨೨.೨೯೭॥

 

ಲಕ್ಷಾಂತರ ಸಂಖ್ಯೆಯಿಂದ ಕೂಡಿರುವ, ಯುದ್ಧದಲ್ಲಿ ಸೋಲದ, ಕ್ರೋಧಾದೀನರೆಂಬ ಆ ದೈತ್ಯರು,  ಅತ್ಯಂತ ಬಲಿಷ್ಠನಾದ, ಬಹಳ ಸುಂದರನಾದ^, ಆಯುಧವನ್ನು ಹಿಡಿದು ಸಿಟ್ಟನ್ನು ಪ್ರದರ್ಶನ ಮಾಡುತ್ತಿರುವ ಭೀಮಸೇನನನ್ನು ತಡೆದರು.

[^ಮಹಾಭಾರತದಲ್ಲಿ(ವನಪರ್ವ ೧೪೮.೩೫) ವೇದವ್ಯಾಸರು  ‘ನವಾವತಾರೋ ರೂಪಸ್ಯ ವಿಕ್ರೀಡನ್ನಿವ ಪಾಣ್ಡವಃ’ ಎಂದು ವರ್ಣಿಸಿರುವ ಮಾತು ಇದಾಗಿದೆ].

 

ವರಾಚ್ಛಿವಸ್ಯೈವ ಪರೈರಜೇಯಾಃ ಶಸ್ತ್ರಾಸ್ತ್ರವೃಷ್ಟಿಂ ಮುಮುಚುಃ ಸುಭೀಮಾಮ್ ।

ಭೀಮೇsಖಿಲಜ್ಞೇ ತಪಸಾಂ ನಿಧಾನೇ ಬಲೋದಧೌ ಶೈವಶಾಸ್ತ್ರಂ ವದನ್ತಃ ॥೨೨.೨೯೮॥

 

ಸದಾಶಿವನ ಅನುಗ್ರಹದಿಂದ ಜಯಿಸಲು ಅಸಾಧ್ಯವಾಗಿರುವ ಆ ಕ್ರೋಧಾದೀನ ದೈತ್ಯರು, ತಪಸ್ಸಿಗೆ ಆಶ್ರಯೀಭೂತನಾದ,  ಬಲದಲ್ಲಿ ಸಮುದ್ರದಂತಿರುವ, ಸರ್ವಜ್ಞನಾದ ಭೀಮಸೇನನಲ್ಲಿ, ಶೈವಶಾಸ್ತ್ರವನ್ನು ಸಾಧಿಸುವವರಾಗಿ, ಅತಿ ಭಯಂಕರವಾದ ಶಸ್ತ್ರಾಸ್ತ್ರಗಳ ಮಳೆಗರೆದರು.

 

ತಾನ್ ವೈಷ್ಣವೈರೇವ ಶಾಸ್ತ್ರೈಃ ಸ ಭೀಮೋ ವಿಜಿತ್ಯ ಪೂರ್ವಂ ವಾಙ್ಮಯೇ ಸಙ್ಗರೇ ತು ।

ಶಸ್ತ್ರಾಸ್ತ್ರವರ್ಷಸ್ಯ ಕುರ್ವನ್ ಪ್ರತೀಪಂ ಜಘ್ನೇsಖಿಲಾನ್ ಗದಯಾ ತೇಷು ವೀರಾನ್ ॥೨೨.೨೯೯॥

 

ಅವರೆಲ್ಲರನ್ನೂ ಮೊದಲು ವಿಷ್ಣುಸಂಬಂಧಿಯಾದ ಶಾಸ್ತ್ರದ ವಾಙ್ಮಯ ಯುದ್ಧದಲ್ಲಿ ಗೆದ್ದು, ತದನಂತರ ಶಸ್ತ್ರಾಸ್ತ್ರವನ್ನು ಎಸೆದ ದೈತ್ಯರಿಗೆ ಪ್ರತೀಕಾರವನ್ನು ಮಾಡುತ್ತಾ, ಅವರಲ್ಲಿ ವೀರರಾಗಿರುವವರನ್ನು ಭೀಮಸೇನ ತನ್ನ ಗದೆಯಿಂದ ಕೊಂದ.

[ಮಹಾಭಾರತದಲ್ಲಿ(ವನಪರ್ವ ೧೫೫.೨೨) ‘ತೇತಸ್ಯವೀರ್ಯಂಚ ಬಲಂ ಚ ದೃಷ್ಟ್ವಾ ವಿದ್ಯಾಬಲಂ ಬಾಹುಬಲಂ ತಥೈವ’ ಎಂದು ಹೇಳಿದ್ದಾರೆ. ಆ ದೈತ್ಯರು ಭೀಮಸೇನನ ವಿದ್ಯಾಬಲವನ್ನೂ,  ಬಾಹುಬಲವನ್ನೂ ಕಂಡು ಸಹಿಸಲಾಗದೇ ಯುದ್ಧಕ್ಕೆ ಬಂದಿದ್ದರು ಎಂದು ವೇದವ್ಯಾಸರು ಅಲ್ಲಿ ಹೇಳಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು] 

No comments:

Post a Comment