ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 9, 2022

Mahabharata Tatparya Nirnaya Kannada 22-322-331

 

ತತ್ರೈವ ತೇಷಾಂ ವಸತಾಂ ಮಹಾತ್ಮನಾಮಾನನ್ದಿನಾಮಬ್ದಚತುಷ್ಟಯೇ ಗತೇ ।

ಪಞ್ಚಾಬ್ದಮದ್ಧ್ಯಾಪ್ಯ ಮಹಾನ್ತಿ ಚಾಸ್ತ್ರಾಣೀನ್ದ್ರೋ ಗುರ್ವರ್ತ್ಥಂ ಫಲ್ಗುನೇನಾರ್ತ್ಥಿತೋSಭೂತ್ ॥೨೨.೩೨೨॥

 

ಕುಬೇರನ ಮನೆಯ ಪ್ರದೇಶದಲ್ಲಿ ಆನಂದದಿಂದ ವಾಸಮಾಡುತ್ತಾ ಪಾಂಡವರು ನಾಲ್ಕು ವರ್ಷಗಳನ್ನು ಕಳೆದಿರಲು, ಇತ್ತ ಅರ್ಜುನನಿಗೆ ಐದು ವರ್ಷಗಳ ಕಾಲ ಶ್ರೇಷ್ಠವಾಗಿರುವ ಅಸ್ತ್ರಗಳನ್ನು ಅಧ್ಯಾಪನ ಮಾಡಿರುವ ಇಂದ್ರನು, ಗುರುದಕ್ಷಿಣೆಯ ವಿಚಾರವಾಗಿ ಅರ್ಜುನನಿಂದ ಪ್ರಾರ್ಥಿತನಾದನು.(ಅರ್ಜುನ -ಗುರುದಕ್ಷಿಣೆ ವಿಚಾರವಾಗಿ ಇಂದ್ರನನ್ನು ಪ್ರಾರ್ಥಿಸಿದನು).  

 

ವಧಂ ವವ್ರೇ ಸ್ವಶತ್ರೂಣಾಮಿನ್ದ್ರಃ ಪಾರ್ತ್ಥಾತ್ ಸ್ವರೂಪತಃ ।

ನಿವಾತಕವಚಾಖ್ಯಾನಾಂ ಯೇಷಾಂ ಬ್ರಹ್ಮಾ ದದೌ ವರಮ್ ॥೨೨.೩೨೩॥

 

ಇಂದ್ರನು ತಾನೇ ಆಗಿರುವ(ತನ್ನದೇ ಅವತಾರವಾಗಿರುವ) ಅರ್ಜುನನಿಂದ ತನ್ನ ಶತ್ರುಗಳಾಗಿರುವ, ಯಾರಿಗೆ ಬ್ರಹ್ಮನು ಅವಧ್ಯದ ವರವನ್ನು ಕೊಟ್ಟಿದ್ದನೋ ಅಂತಹ ನಿವಾತಕವಚ ಎಂಬ ಹೆಸರಿನ ರಾಕ್ಷಸರ ಸಂಹಾರವನ್ನು ಗುರುದಕ್ಷಿಣೆಯಾಗಿ ಕೇಳಿದನು.

 

ಅವದ್ಧ್ಯತ್ವಂ ಸುರೈರ್ದ್ದೈತ್ಯೈರ್ಗ್ಗನ್ಧರ್ವೈಃ ಪಕ್ಷಿರಾಕ್ಷಸೈಃ ।

ಪುನರಿನ್ದ್ರೇಣಾರ್ತ್ಥಿತೋSದಾಜ್ಜಹೀಮಾನ್ ನರದೇಹವಾನ್ ॥೨೨.೩೨೪॥

 

ದೇವತೆಗಳು, ದೈತ್ಯರು, ಗಂಧರ್ವರು, ಯಕ್ಷ-ರಾಕ್ಷಸರಿಂದಲೂ ಅವಧ್ಯತ್ವದ ವರವನ್ನು ನಿವಾತಕವಚರು ಚತುರ್ಮುಖನಿಂದ ಪಡೆದಿದ್ದರು. ರಾಕ್ಷಸರು ಬ್ರಹ್ಮನಿಂದ ವರವನ್ನು ಪಡೆದ ನಂತರ ಇಂದ್ರನಿಂದ ಪ್ರಾರ್ಥಿತನಾದ ಬ್ರಹ್ಮದೇವನು ‘ನೀನು ಮನುಷ್ಯ ರೂಪದಲ್ಲಿ ಅವರನ್ನು ಸಂಹರಿಸು ಎನ್ನುವ ವರವನ್ನು ಇಂದ್ರನಿಗೆ ನೀಡಿದ್ದನು. 

 

ಇತಿ ತೇನಾರ್ಜ್ಜುನಂ ಶಕ್ರಃ ಸ್ವಾತ್ಮಾನಂ ನರದೇಹಗಮ್ ।

ಜಗಾದ ತಾನ್ ಜಹೀತ್ಯೇವ ಕಿರೀಟಂ ಸ್ವಂ ನಿಬದ್ಧ್ಯ ಚ ॥೨೨.೩೨೫॥

 

ಈ ಕಾರಣದಿಂದ ಶಕ್ರನು ತನ್ನ ಸ್ವರೂಪಭೂತನಾದ, ಆದರೆ ಮನುಷ್ಯ ಶರೀರವನ್ನು ಹೊಂದಿರುವ ಅರ್ಜುನನನ್ನು ಕುರಿತು ‘ನೀನು ನಿವಾತಕವಚರನ್ನು ಕೊಲ್ಲು’ ಎಂದು ತನ್ನ ಕಿರೀಟವನ್ನೇ ಅವನ ತಲೆಗೆ ಇಟ್ಟು ಹೇಳಿದನು. [ಅರ್ಜುನ ಇಂದ್ರನೇ ಎಂದು ಜಗತ್ತಿಗೆ ತೋರಿಸುವುದೂ ಅದರ ಉದ್ದೇಶವಾಗಿತ್ತು]

 

ಐನ್ದ್ರಂ ಸ್ಯನ್ದನಮಾರುಹ್ಯ ಪಾರ್ತ್ಥೋ ಮಾತಲಿಸಂಯುತಃ ।

ಗಾಣ್ಡೀವಂ ಧನುರಾದಾಯ ಯಯೌ ಹನ್ತುಂ ಮಹಾಸುರಾನ್ ॥೨೨.೩೨೬॥

 

ಅರ್ಜುನನು ಸಾರಥಿಯಾದ ಮಾತಲಿಯಿಂದ ಕೂಡಿದ ಇಂದ್ರ ಕೊಟ್ಟ ರಥವನ್ನೇರಿ, ಗಾಂಡೀವವೆಂಬ ಬಿಲ್ಲನ್ನು ಹಿಡಿದು, ನಿವಾತಕವಚರ ಸಂಹಾರಕ್ಕೆಂದು ತೆರಳಿದನು.

 

ಶಙ್ಖಂ ದದುಸ್ತಸ್ಯ ದೇವಾ ದೇವದತ್ತಃ ಸ ಶಙ್ಖರಾಟ್ ।

ನಾದಯನ್ ಶಙ್ಖಘೋಷೇಣ ಧನುರ್ವಿಷ್ಫಾರಯನ್ ಮಹತ್ ॥೨೨.೩೨೭॥

 

ದಧಾನಃ ಕುಣ್ಡಲೇ ದಿವ್ಯೇ ಶಕ್ರದತ್ತೇ ಸುಭಾಸ್ವರೇ ।

ಆಸಸಾದ ಪುರಂ ದಿವ್ಯಂ ದೈತ್ಯಾನಾಮಿನ್ದ್ರನನ್ದನಃ ॥೨೨.೩೨೮॥

 

ಅರ್ಜುನನಿಗೆ ದೇವತೆಗಳೆಲ್ಲರು ಶಂಖವನ್ನು ಕೊಟ್ಟರು. ದೇವತೆಗಳಿಂದ ಕೊಡಲ್ಪಟ್ಟ ಆ ಶ್ರೇಷ್ಠವಾದ ಶಂಖವು ದೇವದತ್ತ ಎನ್ನುವ ಹೆಸರಿನದಾಯಿತು. ಹೀಗೆ ಅರ್ಜುನನು ದೇವೇಂದ್ರನಿಂದ ಕೊಡಲ್ಪಟ್ಟ ಅಲೌಕಿಕವಾದ ಕುಂಡಲವನ್ನು ಧರಿಸಿದವನಾಗಿ, ಶಂಖಘೋಷದಿಂದ ಎಲ್ಲಾ ದಿಕ್ಕನ್ನು ಶಬ್ದಸಹಿತವನ್ನಾಗಿ ಮಾಡುತ್ತಾ, ಮಹತ್ತಾದ ಬಿಲ್ಲನ್ನು ಠೇಂಕರಿಸುತ್ತಾ, ದೈತ್ಯರ ಅಲೌಕಿಕವಾದ ಪಟ್ಟಣವನ್ನು ಹೊಂದಿದನು.

 

ತಸ್ಯ ಶಙ್ಖಧ್ವನಿಂ ಶ್ರುತ್ವಾ ಗಾಣ್ಡೀವಸ್ಯ ಚ ನಿಸ್ಸ್ವನಮ್ ।

ಅಭಿಸಸ್ರುರ್ಮ್ಮಹಾವೀರ್ಯ್ಯಾ ನಿವಾತಕವಚಾಸುರಾಃ ॥೨೨.೩೨೯॥

 

ಅರ್ಜುನನ ಶಂಖದ ಧ್ವನಿಯನ್ನು, ಗಾಂಡೀವ ಬಿಲ್ಲಿನ ಧ್ವನಿಯನ್ನು ಕೇಳಿ, ಮಹಾವೀರ್ಯರಾಗಿರುವ ನಿವಾತಕವಚರೆಂಬ ಆ ಅಸುರರು ಅರ್ಜುನನನ್ನು ಎದುರುಗೊಂಡರು.

 

ತಿಸ್ರಃ ಕೋಟ್ಯೋ ದಾನವಾನಾಂ ಸ್ವಯಮ್ಭುವರಗರ್ವಿತಾಃ ।

ನಾನಾಯುಧೈ ರಣೇ ಪಾರ್ತ್ಥಮಭ್ಯವರ್ಷನ್ ಸುಸಂಹತಾಃ ॥೨೨.೩೩೦॥

 

ಬ್ರಹ್ಮನ ವರದಿಂದ ದರ್ಪವನ್ನು ಹೊಂದಿರುವ ಆ ಮೂರು ಕೋಟಿ ದಾನವರು ಬೇರೆಬೇರೆ ಆಯುಧಗಳನ್ನು ಹಿಡಿದುಕೊಂಡು ಒಟ್ಟಾಗಿ ಯುದ್ಧದಲ್ಲಿ ಅರ್ಜುನನನ್ನು ಕುರಿತು ದಾಳಿಮಾಡಿದರು.

 

 

ತೇಷಾಂ ಸ ಶಸ್ತ್ರಾಣಿ ಕಿರೀಟಮಾಲೀ ನಿವಾರ್ಯ್ಯ ಗಾಣ್ಡೀವಧನುಪ್ರಮುಕ್ತೈಃ ।

ಶರೈಃ ಶಿರಾಂಸಿ ಪ್ರಚಕರ್ತ್ತ ವೀರೋ ಮಹಾಸ್ತ್ರಶಿಕ್ಷಾಬಲಸಮ್ಪ್ರಯುಕ್ತೈಃ ॥೨೨.೩೩೧॥

 

ವೀರನಾಗಿರುವ, ಕಿರೀಟವನ್ನೂ ಮಾಲೆಯನ್ನೂ ಧರಿಸಿರುವ ಅರ್ಜುನನು, ತನ್ನ ಅಸ್ತ್ರಬಲ ಮತ್ತು ನಿರಂತರವಾದ ಅಭ್ಯಾಸಬಲದಿಂದ ಆ ಎಲ್ಲಾ ರಾಕ್ಷಸರ  ಶಸ್ತ್ರಗಳನ್ನು ತಡೆದನು ಮತ್ತು  ಗಾಂಡೀವವೆಂಬ ಬಿಲ್ಲಿನಿಂದ  ಬಾಣಗಳನ್ನು ಬಿಟ್ಟು ಅವರ ತಲೆಗಳನ್ನು ಕತ್ತರಿಸಿದನು.

No comments:

Post a Comment