ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, October 4, 2022

Mahabharata Tatparya Nirnaya Kannada 22-308-315

 

ವಸತ್ಸು ತತ್ರ ಪಾರ್ತ್ಥೇಷು ಪುನಃ ಕತಿಪಯೈರ್ದ್ದಿನೈಃ ।

ಉವಾಚ ಭೀಮಸೇನಸ್ಯ ಯಶೋಧರ್ಮ್ಮಾಭಿವೃದ್ಧಯೇ ॥೨೨.೩೦೮॥

 

ಪಞ್ಚವರ್ಣ್ಣಾನಿ ಪುಷ್ಪಾಣಿ ಕೃಷ್ಣಾ ವೀಕ್ಷ್ಯಾsಹೃತಾನಿ ತು ।

ಮಾರುತೇನ ಕುಬೇರಸ್ಯ ಗೃಹಾನ್ನೃಭಿರಗಮ್ಯತಃ ॥೨೨.೩೦೯॥

 

ಅಲ್ಲಿಯೇ (ಆ ಪರ್ವತದ ಆಸುಪಾಸಿನಲ್ಲಿ) ಪಾಂಡವರು ವಾಸಮಾಡುತ್ತಿರಲು, ಮತ್ತೆ ಕೆಲವು ದಿನಗಳಾದ ಮೇಲೆ,  ಭೀಮಸೇನನ ಯಶಸ್ಸು ಹಾಗೂ ಪುಣ್ಯದ ಬೆಳವಣಿಗೆಯಾಗಲೆಂದು, ಮನುಷ್ಯರಿಂದ ತಲುಪಲು ಅಸಾಧ್ಯವಾದ, ಕುಬೇರನ ಮನೆಯಿಂದ ಗಾಳಿಯಿಂದ ತರಲ್ಪಟ್ಟ ಐದು ಬಣ್ಣದ ತಾವರೆಗಳನ್ನು ಕಂಡು ದ್ರೌಪದೀ ದೇವಿಯು ಭೀಮಸೇನನನ್ನು ಕುರಿತು ಹೇಳಿದಳು:

 

ಅಗಮ್ಯೋsಯಂ ಗಿರಿಃ ಸರ್ವೈಃ ಕುಬೇರೇಣಾಭಿಪಾಲಿತಃ ।

ಅದ್ಯ ತ್ವಯೈವ ಗನ್ತವ್ಯೋ ವಿಧೂಯಾಖಿಲರಾಕ್ಷಸಾನ್ ॥೨೨.೩೧೦॥

 

ಕುಬೇರನಿಂದ ಪಾಲಿತವಾಗಿರುವ ಈ ಪರ್ವತವು ಮನುಷ್ಯರಿಂದ ಹೋಗಲು ಅಸಾಧ್ಯವಾಗಿದೆ. ಆದಕಾರಣ ಅಲ್ಲಿರುವ ಎಲ್ಲಾ ರಾಕ್ಷಸರನ್ನು ತಿರಸ್ಕರಿಸಿ ನಿನ್ನಿಂದಲೇ ಹೋಗಲು ಶಕ್ಯವಾದುದು.

 

ಇತ್ಯುಕ್ತ ಆಶು ಸಗದಃ ಸಧನುಃ ಸಬಾಣೋ ಭೀಮೋ ಗಿರೀನ್ದ್ರಮಜಿತೋರುಬಲೋ ವಿಗಾಹೇ ।

ಪ್ರಾಪ್ತಂ ನಿಶಾಮ್ಯ ಬಲದೈವತಸೂನುಮತ್ರ ಪದ್ಮತ್ರಯಂ ನ್ಯರುಣದುದ್ಧತರಾಕ್ಷಸಾನಾಮ್ ॥೨೨.೩೧೧॥

 

ಈರೀತಿಯಾಗಿ ಹೇಳಲ್ಪಟ್ಟ, ಯಾರಿಗೂ ಮಣಿಯದ ಬಲವಿರುವ ಭೀಮಸೇನನು ಗದೆ, ಬಿಲ್ಲು-ಬಾಣದೊಂದಿಗೆ ಕೂಡಿ, ಪರ್ವತದತ್ತ ತೆರಳಿದನು. ಬಲಕ್ಕೆ ಅಧಿದೇವತೆಯಾಗಿರುವ ಮುಖ್ಯಪ್ರಾಣನ ಮಗನಾಗಿರುವ ಭೀಮಸೇನನನ್ನು ಕಂಡ ಕೋಟ್ಯಂತರ ರಾಕ್ಷಸರು ಅವನನ್ನು ತಡೆದರು.

 

ಅಗ್ರೇ ನಿಧಾಯ ಮಣಿಮನ್ತಮಜೇಯಮುಗ್ರಂ ಶಮ್ಭೋರ್ವರಾದ್ ವಿವಿಧಶಸ್ತ್ರಮಹಾಭಿವೃಷ್ಟ್ಯಾ ।

ತಾನ್ ಸರ್ವರಾಕ್ಷಸಗಣಾನ್ ಮಣಿಮತ್ಸಮೇತಾನ್ ಭೀಮೋ ಜಘಾನ ಸಪದಿ ಪ್ರವರೈಃ ಶರೌಘೈಃ ॥೨೨.೩೧೨॥

 

ರುದ್ರದೇವರ ವರದಿಂದ ಮಣಿಸಲಾಗದ ಭಯಂಕರನಾದ ಮಣಿಮಂತನನ್ನು ಮುಂದೆ ಇಟ್ಟುಕೊಂಡು, ತರತರದ ಆಯುಧವನ್ನು ಭೀಮಸೇನನ ಮೇಲೆ ಎಸೆಯುತ್ತಾ ಬರುತ್ತಿರುವ ಮಣಿಮಂತನಿಂದ ಕೂಡಿರುವ ಎಲ್ಲಾ ರಾಕ್ಷಸರ ಸಮೂಹವನ್ನು ಕೂಡಲೇ ಶ್ರೇಷ್ಠವಾಗಿರುವ ಬಾಣಗಳಿಂದ ಭೀಮಸೇನನು ಸಂಹರಿಸಿದನು.  

 

ಅವದ್ಧ್ಯಾಂಸ್ತಾನ್ ಕ್ಷಣೇನೈವ ಹತ್ವಾ ಭೀಮೋ ಮಹಾಬಲಃ ।

ರಣೇ ಕ್ರೋಧವಶಾನ್ ಸರ್ವಾನತಿಷ್ಠದ್ ಗಿರಿಮೂರ್ದ್ಧನಿ ॥೨೨.೩೧೩॥

 

ಮಹಾಪರಾಕ್ರಮಿಯಾದ ಭೀಮಸೇನನು ಯಾರೂ ಕೊಲ್ಲಲಾಗದ ಆ ಕ್ರೋಧವಶರನ್ನು ಕ್ಷಣದಲ್ಲಿ -ಯುದ್ಧದಲ್ಲಿ ಕೊಂದು ಬೆಟ್ಟದ ಮೇಲ್ಗಡೆ ನಿಂತನು.

 

ತೇ ಹತಾ ಭೀಮಸೇನೇನ ಪ್ರಾಪುರನ್ಧನ್ತಮೋsಖಿಲಾಃ ।

ಹತಾಃ ಸೌಗನ್ಧಿಕವನೇ ಮಣಿಮಾಂಶ್ಚ ಪುನಃ ಕಲೌ                     ॥೨೨.೩೧೪॥

 

ಜಾತೋ ಮಿಥ್ಯಾಮತಿಂ ಸಮ್ಯಗಾಸ್ತೀರ್ಯ್ಯಾsಪುಸ್ತಮೋsಧಿಕಮ್ ।

ತತೋ ವೈಶ್ರವಣೋ ರಾಜಾ ಮಹಾಪದ್ಮತ್ರಯೇ ಹತೇ             ॥೨೨.೩೧೫॥

 

ಆ ಎಲ್ಲಾ ದೈತ್ಯರು ಭೀಮಸೇನನಿಂದ ಕೊಲ್ಲಲ್ಪಟ್ಟವರಾಗಿ ಅನ್ಧಂತಮಸ್ಸನ್ನು ಹೊಂದಿದರು. ಕಲಿಯುಗದಲ್ಲಿ ಮಣಿಮಂತನು ಮತ್ತೆ ಹುಟ್ಟಿ ಎಲ್ಲವೂ ಮಿಥ್ಯಾ, ದೇವರಿಗೆ ಸ್ವತಂತ್ರವಾದ ಗುಣವಿಲ್ಲ, ಇತ್ಯಾದಿಯಾದ ಮಿಥ್ಯಾಜ್ಞಾನವನ್ನು ಪ್ರಚಾರಮಾಡಿ, ಅನ್ಧಂತಮಸ್ಸನ್ನು ಹೊಂದಿದನು.

No comments:

Post a Comment