ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, November 11, 2022

Mahabharata Tatparya Nirnaya Kannada 22-415-420

 

ಸಮೀಪಮಾಗತ್ಯ ಪೃಥಾಸುತಾನಾಂ ಪರಿಭೂತಂ ವಃ ಕುಲಂ ಶಕ್ರಭೃತ್ಯೈಃ ।

ಧೃತಃ ಸಭಾರ್ಯ್ಯಃ ಸಾನುಜೋ ಧಾರ್ತ್ತರಾಷ್ಟ್ರಸ್ತಂ ಮೋಚಯಧ್ವಂ ಭ್ರಾತರಂ ಭಾರತಾಗ್ರ್ಯಾಃ ॥೨೨.೪೧೫॥

 

ಪಾಂಡವರ ಬಳಿ ಬಂದ ದುರ್ಯೋಧನನ ಮಂತ್ರಿಗಳು- ‘ಇಂದ್ರನ ಭೃತ್ಯರಿಂದ ನಿಮ್ಮ ಕುಲವು  ಸೋಲಿಸಲ್ಪಟ್ಟಿದೆ. ಇದು ನಿಮ್ಮ ಕುಲಕ್ಕೆ ಆಗಿರುವ ಅವಮಾನ. ಹೆಂಡಂದಿರು ಮತ್ತು ತಮ್ಮಂದಿರೊಡಗೂಡಿದ ದುರ್ಯೋಧನನು ಸೆರೆಹಿಡಿಯಲ್ಪಟ್ಟಿದ್ದಾನೆ. ಭರತಕುಲದಲ್ಲಿ ಹುಟ್ಟಿದ ಶ್ರೇಷ್ಠರೇ, ನಿಮ್ಮ ಕುಲವನ್ನು ಬಿಡಿಸಿ’ ಎಂದು ಕೇಳಿಕೊಂಡರು.  

 

ಇತ್ಯುಕ್ತ ಊಚೇ ಭೀಮಸೇನೋSಗ್ರಜಂ ಸ್ವಂ ಜಾನೇ ರಾಜನ್ ಯಾದೃಶೋSಯಂ ವಿಮರ್ದ್ದಃ ।

ಐಶ್ವರ್ಯ್ಯಂ ಸ್ವಂ ದರ್ಶಯನ್ ನಃ ಸಮಾಗಾದ್ ದುರ್ಯ್ಯೋಧನಸ್ತೇಜಸೋ ಭಙ್ಗಮಿಚ್ಛನ್ ॥೨೨.೪೧೬॥

 

 ಈರೀತಿಯಾಗಿ ಹೇಳಲ್ಪಟ್ಟಾಗ  ಭೀಮಸೇನನು ತನ್ನ ಅಣ್ಣನನ್ನು ಕುರಿತು:  ರಾಜನೇ, ಈ ಯುದ್ಧಕ್ಕೆ ಕಾರಣ  ಏನೆಂದು ನಾನು ತಿಳಿದಿದ್ದೇನೆ. ತನ್ನ ಸಿರಿವಂತಿಕೆಯನ್ನು ತೋರಿಸುತ್ತಾ, ನಮ್ಮ ತೇಜಸ್ಸಿನ ಭಂಗವನ್ನು ಮಾಡಲು ಇಚ್ಛಿಸಿ ದುರ್ಯೋಧನನು ಬಂದಿರುವನು.

 

ವಿಜ್ಞಾಯ ತೇಷಾಂ ಮನ್ತ್ರಿತಂ ವಜ್ರಬಾಹುರೇತಚ್ಚಕ್ರೇ ನಾತ್ರ ನಃ ಕಾರ್ಯ್ಯಹಾನಿಃ ।

ದಿವ್ಯಂ ಜ್ಞಾನಂ ಸ್ವಾತ್ಮನೋ ದರ್ಶಯನ್ ಸ ಏತಾವದುಕ್ತ್ವಾ ವಿರರಾಮ ಭೀಮಃ ॥೨೨.೪೧೭॥

 

ಈ ದುರ್ಯೋಧನಾದಿಗಳ ಕೆಟ್ಟ ಆಲೋಚನೆಯನ್ನು ತಿಳಿದು ಇಂದ್ರನು ಈರೀತಿಯಾದ ಸನ್ನಿವೇಶವನ್ನು ನಿರ್ಮಾಣ ಮಾಡಿರುವನು. ಈ ವಿಚಾರದಲ್ಲಿ ನಮ್ಮ ಯಾವುದೇ ಕಾರ್ಯಹಾನಿಯಾಗಿಲ್ಲ (‘ನಾವು ಮಾಡಬೇಕಾದದ್ದನ್ನು ಅವರು ಮಾಡಿದರು ಅಷ್ಟೇ’ ಎನ್ನುವ ಧ್ವನಿ). ಈರೀತಿಯಾಗಿ ತನ್ನ ದಿವ್ಯಜ್ಞಾನವನ್ನು ತೋರಿಸುವವನಾಗಿ ಭೀಮಸೇನನು ವಿರಮಿಸಿದನು.

[ಮಹಾಭಾರತದಲ್ಲಿ(ವನಪರ್ವ ೨೪೩.೧೭) ಈ ವಿವರ ಕಾಣಸಿಗುತ್ತದೆ: ‘ಅಸ್ಮಾಭಿರ್ಯದನುಷ್ಠೇಯಂ ಗನ್ಧರ್ವೈಸ್ತದನುಷ್ಠಿತಮ್’]

 

ಏಕಾಹಯಜ್ಞೇ ದೀಕ್ಷಿತೇನೈವ ರಾಜ್ಞಾ ಸಮ್ಪ್ರೇಷಿತೋ ಭೀಮಸೇನೋSರ್ಜ್ಜುನಶ್ಚ ।

ಸಮಾದ್ರೇಯೌ ಚಿತ್ರಸೇನಂ ರಣೇ ತೌ ವಿಜಿತ್ಯ ದುರ್ಯ್ಯೋಧನಮಾಶ್ವಮುಞ್ಚತಾಮ್ ॥೨೨.೪೧೮॥

 

ಒಂದು ದಿವಸದ ಯಜ್ಞದಲ್ಲಿ ದೀಕ್ಷಿತನಾಗಿರುವ ಯುಧಿಷ್ಠಿರನಿಂದ ಕಳುಹಿಸಲ್ಪಟ್ಟ ಭೀಮಸೇನ, ಅರ್ಜುನ ಮತ್ತು ನಕುಲ ಸಹದೇವರು ಯುದ್ಧದಲ್ಲಿ ಚಿತ್ರಸೇನನನ್ನು ಎದುರಿಸಿದರು. ಭೀಮಾರ್ಜುನರು ಚಿತ್ರಸೇನನನ್ನು ಗೆದ್ದು ದುರ್ಯೋಧನನನ್ನು ಬಿಡಿಸಿದರು.

[‘ಸ್ವಯಮೇವ ಪ್ರಧಾವೇಯಂ ಯದಿ ನ ಸ್ಯಾದ್ ವೃಕೋದರ । ವಿತತೋ ಮೇ ಕ್ರತುರ್ವೀರ ನಹಿ ಮೇSತ್ರ ವಿಚಾರಣಾ  ಎಂದು ಮಹಾಭಾರತದಲ್ಲಿ(ವನಪರ್ವ ೨೪೪.೩೧) ಈ ಕುರಿತು ಹೇಳಿರುವುದನ್ನು ನಾವು ಕಾಣಬಹುದು]

 

ಸ ಚಿತ್ರಸೇನೋ ವಾಸವೋಕ್ತಂ ಚ ಸರ್ವಂ ಕುಮನ್ತ್ರಿತಂ ಧಾರ್ತ್ತರಾಷ್ಟ್ರಸ್ಯ ಚಾSಹ ।

ಪಾರ್ತ್ಥಸ್ಯ ಭೀಮಸ್ಯ ಚ ತನ್ನಿಶಮ್ಯ ಸುಬ್ರೀಳಿತೋ ಧೃತರಾಷ್ಟ್ರಾತ್ಮಜೋSಭೂತ್ ॥೨೨.೪೧೯॥

 

ಆಗ ಚಿತ್ರಸೇನನು ಇಂದ್ರಹೇಳಿದ ಎಲ್ಲವನ್ನೂ, ದುರ್ಯೋಧನನ ಕೆಟ್ಟ ಆಲೋಚನೆಗಳನ್ನೂ ಭೀಮಾರ್ಜುನರಿಗೆ  ಹೇಳಿದನು. ಅದನ್ನು ಕೇಳಿ ದುರ್ಯೋಧನನು ಅತ್ಯಂತ ಲಜ್ಜಾಯುಕ್ತನಾದನು.  

 

ಸಮಾಪ್ಯ ಯಜ್ಞಂ ಚ ತತೋSಭಿಯಾತಂ ಸರ್ವೇ ಪ್ರಾಪುರ್ದ್ದರ್ಮ್ಮರಾಜಂ ಸ ಚಾSಶು ।

ಸಮ್ಪೂಜ್ಯ ತೂತ್ಸೃಜ್ಯ ಚ ಚಿತ್ರಸೇನಮೂಚೇ ಗಾನ್ಧಾರೇ ನ ಪುನಃ ಕಾರ್ಯ್ಯಮೀದೃಕ್  ॥೨೨.೪೨೦॥

 

ತದನಂತರ ಯಜ್ಞವನ್ನು ಮುಗಿಸಿ ಬರುತ್ತಿರುವ ಧರ್ಮರಾಜನನ್ನು ಎಲ್ಲರೂ ಹೊಂದಿದರು. ಧರ್ಮರಾಜನಾದರೋ, ಚಿತ್ರಸೇನನನ್ನು ಸತ್ಕರಿಸಿ, ಬೀಳ್ಕೊಟ್ಟು, ದುರ್ಯೋಧನನಿಗೆ- ‘ಗಾಂಧಾರಿಯ ಮಗನೇ, ಈರೀತಿಯಾಗಿರುವ ಕೆಲಸವೂ ಮತ್ತೆಮತ್ತೆ ಮಾಡಲು ಯೋಗ್ಯವಲ್ಲ ಎಂದು ಹೇಳಿದನು.

[ಮಾ ಸ್ಮ ತಾತ ಪುನಃ ಕಾರ್ಶೀರೀದೃಶಂ ಸಾಹಸಂ ಕ್ವಚಿತ್ । ನಹಿ ಸಾಹಸಕರ್ತಾರಃ ಸುಖಮೇಧನ್ತಿ ಭಾರತ ‘ದುಡುಕಿ ಇಂತಹ ಕೆಲಸವನ್ನು ಮಾಡಬೇಡ’ ಎಂದು ಯುಧಿಷ್ಠಿರ ದುರ್ಯೋಧನನಿಗೆ ಹಿತವಚನವನ್ನು ಹೇಳಿರುವುದರ ವಿವರವನ್ನು ನಾವು ಮಹಾಭಾರತದಲ್ಲಿ(೨೪೭.೨೭) ಕಾಣಬಹುದು].

No comments:

Post a Comment