ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 12, 2022

Mahabharata Tatparya Nirnaya Kannada 22-421-432

 

ಸ ಪಾಣ್ಡವೈರ್ಮ್ಮೋಚಿತಃ ಸಾನುಜಶ್ಚ ಸಭಾರ್ಯ್ಯಕಃ ಕಿಞ್ಚಿದತೋSಪಗಮ್ಯ ।

ಸಮ್ಮೇಳನಾಯೋಪವಿಷ್ಟಶ್ಚ ತತ್ರ  ಸುಬ್ರೀಳಿತಃ ಸೂತಪುತ್ರಂ ದದರ್ಶ ॥೨೨.೪೨೧॥

 

ಪಾಂಡವರಿಂದ ಬೀಳ್ಕೊಟ್ಟವನಾದ, ಅತ್ಯಂತ ಅವಮಾನಿತನಾದ ದುರ್ಯೋಧನನು, ತನ್ನ ತಮ್ಮಂದಿರು ಹಾಗೂ ಪತ್ನಿಯರೊಂದಿಗೆ ದ್ವೈತವನದಿಂದ  ಸ್ವಲ್ಪ ಆಚೆ ತೆರಳಿ, ಆ ಮಾರ್ಗದಲ್ಲೇ ಓಡಿಹೋದ ತನ್ನವರೆಲ್ಲರೂ ಸೇರಲೆಂದು ಅಲ್ಲೇ ಕುಳಿತನು. ಅಲ್ಲಿ ಸೂತಪುತ್ರ ಕರ್ಣನನ್ನು ಕಂಡನು.

 

ಸ ಚಾSಹ ದಿಷ್ಟ್ಯಾ ಜಯಸಿ ರಾಜನ್ನಿತಿ ಸುಯೋಧನಮ್ ।

ಬ್ರೀಳಿತೋ ನೇತಿ ತಂ ಚೋಕ್ತ್ವಾ ಯಥಾವೃತ್ತಂ ಸುಯೋಧನಃ  ॥೨೨.೪೨೨॥

 

ಆಗ ಕರ್ಣನು ದುರ್ಯೋಧನನನ್ನು ಕುರಿತು- ‘ರಾಜನೇ, ದೇವರ ದಯದಿಂದ ಗಂಧರ್ವರನ್ನು ಗೆದ್ದಿದ್ದೀಯ’ ಎಂದು ಹೇಳಿದ.  ಆಗ ಬಹಳ ನಾಚಿಕೊಂಡ ದುರ್ಯೋಧನನು ‘ಇಲ್ಲಾ’ ಎಂದು ಹೇಳಿ, ನಡೆದ ವಿಷಯವನ್ನು ಯಥಾವತ್ತಾಗಿ ಕರ್ಣನಿಗೆ ವಿವರಿಸಿದನು.

 

ಉಕ್ತ್ವಾ ಪ್ರಾಯೋಪವೇಶಂ ಚ ಚಕ್ರೇ ತತ್ರ ಸುದುಃಖಿತಃ ।

ಕರ್ಣ್ಣದುಃಶಾಸನಾಭ್ಯಾಂ ಚ ಸೌಬಲೇನ ಚ ದೇವಿನಾ ॥೨೨.೪೨೩॥

 

ಅನ್ಯೈಶ್ಚಯಾಚ್ಯಮಾನೋSಪಿ ನೈವೋತ್ತಸ್ಥೌ ಸಯೋಧನಃ ।

ತತೋ ನಿಶಾಯಾಂ ಪ್ರಾಪ್ತಾಯಾಂ ಸ್ವಪಕ್ಷೇ ಪ್ರವಿಷೀದತಿ ॥೨೨.೪೨೪॥

 

ಮನ್ತ್ರಯಿತ್ವಾSಸುರೈಃ ಕೃತ್ಯಾ ನಿರ್ಮ್ಮಿತಾ ಹೋಮಕರ್ಮ್ಮಣಾ ।

ಶುಕ್ರೇಣೋತ್ಪಾದಿತಾ ಕೃತ್ಯಾ ಸಾ ಪ್ರಸುಪ್ತೇಷು ಮನ್ತ್ರಿಷು ॥೨೨.೪೨೫॥

 

 

ಧಾರ್ತ್ತರಾಷ್ಟ್ರಂ ಸಮಾದಾಯ ಯಯೌ ಪಾತಾಳಮಾಶು ಚ ।

ಅಥ ಸಮ್ಬೋಧಯಾಮಾಸುರ್ದ್ದೈತ್ಯಾ ದುರ್ಯ್ಯೋಧನಂ ನೃಪಮ್ ॥೨೨.೪೨೬॥

 

ಎಲ್ಲವನ್ನೂ ಕರ್ಣನಿಗೆ ಹೇಳಿ, ಬಹಳ ದುಃಖಿತನಾದ ದುರ್ಯೋಧನನು ಆಮರಣಾಂತ ಉಪವಾಸವ್ರತಕ್ಕೆ ಕುಳಿತನು. ಕರ್ಣ, ದುಃಶ್ಯಾಸನ, ಜೂಜುಕೋರ ಶಕುನಿ, ಉಳಿದವರಿಂದಲೂ ಬೇಡಲ್ಪಟ್ಟರೂ ಕೂಡಾ ದುರ್ಯೋಧನ ಏಳಲಿಲ್ಲ.  

ತದನಂತರ ರಾತ್ರಿಯಾಗಲು, ದೈತ್ಯಪಕ್ಷವು ಕಳೆಗುಂದುತ್ತಿರುವುದನ್ನು ನೋಡಿ, ಅಸುರರು ಏನುಮಾಡವುದೆಂದು ಮಂತ್ರಾಲೋಚನೆಮಾಡಿ, ಹೊಮಕರ್ಮದಿಂದ ಕೃತ್ಯವನ್ನು ಎಬ್ಬಿಸಿದರು. ಶುಕ್ರಾಚಾರ್ಯರಿಂದ ಉತ್ಪಾದಿಸಲ್ಪಟ್ಟ ಆ ಕೃತ್ಯವು ಎಲ್ಲರೂ ಮಲಗಿರಲು ದುರ್ಯೋಧನನನ್ನು ಎತ್ತಿಕೊಂಡು ಪಾತಾಳಕ್ಕೆ ತೆರಳಿತು. ಅಲ್ಲಿ ಎಲ್ಲಾ ದೈತ್ಯರು ದುರ್ಯೋಧನನನ್ನು ಕುರಿತು ಮಾತನಾಡಿದರು-

[ಮಹಾಭಾರತದಲ್ಲಿ(ವನಪರ್ವ ೨೫೨.೨೯) ಈ ವಿವರ ಕಾಣಸಿಗುತ್ತದೆ: ‘ಸಮಾದಾಯಚ ರಾಜಾನಂ ಪ್ರವಿವೇಶ ರಸಾತಳಮ್’ ]

 

ತ್ವಂ ದಿವ್ಯಃ ಪುರುಷೋ ವೀರಃ ಸೃಷ್ಟೋSಸ್ಮಾಭಿಃ ಪ್ರತೋಷಿತಾತ್ ।

ತಪಸಾ ಶಙ್ಕರಾದ್ ವಜ್ರಕಾಯೋSವದ್ಧ್ಯಶ್ಚ ಸರ್ವದಾ ॥೨೨.೪೨೭॥

 

ದುರ್ಯೋಧನನೇ, ನೀನು ಅಲೌಕಿಕ ಪುರುಷನೂ, ವೀರನೂ ಆಗಿದ್ದೀಯ. ನಮ್ಮಿಂದ ಸಂತೋಷಗೊಳಿಸಲ್ಪಟ್ಟ ಶಂಕರನಿಂದ ನೀನು ಸೃಷ್ಟಿಸಲ್ಪಟ್ಟಿದ್ದೀಯ.  ನಿನ್ನ ದೇಹ ವಜ್ರದಂತೆ ಗಟ್ಟಿಯಾಗಿದೆ. ನಿನ್ನನ್ನು ಕೊಲ್ಲಲು ಸಾಧ್ಯವಿಲ್ಲ.

 

ಅಸ್ಮಾಕಂ ಪಕ್ಷಭೂತಸ್ತ್ವಂ ದೇವಾನಾಂ ಚೈವ ಪಾಣ್ಡವಾಃ ।

ಇದಾನೀಂ ಸರ್ವದೇವಾನಾಂ ವರಾತ್ ತ್ವಂ ವಿಜಿತೋ ರಣೇ ॥೨೨.೪೨೮॥

 

ನೀನು ನಮ್ಮ ಪಕ್ಷದವನಾಗಿದ್ದೀಯ. ಪಾಂಡವರು ದೇವತೆಗಳ ಪಕ್ಷದವರು. ಈಗ ಎಲ್ಲಾ ದೇವತೆಗಳ ವರದಿಂದಾಗಿ ನೀನು ಯುದ್ಧದಲ್ಲಿ ಪರಾಜಿತನಾಗಿರುವೆ.

 

ವಯಂ ತಥಾ ಕರಿಷ್ಯಾಮೋ ಯಥಾ ಜ್ಯೇಷ್ಯಸಿ ಪಾಣ್ಡವಾನ್ ।

ಕೃಷ್ಣೇನ ನಿಹತಶ್ಚೈವ ನರಕಃ ಕರ್ಣ್ಣ ಆಸ್ಥಿತಃ ॥೨೨.೪೨೯॥

 

ಹೇಗೆ ನೀನು ಪಾಂಡವರನ್ನು ಗೆಲ್ಲುವಿಯೋ ಹಾಗೆ ನಾವು ಮಾಡುತ್ತೇವೆ. ಕೃಷ್ಣನಿಂದ ಹತನಾದ ನರಕಾಸುರನು ಕರ್ಣನಲ್ಲಿದ್ದಾನೆ.

[ಮಹಾಭಾರತದ ವನಪರ್ವದ ೧೫೩ನೇ ಅಧ್ಯಾಯದಲ್ಲಿ ಈ ಎಲ್ಲಾ ವಿವರಗಳನ್ನು ಕಾಣಬಹುದು. ‘ ತ್ವಮಸ್ಮಾಕಂ ಗತಿರ್ನಿತ್ಯಂ ದೇವತಾನಾಂ ಚ ಪಾಂಡವಾಃ(೨೫)’ ‘ ಹತಸ್ಯ ನರಕಸ್ಯಾSತ್ಮಾ ಕರ್ಣಮೂರ್ತಿಮುಪಾಶ್ರಿತಃ(೨೦) ]

 

ಸ ಚ ಕೃಷ್ಣಾರ್ಜ್ಜುನಾಭಾವಂ ಕರಿಷ್ಯತಿ ನ ಸಂಶಯಃ ।

ಭೀಷ್ಮಾದೀಂಶ್ಚ ವಯಂ ಸರ್ವಾನಾವಿಶಾಮ ಜಯಾಯ ತೇ ॥೨೨.೪೩೦॥

 

ಅವನು ಕೃಷ್ಣಾರ್ಜುನರನ್ನು ಇಲ್ಲದಂತೆ ಮಾಡುತ್ತಾನೆ, ಇದರಲ್ಲಿ ಸಂಶಯಬೇಡ. ನಿನ್ನ ಜಯಕ್ಕಾಗಿ ಭೀಷ್ಮ ಮೊದಲಾದವರನ್ನೂ ಕೂಡಾ ನಾವು ಪ್ರವೇಶಮಾಡುತ್ತೇವೆ.

 

ತಪಸಾ ವರ್ದ್ಧಯಿಷ್ಯಾಮಸ್ತ್ವಾಂ ಕರ್ಣ್ಣಾದೀಂಶ್ಚ ಸರ್ವಶಃ ।

ತಸ್ಮಾದ್ ಗತ್ವಾ ಪಾಲಯಸ್ವ ರಾಜ್ಯಂ ರಾಜನ್ನಪೇತಭೀಃ ॥೨೨.೪೩೧॥

 

ನಿನ್ನನ್ನು, ಕರ್ಣನೇ ಮೊದಲಾದವರನ್ನು ನಾವು ತಪಸ್ಸಿನಿಂದ ಬಲಿಷ್ಠರಾಗುವಂತೆ ನೋಡಿಕೊಳ್ಳುತ್ತೇವೆ. ಆ ಕಾರಣದಿಂದ ಈಗ ಅಳುಕದೇ ಹಿಂತಿರುಗಿ ಧೈರ್ಯದಿಂದ ರಾಜ್ಯಪಾಲನೆ ಮಾಡು.

 

ಇದಂ ಕಸ್ಯಾಪಿ ನಾSಖ್ಯೇಯಂ ಸುಗುಪ್ತಂ ಭೂತಿವರ್ದ್ಧನಮ್ ।

ಇತ್ಯುಕ್ತ್ವಾ ಕೃತ್ಯಯಾ ಭೂಯಃ ಸ್ವಸ್ಥಾನೇ ಸ್ಥಾಪಿತೋ ನೃಪಃ ॥೨೨.೪೩೨॥

 

ಇದು ಅತ್ಯಂತ ಗೋಪ್ಯವಾದದ್ದು ಮತ್ತು ಶ್ರೇಯೋಭಿವೃದ್ಧಿಯನ್ನು ಮಾಡತಕ್ಕದ್ದು. ಹಾಗಾಗಿ ಇದನ್ನು ಯಾರಿಗೂ ಹೇಳಬಾರದು. ಈರೀತಿಯಾಗಿ ದೈತ್ಯರಿಂದ ಹೇಳಲ್ಪಟ್ಟ ರಾಜ ದುರ್ಯೋಧನನು  ಕೃತ್ಯಾದೇವತೆಯಿಂದ ಮತ್ತೆ ಸ್ವಸ್ಥಾನದಲ್ಲಿ ಇಡಲ್ಪಟ್ಟ.

No comments:

Post a Comment