ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 13, 2022

Mahabharata Tatparya Nirnaya Kannada 22-438-450

 

ಸಕುಣ್ಡಲಮ್ ಸಕವಚಮವದ್ಧ್ಯಂ ಸೂರ್ಯ್ಯನನ್ದನಮ್ ।

ಜ್ಞಾತ್ವೇನ್ದ್ರ ಉಭಯಂ ತಸ್ಮಾದೈಚ್ಛದಾದಾತುಮುತ್ತಮಮ್ ॥೨೨.೪೩೮॥

 

ಇತ್ತ, ಸಹಜವಾಗಿರುವ ಕವಚ-ಕುಂಡಲಗಳಿಂದ ಸಹಿತನಾಗಿರುವ ತನಕ ಸೂರ್ಯಪುತ್ರ ಕರ್ಣ ಅವಧ್ಯ ಎಂದು ತಿಳಿದ ಇಂದ್ರನು, ಕರ್ಣನ ಕವಚ-ಕುಂಡಲವನ್ನು ತೆಗೆದುಕೊಳ್ಳಲು ಬಯಸಿದನು.

 

ತದ್ ವಿಜ್ಞಾಯ ರವಿಃ ಕರ್ಣ್ಣಂ ಸ್ವಪ್ನ ಉಕ್ತ್ವಾ ನ್ಯವಾರಯತ್ 

ಸರ್ವಥಾ ದಾಸ್ಯ ಇತ್ಯುಕ್ತೇ ಪ್ರಾಹಾSದೇಯಂ ವರಾಯುಧಮ್ ॥೨೨.೪೩೯॥

 

ಇಂದ್ರನ ಈ ಸಂಕಲ್ಪವನ್ನು ತಿಳಿದ ಸೂರ್ಯನು ಕನಸಿನಲ್ಲಿ ಕರ್ಣನಿಗೆ ವಿಷಯವನ್ನು ಹೇಳಿ ತಡೆದನು. ‘ಖಂಡಿತಾ ಕೊಟ್ಟೇ ಕೊಡುತ್ತೇನೆ’ ಎಂದು ಕರ್ಣ ಹೇಳಿದಾಗ, ‘ಉತ್ಕೃಷ್ಟವಾದ ಅಸ್ತ್ರವನ್ನು ನೀನು ಇಂದ್ರನಿಂದ ವರವಾಗಿ ತೆಗೆದುಕೊಳ್ಳಬೇಕು’ ಎಂದು ಸೂರ್ಯನು ಮಗನಿಗೆ ಹೇಳಿದನು.

 

ದದೌ ಚೋತ್ಕೃತ್ಯ ಕವಚಂ ಕುಣ್ಡಲೇ ಚ ಶಚೀಪತೇಃ ।

ಅಮೋಘಾಂ ಶಕ್ತಿಮಾದಾಯ ಜ್ಞಾತ್ವೈವ ದ್ವಿಜರೂಪಿಣಮ್ ॥೨೨.೪೪೦॥

 

ಬ್ರಾಹ್ಮಣವೇಷ ಧರಿಸಿ ಬಂದವನು ಇಂದ್ರ ಎಂದು ತಿಳಿದೇ ಕರ್ಣ ಅಮೋಘವಾದ, ಎಂದೂ ವ್ಯರ್ಥವಾಗದ  ಶಕ್ತ್ಯಾಯುಧವನ್ನು ಅವನಿಂದ ಪಡೆದು ತನ್ನ ಕುಂಡಲ ಮತ್ತು ಕವಚವನ್ನು ತನ್ನ ದೇಹದಿಂದ ಕಿತ್ತು ಇಂದ್ರನಿಗಿತ್ತ.

 

ಋತೇSರ್ಜ್ಜುನಾದೇಕಮೇವ ವಧಿಷ್ಯಸ್ಯನಯೇತಿ ಸಃ ।

ದತ್ವಾ ಶಕ್ತಿಂ ಯಯೌ ಶಕ್ರಃ ಸಾರ್ದ್ದಂ ಕವಚಕುಣ್ಡಲೈಃ ॥೨೨.೪೪೧॥

 

ಶಕ್ತ್ಯಾಯುಧವನ್ನು ಕರ್ಣನಿಗೆ ನೀಡಿದ ಇಂದ್ರನು, ‘ಈ ಆಯುಧದಿಂದ ನೀನು ಅರ್ಜುನನನ್ನು ಬಿಟ್ಟು, ಕೇವಲ ಒಬ್ಬನೇ ವೀರನನ್ನು ಸಂಹಾರಮಾಡುವಿ’ ಎಂದು ಹೇಳಿದ. ಹೀಗೆ ಹೇಳಿ, ಕವಚ-ಕುಂಡಲದೊಂದಿಗೆ ಇಂದ್ರ ಹಿಂತಿರುಗಿದ.

  

ಪಾರ್ತ್ಥ ವಿಮುಚ್ಯೈವ ಸುಯೋಧನಂ ತಂ ವನೇ ವಸನ್ತೋ ಮುದಿತಾಃ ಸದೈವ ।

ಸಹಾರಣೀಭಾಣ್ಡಮಥೋ ಮೃಗೇಣ ಹೃತಂ ದ್ವಿಜಸ್ಯಾSಶು ನಿಶಮ್ಯ ಚಾನ್ವಯುಃ ॥೨೨.೪೪೨॥

 

ಇತ್ತ ದುರ್ಯೋಧನನನ್ನು ಗಂಧರ್ವರಿಂದ ಬಿಡಿಸಿದ ನಂತರ ಪಾಂಡವರು ಕಾಡಿನಲ್ಲಿ ವಾಸಮಾಡುತ್ತಾ, ಅತ್ಯಂತ ಸಂತಸದಿಂದಿದ್ದರು. ಹೀಗಿರುವಾಗ ಒಮ್ಮೆ ಬ್ರಾಹ್ಮಣನೊಬ್ಬನ ಅಗ್ನಿಮಥನ ಕಾಷ್ಠಗಳಿಂದ ಕೂಡಿದ ಪಾತ್ರೆಯನ್ನು ಜಿಂಕೆಯೊಂದು ಅಪಹರಿಸಿತು ಎಂದು ಕೇಳಿದ ಪಾಂಡವರು ಆ ಜಿಂಕೆಯನ್ನು ಹಿಂಬಾಲಿಸಿದರು.

 

ತಸ್ಮಿನ್ನದೃಶ್ಯೇ ತೃಷಿತಾ ಏಕೈಕ ಉದಕಾರ್ತ್ಥಿನಃ ।

ಯಯುರ್ಯ್ಯುಧಿಷ್ಠಿರಮೃತೇ ಸುಪ್ತಾಸ್ತೇ ಧರ್ಮ್ಮಮಾಯಯಾ ॥೨೨.೪೪೩॥

 

ಅದೃಶ್ಯೇನೈವ ಧರ್ಮ್ಮೇಣ ವಾರಿತಾ ವಾರಿಪಾಯಿನಃ ।

ಕ್ಷತ್ರಧರ್ಮ್ಮಸ್ಯ ರಕ್ಷಾರ್ತ್ಥಂ ನ ತತ್ಪ್ರಶ್ನಾನ್ ವಿದಾಂ ವರಾಃ ॥೨೨.೪೪೪॥

 

ವ್ಯಾಚಕ್ರುಃ ಶಕ್ತಿಮನ್ತೋSಪಿ ಪಾನೀಯಾರ್ತ್ಥಮರಿನ್ದಮಾಃ ।

ನ ವಿಪ್ರಾಣಾಂ ಚ ಧರ್ಮ್ಮೋSಯಂ ವಿದ್ಯಾಯಾ ಉಪಜೀವನಮ್ ॥೨೨.೪೪೫॥

 

ಕ್ಷತ್ರಿಯಾಣಾಂ ತು ಕಿಮುತ ಪ್ರಸಭಂ ತೇನ ತೇ ಪಪುಃ ।

ದೇವಾ ಅಪಿ ಮನುಷ್ಯೇಷು ಜಾತಾಃ ಸುಬಲಿನೋSಪಿ ಹಿ ॥೨೨.೪೪೬॥

 

ಮಾನುಷೇಣೈವ ಭಾವೇನ ಯುಕ್ತಾಃ ಸ್ಯುಃ ಕೇಶವಾದೃತೇ ।

ಕಾರ್ಯ್ಯೇಷ್ವೇಷಾಂ ಕ್ರಮೇಣೈವ ವ್ಯಕ್ತಿಮಾಯಾನ್ತಿ  ಸದ್ಗುಣಾಃ ॥೨೨.೪೪೭॥

 

ಆ ಜಿಂಕೆ ಕಾಣದಾಗಲು, ಬಾಯಾರಿದವರಾಗಿ, ಯುಧಿಷ್ಠಿರನನ್ನು ಹೊರತುಪಡಿಸಿ ಇತರರು ಪ್ರತ್ಯೇಕ ಪ್ರತ್ಯೇಕವಾಗಿ ನೀರನ್ನು ಹುಡುಕಿಕೊಂಡು ತೆರಳಿದರು. ಬಕರೂಪಿಯಾಗಿದ್ದು, ಯಾರಿಗೂ ಕಾಣದ ಯಮಧರ್ಮನಿಂದ ತಡೆಯಲ್ಪಟ್ಟರೂ(ನನ್ನ ಪ್ರಶ್ನೆಗೆ ಉತ್ತರ ಕೊಟ್ಟರೆ  ನೀರು ಕುಡಿಯಬಹುದು, ಇಲ್ಲಾ ಎಂದರೆ ನೀರು ಮುಟ್ಟಬಾರದು ಎಂದು ತಡೆಯಲ್ಪಟ್ಟರೂ), ನೀರು ಕುಡಿದವರಾಗಿ, ಯಮಧರ್ಮನ ಶಕ್ತಿಯಿಂದ ಅವರೆಲ್ಲರೂ ನಿದ್ರಾವಶರಾದರು. ಹೀಗೆ ಬಿದ್ದ ನಾಲ್ಕೂ ಜನರು ಅತ್ಯಂತ ಜ್ಞಾನಿಗಳಾಗಿದ್ದರೂ, ಕ್ಷತ್ರಧರ್ಮರಕ್ಷಣೆ ಮಾಡಲೋಸುಗ(ವಿದ್ಯೆಯಿಂದ ಕ್ಷತ್ರಿಯರು ಬದುಕಬಾರದು ಎನ್ನುವ ಧರ್ಮ ನಿಭಾಯಿಸುವವರಾಗಿ), ಯಮಧರ್ಮ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿಯುಳ್ಳವರಾಗಿದ್ದರೂ  ಕೂಡಾ ನೀರಿಗಾಗಿ ವ್ಯಾಖ್ಯಾನ ಮಾಡಲಿಲ್ಲ(ಉತ್ತರ ಕೊಡಲಿಲ್ಲ).

ಬ್ರಾಹ್ಮಣರಿಗೇ ವಿದ್ಯೋಪಜೀವನ ಧರ್ಮವಲ್ಲ ಎನ್ನುತ್ತಾರೆ. (ಶಾಸ್ತ್ರದಲ್ಲಿ ಬ್ರಾಹ್ಮಣರಿಗೆ ಶಿಷ್ಯರಿಂದ ಬಂದದ್ದನ್ನು, ಪೌರೋಹಿತ್ಯದಿಂದ ಬಂದದ್ದನ್ನು ಅನುಭವಿಸಬಹುದು ಎಂದು ಹೇಳಿದ್ದರೂ ಕೂಡಾ, ಅದನ್ನು ಮಾಡದೆಯೇ ಬದುಕಿದರೆ ಇನ್ನೂ ಒಳ್ಳೆಯದು ಎನ್ನುವ ಅಭಿಪ್ರಾಯವಿದೆ) ಹೀಗಿರುವಾಗ ಇನ್ನು ಕ್ಷತ್ರಿಯರಿಗೆ ವಿದ್ಯೋಪಜೀವನ ಒಳ್ಳೆಯದಲ್ಲ ಎಂದು ಹೇಳಬೇಕೇ? ಹೀಗಾಗಿ ಪ್ರಶ್ನೆಗೆ ಉತ್ತರ ಹೇಳದೇ, ಬಲವಂತವಾಗಿ ನೀರನ್ನು ಕುಡಿದರು.

ಭಗವಂತನನ್ನು ಹೊರತುಪಡಿಸಿ, ಇತರ ದೇವತೆಗಳು ಮನುಷ್ಯರಲ್ಲಿ ಹುಟ್ಟಿದಾಗ, ಅವರು ಅತ್ಯಂತ ಬಲಿಷ್ಠರಾದರೂ ಕೂಡಾ, ಸ್ವಲ್ಪ ಮನುಷ್ಯ ಭಾವ ಇದ್ದೇ ಇರುತ್ತದೆ. ಯಾವುದೋ ಒಂದು ದೊಡ್ಡ ಕೆಲಸವಾಗಬೇಕಾದಾಗ ಈ ಗುಣಗಳು ಕ್ರಮವಾಗಿ ಅಭಿವ್ಯಕ್ತಿ ಹೊಂದುತ್ತವೆ. ಅಲ್ಲಿಯ ತನಕ ಆಗುವುದಿಲ್ಲ.

 

ಅತೋ ಭೀಮಾರ್ಜ್ಜುನೌ ಧರ್ಮ್ಮಾದತ್ಯುತ್ತಮಬಲಾವಪಿ ।

ದೇವಮಾಯಾಂ ಸಮಾಶ್ರಿತ್ಯ ಧರ್ಮ್ಮೇಣ ಸ್ವಾಪಿತೌ ಕ್ಷಣಾತ್ ॥೨೨.೪೪೮॥

 

ಅದರಿಂದಾಗಿ ಯಮಧರ್ಮನಿಗಿಂತಲೂ ಅತ್ಯುತ್ತಮ ಬಲವುಳ್ಳ ಭೀಮಾರ್ಜುನರು ದೇವಮಾಯೆಯನ್ನು ಆಶ್ರಯಿಸಿ, ಯಮಧರ್ಮನಿಂದ ಮಲಗಿಸಲ್ಪಟ್ಟರು. (ಭೀಮಾರ್ಜುನರು ಮಾನುಷ್ಯ ಸ್ವಭಾವವನ್ನು ಹೊಂದಿದ್ದರೆ, ಯಮಧರ್ಮ ದೇವಮಾಯೆಯನ್ನು ಬಳಸಿದ).

 

ಮುಹೂರ್ತ್ತಮೇವ ಸ  ಮಾಯಾ ತಯೋರಾಚ್ಛಾದನಕ್ಷಮಾ ।

ತತಃ ಪ್ರಬುದ್ಧಯೋರ್ದ್ಧರ್ಮ್ಮೋ ನೈವ ಶಕ್ತಿಶತಾಂಶಭಾಕ್ ॥೨೨.೪೪೯॥

 

ಆ ಮಾಯೆ ಒಂದು ಮಹೂರ್ತ ಮಾತ್ರ ಭೀಮಾರ್ಜುನರು ಬಲವನ್ನು ಪ್ರಕಟಿಸದೇ ಇರುವಂತೆ ಮಾಡಲು ಸಮರ್ಥ. ಯಮಧರ್ಮನ ಬಲವು ಈ ದೇವಮಾಯೆಯಿಂದ ಪ್ರಬುದ್ಧರಾದ ಭೀಮಾರ್ಜುನರ ಬಲದ ನೂರನೇ ಒಂದು ಭಾಗವೂ ಅಲ್ಲವಷ್ಟೇ.

 

ಉಕ್ತಂ ಪಾದ್ಮಪುರಾಣೇ ಚ ತದೇತತ್ ಸರ್ವಮಞ್ಚಸಾ ।

ತಸ್ಮಾನ್ನಾಶಕ್ತಿರನಯೋಃ ಸಮ್ಭಾವ್ಯಾ ಭೀಮಪಾರ್ತ್ಥಯೋಃ ॥೨೨.೪೫೦॥

 

ಈ ಪ್ರಮೇಯಗಳೆಲ್ಲವನ್ನೂ ಪಾದ್ಮಪುರಾಣದಲ್ಲಿ ಹೇಳಲಾಗಿದೆ. ಆ ಕಾರಣದಿಂದ ಇಲ್ಲಿ ಭೀಮಾರ್ಜುನರಿಗೆ ಅಸಾಮರ್ಥ್ಯವನ್ನು ತಿಳಿಯಕೂಡದು.

No comments:

Post a Comment