ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 19, 2023

Mahabharata Tatparya Nirnaya Kannada 26-59-67

 

ವಿಜಿತ್ಯ ಹಾರ್ದ್ದಿಕ್ಯಮಥಾಪ್ರಯತ್ನತಃ  ಸ ಇನ್ದ್ರಸೂನುಃ ಪ್ರವಿವೇಶ ತದ್ ಬಲಮ್ ।

ವಿಲೋಳಯಾಮಾಸ ಚ ಸಾಯಕೋತ್ತಮೈರ್ಯ್ಯಥಾ ಗಜೇನ್ದ್ರೋ ನಳಿನೀಂ ಬಲೋದ್ಧತಃ ॥೨೬.೫೯॥

 

ದ್ರೋಣರನ್ನು ದಾಟಿದಮೇಲೆ ಎದುರಾದ ಕೃತವರ್ಮನನ್ನು ಅರ್ಜುನನು ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ಆ ಕೌರವಸೇನೆಯನ್ನು ಪ್ರವೇಶಿಸಿ, ಉತ್ಕೃಷ್ಟವಾದ ಬಾಣಗಳಿಂದ ಸೇನೆಯನ್ನು ಉಲ್ಲೋಲಕಲ್ಲೋಲ  ಮಾಡಿದ. ಹೇಗೆ ಮದ್ದಾನೆ ಪದ್ಮಗಳುಳ್ಳ ಸರೋವರವನ್ನು ಉಲ್ಲೋಲಕಲ್ಲೋಲ ಮಾಡುತ್ತದೋ ಹಾಗೆ.

 

ಸ ಉಚ್ಚಕಾಶೇSತಿರಥೋ ರಥೋತ್ತಮೇ ಸವಾಸುದೇವೋ ಹರಿಣಾ ಯಥೇನ್ದ್ರಃ ।

ಚಕರ್ತ್ತ ಚೋಗ್ರೋ ದ್ವಿಷತಾಂ ಶಿರಾಂಸಿ ಶರೈಃ ಶರೀರಾನ್ತಕರೈಃ ಸಮನ್ತತಃ ॥೨೬.೬೦॥

 

ಹೇಗೆ ಇಂದ್ರನು ಉಪೇಂದ್ರನಿಂದ ಕೂಡಿದರೆ ಶೋಭಿಸಬೇಕೋ ಹಾಗೆ ಶ್ರೀಕೃಷ್ಣನಿಂದೊಡಗೂಡಿದ ಅರ್ಜುನ ರಥದಲ್ಲಿ ಶೋಭಿಸಿದ. ಶತ್ರುಭಯಂಕರನಾದ ಅರ್ಜುನನು  ಸಿಟ್ಟಿನಿಂದ ಶತ್ರುಗಳ ತಲೆಗಳನ್ನು ಎಲ್ಲೆಡೆಯಿಂದ ಕತ್ತರಿಸಿದನು.

 

ದೃಢಾಯುಮಚ್ಯುತಾಯುಂ ಚ ಹತ್ವಾ ವಿನ್ದಾನುವಿನ್ದಕೌ ।

ಶರಾಭ್ಯಾಂ ಪ್ರೇಷಯಾಮಾಸ ಯಮಾಯ ವಿಜಯೋ ಯುಧಿ ॥೨೬.೬೧॥

 

ಅರ್ಜುನನು ಯುದ್ಧದಲ್ಲಿ ಎರಡು ಬಾಣಗಳಿಂದ ದೃಢಾಯು ಅಚ್ಯುತಾಯುವನ್ನು ಸಂಹರಿಸಿ, ಪುನಃ ವಿನ್ದ-ಅನುವಿನ್ದರನ್ನು ಇನ್ನೆರಡು ಬಾಣಗಳಿಂದ ಯಮಲೋಕಕ್ಕೆ ಕಳುಹಿಸಿದನು.  

 

ಸುದಕ್ಷಿಣಂ ಚ ಕಾಮ್ಬೋಜಂ ನಿಹತ್ಯಾಮ್ಬಷ್ಠಮೇವ ಚ ।

ಶ್ರುತಾಯುಧಂ ನದೀಜಾತಂ ವರುಣಾದಾಸಸಾದ  ಹ ॥೨೬.೬೨॥

 

ಯಸ್ಯಾದಾದ್ ವರುಣೋ ದಿವ್ಯಾಮಮೋಘಾಂ ಮಹತೀಂ ಗದಾಮ್ ।

ಸ ತು ತೇನ ಶರೈಸ್ತೀಕ್ಷ್ಣೈರರ್ಪ್ಪಿತೋ ವಿರಥಂ ಕ್ಷಣಾತ್ ॥೨೬.೬೩॥

 

ಚಕಾರ ಪಾರ್ತ್ಥಸ್ಯ ರಥಮಾರುಹ್ಯಾರಿಧರಾಯ ತಾಮ್ ।

ಗದಾಂ ಚಿಕ್ಷೇಪ ಸಾ ತಸ್ಯ ವಾರುಣೇಃ ಶಿರ ಏವತು ॥೨೬.೬೪॥

 

ಬಿಭೇದ ಶತಧಾ ಶೀರ್ಣ್ಣಮಸ್ತಿಷ್ಕಃ ಸೋSಪತದ್ ಭುವಿ ।

ಅಯುದ್ಧ್ಯನ್ತಂ ಸ್ವಗದಯಾ ಯದಿ ತಾಡಯಸಿ ಸ್ವಯಮ್ ॥೨೬.೬೫॥

 

ತಯಾ ವಿಶೀರ್ಣ್ಣಮಸ್ತಿಷ್ಕೋ ಮರಿಷ್ಯಸಿ ನ ಸಂಶಯಃ ।

ಅಮೋಘಾ ಚಾನ್ಯಥಾ ಸೇಯಂ ಗದಾ ತವ ಭವಿಷ್ಯತಿ ॥೨೬.೬೬॥

 

ಇತ್ಯಬ್ರವೀತ್ ತಂ ವರುಣಃ ಪುರಾ ತೇನ ಸ ಕೇಶವೇ ।

ಅಯುದ್ಧ್ಯತಿ ಗದಾಕ್ಷೇಪಾತ್ ತಯಾ ಶೀರ್ಣ್ಣಶಿರಾ ಅಭೂತ್ ॥೨೬.೬೭॥

 

ಅರ್ಜುನನು ಕಾಮ್ಬೋಜದ  ಸುದಕ್ಷಿಣನನ್ನು ಹಾಗೂ ಅಮ್ಬಷ್ಠನನ್ನೂ ಕೂಡಾ ಸಂಹಾರಮಾಡಿ, ನಂತರ  ವರುಣನಿಂದ ನದಿಯಾಭಿಮಾನಿ ದೇವತೆಗೆ ಹುಟ್ಟಿದ ಶ್ರುತಾಯುಧ ಎನ್ನುವವನನ್ನು ಯುದ್ಧಕ್ಕೆಂದು ಎದುರುಗೊಂಡ.

ಯಾರಿಗೆ ವರುಣನು ಎಂದೂ ವ್ಯರ್ಥವಾಗದ ದೊಡ್ಡ ಅಲೌಕಿಕವಾದ ಗದೆಯನ್ನು ಕೊಟ್ಟಿದ್ದನೋ, ಅಂತಹ ಶ್ರುತಾಯುಧ ಕ್ಷಣದಲ್ಲಿ ಅರ್ಜುನನ ಚೂಪಾದ ಬಾಣಗಳಿಂದ ಗಾಯಗೊಂಡು ವಿರಥನಾದ.   

ವಿರಥನಾದ ಅವನು ಅರ್ಜುನನ ರಥವನ್ನೇರಿ, ಶ್ರೀಕೃಷ್ಣನಿಗೆ ಗದೆಯಿಂದ ಹೊಡೆದ. ಆಗ ಶ್ರುತಾಯುಧನ ತಲೆಯೇ ನೂರು ಚೂರಾಗಿ ಸಿಡಿದುಹೋಯಿತು. ಹೀಗೆ ಪುಡಿಯಾದ ತಲೆಯುಳ್ಳವನಾಗಿ ಅವನು ಭೂಮಿಯಲ್ಲಿ ಬಿದ್ದ.

(ಈರೀತಿ ಆಗಲು ಕಾರಣವೇನೆಂದು ಹೇಳುತ್ತಾರೆ-)

‘ಯುದ್ಧ ಮಾಡದವನನ್ನು ಒಂದುವೇಳೆ ನಿನ್ನ ಗದೆಯಿಂದ ನೀನು ಹೊಡೆದರೆ  ಆಗ ನೀನೇ ಒಡೆದ ತೆಲೆಯುಳ್ಳವನಾಗಿ ಸಾಯುತ್ತೀಯ, ಇದರಲ್ಲಿ ಸಂಶಯವಿಲ್ಲ. ಅನ್ಯತಾ ನಿನ್ನ ಗದೆಯು ವ್ಯರ್ಥವಾಗುವುದಿಲ್ಲ’ ಎಂದು  ವರುಣ ಹಿಂದೆ ಗದೆಯನ್ನು ಕೊಡುವಾಗಲೇ ಹೇಳಿದ್ದ. ಹೀಗಾಗಿ ಯುದ್ಧಮಾಡದಿರುತ್ತಿರುವ  ಕೃಷ್ಣನಲ್ಲಿ ಗದೆಯನ್ನು ಹೊಡೆದುದ್ದರಿಂದ ಶ್ರುತಾಯುಧ ತನ್ನ ತಲೆಯನ್ನೇ ಕಳೆದುಕೊಂಡ.

No comments:

Post a Comment