ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, February 17, 2023

Mahabharata Tatparya Nirnaya Kannada 26-36-48

 

ಪ್ರಾಗ್ಜ್ಯೋತಿಷೇ ನಿಹತೇSಥಾಗ್ರಹಾಚ್ಚ ಯುಧಿಷ್ಠಿರಸ್ಯಾತಿವಿಷಣ್ಣರೂಪಃ ।

ದುರ್ಯ್ಯೋಧನೋSಶ್ರಾವಯದ್ ದೀನವಾಕ್ಯಾನ್ಯತ್ರ ದ್ರೋಣಂ ಸೋSಪಿ ನೃಪಂ ಜಗಾದ ॥ ೨೬.೩೬ ॥

 

ಬಲಿಷ್ಠನಾದ ಭಗದತ್ತನು ಕೊಲ್ಲಲ್ಪಡುತ್ತಿರಲು, ಯುಧಿಷ್ಠಿರನ ಬಂಧನ ಸಾಧ್ಯವಾಗದೇ ಇದ್ದುದರಿಂದ ಅತ್ಯಂತ ವಿಷಾದಕ್ಕೆ ಒಳಗಾದ ದುರ್ಯೋಧನನು ರಾತ್ರಿ ದೀನ ವಾಕ್ಯಗಳನ್ನಾಡಿದನು. ಆಗ ದ್ರೋಣಾಚಾರ್ಯರು ಹೀಗೆ ಹೇಳಿದರು-

[ಮಹಾಭಾರತ: ‘ನೂನಂ ವಯಂ ವಧ್ಯಪಕ್ಷೇ ಭವತೋ ದ್ವಿಜಸತ್ತಮ । ತಥಾಹಿ ನಾಗ್ರಹೀಃ ಪ್ರಾಪ್ತಂ ಸಮೀಪೇSದ್ಯ ಯುಧಿಷ್ಠಿರಮ್’ ‘ಆಚಾರ್ಯರೇ, ನಾವು ನಿಮ್ಮ ಶತ್ರುಪಕ್ಷದಲ್ಲಿದ್ದೆವೋ ಅಥವಾ ನಮ್ಮ ಶತ್ರುಪಕ್ಷದಲ್ಲಿ ನೀವಿದ್ದೀರೋ ತಿಳಿಯುತ್ತಿಲ್ಲ. ಯುಧಿಷ್ಠಿರನು ಸಮೀಪದಲ್ಲೇ ಸಿಕ್ಕಿದ್ದರೂ ಕೂಡಾ ಅವನನ್ನು ನೀವು ಸೆರೆಹಿಡಿಯಲಿಲ್ಲ’ ಎನ್ನುತ್ತಾನೆ ದುರ್ಯೋಧನ (ದ್ರೋಣಪರ್ವ ೩೩.೭)]

 

ಪಾರ್ತ್ಥೇ ಗತೇ ಶ್ವೋ ನೃಪತಿಂ ಗ್ರಹೀಷ್ಯೇ ನಿಹನ್ಮಿ ವಾ ತತ್ಸದೃಶಂ ತದೀಯಮ್ ।

ಇತಿ ಪ್ರತಿಜ್ಞಾಂ ಸ ವಿಧಾಯ ಭೂಯಃ  ಪ್ರಾತರ್ಯ್ಯಯೌ ಯುದ್ಧಮಾಕಾಙ್ಕ್ಷಮಾಣಃ ॥ ೨೬.೩೭ ॥

 

‘ನಾಳೆ ಅರ್ಜುನ ಹೋಗುತ್ತಿರಲು ಯುಧಿಷ್ಠಿರನನ್ನು ಹಿಡಿದು ಕೊಡುತ್ತೇನೆ ಅಥವಾ ಅವನಿಗೆ ಸಮಾನನಾದ ಪಾಂಡವ ಪಕ್ಷದ ವೀರನನ್ನು ಕೊಲ್ಲುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ ದ್ರೋಣಾಚಾರ್ಯರು, ಮತ್ತೆ ಬೆಳಿಗ್ಗೆ ಯುದ್ಧವನ್ನು ಬಯಸಿ ತೆರಳಿದನು.

 

ಪದ್ಮವ್ಯೂಹಂ ವ್ಯೂಹ್ಯ ಪರೈರಭೇದ್ಯಂ ವರಾದ್ ವಿಷ್ಣೋಸ್ತಸ್ಯ ಮನ್ತ್ರಂ ಹ್ಯಜಪ್ತ್ವಾ।

ಪಾರ್ತ್ಥಾಶ್ಚ ತಂ ಪ್ರಾಪುರ್ಋತೇSರ್ಜ್ಜುನೇನ ಸಂಶಪ್ತಕೈರ್ಯ್ಯುಯುಧೇ ಸೋSಪಿ ವೀರಃ ॥ ೨೬.೩೮ ॥

 

ನಾರಾಯಣನ ವರದಿಂದ, ನಾರಾಯಣ ಮಂತ್ರವನ್ನು ಜಪಿಸದೇ ಭೇದಿಸಲಾಗದ ಪದ್ಮವ್ಯೂಹವನ್ನು ಯುದ್ಧದಲ್ಲಿ ಸ್ಥಾಪಿಸಿ ದ್ರೋಣಾಚಾರ್ಯರು ಯುದ್ಧವನ್ನಾರಂಭಿಸಿದರು. ಪಾಂಡವರಾದರೋ, ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿದ್ದ ಅರ್ಜುನನನ್ನು ಹೊರತು ವ್ಯೂಹದ ಬಳಿ ಬಂದರು.

[ಇಲ್ಲಿ ನಮಗೆ ಹಲವಾರು ಸಮಸ್ಯೆ ಪರಿಹಾರವಾಗುತ್ತದೆ. ಉತ್ತರದ ಪಾಠದಲ್ಲಿ ಅಭಿಮನ್ಯು ಚಕ್ರವ್ಯೂಹದೊಳಗೆ ಸಿಕ್ಕಿ ಸತ್ತ ಎಂದಿದ್ದಾರೆ. ಆದರೆ ಪ್ರಾಚೀನ ಪಾಠದ ಪ್ರಕಾರ ಅದು ಪದ್ಮವ್ಯೂಹ.  ಈಗ ನಾವು ಕೇಳುವ ಕಥೆಗಳಲ್ಲಿ - ಕೃಷ್ಣ ಸುಭದ್ರೆಗೆ ಚಕ್ರವ್ಯೂಹ ಭೇದಿಸುವ ವಿಧಾನವನ್ನು ಹೇಳುತ್ತಿದ್ದ, ಅಭಿಮನ್ಯು ಗರ್ಭದ ಒಳಗಡೆ ಕುಳಿತು ಅದನ್ನು ಕೇಳುತ್ತಿದ್ದ, ಕೃಷ್ಣ ಚಕ್ರವ್ಯೂಹದ ಒಳಗೆ ಹೋಗುವುದನ್ನು ಹೇಳಿದ, ಆದರೆ ಹೊರಗೆ ಬರುವುದನ್ನು ಹೇಳಲಿಲ್ಲಾ ಎಂದಿದೆ. ಆದರೆ ಇದು ಅತ್ಯಂತ ಅಬದ್ದವಾದ ಕಥೆ. ಇಲ್ಲಿ ಆಚಾರ್ಯರು ಹೇಳುತ್ತಾರೆ- ದ್ರೋಣಾಚಾರ್ಯರು ರಚಿಸಿದ ವ್ಯೂಹವನ್ನು ಭೇದಿಸಲು ಒಂದು ಕಾಮ್ಯಮಂತ್ರವನ್ನು ಜಪಮಾಡಬೇಕಾಗಿತ್ತು. ಅದು ನಾರಾಯಣ ದೇವತಾಕವಾದ ಮಂತ್ರ. ಆ ಮಂತ್ರವನ್ನು ಜಪ ಮಾಡದೇ ಪದ್ಮವ್ಯೂಹವನ್ನು ಭೇದಿಸಿ ಒಳಗೆ ಹೋಗಲು ಸಾಧ್ಯವಿರಲಿಲ್ಲ]      

 

 

ಪಾರ್ತ್ಥಾ ವ್ಯೂಹಂ ತು ತಂ ಪ್ರಾಪ್ಯ ನಾಶಕನ್ ಬೇತ್ತುಮುದ್ಯತಾಃ ।

ಜಾನಂಶ್ಚ ಪ್ರತಿಭಾಯೋಗಾತ್ ಕಾಮ್ಯಂ ನೈವಾಜಪನ್ಮನುಮ್ ॥ ೨೬.೩೯ ॥

 

ಪಾಂಡವರು ಆ ಪದ್ಮವ್ಯೂಹವನ್ನು ಹೊಂದಿ, ಅದನ್ನು ಭೇದಿಸಲು ಸಿದ್ಧರಾದರು. ಆದರೆ  ವ್ಯೂಹವನ್ನು ಒಡೆಯಲು ಅವರು ಸಮರ್ಥರಾಗಲಿಲ್ಲ. ಭೀಮಸೇನನಲ್ಲಿ ವ್ಯೂಹವನ್ನು ಭೇದಿಸುವ ಶಕ್ತಿ ಇದ್ದರೂ ಅವನು   ಕಾಮ್ಯಮಂತ್ರವನ್ನು ಹೇಳಲಿಲ್ಲ.

 

ಭೀಮೋ ಯುಧಿಷ್ಠಿರಸ್ತತ್ರ ತಜ್ಜ್ಞಂ ಸೌಭದ್ರಮಬ್ರವೀತ್ ।

ಭಿನ್ಧಿ ವ್ಯೂಹಮಿಮಂ ತಾತ ವಯಂ ತ್ವಾಮನುಯಾಮಹೇ ॥ ೨೬.೪೦ ॥

 

ಆಗ ಯುಧಿಷ್ಠಿರನು ವ್ಯೂಹಭೇದ ಮಂತ್ರವನ್ನು ತಿಳಿದಿರುವ ಅಭಿಮನ್ಯುವನ್ನು ಕುರಿತು, ‘ಮಗನೇ, ಈ ಪದ್ಮವ್ಯೂಹವನ್ನು ಭೇದಿಸು, ನಾವು ನಿನ್ನನ್ನು ಅನುಸರಿಸುತ್ತೇವೆ’ ಎಂದ.

 

ಸ ಏವಮುಕ್ತೋ ರಥಿನಾಂ ಪ್ರಬರ್ಹೋ ವಿವೇಶ ಭಿತ್ತ್ವಾ ಧ್ವಿಷತಾಂ ಚಮೂಂ ತಾಮ್ ।

ಅನ್ವೇವ ತಂ ವಾಯುಸುತಾದಯಶ್ಚ ವಿವಿಕ್ಷವಃ ಸೈನ್ಧವೇನೈವ ರುದ್ಧಾಃ ॥ ೨೬.೪೧ ॥

 

ವರೇಣ ರುದ್ರಸ್ಯ ನಿರುದ್ಧ್ಯಮಾನೋ ಜಯದ್ರಥೇನಾತ್ರ ವೃಕೋದರಸ್ತು ।

ವಿಷ್ಣೋರಭೀಷ್ಟಂ ವಧಮಾರ್ಜ್ಜುನೇಸ್ತದಾ ವಿಜ್ಞಾಯ ಶಕ್ತೋSಪಿ ನಚಾತ್ಯವರ್ತ್ತತ ॥ ೨೬.೪೨ ॥

 

ಈರೀತಿಯಾಗಿ ಹೇಳಲ್ಪಟ್ಟ, ರಥಿಕ ವೀರರಲ್ಲೇ ಅಗ್ರಗಣ್ಯನಾದ ಅಭಿಮನ್ಯುವು ಶತ್ರುಗಳ ಆ ಸೇನೆಯನ್ನು ಭೇದಿಸಿ ವ್ಯೂಹವನ್ನು ಪ್ರವೇಶಿಸಿದನು. ಭೀಮಸೇನ, ನಕುಲ-ಸಹದೇವ, ಯುಧಿಷ್ಠಿರರು ಅಭಿಮನ್ಯುವನ್ನು ಅನುಸರಿಸಿ, ವ್ಯೂಹವನ್ನು ಪ್ರವೇಶಮಾಡಲು ಬಯಸಿ ಜಯದ್ರಥನಿಂದ ತಡೆಹಿಡಿಯಲ್ಪಟ್ಟರು.

ರುದ್ರ ದೇವರ ವರದಿಂದ ಜಯದ್ರಥನಿಂದ ತಡೆಯಲ್ಪಟ್ಟ ಭೀಮಸೇನನು ಶಕ್ತನಾಗಿದ್ದರೂ ಕೂಡಾ  ಅಭಿಮನ್ಯುವಿನ ಸಾವು ಕೃಷ್ಣನಿಗೆ ಅಭೀಷ್ಟ ಎಂದು ತಿಳಿದು, ಜಯದ್ರಥನನ್ನು ಮೀರಲಿಲ್ಲ.

[ತಾತ್ಪರ್ಯ : ಹಿಂದೆ ಕಾಡಿನಲ್ಲಿ ಜಯದ್ರಥ ದ್ರೌಪದಿಯನ್ನು ಅವಮಾನ ಮಾಡಿದ ಪ್ರಸಂಗವನ್ನು ನಾವು ಈ ಹಿಂದೆ ನೋಡಿದ್ದೇವೆ. ಆಗ ರುದ್ರದೇವರು ಅರ್ಜುನನನ್ನು ಬಿಟ್ಟು ಉಳಿದ ನಾಲ್ಕು ಜನ ಪಾಂಡವರನ್ನು ಒಂದು ವಿಶೇಷ ಸಂದರ್ಭದಲ್ಲಿ ತಡೆಹಿಡಿಯಬಲ್ಲ ಸಾಮರ್ಥ್ಯದ  ವರವನ್ನು ಜಯದ್ರಥನಿಗೆ ನೀಡಿದ್ದರು. ಇಲ್ಲಿ ಭೀಮಸೇನ ರುದ್ರದೇವರ ವರವನ್ನು ಗೌರವಿಸಿದ. ಭೀಮ ಮೀರಬಹುದಿತ್ತು ಆದರೆ ಪರಮಾತ್ಮನ ಸಂಕಲ್ಪ ಅಭಿಮನ್ಯು ಸಾಯಬೇಕು ಎನ್ನುವುದಾಗಿತ್ತು. ಹೀಗಾಗಿ ಶಕ್ತನಾದರೂ ಮೀರಲಿಲ್ಲ.]

 

 

ಜಯದ್ರಥಸ್ಥೇನ ವೃಷಧ್ವಜೇನ ಪ್ರಯುದ್ಧ್ಯಮಾನೇಷು ವೃಕೋದರಾದಿಷು ।

ಪ್ರವಿಶ್ಯ ವೀರಃ ಸ ಧನಞ್ಜಯಾತ್ಮಜೋ ವಿಲೋಳಯಾಮಾಸ ಪರೋರುಸೇನಾಮ್ ॥ ೨೬.೪೩ ॥

 

ಜಯದ್ರಥನ ಒಳಗಿರುವ ರುದ್ರನ ಜೊತೆಗೆ ಭೀಮಸೇನ ಮೊದಲಾದವರು ಯುದ್ಧ ಮಾಡುತ್ತಿರಲು, ವೀರನಾಗಿರುವ, ಅರ್ಜುನನ ಮಗನಾಗಿರುವ ಅಭಿಮನ್ಯುವು ಕೌರವ ಸೇನೆಯನ್ನು ಪ್ರವೇಶಿಸಿ, ಶತ್ರುಗಳ ಸೇನೆಯನ್ನು ಉಲ್ಲೋಲಕಲ್ಲೋಲ ಮಾಡಿದ.

 

ಸ ದ್ರೋಣದುರ್ಯ್ಯೋಧನಕರ್ಣ್ಣಶಲ್ಯೈ ರ್ದ್ದ್ರೌಣ್ಯಗ್ರಣೀಭಿಃ ಕೃತವರ್ಮ್ಮಯುಕ್ತೈಃ ।

ರುದ್ಧಶ್ಚಚಾರಾರಿಬಲೇಷ್ವಭೀತಃ ಶಿರಾಂಸಿ ಕೃನ್ತಂಸ್ತದನುಬ್ರತಾನಾಮ್ ॥ ೨೬.೪೪ ॥

 

ಅಭಿಮನ್ಯುವು ದ್ರೋಣ, ದುರ್ಯೋಧನ, ಕರ್ಣ, ಶಲ್ಯ, ಅಶ್ವತ್ಥಾಮ, ಮೊದಲಾದವರೇ ಮುಂದಾಳುಗಳಾಗಿರುವವರಿಂದಲೂ, ಕೃತವರ್ಮನಿಂದ ಕೂಡಿರುವ ಸೇನೆಯಿಂದಲೂ ತಡೆಯಲ್ಪಟ್ಟರೂ, ಭಯವಿಲ್ಲದೇ ಆ ಎಲ್ಲಾ ದೊಡ್ಡ ದೊಡ್ಡ ವೀರರ ಅನುಯಾಯಿಗಳ ತಲೆಯನ್ನು ತರಿಯುತ್ತಾ  ಆರಾಮವಾಗಿ ಶತ್ರುಸೈನ್ಯಗಳಲ್ಲಿ ಸಂಚಾರಮಾಡಿದನು.

 

ಸ ಲಕ್ಷಣಂ ರಾಜಸುತಂ ಪ್ರಸಹ್ಯ ಪಿತುಃ ಸಮೀಪೇSನಯದಾಶು ಮೃತ್ಯವೇ ।

ಬೃಹದ್ಬಲಂ ಚೋತ್ತಮವೀರ್ಯ್ಯಕರ್ಮ್ಮಾ ವರಂ ರಥಾನಾಮಯುತಂ ಚ ಪತ್ರಿಭಿಃ ॥ ೨೬.೪೫ ॥

 

ಅಭಿಮನ್ಯುವು ದುರ್ಯೋಧನನ ಮಗನಾಗಿರುವ ಲಕ್ಷಣನನ್ನು ತಂದೆಯಾದ ದುರ್ಯೋಧನನ ಸಮೀಪದಲ್ಲೇ ಆಕ್ರಮಿಸಿ ಕೊಂದ. ಬೃಹದ್ಬಲನನ್ನು ಕೊಂದ ಅಭಿಮನ್ಯು, ಉತ್ಕೃಷ್ಟ ಪರಾಕ್ರಮವುಳ್ಳ, ಶ್ರೇಷ್ಠವಾದ ಹತ್ತುಸಾವಿರ ರಥಿಕರನ್ನು ಬಾಣಗಳಿಂದ ಕೊಂದುಹಾಕಿದ.

 

ದ್ರೋಣಾದಯಸ್ತಂ ಹರಿಕೋಪಭೀತಾಃ ಪ್ರತ್ಯಕ್ಷತೋ ಹನ್ತುಮಶಕ್ನುವನ್ತಃ ।

ಸಮ್ಮನ್ತ್ರ್ಯ ಕರ್ಣ್ಣಂ ಪುರತೋ ನಿಧಾಯ ಚಕ್ರುರ್ವಿಚಾಪಾಶ್ವರಥಂ ಕ್ಷಣೇನ ॥ ೨೬.೪೬ ॥

 

ಇವನನ್ನು ಕೊಂದರೆ ಎಲ್ಲಿ ಕೃಷ್ಣನಿಗೆ ಕೋಪ ಬರುತ್ತದೋ ಎಂದು ಭಯಗೊಂಡ ದ್ರೋಣಾದಿಗಳು ಪ್ರತ್ಯಕ್ಷವಾಗಿ ಅಭಿಮನ್ಯುವನ್ನು ಕೊಲ್ಲಲು ಅಶಕ್ತರಾಗಿ, ಕರ್ಣನ ಜೊತೆ ಮಂತ್ರಾಲೋಚನೆ ಮಾಡಿ, ಕರ್ಣನನ್ನು ಮುಂದೆ ಇಟ್ಟು, ಕ್ಷಣದಲ್ಲಿ ಅವನ ಬಿಲ್ಲನ್ನೂ, ಕುದುರೆಯನ್ನೂ, ರಥವನ್ನೂ ನಾಶಮಾಡಿದರು.

 

ಕರ್ಣ್ಣೋ ಧನುಸ್ತಸ್ಯ ಕೃಪಶ್ಚ ಸಾರಥೀ ದ್ರೋಣೋ ಹಯಾನಾಶು ವಿಧಮ್ಯ ಸಾಯಕೈಃ ।

ಸಚರ್ಮ್ಮಖಡ್ಗಂ ರಥಚಕ್ರಮಸ್ಯ ಪ್ರಣುದ್ಯ ಹಸ್ತಸ್ಥಿತಮೇವ ತಸ್ಥುಃ ॥ ೨೬.೪೭ ॥

 

ಕರ್ಣನು ಅಭಿಮನ್ಯುವಿನ ಬಿಲ್ಲನ್ನೂ, ಕೃಪಾಚಾರ್ಯರು ಅವನ ಸಾರಥಿಯನ್ನೂ, ದ್ರೋಣಾಚಾರ್ಯರು ಕುದುರೆಗಳನ್ನೂ ಬಾಣಗಳಿಂದ ನಾಶಮಾಡಿ, ಅವನ ಕತ್ತಿ-ಗುರಾಣಿಯನ್ನೂ ನಾಶಮಾಡಿ, ಅವನ ಕೈಯಲ್ಲಿರುವ ರಥದ ಚಕ್ರವನ್ನು ನಾಶಮಾಡಿ, ಅವನನ್ನು ಬರಿಗೈಯಲ್ಲಿರತಕ್ಕವನನ್ನಾಗಿ ಮಾಡಿದರು.     

 

ಭೀತೇಷು ಕೃಷ್ಣಾದಥ ತದ್ವಧಾಯ ತೇಷ್ವಾಸಸಾದಾSಶು ಗದಾಯುಧಂ ಗದೀ ।

ದೌಃಶಾಸನಿಸ್ತೌ ಯುಗಪಚ್ಚ ಮಮ್ರತುರ್ಗ್ಗದಾಭಿಘಾತೇನ ಮಿಥೋSತಿಪೌರುಷೌ ॥ ೨೬.೪೮ ॥

 

ಅಭಿಮನ್ಯುವನ್ನು ಕೊಲ್ಲಲು ಕೃಷ್ಣನಿಂದ ಭಯಗೊಂಡು ಅವರೆಲ್ಲರೂ ಹಾಗೇ ನಿಂತಿರಲು, ಗದೆಯನ್ನು ಹಿಡಿದುಕೊಂಡಿರುವ ಅವನನ್ನು ಗದೆಯನ್ನು ಧರಿಸಿದ ದುಃಶಾಸನನ ಮಗನು ಎದುರುಗೊಂಡ. ಅವರಿಬ್ಬರೂ  ಅತ್ಯಂತ ಪೌರುಷವುಳ್ಳವರಾಗಿ ಪರಸ್ಪರ ಗದಾಪ್ರಹಾರದಿಂದ ಒಟ್ಟಿಗೇ ಸತ್ತುಹೋದರು.

[ಈ ವಿವರವನ್ನು ದ್ರೋಣಪರ್ವದಲ್ಲಿ ಕಾಣಲು ಸಾಧ್ಯವಿಲ್ಲ. ಅಲ್ಲಿ ದುಃಶಾಸನನ ಮಗ ಅಭಿಮನ್ಯುವಿಗೆ ಹೊಡೆದ, ಅಭಿಮನ್ಯು ಕೆಳಗೆ ಬಿದ್ದ ಎಂದಷ್ಟೇ ಹೇಳಿದ್ದಾರೆ. ಹೀಗಾಗಿ ಅಲ್ಲಿ ದುಃಶಾಸನನ ಮಗನ ಕಥೆ ಏನಾಯಿತು ಎನ್ನುವುದೇ ಗೊತ್ತಾಗುವುದಿಲ್ಲ. ಆದರೆ ಮುಂದೆ ಕರ್ಣಪರ್ವದಲ್ಲಿ ಎಷ್ಟು ಜನ ಪ್ರಮುಖ ವೀರರು ಸತ್ತರು ಎಂದು ಧೃತರಾಷ್ಟ್ರ ವಿಲಾಪ ಮಾಡುತ್ತಾ ಹೀಗೆ ಹೇಳುತ್ತಾನೆ:  ‘ತಥಾ ದುರ್ಯೋಧನಸುತಸ್ತರಸ್ವೀ ಯುದ್ಧದುರ್ಮದಃ । ವರ್ತಮಾನಃ ಪಿತುಃ ಶಾಸ್ತ್ರೇ ಸೌಭದ್ರೇಣ ನಿಪಾತಿತಃ । ತಥಾ ದೌಃಶಾಸನಿಃ ಶೂರೋ ಬಾಹುಷಾಳೀ ರಾಣೋತ್ಕಟಃ’ (೨.೧೫)- ತಂದೆಯ ಶಾಸನಾನುಸಾರವಾಗಿಯೇ ನಡೆಯುತ್ತಿದ್ದ ದುರ್ಯೋಧನನ ಮಗ ತರಸ್ವೀ-ಯುದ್ಧದುರ್ಮದ ಲಕ್ಷಣನನ್ನು ಸೌಭದ್ರನು ಕೊಂದ. ಹಾಗೆಯೇ ದುಃಶಾಸನನ ಮಗ ವೀರ, ಬಾಹುಷಾಳೀ, ರಣೋತ್ಕಟನು ಅಭಿಮನ್ಯುವಿನಿಂದಲೇ ಸತ್ತ’ ಎಂದು ಧೃತರಾಷ್ಟ್ರ ಪ್ರಲಾಪ ಮಾಡುತ್ತಾನೆ. ಇಲ್ಲಿ ದುಃಶಾಸನನ ಮಗ ಅಭಿಮನ್ಯುವಿನಿಂದ ಸತ್ತ ಎನ್ನುವುದು ತಿಳಿಯುತ್ತದೆ.]

No comments:

Post a Comment