ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, February 16, 2023

Mahabharata Tatparya Nirnaya Kannada 26-23-35

 

ವಿಸೃಜ್ಯ ಭೀಮಂ ಸ ಚ ಪಾರ್ತ್ಥಮೇವ ಯಯೌ ಗಜಸ್ಕನ್ಧಗತೋ ಗಜಂ ತಮ್ ।

ಪ್ರಚೋದಯಾಮಾಸ ರಥಾಯ ತಸ್ಯ ಚಕ್ರೇSಪಸವ್ಯಂ ಹರಿರೇನಮಾಶು ॥ ೨೬.೨೩ ॥

 

ಅರ್ಜುನ ಬರುತ್ತಿರುವಂತೆಯೇ ಆನೆಯಮೇಲೆ ಕುಳಿತಿರುವ ಭಗದತ್ತ ಭೀಮಸೇನನನ್ನು ಬಿಟ್ಟು, ಅರ್ಜುನನನ್ನು ಕುರಿತು ತೆರಳಿದ ಮತ್ತು ಸುಪ್ರತೀಕ ಆನೆಯನ್ನು ಅರ್ಜುನನ ರಥವನ್ನು ಭಗ್ನಗೊಳಿಸಲು ಪ್ರಚೋದನೆ ಮಾಡಿದ. ಆಗ ಶ್ರೀಕೃಷ್ಣನು ಶೀಘ್ರವಾಗಿ ತನ್ನ ರಥದ ಪಥಬದಲಾಯಿಸಿ, ಆನೆಯ ಸುತ್ತ ಅಪ್ರದಕ್ಷಿಣವಾಗಿ ರಥವನ್ನು ವೇಗವಾಗಿ ಚಲಿಸಿದ.

[ಮಹಾಭಾರತ: ‘ಚೋದಯಾಮಾಸ ತಂ ನಾಗಂ ವಧಾಯಾಚ್ಯುತಪಾರ್ಥಯೋಃ । ತಮಾಪತನ್ತಂ ದ್ವಿರದಂ ದೃಷ್ಟ್ವಾ ಕೃದ್ಧಮಿವಾನ್ತಕಮ್ । ಚಕ್ರೇSಪಸವ್ಯಂ ತ್ವರಿತಃ ಸ್ಯನ್ದನೇನ ಜನಾರ್ದನಃ’ (ದ್ರೋಣಪರ್ವ: ೨೮.೨೮)- ಶರಜಾಲದಿಂದ ಕೃಷ್ಣಾರ್ಜುನರನ್ನು ಮುಚ್ಚಿ, ಅವರನ್ನು ಕೊಲ್ಲಲು ಆನೆಯನ್ನು ಪ್ರಚೋದಿಸಿದನು. ಅಂತಕನಂತೆ ಮೇಲೆ ಬೀಳುತ್ತಿದ್ದ ಆನೆಯನ್ನು ನೋಡಿ ಕೂಡಲೇ ಜನಾರ್ದನನು ರಥವನ್ನು ತಿರುಗಿಸಿದನು.] 

 

ಮನೋಜವೇನೈವ ರಥೇ ಪರೇಣ ಸಮ್ಭ್ರಾಮ್ಯಮಾಣೇ ನತು ತಂ ಗಜಃ ಸಃ ।

ಪ್ರಾಪ್ತುಂ ಶಶಾಕಾಥ ಶರೈಃ ಸುತೀಕ್ಷ್ಣೈರಭ್ಯರ್ದ್ಧಯಾಮಾಸ ನೃಪಂ ಸ ವಾಸವಿಃ ॥ ೨೬.೨೪ ॥

 

ಮನಸ್ಸಿಗೂ ಮೀರಿದ ವೇಗದಿಂದ ಶ್ರೀಕೃಷ್ಣನಿಂದ ರಥವು ತಿರುಗಿಸಲ್ಪಡಲು, ಆನೆಯು ರಥವನ್ನು ಹಿಡಿಯಲು ಸಮರ್ಥವಾಗಲಿಲ್ಲ. ಆಗ ಅರ್ಜುನ ತೀಕ್ಷ್ಣವಾದ ಬಾಣಗಳಿಂದ ಭಗದತ್ತನನ್ನು ಪೀಡಿಸಿದ.

 

ಅಸ್ತ್ರೈಶ್ಚ ಶಸ್ತ್ರೈಃ ಸುಚಿರಂ ನೃವೀರಾವಯುದ್ಧ್ಯತಾಂ ತೌ ಬಲಿನಾಂ ಪ್ರಬರ್ಹೌ ।

ಅಥೋ ಚಕರ್ತ್ತಾಸ್ಯ ಧನುಃ ಸ ಪಾರ್ತ್ಥಃ ಸ ವೈಷ್ಣವಾಸ್ತ್ರಂ ಚ ತದಾSಙ್ಕುಶೇSಕರೋತ್ ॥ ೨೬.೨೫ ॥

 

ಅಸ್ತ್ರಗಳಿಂದಲೂ, ಶಸ್ತ್ರಗಳಿಂದಲೂ ಬಹಳ ಕಾಲದವರೆಗೆ ಬಲಿಷ್ಟರಲ್ಲೇ ಅಗ್ರಗಣ್ಯರಾದ,  ವೀರರಾಗಿರುವ ಭಗದತ್ತ ಹಾಗೂ ಅರ್ಜುನರು ಯುದ್ಧ ಮಾಡಿದರು. ತದನಂತರ ಅರ್ಜುನನು ಭಗದತ್ತನ  ಬಿಲ್ಲನ್ನು ಕತ್ತರಿಸಿದನು. ಭಗದತ್ತನಾದರೋ ಅಂಕುಶದಲ್ಲಿ ನಾರಾಯಣಾಸ್ತ್ರವನ್ನು ಅಭಿಮಂತ್ರಿಸಿದನು. 

[‘ವಿದ್ಧಸ್ತತೋSತಿವ್ಯಥಿತೋ ವೈಷ್ಣವಾಸ್ತ್ರಮುದೀರಯನ್ । ಅಭಿಮಂತ್ರ್ಯಾಙ್ಕುಶಂ ಕ್ರುದ್ಧೋ ವ್ಯಸೃಜತ್ ಪಾಣ್ಡವೋರಸಿ’ (ದ್ರೋಣಪರ್ವ: ೨೯.೧೭) ಗಾಯಗೊಂಡು ಕ್ರುದ್ಧನಾದ ಭಗದತ್ತ  ವೈಷ್ಣವಾಸ್ತ್ರವನ್ನು ಸ್ಮರಿಸಿಕೊಂಡು ಅಂಕುಶವನ್ನು ಅಭಿಮಂತ್ರಿಸಿ ಅರ್ಜುನನ ಎದೆಗೆ ಗುರಿಯಿಟ್ಟು ಎಸೆದನು.]

 

ತಸ್ಮಿನ್ನಸ್ತ್ರೇ ತೇನ  ತದಾ ಪ್ರಯುಕ್ತೇ ದಧಾರ ತದ್ ವಾಸುದೇವೋSಮಿತೌಜಾಃ ।

ತದಂಸದೇಶಸ್ಯ ತು ವೈಜಯನ್ತೀ ಬಭೂವ ಮಾಲಾSಖಿಲಲೋಕಭರ್ತ್ತುಃ ॥ ೨೬.೨೬ ॥

 

ಭಗದತ್ತನಿಂದ ಆ ನಾರಾಯಣಾಸ್ತ್ರವು ಬಿಡಲ್ಪಡುತ್ತಿರಲು, ಎಣೆಯಿರದ ಕಸುವುಳ್ಳ ವಾಸುದೇವ ಶ್ರೀಕೃಷ್ಣನು ತಾನೇ ಎದೆಕೊಟ್ಟು ಆ ಅಸ್ತ್ರವನ್ನು ಧರಿಸಿದನು. ಆಗ ಆ ವೈಷ್ಣವಾಸ್ತ್ರವು ಅವನ ಹೆಗಲಿನಲ್ಲಿ ಹೂವಿನ ಮಾಲೆಯಾಗಿ ಬದಲಾಯಿತು. 

[‘ವೈಜಯಂತ್ಯಭವನ್ಮಾಲಾ ತದಸ್ತ್ರಂ ಕೇಶವೋರಸಿ (ದ್ರೋಣಪರ್ವ ೨೯.೧೯)- ಆ ಅಸ್ತ್ರವು ಕೇಶವನ ಎದೆಯಮೇಲೆ ವೈಜಯಂತಿ ಮಾಲೆಯಾಯಿತು]

 

ದೃಷ್ಟ್ವೈವ ತದ್ ಧಾರಿತಮಚ್ಯುತೇನ ಪಾರ್ತ್ಥಃ ಕಿಮರ್ತ್ಥಂ ವಿಧೃತಂ ತ್ವಯೇತಿ ।

ಊಚೇ ತಮಾಹಾSಶು ಜಗನ್ನಿವಾಸೋ ಮಯಾSಖಿಲಂ ಧಾರ್ಯ್ಯತೇ ಸರ್ವದೈವ ॥ ೨೬.೨೭ ॥

 

ಅರ್ಜುನನು ಶ್ರೀಕೃಷ್ಣನಿಂದ ಧರಿಸಲ್ಪಟ್ಟ ಅಸ್ತ್ರವನ್ನು ಕಂಡು, ‘ನಿನ್ನಿಂದ ಏಕಾಗಿ ಧರಿಸಲ್ಪಟ್ಟಿತು’ ಎಂದು ಕೇಳಿದನು.  ಆಗ ಜಗತ್ತಿಗೆ ಆಧಾರಭೂತನಾಗಿರುವ ನಾರಾಯಣನು ‘ನನ್ನಿಂದ ಎಲ್ಲವೂ ಯಾವಾಗಲೂ ಧರಿಸಲ್ಪಟ್ಟಿರುತ್ತದೆ’ ಎಂದನು.  

 

ನ ಮಾದೃಶೋSನ್ಯೋSಸ್ತಿ ಕುತಃ ಪರೋ ಮತ್ ಸೋSಹಂ ಚತುರ್ದ್ಧಾ ಜಗತೋ ಹಿತಾಯ ।

ಸ್ಥಿತೋSಸ್ಮಿ ಮೋಕ್ಷಪ್ರಳಯಸ್ಥಿತೀನಾಂ ಸೃಷ್ಟೇಶ್ಚ ಕರ್ತ್ತಾ ಕ್ರಮಶಃ ಸ್ವಮೂರ್ತ್ತಿಃಭಿಃ ।

ಸ ವಾಸುದೇವಾದಿಚತುಃ ಸ್ವರೂಪಃ ಸ್ಥಿತೋSನಿರುದ್ಧೋ ಹೃದಿ ಚಾಖಿಲಸ್ಯ ॥ ೨೬.೨೮ ॥

 

‘ನನಗೆ ಸಮನಾದವನು ಇನ್ನೊಬ್ಬನಿಲ್ಲ. ಹೀಗಿರುವಾಗ ನನ್ನಿಂದ ಉತ್ತಮನು ಎಲ್ಲಿಂದ? (ನನಗೆ ಸಮನಾಗಲೀ ಅಧಿಕನಾಗಲೀ ಇಲ್ಲಾ). ಅಂತಹ ನಾನು ನಾಲ್ಕು ರೂಪಗಳಿಂದ ಜಗತ್ತಿನ ಹಿತಕ್ಕಾಗಿ ಇರುತ್ತೇನೆ. ಮೋಕ್ಷ ಪ್ರಳಯ ಸ್ಥಿತಿ, ಇವುಗಳನ್ನೂ, ಸೃಷ್ಟಿಯನ್ನೂ ಈ ನನ್ನ ರೂಪಗಳಿಂದ ಮಾಡುತ್ತಿದ್ದೇನೆ. ಅಂತಹ ವಾಸುದೇವ ಮೊದಲಾದ ನಾಲ್ಕು ರೂಪವುಳ್ಳವನಾಗಿ ನಾನಿದ್ದೇನೆ. ಎಲ್ಲರ ಹೃದಯದಲ್ಲಿ ನಾನು ಅನಿರುದ್ಧನಾಗಿದ್ದೇನೆ.  

 

ಸ ಏವ ಚ ಕ್ರೋಡತನುಃ ಪುರಾSಹಂ ಭೂಮಿಪ್ರಿಯಾರ್ತ್ಥಂ ನರಕಾಯ ಚಾದಾಮ್ ।

ಅಸ್ತ್ರಂ ಮದೀಯಂ ವರಮಸ್ಯ ಚಾದಾಮವದ್ಧ್ಯತಾಂ ಯಾವದಸ್ತ್ರಂ ಸಸೂನೋಃ  ॥ ೨೬.೨೯ ॥

 

ಅಂತಹ ಸಂಕರ್ಷಣ-ಪ್ರದ್ಯುಮ್ನಾದಿ ಸ್ವರೂಪನಾದ ನಾನೇ ವರಾಹರೂಪನಾಗಿ ಹಿಂದೆ ಭೂದೇವಿಯ ಪ್ರೀತ್ಯರ್ಥವಾಗಿ ನರಕಾಸುರನಿಗೆ ನನ್ನ ಸಂಬಂಧಿಯಾದ ಅಸ್ತ್ರವನ್ನು ಕೊಟ್ಟಿರುವೆನು. ಮಗನಾದ ಭಗದತ್ತ ಮತ್ತು ಅವನಲ್ಲಿ ಎಲ್ಲಿಯ ತನಕ ಆ ಅಸ್ತ್ರ ಇರುತ್ತದೋ, ಅಲ್ಲಿಯ ತನಕ ಅವಧ್ಯತ್ವವದ ವರವನ್ನು ನಾನು ಕೊಟ್ಟಿರುವೆನು.

 

ಅಸ್ತ್ರಸ್ಯ ಚಾನ್ಯೋ ನತು ಕಶ್ಚಿದಸ್ತಿ ಯೋSವದ್ಧ್ಯ ಏತಸ್ಯ ಕುತಶ್ಚ ಮತ್ತಃ ।

ಇತಿ ಸ್ಮ ತೇನೈವ ಮಯಾ ಧೃತಂ ತದಸ್ತ್ರಂ ತದೇನಂ ಜಹಿ ಚಾಸ್ತ್ರಹೀನಮ್ ॥ ೨೬.೩೦ ॥

 

ಈ ಅಸ್ತ್ರಕ್ಕೆ ವಧ್ಯನಾಗದವನು ಜಗತ್ತಿನಲ್ಲಿ ಯಾರೂ ಇಲ್ಲ. ಹೀಗಾಗಿ ನನ್ನಿಂದ ನಾರಾಯಣಾಸ್ತ್ರವು  ಧರಿಸಲ್ಪಟ್ಟಿದೆ. ಅದರಿಂದ ಈಗ ಅಸ್ತ್ರದಿಂದ ರಹಿತನಾಗಿರುವ ಈ ಭಗದತ್ತನನ್ನು ಕೊಲ್ಲು ಎಂದು ಶ್ರೀಕೃಷ್ಣ ಅರ್ಜುನನಿಗೆ ಆಜ್ಞೆಮಾಡಿದ.

[ಮಹಾಭಾರತ ದ್ರೋಣಪರ್ವ: ‘ಏಕಾ ಮೂರ್ತಿಸ್ತಪಶ್ಚರ್ಯಾಂ ಕುರುತೇ ಮೇ ಭುವಿ ಸ್ಥಿತಾ ಅಪರಾ ಪಶ್ಯತಿ ಜಗತ್ ಕುರ್ವಾಣಂ ಸಾಧ್ವಸಾಧುನೀ   ಅಪರಾ ಕುರುತೇ ಕರ್ಮ ಮಾನುಷಂ ಲೋಕಮಾಶ್ರಿತಾ ಶೇತೇ ಚತುರ್ಥೀ ತ್ವಪರಾ ನಿದ್ರಾಂ ವರ್ಷಸಹಸ್ರಕೀಮ್’  (೩೩.೩೪) - ಒಂದು ಮೂರ್ತಿ ಜಗತ್ತಿನಲ್ಲಿ ತಪಶ್ಚರ್ಯದಲ್ಲಿದೆ. ಇನ್ನೊಂದು ಮೂರ್ತಿ ಜಗತ್ತನ್ನು ನೋಡುತ್ತದೆ. ಇನ್ನೊಂದು ಮೂರ್ತಿ ಜಗತ್ತನ್ನು ಸೃಷ್ಟಿ ಮಾಡುತ್ತದೆ. ಇನ್ನೊಂದು ಮೂರ್ತಿ ಪ್ರಳಯಕಾಲದಲ್ಲಿ ಮಲಗಿರುತ್ತದೆ... ‘ನಾಸ್ಯಾವಧ್ಯೋSಸ್ತಿ ಲೋಕೇSಸ್ಮಿನ್ ಮದನ್ಯಃ ಕಶ್ಚಿದರ್ಜುನ । ತಸ್ಮಾನ್ಮಯಾ ಕೃತಂ ಹ್ಯೇತನ್ಮಾ ಭೂತ್ ತೇ ಬುದ್ಧಿರನ್ಯಥಾ’ (೨೯.೩೦) ತಪ್ಪು ತಿಳಿಯಬೇಡ. ಈ ಅಸ್ತ್ರವನ್ನು ಯಾರೂ ಕೂಡಾ ಎದುರಿಸಲು ಸಾಧ್ಯವಿಲ್ಲ. ಹಾಗಾಗಿ ನಾನೇ ಧರಿಸಿದೆ. ]

 

ಇತ್ಯುಕ್ತಮಾಕರ್ಣ್ಯ ಸ ಕೇಶವೇನ ಸಮ್ಮನ್ತ್ರ್ಯ ಬಾಣಂ ಹೃದಯೇ ಮುಮೋಚ ।

ಪ್ರಾಗ್ಜ್ಯೋತಿಷಸ್ಯಾಪರಮುತ್ತಮಂ ಶರಂ ಗಜೇನ್ದ್ರಕುಮ್ಭಸ್ಥಲ ಆಶ್ವಮಜ್ಜಯತ್ ॥ ೨೬.೩೧ ॥

 

ಈರೀತಿಯಾಗಿ ಶ್ರೀಕೃಷ್ಣನಿಂದ ಹೇಳಲ್ಪಟ್ಟ ಅರ್ಜುನನು, ಬಾಣವನ್ನು ಅಭಿಮಂತ್ರಿಸಿ ಭಗದತ್ತನ ಎದೆಗೆ  ಬಿಟ್ಟ. ಇನ್ನೊಂದು ಉತ್ಕೃಷ್ಟವಾದ ಬಾಣವನ್ನು ಸುಪ್ರತೀಕದ ಕುಮ್ಭಸ್ಥಳದಲ್ಲಿ ಕೂಡಲೇ ಹೊಕ್ಕಿಸಿದ.

 

ಉಭೌ ಚ ತೌ ಪೇತತುರದ್ರಿಸನ್ನಿಭೌ ಮಹೇನ್ದ್ರವಜ್ರಾಭಿಹತಾವಿವಾSಶು ।

ನಿಹತ್ಯ ತೌ ವಾಸವಿರುಗ್ರಪೌರುಷೋ ಮುಮೋದ ಸಾಧು ಸ್ವಜನಾಭಿಪೂಜಿತಃ ॥ ೨೬.೩೨ ॥

 

ದೊಡ್ಡ ಆಕಾರವುಳ್ಳ ಭಗದತ್ತ ಮತ್ತು ಸುಪ್ರತೀಕ ಇಂದ್ರನ ವಜ್ರಾಯುಧದಿಂದ ಹೊಡೆಯಲ್ಪಟ್ಟು ಬಿದ್ದ ಬೆಟ್ಟಗಳೋ ಎಂಬಂತೆ ಬಿದ್ದರು. ಅರ್ಜುನನು ಅವರಿಬ್ಬರನ್ನೂ ಕೊಂದು, ತನ್ನವರಿಂದ ಪೂಜಿತನಾಗಿ ಸಂತೋಷಪಟ್ಟ.

ಅಥಾಚಲಂ ವೃಷಕಂ ಚೈವ ಹತ್ವಾ ಕನೀಯಸೌ ಶಕುನೇಸ್ತಂ ಚ ಬಾಣೈಃ ।

ವಿವ್ಯಾಧ ಮಾಯಾಮಸೃಜತ್ ಸ ತಾಂ ಚ ವಿಜ್ಞಾನಾಸ್ತ್ರೇಣಾSಶು ನಾಶಾಯ ಚಕ್ರೇ ॥ ೨೬.೩೩ ॥

 

ತದನಂತರ ಅರ್ಜುನನು ಶಕುನಿಯ ತಮ್ಮಂದಿರರಾದ ವೃಷಕ ಮತ್ತು ಅಚಲ ಎನ್ನುವವರನ್ನು ಕೊಂದು, ಬಾಣಗಳಿಂದ ಶಕುನಿಯನ್ನೂ ಕೂಡಾ ಹೊಡೆದ. ಶಕುನಿಯಾದರೋ ಮಾಯೆಯನ್ನು ಸೃಷ್ಟಿಮಾಡಿದ. ಆಗ ಅರ್ಜುನ ವಿಜ್ಞಾನಾಸ್ತ್ರದಿಂದ ಅದನ್ನು ನಾಶಮಾಡಿದ.

 

ಸ ನಷ್ಟಮಾಯಃ ಪ್ರಾದ್ರವತ್ ಪಾಪಕರ್ಮ್ಮಾ ತತಃ ಪಾರ್ತ್ಥಃ ಶರಪೂಗೈಶ್ಚಮೂಂ ತಾಮ್ ।

ವಿದ್ರಾವಯಾಮಾಸ ತದಾ ಗುರೋಃ ಸುತೋ ಮಾಹಿಷ್ಮತೀಪತಿಮಾಜೌ ಜಘಾನ ॥ ೨೬.೩೪ ॥

 

ಪಾಪಿಷ್ಠನಾದ ಶಕುನಿಯ ಕಣ್ಕಟ್ಟು ವಿದ್ಯೆಯ ಆಟ ನಡೆಯದೇ ಇದ್ದಾಗ, ಮಾಯೆಯ ಪ್ರಭಾವವನ್ನು ಕಳೆದುಕೊಂಡ ಶಕುನಿಯು ಯುದ್ಧದಿಂದ ಓಡಿಹೋದ. ತದನಂತರ ಅರ್ಜುನನು ಬಾಣಗಳ ಸಮೂಹದಿಂದ  ಸೇನೆಯನ್ನು ಓಡಿಸಿದ. ಆಗಲೇ ಅಶ್ವತ್ಥಾಮನು ಮಾಹಿಷ್ಮತೀಪತಿಯಾದ ನೀಲನನ್ನು ಯುದ್ಧದಲ್ಲಿ ಸಂಹರಿಸಿದನು.

 

ತದಾ ಭೀಮಸ್ತಸ್ಯ ನಿಹತ್ಯ ವಾಹಾನ್ ವ್ಯದ್ರಾವಯದ್ ಧಾರ್ತ್ತರಾಷ್ಟ್ರೀಂ ಚಮೂಂ ಚ ।

ಭೀಮಾರ್ಜ್ಜುನಾಭ್ಯಾಂ ಹನ್ಯಮಾನಾಂ ಚಮೂಂ ತಾಂ ದೃಷ್ಟ್ವಾ ದ್ರೋಣಃ ಕ್ಷಿಪ್ರಮಪಾಜಹಾರ ॥ ೨೬.೩೫ ॥

 

ಆಗ ಭೀಮಸೇನನು ಅಶ್ವತ್ಥಾಮನ ಕುದುರೆಗಳನ್ನು ಕೊಂದು, ಅವನ ಆರ್ಭಟವನ್ನು ತಗ್ಗಿಸಿ, ದುರ್ಯೋಧನನ ಸೇನೆಯನ್ನು ಓಡಿಸಿದ. ಭೀಮಾರ್ಜುನರಿಂದ ಕೊಲ್ಲಲ್ಪಡುತ್ತಿರುವ ಆ ಸೇನೆಯನ್ನು ಕಂಡ ದ್ರೋಣಾಚಾರ್ಯರು ಕೂಡಲೇ ಯುದ್ಧ ವಿರಾಮವನ್ನು ಘೋಷಿಸಿದರು (ಇಲ್ಲಿಗೆ ಹನ್ನೆರಡನೇ ದಿನದ ಯುದ್ಧ ಮುಗಿಯಿತು)


No comments:

Post a Comment