ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 19, 2023

Mahabharata Tatparya Nirnaya Kannada 26-68-73

ಹತೇಷು ವೀರೇಷು ನಿಜೇಷು ಸಙ್ಘಶೋ ವಿದ್ರಾವಿತೇಷ್ವಾಲುಳಿತೇ ಚ ಸೈನ್ಯೇ ।

ದುರ್ಯ್ಯೋಧನೋ ದ್ರೋಣಮುಪೇತ್ಯ ದೀನಮುವಾಚ ಹಾ ಪಾರ್ತ್ಥ ಉಪೇಕ್ಷಿತಸ್ತ್ವಯಾ ॥೨೬.೬೮॥

 

ತನ್ನ ವೀರರು ಒಟ್ಟೊಟ್ಟಿಗೆ ಸಾಯುತ್ತಿರಲು, ಉಳಿದವರು ಗುಂಪಾಗಿ ಓಡಿಹೋಗುತ್ತಿರಲು, ಸೈನ್ಯವು ಉಲ್ಲೋಲಕಲ್ಲೋಲವಾಗಲು, ದುರ್ಯೋಧನನು ದ್ರೋಣಾಚಾರ್ಯರ ಬಳಿ ಬಂದು, ದೀನನಾಗಿ ಹೇಳಿದ- ‘ಅಯ್ಯೋ, ಅರ್ಜುನನು ನಿಮ್ಮಿಂದ ಉಪೇಕ್ಷಿಸಲ್ಪಟ್ಟಿರುವನು’ ಎಂದು.

 

ಇತೀರಿತೇSಭೇದ್ಯಮಮುಷ್ಯ ವರ್ಮ್ಮ  ಬಧ್ವಾ ಮಹಾಮನ್ತ್ರಬಲಾತ್ ಸ ವಿಪ್ರಃ ।

ಜಗಾದ ಯೇನೈವ ಬಲೇನ ಪಾರ್ತ್ಥೈರ್ವಿರುದ್ಧ್ಯಸೇ ತೇನ ಹಿ ಯಾಹಿ ಫಲ್ಗುನಮ್ ॥೨೬.೬೯॥

 

ಈರೀತಿ ಹೇಳಲ್ಪಟ್ಟ ದ್ರೋಣಾಚಾರ್ಯರು ಮಹಾಮಂತ್ರ ಬಲದಿಂದ ಅವನಿಗೆ ಅಭೇದ್ಯ ಕವಚವನ್ನು ಅಭಿಮಂತ್ರಿಸಿ ಕಟ್ಟಿ, ‘ಎಷ್ಟು ಬಲದಿಂದ ಪಾಂಡವರ ಜೊತೆ ಯುದ್ಧಮಾಡಬಲ್ಲೆಯೋ, ಅಷ್ಟೂ ಬಲದಿಂದ ಅರ್ಜುನನೊಡನೆ ಹೋರಾಡು’ ಎಂದು ಹೇಳಿದರು.

 

ಇತೀರಿತೋ ಧಾರ್ತ್ತರಾಷ್ಟ್ರಃ ಸ ಚಾಪಮಾದಾಯ ಸೌವರ್ಣ್ಣರಥೋಪರಿಸ್ಥಃ ।

ಜಗಾಮ ಪಾರ್ತ್ಥಂ ತಮವಾರಯಚ್ಚ ಶರೈರನೇಕೈರನಲಪ್ರಕಾಶೈಃ ॥೨೬.೭೦॥

 

ಈರೀತಿಯಾಗಿ ಹೇಳಲ್ಪಟ್ಟ ದುರ್ಯೋಧನನು ಬಿಲ್ಲನ್ನು ಹಿಡಿದು, ಬಂಗಾರದ ರಥದಮೇಲೆ ಕುಳಿತವನಾಗಿ, ಅರ್ಜುನನನ್ನು ಹೊಂದಿ, ವಿಚಿತ್ರವಾಗಿರುವ, ಬೆಂಕಿಯಂತೆ ಪ್ರಕಾಶಮಾನವಾದ ತೀಕ್ಷ್ಣವಾಗಿರುವ ಬಾಣಗಳಿಂದ ಅರ್ಜುನನನ್ನು ತಡೆದ.

 

ವಿವ್ಯಾಧ ಪಾರ್ತ್ಥೋSಪಿ ತಮುಗ್ರವೇಗೈಃ ಶರೈರ್ನ್ನ ತೇ ತಸ್ಯ ಚ ವರ್ಮ್ಮಭೇದಮ್ ।

ಚಕ್ರುಸ್ತತೋ ವಾಸವಿರ್ದಿವ್ಯಮಸ್ತ್ರಂ ತದ್ವರ್ಮ್ಮಭೇದಾಯ ಸಮಾದದೇ ರುಷಾ ॥೨೬.೭೧॥

 

ಅರ್ಜುನನೂ ಕೂಡಾ ದುರ್ಯೋಧನನನ್ನು ಉಗ್ರವಾಗಿರುವ, ವೇಗವುಳ್ಳ ಬಾಣಗಳಿಂದ ಹೊಡೆದ. ಆ ಬಾಣಗಳು ದುರ್ಯೋಧನನ ಕವಚದ ತುಂಡರಿಸುವಿಕೆಯನ್ನು ಮಾಡಲಿಲ್ಲ. ಅದರಿಂದ ಸಿಟ್ಟುಗೊಂಡ ಅರ್ಜುನನು ಅಲೌಕಿಕವಾದ ಅಸ್ತ್ರವನ್ನು, ದುರ್ಯೋಧನನ ಕವಚವನ್ನು ಕತ್ತರಿಸಲೆಂದು ಬತ್ತಳಿಕೆಯಿಂದ ತೆಗೆದುಕೊಂಡನು.

 

ಸನ್ಧೀಯಮಾನಂ ತು ಗುರೋಃ ಸುತಸ್ತಚ್ಚಿಚ್ಛೇದ ಪಾರ್ತ್ಥೋSಥ ಸುಯೋಧನಾಶ್ವಾನ್ ।

ಹತ್ವಾ ತಳೇSವಿದ್ಧ್ಯದಥೈನಮುಗ್ರೈರ್ದ್ದ್ರೌಣಿಃ ಶರೈಃ ಪಾರ್ತ್ಥಮವಾರಯದ್ ಯುಧಿ ॥೨೬.೭೨॥

 

ಅರ್ಜುನ ಬಿಲ್ಲಿನಲ್ಲಿ ಬಾಣವನ್ನು ಹೂಡುತ್ತಿರಬೇಕಾದರೆ ಅಶ್ವತ್ಥಾಮನು ಆ ದಿವ್ಯಾಸ್ತ್ರವನ್ನು ಛೇದಿಸಿದನು. ಆಗ  ಅರ್ಜುನನು ಸುಯೋಧನನ ಕುದುರೆಗಳನ್ನು ಕೊಂದು, ಅವನ ಕವಚವಿರದ ಭಾಗದಲ್ಲಿ ಉಗ್ರವಾದ ಬಾಣಗಳಿಂದ ಹೊಡೆದು ಗಾಯಗೊಳಿಸಿದನು. ಆಗ ಅಶ್ವತ್ಥಾಮನು ತನ್ನ ಬಾಣಗಳಿಂದ (ದುರ್ಯೋಧನನ ಮೇಲೆ ಹೆಚ್ಚಿಗೆ ದಾಳಿ ಮಾಡದಂತೆ) ಅರ್ಜುನನನ್ನು ತಡೆದ.

 

ಸ ದ್ರೌಣಿಕರ್ಣ್ಣಪ್ರಮುಖೈರ್ದ್ಧನಞ್ಜಯೋ ಯುಯೋಧ ತೇ ಚೈನಮವಾರಯಞ್ಛರೈಃ ।

ಬಭೂವ ಯುದ್ಧಂ  ತದತುಲ್ಯಮದ್ಭುತಂ ಜಯದ್ರಥಾರ್ತ್ಥೇSದ್ಭುತವೀರ್ಯ್ಯಕರ್ಮ್ಮಣಾಮ್ ॥೨೬.೭೩॥

 

ಆ ಅರ್ಜುನನು ಅಶ್ವತ್ಥಾಮ, ಕರ್ಣ, ಮೊದಲಾದ ಪ್ರಮುಖರಿಂದ ತಡೆಯಲ್ಪಟ್ಟವನಾಗಿ ಯುದ್ಧಮಾಡಿದ. ಜಯದ್ರಥನಿಗಾಗಿ ನಡೆದ ಆ ಯುದ್ಧವು ಆಶ್ಚರ್ಯಾದ್ಭುತವಾಗಿತ್ತು.   

No comments:

Post a Comment