ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, February 9, 2023

Mahabharata Tatparya Nirnaya Kannada 26-14-22

 

ಸ ಧಾರ್ತ್ತರಾಷ್ಟ್ರೇಣ ಯುಧಿಷ್ಠಿರಾಗ್ರಹಾತ್ ಸಂಶ್ರಾವಿತಃ ಕ್ರೂರವಚೋ ನಿಶಾಯಾಮ್ ।

ಜಗಾದ ದೂರಂ ಸಮರಾದ್ ವಿನೀಯತಾಂ ಪಾರ್ತ್ಥಸ್ತತೋ ಧರ್ಮ್ಮಸುತಂ ಗ್ರಹೀಷ್ಯೇ ॥ ೨೬.೧೪ ॥

 

ಆ ರಾತ್ರಿ, ಯುಧಿಷ್ಠಿರನನ್ನು ಬಂಧಿಸಲಾಗದ ಕಾರಣಕ್ಕೆ ದುರ್ಯೋಧನನಿಂದ ಕ್ರೂರವಾದ ಬೈಗುಳಗಳನ್ನು ಕೇಳಿದ ದ್ರೋಣಾಚಾರ್ಯರು: ‘ಅರ್ಜುನನು ಯುದ್ಧಭೂಮಿಯಿಂದ ದೂರ ಒಯ್ಯಲ್ಪಡಲಿ, ಆಮೇಲೆ ನಾನು ಧರ್ಮರಾಜನನ್ನು ಹಿಡಿಯುತ್ತೇನೆ’ ಎಂದು ಹೇಳಿದರು.  

 

ತತಃ ಸುಶರ್ಮ್ಮಾ ಸಹಿತೋ ಮಹಾರಥೈಃ ಸಂಶಪ್ತಕೈರ್ದ್ದೂರತರಂ ಪ್ರಣೇತುಮ್ ।

ಯುದ್ಧಾಯ ಭೀಮಾನುಜಮಾಶು ಕ್ಲ್-ಪ್ತೋ ದುರ್ಯ್ಯೋಧನೇನೋಮಿತಿ ಸೋSಪ್ಯವಾದೀತ್ ॥ ೨೬.೧೫ ॥

 

ತದನಂತರ ಮಹಾರಥಿಕರಾದ ಸಂಶಪ್ತಕರಿಂದ ಸಹಿತನಾದ ಸುಶರ್ಮನು, ಭೀಮನ ತಮ್ಮನಾದ ಅರ್ಜುನನನ್ನು ಯುದ್ಧಭೂಮಿಯಲ್ಲಿ ದೂರಕ್ಕೆ ಒಯ್ಯಲು ಶೀಘ್ರದಲ್ಲೇ ದುರ್ಯೋಧನನಿಂದ ಆಜ್ಞಾಪಿಸಲ್ಪಟ್ಟನು. ಅದಕ್ಕೆ ಸುಶರ್ಮನು ‘ಹಾಗೇ ಆಗಲಿ ಎಂದು ಹೇಳಿದನು ಕೂಡಾ.

[ತ್ರಿಗರ್ತದವರಿಗೆ ದುರ್ಯೋಧನನು ಯುದ್ಧಭೂಮಿಯಲ್ಲಿ ಅರ್ಜುನನನ್ನು ದೂರಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದ. ಆಗ ಅವರು ಪ್ರತಿಜ್ಞೆ ಮಾಡಿದರು.  (ಈ ರೀತಿ ಶಪತಮಾಡಿ ಯುದ್ಧ ಮಾಡುವವರನ್ನು ಸಂಶಪ್ತಕರು ಎಂದು ಕರೆಯುತ್ತಾರೆ). ‘ತಸ್ಮಿನ್ನಗ್ರೌ ತದಾ ಚಕ್ರುಃ ಪ್ರತಿಜ್ಞಾಂ ದೃಢನಿಶ್ಚಯಾಃ । ಶೃಣ್ವತಾಂ ಸರ್ವಭೂತಾನಾಮುಚ್ಚೈರ್ವಾಚೋ ಬಭಾಷಿರೇ । ಸರ್ವೇ ಧನಞ್ಜಯವಧೇ ಪ್ರತಿಜ್ಞಾಂ ಚಾಪಿ ಚಕ್ರಿರೇ’ (ದ್ರೋಣಪರ್ವ ೧೭.೨೮-೨೯)  ಬೆಂಕಿಯ ಮುಂದೆ ಅವರು ಅರ್ಜುನನನ್ನು ಕೊಲ್ಲಬೇಕು ಎಂದು ಪ್ರತಿಜ್ಞೆಮಾಡಿದರು. ‘ನಾಸ್ತಿಕಾನಾಂ ಚ ಯೇ ಲೋಕಾ ಯೇSಗ್ನಿಮಾತೃಪಿತೃತ್ಯಜಾಮ್ । ತಾನಾಪ್ನುಯಾಮಹೇ ಲೋಕಾನ್ ಯೇ ಚ ಪಾಪಕೃತಾಮಪಿ । ಯದ್ಯಹತ್ವಾ ವಯಂ ಯುದ್ಧೇ ನಿವರ್ತೇಮ ಧನಞ್ಜಯಮ್(೩೫). ನಾವು ಅರ್ಜುನನನ್ನು ಕೊಲ್ಲದೇ ಯುದ್ಧದಿಂದ ಮರಳಿ ಬಂದರೆ ವಿವಿಧ ಪಾಪಕರ್ಮಿಗಳಿಗೆ ಯಾವ ಲೋಕಗಳು ದೊರೆಯುತ್ತವೋ ಆ ಲೋಕ ನಮಗೆ ದೊರೆಯಲಿ ಎಂದು ಅವರು ಪ್ರತಿಜ್ಞೆ ಮಾಡಿದರು]

 

ಸಮಾಹ್ವಯಾಮಾಸುರಥಾರ್ಜ್ಜುನಂ ತೇ ಪ್ರಾತರ್ಹುತಾಶಸ್ಯ ದಿಶಂ ರಣಾಯ ।

ಅಯೋಧಯತ್ ತಾನ್ ಸ ಚ ತತ್ರ ಗತ್ವಾ ಭೀಮೋ ಗಜಾನೀಕಮಥಾತ್ರ ಚಾವಧೀತ್ ॥ ೨೬.೧೬ ॥

 

ಬೆಳಗಾದೊಡನೆ ಯುದ್ಧಭೂಮಿಯಲ್ಲಿ ಅವರು ಆಗ್ನೇಯದಿಕ್ಕನ್ನು ಕುರಿತು ಯುದ್ಧಕ್ಕಾಗಿ ಅರ್ಜುನನನ್ನು ಕರೆದರು. ಅರ್ಜುನನು ಅಲ್ಲಿಗೆ ಹೋಗಿ ಅವರೊಂದಿಗೆ ಯುದ್ಧಮಾಡಿದ. ಭೀಮಸೇನ ಈ ಹನ್ನೆರಡನೇದಿನದ ಯುದ್ಧದಲ್ಲಿ ಆನೆಗಳ ಸಮೂಹವನ್ನೇ ಕೊಂದ.

 

ನಿಹನ್ಯಮಾನೇಷು ಗಜೇಷು ಸರ್ವಶೋ ವಿದ್ರಾಪ್ಯಮಾಣೇಷ್ವಖಿಲೇಷು ರಾಜಸು ।

ಪ್ರಾಗ್ಜ್ಯೋತಿಷೋ ಧಾರ್ತ್ತರಾಷ್ಟ್ರಾರ್ತ್ಥಿತಸ್ತಂ ಸಮಾಸದತ್ ಸುಪ್ರತೀಕೇನ ಧನ್ವೀ ॥ ೨೬.೧೭॥

 

ಭೀಮನಿಂದ ಎಲ್ಲಾ ಕಡೆ ಆನೆಗಳು ಕೊಲ್ಲಲ್ಪಡುತ್ತಿರಲು, ಎಲ್ಲಾ ರಾಜರೂ ಓಡುತ್ತಿರಲು, ದುರ್ಯೋಧನನಿಂದ ಬೇಡಿಕೊಳ್ಳಲ್ಪಟ್ಟ ಭಗದತ್ತನು ಬಿಲ್ಲನ್ನು ಹಿಡಿದು, ಸುಪ್ರತೀಕವನ್ನೇರಿ ಭೀಮಸೇನನನ್ನು ಎದುರುಗೊಂಡ.

 

ವಿಭೀಷಿತಾಃ ಸುಪ್ರತೀಕೇನ ಭೀಮಹಯಾ ನ ತಸ್ಥುಸ್ತದನು ಸ್ಮ ಸಾತ್ಯಕಿಃ ।

ಸೌಭದ್ರಮುಖ್ಯಾಶ್ಚ ಗಜಂ ತಮಭ್ಯಯುಶ್ಚಿಕ್ಷೇಪ ತೇಷಾಂ ಸ ರಥಾನಥಾಮ್ಬರೇ ॥ ೨೬.೧೮ ॥

 

ಸುಪ್ರತೀಕ ಆನೆಯಿಂದ ಭಯಗೊಂಡ ಭೀಮಸೇನನ ಕುದುರೆಗಳು ಒಂದು ಕಡೆ ನಿಲ್ಲಲಿಲ್ಲ. ಆಗ ಸಾತ್ಯಕಿ, ಅಭಿಮನ್ಯು, ಮೊದಲಾದವರು ಆ ಆನೆಯನ್ನು ಎದುರುಗೊಂಡರು. ಆ ಸುಪ್ರತೀಕ ಆನೆಯು ಅವರೆಲ್ಲರ ರಥಗಳನ್ನು ಆಕಾಶಕ್ಕೆಸೆಯಿತು.

 

ಶೈನೇಯಪೂರ್ವೇಷು ರಥೋಜ್ಝಿತೇಷು ಭೂಮಾವವಪ್ಲುತ್ಯ ಕಥಞ್ಚಿದೇವ ।

ಸ್ಥಿತೇಷು ಭೀಮೇ ಚ ವಿಭೀಷಿತಾಶ್ವಾನ್ ಸಂಯಮ್ಯ ಯುದ್ಧ್ಯತ್ಯಪಿ ಕೃಷ್ಣ ಐಕ್ಷತ್ ॥ ೨೬.೧೯ ॥

 

ಸಙ್ಕ್ಲೇಶಿತೋ ವೈಷ್ಣವಾಸ್ತ್ರಂ ಪ್ರಮುಞ್ಚೇತ್ ಪ್ರಾಗ್ಜ್ಯೋತಿಷೋ ಭೀಮಸೇನೇ ತತೋSಹಮ್ ।

ಯಾಮ್ಯರ್ಜ್ಜುನೇನೈವ ತದಸ್ತ್ರಮಾತ್ಮನಃ ಸ್ವೀಕರ್ತ್ತುಮನ್ಯೇನ ವರಾದಧಾರ್ಯ್ಯಮ್ ॥ ೨೬.೨೦ ॥

 

ಹೀಗೆ ಸಾತ್ಯಕಿ ಮೊದಲಾದವರೆಲ್ಲಾ ರಥರಹಿತರಾಗಿ, ಭೂಮಿಗೆ ಹಾರಿ, ಪ್ರಾಯಾಸದಿಂದಿರುತ್ತಿರಲು,  ಭೀಮಸೇನನು ಹೆದರಿದ ಕುದುರೆಗಳನ್ನು ನಿಯಮಿಸಿ ಮತ್ತೆ ಯುದ್ಧರಂಗಕ್ಕೆ ಬಂದು ಯುದ್ಧ ಮಾಡುತ್ತಿರಲು, ಕೃಷ್ಣಪರಮಾತ್ಮನು ಹೀಗೆ ಯೋಚನೆ ಮಾಡಿದ-

‘ಭಗದತ್ತನು ಪೀಡಿಸಲ್ಪಟ್ಟವನಾಗಿ ಭೀಮಸೇನನಲ್ಲಿ ನಾರಾಯಣಾಸ್ತ್ರವನ್ನು ಬಿಡಬಹುದು. ಆ ಕಾರಣದಿಂದ ನನ್ನ ಅಸ್ತ್ರವನ್ನು ನಾನೇ ಸ್ವೀಕರಿಸಲು ನಾನು ಅರ್ಜುನನಿಂದ ಕೂಡಿಕೊಂಡು, ಅಲ್ಲಿಗೆ ಹೋಗುತ್ತೇನೆ. ಆ ಅಸ್ತ್ರವನ್ನು ಇನ್ನೊಬ್ಬರು ಸ್ವೀಕರಿಸಲು  ಅಶಕ್ಯರು’ ಎಂದು  ಶ್ರೀಕೃಷ್ಣ  ಸಂಕಲ್ಪ ಮಾಡಿದ.

 

ಇತಿ ಸ್ಮ ಸಞ್ಚಿನ್ತ್ಯ ಸಹಾರ್ಜ್ಜುನೇನ ತತ್ರಾSಯಯಾವಥ ಪಾರ್ತ್ಥಂ ತ್ರಿಗರ್ತ್ತಾಃ ।

ನ್ಯವಾರಯಂಸ್ತ್ವಾಷ್ಟ್ರಮಸ್ತ್ರಂ ಸ ತೇಷು ವ್ಯವಾಸೃಜನ್ಮೋಹನಾಯಾSಶು ವೀರಃ  ॥ ೨೬.೨೧ ॥

 

ಈರೀತಿಯಾಗಿ ಯೋಚನೆ ಮಾಡಿದ ಕೃಷ್ಣನು ಅರ್ಜುನನೊಡಗೂಡಿ ಭಗದತ್ತನಿದ್ದಲ್ಲಿಗೆ ಬಂದನು.  ಅಷ್ಟರಲ್ಲೇ  ಪಾರ್ಥನನ್ನು ತ್ರಿಗರ್ತದವರು ತಡೆದರು. ಆಗ ಅವನು ಅವರಲ್ಲಿ ತ್ವಷ್ಟ್ರು ದೇವತಾಕವಾದ ಮೊಹನಾಸ್ತ್ರವನ್ನು ಬಿಟ್ಟ,

 

ತದಸ್ತ್ರವೀರ್ಯೇಣ ವಿಮೋಹಿತಾಸ್ತೇ ಪರಸ್ಪರಂ ಕೃಷ್ಣಪಾರ್ತ್ಥಾವಿತಿ ಸ್ಮ ।

ಜಘ್ನುಸ್ತದಾ ವಾಸವಿಸ್ತಾನ್ ವಿಸೃಜ್ಯ ಪ್ರಾಗ್ಜ್ಯೋತಿಷಂ ಹನ್ತುಮಿಹಾಭ್ಯಗಾದ್ ದ್ರುತಮ್ ॥ ೨೬.೨೨ ॥

 

ಆ ಸಮ್ಮೊಹನಾಸ್ತ್ರದ ಬಲದಿಂದ ಮೋಹಗೊಂಡು ಬುದ್ಧಿ ಕೆಡಿಸಿಕೊಂಡ ಆ ತ್ರಿಗರ್ತದವರು ಪರಸ್ಪರರನ್ನು ‘ಇವನು ಕೃಷ್ಣ, ಇವನು ಅರ್ಜುನ’ ಎಂದು ತಿಳಿದುಕೊಂಡು ಹೊಡೆದುಕೊಂಡರು. ಆಗ ಅರ್ಜುನನು ಅವರನ್ನು ಬಿಟ್ಟು ಭಗದತ್ತನನ್ನು ಕೊಲ್ಲಲು ಎದುರಾಗಿ ಬಂದನು.

[ಮಹಾಭಾರತ: ‘ಅಯಮರ್ಜುನೋSಯಂ ಗೋವಿನ್ದ ಇಮೌ ಪಾಂಡವಯಾದವೌ । ಇತಿ ಬ್ರುವಾಣಾಃ ಸಮ್ಮೂಢಾ ಜಘ್ನುರನ್ಯೋನ್ಯಮಾಹವೇ (ದ್ರೋಣಪರ್ವ ೧೯.೧೩) ಸಂಶಪ್ತಕರು  ಪರಸ್ಪರ ಹೊಡೆದಾಡಿಕೊಂಡು ಸಾಯುತ್ತಿದ್ದರು]

No comments:

Post a Comment