ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 5, 2023

Mahabharata Tatparya Nirnaya Kannada 25-136-144

 

ನಿಪಾತಿತೇSಸ್ಮಿನ್ ಮಾರುತಿರ್ದ್ದ್ರೋಣಮುಖ್ಯಾನ್ ವಿದ್ರಾಪ್ಯ ತತ್ರಾSಗಮದಾಶು ತೇsಪಿ ।

ತದಾSSಯುಧಾನಿ ಪ್ರಣಿಧಾಯ ವೀರಾಃ ಪಾರ್ತ್ಥಾಃ ಪರೇ ಚೈನಮುಪಾಸದನ್ ಸ್ಮ ॥ ೨೫.೧೩೬॥

 

ಭೀಷ್ಮರು ಬೀಳಲು ಭೀಮನು ದ್ರೋಣಾಚಾರ್ಯರು ಹಾಗೂ ಇತರ ಪ್ರಧಾನರನ್ನು ಓಡಿಸಿ, ಭೀಷ್ಮ ಬಿದ್ದ ಸ್ಥಳಕ್ಕೆ ಬಂದನು. ಆಗ ದ್ರೋಣಾದಿಗಳೂ ಕೂಡಾ ತಮ್ಮ ಆಯುಧವನ್ನು ಅಲ್ಲಿಯೇ ಇಟ್ಟು ಭೀಷ್ಮನ ಬಳಿ ಬಂದರು. ವೀರರಾದ ಕೌರವ-ಪಾಂಡವರೆಲ್ಲರೂ  ಭೀಷ್ಮಾಚಾರ್ಯರ ಬಳಿ ಸೇರಿದರು.

 

ಪ್ರಣಮ್ಯ ತಂ ತದ್ವಚನಾತ್ ಸಮೀಯುಸ್ತಸ್ಮಿನ್ ದಿನೇ ಶಿಬಿರಾಣ್ಯೇವ ಸರ್ವೇ ।

ಪರೇ ದಿನೇ ಸರ್ವ ಏವೋಪತಸ್ಥುರ್ಭೀಷ್ಮಂ ಯದೂನಾಮ್ಪತಿನಾ ಸಹೈವ ॥ ೨೫.೧೩೭॥

 

ಭೀಷ್ಮಾಚಾರ್ಯರನ್ನು ನಮಸ್ಕರಿಸಿ, ಅವರ ಮಾತಿನಂತೆ ಆ ದಿನದ ಯುದ್ಧವನ್ನು ನಿಲ್ಲಿಸಿದರು. ಎಲ್ಲರೂ ಶಿಬಿರಕ್ಕೆ ತೆರಳಿದರು.(ಹತ್ತನೇ ದಿನದ ಯುದ್ಧ ಮುಗಿಯಿತು) ಮಾರನೇ ದಿನ ಬೆಳಿಗ್ಗೆ ಎಲ್ಲರೂ ಭೀಷ್ಮಾಚಾರ್ಯರ ಬಳಿ ಬಂದರು. ಆನಂತರ ಯುದ್ಧಕ್ಕೆಂದು ತೆರಳಿದರು.

 

ಸ ಪೂರ್ವದಿವಸೇ ಪಾರ್ತ್ಥದತ್ತಬಾಣೋಪಬರ್ಹಣಃ ।

ತದಾSಪಿ ತೃಟ್-ಪರೀತಾತ್ಮಾ ಯೋಗ್ಯಂ ಪೇಯಮಯಾಚತ ॥ ೨೫.೧೩೮॥

 

ಧಾರ್ತ್ತರಾಷ್ಟ್ರೈರವಿಜ್ಞಾತಂ ತದಭಿಜ್ಞಾಯ ವಾಸವಿಃ ।

ವಾರುಣಾಸ್ತ್ರೇಣ ಭಿತ್ತ್ವಾ ಸ ಭೂಮಿಂ ವಾರಿ ಸುಗನ್ಧಿ ಚ ॥ ೨೫.೧೩೯॥

 

 

ಊರ್ಧ್ವಧಾರಮದಾದಾಸ್ಯೇ ತರ್ಪ್ಪಿತೋSನೇನ ಸೋSವದತ್ ।

ಯಾದೃಶ್ಯಸ್ತ್ರಜ್ಞತಾ ಪಾರ್ತ್ಥೇ ದೃಷ್ಟಾSತ್ರ ಕುರುನನ್ದನಾಃ ॥ ೨೫.೧೪೦॥

 

ಯಾದೃಗ್ ಬಹ್ವೋರ್ಬಲಂ ಭೀಮೇ ಸಂಯುಗೇಷು ಪುನಃ ಪುನಃ ।

ಯಾದೃಶಂ ಚೈವ ಮಾಹಾತ್ಮ್ಯಾಮನನ್ತಮಜರಂ ಹರೇಃ ॥ ೨೫.೧೪೧॥

 

ವಿಜ್ಞಾತಂ ಸರ್ವಲೋಕಸ್ಯ ಸಭಾಯಾಂ ದೃಷ್ಟಮೇವ ಚ ।

ಉಪಾರಮತ ತದ್ ಯುದ್ಧಂ ಸುಖಿನಃ ಸನ್ತು ಭೂಮಿಪಾಃ  ॥ ೨೫.೧೪೨॥

 

ಯಥೋಚಿತವಿಭಕ್ತಾಂ ಚ ಭುಙ್ಧ್ವಂ ಭೂಪಾಃ ಸದಾ ಭುವಮ್ ।

ಇತ್ಯುಕ್ತಃ ಪ್ರಯಯೌ ತೂಷ್ಣೀಂ ಧಾರ್ತ್ತರಾಷ್ಟ್ರಃ ಸ್ವಕಂ ಗೃಹಮ್ ॥ ೨೫.೧೪೩॥

 

ಬಿದ್ದ ದಿನ ಭೀಷ್ಮರು ಅರ್ಜುನನಿಂದ ಕೊಡಲ್ಪಟ್ಟ ಬಾಣಗಳ ತಲೆದಿಂಬುಳ್ಳವರಾದರು. ಮರುದಿನ  ಬಾಯಾರಿಕೆಯಿಂದ ಬಳಲಿದವರಾಗಿ, ತನಗೆ ಯೋಗ್ಯವಾದ ನೀರು ಬೇಕು ಎಂದು ಬೇಡಿದ ಅವರ ಮಾತನ್ನು ಧೃತರಾಷ್ಟ್ರನ ಮಕ್ಕಳು ತಿಳಿಯದೇ ಇದ್ದಾಗ, ಅದನ್ನು ತಿಳಿದ ಅರ್ಜುನನು, ವರುಣಾಸ್ತ್ರದಿಂದ ಭೂಮಿಯನ್ನು ಸೀಳಿ, ಸುಗಂಧವಾಗಿರುವ, ಊರ್ಧ್ವಮುಖಿಯಾಗಿ ಚಿಮ್ಮುತ್ತಿರುವ ನೀರನ್ನು ಅವರ ಬಾಯಿಗೆ ಬಂದು ಬೀಳುವಂತೆ ವ್ಯವಸ್ಥೆ ಮಾಡಿಕೊಟ್ಟನು. ಅದರಿಂದ ಸಂತುಷ್ಟರಾದ ಭೀಷ್ಮಾಚಾರ್ಯರು ಹೀಗೆ ಹೇಳಿದರು:  ‘ಕೌರವರೇ, ನೋಡಿದಿರಲ್ಲವೇ ಈ ಪಾರ್ಥನ ಅಸ್ತ್ರದ ಪರಾಕ್ರಮವನ್ನು, ಭೀಮನ ಪರಾಕ್ರಮವೇನು ಎನ್ನುವುದನ್ನೂ ನೀವು ನೋಡಿದಿರಿ. ಒಂದು ಬಾರಿ ಅಲ್ಲಾ, ಪುನಃಪುನಃ, ಮುಪ್ಪಿರದ, ನಿರಂತರವಾಗಿರುವ, ಎಣೆಯಿರದ  ಪರಮಾತ್ಮನ ಸಾಮರ್ಥ್ಯವನ್ನೂ  ನೋಡಿದಿರಿ. ಇದು ಎಲ್ಲರಿಗೂ ಗೊತ್ತು. ಸಭೆಯಲ್ಲಿ ನೀವೂ ವಿಶ್ವರೂಪವನ್ನು ನೋಡಿದ್ದೀರಿ. ಆ ಕಾರಣದಿಂದ ಯುದ್ಧವನ್ನು ಇಲ್ಲಿಗೇ ನಿಲ್ಲಿಸಿಬಿಡಿ. ಎಲ್ಲಾ ರಾಜರೂ ಸುಖವಾಗಿರಲಿ. ಎಲೈ ರಾಜರೇ, ನಿಮ್ಮನಿಮ್ಮ ಯೋಗ್ಯತೆಗೆ ಅನುಕೂಲವಾಗಿ ಹಂಚಿಕೊಂಡ ಭೂಮಿಯನ್ನು ಅನುಭವಿಸಿರಿ’.  ಈರೀತಿಯಾಗಿ ಭೀಷ್ಮಾಚಾರ್ಯರಿಂದ ಹೇಳಲ್ಪಟ್ಟ ದುರ್ಯೋಧನನು ಏನೂ ಮಾತನಾಡದೇ ತನ್ನ ಮನೆಯನ್ನು ಕುರಿತು ತೆರಳಿದನು.

 

ವ್ಯಾಸದತ್ತೋರುವಿಜ್ಞಾನಾತ್ ಸಞ್ಜಯಾದಖಿಲಂ ಪಿತಾ ।

ಶ್ರುತ್ವಾ ತದಾ ಪರ್ಯ್ಯತಪ್ಯತ್ ಪಾಣ್ಡವಾಃ ಕೃಷ್ಣದೇವತಾಃ ।

ಮುಮುದುಃ ಶಿಬಿರಂ ಪ್ರಾಪ್ಯ ಸರ್ವೇ ಕೃಷ್ಣಾನುಮೋದಿತಾಃ ॥ ೨೫.೧೪೪॥

 

ವೇದವ್ಯಾಸರು ಕೊಟ್ಟ ಉತ್ಕೃಷ್ಟಜ್ಞಾನದಿಂದಾಗಿ ವಿಶಿಷ್ಟಜ್ಞಾನವನ್ನು ಪಡೆದ ಸಂಜಯನಿಂದ ಧೃತರಾಷ್ಟ್ರನು ಯುದ್ಧವೃತ್ತಾಂತವೆಲ್ಲವನ್ನೂ ಕೇಳಿಸಿಕೊಂಡು ಸಂಕಟಗೊಂಡ. ಇತ್ತ ಪಾಂಡವರು ಕೃಷ್ಣನನ್ನೇ ದೇವತೆ ಎಂದು ನಂಬಿದವರಾಗಿ, ಶಿಬಿರಕ್ಕೆ ತೆರಳಿ ಕೃಷ್ಣನಿಂದ ಶಿಕ್ಷಿತರಾಗಿ ಬಹಳ ಸಂತೋಷಪಟ್ಟರು.

 

[ಆದಿತಃ ಶ್ಲೋಕಾಃ :  ೩೭೮೬+೧೪೪=೩೯೩೦]

॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭೀಷ್ಮಪಾತೋ ನಾಮ ಪಞ್ಚವಿಂಶೋsಧ್ಯಾಯಃ

 

*********

No comments:

Post a Comment