ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 19, 2023

Mahabharata Tatparya Nirnaya Kannada 26-49-58

 

ತಸ್ಮಿನ್ ಹತೇ ಶತ್ರುರವಂ ನಿಶಮ್ಯ ಹರ್ಷೋದ್ಭವಂ ಮಾರುತಿರುಗ್ರವಿಕ್ರಮಃ ।

ವಿಜಿತ್ಯ ಸರ್ವಾನಪಿ ಸೈನ್ಧವಾದೀನ್ ಯುಧಿಷ್ಠಿರಸ್ಯಾನುಮತೇ ನ್ಯಷೀದತ್  ॥೨೬.೪೯॥

 

ಅಭಿಮನ್ಯುವು ಕೊಲ್ಲಲ್ಪಡಲು ಹರ್ಷದಿಂದ ಉಂಟಾದ ಶತ್ರುಗಳ ಧ್ವನಿಯನ್ನು ಕೇಳಿ, ಎಣೆಯಿರದ ಪರಾಕ್ರಮವುಳ್ಳ ಭೀಮಸೇನನು ಜಯದ್ರಥ ಮೊದಲಾದ ಎಲ್ಲರನ್ನೂ ಗೆದ್ದು, ಯುಧಿಷ್ಠಿರನ ಅನುಮತಿಯಿಂದಲೇ ಅವನ ಸಮೀಪದಲ್ಲಿ ನಿಂತ.

 

ವ್ಯಾಸಸ್ತದಾ ತಾನಮಿತಾತ್ಮವೈಭವೋ  ಯುಧಿಷ್ಠಿರಾದೀನ್ ಗ್ಲಪಿತಾನಭೋಧಯತ್ ।

ವಿಜಿತ್ಯ ಸಂಶಪ್ತಕಪೂಗಮುಗ್ರೋ ನಿಶಾಗಮೇ ವಾಸವಿರಾಪ ಸಾಚ್ಯುತಃ ॥೨೬.೫೦॥

 

ಆಗ ಎಣೆಯಿರದ ಆತ್ಮ ವೈಭವವುಳ್ಳ, ಸುಖ ಮೊದಲಾದ ಗುಣಗಳುಳ್ಳ ವೇದವ್ಯಾಸರು, ಅಭಿಮನ್ಯುವಿನ ಸಾವಿನಿಂದ ನೊಂದ ಯುಧಿಷ್ಠಿರ ಮೊದಲಾದವರಿಗೆ ಬೋಧಿಸಿ ಅವರ ದುಃಖವನ್ನು ಶಮನಗೊಳಿಸಿದರು. ಇತ್ತ ಸಂಶಪ್ತಕರ ಸಮೂಹವನ್ನು ಗೆದ್ದು, ರಾತ್ರಿಯಾಗುತ್ತಿರಲು ಕೃಷ್ಣನಿಂದೊಡಗೂಡಿದ ಅರ್ಜುನನು ಶಿಬಿರಕ್ಕೆ ಹಿಂತಿರುಗಿದ. (ಇಲ್ಲಿಗೆ ಹದಿಮೂರನೇ ದಿನದ ಯುದ್ಧ ಮುಕ್ತಾಯವಾಯಿತು).

 

ನಿಶಮ್ಯ ಪುತ್ರಸ್ಯ ವಧಂ ಭೃಶಾರ್ತ್ತಃ ಪ್ರತಿಶ್ರವಂ ಸೋSಥ ಚಕಾರ ವೀರಃ ।

ಜಯದ್ರಥಸ್ಯೈವ ವಧೇ ನಿಶಾಯಾಂ ಸ್ವಪ್ನೇSನಯತ್ ತಂ ಗಿರಿಶಾನ್ತಿಕಂ ಹರಿಃ ॥೨೬.೫೧॥

 

ಮಗನಾದ ಅಭಿಮನ್ಯುವಿನ ಸಾವನ್ನು ಕೇಳಿ ಸಂಕಟಗೊಂಡ ಅರ್ಜುನನು ಜಯದ್ರಥನ ಸಂಹಾರದಲ್ಲಿ ಪ್ರತಿಜ್ಞೆಮಾಡಿದನು. (ನಾಳೆ ಸಂಜೆಯೊಳಗೆ ಜಯದ್ರಥನನ್ನು ಕೊಲ್ಲುತ್ತೇನೆ, ಇಲ್ಲದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ ಎನ್ನುವ ಪ್ರತಿಜ್ಞೆ). ಶ್ರೀಕೃಷ್ಣ ಪರಮಾತ್ಮನು ರಾತ್ರಿಯಾಗಲು ಕನಸಿನಲ್ಲಿ ಅರ್ಜುನನನ್ನು ರುದ್ರನ ಸಮೀಪ ಕೊಂಡೊಯ್ದ.

 

ಸ್ವಯಮೇವಾಖಿಲಜಗದ್ರಕ್ಷಾದ್ಯಮಿತಶಕ್ತಿಮಾನ್ ।

ಅಪ್ಯಚ್ಯುತೋ ಗುರುದ್ವಾರಾ ಪ್ರಸಾದಕೃದಹಂ ತ್ವಿತಿ ॥೨೬.೫೨॥

 

ಜ್ಞಾಪಯನ್ ಫಲ್ಗುನಸ್ಯಾಸ್ತ್ರಗುರುಂ ಗಿರಿಶಮಞ್ಜಸಾ ।

ಪ್ರಾಪಯಿತ್ವೈನಮೇವೈತತ್ಪ್ರಸಾದಾದಸ್ತ್ರಮುದ್ಬಣಮ್ ।

ಚಕ್ರೇ ತದರ್ಥಮೇವಾಸ್ಯ ರಕ್ಷಾಂ ಚಕ್ರೇ ತದಾತ್ಮಿಕಾಮ್ ॥೨೬.೫೩॥

 

ತಾನೇ ಎಲ್ಲಾ ಜಗತ್ತಿನ ರಕ್ಷಣೆ ಮೊದಲಾದವುಗಳಲ್ಲಿ ಎಣೆಯಿರದ ಶಕ್ತಿಯುಳ್ಳವನಾದರೂ, ಶ್ರೀಕೃಷ್ಣನು ‘ಸ್ವರೂಪಯೋಗ್ಯ ಗುರುಗಳ ಮೂಲಕವೇ ಅನುಗ್ರಹವನ್ನು ಮಾಡುತ್ತೇನೆ’ ಎಂದು ಜಗತ್ತಿಗೆ ತಿಳಿಸುತ್ತಾ, ಅರ್ಜುನನಿಗೆ ಅಸ್ತ್ರಾದಿಗಳಿಗೆ ಗುರುವಾಗಿರುವ ರುದ್ರದೇವರನ್ನು ಕುರಿತು ಹೊಂದಿಸಿ, ಅವನ ಅನುಗ್ರಹದಿಂದ ಉಗ್ರವಾಗಿರುವ ಪಾಶುಪತಾಸ್ತ್ರವನ್ನು ಮತ್ತೆ ಹೊಂದಿಸಿ, ಅವನಿಗಾಗಿಯೇ ರುದ್ರ ದೇವರ ರಕ್ಷಣೆಯನ್ನು ಮಾಡಿದನು.

[ತಾತ್ಪರ್ಯ: ರಾತ್ರಿ ಮಲಗಿದಾಗ ಅರ್ಜುನನನ್ನು ಅವನ ಕನಸಿನಲ್ಲಿ ಕೃಷ್ಣ ರುದ್ರದೇವರ ಬಳಿ ಕೊಂಡೊಯ್ದು,  ಶಿವರಕ್ಷೆ ಅರ್ಜುನನ ಮೇಲೆ ಇರುವಂತೆ ಮಾಡಿದ. ಸ್ವರೂಪ ಗುರುಗಳ ಮೂಲಕವೇ ಪರಮಾತ್ಮ ಅನುಗ್ರಹವನ್ನು ಮಾಡುತ್ತಾನೆ. ಹಾಗಾಗಿ ಇಂದ್ರನ ಸ್ವರೂಪ ಗುರುವಾದ  ರುದ್ರದೇವರ ಮುಖೇನ ಕೃಷ್ಣ ಈ ಕೆಲಸವನ್ನು ಮಾಡಿಸಿದ.]

  

ಸಾನ್ತ್ವಯಿತ್ವಾ ಸುಭದ್ರಾಂ ಚ ಗತ್ವೋಪಪ್ಲಾವ್ಯಮಚ್ಯುತಃ ।

ಯೋಜಯಿತ್ವಾ ರಥಂ ಪ್ರಾತಃ ಸಾರ್ಜ್ಜುನೋ ಯುದ್ಧಮಭ್ಯಯಾತ್ ॥೨೬.೫೪॥

 

ಶ್ರೀಕೃಷ್ಣನು ಉಪಪ್ಲಾವ್ಯಕ್ಕೆ ಹೋಗಿ, ಸುಭದ್ರೆಯನ್ನು ಸಾಂತ್ವನಗೊಳಿಸಿ, ಬೆಳಿಗ್ಗೆ ರಥವನ್ನು ಸಿದ್ಧಗೊಳಿಸಿ, ಅರ್ಜುನನೊಡಗೂಡಿ ಯುದ್ಧಕ್ಕೆಂದು ತೆರಳಿದ.

 

ಶ್ರುತ್ವಾ ಪ್ರತಿಜ್ಞಾಂ ಪುರುಹೂತಸೂನೋರ್ದ್ದುರ್ಯ್ಯೋಧನೇನಾರ್ತ್ಥಿತಃ ಸಿನ್ಧುರಾಜಮ್ ।

ತ್ರಾತಾಸ್ಮ್ಯಹಂ ಸರ್ವಥೇತಿ ಪ್ರತಿಜ್ಞಾಂ ಕೃತ್ವಾ ದ್ರೋಣೋ ವ್ಯೂಹಮಭೇದ್ಯಮಾತನೋತ್ ॥೨೬.೫೫॥

 

ಅರ್ಜುನನ ಪ್ರತಿಜ್ಞೆಯನ್ನು ಕೇಳಿ, ದುರ್ಯೋಧನನಿಂದ ಪ್ರಾರ್ಥಿಸಲ್ಪಟ್ಟ ದ್ರೋಣಾಚಾರ್ಯರು- ‘ಜಯದ್ರಥನನ್ನು ಎಲ್ಲಾ ರೀತಿಯಿಂದ ರಕ್ಷಿಸುತ್ತೇನೆ’ ಎಂದು ಪ್ರತಿಜ್ಞೆಯನ್ನು ಮಾಡಿ, ಭೇದಿಸಲಾಗದ ಯುದ್ಧ ವ್ಯೂಹವನ್ನು ರಚಿಸಿದರು.

 

ಸ ದಿವ್ಯಮಗ್ರ್ಯಂ ಶಕಟಾಬ್ಜಚಕ್ರಂ ಕೃತ್ವಾ ಸ್ವಯಂ ವ್ಯೂಹಮುಖೇ ವ್ಯವಸ್ಥಿತಃ ।

ಪೃಷ್ಠೇ ಕರ್ಣ್ಣದ್ರೌಣಿಕೃಪೈಃ ಸಶಲ್ಯೈರ್ಜ್ಜಯದ್ರಥಂ ಗುಪ್ತಮಧಾತ್ ಪರೈಶ್ಚ ॥೨೬.೫೬॥

 

ದ್ರೋಣಾಚಾರ್ಯರು ದಿವ್ಯವಾದ ಶಕಟಾಬ್ಜಚಕ್ರವನ್ನು (ಹೊರಗೆ ಬಂಡಿಯ ಆಕಾರ, ಅದರ ಒಳಗೆ ಪದ್ಮಾಕಾರದ ವ್ಯೂಹ ನಂತರ ಮಧ್ಯದಲ್ಲಿ ಚಕ್ರಾಕಾರದ ವ್ಯೂಹ) ಮಾಡಿ, ತಾನೇ ವ್ಯೂಹದ ಮುಂಭಾಗದಲ್ಲಿ ನಿಂತರು. ಹಿಂಭಾಗದಲ್ಲಿ ಕರ್ಣ, ಅಶ್ವತ್ಥಾಮ, ಕೃಪಾ, ಶಲ್ಯ, ಮೊದಲಾದವರಿಂದ ಜಯದ್ರಥನನ್ನು ರಕ್ಷಿತನನ್ನಾಗಿ ಮಾಡಿದರು.

 

ಅಥಾರ್ಜ್ಜುನೋ ದಿವ್ಯರಥೋಪರಿಸ್ಥಿತಃ ಸುರಕ್ಷಿತಃ ಕೇಶವೇನಾವ್ಯಯೇನ ।

ವಿಜಿತ್ಯ ದುರ್ಮ್ಮರ್ಷಣಮಗ್ರತೋSಭ್ಯಯಾದ್ ದ್ರೋಣಂ ಸುಧನ್ವಾ ಗುರುಮುಗ್ರಪೌರುಷಃ ॥೨೬.೫೭॥

 

ತದನಂತರ ಅಲೌಕಿಕವಾದ ರಥದಮೇಲೆ ಕುಳಿತ, ನಾಶವಿರದ ಶ್ರೀಕೃಷ್ಣನಿಂದ ರಕ್ಷಿತನಾದ ಧನುರ್ಧಾರಿ ಅರ್ಜುನನು ಮೊದಲು ಎದುರಾದ ದುರ್ಯೋಧನನ ತಮ್ಮ ದುರ್ಮರ್ಷಣನನ್ನು ಸುಲಭವಾಗಿ ಗೆದ್ದು,  ಉಗ್ರಪೌರುಷವುಳ್ಳವನಾಗಿ ದ್ರೋಣಾಚಾರ್ಯರನ್ನು ಎದುರುಗೊಂಡ.

 

ಪ್ರದಕ್ಷಿಣೀಕೃತ್ಯ ತಮಾಶ್ವಗಾತ್ ತತಃ ಕಾಲಾತ್ಯಯಂ ತ್ವೇವ ವಿಶಙ್ಕಮಾನಃ ।

ರಥಂ ಮನೋವೇಗಮಥಾನಯದ್ಧರಿರ್ಯ್ಯಥಾ ಶರಾಃ ಪೇತುರಮುಷ್ಯ ಪೃಷ್ಠತಃ ॥೨೬.೫೮॥

 

(ಜಯದ್ರಥನ ಸಂಹಾರಕ್ಕೆ ಸಮಯ ಸಾಲದು ಎಂದು) ಅರ್ಜುನನು  ದ್ರೋಣಾಚಾರ್ಯರೊಂದಿಗೆ ಯುದ್ಧ ಮಾಡದೇ,  ಕೂಡಲೇ ಅವರಿಗೆ (ತನ್ನ ರಥದಲ್ಲೇ) ಪ್ರದಕ್ಷಿಣೆ ಮಾಡಿ ಮುಂದೆ ಹೋದನು. ಆಗ ಶ್ರೀಕೃಷ್ಣ ಪರಮಾತ್ಮನು ಮನೋವೇಗದಲ್ಲಿ ರಥವನ್ನು ಕೊಂಡೊಯ್ದ. ಇದರಿಂದ ಅರ್ಜುನನನ್ನು ಗುರಿಯಾಗಿ ಬಿಟ್ಟ ಬಾಣಗಳು ಅವನನ್ನು ತಲುಪದೇ ಅವನ ಹಿಂದೆ ಬೀಳುವಂತಾಯಿತು.

[‘ಗುರುರ್ಭವಾನ್ ನ ಮೇ ಶತ್ರುಃ  ಶಿಷ್ಯಃ ಪುತ್ರಸಮೋSಸ್ಮಿ ತೇ’ (ದ್ರೋಣಪರ್ವ ೯೧.೩೬) ‘ನೀವು ನಮ್ಮ ಗುರುಗಳು, ನನ್ನ ಶತ್ರು ಅಲ್ಲ, ನಾನು ನಿಮ್ಮ ಶಿಷ್ಯ. ಶಿಷ್ಯ ಮಗನ ಸಮಾನನಲ್ಲವೇ?  ಹೀಗಾಗಿ ನನ್ನನ್ನು ತಡೆಯಬೇಡಿ’ ಎಂದು ಹೇಳಿ ಅರ್ಜುನ ಮುಂದುವರಿದ.

ಮಹಾಭಾರತ ಶ್ರೀಕೃಷ್ಣನ ರಥದ ವೇಗವನ್ನು ಹೀಗೆ ವಿವರಿಸುತ್ತದೆ: ‘ರಥಸ್ಥಿತೋSಗ್ರತಃ ಕ್ರೋಶಂ ಯಾನಸ್ಯತ್ಯರ್ಜುನಃ ಶರಾನ್ । ರಥೇ ಕ್ರೋಶಮತಿಕ್ರಾನ್ತೇ ತಸ್ಯ ತೇ ಘ್ನನ್ತಿ ಶಾತ್ರವಾನ್’ (೯೯.೧) ಅರ್ಜುನನು ತನ್ನ ಶರಗಳನ್ನು ಕ್ರೋಶಮಾತ್ರ ದೂರ(ಮೈಲಿ ದೂರ)  ಪ್ರಯೋಗಿಸಲು, ಅವುಗಳು ಅವನ ರಥವು ಆ ಕ್ರೋಶ ದೂರವನ್ನು ದಾಟಿ ಬರುವಷ್ಟರಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದವು. (ಅಂದರೆ ರಥದ ವೇಗ ಬಾಣದ ವೇಗಕ್ಕಿಂತ ಹೆಚ್ಚಾಗಿತ್ತು)]

No comments:

Post a Comment