ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, February 20, 2023

Mahabharata Tatparya Nirnaya Kannada 26-89-100

 

ತದಾSSಸದತ್ ಕೃತವರ್ಮ್ಮಾ ರಥೇನ ಸೇನಾಂ ಪಾಣ್ಡೂನಾಂ ಶರವರ್ಷಂ ಪ್ರಮುಞ್ಚನ್ ।

ದದೌ ವರಂ ತಸ್ಯ ಹಿ ಪೂರ್ವಮಚ್ಯುತಃ ಪ್ರೀತಃ ಸ್ತುತ್ಯಾ ಸರ್ವಜಯಂ ಮೂಹೂರ್ತ್ತೇ ॥ ೨೬.೮೯ ॥

 

ಇನ್ನೊಂದು ಕಡೆಯಿಂದ ಕೃತವರ್ಮನು ರಥವನ್ನೇರಿ, ಬಾಣಗಳನ್ನು ಬಿಡುತ್ತಾ ಪಾಂಡವರ ಸೇನೆಯ ಬಳಿಗೆ ಬಂದನು. ಹಿಂದೆ ಶ್ರೀಕೃಷ್ಣ ಪರಮಾತ್ಮನು ಈ ಕೃತವರ್ಮನ ಸ್ತೋತ್ರದಿಂದ ಪ್ರೀತನಾಗಿ ಒಂದು   ಮುಹೂರ್ತ ಕಾಲದಲ್ಲಿ  ಎಲ್ಲರನ್ನೂ ಗೆಲ್ಲಬಲ್ಲ  ವರವನ್ನು ಅವನಿಗೆ ಕೊಟ್ಟಿರುವನು.

 

ಸ ತೇನ ಪಾಞ್ಚಾಲಗಣಾನ್ ವಿಜಿಗ್ಯೇ ಯಮೌ ಚ ಭೀಮಸ್ಯ ಪುರೋSಥ ತಂ ಚ ।

ವಿವ್ಯಾಧ ಬಾಣೇನ ಸ ವಾಸುದೇವವರಂ ವಿಜಾನನ್ ನ ತದಾ ಸಮಭ್ಯಯಾತ್ ॥ ೨೬.೯೦ ॥

 

ಕೃತವರ್ಮನು ವರಬಲದಿಂದ ಧೃಷ್ಟದ್ಯುಮ್ನ ಮೊದಲಾದವರನ್ನು, ನಕುಲ-ಸಹದೇವರನ್ನೂ ಕೂಡಾ ಭೀಮಸೇನನ ಮುಂದೆಯೇ ಗೆದ್ದ ಮತ್ತು ಭೀಮಸೇನನನ್ನೂ ಕೂಡಾ ತನ್ನ ಬಾಣದಿಂದ ಹೊಡೆದ. ಆದರೆ ಭೀಮಸೇನನು ಕೃಷ್ಣನ ವರವನ್ನು ತಿಳಿದು, ಆ ಮುಹೂರ್ತದಲ್ಲಿ  ಕೃತವರ್ಮನನ್ನು ಎದುರಿಸಲಿಲ್ಲ.

[‘ಜಿತ್ವಾ ಪಾಣ್ಡುಸುತಾನ್ ಯುದ್ಧೇ ಭೀಮಸೇನಪುರೋಗಮಾನ್ । ಹಾರ್ದಿಕ್ಯಃ ಸಮರೇSತಿಷ್ಠದ್ ವಿಧೂಮ ಇವ ಪಾವಕಃ’ (ದ್ರೋಣಪರ್ವ ೧೧೪.೧೦೨)- ಭೀಮಸೇನನ ಮುಂದಾಳತ್ವದಲ್ಲಿದ್ದ ಪಾಂಡುಸುತರನ್ನು ಯುದ್ಧದಲ್ಲಿ ಗೆದ್ದ ಹಾರ್ದಿಕ್ಯನು ಧೂಮರಹಿತ ಬೆಂಕಿಯಂತೆ ಪ್ರಕಾಶಿಸಿದನು]

 

 

ವಿನೈವ ವೃಷ್ಣೀನ್ ವಿಜಯೇ ವರೋ  ಯದಮುಷ್ಯ ತೇನಾಸ್ಯ ಹಯಾನ್ ಸ ಸಾತ್ಯಕಿಃ ।

ನಿಹತ್ಯ ಬಾಣೈರತುದತ್ ಸ ಯಾನಮನ್ಯತ್ ಸಮಾಸ್ಥಾಯ ತತೋSಪಜಗ್ಮಿವಾನ್ ॥ ೨೬.೯೧ ॥

 

‘ಯಾದವರನ್ನು ಬಿಟ್ಟು ಎಲ್ಲರನ್ನೂ ಒಂದು ಮುಹೂರ್ತ ಗೆಲ್ಲಬಲ್ಲೆ’ ಎನ್ನುವ ವರ ಅದಾಗಿದ್ದುದರಿಂದ  ಯಾದವ ವೀರನಾದ ಸಾತ್ಯಕಿಯು ಕೃತವರ್ಮನನ್ನು ಎದುರಿಸಿ, ಅವನ ಕುದುರೆಗಳನ್ನು ಕೊಂದು, ಬಾಣಗಳಿಂದ ಹಿಂಸೆಗೊಳಿಸಿದ. ಆಗ ಕೃತವರ್ಮ ಇನ್ನೊಂದು ರಥವನ್ನೇರಿ ರಣಭೂಮಿಯಿಂದ ಪಲಾಯನ ಮಾಡಿದನು.

 

ತದಾ ಹರಿಃ ಪಾಞ್ಚಜನ್ಯಂ ಸುಘೋಷಮಾಪೂರಯಾಮಾಸ ಜಯೇSಭಿಯುದ್ಧ್ಯತಿ ।

ಕರ್ಣ್ಣಾದಿಭಿರ್ದ್ದ್ರೌಣಿಮುಖೈ ರಿಪೂಣಾಂ ಬಲಪ್ರಹಾಣಾಯ ಪರಃ ಪರೇಭ್ಯಃ ॥ ೨೬.೯೨ ॥

 

ಇತ್ತ ರಣಭೂಮಿಯ ಇನ್ನೊಂದು ಭಾಗದಲ್ಲಿ ಅರ್ಜುನನು ಅಶ್ವತ್ಥಾಮಾಚಾರ್ಯರೇ ಪ್ರಧಾನರಾಗಿರುವ,  ಕರ್ಣನೇ ಮೊದಲಾದವರಿಂದ ಯುದ್ಧಮಾಡುತ್ತಿರಲು, ಶ್ರೀಕೃಷ್ಣ ಪರಮಾತ್ಮನು ಶತ್ರುಗಳ ಬಲದ ನಾಶಕ್ಕಾಗಿ ಚೆನ್ನಾದ ಧ್ವನಿಯುಳ್ಳ ಪಾಂಚಜನ್ಯವನ್ನು ಮೊಳಗಿಸಿದನು. 

 

‘ಸ ಪಾಞ್ಚಜನ್ಯೋSಚ್ಯುತವಕ್ತ್ರವಾಯುನಾ ಭೃಶಂ ಸುಪೂರ್ಣ್ಣೋದರನಿಸ್ಸೃತಧ್ವನಿಃ ।

ಜಗದ್ ವಿರಿಞ್ಚೇಶಸುರೇನ್ದ್ರಪೂರ್ವಕಂ ಪ್ರಕಮ್ಪಯಾಮಾಸ ಯುಗಾತ್ಯಯೇ ಯಥಾ’ ॥ ೨೬.೯೩ ॥

 

ಶ್ರೀಕೃಷ್ಣನ ಮುಖದ ಗಾಳಿಯಿಂದ ಚೆನ್ನಾಗಿ ತನ್ನ ಒಡಲನ್ನು ತುಂಬಿಕೊಂಡ ಆ ಪಾಂಚಜನ್ಯದಿಂದ ಹೊರ ಹೊಮ್ಮಿದ ಧ್ವನಿಯು, ಪ್ರಳಯಕಾಲದಲ್ಲಿ ಹೇಗೋ ಹಾಗೇ, ಬ್ರಹ್ಮಾದಿಗಳನ್ನೊಳಗೊಂಡ ಜಗತ್ತನ್ನು ಅಲ್ಲಾಡುವಂತೆ ಮಾಡಿತು.

 

ಗಾಣ್ಡೀವಘೋಷೇ ಚ ತದಾSಭಿಭೂತೇ ಯುಧಿಷ್ಠಿರೋ ಭೀತಭೀತಸ್ತದೇತ್ಯ ।

ಶೈನೇಯಮೂಚೇ ಪರಸೈನ್ಯಮಗ್ನೇ ಪಾರ್ಥ್ಥೇ ಸ್ವಯಂ ಯುದ್ಧ್ಯತಿ ಕೇಶವಃ ಸ್ಮ  ॥ ೨೬.೯೪ ॥

 

ನ ಶ್ರೂಯತೇ ಗಾಣ್ಡಿವಸ್ಯಾದ್ಯ ಘೋಷಃ ಸಂಶ್ರೂಯತೇ ಪಾಞ್ಚಜನ್ಯಸ್ಯ ಘೋಷಃ ।

ತದ್ ಯಾಹಿ ಜಾನೀಹಿ ತಮದ್ಯ ಪಾರ್ತ್ಥಂ ಯದಿ ಸ್ಮ ಜೀವತ್ಯಸಹಾಯ ಏಷಃ ॥ ೨೬.೯೫ ॥

 

ಶ್ರೀಕೃಷ್ಣ ಪಾಂಚಜನ್ಯವನ್ನು ಊದಿದಾಗ ಜೊತೆಗೆ ಗಾಣ್ಡೀವ ಬಿಲ್ಲಿನ ಶಬ್ದವು ಕೇಳಿಸದೇ ಇರುತ್ತಿರಲು, ಭಯಗೊಂಡ ಯುಧಿಷ್ಠಿರನು ಸಾತ್ಯಕಿಯನ್ನು ಹೊಂದಿ- (ಅರ್ಜುನನಿಗೆ ಏನಾದರೂ ಆಪತ್ತು ಉಂಟಾಗಿದೆಯೋ ಏನೋ ಎನ್ನುವ ದುಗುಡದಿಂದ ಹೇಳುತ್ತಾನೆ:) ‘ಅರ್ಜುನನು ಕೌರವ ಸೇನೆಯಲ್ಲಿ ಮುಳುಗುತ್ತಿರಲು, ಶ್ರೀಕೃಷ್ಣನು ತಾನೇ ಯುದ್ಧ ಮಾಡುತ್ತಿರುವನೇ? ಗಾಣ್ಡೀವದ ಧ್ವನಿ ಈಗ ಕೇಳಿಸುತ್ತಿಲ್ಲ, ಕೇವಲ ಶಂಖದ ಧ್ವನಿ ಮಾತ್ರ ಕೇಳಿಸುತ್ತಿದೆ. ಅದರಿಂದ ನೀನು ಈಗಲೇ ತೆರಳು, ಆ ಅರ್ಜುನನನ್ನು ತಿಳಿ. ಸಹಾಯಕರಹಿತನಾಗಿ  ಅರ್ಜುನ ಬದುಕಿರುವನೋ ಇಲ್ಲವೋ.’

 

ಇತೀರಿತಃ ಸಾತ್ಯಕಿರತ್ರ ವಿಪ್ರಾನ್ ಸಮ್ಪೂಜ್ಯ ವಿತ್ತೈಃ ಪರಮಾಶಿಷಶ್ಚ ।

ಜಯಾಯ ತೇಭ್ಯಃ ಪ್ರತಿಗೃಹ್ಯ ಸೇನಾಮುಖಂ ಯಯೌ ಭೀಮಸೇನಾನುಯಾತಃ ॥ ೨೬.೯೬ ॥

 

ಈರೀತಿಯಾಗಿ ಹೇಳಲ್ಪಟ್ಟ ಸಾತ್ಯಕಿಯು (ಶಿಬಿರಕ್ಕೆ ಬಂದು), ದ್ರವ್ಯಗಳಿಂದ ಬ್ರಾಹ್ಮಣರನ್ನು ಪೂಜಿಸಿ, ಅವರಿಂದ ಜಯಕ್ಕಾಗಿ ಆಶೀರ್ವಾದವನ್ನು ಪಡೆದು, ಭೀಮಸೇನನ ಬೆಂಗಾವಲಿನೊಂದಿಗೆ ಸೈನ್ಯದ ದ್ವಾರವನ್ನು ಕುರಿತು ತೆರಳಿದನು.

 

ಭೀಮಸ್ತು ಸೇನಾಮುಖಮಾಶು ಭಿತ್ತ್ವಾ ಪ್ರಾವೇಶಯದ್ ಯುಯುಧಾನಂ ಚಮೂಂ ತಾಮ್ ।

ಸ ಯುದ್ಧ್ಯಮಾನೋ ಗುರುಣಾSಭ್ಯುಪೇಕ್ಷಿತಃ ಸೂತಂ ನಿಹತ್ಯ ದ್ರಾವಯಾಮಾಸ ಚಾಶ್ವಾನ್ ॥ ೨೬.೯೭ ॥

 

ಭೀಮಸೇನನಾದರೋ ಸೇನೆಯ ಮುಂಭಾಗವನ್ನು ಭೇದಿಸಿ, ಸಾತ್ಯಕಿಯು ಆ ಸೇನೆಯನ್ನು ಪ್ರವೇಶಿಸುವಂತೆ ಅನುವುಮಾಡಿಕೊಟ್ಟನು. ಸಾತ್ಯಕಿಯು ದ್ರೋಣಾಚಾರ್ಯರೊಂದಿಗೆ ಯುದ್ಧಮಾಡಿ ಉಪೇಕ್ಷಿಸಲ್ಪಟ್ಟನು. ಆದರೂ ಸಾತ್ಯಕಿಯು ಅವರ ಸೂತನನ್ನು ಕೊಂದು, ಕುದುರೆಗಳನ್ನು ಓಡುವಂತೆ ಮಾಡಿದನು.    

 

ಬಲಂ ವಿವೃದ್ಧಂ ಚ ತದಾSಸ್ಯ ಸಾತ್ಯಕೇರ್ವಿಪ್ರಾಶೀರ್ಭಿಃ ಕೃಷ್ಣವರಾದಪಿ ಸ್ಮ ।

ಬಲಸ್ಯ ವೃದ್ಧಿರ್ಹಿ ಪುರಾSಸ್ಯ ದತ್ತಾ ಕೃಷ್ಣೇನ ತುಷ್ಟೇನ ದಿನೇ ಹಿ ತಸ್ಮಿನ್ ॥ ೨೬.೯೮ ॥

 

ವ್ಯೂಹವನ್ನು ಪ್ರವೇಶಿಸಿದ ಸಾತ್ಯಕಿಯ ಬಲವು ಬ್ರಾಹ್ಮಣರ ಆಶೀರ್ವಾದದಿಂದಲೂ, ಕೃಷ್ಣನ ವರದಿಂದಲೂ ಬೆಳೆದಿತ್ತು. ಹಿಂದೆ ಅತ್ಯಂತ ಸಂತುಷ್ಟನಾದ ಕೃಷ್ಣನಿಂದ ಸಾತ್ಯಕಿಗೆ ಈ ಒಂದು ದಿವಸದಲ್ಲಿ ಬಲದ ಅಭಿವೃದ್ದಿಯು ವರವಾಗಿ ಕೊಡಲ್ಪಟ್ಟದ್ದಾಗಿತ್ತು.

 

ತತೋ ವಿವೃದ್ಧೋರುಬಲಾತ್ ಸ ಸಾತ್ಯಕಿಃ ಸಂಸ್ಥಾಪ್ಯ ಭೀಮಂ ಪ್ರಯಯೌ ರಥೇನ ।

ತಂ ಬಾಣವರ್ಷೈಃ ಪೃತನಾಂ ಸಮನ್ತಾನ್ನಿಘ್ನನ್ತಮಾಜೌ ಹೃದಿಕಾತ್ಮಜೋSಭ್ಯಯಾತ್ ॥ ೨೬.೯೯ ॥

 

ತದನಂತರ ಬಲವನ್ನು ಚೆನ್ನಾಗಿ ಬೆಳೆಸಿಕೊಂಡ ಸಾತ್ಯಕಿಯು ಭೀಮನನ್ನು ಅಲ್ಲೇ ನಿಲ್ಲಿಸಿ, ರಥದಿಂದ ಮುಂದೆ ಸಾಗಿದನು. ಬಾಣದ ಸಮೂಹದಿಂದ ಎಲ್ಲೆಡೆ ಸೇನೆಯನ್ನು ಕೊಲ್ಲುತ್ತಿರುವ ಸಾತ್ಯಕಿಯನ್ನು ಕೃತವರ್ಮನು ಎದುರುಗೊಂಡ.

 

ತಯೋರಭೂದ್ ಯುದ್ಧಮತೀವ ದಾರುಣಂ ತತ್ರಾಕರೋತ್ ತಂ ವಿರಥಂ ಸ ಸಾತ್ಯಕಿಃ ।

ವಿಜಿತ್ಯ ತಂ ಸಾತ್ಯಕಿರುಗ್ರಧನ್ವಾ ಯಯಾವತೀತ್ಯೈವ ಶಿರಾಂಸಿ ಯೂನಾಮ್ ॥ ೨೬.೧೦೦ ॥

 

ಅವರಿಬ್ಬರಿಗೂ ಅತ್ಯಂತ ಭಯಂಕರವಾದ ಯುದ್ಧ ನಡೆಯಿತು. ಆ ಯುದ್ಧದಲ್ಲಿ ಸಾತ್ಯಕಿಯು ಕೃತವರ್ಮನನ್ನು ರಥಹೀನನನ್ನಾಗಿ ಮಾಡಿದ. ಹೀಗೆ ಕೃತವರ್ಮನನ್ನು ಗೆದ್ದ  ಭಯಂಕರವಾದ ಧನುಸ್ಸುಳ್ಳ ಸಾತ್ಯಕಿಯು, ಯುವಕರ ತಲೆಗಳನ್ನು ಕತ್ತರಿಸುತ್ತಾ ಮುಂದೆ ಸಾಗಿದ.

No comments:

Post a Comment