ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, November 23, 2018

Mahabharata Tatparya Nirnaya Kannada 11.87-11.92


ವಿಚಿತ್ರವೀರ್ಯ್ಯಂ ರಾಜಾನಂ ಕೃತ್ವಾ ಭೀಷ್ಮೋsನ್ವಪಾಲಯತ್
ಅಥ ಕಾಶಿಸುತಾಸ್ತಿಸ್ರಸ್ತದರ್ತ್ಥಂ ಭೀಷ್ಮ ಆಹರತ್           ೧೧.೮೭

ಚಿತ್ರಾಙ್ಗದನಿಗೆ ಮದುವೆಯಾಗಿರಲಿಲ್ಲ. ಹೀಗಾಗಿ, ಚಿತ್ರಾಙ್ಗದನ ಸಾವಿನ ನಂತರ ಭೀಷ್ಮಾಚಾರ್ಯರು  ಯುವರಾಜ ಪದವಿಯಲ್ಲಿದ್ದ ಚಿತ್ರಾಙ್ಗದನ ತಮ್ಮನಾದ ವಿಚಿತ್ರವೀರ್ಯನನ್ನು ರಾಜನನ್ನಾಗಿ ಅಭಿಷೇಕ ಮಾಡಿ, ಅವನ ಪರವಾಗಿ ತಾನೇ ದೇಶವನ್ನಾಳಿದರು. ವಿಚಿತ್ರವೀರ್ಯನಿಗಾಗಿ ಭೀಷ್ಮಾಚಾರ್ಯರು ಮೂರು ಜನ ಕಾಶೀರಾಜನ ಮಕ್ಕಳನ್ನು ತಂದರು.

ಅಮ್ಬಾಮಪ್ಯಮ್ಭಿಕಾನಾಮ್ನೀಂ ತಥೈವಾಮ್ಬಾಲಿಕಾಂ ಪರಾಮ್
ಪಾಣಿಗ್ರಹಣಕಾಲೇ ತು ಬ್ರಹ್ಮದತ್ತಸ್ಯ ವೀರ್ಯ್ಯವಾನ್ ೧೧.೮೮

ಬ್ರಹ್ಮದತ್ತ ಮದುವೆಯಾಗಬೇಕಿದ್ದ ಕಾಲದಲ್ಲಿ ಬಲಿಷ್ಠರಾದ ಭೀಷ್ಮಾಚಾರ್ಯರು ಅಂಬೆಯನ್ನು, ಅಂಬಿಕೆಯನ್ನು ಮತ್ತು ಅಂಬಾಲಿಕೆಯನ್ನು ವಿಚಿತ್ರವೀರ್ಯನಿಗಾಗಿ ತಂದರು.

ವಿಜಿತ್ಯ ತಂ ಸಾಲ್ವರಾಜಂ ಸಮೇತಾನ್ ಕ್ಷತ್ರಿಯಾನಪಿ
ಅಮ್ಬಿಕಾಮ್ಬಾಲಿಕೇ ತತ್ರ ಸಂವಾದಂ ಚಕ್ರತುಃ ಶುಭೇ ೧೧.೮೯

ಅಮ್ಬಾ ಸಾ ಭೀಷ್ಮಭಾರ್ಯ್ಯೈವ ಪೂರ್ವದೇಹೇ ತು ನೈಚ್ಛತ
ಶಾಪಾದ್ಧಿರಣ್ಯಗರ್ಭಸ್ಯ ಸಾಲ್ವಕಾಮಾsಹಮಿತ್ಯಪಿ ೧೧.೯೦

ಸಾಲ್ವರಾಜ(ಬ್ರಹ್ಮದತ್ತ)ನನ್ನು ಗೆದ್ದು, ಅಲ್ಲಿ ನೆರೆದಿದ್ದ  ಎಲ್ಲಾ ರಾಜರನ್ನೂ ಕೂಡಾ ಗೆದ್ದು, ಆ ಮೂವರನ್ನು ಭೀಷ್ಮಾಚಾರ್ಯರು ವಿಚಿತ್ರವೀರ್ಯನಿಗಾಗಿ  ತಂದರು. ಆಗ, ಉತ್ತಮರಾದ ಅಂಬಿಕೆ ಹಾಗು ಅಂಬಾಲಿಕೆಯರು ವಿಚಿತ್ರವೀರ್ಯನನ್ನು  ಮದುವೆಯಾಗಲು ಒಪ್ಪಿದರು.
ಆದರೆ ಅಂಬೆ ಮಾತ್ರ, ಹಿಂದಿನ ಜನ್ಮದಲ್ಲಿ ಭೀಷ್ಮನ ಹೆಂಡತಿಯಾಗಿಯೇ, ವಿಚಿತ್ರವೀರ್ಯನನ್ನು ಬಯಸಲಿಲ್ಲಾ. ಬ್ರಹ್ಮ ಶಾಪದ ಫಲದಿಂದ, ‘ನಾನು ಸಾಲ್ವನನ್ನು ಬಯಸುತ್ತೇನೆ’ ಎಂದು ಆಕೆ ಹೇಳಿದಳು.

ಉವಾಚ ತಾಂ ಸ ತತ್ಯಾಜ ಸಾsಗಮತ್ ಸಾಲ್ವಮೇವ ಚ
ತೇನಾಪಿ ಸಮ್ಪರಿತ್ಯಕ್ತಾ ಪರಾಮೃಷ್ಟೇತಿ ಸಾ ಪುನಃ ೧೧.೯೧

ಸಾಲ್ವನನ್ನು ಬಯಸಿದ  ಅಂಬೆಯನ್ನು ಭೀಷ್ಮಾಚಾರ್ಯರು ಬಿಟ್ಟು ಬಿಡುತ್ತಾರೆ. ಆಗ ಆಕೆ  ಸಾಲ್ವನನ್ನು ಕುರಿತು ಬರುತ್ತಾಳೆ. ಆದರೆ ಅವಳನ್ನು  ‘ಬೇರೊಬ್ಬರು ಅಪಹರಿಸಿ ಬಿಟ್ಟಿರುವ’ ಕಾರಣಕ್ಕಾಗಿ ಸಾಲ್ವನೂ ಸ್ವೀಕರಿಸುವುದಿಲ್ಲಾ.

ಭೀಷ್ಮಮಾಪ ಸ ನಾಗೃಹ್ಣಾತ್ ಪ್ರಯಯೌ ಸಾsಪಿ ಭಾರ್ಗ್ಗವಮ್
ಭ್ರಾತುರ್ವಿವಾಹಯಾಮಾಸ ಸೋsಮ್ಬಿಕಾಮ್ಬಾಲಿಕೇ ತತಃ ೧೧.೯೨

ಆಗ ಆಕೆ ಮರಳಿ ಭೀಷ್ಮನ ಬಳಿ ಬರುತ್ತಾಳೆ. ಆದರೆ ಅವರೂ ಆಕೆಯನ್ನು ಸ್ವೀಕರಿಸುವುದಿಲ್ಲಾ. ಕೊನೆಗೆ ಆಕೆ  ಪರಶುರಾಮನ ಬಳಿ ಹೋಗುತ್ತಾಳೆ. ಅಂಬೆ ತೆರಳಿದ ನಂತರ ಭೀಷ್ಮಾಚಾರ್ಯರು ಅಂಬಿಕೆ ಮತ್ತು ಅಂಬಾಲಿಕೆಯನ್ನು ತನ್ನ ತಮ್ಮನಾದ  ವಿಚಿತ್ರವೀರ್ಯನಿಗೆ ಮದುವೆ ಮಾಡಿ ಕೊಟ್ಟರು.

No comments:

Post a Comment