ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 3, 2018

Mahabharata Tatparya Nirnaya Kannada 11.22-11.24


ಅಥಾಷ್ಟಮೋ ವಸುರಾಸೀದ್ ದ್ಯುನಾಮಾ ವರಾಙ್ಗಿನಾಮ್ನ್ಯಸ್ಯ ಬಭೂವ ಭಾರ್ಯ್ಯಾ
ಬಭೂವ ತಸ್ಯಾಶ್ಚ ಸಖೀ ನೃಪಸ್ಯ ಸುವಿನ್ದನಾಮ್ನೋ ದಯಿತಾ ಸನಾಮ್ನೀ ॥೧೧.೨೨

ಕಥಾನ್ತರದಲ್ಲಿ ಭೀಷ್ಮಕಥೆಯನ್ನು ಆಚಾರ್ಯರು ಪ್ರಸ್ತುತಪಡಿಸಿದ್ದಾರೆ. ‘ದ್ಯು’ ನಾಮಕ ವಸು ಭೀಷ್ಮನಾದ ಕಥೆ ಇದಾಗಿದೆ:
ಅಷ್ಠವಸುಗಳಲ್ಲಿ^ ಕೊನೆಯವನಾದ(ಎಂಟನೆಯವನಾದ) ‘ದ್ಯು’ ಎನ್ನುವ ವಸುವಿದ್ದ. ಅವನಿಗೆ ‘ವರಾಂಗೀ’ ಎನ್ನುವ ಹೆಸರಿನ ಪತ್ನಿ ಇದ್ದಳು. ಅವಳಿಗೆ ಸುವಿನ್ದ ಎನ್ನುವ ಹೆಸರಿನ ರಾಜನ ಪತ್ನಿ ಸಖಿಯಾಗಿದ್ದಳು. ಆಕೆಯ ಹೆಸರೂ ವರಾಂಗೀ (ಸಮಾನ ನಾಮವುಳ್ಳ ಸಖಿ). 
[ಇಲ್ಲಿ ದ್ಯು ಎಂಬುವನ ಪತ್ನಿ ವರಾಂಗೀ ಎಂದು ಆಚಾರ್ಯರು ಹೇಳಿರುವುದನ್ನು ಕಾಣುತ್ತೇವೆ.  ಆದರೆ ಪ್ರಚಲಿತವಿರುವ ಮಹಾಭಾರತ ಪಾಠದಲ್ಲಿ ‘ಜಿತವತೀ’ ಎಂದೂ ಹೇಳಿದ್ದಾರೆ.  ಅದರಿಂದಾಗಿ ಇಲ್ಲಿ ಆಚಾರ್ಯರು ‘ವರಾಂಗೀ’ ಎಂದು ಹೇಳಿರುವುದು ಆಕೆಯ ನಾಮವಾಗಿದ್ದು, ಅಲ್ಲಿ ‘ಜಿತವತೀ’ ಎಂದಿರುವುದು ಆಕೆಯ ಗುಣವಾಚಕ ನಾಮವಾಗಿರಬಹುದು.
ವರಾಂಗೀ ಕುರಿತಾದ ವಿವರಣೆ ಮಹಾಭಾರತದ ಆದಿಪರ್ವದಲ್ಲಿ(೬೭,೨೬-೭) ಬರುತ್ತದೆ : ಬೃಹಸ್ಪತೇಸ್ತು ಭಗಿನಿ ವರಾಙ್ಗೀ  ಬ್ರಹ್ಮವಾದಿನಿ ಯೋಗಸಿದ್ಧಾ ಜಗತ್ ಕೃತ್ಸ್ನಮಸಕ್ತಾ ವಿಚಚಾರ ಹ ಪ್ರಭಾಸಸ್ಯ ತು ಭಾರ್ಯ್ಯಾ ಸಾ ವಸೂನಾಮಷ್ಟಮಸ್ಯ ಹಿ’.  ಇಂದು ಪ್ರಚಲಿತದಲ್ಲಿರುವ ಮಹಾಭಾರತ ಪಾಠದಲ್ಲಿ(೧.೧೦೬.೨೨) ಇನ್ನೊಂದು ಮಾತಿದೆ: ನಾಮ್ನಾ ಜಿತವತೀ ನಾಮ ರೂಪಯೌವನಶಾಲಿನೀ ಉಶಿನರಸ್ಯ ರಾಜರ್ಷೇಃ ಸತ್ಯಸಂಧಸ್ಯ ಧೀಮತಃ ದುಹಿತಾ ಪ್ರಥಿತಾ ಲೋಕೇ-’ ವಸುಗಳಲ್ಲಿ ಎಂಟನೆಯವನಾದ ದ್ಯು ಎಂಬುವನ ಪತ್ನಿ ವರಾಂಗೀ ಎಂಬ ಬೃಹಸ್ಪತಿಯ ತಂಗಿ. ಅವಳಿಗೆ ಒಬ್ಬಳು ಸಖೀ.ಅವಳಿಗೂ ವರಾಂಗೀ ಎಂದೇ ಹೆಸರು. ಅವಳು ಉಶೀನರ ಎಂಬ ರಾಜನ ಮಗಳು. ಇವತ್ತಿನ ಭಾರತದ ಪಾಠದ ಪ್ರಕಾರ ಅವಳ ಹೆಸರು ‘ಜಿತವತೀ’ ಎಂದು ಇದೆ. ಅವಳಿಗೆ ವರಾಂಗೀ ಎಂದು ಕರೆಯುತ್ತಿದ್ದರು.  ಏಕೆಂದರೆ ' ರೂಪಯೌವನಶಾಲಿನೀ ' ಆದ್ದರಿಂದ. ವರಾಂಗೀ ಎಂದರೆ ಒಳ್ಳೆಯ, ಚಂದದ ಅಂಗದವಳು ಎಂದೇ ಅರ್ಥ ಅಲ್ಲವೇ!  ಪ್ರಾಯಃ ಆಚಾರ್ಯರ ಪ್ರಕಾರ ತೆಗೆದುಕೊಂಡರೆ: ನಾಮ್ನಾವರಾಙ್ಗೀತ್ಯುದಿತಾ’ ಎನ್ನುವುದು ಪ್ರಾಚೀನ ಪಾಠ ಆಗಿರಲೂಬಹುದು].

^ಅಷ್ಟವಸುಗಳು (ಇವರಿಗೆ ನಾಮಾಂತರಗಳೂ ಇವೆ):
೧. ಧರಃ , ಆಪಃ , ದ್ರೋಣಃ, ಪೃಥುಃ ।
೫. ಅನಲಃ, ಹುತಾಶನಃ , ಅಗ್ನಿಃ
೨. ಅನಿಲಃ , ಶ್ವಸನಃ , ಪ್ರಾಣಃ
೬. ಸೋಮಃ, ಚಂದ್ರಮಾಃ, ದೋಷಃ
೩. ಧ್ರುವಃ
೭. ಪ್ರತ್ಯೂಷಃ, ವಿಭಾವಸುಃ
೪. ಅಹಃ, ಧರ್ಮಃ , ಅರ್ಕಃ ।
೮. ಪ್ರಭಾಸಃ, ವಸ್ತುಃದ್ಯುವಸುಃ ।



ತಸ್ಯಾ ಜರಾಮೃತಿವಿಧ್ವಂಸಹೇತೋರ್ವಸಿಷ್ಠಧೇನುಂ ಸ್ವಮೃತಂ ಕ್ಷರನ್ತೀಮ್ ।
ಜರಾಪಹಾಂ ನನ್ದಿನಿನಾಮಧೇಯಾಂ ಬದ್ಧುಂ ಪತಿಂ ಚೋದಯಾಮಾಸ ದೇವೀ॥೧೧.೨೩

ದ್ಯುವಸುವಿನ ಪತ್ನಿಯಾದ ವರಾಂಗೀಯು, ತನ್ನ ಸಖಿಯಾಗಿರುವ, (ಮನುಷ್ಯ ಲೋಕದಲ್ಲಿರುವ) ವರಾಙ್ಗಿಯ ಮುದಿತನ ಮತ್ತು ಮರಣವನ್ನು ನಾಶ ಮಾಡುವುದಕ್ಕಾಗಿ,  ವಸಿಷ್ಠರ ವಶದಲ್ಲಿರುವ , ಅಮೃತವನ್ನೇ ಕರೆಯುವ,  ಮುದಿತನವನ್ನು ಕಳೆಯುವ, ‘ನಂದಿನಿ’ ಎಂಬ ಹೆಸರಿನ ಧೇನುವನ್ನು ಕಟ್ಟಿ ತರುವಂತೆ ತನ್ನ ಗಂಡನನ್ನು(ದ್ಯುವಸುವನ್ನು) ಪ್ರಚೋದಿಸುತ್ತಾಳೆ.
[ಇಲ್ಲಿ ಹೇಳಿರುವ  ‘ಜರಾಪಹಾಂ’ ಎನ್ನುವ ಮಾತಿನ ಹಿನ್ನೆಲೆ ಮಹಾಭಾರತದಲ್ಲಿ(ಆದಿಪರ್ವ ೧೦೬.೧೯) ಕಾಣಸಿಗುತ್ತದೆ:  ಅಸ್ಯಾಃ ಕ್ಷೀರಂ ಪಿಬೇನ್ಮರ್ತ್ಯಃ  ಸ್ವಾದು ಯೋ ವೈ ಸುಮಧ್ಯಮೇ ದಶವರ್ಷಸಹಸ್ರಾಣಿ  ಸ ಜೀವೇತ್ ಸ್ಥಿರಯೌವನಃ’. ನಂದಿನಿಯ ಹಾಲು ಕುಡಿದವನಿಗೆ ಜರೆ ಹಾಗೂ ಮೃತ್ಯುವಿನ ಭಯವಿಲ್ಲ. ಅದರ ಸೊಗಸಾದ ಹಾಲು ಕುಡಿದವ ಸ್ಥಿರವಾದ ಯೌವ್ವನದಿಂದ ಕೂಡಿ ಹತ್ತುಸಾವಿರ ವರ್ಷಗಳ ಕಾಲ ಬದುಕಬಲ್ಲ.]

ತಯಾ ದ್ಯುನಾಮ ಸ ವಸುಃ ಪ್ರಚೋದಿತೋ ಭ್ರಾತೃಸ್ನೇಹಾತ್ ಸಪ್ತಭಿರನ್ವಿತೋsಪರೈಃ ।
ಬಬನ್ಧ ತಾಂ ಗಾಮಥ ತಾಞ್ಛಶಾಪ ವಸಿಷ್ಠಸಂಸ್ಥಃ ಕಮಲೋದ್ಭವಃ ಪ್ರಭುಃ ॥೧೧.೨೪

ತನ್ನ ಅಣ್ಣಂದಿರರಲ್ಲಿ ಸ್ನೇಹನಿಮಿತ್ತನಾದ  ದ್ಯುವಸು, ಪತ್ನಿಯಿಂದ ಪ್ರಚೋದಿತನಾಗಿ, ಪೃಥು  ಮೊದಲಾದ ಇತರ  ಏಳು ಮಂದಿ ವಸುಗಳನ್ನು ಕೂಡಿಕೊಂಡು, ವಸಿಷ್ಠರ  ಧೇನುವನ್ನು(ನಂದಿನಿಯನ್ನು) ಕಟ್ಟಿಹಾಕುತ್ತಾನೆ. ಆಗ   ವಸಿಷ್ಠರ ಒಳಗಿರುವ ಬ್ರಹ್ಮದೇವರು ಆ ಅಷ್ಟವಸುಗಳಿಗೆ ಶಾಪವನ್ನು ನೀಡುತ್ತಾರೆ.

No comments:

Post a Comment