ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, March 3, 2023

Mahabharata Tatparya Nirnaya Kannada 26-101-111

 

ಕೃನ್ತನ್ ಶರೈಸ್ತಂ ಜಲಸನ್ಧ ಆಗಮದ್ ರಣೇ ಗಜಸ್ಕನ್ಧಗತೋSಭಿಯೋದ್ಧುಮ್ ।

ನಿವಾರಯನ್ತಂ ತಮಸ̐ಹ್ಯವಿಕ್ರಮಂ ನಿಹತ್ಯ ಬಾಣೈಃ ಸಮರೇ ಸ ಸಾತ್ಯಕಿಃ ॥ ೨೬.೧೦೧ ॥

 

ವಿಲೋಳಯಾಮಾಸ ಬಲಂ ಕುರೂಣಾಂ ನಿಘ್ನನ್ ಗಜಸ್ಯನ್ದನವಾಜಿಪತ್ತಿನಃ ।

ಸ ಪಾರ್ವತೀಯಾಂಶ್ಚ ಶಿಲಾಪ್ರವರ್ಷಿಣೋ ನಿಹತ್ಯ ವಿದ್ರಾಪ್ಯ ಚ ಸರ್ವಸೈನಿಕಾನ್ ॥ ೨೬.೧೦೨ ॥

 

ಸಮಾಸದತ್ ಕೇಶವಫಲ್ಗುನೌ ಚ ಬಲೀ ತಮಾರಾSಶು ಚ ಯೂಪಕೇತುಃ ।

ತಯೋರಭೂದ್ ಯುದ್ಧಮತೀವ ಘೋರಂ ಚಿರಂ ವಿಚಿತ್ರಂ ಚ ಮಹದ್ ವಿಭೀಷಣಮ್ ॥ ೨೬.೧೦೩ ॥

 

ಆನೆಯನ್ನೇರಿದ ಜಲಸಂಧ ಎನ್ನುವವನು ಯುದ್ಧಮಾಡಲು ಸಾತ್ಯಕಿಯನ್ನು ಹೊಂದಿದನು. ಪರಾಕ್ರಮಿಯಾಗಿರುವ ಜಲಸಂಧನನ್ನು ಬಾಣಗಳಿಂದ ಕೊಂದ ಸಾತ್ಯಕಿ, ಕೌರವರ ಸೇನೆಯನ್ನು ಉಲ್ಲೋಲಕಲ್ಲೋಲ ಮಾಡಿದನು.  ಹೀಗೆ ಕೌರವರ ಪಡೆಯ ಆನೆ, ಕುದುರೆ, ರಥ, ಕಾಲಾಳುಗಳನ್ನು ನಿಗ್ರಹಿಸುತ್ತಾ, ಕಲ್ಲುಗಳನ್ನು ಹೊಡೆಯುತ್ತಾ ಯುದ್ಧಮಾಡುವ ಪರ್ವತದಲ್ಲಿ ವಾಸಮಾಡುವ ಪಾರ್ವತೇಯ ನಾಮಕ ಗಣಗಳನ್ನು ಕೊಂದು, ಎಲ್ಲಾ ಸೈನಿಕರನ್ನು ಓಡಿಸಿ, ದೂರದಲ್ಲಿರುವ ಕೃಷ್ಣಾರ್ಜುನರನ್ನು ಹೊಂದಿದನು. ಆಗ ಯೂಪಕೇತು(ಭೂರಿಶ್ರವಸ್ಸು) ಅವನನ್ನು ಎದುರಿಸಿದ. ಅವರಿಬ್ಬರ ನಡುವೆ ಘೋರವಾಗಿರುವ, ವಿಚಿತ್ರವಾಗಿರುವ ಭಯಂಕರ ಯುದ್ಧ ನಡೆಯಿತು.  

 

ಪರಸ್ಪರಂ ತೌ ತುರಗಾನ್ ನಿಹತ್ಯ ವಿಪಾತ್ಯ ಸೂತೌ ಧನುಷೀ ನಿಕೃತ್ಯ ।

ಸಮೀಯತುಶ್ಚರ್ಮ್ಮಮಹಾಸಿಧಾರಿಣೌ ವಿಚಿತ್ರಮಾರ್ಗ್ಗಾನ್ ಯುಧಿ ಸಞ್ಚರನ್ತೌ ॥ ೨೬.೧೦೪ ॥

 

ಅವರಿಬ್ಬರೂ ಪರಸ್ಪರರ ಕುದುರೆಗಳನ್ನು ಸಂಹರಿಸಿ, ಸಾರಥಿಗಳನ್ನು ಕೊಂದುಕೊಂಡು, ಬಿಲ್ಲುಗಳನ್ನೂ ಮುರಿದುಕೊಂಡು, ಕತ್ತಿ ಗುರಾಣಿಗಳನ್ನು ಹಿಡಿದುಕೊಂಡು ಭೂಮಿಯಲ್ಲಿ ನಿಂತು ಚಿತ್ರವಿಚಿತ್ರವಾಗಿ ಯುದ್ಧಮಾಡಲಾರಂಭಿಸಿದರು.

 

ಸ ಸೌಮದತ್ತಿರ್ಬ್ಭುವಿ ಸಾತ್ಯಕಿಂ ರಣೇ ನಿಪಾತ್ಯ ಕೇಶೇಷು ಚ ಸಮ್ಪ್ರಗೃಹ್ಯ ।

ಪದಾSಸ್ಯ ವಕ್ಷಸ್ಯಧಿರುಹ್ಯ ಖಡ್ಗಮುದಗ್ರಹೀದಾಶು ಶಿರೋSಪಹರ್ತ್ತುಮ್ ॥ ೨೬.೧೦೫ ॥

 

ಆ ಭೂರೀಶ್ರವಸ್ಸು ಸಾತ್ಯಕಿಯನ್ನು ಭೂಮಿಯಲ್ಲಿ ಬೀಳಿಸಿ, ಅವನ ಕೂದಲನ್ನು ಹಿಡಿದು, ಕಾಲಿನಿಂದ ಎದೆಯನ್ನು ಮೆಟ್ಟಿ, ಅವನ ತಲೆಯನ್ನು ಕತ್ತರಿಸಲು ಕೈಯನ್ನು ಮೇಲೆತ್ತಿದ.

 

ತದ್ ವಾಸುದೇವಸ್ತು ನಿರೀಕ್ಷ್ಯ ವಿಶ್ವತಶ್ಚಕ್ಷುರ್ಜ್ಜುಗಾದಾSಶು ಧನಞ್ಜಯಂ ರಣೇ ।

ತ್ರಾಯಸ್ವ ಶೈನೇಯಮಿತಿ ಸ್ಮ ಸೋSಪಿ ಭಲ್ಲೇನ ಚಿಚ್ಛೇದ ಭುಜಂ ಪರಸ್ಯ ॥ ೨೬.೧೦೬ ॥

 

ಆಗ ಎಲ್ಲೆಡೆ ಕಣ್ಗಳುಳ್ಳ ಶ್ರೀಕೃಷ್ಣನು ಅದನ್ನು ನೋಡಿ, ಧನಂಜಯನಿಗೆ- ‘ಸಾತ್ಯಕಿಯನ್ನು ರಕ್ಷಿಸು’ ಎಂದ. ಅರ್ಜುನನಾದರೋ ತನ್ನ ಬಾಣದಿಂದ  ಭೂರೀಶ್ರವಸ್ಸಿನ ಭುಜವನ್ನು ಕತ್ತರಿಸಿದ.

 

ಸ ತೇನ ಚೋತ್ಕೃತ್ತಸಖಡ್ಗಬಾಹುರ್ವಿನಿನ್ದ್ಯ ಪಾರ್ತ್ಥಂ ನಿಷಸಾದ ಭೂಮೌ ।

ಪ್ರಾಯೋಪವಿಷ್ಟಃ ಶರಸಂಸ್ತರೇ ಹರಿಂ ದ್ಧ್ಯಾಯನ್ ವಿನಿನ್ದನ್ನಸುರಪ್ರವೇಶಾತ್ ॥ ೨೬.೧೦೭ ॥

 

ಗತೇSಸುರಾವೇಶ ಉತಾತಿಭಕ್ತ್ಯಾ ದ್ಧ್ಯಾಯತ್ಯಮುಷ್ಮಿನ್ ಗರುಡಧ್ವಜಂ ತಮ್ ।

ಶೈನೇಯ ಉತ್ಥಾಯ ನಿವಾರ್ಯ್ಯಮಾಣಃ ಕೃಷ್ಣಾರ್ಜ್ಜುನಾದ್ಯೈರಹರಚ್ಛಿರೋSಸ್ಯ ॥ ೨೬.೧೦೮ ॥

 

ಅರ್ಜುನನ ಬಾಣವಿಶೇಷದಿಂದ ಖಡ್ಗ ಸಮೇತವಾದ ಅವನ ಕೈ ಕತ್ತರಿಸಿ ಹೋಯಿತು. ಆಗ ಭೂರಿಶ್ರವಸ್ಸು ಅರ್ಜುನನನ್ನು ಬಯ್ಯುತ್ತಾ, ಬಾಣಗಳನ್ನು ಚಾಪೆಯಂತೆ ಹಾಸಿ, ಪ್ರಾಯೋಪವೇಶದಿಂದ ಕುಳಿತು, ಅಸುರಪ್ರವೇಶದಿಂದ ಕೃಷ್ಣನನ್ನು ಬಯ್ಯುತ್ತಾ, ನಂತರ ಅಸುರಾವೇಶ ಕಳೆದುಕೊಂಡು ಗರುಡಧ್ವಜ ಭಗವಂತನನ್ನು ಧ್ಯಾನಿಸಿದ. ಆಗ ಸಾತ್ಯಕಿಯು ಮೇಲೆದ್ದು, ಕೃಷ್ಣ-ಅರ್ಜುನ ಮೊದಲಾದವರಿಂದ ತಡೆಯಲ್ಪಟ್ಟರೂ,  ಭೂರೀಶ್ರವಸ್ಸಿನ ತಲೆಯನ್ನು ಕತ್ತರಿಸಿ ಹಾಕಿದ.

 

ತದಾ ಸ್ವಕೀಯಂ ರಥಮೇತದರ್ತ್ಥಂ ಕ್ಲ್ ಪ್ತಂ ದದೌ ಸಾತ್ಯಕಯೇ ಸಸೂತಮ್ ।

ಕೃಷ್ಣೋSಥ ಪಾರ್ತ್ಥಸ್ಯ ಹಯಾಸ್ತೃಷಾSರ್ದ್ದಿತಾಸ್ತದಾSಸೃಜದ್ ವಾರುಣಾಸ್ತ್ರಂ ಸ ಪಾರ್ತ್ಥಃ ॥ ೨೬.೧೦೯ ॥

 

ಶ್ರೀಕೃಷ್ಣನು ಸಾತ್ಯಕಿಗೋಸ್ಕರ ಸಿದ್ಧಗೊಳಿಸಲ್ಪಟ್ಟ, ಸೂತನಿಂದ(ದಾರುಕನಿಂದ) ಸಹಿತವಾದ ತನ್ನ ರಥವನ್ನು ಕೊಟ್ಟ. ಸ್ವಲ್ಪಕಾಲದ  ನಂತರ ಅರ್ಜುನನ ಕುದುರೆಗಳು ಬಾಯಾರಿದವು. ಆಗ ಅರ್ಜುನ ವರುಣಾಸ್ತ್ರವನ್ನು ಪ್ರಯೋಗಿಸಿದ. 

 

ತೇನೈವ ತೀರ್ತ್ಥಂ ಪರಮಂ ಚಕಾರ ತಥಾSಶ್ವಶಾಲಾಮಪಿ ಬಾಣರೂಪಾಮ್ ।

ತತೋ ವಿಮುಚ್ಯಾತ್ರ ಹಯಾನಪಾಯಯದ್ಧರಿಸ್ತದಾ ವಾಸವಿರಾರ್ದ್ಧಯತ್ ಪರಾನ್ ॥ ೨೬.೧೧೦ ॥

 

ಅರ್ಜುನನು ವರುಣಾಸ್ತ್ರದಿಂದ ಒಂದು ಸರೋವರವನ್ನು ನಿರ್ಮಿಸಿದನು. ಹಾಗೇ ಬಾಣಗಳಿಂದ ಒಂದು ಅಶ್ವಶಾಲೆಯನ್ನೂ ನಿರ್ಮಿಸಿದನು. ಅದಾದಮೇಲೆ ಶ್ರೀಕೃಷ್ಣನು ಕುದುರೆಗಳನ್ನು ರಥದಿಂದ ಬಿಡಿಸಿ, ಅಶ್ವಶಾಲೆಯಲ್ಲಿ  ಕುದುರೆಗಳಿಗೆ ನೀರು ಕುಡಿಸಿದನು. ಆಗ ಅರ್ಜುನನು ಭೂಮಿಯಲ್ಲೇ ನಿಂತು ಶತ್ರುಗಳನ್ನು ನಿಗ್ರಹಿಸಿದನು.

[ಅರ್ಜುನ ಕುದುರೆಗಳಿಗಾಗಿ ಅಸ್ತ್ರದಿಂದ ಸರೋವರ ನಿರ್ಮಿಸಿರುವುದನ್ನು ಮಹಾಭಾರತದಲ್ಲಿ ಹೀಗೆ ವರ್ಣಿಸಿದ್ದಾರೆ: ‘ಇದಮಸ್ತೀತ್ಯಸಮ್ಭ್ರಾನ್ತೋ ಬ್ರುವನ್ನಸ್ತ್ರೇಣ ಮೇದಿನೀಮ್ । ಅಭಿಹತ್ಯಾರ್ಜುನಶ್ಚಕ್ರೇ ವಾಜಿಪಾನಂ ಸರಃ ಶುಭಮ್’ (ದ್ರೋಣಪರ್ವ ೯೯.೬೦)]

 

ಯುಯೋಜ ಕೃಷ್ಣಸ್ತುರಗಾನ್ ರಥೇ ಪುನರ್ಗ್ಗತಶ್ರಮಾನುದ್ಧೃತಸಾಯಕಾನ್ ಪ್ರಭುಃ ।

ಪ್ರಚೋದಿತೇ ತೇನ ರಥೇ ಸ್ಥಿತಃ ಪುನಸ್ತಥೈವ ಬೀಭತ್ಸುರರೀನಯೋಧಯತ್ ॥ ೨೬.೧೧೧ ॥

 

ಶ್ರೀಕೃಷ್ಣನು ಕುದುರೆಗಳ ಮೈಯಲ್ಲಿ ಚುಚ್ಚಿದ್ದ ಬಾಣಗಳನ್ನು ತೆಗೆದು, ಅವುಗಳ  ಮೈಯನ್ನು ಪ್ರೀತಿಯಿಂದ ನೇವರಿಸಿ, ದಣಿವಾರಿದ ಕುದುರೆಗಳನ್ನು ರಥಕ್ಕೆ ಹೂಡಿದ. ಕೃಷ್ಣನಿಂದ ಪ್ರಚೋದಿತವಾದ ಆ ರಥದಲ್ಲಿ ನಿಂತ ಅರ್ಜುನನು ಮತ್ತೆ ಹಿಂದಿನಂತೆಯೇ ಯುದ್ಧಮಾಡಿದ.

No comments:

Post a Comment