ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 22, 2018

Mahabharata Tatparya Nirnaya Kannada 6.46-6.48


ಇತೀರಿತಂ ತತ್ ಪವನಾತ್ಮಜಸ್ಯ ಶ್ರುತ್ವಾsತಿಭೀತಾ ಧೃತಮೂಕಭಾವಾಃ ।
ಸರ್ವೇsನುಜಗ್ಮುಸ್ತಮಥಾದ್ರಿಮುಖ್ಯಂ ಮಹೇನ್ದ್ರಮಾಸೇದುರಗಾಧಭೋಧಾಃ ॥೬.೪೬॥

ಈ ರೀತಿಯಾಗಿ ಹನುಮಂತನು ಹೇಳಲು, ಆ ಮಾತನ್ನು ಕೇಳಿ ಅತ್ಯಂತ ಭಯಗೊಂಡು, ಮೂಕಭಾವರಾದ  ತಾರಾದಿಗಳು, ಹನುಮಂತನ ಮಾತಿನಂತೆ ಆತನನ್ನು ಅನುಸರಿಸಿ, ಗುಹೆಯಿಂದ ತಕ್ಷಣ ಹೊರಬಂದು, ಪರ್ವತ ಶ್ರೇಷ್ಠವಾದ ಮಹೇಂದ್ರ ಪರ್ವತವನ್ನು ಹೊಂದಿದರು.  

ನಿರೀಕ್ಷ್ಯ ತೇ ಸಾಗರಮಪ್ರಧೃಷ್ಯಮಪಾರಮೇಯಂ ಸಹಸಾ ವಿಷಣ್ಣಾಃ ।
ದೃಢಂ ನಿರಾಶಾಶ್ಚ ಮತಿಂ ಹಿ ದಧ್ರುಃ ಪ್ರಾಯೋಪವೇಶಾಯ ತಥಾ ಚ ಚಕ್ರುಃ ॥೬.೪೭॥

ಅವರು ಹಾರಲಾಗದ, ದಡ ಕಾಣದ ಸಮುದ್ರವನ್ನು ನೋಡಿ, ಕೂಡಲೇ ದುಃಖಿತರಾಗಿ, ಬಹಳವಾಗಿ ಭರವಸೆಯನ್ನು ಕಳೆದುಕೊಂಡು, ಸಾಯುವತನಕ ಉಪವಾಸವನ್ನು ನಿಶ್ಚಯಿಸಿದರು. ಅದರಂತೆಯೇ ಆಹಾರವನ್ನು ಸ್ವೀಕರಿಸದೇ ಕುಳಿತರು.

ಪ್ರಾಯೋಪವಿಷ್ಟಾಶ್ಚ ಕಥಾ ವದನ್ತೋ ರಾಮಸ್ಯ ಸಂಸಾರವಿಮುಕ್ತಿದಾತುಃ ।
ಜಟಾಯುಷಃ ಪಾತನಮೂಚುರೇತತ್ ಸಮ್ಪಾತಿನಾಮ್ನಃ ಶ್ರವಣಂ ಜಗಾಮ ॥೬.೪೮॥

‘ಸಾಯುವ ತನಕ ಉಪವಾಸ’ ಎನ್ನುವ ವ್ರತಕ್ಕೆ ಕಟ್ಟುಬಿದ್ದವರಾಗಿ,  ಸಂಸಾರದಿಂದ ಮುಕ್ತಿಯನ್ನು ನೀಡುವ ರಾಮಚಂದ್ರನ ಕಥೆಗಳನ್ನು ಹೇಳುತ್ತಾ, ಜಟಾಯುಪಕ್ಷಿಯ ಸಾವಿನ ಕಥೆಯನ್ನೂ ಹೇಳಿದರು. ಅವರು ಹೇಳುತ್ತಿದ್ದ   ಜಟಾಯುವಿನ ಸಾವಿನ ಕಥೆ ಅಲ್ಲಿದ್ದ  ಸಂಪಾತಿ ಎಂಬ ಪಕ್ಷಿಯ ಕಿವಿಗೆ ಬಿತ್ತು.

Monday, May 21, 2018

Mahabharata Tatparya Nirnaya Kannada 6.42-6.45


ಇತೀರಿತೇ ಶಕ್ರಸುತಾತ್ಮಜೇನ ತಥೇತಿ ಹೋಚುಃ ಸಹ ಜಾಮ್ಬವನ್ಮುಖಾಃ ।
ಸರ್ವೇsಪಿ ತೇಷಾಮಥ ಚೈಕಮತ್ಯಂ ದೃಷ್ಟ್ವಾ  ಹನೂಮಾನಿದಮಾಬಭಾಷೇ ॥೬.೪೨॥

ಅಂಗದನಿಂದ ಹೀಗೆ ಹೇಳಲ್ಪಡುತ್ತಿರಲು, ಜಾಂಬವಂತನೇ ಮೊದಲಾದವರು ‘ಹಾಗೇ ಆಗಲಿ’ ಎಂದು ಹೇಳಿದರು.  ಅವರೆಲ್ಲರ ಒಗ್ಗಟ್ಟನ್ನು ನೋಡಿದ  ಹನುಮಂತನು ಅವರಿಗೆ ತಿಳಿ ಹೇಳುತ್ತಾನೆ:

ವಿಜ್ಞಾತಮೇತದ್ಧಿ ಮಯಾsಙ್ಗದಸ್ಯ ರಾಜ್ಯಾಯ ತಾರಾಭಿಹಿತಂ ಹಿ ವಾಕ್ಯಮ್ ।
ಸಾಧ್ಯಂ ನ ಚೈತನ್ನಹಿ ವಾಯುಸೂನೂ ರಾಮಪ್ರತೀಪಂ ವಚನಂ ಸಹೇತ ॥೬.೪೩॥

“ ‘ಅಂಗದನಿಗೆ ರಾಜ್ಯಾಭಿಷೇಕ ಆಗಬೇಕು^’ ಎನ್ನುವ ಒಂದೇ ಕಾರಣದಿಂದ ತಾರ ಈರೀತಿಯ ವಾಕ್ಯವನ್ನು ಹೇಳಿರುವನು ಎನ್ನುವುದನ್ನು ನಾನು ತಿಳಿಯಬಲ್ಲೆ. ಆದರೆ ಇದು ಸಾಧ್ಯವಿಲ್ಲ. ಈ ವಾಯುಪುತ್ರನು ರಾಮನಿಗೆ ವಿರುದ್ಧವಾದ ಮಾತನ್ನು ಸಹಿಸಲಾರ” ಎನ್ನುತ್ತಾನೆ ಹನುಮಂತ.
[^ ವಹಿಸಿದ ಕಾರ್ಯವನ್ನು ಮಾಡಲು ವಿಪುಲನಾದ ಸುಗ್ರೀವನನ್ನು ಕೋಪದಿಂದ ಶ್ರೀರಾಮನು ಕೊಂದರೆ, ಆಗ ಅಂಗದನಿಗೆ ಪಟ್ಟಾಭಿಷೇಕ ಮಾಡಬಹುದು ಎನ್ನುವುದು ತಾರನ ಮಾತಿನ ಹಿಂದಿರುವ ತಾತ್ಪರ್ಯ ಎನ್ನುವುದನ್ನು ತಕ್ಷಣ ಹನುಮಂತ ತಿಳಿದುಕೊಳ್ಳುತ್ತಾನೆ]

ನಚಾಹಮಾಕ್ರಷ್ಟುಮುಪಾಯತೋsಪಿ ಶಕ್ಯಃ ಕಥಞ್ಚಿತ್ ಸಕಲೈಃ ಸಮೇತೈಃ ।
ಸನ್ಮಾರ್ಗ್ಗತೋ ನೈವ ಚ ರಾಘವಸ್ಯ ದುರನ್ತಶಕ್ತೇರ್ಬಿಲಮಪ್ರದೃಷ್ಯಮ್ ॥೬.೪೪॥

ಶ್ರೀರಾಮನಿಗೆ ಈ ಬಿಲವು ಅಗಮ್ಯ  ಎಂದು ನೀವು ಭಾವಿಸಿದ್ದೀರಿ. ಆದರೆ ಅದು ನಿಜವಲ್ಲ.  ಇನ್ನು ನೀವು ನನ್ನನ್ನು ಯಾವುದೋ ಪ್ರಲೋಭನೆಯಿಂದ ಆಕರ್ಷಿಸಬಹುದು ಎಂದುಕೊಂಡಿದ್ದರೆ  ಅದು ನಿಮ್ಮಿಂದ ಸಾಧ್ಯವಿಲ್ಲ.  ನೀವೆಲ್ಲರೂ ಸೇರಿದರೂ ಕೂಡಾ, ಒಳ್ಳೆಯ ಮಾರ್ಗದಿಂದ ಆಚೆ  ನನ್ನನ್ನು ಸೆಳೆದುಕೊಳ್ಳಲು ನಿಮ್ಮಿಂದ ಸಾಧ್ಯವಿಲ್ಲ.

ವಚೋ ಮಮೈತದ್ ಯದಿ ಚಾsದರೇಣ ಗ್ರಾಹ್ಯಂ ಭವೇದ್ ವಸ್ತದತಿಪ್ರಿಯಂ ಮೇ ।
ನ ಚೇದ್ ಬಲಾದಪ್ಯನಯೇ ಪ್ರವೃತ್ತಾನ್ ಪ್ರಶಾಸ್ಯ ಸನ್ಮಾರ್ಗ್ಗಗತಾನ್ ಕರೋಮಿ ॥೬.೪೫॥

“ರಾಮನ ಬಾಣಗಳಿಗೆ ಈ ಬಿಲ ಸಿಗುವುದಿಲ್ಲ ಎನ್ನುವುದು ಕೇವಲ ಭ್ರಮೆ. ಭಗವಂತನ ಶಕ್ತಿಗೆ ಅಂತ್ಯವೇ ಇಲ್ಲ. ಹಾಗಿರುವಾಗ ಈ ಬಿಲ ಅವನಿಗೆ ಯಾವ ಲೆಕ್ಕ. ನನ್ನ ಮಾತನ್ನು ನೀವು ಆದರದಿಂದ ಸ್ವೀಕರಿಸಿದರೆ ನನಗೆ ಅತ್ಯಂತ ಪ್ರಿಯ. ಹಾಗಲ್ಲದೇ ಹೋದರೆ, ಅನ್ಯಾಯದಿಂದ ಪ್ರವೃತ್ತಿ ಮಾಡಿದವರನ್ನು ನನ್ನ ಬಲದಿಂದ ಶಾಸನೆ ಮಾಡಿ ಸನ್ಮಾರ್ಗದಲ್ಲಿ ಇರುವಂತೆ ನಾನು ಮಾಡುತ್ತೇನೆ” ಎನ್ನುತ್ತಾನೆ ಹನುಮಂತ.

Thursday, May 17, 2018

Mahabharata Tatparya Nirnaya Kannada 6.36-6.41


ಸಮಸ್ತದುರ್ಗ್ಗಪ್ರವರೇ ದುರಾಸದಂ ವಿಮಾರ್ಗ್ಗತಾಂ ವಿನ್ಧ್ಯಗಿರಿಂ ಮಹಾತ್ಮನಾಮ್ ।
ಗತಃ ಸ ಕಾಲೋ ಹರಿರಾಡುದೀರಿತಃ ಸಮಾಸದಂಶ್ಚಾಥ ಬಿಲಂ ಮಹಾದ್ಭುತಮ್ ॥೬.೩೬॥

ಸುಗ್ರೀವನು ನೀಡಿದ ಕಾಲಮಿತಿಯು ಕಳೆಯುತ್ತಿರಲು, ಸೀತಾದೇವಿಯನ್ನು ಹುಡುಕುತ್ತಿರುವ ಹನುಮಂತನೇ ಮೊದಲಾದವರು ಅತ್ಯಂತ ಶ್ರೇಷ್ಠವಾಗಿರುವ ವಿನ್ದ್ಯಗಿರಿಯನ್ನು  ಹೊಂದಿ, ಅಲ್ಲಿ  ಅತ್ಯದ್ಭುತವಾದ ಬಿಲವೊಂದನ್ನು ಕಂಡು ಅದನ್ನು  ಪ್ರವೇಶ ಮಾಡುತ್ತಾರೆ. 

ಕೃತಂ ಮಯೇನಾತಿವಿಚಿತ್ರಮುತ್ತಮಂ ಸಮೀಕ್ಷ್ಯ ತತ್ ತಾರ ಉವಾಚ ಚಾಙ್ಗದಮ್ ।
ವಯಂ ನ ಯಾಮೋ ಹರಿರಾಜಸನ್ನಿಧಿಂ ವಿಲಙ್ಘಿತೋ ನಃ ಸಮಯೋ ಯತೋsಸ್ಯ ॥೬.೩೭॥

ಮಯನಿಂದ ನಿರ್ಮಿಸಲ್ಪಟ್ಟ ಅತಿ ವಿಚಿತ್ರ ಮತ್ತು ಅತ್ಯಂತ ಉತ್ತಮವಾದ ಆ ಗುಹೆಯನ್ನು ನೋಡಿ, ಬೃಹಸ್ಪತಿಯ ಅವತಾರವಾದ ತಾರನು ಅಂಗದನನ್ನು ಕುರಿತು ಹೇಳುತ್ತಾನೆ:  “ಸುಗ್ರೀವ ಕೊಟ್ಟ ಕಾಲಮಿತಿ ಮೀರಿ ಹೋಗಿದೆ. ನಾವು ಇನ್ನು ಸುಗ್ರೀವನ ಸನ್ನಿಧಿಯನ್ನು ಹೊಂದಲಾರೆವು” ಎಂದು.

ದುರಾಸದೋsಸಾವತಿಚಣ್ಡಶಾಸನೋ ಹನಿಷ್ಯತಿ ತ್ವಾಮಪಿ ಕಿಂ ಮದಾದಿಕಾನ್ ।
ಅಗಮ್ಯಮೇತದ್ ಬಿಲಮಾಪ್ಯ ತತ್ ಸುಖಂ ವಸಾಮ ಸರ್ವೇ ಕಿಮಸಾವಿಹಾsಚರೇತ್ ॥೬.೩೮॥

ಮುಂದುವರಿದು ತಾರ ಹೇಳುತ್ತಾನೆ: “ಸುಗ್ರೀವನ ಹತ್ತಿರ ಹಿಂತಿರುಗಿ ಅವನಿಗೆ ತಿಳಿ ಹೇಳುವುದು ಕಷ್ಟ. ಕೊಟ್ಟ ಆಜ್ಞೆಯನ್ನು ಮೀರಿದವರಿಗೆ  ಅತ್ಯಂತ ಭಯಂಕರ ಶಿಕ್ಷೆಯನ್ನು ಆತ ನೀಡುತ್ತಾನೆ. (ಇದಕ್ಕಾಗಿ ಇಂದಿಗೂ ಕೂಡಾ ‘ಸುಗ್ರೀವಾಜ್ಞೆ’ ಎನ್ನುವ ಪದ ಬಳಕೆಯಲ್ಲಿದೆ). ನಿನ್ನನ್ನೂ ಕೂಡಾ ‘ಅಣ್ಣನ ಮಗ’ ಎನ್ನುವ ಕರುಣೆ ಇಲ್ಲದೆ ಆತ ಕೊಲ್ಲಬಲ್ಲ. ಇನ್ನು ನಮ್ಮನ್ನು ಕೊಲ್ಲುವುದರಲ್ಲೇನೂ  ಆಶ್ಚರ್ಯವಿಲ್ಲ. ಅದಕ್ಕಾಗಿ ಯಾರೂ ಹೊಂದದ ಈ ಬಿಲವನ್ನು ಹೊಂದಿ, ನಾವೆಲ್ಲರೂ ಇಲ್ಲಿಯೇ ವಾಸ ಮಾಡೋಣ. ನಾವಿಲ್ಲಿದ್ದರೆ ಅವನಿಗೆ ಏನೂ ಮಾಡಲು ಸಾಧ್ಯವಿಲ್ಲ”.

ನಚೈವ ರಾಮೇಣ ಸಲಕ್ಷ್ಮಣೇನ ಪ್ರಯೋಜನಂ ನೋ ವನಚಾರಿಣಾಂ ಸದಾ ।
ನಚೇಹ ನಃ ಪೀಡಯಿತುಂ ಸ ಚ ಕ್ಷಮಃ ತತೋ ಮಮೇಯಂ ಸುವಿನಿಶ್ಚಿತಾ ಮತಿಃ ॥೬.೩೯॥

“ಕಾಡಿನಲ್ಲಿ ತಿರುಗುವ ನಮಗೆ ರಾಮನಿಂದಾಗಲೀ, ಲಕ್ಷ್ಮಣನಿಂದಾಗಲೀ ಏನೂ ಪ್ರಯೋಜನವಿಲ್ಲಾ. ನಮ್ಮನ್ನು ಇಲ್ಲಿ ಪೀಡಿಸಲು ಅವರು  ಸಮರ್ಥರಲ್ಲಾ. ಹೀಗಾಗಿ ನಮ್ಮ ಬುದ್ಧಿಯು ಈ ವಿಚಾರದಲ್ಲಿ ನಿಶ್ಚಿತವಾಗಿದೆ” ಎನ್ನುತ್ತಾನೆ ತಾರ.

ಇತೀರಿತಂ ಮಾತುಲವಾಕ್ಯಮಾಶು ಸ ಆದದೇ ವಾಲಿಸುತೋsಪಿ ಸಾದರಮ್ ।
ಉವಾಚ ವಾಕ್ಯಂ ಚ ನ ನೋ ಹರೀಶ್ವರಃ ಕ್ಷಮೀ ಭವೇಲ್ಲಙ್ಘಿತಶಾಸನಾನಾಮ್ ॥೬.೪೦॥

ತಕ್ಷಣ, ಯಾವುದೇ ವಿಚಾರ ಮಾಡದೇ, ತನ್ನ ಸೋದರಮಾವನಾದ ತಾರನ ಮಾತನ್ನು ಅಂಗದನು ಭಕ್ತಿಯಿಂದ ಸ್ವೀಕರಿಸಿ ಹೇಳುತ್ತಾನೆ: “ಸುಗ್ರೀವನ ಆಜ್ಞೆಯನ್ನು ಮೀರಿರುವ ನಮ್ಮನ್ನು ಆತ  ಎಂದೂ  ಕ್ಷಮಿಸುವುದಿಲ್ಲ”.   

ರಾಜ್ಯಾರ್ಥಿನಾ ಯೇನ ಹಿ ಘಾತಿತೋsಗ್ರಜೋ ಹೃತಾಶ್ಚ ದಾರಾಃ ಸುನೃಶಂಸಕೇನ ।
ಸ ನಃ ಕಥಂ ರಕ್ಷ್ಯತಿ ಶಾಸನಾತಿಗಾನ್ ನಿರಾಶ್ರಯಾನ್ ದುರ್ಬಲಕಾನ್ ಬಲೇ ಸ್ಥಿತಃ ॥೬.೪೧॥

“ರಾಜ್ಯ ಬೇಕು ಎಂಬ ಬಯಕೆಯಿಂದ ತನ್ನ ಅಣ್ಣನನ್ನೇ ಕೊಲ್ಲಿಸಿ,  ಅತ್ತಿಗೆಯನ್ನು  ಅಪಹರಿಸಿರುವವನು ಆತ. ಅಂತಹ ಅತ್ಯಂತ ಕ್ರೂರನಾದ  ಸುಗ್ರೀವನ ಅಪ್ಪಣೆಯನ್ನು ಉಲ್ಲಂಘಿಸಿರುವ ನಮ್ಮನ್ನು ಆತ ಹೇಗೆ ತಾನೇ ರಕ್ಷಣೆ ಮಾಡಿಯಾನು?  ನಾವು ನಿರಾಶ್ರಿತರು, ದುರ್ಬಲರು. ಅವನಾದರೋ ರಾಮನ ಬೆಂಬಲದೊಂದಿಗಿದ್ದಾನೆ” ಎನ್ನುತ್ತಾನೆ ಅಂಗದ.