ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 21, 2018

Mahabharata Tatparya Nirnaya Kannada 6.42-6.45


ಇತೀರಿತೇ ಶಕ್ರಸುತಾತ್ಮಜೇನ ತಥೇತಿ ಹೋಚುಃ ಸಹ ಜಾಮ್ಬವನ್ಮುಖಾಃ ।
ಸರ್ವೇsಪಿ ತೇಷಾಮಥ ಚೈಕಮತ್ಯಂ ದೃಷ್ಟ್ವಾ  ಹನೂಮಾನಿದಮಾಬಭಾಷೇ ॥೬.೪೨॥

ಅಂಗದನಿಂದ ಹೀಗೆ ಹೇಳಲ್ಪಡುತ್ತಿರಲು, ಜಾಂಬವಂತನೇ ಮೊದಲಾದವರು ‘ಹಾಗೇ ಆಗಲಿ’ ಎಂದು ಹೇಳಿದರು.  ಅವರೆಲ್ಲರ ಒಗ್ಗಟ್ಟನ್ನು ನೋಡಿದ  ಹನುಮಂತನು ಅವರಿಗೆ ತಿಳಿ ಹೇಳುತ್ತಾನೆ:

ವಿಜ್ಞಾತಮೇತದ್ಧಿ ಮಯಾsಙ್ಗದಸ್ಯ ರಾಜ್ಯಾಯ ತಾರಾಭಿಹಿತಂ ಹಿ ವಾಕ್ಯಮ್ ।
ಸಾಧ್ಯಂ ನ ಚೈತನ್ನಹಿ ವಾಯುಸೂನೂ ರಾಮಪ್ರತೀಪಂ ವಚನಂ ಸಹೇತ ॥೬.೪೩॥

“ ‘ಅಂಗದನಿಗೆ ರಾಜ್ಯಾಭಿಷೇಕ ಆಗಬೇಕು^’ ಎನ್ನುವ ಒಂದೇ ಕಾರಣದಿಂದ ತಾರ ಈರೀತಿಯ ವಾಕ್ಯವನ್ನು ಹೇಳಿರುವನು ಎನ್ನುವುದನ್ನು ನಾನು ತಿಳಿಯಬಲ್ಲೆ. ಆದರೆ ಇದು ಸಾಧ್ಯವಿಲ್ಲ. ಈ ವಾಯುಪುತ್ರನು ರಾಮನಿಗೆ ವಿರುದ್ಧವಾದ ಮಾತನ್ನು ಸಹಿಸಲಾರ” ಎನ್ನುತ್ತಾನೆ ಹನುಮಂತ.
[^ ವಹಿಸಿದ ಕಾರ್ಯವನ್ನು ಮಾಡಲು ವಿಪುಲನಾದ ಸುಗ್ರೀವನನ್ನು ಕೋಪದಿಂದ ಶ್ರೀರಾಮನು ಕೊಂದರೆ, ಆಗ ಅಂಗದನಿಗೆ ಪಟ್ಟಾಭಿಷೇಕ ಮಾಡಬಹುದು ಎನ್ನುವುದು ತಾರನ ಮಾತಿನ ಹಿಂದಿರುವ ತಾತ್ಪರ್ಯ ಎನ್ನುವುದನ್ನು ತಕ್ಷಣ ಹನುಮಂತ ತಿಳಿದುಕೊಳ್ಳುತ್ತಾನೆ]

ನಚಾಹಮಾಕ್ರಷ್ಟುಮುಪಾಯತೋsಪಿ ಶಕ್ಯಃ ಕಥಞ್ಚಿತ್ ಸಕಲೈಃ ಸಮೇತೈಃ ।
ಸನ್ಮಾರ್ಗ್ಗತೋ ನೈವ ಚ ರಾಘವಸ್ಯ ದುರನ್ತಶಕ್ತೇರ್ಬಿಲಮಪ್ರದೃಷ್ಯಮ್ ॥೬.೪೪॥

ಶ್ರೀರಾಮನಿಗೆ ಈ ಬಿಲವು ಅಗಮ್ಯ  ಎಂದು ನೀವು ಭಾವಿಸಿದ್ದೀರಿ. ಆದರೆ ಅದು ನಿಜವಲ್ಲ.  ಇನ್ನು ನೀವು ನನ್ನನ್ನು ಯಾವುದೋ ಪ್ರಲೋಭನೆಯಿಂದ ಆಕರ್ಷಿಸಬಹುದು ಎಂದುಕೊಂಡಿದ್ದರೆ  ಅದು ನಿಮ್ಮಿಂದ ಸಾಧ್ಯವಿಲ್ಲ.  ನೀವೆಲ್ಲರೂ ಸೇರಿದರೂ ಕೂಡಾ, ಒಳ್ಳೆಯ ಮಾರ್ಗದಿಂದ ಆಚೆ  ನನ್ನನ್ನು ಸೆಳೆದುಕೊಳ್ಳಲು ನಿಮ್ಮಿಂದ ಸಾಧ್ಯವಿಲ್ಲ.

ವಚೋ ಮಮೈತದ್ ಯದಿ ಚಾsದರೇಣ ಗ್ರಾಹ್ಯಂ ಭವೇದ್ ವಸ್ತದತಿಪ್ರಿಯಂ ಮೇ ।
ನ ಚೇದ್ ಬಲಾದಪ್ಯನಯೇ ಪ್ರವೃತ್ತಾನ್ ಪ್ರಶಾಸ್ಯ ಸನ್ಮಾರ್ಗ್ಗಗತಾನ್ ಕರೋಮಿ ॥೬.೪೫॥

“ರಾಮನ ಬಾಣಗಳಿಗೆ ಈ ಬಿಲ ಸಿಗುವುದಿಲ್ಲ ಎನ್ನುವುದು ಕೇವಲ ಭ್ರಮೆ. ಭಗವಂತನ ಶಕ್ತಿಗೆ ಅಂತ್ಯವೇ ಇಲ್ಲ. ಹಾಗಿರುವಾಗ ಈ ಬಿಲ ಅವನಿಗೆ ಯಾವ ಲೆಕ್ಕ. ನನ್ನ ಮಾತನ್ನು ನೀವು ಆದರದಿಂದ ಸ್ವೀಕರಿಸಿದರೆ ನನಗೆ ಅತ್ಯಂತ ಪ್ರಿಯ. ಹಾಗಲ್ಲದೇ ಹೋದರೆ, ಅನ್ಯಾಯದಿಂದ ಪ್ರವೃತ್ತಿ ಮಾಡಿದವರನ್ನು ನನ್ನ ಬಲದಿಂದ ಶಾಸನೆ ಮಾಡಿ ಸನ್ಮಾರ್ಗದಲ್ಲಿ ಇರುವಂತೆ ನಾನು ಮಾಡುತ್ತೇನೆ” ಎನ್ನುತ್ತಾನೆ ಹನುಮಂತ.

No comments:

Post a Comment