ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, June 8, 2018

Mahabharata Tatparya Nirnaya Kannada 8.01-8.03


೮. ಹನೂಮತಿ ಶ್ರೀರಾಮದಯಾದಾನಮ್


ಓಂ ॥
ಶ್ರುತ್ವಾಹನೂಮದುದಿತಂ ಕೃತಮಸ್ಯ ಸರ್ವಂಪ್ರೀತಃ ಪ್ರಯಾಣಮಭಿರೋಚಯತೇ ಸ ರಾಮಃ ।
ಆರುಹ್ಯ ವಾಯುಸುತಮಙ್ಗದಗೇನ ಯುಕ್ತಃ ಸೌಮಿತ್ರಿಣಾ ಸರವಿಜಃ ಸಹ ಸೇನಯಾsಗಾತ್ ॥೮.೦೧॥

ರಾಮಚಂದ್ರನು ಹನುಮಂತ ಹೇಳಿದ, ಅವನು ಮಾಡಿದ ಎಲ್ಲಾ ಕರ್ಮಗಳನ್ನು ಕೂಡಾ ಕೇಳಿ, ಹನುಮಂತನ ಮೇಲೆ ಸಂತುಷ್ಟನಾಗಿ  ಲಂಕೆಯನ್ನು ಕುರಿತು ಪ್ರಯಾಣ ಮಾಡಲು ಬಯಸಿದನು. ಅಂಗದನನ್ನು ಏರಿದ ಲಕ್ಷ್ಮಣನಿಂದ ಕೂಡಿಕೊಂಡು, ಹನುಮಂತನನ್ನು ಏರಿದ ಶ್ರೀರಾಮಚಂದ್ರ, ಸುಗ್ರೀವ ಮತ್ತು ಅವನ ಕಪಿಸೇನೆಯೊಂದಿಗೆ ಲಂಕೆಯತ್ತ ತೆರಳಿದನು.

ಸಮ್ಪ್ರಾಪ್ಯ ದಕ್ಷಿಣಮಪಾಂನ್ನಿಧಿಮತ್ರ ದೇವಃ ಶಿಶ್ಯೇ ಜಗದ್ಗುರುತಮೋsಪ್ಯವಿಚಿನ್ತ್ಯಶಕ್ತಿಃ ।
ಅಗ್ರೇ ಹಿ ಮಾರ್ದ್ದವಮನುಪ್ರಥಯನ್ ಸ ಧರ್ಮ್ಮಂ ಪನ್ಥಾನಮರ್ತ್ಥಿತುಮಪಾಮ್ಪತಿತಃ ಪ್ರತೀತಃ॥೮.೦೨॥

ದಕ್ಷಿಣದ ಸಮುದ್ರವನ್ನು ತಲುಪಿದ ಶ್ರೀರಾಮಚಂದ್ರದೇವರು, ಎಲ್ಲರಿಗೂ ಗುರುವಾದರೂ, ಎಣೆಯಿರದಷ್ಟು ಬಲವನ್ನು ಹೊಂದಿದ್ದರೂ, ‘ಸಮರ್ಥರಾದವರೂ ಕೂಡಾ ಆದಿಯಲ್ಲಿ ಮೃದುವಾಗಿರಬೇಕು’ ಎನ್ನುವ ಧರ್ಮವನ್ನು ಎಲ್ಲರಿಗೂ ತೋರಿಸುತ್ತಾ,  ಸಮುದ್ರರಾಜನಿಂದ  ದಾರಿಯನ್ನು ಕೇಳುವುದಕ್ಕಾಗಿ, ಅಲ್ಲೇ ದರ್ಭೆಯಮೇಲೆ ಮಲಗಿದರು.

ತತ್ರಾsಜಗಾಮ ಸ ವಿಭಿಷಣನಾಮಧೇಯೋ ರಕ್ಷಃ ಪತೇರವರಜೋsಪ್ಯಥ ರಾವಣೇನ ।
ಭಕ್ತೋsಧಿಕಂ ರಘುಪತಾವಿತಿ ಧರ್ಮ್ಮನಿಷ್ಠಸ್ತ್ಯಕ್ತೋ ಜಗಾಮ ಶರಣಂ ಚ ರಘೂತ್ತಮಂ ತಮ್ ॥೮.೦೩॥

ಆ ಸಮಯದಲ್ಲಿ, ರಾಮಚಂದ್ರನಲ್ಲಿ ಅತ್ಯಂತ ಭಕ್ತಿಯನ್ನು ಹೊಂದಿರುವುದರಿಂದ ಮತ್ತು ಧರ್ಮದಲ್ಲಿಯೇ ನಿಷ್ಠನಾಗಿದ್ದಾನೆ ಎನ್ನುವ ಕಾರಣದಿಂದ,  ರಾವಣನಿಂದ ದೂರ ಮಾಡಲ್ಪಟ್ಟ  ವಿಭೀಷಣ ಎನ್ನುವ ಹೆಸರಿನ ರಾವಣನ ತಮ್ಮನು, ಶ್ರೀರಾಮ ಮಲಗಿದ್ದ ಸ್ಥಳಕ್ಕೆ ಬಂದು, ರಾಮಚಂದ್ರನಲ್ಲಿ  ಶರಣು ಹೊಂದಿದನು.

Wednesday, June 6, 2018

Mahabharata Tatparya Nirnaya Kannada 7.48-7.50


ವಿಲಙ್ಘ್ಯ ಚಾರ್ಣ್ಣವಂ ಪುನಃ ಸ್ವಜಾತಿಭಿಃ ಪ್ರಪೂಜಿತಃ ।
ಪ್ರಭಕ್ಷ್ಯ ವಾನರೇಶಿತುರ್ಮ್ಮಧು ಪ್ರಭುಂ ಸಮೇಯಿವಾನ್ ॥೭.೪೮॥

ಪುನಃ ಸಮುದ್ರವನ್ನು ದಾಟಿ, ತನ್ನೊಂದಿಗಿದ್ದ ಕಪಿಗಳಿಂದ ಪೂಜಿಸಲ್ಪಟ್ಟು, ಸುಗ್ರೀವನಿಗೆಂದೇ ಮೀಸಲಾದ ಮದುವನದಿಂದ ಜೇನನ್ನು ತಿಂದು, ರಾಮನ ಬಳಿ ತೆರಳುತ್ತಾನೆ ಹನುಮಂತ.
[ಸುಗ್ರೀವನಿಗೇ ಮೀಸಲಾದ ಮದುವನದಲ್ಲಿನ  ಜೇನನ್ನು  ಬೇರೆಯವರು ಉಪಯೋಗಿಸುವಂತಿರಲಿಲ್ಲ.  ಆದರೆ ಸೀತೆಯನ್ನು ಕಂಡು ಹಿಂತಿರುಗಿದ ಹನುಮಂತನೊಂದಿಗೆ ಸಂಭ್ರಮಾಚರಣೆ  ಮಾಡಿದ ಅಂಗದ ಮೊದಲಾದ ಕಪಿಗಳು, ಸುಗ್ರೀವನಿಗೆಂದೇ ಮೀಸಲಾಗಿರುವ  ವನದಲ್ಲಿ ಜೇನನ್ನು ತಿನ್ನುತ್ತಾರೆ. ಅವರು ಆ  ವನವನ್ನು ಕಾಯುತ್ತಿದ್ದ ದಧಿಮುಖ ಎನ್ನುವ  ವನಪಾಲಕನನ್ನು (ಪ್ರಮುಖ) ಅಲ್ಲಿಂದ ಹೊಡೆದು ಓಡಿಸುತ್ತಾರೆ. ದಧಿಮುಖ ಸುಗ್ರೀವನ ಬಳಿ ಬಂದು ನಡೆದ ವಿಷಯವನ್ನು  ತಿಳಿಸುತ್ತಾನೆ. ಆಗ ರಾಮನ ಬಳಿಯೇ ಇದ್ದ ಸುಗ್ರೀವ ‘ಖಂಡಿತ ಸೀತಾನ್ವೇಷಣೆಯ ಯಶಸ್ಸು ಅವರದ್ದಾಗಿದೆ. ಇಲ್ಲದೇ ಹೋಗಿದ್ದರೆ ಈ ರೀತಿ ಮಾಡಲು ಸಾಧ್ಯವಿಲ್ಲ’ ಎಂದು ತಿಳಿದು, ಅವರೆಲ್ಲರನ್ನು ಶ್ರಿರಾಮನಿದ್ದಲ್ಲಿಗೆ ಬರಹೇಳಿ ಕಳುಹಿಸುತ್ತಾನೆ]

ರಾಮಂ ಸುರೇಶ್ವರಮಗಣ್ಯಗುಣಾಭಿರಾಮಂ ಸಮ್ಪ್ರಾಪ್ಯ ಸರ್ವಕಪಿವೀರವರೈಃ ಸಮೇತಃ ।
ಚೂಳಾಮಣಿಂ ಪವನಜಃ ಪದಯೋರ್ನ್ನಿಧಾಯಸರ್ವಾಙ್ಗಕೈಃ ಪ್ರಣತಿಮಸ್ಯ ಚಕಾರ ಭಕ್ತ್ಯಾ ॥೭.೪೯॥

ಎಣೆಯಿರದ ಗುಣಗಳನ್ನು ಹೊಂದಿರುವ, ದೇವತೆಗಳ ಒಡೆಯನಾದ ರಾಮಚಂದ್ರನನ್ನು, ಅಂಗದ ಮೊದಲಾದ ಕಪಿ ಶ್ರೇಷ್ಠರಿಂದ ಕೂಡಿಕೊಂಡು ಹೊಂದಿದ  ಹನುಮಂತನು, ಸೀತೆ ಕೊಟ್ಟ ಚೂಡಾಮಣಿಯನ್ನು ರಾಮಚಂದ್ರನ ಪಾದದ ಬಳಿ ಇಟ್ಟು, ಸರ್ವಾಂಗಗಳಿಂದ ಭಕ್ತಿಯಿಂದ ನಮಸ್ಕಾರ ಮಾಡಿದನು.  


ರಾಮೋsಪಿ ನಾನ್ಯದನುದಾತುಮಮುಷ್ಯ ಯೋಗ್ಯಮತ್ಯನ್ತಭಕ್ತಿಪರಮಸ್ಯ ವಿಲಕ್ಷ್ಯ ಕಿಞ್ಚಿತ್ ।
ಸ್ವಾತ್ಮಪ್ರದಾನಮಧಿಕಂ ಪವನಾತ್ಮಜಸ್ಯ ಕುರ್ವನ್ ಸಮಾಶ್ಲಿಷದಮುಂ ಪರಮಾಭಿತುಷ್ಟಃ ॥೭.೫೦॥

ಎಲ್ಲರಿಗೂ ಮಿಗಿಲಾದ ಹನುಮಂತನ ಭಕ್ತಿಯಿಂದ ಅತ್ಯಂತ ಸಂತುಷ್ಟನಾದ ಶ್ರೀರಾಮಚಂದ್ರ, ಬೇರೆ ಏನನ್ನೂ ಕೊಡಲು  ಕಾಣದೇ, ತನ್ನನ್ನೇ ತಾನು ಕೊಡುತ್ತಾ, ಅವನನ್ನು ಅತ್ಯಂತ ಆನಂದವುಳ್ಳವನಾಗಿ ಆಲಂಗಿಸಿದನು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ                  
ಶ್ರೀರಾಮಚರಿತೆ ಹನೂಮತ್ ಪ್ರತಿಯಾನಮ್ ನಾಮ ಸಪ್ತಮೋsಧ್ಯಾಯಃ ॥

Tuesday, June 5, 2018

Mahabharata Tatparya Nirnaya Kannada 7.42-7.47


ಇತೀರಿತೇ ವಧೋದ್ಯತಂ ನ್ಯವಾರಯದ್ ವಿಭೀಷಣಃ ।
ಸ ಪುಚ್ಛದಾಹಕರ್ಮ್ಮಣಿ ನ್ಯಯೋಜಯನ್ನಿಶಾಚರಾನ್ ॥೭.೪೨॥

ಹನುಮಂತನು ಶ್ರೀರಾಮನ ಕುರಿತು ಹೇಳುತ್ತಿರಲು, ಅವನನ್ನು ಕೊಲ್ಲಬೇಕು ಎಂದು ಸಂಕಲ್ಪಿಸುತ್ತಾ ಉದ್ಯುಕ್ತನಾದ  ರಾವಣನನ್ನು ವಿಭೀಷಣ ತಡೆಯುತ್ತಾನೆ. ಆಗ ರಾವಣನು ಹನುಮಂತನ ಬಾಲವನ್ನು ಸುಡುವಂತೆ ರಾಕ್ಷಸರಿಗೆ ತಿಳಿಸುತ್ತಾನೆ.

ಅಥಾಸ್ಯ ವಸ್ತ್ರಸಞ್ಚಯೈಃ ಪಿಧಾಯ ಪುಚ್ಛಮಗ್ನಯೇ ।
ದದುರ್ದ್ದದಾಹ ನಾಸ್ಯ ತನ್ಮರುತ್ಸಖೋ ಹುತಾಶನಃ ॥೭.೪೩॥

ಅನಂತರ ರಾಕ್ಷಸರೆಲ್ಲರೂ ಸೇರಿ, ಹನುಮಂತನ ಬಾಲವನ್ನು ಬಟ್ಟೆಗಳಿಂದ ಮುಚ್ಚಿ ಬೆಂಕಿ ಹಚ್ಚುತ್ತಾರೆ. ಆದರೆ ಆ ಬೆಂಕಿಯು ಅವನ ಬಾಲವನ್ನು ಸುಡಲಿಲ್ಲ. ಬೆಂಕಿ ವಾಯುವಿನ ಸಖನಷ್ಟೇ?   

ಮಮರ್ಷ ಸರ್ವಚೇಷ್ಟಿತಂ ಸ ರಕ್ಷಸಾಂ ನಿರಾಮಯಃ ।
ಬಲೋದ್ಧತಶ್ಚ ಕೌತುಕಾತ್ ಪ್ರದಗ್ಧುಮೇವ ತಾಂ ಪುರೀಮ್ ॥೭.೪೪॥

ಬಲದಿಂದ ಮಿಗಿಲೆನಿಸಿದ್ದರೂ, ಯಾವುದೇ ತೊಂದರೆ ಆಗದಿದ್ದರೂ ಕೂಡಾ, ಹನುಮಂತ   ರಾಕ್ಷಸರ ಎಲ್ಲಾ ಚೇಷ್ಟೆ ಗಳನ್ನೂ ಸಹಿಸಿ ಸುಮ್ಮನಿದ್ದ. ಏಕೆಂದರೆ: ಅವರು ಏನು ಮಾಡುತ್ತಾರೆ ಎಂದು ನೋಡುವ ಕುತೂಹಲದಿಂದ  ಮತ್ತು ಲಂಕೆಯನ್ನೆಲ್ಲಾ ಸುತ್ತಾಡಿಸಿಕೊಂಡು ಬಂದ ಅವರ ಪಟ್ಟಣವನ್ನು ಸುಡುವುದಕ್ಕಾಗಿ.


ದದಾಹ ಚಾಖಿಲಂ ಪುರಂ ಸ್ವಪುಚ್ಛಗೇನ ವಹ್ನಿನಾ ।
ಕೃತಿಸ್ತು ವಿಶ್ವಕರ್ಮ್ಮಣೋsಪ್ಯದಹ್ಯತಾಸ್ಯ ತೇಜಸಾ ॥೭.೪೫॥

ತನ್ನ ಬಾಲದಲ್ಲಿ ಇದ್ದ ಬೆಂಕಿಯಿಂದ ಲಂಕಾಪಟ್ಟಣವನ್ನು ಹನುಮಂತ ಸುಟ್ಟುಬಿಟ್ಟ.  ವಿಶ್ವಕರ್ಮನ ನಿರ್ಮಾಣವೂ ಕೂಡಾ ಹನುಮಂತನ ಪ್ರಭಾವದಿಂದ ಸುಟ್ಟುಹೋಯಿತು.

ಸುವರ್ಣ್ಣರತ್ನಕಾರಿತಾಂ ಸ ರಾಕ್ಷಸೋತ್ತಮೈಃ ಸಹ ।
ಪ್ರದಹ್ಯಸರ್ವಶಃ ಪುರೀಂ ಮುದಾsನ್ವಿತೋ ಜಗರ್ಜ್ಜ  ಚ ॥೭.೪೬॥

ಹನುಮಂತನು ರಾಕ್ಷಸ ಶ್ರೇಷ್ಠರನ್ನೂ ಸೇರಿಸಿ,  ಸುವರ್ಣ ಹಾಗು ರತ್ನದಿಂದ ಮಾಡಲ್ಪಟ್ಟ ಲಂಕಾಪಟ್ಟಣವನ್ನು ಎಲ್ಲೆಡೆಯಿಂದ ಸುಟ್ಟು, ಸಂತಸದಿಂದ ಕೂಡಿ, ಗಟ್ಟಿಯಾಗಿ ಗರ್ಜಿಸಿದನು.

ಸ ರಾವಣಂ ಸಪುತ್ರಕಂ ತೃಣೋಪಮಂ ವಿಧಾಯ ಚ ।
ತಯೋಃ ಪ್ರಪಶ್ಯತೋಃ ಪುರಂ ವಿಧಾಯ ಭಸ್ಮಸಾದ್ ಯಯೌ ॥೭.೪೭॥

ಹನುಮಂತನು ಇಂದ್ರಜಿತುವಿನಿಂದ ಕೂಡಿದ ರಾವಣನನ್ನು ಹುಲ್ಲಿಗಿಂತಲೂ ಕಡೆಯಾಗಿ ಮಾಡಿ, ಅವರ ಕಣ್ಣಮುಂದೇ ಲಂಕಾ ಪಟ್ಟಣವನ್ನು ಬಸ್ಮಮಾಡಿ ತೆರಳಿದ.