ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, February 5, 2019

Mahabharata Tatparya Nirnaya Kannada 11.222-11.225


ಸ ಮೇರುಮಾಪ್ಯಾsಹ ಚತುರ್ಮ್ಮುಖಂ ಪ್ರಭುರ್ಯ್ಯತ್ರ ತ್ವಯೋಕ್ತೋsಸ್ಮಿ ಹಿ ತತ್ರ ಸರ್ವಥಾ ।      
ಪ್ರಾದುರ್ಭವಿಷ್ಯೇ ಭವತೋ ಹಿ ಭಕ್ತ್ಯಾ ವಶಸ್ತ್ವಿವಾಹಂ ಸ್ವವಶೋsಪಿ ಚೇಚ್ಛಯಾ ॥೧೧.೨೨೨     

ದೇವತೆಗಳೊಂದಿಗೆ ಮೇರುಪರ್ವತಕ್ಕೆ ತೆರಳಿದ ಭಗವಂತ ಚತುರ್ಮುಖನನ್ನು ಕುರಿತು ಹೇಳುತ್ತಾನೆ: ‘ನಿನ್ನ ಭಕ್ತಿಯಿಂದಾಗಿ, ನನ್ನ ಇಚ್ಛೆಯಿಂದಲೇ, ನಾನು ನಿನ್ನ ವಶನಂತೆ ಇರುವೆನು. ಅದರಿಂದ, ನೀನು ಎಲ್ಲಿ ಅವತರಿಸಬೇಕು ಎಂದು ಹೇಳುತ್ತೀಯೋ ಅಲ್ಲೇ ನಾನು ಅವತರಿಸುತ್ತೇನೆ’ ಎಂದು.

ಬ್ರಹ್ಮಾ ಪ್ರಣಮ್ಯಾsಹ ತಮಾತ್ಮಕಾರಣಂ ಪ್ರಾದಾಂ ಪುರಾsಹಂ ವರುಣಾಯ ಗಾಃ ಶುಭಾಃ ।  
ಜಹಾರ ತಾಸ್ತಸ್ಯ ಪಿತಾsಮೃತಸ್ರವಾಃ ಸ ಕಶ್ಯಪೋ ದ್ರಾಕ್ ಸಹಸಾsತಿಗರ್ವಿತಃ ॥೧೧.೨೨೩     

ಮಾತ್ರಾ ತ್ವದಿತ್ಯಾ ಚ ತಥಾ ಸುರಭ್ಯಾ ಪ್ರಚೋದಿತೇನೈವ ಹೃತಾಸು ತಾಸು ।
ಶ್ರುತ್ವಾ ಜಲೇಶಾತ್ ಸ ಮಯಾ ತು ಶಪ್ತಃ ಕ್ಷತ್ರೇಷು ಗೋಜೀವನಕೋ ಭವೇತಿ ೧೧.೨೨೪

ಬ್ರಹ್ಮನು ತನ್ನ ತಂದೆಯಾದ ನಾರಾಯಣನಿಗೆ ನಮಸ್ಕರಿಸಿ, ಹಿಂದೆ ನಡೆದ ಒಂದು ಘಟನೆಯನ್ನು ಭಗವಂತನಿಗೆ ವಿವರಿಸುತ್ತಾನೆ:  ನಾನು ಹಿಂದೆ ಒಳ್ಳೆಯ ಗೋವುಗಳನ್ನು ವರುಣನಿಗೆ ಕೊಟ್ಟಿದ್ದೆ. ಅಮೃತವನ್ನೇ ಸುರಿಸುವ ಆ ಹಸುಗಳು  ಅತ್ಯಂತ ಗರ್ವಿತನಾದಣನ ತಂದೆಯಾಗಿರುವ  ಕಾಶ್ಯಪನಿಂದ ಅಪಹರಿಸಲ್ಪಟ್ಟವು.
ವರುಣನ ತಾಯಿಯಾಗಿರುವ ಅದಿತಿಯಿಂದ ಹಾಗು ತಾಯಿ ಸುರಭಿಯಿಂದಲೂ ಕೂಡಾ ಪ್ರಚೋದಿತನಾದ ಕಾಶ್ಯಪನಿಂದ ಆ ಗೋವುಗಳು ಅಪಹರಿಸಲ್ಪಡುತ್ತಿರಲು, ವರುಣನಿಂದ  ಈ ವಿಷಯವನ್ನು ಕೇಳಿ ತಿಳಿದ  ನನ್ನಿಂದ ‘ಕ್ಷತ್ರಿಯರಲ್ಲಿ ಗೋವುಗಳಿಂದ ಜೀವನಮಾಡುವವನಾಗಿ ಹುಟ್ಟು’ ಎಂಬ ಶಾಪವನ್ನು ಕಾಶ್ಯಪ ಹೊಂದಿದನು.

ಶೂರಾತ್ ಸ ಜಾತೋ ಬಹುಗೋಧನಾಢ್ಯೋ ಭೂಮೌ ಯಮಾಹುರ್ವಸುದೇವ ಇತ್ಯಪಿ ।     
ತಸ್ಯೈವ ಭಾರ್ಯ್ಯಾ ತ್ವದಿತಿಶ್ಚ ದೇವಕೀ ಬಭೂವ ಚಾನ್ಯಾ ಸುರಭಿಶ್ಚ ರೋಹಿಣೀ ॥೧೧.೨೨೫      

ಶಾಪಗ್ರಸ್ಥನಾದ ಕಾಶ್ಯಪನು ಶೂರಸೇನನ ಮಗನಾಗಿ ಭೂಮಿಯಲ್ಲಿ ಹುಟ್ಟಿ, ಗೋವೆಂಬ ಧನವನ್ನು ಹೊಂದಿದ್ದಾನೆ. ಭೂಮಿಯಲ್ಲಿ ಇವನನ್ನು (ಕಾಶ್ಯಪನನ್ನು) ವಸುದೇವ ಎಂದು ಕರೆಯುತ್ತಾರೆ. [ಆತ ಕ್ಷತ್ರಿಯನಾದರೂ ಕೂಡಾ, ಗೋವುಗಳನ್ನೆಲ್ಲವನ್ನು ಇಟ್ಟುಕೊಂಡು ವೈಶ್ಯನಂತಿದ್ದಾನೆ].  ಅದಿತಿಯು  ಅವನ ಹೆಂಡತಿಯಾಗಿ ದೇವಕಿಯಾದಳು. ಸುರಭಿಯು ಇನ್ನೊಬ್ಬ ಹೆಂಡತಿಯಾದಳು. ಅವಳೇ ರೋಹಿಣಿ.

ಹರಿವಂಶದಲ್ಲಿ ಈ ಕುರಿತಾದ ಸ್ಪಷ್ಟ ವಿವರಣೆ ಕಾಣಸಿಗುತ್ತದೆ.  ಪುರಾ ಹಿ ಕಾಶ್ಯಪೋ ವಿಷ್ಣೋ ವರುಣಸ್ಯ ಮಹಾತ್ಮನಃ ಜಹಾರ ಯಜ್ಞೀಯ ಗಾ ವೈ ಪಯೋದಾಸ್ತು ಮಹಾಮಖೇ ಅದಿತಿಃ ಸುರಭಿಶ್ಚ್ಯತೇ ದ್ವೇ ಭಾರ್ಯೇ ಕಾಶ್ಯಪಸ್ಯ ತು ಪ್ರದೀಯಮಾನಾ ಗಾಸ್ತಾಸ್ತು  ನೈಚ್ಛತಾಂ ವರುಣಸ್ಯ ವೈ ತತೋ ಮಾಂ ವರುಣೋsಭ್ಯೇತ್ಯ ಪ್ರಣಮ್ಯ ಶಿರಸಾ ತತಃ ಉವಾಚ ಭಗವನ್  ಗಾವೋ ಗುರುಣಾ ಮೇ ಹೃತಾ ಇತಿ’(ಹರಿವಂಶಪರ್ವಣಿ ೧.೫೫.೨೧.೩), ಇತ್ಯಮ್ಬುಪತಿನಾ ಪ್ರೋಕ್ತೋ ವರುಣೇನಾಹಮಚ್ಯುತ ಗವಾಂ ಕಾರಣತತ್ತ್ವಜ್ಞಃ ಕಾಶ್ಯಪೇ ಶಾಪಮುತ್ಸ್ರುಜಮ್ ಏನಾಂಶೇನ ಹ್ರುತಾ ಗಾವಃ ಕಾಶ್ಯಪೇನ ಮಹರ್ಷಿಣಾ ಸ ತೇನಾಂಶೇನ ಜಗತಿ  ಗತ್ವಾ ಗೋಪತ್ವಮೇಷ್ಯತಿ  ಯಾ ಚ ಸಾ ಸುರಭಿರ್ನಾಮ ಅದಿತಿಶ್ಚ ಸುರಾರಣಿಃ ತೇsಪ್ಯುಭೇ ತಸ್ಯ ಭಾರ್ಯೇ ವೈ ತೇನೈವ ಸಹ ಯಾಸ್ಯತಃ’ (೧.೫೫.೩೨-೩೪), ‘ಸ ತಸ್ಯ ಕಾಶ್ಯಪಸ್ಯಾಂಶಸ್ತೇಜಸ ಕಾಶ್ಯಪೋಪಮಃ ವಸುದೇವ ಇತಿ ಖ್ಯಾತೋ ಗೋಷು ತಿಷ್ಠತಿ ಭೂತಳೇ’(೧.೫೫.೩೬), ತಸ್ಯ ಭಾರ್ಯಾದ್ವಯಂ  ಜಾತಮದಿತಿಃ ಸುರಭಿಶ್ಚ ತೇ ಸುರಭಿ ರೋಹಿಣಿ ದೇವಿ ಚಾದಿತಿರ್ದೇವಕೀ ತ್ವಭೂತ್’(೧.೫೫.೩೮)
ಪಾದ್ಮಪುರಾಣದಲ್ಲೂ(ಸೃಷ್ಟಿಖಂಡ ೧೩.೧೪೬) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ಕ ಏಷ ವಸುದೇವಸ್ತು ದೇವಕಿ ಕಾ ಯಶಸ್ವಿನೀ ಪುರುಷಃ  ಕಾಶ್ಯಪಶ್ಚಾಸಾವದಿತಿಸ್ತತ್ಪ್ರಿಯಾ ಸ್ಮೃತಾ’ ಎಂದು ಸ್ಪಷ್ಟವಾಗಿ  ಹೇಳಿರುವುದನ್ನು ನಾವಿಲ್ಲಿ ಕಾಣಬಹುದು.

Monday, February 4, 2019

Mahabharata Tatparya Nirnaya Kannada 11.218-11.221


ಯೋ ಬಾಣಮಾವಿಶ್ಯ ಮಹಾಸುರೋsಭೂತ್ ಸ್ಥಿತಃ ಸ ನಾಮ್ನಾ ಪ್ರಥಿತೋsಪಿ ಬಾಣಃ ।
ಸ ಕೀಚಕೋ ನಾಮ ಬಭೂವ ರುದ್ರವರಾದವಧ್ಯಃ ಸ ತಮಃ ಪ್ರವೇಶ್ಯಃ ॥೧೧.೨೧೮

ಯಾವ ಮಹಾಸುರನು ಬಲಿಪುತ್ರ ಬಾಣನನ್ನು ಪ್ರವೇಶಮಾಡಿ ಬಾಣ ಎಂಬ ಹೆಸರಿನಿಂದ ಪ್ರಸಿದ್ಧನೋ, ಅವನೇ ಕೀಚಕನೆಂಬ ಹೆಸರಿನಿಂದ ಹುಟ್ಟಿದ್ದಾನೆ. ಅವನು ರುದ್ರದೇವರ ವರದಿಂದ ಅವಧ್ಯನಾಗಿದ್ದಾನೆ. ಅವನೂ ಕೂಡಾ ಅಂಧಂತಮಸ್ಸಿಗೆ ಬೀಳಲು ಅರ್ಹನಾಗಿದ್ದಾನೆ.

ಅತಸ್ತ್ವಯಾ ಭುವ್ಯವತೀರ್ಯ್ಯ ದೇವಕಾರ್ಯ್ಯಾಣಿ ಕಾರ್ಯ್ಯಾಣ್ಯಖಿಲಾನಿ ದೇವ ।
ತ್ವಮೇವ ದೇವೇಶ ಗತಿಃ ಸುರಾಣಾಂ ಬ್ರಹ್ಮೇಶಶಕ್ರೇನ್ದುಯಮಾದಿಕಾನಾಮ್ ॥೧೧.೨೧೯    

ಆ ಕಾರಣದಿಂದ ದೇವನೇ, ನೀನು ಭೂಮಿಯಲ್ಲಿ ಅವತರಿಸಬೇಕಿದೆ. ನಿನ್ನಿಂದ ದೇವಕಾರ್ಯಗಳು ಮಾಡಲ್ಪಡಬೇಕಾಗಿದೆ. ಓ ದೇವತೆಗಳ ಒಡೆಯನೇ,  ಬ್ರಹ್ಮ, ರುದ್ರ, ಇಂದ್ರ, ಚಂದ್ರ, ಯಮ, ಮೊದಲಾದ ಎಲ್ಲಾ  ದೇವತೆಗಳಿಗೂ  ನೀನೇ ಗತಿ.

ತ್ವಮೇವ ನಿತ್ಯೋದಿತಪೂರ್ಣ್ಣಶಕ್ತಿಸ್ತ್ವಮೇವ ನಿತ್ಯೋದಿತಪೂರ್ಣ್ಣಚಿದ್ಘನಃ ।
ತ್ವಮೇವ ನಿತ್ಯೋದಿತಪೂರ್ಣ್ಣಸತ್ಸುಖಸ್ತ್ವದೃಙ್ ನ ಕಶ್ಚಿತ್ ಕುತ ಏವ ತೇsಧಿಕಃ  ॥೧೧.೨೨೦

ನೀನೊಬ್ಬನೇ ನಿತ್ಯದಲ್ಲಿಯೂ ಅಭಿವ್ಯಕ್ತವಾಗಬಲ್ಲ ಪೂರ್ಣಶಕ್ತಿಯುಳ್ಳವನು. ನೀನೊಬ್ಬನೇ ಎಂದೆಂದೂ ಪೂರ್ಣವಾಗಿರುವ ಜ್ಞಾನದಿಂದ ತುಂಬಿದವನು. ನೀನೊಬ್ಬನೇ ಪೂರ್ಣವಾಗಿ ಉದ್ಭವಿಸಿದ ನಿರ್ದುಷ್ಟವಾದ ಆನಂದವುಳ್ಳವನು. ನಿನಗೆ ಸಮನೇ ಇಲ್ಲವೆಂದಮೇಲೆ ನಿನಗೆ ಮಿಗಿಲಾದವನು ಎಲ್ಲಿರಬೇಕು.

ಇತೀರಿತೋ ದೇವವರೈರುದಾರಗುಣಾರ್ಣ್ಣವೋsಕ್ಷೋಭ್ಯತಮಾಮೃತಾಕೃತಿಃ
ಉತ್ಥಾಯ ತಸ್ಮಾತ್ ಪ್ರಯಯಾವನನ್ತಸೋಮಾರ್ಕ್ಕಕಾನ್ತಿದ್ಯುತಿರನ್ವಿತೋsಮರೈಃ ॥೧೧.೨೨೧    


ಈರೀತಿಯಾಗಿ ದೇವತಾಶ್ರೇಷ್ಠರಿಂದ ಸ್ತೋತ್ರಮಾಡಲ್ಪಟ್ಟ, ಉತ್ಕೃಷ್ಟವಾದ ಗುಣಗಳಿಗೆ ಕಡಲಿನಂತೆ ಇರುವ, ಎಂದೂ ನಾಶವಾಗದ ದೇಹವುಳ್ಳ ನಾರಾಯಣನು,  ಶೇಷಶಯ್ಯೆಯಿಂದ ಎದ್ದು, ಎಣೆಯಿಲ್ಲದ ಸೂರ್ಯ ಹಾಗು ಚಂದ್ರರ ಕಾಂತಿಯುಳ್ಳವನಾಗಿ, ದೇವತೆಗಳಿಂದ ಅನುಸರಿಸಲ್ಪಟ್ಟವನಾಗಿ ಹೊರಟನು.

Saturday, February 2, 2019

Mahabharata Tatparya Nirnaya Kannada 11.211-11.217


ಹತೌ ಚ ಯೌ ರಾವಣಕುಮ್ಭಕರ್ಣ್ಣೌ ತ್ವಯಾ ತ್ವದೀಯೌ ಪ್ರತಿಹಾರಪಾಲೌ ।
ಮಹಾಸುರಾವೇಶಯುತೌ ಹಿ ಶಾಪಾತ್ ತ್ವಯೈವ ತಾವದ್ಯ ವಿಮೋಚನೀಯೌ ॥೧೧.೨೧೧

ಯೌ ತೌ ತವಾರೀ ಹ ತಯೋಃ ಪ್ರವಿಷ್ಟೌ ದೈತ್ಯೌ ತು ತಾವನ್ಧತಮಃ ಪ್ರವೇಶ್ಯೌ ।
ಯೌ ತೌ ತ್ವದೀಯೌ ಭವದೀಯವೇಶ್ಮ ತ್ವಯಾ ಪುನಃ ಪ್ರಾಪಣೀಯೌ ಪರೇಶ ॥೧೧.೨೧೨

ಕೇವಲ ದುಷ್ಟ ನಿಗ್ರಹವಷ್ಟೇ ಅಲ್ಲಾ, ಹಲವಾರು ಶಿಷ್ಟ ಜನರನ್ನು ರಕ್ಷಿಸಲು ನೀನು ಅವತರಿಸಬೇಕಾಗಿದೆ ಎಂದು ದೇವತೆಗಳು ಇಲ್ಲಿ ಭಗವಂತನನ್ನು ಪ್ರಾರ್ಥಿಸುತ್ತಿದ್ದಾರೆ. ಹಿಂದೆ ರಾವಣ-ಕುಂಭಕರ್ಣರಾಗಿದ್ದಾಗ ನಿನ್ನಿಂದ ಹತರಾಗಿ  ಮತ್ತೆ ಇದೀಗ ಶಿಶುಪಾಲ-ದಂತವಕ್ರ ಎಂಬ ಹೆಸರಿನಿಂದ,  ನಿನ್ನ ದ್ವಾರಪಾಲಕರಾದ ಜಯ-ವಿಜಯರಲ್ಲಿ ಪ್ರವಿಷ್ಟರಾದ, ನಿನ್ನ ಶತ್ರುಗಳಾಗಿರುವ ದೈತ್ಯರು, ಅಂಧಂತಮಸ್ಸನ್ನು ಪ್ರವೇಶಮಾಡಲು ಅರ್ಹರಾಗಿದ್ದಾರೆ. ನಿನ್ನಿಂದ ಶಾಪವನ್ನು ಪಡೆದು  ಅಸುರರ ಆವೇಶವುಳ್ಳವರಾಗಿರುವ ಜಯ-ವಿಜಯರು  ಈಗ ಬಿಡುಗಡೆ ಮಾಡಲು ಅರ್ಹರಾಗಿರುತ್ತಾರೆ. ಅವರನ್ನು ನೀನೇ ಬಿಡುಗಡೆ ಮಾಡಬೇಕು.
[ಈ ವಿವರವನ್ನು ನಾವು ಮಹಾಭಾರತದ ಆದಿಪರ್ವದಲ್ಲಿ(೬೮.೫) ಕಾಣಬಹುದು:  ‘ದಿತೇಃ ಪುತ್ರಸ್ತು ಯೋ ರಾಜನ್ ಹಿರಣ್ಯಕಶಿಪುಃ ಸ್ಮೃತಃ। ಸ ಜಜ್ಞೇ ಮಾನುಷೇ ಲೋಕೇ ಶಿಶುಪಾಲೋ ನರರ್ಷಭಃ’].

ಆವಿಶ್ಯಯೋ ಬಲಿಮಞ್ಜಶ್ಚಕಾರ ಪ್ರತೀಪಮಸ್ಮಾಸು ತಥಾ ತ್ವಯೀಶ ।
ಸ ಚಾಸುರೋ ಬಲಿನಾಮೈವ ಭೂಮೌ ಸಾಲ್ವೋ ನಾಮ್ನಾ ಬ್ರಹ್ಮದತ್ತಸ್ಯ ಜಾತಃ ॥೧೧.೨೧೩      

ಯಾರು ಬಲಿಚಕ್ರವರ್ತಿ ಯನ್ನು ಪ್ರವೇಶಮಾಡಿ, ನಮ್ಮಲ್ಲಿ  ಮತ್ತು ನಿನ್ನಲ್ಲೂ ಕೂಡಾ ವಿರೋಧವನ್ನು ಮಾಡಿದನೋ, ಆ ಅಸುರನು ಬಲಿಯೆಂಬ ಹೆಸರಿನವನೇ ಆಗಿದ್ದಾನೆ. (ಸಜ್ಜೀವನಾದ ಬಲಿಚಕ್ರವರ್ತಿ ಬಲಿ ಎಂಬ ಅಸುರನ ಆವೇಶದಿಂದ  ದೇವತೆಗಳನ್ನು ವಿರೋಧ ಮಾಡುತ್ತಿದ್ದ. ವಾಮನನಿಗೆ ಆತ್ಮನಿವೇದನೆ ಮಾಡಿಕೊಂಡು, ಮುಂದಿನ ಮನ್ವಂತರದಲ್ಲಿ ಇಂದ್ರನಾಗಲಿರುವ ಬಲಿಚಕ್ರವರ್ತಿ, ಈ ಅಸುರನ ಆವೇಶದಿಂದಾಗಿ ದೇವತೆಗಳನ್ನು  ವಿರೋಧ ಮಾಡುವಂತಾಯಿತು). ಈ ಬಲಿನಾಮಕ ದೈತ್ಯ ಇದೀಗ ಭೂಮಿಯಲ್ಲಿ ಸಾಲ್ವ ಎಂಬ ಹೆಸರಿನಿಂದ ಬ್ರಹ್ಮದತ್ತನ ಮಗನಾಗಿ ಹುಟ್ಟಿದ್ದಾನೆ.

ಮಾಯಾಮಯಂ ತೇನ ವಿಮಾನಮಗ್ರ್ಯಮಭೇದ್ಯಮಾಪ್ತಂ ಸಕಲೈರ್ಗ್ಗಿರೀಶಾತ್ ।
ವಿದ್ರಾವಿತೋ ಯೋ ಬಹುಶಸ್ತ್ವಯೈವ ರಾಮಸ್ವರೂಪೇಣ ಭೃಗೂದ್ವಹೇನ ॥೧೧.೨೧೪

ಯಾವ ಸಾಲ್ವನು ಪರಶುರಾಮರೂಪಿಯಾದ ನಿನ್ನಿಂದ ಅನೇಕಬಾರಿ ಓಡಿಸಲ್ಪಟ್ಟಿದ್ದನೋ, ಅವನಿಂದ, ಯಾರಿಂದಲೂ ಭೇದಿಸಲು ಅಸಾಧ್ಯವಾದ, ವಿಚಿತ್ರವಾದ ಶಕ್ತಿಯನ್ನುಳ್ಳ , ಶ್ರೇಷ್ಠವಾದ ವಿಮಾನವು  ರುದ್ರದೇವರ ತಪಸ್ಸಿನಿಂದ ಹೊಂದಲ್ಪಟ್ಟಿತು. (ಅನೇಕಬಾರಿ ಪರಶುರಾಮನಿಂದ ಓಡಿಸಲ್ಪಟ್ಟಿದ್ದ ಸಾಲ್ವ, ತಪಸ್ಸಿನಿಂದ ರುದ್ರದೇವರನ್ನು ಒಲಿಸಿಕೊಂಡು ಸೌಭಾಖ್ಯಾ ಎಂಬ ವಿಶಿಷ್ಟವಾದ ವಿಮಾನವನ್ನು ಹೊಂದಿದ್ದ).

ನಾಸೌ ಹತಃ ಶಕ್ತಿಮತಾsಪಿ ತತ್ರ ಕೃಷ್ಣಾವತಾರೇ ಸ ಮಯೈವ ವಧ್ಯಃ ।
ಇತ್ಯಾತ್ಮಸಙ್ಕಲ್ಪಮೃತಂ ವಿಧಾತುಂ ಸ ಚಾತ್ರ ವಧ್ಯೋ ಭವತಾsತಿಪಾಪೀ ॥೧೧.೨೧೫

 ‘ಕೃಷ್ಣಾವತಾರದಲ್ಲಿ ಈತ ನನ್ನಿಂದಲೇ ಕೊಲ್ಲಲ್ಪಡಬೇಕಾದವನು’ ಎಂಬ ನಿನ್ನದೇ ಆದ ಸಂಕಲ್ಪದಿಂದಾಗಿ, ಶಕ್ತಿಯುಳ್ಳವನಾದರೂ ಕೂಡಾ, ಪರಶುರಾಮ ರೂಪಿಯಾದ ನಿನ್ನಿಂದ ಸಾಲ್ವನು ಕೊಲ್ಲಲ್ಪಡಲಿಲ್ಲ. ನಿನ್ನ ಈ ಮಾತನ್ನು  ಸತ್ಯವನ್ನಾಗಿ ಮಾಡಲು ನೀನು ಅವತರಿಸಬೇಕಿದೆ. ಕೃಷ್ಣಾವತಾರದಲ್ಲಿ ಅತ್ಯಂತ ಪಾಪಿಯಾದ ಈ ಸಾಲ್ವನು ನಿನ್ನಿಂದ ಸಂಹರಿಸಲು ಯೋಗ್ಯನಾಗಿದ್ದಾನೆ.

(ಇಂತಹ ಸಾಲ್ವನಿರುವಾಗ ಹೇಗೆ ಆತನ ತಂದೆಯಾದ ಬ್ರಹ್ಮದತ್ತ ಭೀಷ್ಮಾಚಾರ್ಯರಿಂದ ಸೋಲಿಸಲ್ಪಟ್ಟ ಎನ್ನುವುದನ್ನು ಆಚಾರ್ಯರು ಮುಂದಿನಶ್ಲೋಕದಲ್ಲಿ ವಿವರಿಸಿದ್ದಾರೆ:)

ಯದೀಯಮಾರುಹ್ಯ ವಿಮಾನಮಸ್ಯ ಪಿತಾsಭವತ್ ಸೌಭಪತಿಶ್ಚ ನಾಮ್ನಾ ।
ಯದಾ ಸ ಭೀಷ್ಮೇಣ ಜಿತಃ ಪಿತಾsಸ್ಯ ತದಾ ಸ ಸಾಲ್ವಸ್ತಪಸಿ ಸ್ಥಿತೋsಭೂತ್೧೧.೨೧೬    

ಯಾರ ವಿಮಾನವನ್ನೇರಿ ಸಾಲ್ವನ ತಂದೆಯಾದ ಬ್ರಹ್ಮದತ್ತನು ‘ಸೌಭಪತಿ’  ಎಂಬ ಹೆಸರಿನಿಂದ ಕರೆಸಿಕೊಳ್ಳಲ್ಪಟ್ಟನೋ,  ಅವನು ಭೀಷ್ಮಾಚಾರ್ಯರಿಂದ  ಸೋಲಿಸಲ್ಪಟ್ಟ ಕಾಲದಲ್ಲಿ^ ಸಾಲ್ವ ತಪಸ್ಸನ್ನಾಚರಿಸುತ್ತಿದ್ದ. (^ಬ್ರಹ್ಮದತ್ತನೇ ಮೊದಲಾದ ಎಲ್ಲರನ್ನು ಸೋಲಿಸಿ ಭೀಷ್ಮಾಚಾರ್ಯರು ಅಂಬೆಯನ್ನು  ಸ್ವಯಂವರ ಕಾಲದಲ್ಲಿಅಪಹರಣ ಮಾಡಿದ್ದರು )

ಸ ಚಾದ್ಯ ತಸ್ಮಾತ್ ತಪಸೋ ನಿವೃತ್ತೋ ಜರಾಸುತಸ್ಯಾನುಮತೇ ಸ್ಥಿತೋ ಹಿ ।
ಅನನ್ಯವಧ್ಯೋ ಭವತಾsದ್ಯ ವಧ್ಯಃ ಸ ಪ್ರಾಪಣೀಯಶ್ಚ ತಮಸ್ಯಥೋಗ್ರೇ ॥೧೧.೨೧೭       

ತಪಸ್ಸಿನಿಂದ ಮರಳಿಬಂದ ಸಾಲ್ವ  ಜರಾಸಂಧನ ಜೊತೆಯಲ್ಲೇ ಇದ್ದಾನೆ. ಬೇರೆ ಯಾರಿಂದಲೂ ಕೊಲ್ಲಲಿಕ್ಕಾಗದ ಅವನು, ನಿನ್ನಿಂದ (ಕೃಷ್ಣಾವತಾರದಲ್ಲಿ) ಕೊಲ್ಲಲ್ಪಟ್ಟು, ಉಗ್ರವಾದ ತಮಸ್ಸಿನಲ್ಲಿ ಹಾಕಲು ಯೋಗ್ಯನಾಗಿದ್ದಾನೆ.