ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 3, 2019

Mahabharata Tatparya Nirnaya Kannada 1471_1475


ಸಮ್ಮನ್ತ್ರ್ಯ ರಾಜತನಯೈರ್ದ್ಧೃತರಾಷ್ಟ್ರಜೈಸ್ತದ್ ದತ್ತಂ ಸ್ವಸೂದಮುಖತೋsಖಿಲಭಕ್ಷ್ಯಭೋಜ್ಯೇ
ಜ್ಞಾತ್ವಾ ಯುಯುತ್ಸುಗದಿತಂ ಬಲವಾನ್ ಸ ಭೀಮೋ ವಿಷ್ಣೋರನುಗ್ರಹಬಲಾಜ್ಜರಯಾಞ್ಚಕಾರ೧೪.೭೧

ರಾಜಕುಮಾರರೊಂದಿಗೆ ಚೆನ್ನಾಗಿ ಸಮಾಲೋಚನೆ ಮಾಡಿ, ತಮ್ಮ ಅಡಿಗೆಭಟ್ಟನ ಮುಖಾಂತರ ಎಲ್ಲಾ ಭಕ್ಷ್ಯಭೋಜ್ಯಗಳಲ್ಲಿಟ್ಟು ಕೊಡಲ್ಪಟ್ಟ ವಿಷವನ್ನು, ಧೃತರಾಷ್ಟ್ರಪುತ್ರ  ‘ಯುಯುತ್ಸು’ ಹೇಳಿದಮೇಲೆ, ತಿಳಿದೇ, ಬಲಿಷ್ಠನಾಗಿರುವ ಭೀಮಸೇನನು ವಿಷ್ಣುವಿನ ಅನುಗ್ರಹಬಲದಿಂದ ಭಕ್ಷಿಸಿ, ಜೀರ್ಣಿಸಿಕೊಂಡನು.

ಜೀರ್ಣ್ಣೇ ವಿಷೇ ಕುಮತಯಃ ಪರಮಾಭಿತಪ್ತಾಃ ಪ್ರಾಸಾದಮಾಶು ವಿದಧುರ್ಹರಿಪಾದತೋಯೇ
ಜ್ಞಾತ್ವಾ ಯುಯುತ್ಸುಮುಖತಃ ಸ್ವಯಮತ್ರ ಚಾನ್ತೇ ಸುಷ್ವಾಪ ಮಾರುತಿರಮಾ ಧೃತರಾಷ್ಟ್ರಪುತ್ರೈಃ ೧೪.೭೨

ವಿಷವು ಜೀರ್ಣವಾಗಲು, ಬಹಳ ಸಂಕಟಪಟ್ಟ ದುರ್ಬುದ್ಧಿಗಳಾದ ದುರ್ಯೋಧನ ಮೊದಲಾದವರು, ಗಂಗಾನದಿಯ ತೀರದಲ್ಲಿ ಕೂಡಲೇ ಒಂದು ಕೃತ್ರಿಮ ಪ್ರಾಸಾದವನ್ನು ಮಾಡಿದರು. ಅವರೆಲ್ಲರ  ಪಿತೂರಿಗಳನ್ನು ಯುಯುತ್ಸುಮುಖದಿಂದ ತಿಳಿದ ಭೀಮಸೇನನು, ಅವರಿಗೆ ಅನುಕೂಲವಾಗಲಿ ಎಂದು ತಾನೇ ಅವರೊಂದಿಗೆ ಪ್ರಾಸಾದದ ಕಡೆಯಲ್ಲಿ ಮಲಗಿದನು.

ದೋಷಾನ್ ಪ್ರಕಾಶಯಿತುಮೇವ ವಿಚಿತ್ರವೀರ್ಯ್ಯಪುತ್ರಾತ್ಮಜೇಷು ನೃವರಂ ಪ್ರತಿ ಸುಪ್ತಮೀಕ್ಷ್ಯ
ಬಧ್ವಾsಭಿಮನ್ತ್ರಣದೃಢೈರಯಸಾ ಕೃತೈಸ್ತಂ ಪಾಶೈರ್ವಿಚಿಕ್ಷಿಪುರುದೇ ಹರಿಪಾದಜಾಯಾಃ ೧೪.೭೩

ವಿಚಿತ್ರವೀರ್ಯನ ಪುತ್ರನಾದ ಧೃತರಾಷ್ಟ್ರನ ಮಕ್ಕಳಾಗಿರುವ ದುರ್ಯೋಧನಾದಿಗಳು, ತಮ್ಮ  ದೋಷಗಳನ್ನು ಜಗತ್ತಿಗೆ ತೋರಿಸಿಕೊಡಲೆಂದೇ ಪ್ರಾಸಾದದಲ್ಲಿ ಮಲಗಿರುವ, ಜೀವೋತ್ತಮನಾದ ಮುಖ್ಯಪ್ರಾಣನನ್ನು ಕಂಡು, ದುರ್ಮಂತ್ರದಿಂದ ಅಭಿಮಂತ್ರಸಿರುವ, ದೃಢವಾದ ಕಬ್ಬಿಣದಿಂದ ಮಾಡಿದ ಹಗ್ಗಗಳಿಂದ ಅವನನ್ನು  ಕಟ್ಟಿ, ಗಂಗಾನದಿಯ ನೀರಿನಲ್ಲಿ ಎಸೆದರು.  

ತತ್ ಕೋಟಿಯೋಜನಗಭೀರಮುದಂ ವಿಗಾಹ್ಯ ಭೀಮೋ ವಿಜೃಮ್ಭಣತ ಏವ ವಿವೃಶ್ಚ್ಯ ಪಾಶಾನ್
ಉತ್ತೀರ್ಯ್ಯ ಸಜ್ಜನಗಣಸ್ಯ ವಿಧಾಯ ಹರ್ಷಂ ತಸ್ಥಾವನನ್ತಗುಣವಿಷ್ಣುಸದಾತಿಹಾರ್ದ್ದಃ ೧೪.೭೪

ಕೋಟಿ ಯೋಜನ ಆಳದ ಗಾಂಭೀರ್ಯವನ್ನು ಹೊಂದಿರುವ ಗಂಗೆಯ ನೀರಿನಲ್ಲಿ ಮುಳುಗಿದ ಭೀಮಸೇನನು, ಆಕಳಿಕೆಯಿಂದಲೇ(ಮೈಮುರಿಯುವಿಕೆಯಿಂದಲೇ) ಹಗ್ಗಗಳನ್ನು ಕತ್ತರಿಸಿ, ನದಿಯಿಂದ ಮೇಲೆದ್ದು, ಸಜ್ಜನರ ಸಮೂಹಕ್ಕೆ ಹರ್ಷವನ್ನು ಉಂಟುಮಾಡಿ, ಎಣಿಯಿರದ ಗುಣಗಳುಳ್ಳ ವಿಷ್ಣುವಿನಲ್ಲಿ ನೆಲೆಗೊಂಡ ಮನಸ್ಸುಳ್ಳವನಾಗಿದ್ದನು (ಆತ್ಯನ್ತಿಕ ಸ್ನೇಹ ಉಳ್ಳವನಾಗಿದ್ದನು).

ತಂ ವೀಕ್ಷ್ಯದುಷ್ಟಮನಸೋsತಿವಿಪನ್ನಚಿತ್ತಾಃ ಸಮ್ಮನ್ತ್ರ್ಯ ಭೂಯ ಉರುನಾಗಗಣಾನಥಾಷ್ಟೌ 
ಶುಕ್ರೋಕ್ತಮನ್ತ್ರಬಲತಃ ಪುರ ಆಹ್ವಯಿತ್ವಾ ಪಶ್ಚಾತ್ ಸುಪಞ್ಜರಗತಾನ್ ಪ್ರದದುಃ  ಸ್ವಸೂತೇ ೧೪.೭೫

ಭೀಮನನ್ನು ಕಂಡು ಬಹಳ ಸಂಕಟಪಟ್ಟ ಆ ದುಷ್ಟಮನಸರು, ತದನಂತರ, ಶುಕ್ರಾಚಾರ್ಯರಿಂದ ಪಡೆದ ಮಂತ್ರದ ಬಲದಿಂದ ಚೆನ್ನಾಗಿ ಮಂತ್ರಣಮಾಡಿ ಕರೆಸಿದ ಎಂಟು ನಾಗಗಳ ಪ್ರಭೇದಗಳನ್ನು  ಒಳ್ಳೆ ಪಂಜರದಲ್ಲಿ ಇಟ್ಟು, ತಮ್ಮ ರಥದ ಸಾರಥಿಯಲ್ಲಿ ಕೊಟ್ಟರು.

Mahabharata Tatparya Nirnaya Kannada 1466_1470


ದೃಷ್ಟ್ವಾsಮಿತಾನ್ಯಥ ಕರಾಂಸಿ ಮರುತ್ಸುತೇನ ನಿತ್ಯಂ ಕೃತಾನಿ ತನಯಾ ನಿಖಿಲಾಶ್ಚ ರಾಜ್ಞಾಮ್
ತಸ್ಯಾಮಿತಂ ಬಲಮುದೀಕ್ಷ್ಯ ಸದೋರುವೃದ್ಧದ್ವೇಷಾ ಬಭೂವುರಥ ಮನ್ತ್ರಮಮನ್ತ್ರಯಂಶ್ಚ೧೪.೬೬

ರಾಜರ ಎಲ್ಲಾ ಮಕ್ಕಳೂ ಕೂಡಾ ಭೀಮನ ಎಣಿಯಿರದ ಕಸುವನ್ನು ಕಂಡು, ಯಾವಾಗಲೂ ಚೆನ್ನಾಗಿ ಬೆಳೆದ ದ್ವೇಷವುಳ್ಳವರಾದರು. ಆನಂತರ ಅವರೆಲ್ಲರೂ ಗುಪ್ತವಾಗಿ ಮಾತನಾಡಿಕೊಂಡರು ಕೂಡಾ.

ಯೇಯೇ ಹಿ ತತ್ರ ನರದೇವಸುತಾಃ ಸುರಾಂಶಾಃ ಪ್ರೀತಿಂ ಪರಾಂ ಪವನಜೇ ನಿಖಿಲಾ ಅಕುರ್ವನ್
ತಾಂಸ್ತಾನ್ ವಿಹಾಯ ದಿತಿಜಾ ನರದೇವವಂಶಜಾತಾ ವಿಚಾರ್ಯ್ಯ ವಧನಿಶ್ಚಯಮಸ್ಯ ಚಕ್ರುಃ ೧೪.೬೭

ಯಾರು ದೇವತೆಗಳ ಅಂಶದಿಂದ ರಾಜರಲ್ಲಿ ಹುಟ್ಟಿದ್ದರೋ, ಅವರೆಲ್ಲರೂ ಕೂಡಾ ಭೀಮಸೇನನಲ್ಲಿ ಉತ್ಕೃಷ್ಟವಾದ ಪ್ರೀತಿಯನ್ನು ಮಾಡಿದರು. ಅವರನ್ನು ಬಿಟ್ಟು, ದೈತ್ಯರ ಅಂಶವನ್ನು ಹೊಂದಿದ ಇತರರು ಚೆನ್ನಾಗಿ  ವಿಚಾರಮಾಡಿ, ಭೀಮಸೇನನನ್ನು ಸಾಯಿಸಬೇಕು ಎನ್ನುವ ನಿಶ್ಚಯವನ್ನು ಮಾಡಿದರು.

ಅಸ್ಮಿನ್ ಹತೇ ವಿನಿಹತಾ ಅಖಿಲಾಶ್ಚ ಪಾರ್ಥಾಃ
ಶಕ್ಯೋ ಬಲಾಚ್ಚ ನ ನಿಹನ್ತುಮಯಂ ಬಲಾಢ್ಯಃ
ಛದ್ಮಪ್ರಯೋಗತ ಇಮಂ ವಿನಿಹತ್ಯ ವೀರ್ಯ್ಯಾತ್
ಪಾರ್ತ್ಥಂ ನಿಹತ್ಯ ನಿಗಳೇ ಚ ವಿದಧ್ಮಹೇsನ್ಯಾನ್ ೧೪.೬೮

ಏವಂ ಕೃತೇ ನಿಹತಕಣ್ಟಕಮಸ್ಯ ರಾಜ್ಯಂ ದುರ್ಯ್ಯೋಧನಸ್ಯ ಹಿ ಭವೇನ್ನ ತತೋsನ್ಯಥಾ ಸ್ಯಾತ್
ಅಸ್ಮಿನ್ ಹತೇ ನಿಪತಿತೇ ಚ ಸುರೇನ್ದ್ರಸೂನೌ ಶೇಷಾ ಭವೇಯುರಪಿ ಸೌಬಲಿಪುತ್ರದಾಸಾಃ ೧೪.೬೯

‘ಈ ಭೀಮಸೇನನು ಸಂಹರಿಸಲ್ಪಟ್ಟರೆ, ಇತರ ಎಲ್ಲಾ ಕುಂತಿಯ ಮಕ್ಕಳು ಸಂಹರಿಸಲ್ಪಟ್ಟಂತೆ. ಇವನಾದರೋ ಬಹಳ ಬಲದಿಂದ ಕೂಡಿದ್ದು, ಬಲಪ್ರಯೋಗದಿಂದ ಇವನನ್ನು ಕೊಲ್ಲಲು ಸಾಧ್ಯವಿಲ್ಲ. ಆದ್ದರಿಂದ, ಇವನನ್ನು ಕುತಂತ್ರ ಪ್ರಯೋಗಗಳಿಂದ ಕೊಂದು, ಅರ್ಜುನನನ್ನು  ವೀರ್ಯಪ್ರಯೋಗದಿಂದ ಕೊಂದು, ಉಳಿದ ಮೂರು ಜನರನ್ನು (ಧರ್ಮರಾಜ, ನಕುಲ ಮತ್ತು ಸಹದೇವರನ್ನು) ಬಂಧನದಲ್ಲಿಡೋಣ.
ಈರೀತಿ ಮಾಡಿದರೆ ದುರ್ಯೋಧನನಿಗೆ ರಾಜ್ಯವು ಶತ್ರುಗಳಿಲ್ಲದ್ದಾಗಿ ಸಿಗುತ್ತದೆ. ಇಲ್ಲದಿದ್ದರೆ ದುರ್ಯೋಧನನ ರಾಜ್ಯವು ಶತ್ರುಗಳಿಂದ ಕೂಡಿರುವುದೇ ಆಗಿರುತ್ತದೆ. ಇವನು(ಭೀಮಸೇನನು) ಕೊಲ್ಲಲ್ಪಡುತ್ತಿರಲು, ಅರ್ಜುನನು ಬೀಳಲು, ಉಳಿದವರು ದುರ್ಯೋಧನನ ದಾಸರಾಗುವರು.’


ಏವಂ ವಿಚಾರ್ಯ್ಯ ವಿಷಮುಲ್ಬಣಮನ್ತಕಾಭಂ ಕ್ಷೀರೋದಧೇರ್ಮ್ಮಥನಜಂ ತಪಸಾ ಗಿರೀಶಾತ್
ಶುಕ್ರೇಣ ಲಬ್ಧಮಮುತಃ ಸುಬಲಾತ್ಮಜೇನ ಪ್ರಾಪ್ತಂ ಪ್ರತೋಷ್ಯ ಮರುತಸ್ತನಯಾಯ ಚಾದುಃ ೧೪.೭೦

ಈರೀತಿಯಾಗಿ ಚರ್ಚಿಸಿ, ಕ್ಷೀರಸಮುದ್ರದ ಮಥನದಿಂದ ಹುಟ್ಟಿರುವ, ಗಿರೀಶನನ್ನು ತಪಸ್ಸುಮಾಡಿ ಶುಕ್ರಾಚಾರ್ಯರು ಪಡೆದ, ಶುಕ್ರಾಚಾರ್ಯರನ್ನು ಸಂತೋಷಪಡಿಸಿ  ಶಕುನಿಯಿಂದ ಹೊಂದಲ್ಪಟ್ಟ, ಅತ್ಯಂತ ತೀವ್ರವಾದ, ಶೀಘ್ರವಾಗಿ ಫಲಕೊಡುವ ಕಾಲಕೂಟ ವಿಷವನ್ನು ವಾಯುಪುತ್ರ ಭೀಮಸೇನನಿಗೆ ಕೊಟ್ಟರು. 

[ಮಹಾಭಾರತದಲ್ಲಿ (ಆದಿಪರ್ವ ೧೩೭.೪೭). ‘ಕಾಲಕೂಟಂ ವಿಷಂ ತೀಕ್ಷ್ಣಂ ಸಂಭೃತಂ ರೋಮಹರ್ಷಣಮ್’ ಎಂದಷ್ಟೇ ಹೇಳಿದ್ದಾರೆ. ಆದರೆ ಕ್ಷೀರಸಮುದ್ರ ಮಥನದಿಂದ ಹುಟ್ಟಿರುವ ಆ ಕಾಲಕೂಟ ವಿಷ ದುರ್ಯೋಧನಾದಿಗಳಿಗೆ ಸಿಕ್ಕಿರುವುದು ಹೇಗೆ ಎನ್ನುವುದನ್ನು ಆಚಾರ್ಯರು ಇಲ್ಲಿ ನಮಗೆ ಬಿಡಿಸಿ ಹೇಳಿದ್ದಾರೆ]

Monday, December 2, 2019

Mahabharata Tatparya Nirnaya Kannada 1461_1465


ವೈಚಿತ್ರವೀರ್ಯ್ಯತನಯಾಃ ಕೃಪತೋ ಮಹಾಸ್ತ್ರಾಣ್ಯಾಪುಶ್ಚ ಪಾಣ್ಡುತನಯೈಃ ಸಹ ಸರ್ವರಾಜ್ಞಾಮ್
ಪುತ್ರಾಶ್ಚ ತತ್ರ ವಿವಿಧಾ ಅಪಿ ಬಾಲಚೇಷ್ಟಾಃ ಕುರ್ವತ್ಸು ವಾಯುತನಯೇನ ಜಿತಾಃ ಸಮಸ್ತಾಃ ೧೪.೬೧

ಧೃತರಾಷ್ಟ್ರನ ಮಕ್ಕಳು, ಎಲ್ಲಾ ರಾಜಕುಮಾರರೂ ಕೂಡಾ  ಪಾಂಡವರಿಂದ ಕೂಡಿಕೊಂಡು ಕೃಪಾಚಾರ್ಯರಿಂದ ಅಸ್ತ್ರಗಳನ್ನು ಪಡೆದರು(ಇದು ಅವರ ಪ್ರಾಥಮಿಕ ವಿದ್ಯಾಭ್ಯಾಸ). ಈ ವಿದ್ಯಾಭ್ಯಾಸಕಾಲದಲ್ಲಿ ತರತರನಾದ ಆಟವಾಡುತ್ತಿರುವಾಗ, ಎಲ್ಲರೂ ಕೂಡಾ ಭೀಮಸೇನನಿಂದ ಪರಾಜಿತರಾದರು.   
[ತತೋsಧಿಜಗ್ಮುಃ  ಸರ್ವೇ ತೇ ಧನುರ್ವೇದಂ ಮಹಾರಥಾಃ ಧೃತರಾಷ್ಟ್ರಾತ್ಮಜಾಶ್ಚೈವ ಪಾಣ್ಡವಾಃ ಸಹ ಯಾದವೈಃ ವೃಷ್ಣಯಶ್ಚ ನೃಪಾಶ್ಚಾನ್ಯೇ ನಾನಾದೇಶಸಮಾಗತಾಃ  ಕೃಪಮಾಚಾರ್ಯಮಾಸಾದ್ಯ ಪರಮಾಸ್ತ್ರಜ್ಞತಾಂ ಗತಾಃ’ ಎಂದು ಈ ಕುರಿತು ಮಹಾಭಾರತದ ಆದಿಪರ್ವದಲ್ಲಿ(೧೪೦.೨೪-೨೫) ಏನನ್ನು ಹೇಳಿದ್ದಾರೋ, ಅದನ್ನೇ ಆಚಾರ್ಯರು ಕೃಪಾಚಾರ್ಯರಿಂದ ಆರಂಭದ ವಿದ್ಯಾಭ್ಯಾಸ ಪಡೆದರು’ ಎಂದು ಇಲ್ಲಿ ಸಂಕ್ಷೇಪಿಸಿ ಹೇಳಿದ್ದಾರೆ].

ಪಕ್ವೋರುಭೋಜ್ಯಫಲಸನ್ನಯನಾಯ ವೃಕ್ಷೇಷ್ವಾರೂಢರಾಜತನಯಾನಭಿವೀಕ್ಷ್ಯ ಭೀಮಃ
ಪಾದಪ್ರಹಾರಮುರುವೃಕ್ಷತಳೇ ಪ್ರದಾಯ ಸಾಕಂ ಫಲೈರ್ವಿನಿಪತತ್ಸು ಫಲಾನ್ಯಭುಙ್ಕ್ತ ೧೪.೬೨

ಭೀಮನು ಉತ್ಕೃಷ್ಟವಾದ ಹಣ್ಣುಗಳನ್ನು ಕೀಳಲೆಂದು ಮರ ಏರಿದ ರಾಜರ ಮಕ್ಕಳನ್ನು ಕಂಡು, ಮರದ ಬುಡಕ್ಕೆ ತನ್ನ ಕಾಲಿನ ಒದೆತವನ್ನು ಕೊಟ್ಟು, ಹಣ್ಣಿನ ಜೊತೆಗೇ ಎಲ್ಲಾ ರಾಜರ ಮಕ್ಕಳು ಬೀಳುವಂತೆ ಮಾಡಿ,  ಹಣ್ಣುಗಳನ್ನು ತಾನು ತಿನ್ನುತ್ತಿದ್ದ.


ಯುದ್ಧೇ ನಿಯುದ್ಧ ಉತ ಧಾವನ ಉತ್ಪ್ಲವೇ ಚ ವಾರಿಪ್ಲವೇ ಚ ಸಹಿತಾನ್ ನಿಖಿಲಾನ್ ಕುಮಾರಾನ್
ಏಕೋ ಜಿಗಾಯ ತರಸಾ ಪರಮಾರ್ಯ್ಯಕರ್ಮ್ಮಾ ವಿಷ್ಣೋಃ ಸುಪೂರ್ಣ್ಣಸದನುಗ್ರಹತಃ ಸುನಿತ್ಯಾತ್ ೧೪.೬೩

ಆಯುಧ ಯುದ್ಧದಲ್ಲಿ, ಮಲ್ಲಯುದ್ಧದಲ್ಲಿ, ಓಡುವಿಕೆಯಲ್ಲಿ, ಎತ್ತರಕ್ಕೆ ಜಿಗಿಯುವುದರಲ್ಲಿ, ನೀರಿಗೆ ಹಾರಿ ಈಜುವುದರಲ್ಲಿ, ಹೀಗೆ ಎಲ್ಲದರಲ್ಲೂ ಕೂಡಾ ಭೀಮ ಆ ಎಲ್ಲಾ ಕುಮಾರರನ್ನು ಒಬ್ಬನೇ ಸ್ಫುಟವಾಗಿ ಗೆದ್ದ. ಹೀಗೆ ಶ್ರೇಷ್ಠವಾದ ಕರ್ಮವುಳ್ಳ, ನಾರಾಯಣನ ನಿತ್ಯವಾದ, ಪೂರ್ಣ ಹಾಗೂ ಯಾವುದೇ ದೋಷವಿಲ್ಲದ ಅನುಗ್ರಹದಿಂದ ಭೀಮ ಎಲ್ಲರನ್ನೂ ಗೆದ್ದ.

ಸರ್ವಾನ್ ಪ್ರಗೃಹ್ಯ ವಿನಿಮಜ್ಜತಿ ವಾರಿಮದ್ಧ್ಯೇ ಶ್ರಾನ್ತಾನ್ ವಿಸೃಜ್ಯ ಹಸತಿ ಸ್ಮ ಸ ವಿಷ್ಣುಪದ್ಯಾಮ್
ಸರ್ವಾನುದೂಹ್ಯ ಚ ಕದಾಚಿದುರುಪ್ರವಾಹಾಂ ಗಙ್ಗಾಂ ಸುತಾರಯತಿ ಸಾರಸುಪೂರ್ಣ್ಣಪೌಂಸ್ಯಃ ೧೪.೬೪

ಸಾರಭೂತವಾದ, ಸುಪೂರ್ಣಪೌಂಸ್ಯ(ಚೆನ್ನಾಗಿ ಪೂರಿತವಾದ) ಬಲವುಳ್ಳ ಭೀಮನು, ಎಲ್ಲರನ್ನೂ ಹಿಡಿದುಕೊಂಡು ಗಂಗೆಯ ನೀರಿನ ಮಧ್ಯದಲ್ಲಿ ಮುಳುಗುತ್ತಿದ್ದ. ಅವರೆಲ್ಲರೂ ಬಹಳ ಬಳಲಿದಾಗ ಅವರನ್ನು ಬಿಟ್ಟು ನಗುತ್ತಿದ್ದ. ಕೆಲವೊಮ್ಮೆ  ಉತ್ಕೃಷ್ಟವಾದ ಪ್ರವಾಹವುಳ್ಳ ಗಂಗೆಯನ್ನು ಎಲ್ಲರನ್ನೂ ಹೊತ್ತು ದಾಟಿಸುತ್ತಿದ್ದ.

ಏಕೆ ಭೀಮಸೇನ ಈರೀತಿಯಾಗಿ ನಡೆದುಕೊಳ್ಳುತ್ತಿದ್ದ ಎಂದರೆ-

ದ್ವೇಷಂ ಹ್ಯೃತೇ ನಹಿ ಹರೌ ತಮಸಿ ಪ್ರವೇಶಃ ಪ್ರಾಣೇ ಚ ತೇನ ಜಗತೀಮನು ತೌ ಪ್ರಪನ್ನೌ
ತತ್ಕಾರಣಾನ್ಯಕುರುತಾಂ ಪರಮೌ ಕರಾಂಸಿ ದೇವದ್ವಿಷಾಂ ಸತತವಿಸ್ತೃತಸಾಧುಪೌಂಸ್ಯೌ ೧೪.೬೫

ಪರಮಾತ್ಮನಲ್ಲಿಯೂ ಹಾಗು ಮುಖ್ಯಪ್ರಾಣನಲ್ಲಿಯೂ ದ್ವೇಷವಿಲ್ಲದೇ ಯಾರಿಗೂ ತಮಸ್ಸಿಗೆ ಪ್ರವೇಶವಿಲ್ಲ. ಆದ್ದರಿಂದ, ವಿಸ್ತೃತವಾದ ಪುರುಷಸ್ವಭಾವವುಳ್ಳ, ಸ್ವಾಭಾವಿಕವಾದ ಬಲದೊಂದಿಗೆ ಜಗತ್ತನ್ನು ಹೊಂದಿರುವ ಅವರಿಬ್ಬರೂ[ಶ್ರೀಕೃಷ್ಣ ಹಾಗು ಮುಖ್ಯಪ್ರಾಣ(ಭೀಮ)],  ದೈತ್ಯರಲ್ಲಿ ದ್ವೇಷ ಹುಟ್ಟಿಸುವುದಕ್ಕಾಗಿಯೇ ಆ ರೀತಿಯ  ಕರ್ಮಗಳನ್ನು ಮಾಡಿದರು.

[ರಾಜರ ರೂಪದಲ್ಲಿದ್ದ ದೈತ್ಯರಲ್ಲಿ ಶ್ರೀಕೃಷ್ಣ ದ್ವೇಷ ಹುಟ್ಟಿಸಿದರೆ, ಆ ರಾಜರ ಮಕ್ಕಳಲ್ಲಿ ಭೀಮಸೇನ ದ್ವೇಷ ಹುಟ್ಟಿಸಿದ. ಇವೆಲ್ಲವೂ ದುಷ್ಟಸಂಹಾರಕ್ಕಾಗಿ ಪ್ರಾಣ-ನಾರಾಯಣರಾಡಿದ ಲೀಲಾನಾಟಕ].