ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 2, 2020

Mahabharata Tatparya Nirnaya Kannada 17202_17212

ತತಃ ಪುರಾ ಸ್ಯಮನ್ತಕಂ ಹ್ಯವಾಪ ಸೂರ್ಯ್ಯಮಣ್ಡಲೇ

ಸ್ಥಿತಾದ್ಧರೇಃ ಸ ಸತ್ರಜಿತ್ ಸದಾsತ್ರ ಕೇಶವಾರ್ಚ್ಚಕಃ ॥೧೭.೨೦೨ ॥

 

ಇದಕ್ಕೂ ಮೊದಲು, ಸದಾ, ಸೂರ್ಯಮಂಡಲದಲ್ಲಿ ಕೇಶವನನ್ನು ಪೂಜಿಸುವ ಸತ್ರಜಿತ್ ಎಂಬ ಯಾದವನು, ಸೂರ್ಯಮಂಡಲದಲ್ಲಿರುವ ನಾರಾಯಣನಿಂದ  ಸ್ಯಮನ್ತಕಮಣಿಯನ್ನು ಪಡೆದಿದ್ದನು.

 

ಸದಾsಸ್ಯ ವಿಷ್ಣುಭಾವಿನೋsಪ್ಯತೀವ ಲೋಭಮಾನ್ತರಮ್ ।

ಪ್ರಕಾಶಯನ್ ರಮಾಪತಿರ್ಯ್ಯಯಾಚ ಈಶ್ವರೋ ಮಣಿಮ್ ॥೧೭.೨೦೩॥

 

ಸತ್ರಜಿತ್ ವಿಷ್ಣುಭಕ್ತನಾದರೂ ಕೂಡಾ,  ಅವನ ಒಳಗಡೆ ಇರುವ ಲೋಭತನವನ್ನು  ಎಲ್ಲರಿಗೂ ತೋರಿಸುವುದಕ್ಕಾಗಿ, ಜಗದೊಡೆಯನಾದ ರಮಾಪತಿಯು ಅವನಲ್ಲಿ ಸ್ಯಮನ್ತಕಮಣಿಯನ್ನು ಕೇಳಿದನು.  

 

ಸ ತಂ ನ ದತ್ತವಾಂಸ್ತತೋsನುಜೋ ನಿಬದ್ಧ್ಯ ತಂ ಮಣಿಮ್ ।

ವನಂ ಗತಃ ಪ್ರಸೇನಕೋ ಮೃಗಾಧಿಪೇನ ಪಾತಿತಃ ॥೧೭.೨೦೪॥

 

ಸತ್ರಜಿತ್ ಸ್ಯಮನ್ತಕಮಣಿಯನ್ನು ಶ್ರೀಕೃಷ್ಣನಿಗೆ ಕೊಡಲಿಲ್ಲ. ಮುಂದೊಂದುದಿನ ಸತ್ರಜಿತ್ ರಾಜನ  ತಮ್ಮನಾದ ಪ್ರಸೇನನು ಆ ಮಣಿಯನ್ನು ಕಟ್ಟಿಕೊಂಡು ಕಾಡಿಗೆ ತೆರಳಿದ್ದಾಗ, ಸಿಂಹದಿಂದ ಸಂಹರಿಸಲ್ಪಟ್ಟನು.  

[ಬ್ರಾಹ್ಮಪುರಾಣದಲ್ಲಿ(೧೪.೨೬-೨೭) ಈ ಕುರಿತಾದ ವಿವರಣೆ ಕಾಣಸಿಗುತ್ತದೆ:  ಕದಾಚಿನ್ಮೃುಗಯಾಂ ಯಾತಃ ಪ್ರಸೇನಸ್ತೇನ ಭೂಷಿತಃ । ಸ್ಯಮಂತಕಕೃತೇ ಸಿಂಹಾದ್ ವಧಂ ಪ್ರಾಪ ವನೇಚರಾತ್ । ಅಥ ಸಿಂಹಂ ಪ್ರಧಾವಂತಮೃಕ್ಷರಾಜೋ ಮಹಾಬಲಃ ।  ನಿಹತ್ಯ ಮಣಿರತ್ನಂ  ತದಾದಾಯ ಪ್ರಾವಿಶದ್ ಗುಹಾಮ್]

 

ತದಾ ಸ ಸತ್ರಜಿದ್ಧರಿಂ ಶಶಂಸ ಸೋದರಾನ್ತಕಮ್ ।

ಉಪಾಂಶು ವರ್ತ್ಮನಾ ತತೋ ಹರಿಃ ಸಯಾದವೋ ಯಯೌ ॥೧೭.೨೦೫॥


ಈ ಘಟನೆಯ ನಂತರ ಸತ್ರಜಿತ್ ರಾಜನು, ಶ್ರಿಕೃಷ್ಣನೇ ತನ್ನ ತಮ್ಮನನ್ನು ಕೊಂದವನು ಎಂದು ರಹಸ್ಯವಾಗಿ ಹೇಳಿದನು. ತದನಂತರ ಯಾದವರಿಂದ ಕೂಡಿಕೊಂಡ ಶ್ರೀಕೃಷ್ಣನು ಪ್ರಸೇನನು ಹೋದ ದಾರಿಯಲ್ಲಿ  ತೆರಳಿದನು.

 

[ಸತ್ರಜಿತ್ ರಾಜನು ಮೊದಲು ರಹಸ್ಯವಾಗಿಯೇ ಹೇಳಿದ್ದಾದರೂ ಕೂಡಾ,  ಕ್ರಮೇಣ ಆ ವಿಷಯ ಎಲ್ಲೆಡೆ ಪ್ರಸಾರವಾಯಿತು. ಅದಕ್ಕಾಗಿ ಶ್ರೀಕೃಷ್ಣನು ಯಾದವರೊಂದಿಗೆ ಕೂಡಿಕೊಂಡು, ಪ್ರಸೇನನ ಕುದುರೆಯ ಹೆಜ್ಜೆಗುರುತನ್ನು ಅನುಸರಿಸಿ, ಅವನು ಹೋದ ಮಾರ್ಗವಾಗಿ ತೆರಳಿದನು ಎನ್ನುವುದನ್ನು  ವಿಷ್ಣುಪುರಾಣ(೪.೧೩.೩೫-೩೮) ವಿವರಿಸುತ್ತದೆ: ಅನಾಗಚ್ಛತಿ ತಸ್ಮಿನ್ ಕೃಷ್ಣೋ ಮಣಿರತ್ನಮಭಿಲಷಿತವಾನ್ ನ ಚ ಪ್ರಾಪ್ತವಾನ್ ನೂನಮೇತದಸ್ಯ ಕರ್ಮೇತ್ಯಖಿಲ ಏವ ಯದುಲೋಕಃ  ಪರಸ್ಪರಂ  ಕರ್ಣಾಕರ್ಣ್ಯಕಥಯತ್ । ವಿದಿತಲೋಕಾಪವಾದವೃತ್ತಾಂತಶ್ಚ ಭಗವಾನ್ ಸರ್ವಯದುಸೈನ್ಯಪರಿವಾರಪರಿವೃತಃ ಪ್ರಸೇನಾಶ್ವಪದವೀಮನುಸಸಾರ’]

 

ವನೇ ಸ ಸಿಂಹಸೂದಿತಂ ಪದೈಃ ಪ್ರದರ್ಶ್ಯ ವೃಷ್ಣಿನಾಮ್ ।

ಪ್ರಸೇನಮೃಕ್ಷಪಾತಿತಂ ಸ ಸಿಂಹಮಪ್ಯದರ್ಶಯತ್ ॥೧೭.೨೦೬॥

 

ಹೆಜ್ಜೆ ಗುರುತಿನಿಂದ ಸಿಂಹದಿಂದ ಕೊಲ್ಲಲ್ಪಟ್ಟ ಪ್ರಸೇನನನ್ನು ಯಾದವರಿಗೆ ತೋರಿಸಿದ ಶ್ರೀಕೃಷ್ಣ, ಕರಡಿಯಿಂದ(ಜಾಮ್ಬವನ್ತನಿಂದ) ಸಾಯಿಸಲ್ಪಟ್ಟ ಸಿಂಹವನ್ನೂ ಕೂಡಾ ಅವರಿಗೆ ತೋರಿಸಿದ.   

 

ತತೋ ನಿಧಾಯ ತಾನ್ ಬಿಲಂ ಸ ಜಾಮ್ಬವತ್ಪರಿಗ್ರಹಮ್ ।

ವಿವೇಶ ತತ್ರ  ಸಂಯುಗಂ ಬಭೂವ ತೇನ ಚೇಶಿತುಃ ॥೧೭.೨೦೭॥

 

ತದನಂತರ ತನ್ನೊಂದಿಗೆ ಬಂದ ಯಾದವರನ್ನು ಹೊರಗೆ ನಿಲ್ಲಿಸಿ, ಜಾಂಬವಂತ ಇರುವ ಬಿಲವನ್ನು ಶ್ರೀಕೃಷ್ಣ  ಪ್ರವೇಶಮಾಡಿದ. ಅಲ್ಲಿ ಜಾಮ್ಬವಂತ ಹಾಗೂ ಶ್ರೀಕೃಷ್ಣನ ನಡುವೆ ಯುದ್ಧವಾಯಿತು.

 

ಯುಯೋಧ ಮನ್ದಮೇವ ಸಃ ಪ್ರಭುಃ ಸ್ವಭಕ್ತ ಇತ್ಯಜಃ ।

ಚಕಾರ ಚೋಗ್ರಮನ್ತತಃ ಪ್ರಕಾಶಯನ್ ಸ್ವಮಸ್ಯ ಹಿ ॥೧೭.೨೦೮॥

 

ತನ್ನ ಭಕ್ತ ಎಂದು ಶ್ರೀಕೃಷ್ಣ ಮೊದಲು ನಿಧಾನವಾಗಿ(ಮನ್ದಗತಿಯಲ್ಲಿ) ಯುದ್ಧಮಾಡಿದರೆ. ಕೊನೆಯಲ್ಲಿ ತನ್ನ ಬಲಸ್ವರೂಪವನ್ನು ಜಾಮ್ಬವನ್ತನಿಗೆ ತೋರಿಸುತ್ತಾ, ಉಗ್ರವಾಗಿ ಯುದ್ಧಮಾಡಿದನು.

  

ಸ ಮುಷ್ಟಿಪಿಷ್ಟವಿಗ್ರಹೋ ನಿತಾನ್ತಮಾಪದಂ ಗತಃ ।

ಜಗಾಮ ಚೇತಸಾ ರಘೂತ್ತಮಂ ನಿಜಂ ಪತಿಂ ಗತಿಮ್ ॥೧೭.೨೦೯॥

 

ಮುಷ್ಟಿಯ ಪೆಟ್ಟಿನಿಂದ ತತ್ತರಿಸಿದ ಜಾಮ್ಬವಂತನು, ಇನ್ನೇನು  ಸಾಯುತ್ತೇನೋ ಎಂಬ ಆತಂಕವನ್ನು  ಹೊಂದಿ, ಮನಸ್ಸಿನಲ್ಲಿಯೇ ತನ್ನ ಒಡೆಯನಾದ, ತನಗೆ ಗತಿಯನ್ನೀಯುವ ಶ್ರೀರಾಮಚಂದ್ರನನ್ನು ಸ್ಮರಣೆಮಾಡಿದನು.

 

ಸ್ಮೃತಿಂ ಗತೇ ತು ರಾಘವೇ ತದಾಕೃತಿಂ ಯದೂತ್ತಮೇ ।

ಸಮಸ್ತಭೇದವರ್ಜ್ಜಿತಾಂ ಸಮೀಕ್ಷ್ಯ ಸೋsಯಮಿತ್ಯವೇತ್ ॥೧೭.೨೧೦॥

 

ರಾಮಚಂದ್ರನ ಸ್ಮೃತಿಯನ್ನು ಹೊಂದುತ್ತಿರುವಂತೆಯೇ, ಅದೇ ರೀತಿಯಾದ ಆಕೃತಿಯನ್ನು ಕೃಷ್ಣನಲ್ಲಿ ಭೇದವೇ ಇಲ್ಲದಂತೆ ಕಂಡ ಜಾಮ್ಬವನ್ತನು,  ‘ಅವನೇ ಇವನು’  ಎನ್ನುವ ಸತ್ಯವನ್ನು ತಿಳಿದನು.

[ಇದನ್ನು ವಿಷ್ಣುಪುರಾಣದಲ್ಲಿ(೪.೧೩.೫೩) ವಿವರಿಸಿರುವುದನ್ನು ಕಾಣಬಹುದು: ಅವಶ್ಯಂ ಭವತಾsಸ್ಮತ್ಸ್ವಾಮಿನಾ ರಾಮೇಣೇವ ನಾರಾಯಣಸ್ಯ ಸಕಲಜಗತ್ಪರಯಾಣಸ್ಯಾಂಶೇನ ಭಗವತಾ ಭವಿತವ್ಯಮಿತ್ಯುಕ್ತಸ್ತಸ್ಮೈ ಭಗವಾನಖಿಲಾವನಿಭಾರಾವತರಣಾರ್ಥಮವತರಣಮಾಚಚಕ್ಷೇ]

 

ತತಃ ಕ್ಷಮಾಪಯನ್ ಸುತಾಂ ಪ್ರದಾಯ ರೋಹಿಣೀಂ ಶುಭಾಮ್ ।

ಮಣಿಂ ಚ ತಂ ನುನಾವ ಸಃ ಪ್ರಪನ್ನ ಆಶು ಪಾದಯೋಃ ॥೧೭.೨೧೧॥

 

ಶ್ರೀರಾಮನೇ ತನ್ನೆದುರು ನಿಂತಿರುವ ಶ್ರೀಕೃಷ್ಣ ಎಂದು ತಿಳಿದ ತಕ್ಷಣ, ಕೃಷ್ಣನಲ್ಲಿ ಕ್ಷಮೆ ಬೇಡಿದ ಜಾಮ್ಬವನ್ತ,  ರೋಹಿಣಿ ಎಂಬ ಹೆಸರಿನ ತನ್ನ ಮಗಳನ್ನು ಕೃಷ್ಣನಿಗೆ ಕೊಟ್ಟು, ಸ್ಯಮಂತಕ ಮಣಿಯನ್ನೂ ಕೂಡಾ ಕೊಟ್ಟು, ಪರಮಾತ್ಮನ ಪಾದದಲ್ಲಿ ಬಿದ್ದು ಸ್ತೋತ್ರಮಾಡಿದ.  

 

ವಿಧಾಯ ಚಕ್ರದಾರಿತಂ ಸುಜೀರ್ಣ್ಣದೇಹಮಸ್ಯ ಸಃ ।

ಯುವಾನಮಾಶು ಕೇಶವಶ್ಚಕಾರ ವೇದನಾಂ ವಿನಾ ॥೧೭.೨೧೨॥

 

ಕೃಷ್ಣನು ಮುಪ್ಪಾನುಮುಪ್ಪಾದ ಜಾಮ್ಬವಂತನ ದೇಹವನ್ನು ತನ್ನ ಚಕ್ರದಿಂದ ಸೀಳಿ, ಯಾವುದೇ ನೋವುಂಟುಮಾಡದೇ ಅವನನ್ನು ಯುವಕನನ್ನಾಗಿ ಮಾಡಿದನು.


Saturday, August 1, 2020

Mahabharata Tatparya Nirnaya Kannada 17192_17201

ಪತಿಂ ಸುಪೂರ್ಣ್ಣಯೌವನಂ ನಿರೀಕ್ಷ್ಯತಾಂ ವಿಷಜ್ಜತೀಮ್ ।

ಉವಾಚ ಕಾರ್ಷ್ಣ್ಣಿರಮ್ಬ ತೇ ಕುಚೇಷ್ಟಿತಂ ಕಥಂ ನ್ವಿತಿ ॥೧೭.೧೯೨॥

 

ಪೂರ್ಣಯೌವನವನ್ನು ಪಡೆದ ಮನ್ಮಥನನ್ನು ಕಂಡು ನಾಚಿಕೊಳ್ಳುತ್ತಿರುವ ರತಿಯನ್ನು ಕುರಿತು: ‘ಅಮ್ಮಾ, ಏಕೆ ಈರೀತಿ ಕೆಟ್ಟಚೇಷ್ಟೆ ಮಾಡುತ್ತಿದ್ದೀಯಾ’ ಎಂದು ಕಾರ್ಷ್ಣಿ(ಕೃಷ್ಣಪುತ್ರನಾದ ಪ್ರದ್ಯುಮ್ನ) ಪ್ರಶ್ನಿಸುತ್ತಾನೆ.

 

ಜಗಾದ ಸಾsಖಿಲಂ ಪತೌ ತದಸ್ಯ ಜನ್ಮ ಚಾsಗತಿಮ್ ।

ತತೋsಗ್ರಹೀತ್ ಸ ತಾಂ ಪ್ರಿಯಾಂ ರತಿಂ ರಮಾಪತೇಃ  ಸುತಃ ॥೧೭.೧೯೩॥

 

ಪ್ರದ್ಯುಮ್ನನ ಪ್ರಶ್ನೆಗೆ ಉತ್ತರಿಸಿದ ರತಿ,  ಅವನ ಜನ್ಮವನ್ನೂ, ಅವನು ಬಂದ ಕಾರಣವನ್ನು, ಹೀಗೆ ಎಲ್ಲವನ್ನೂ ತನ್ನ  ಗಂಡನಿಗೆ ಹೇಳಿದಳು. ತದನಂತರ ಪರಮಾತ್ಮನ ಮಗನಾದ ಪ್ರದ್ಯುಮ್ನನು ರತಿಯನ್ನು ತನ್ನ ಪ್ರಿಯೆಯನ್ನಾಗಿ ಸ್ವೀಕರಿಸಿದನು.

[ಈ ಕುರಿತಾದ ವಿವರಣೆ ಹರಿವಂಶದಲ್ಲಿ(೧೦೪.೨೪-೨೫) ಕಾಣಸಿಗುತ್ತದೆ: ‘ನ ತ್ವಂ ಮಮ ಸುತಃ ಕಾಂತ ನಾಪಿ ತೇ ಶಮ್ಬರಃ ಪಿತಾ । .... ಪುತ್ರಸ್ತ್ವಂ ವಾಸುದೇವಸ್ಯ ರುಗ್ಮಿಣ್ಯಾನಂದವರ್ಧನಃ  । ದಿವಸೇ ಸಪ್ತಮೇ ಬಾಲೋ ಜಾತಮಾತ್ರೋsಪವಾಹಿತಃ’

ಇನ್ನು ಭಾಗವತದಲ್ಲೂ (೧೦.೬೮.೧೫) ಈ ವಿವರಣೆ ಕಾಣಸಿಗುತ್ತದೆ: ‘ಭವಾನ್ ನಾರಾಯಣಸುತಃ  ಶಮ್ಬರೇಣಾsಹೃತೋ ಗೃಹಾತ್ । ಅಹಂ ತೇsಧಿಕೃತಾ ಪತ್ನೀ ರತಿಃ ಕಾಮೋ ಭವಾನ್ ಪ್ರಭೋ’]

 

ದದೌ ಚ ಮನ್ತ್ರಮುತ್ತಮಂ ಸಮಸ್ತಮಾಯಿನಾಶಕಮ್ ।

ಭೃಗೂತ್ಥರಾಮದೈವತಂ ರತಿರ್ಹರೇಃ ಸುತಾಯ ಸಾ ॥೧೭.೧೯೪॥

 

 

ರತಿಯು, ಎಲ್ಲಾ ಮಾಯೆಯನ್ನೂ ನಾಶಮಾಡುವ ಶಕ್ತಿಯುಳ್ಳ,  ಪರಶುರಾಮನೇ ದೇವತೆಯಾಗಿರುವ, ಉತ್ಕೃಷ್ಟವಾದ ಮಂತ್ರವನ್ನು ಪ್ರದ್ಯುಮ್ನನಿಗೆ ಕೊಟ್ಟಳು.

 

ತತಃ ಸ್ವದಾರಧರ್ಷಕಂ ಸಮಾಹ್ವಯದ್ ಯುಧೇsಙ್ಗಜಃ ।

ಸ ಶಮ್ಬರಂ ಸ ಚೈತ್ಯ ತಂ ಯುಯೋಧ ಶಕ್ತಿತೋ ಬಲೀ ॥೧೭.೧೯೫॥

 

ತದನಂತರ, ಪರಮಾತ್ಮನ ಅಂಗದಿಂದ ಹುಟ್ಟಿದ ಪ್ರದ್ಯುಮ್ನನು, ತನ್ನ ಹೆಂಡತಿಯನ್ನು ಇಷ್ಟು ದಿನ ಬಲಾತ್ಕಾರ ಮಾಡಿದ ಶಮ್ಬರನನ್ನು ಹೊಂದಿ, ಅವನನ್ನು ಯುದ್ಧಕ್ಕೆ ಕರೆದನು. ಶಕ್ತಿಯಿಂದ ಬಲಿಷ್ಠನಾಗಿ ಅವನೊಂದಿಗೆ ಯುದ್ಧಮಾಡಿದನು ಕೂಡಾ.

 

ಸ ಚರ್ಮ್ಮಖಡ್ಗಧಾರಿಣಂ ವರಾಸ್ತ್ರಶಸ್ತ್ರಪಾದಪೈಃ ।

ಯದಾ ನ ಯೋದ್ಧುಮಾಶಕದ್ಧರೇಃ ಸುತಂ ನ ದೃಶ್ಯತೇ ॥೧೭.೧೯೬॥

 

ಖಡ್ಗ ಹಾಗೂ ಚರ್ಮಧಾರಿಯಾಗಿರುವ, ಅಸ್ತ್ರ, ಶಸ್ತ್ರ, ಪಾದಪಗಳಿಂದ ಯುದ್ಧಮಾಡುವ ಪರಮಾತ್ಮನ ಮಗನೊಂದಿಗೆ ಯುದ್ಧಮಾಡಲು ಶಮ್ಬರನು ಯಾವಾಗ ಸಮರ್ಥನಾಗಲಿಲ್ಲವೋ, ಆಗ ಅವನು ತನ್ನ ಮಾಯಾವಿದ್ಯೆಯನ್ನು ಬಳಸಿ ಅದೃಶ್ಯನಾದನು.

 

ಸಹಸ್ರಮಾಯಮುಲ್ಬಣಂ ತ್ವದೃಶ್ಯಮಮ್ಬರಾದ್ ಗಿರೀನ್ ।

ಸೃಜನ್ತಮೇತ್ಯ ವಿದ್ಯಯಾ ಜಘಾನ ಕೃಷ್ಣನನ್ದನಃ ॥೧೭.೧೯೭॥

 

ಪ್ರದ್ಯುಮ್ನನು ಸಾವಿರಾರು ಕುಟಿಲ ವಿದ್ಯೆಗಳುಳ್ಳ, ಕಣ್ಣಿಗೆ ಕಾಣದೆ ಎಲ್ಲೋ ಆಕಾಶದಿಂದ ಬಂಡೆಗಳನ್ನು ತನ್ನೆಡೆಗೆ ಎಸೆಯುವ ಶಮ್ಬರಾಸುರನನ್ನು, ರತಿಯಿಂದ ಕೊಡಲ್ಪಟ್ಟ ಪರಶುರಾಮ  ದೇವಾತ್ಮಕವಾದ ವಿದ್ಯೆಯನ್ನು ಬಳಸಿ ಕೊಂದನು.

 

ಸ ವಿದ್ಯಯಾ ವಿನಾಶಿತೋರುಮಾಯ ಆಶು ಶಮ್ಬರಃ ।

ನಿಕೃತ್ತಕನ್ಧರೋsಪತದ್ ವರಾಸಿನಾsಮುನಾ ಕ್ಷಣಾತ್ ॥೧೭.೧೯೮॥

 

ಆ ಶಮ್ಬರನು  ತನ್ನ ಕುಟಿಲ ವಿದ್ಯೆಗಳನ್ನೆಲ್ಲವನ್ನೂ ಕಳೆದುಕೊಂಡು, ಪ್ರದ್ಯುಮ್ನನ ಕತ್ತಿಯಿಂದ ಕತ್ತರಿಸಲ್ಪಟ್ಟ ಕತ್ತುಳ್ಳವನಾಗಿ ಕೆಳಗೆ ಬಿದ್ದನು.  

 

ನಿಹತ್ಯ ತಂ ಹರೇಃ ಸುತಃ ತಯೈವ ವಿದ್ಯಯಾsಮ್ಬರಮ್ ।

ಸಮಾಸ್ಥಿತಃ ಸ್ವಭಾರ್ಯ್ಯಯಾ ಸಮಂ ಕುಷಸ್ಥಲೀಂ ಯಯೌ ॥೧೭.೧೯೯॥

 

ಈರೀತಿ ಶಮ್ಬರನನ್ನು ಕೊಂದ ಪ್ರದ್ಯುಮ್ನನು, ಅದೇ ವಿದ್ಯೆಯನ್ನು ಬಳಸಿ, ಆಕಾಶವನ್ನು ಏರಿ, ತನ್ನ ಹೆಂಡತಿಯೊಂದಿಗೆ ಕೂಡಿಕೊಂಡು ದ್ವಾರಕೆಗೆ ತೆರಳಿದನು.

 

 

ಸಮಸ್ತವೇದಿನೋರ್ಮ್ಮುನಿರ್ನ್ನರಾನ್ ವಿಡಮ್ಬಮಾನಯೋಃ ।

ರಮಾರಮೇಶಯೋಃ ಸುತಂ ಜಗಾದ ತಂ ಸ್ಮ ನಾರದಃ ॥೧೭.೨೦೦॥

 

ಎಲ್ಲವನ್ನೂ ಬಲ್ಲ, ನರರನ್ನು ಅನುಕರಿಸುತ್ತಿರುವ ರಮಾ-ರಮೇಶರಿಗೆ ನಾರದರು, ಪ್ರದ್ಯುಮ್ನ ಅವರ ಮಗ ಎಂದು ಹೇಳಿದರು.

 

ಸ ರುಗ್ಮಿಣೀಜನಾರ್ದ್ದನಾದಿಭಿಃ ಸರಾಮಯಾದವೈಃ ।

ಪಿತಾಮಹೇನ ಚಾsದರಾತ್ ಸುಲಾಳಿತೋsವಸತ್ ಸುಖಮ್ ॥೧೭.೨೦೧॥

 

ಪ್ರದ್ಯುಮ್ನನು ರಾಮನಿಂದ ಕೂಡಿದ ಯಾದವರಿಂದ, ರುಗ್ಮಿಣಿ-ಜನಾರ್ದನ ಮೊದಲಾದವರಿಂದ, ತಾತನಿಂದಲೂ(ವಸುದೇವನಿಂದಲೂ) ಕೂಡಾ ಅತ್ಯಂತ ಗೌರವಿಸಲ್ಪಟ್ಟು, ಸುಖವಾಗಿ ವಾಸಮಾಡಿದ.

 


Mahabharata Tatparya Nirnaya Kannada 17187_17191

ಅನಙ್ಗತಾಮುಪಾಗತೇ ಪುರಾ ಹರೇಣ ಸಾsಙ್ಗಜೇ।

ವಶಂ ವಿರಿಞ್ಚಶಾಪತೋ ಜಗಾಮ ಶಮ್ಬರಸ್ಯ ಹಿ ॥೧೭.೧೮೭॥

 

ಹಿಂದೆ, ರುದ್ರನಿಂದ ಮನ್ಮಥನು ಅವಯವಗಳನ್ನು ಕಳೆದುಕೊಳ್ಳಲು, ಬ್ರಹ್ಮದೇವರ ಶಾಪದಿಂದ ರತಿ ಶಮ್ಬರನ ವಶವನ್ನು ಹೊಂದಿದಳು.

 

(ಬ್ರಹ್ಮದೇವರ ಶಾಪಕ್ಕೆ ಕಾರಣವನ್ನು ಹೇಳುತ್ತಾರೆ: )

 

ಪುರಾ ಹಿ ಪಞ್ಚಭರ್ತ್ತೃಕಾಂ ನಿಶಮ್ಯ ಕಞ್ಜಜೋದಿತಾಮ್ ।

ಜಹಾಸ ಪಾರ್ಶತಾತ್ಮಜಾಂ ಶಶಾಪ ತಾಂ ತತಸ್ತ್ವಜಃ ॥೧೭.೧೮೮॥

 

ಒಮ್ಮೆ, ಬ್ರಹ್ಮದೇವರಿಂದ ಹೇಳಲ್ಪಟ್ಟ ಐದು ಗಂಡಂದಿರುಳ್ಳ ದ್ರೌಪದಿಯ ವಿಷಯವನ್ನು ಕೇಳಿ ರತಿ ಅಪಹಾಸ್ಯ ಮಾಡಿ ನಕ್ಕಳು. ಆಕಾರಣದಿಂದ ಬ್ರಹ್ಮದೇವರು ಅವಳನ್ನು ಶಪಿಸಿದರು.

[ಈ ಕಾರಣದಿಂದಲೇ ಉತ್ತಮರನ್ನು ಅಪಹಾಸ್ಯ ಮಾಡಬಾರದು ಎಂದು ಹೇಳುವುದು. ಅದರಲ್ಲೂ ವಿಶೇಷವಾಗಿ ದೇವೋತ್ತಮರನ್ನಂತೂ ಎಂದೆಂದಿಗೂ ಅಪಹಾಸ್ಯ ಮಾಡಲೇಬಾರದು]

 

ಭವಾಸುರೇಣ ದೂಷಿತೇತಿ ಸಾ ತತೋ ಹಿ ಮಾಯಯಾ ।

ವಿಧಾಯ ತಾಂ ನಿಜಾಂ ತನುಂ ಜಗಾಮ ಚಾನ್ಯಯಾsಸುರಮ್ ॥೧೭.೧೮೯॥

 

ಒಬ್ಬ ರಾಕ್ಷಸನಿಂದ ನಿನ್ನ ಮೈಕೊಳೆಯಾಗಲೀ ಎಂದು ಬ್ರಹ್ಮನಿಂದ ಶಪಿಸಲ್ಪಟ್ಟ ರತಿಯು, ಮಾಯೆಯಿಂದ ತನ್ನ ಶರೀರವನ್ನು ಮುಚ್ಚಿಕೊಂಡು, ಇನ್ನೊಂದು ಶರೀರದಿಂದ ಅಸುರನನ್ನು ಕುರಿತು ತೆರಳಿದಳು.

 

ಗೃಹೇsಪಿಸಾssಸುರೇ ಸ್ಥಿತಾ ನಿಜಸ್ವರೂಪತೋsಸುರಮ್ ।

ನ ಗಚ್ಛತಿ ಸ್ಮ ಸಾ ಪತಿಂ ನಿಜಂ ಸಮೀಕ್ಷ್ಯ ಹರ್ಷಿತಾ ॥೧೭.೧೯೦॥

 

ಅಸುರನಿಗೆ ಸಂಬಂಧಪಟ್ಟ ಮನೆಯಲ್ಲಿ ಇದ್ದವಳಾದರೂ, ತನ್ನ ಸ್ವರೂಪದಿಂದ ಅಸುರನನ್ನು ಸೇರಲಿಲ್ಲ. ಅಂಥಹ ರತಿ ತನ್ನ ಗಂಡನನ್ನು (ಮಗುವಿನ ಶರೀರದೊಂದಿಗೆ) ನೋಡಿ, ಅತ್ಯಂತ ಸಂತೋಷಗೊಂಡಳು.

 

ರಸಾಯನೈಃ ಕುಮಾರಕಂ ವ್ಯವರ್ದ್ಧಯದ್ ರತಿಃ ಪತಿಮ್ ।

ಸ  ಪೂರ್ಣ್ಣಯೌವನೋsಭವಚ್ಚತುರ್ಭಿರೇವ ವತ್ಸರೈಃ ॥೧೭.೧೯೧॥

 

ರತಿಯು ಪುಟ್ಟರೂಪದಲ್ಲಿರುವ ತನ್ನ ಗಂಡನನ್ನು ರಸಾಯನದಿಂದ ಬೆಳೆಸಿದಳು. ಅವನು ನಾಲ್ಕೇ ವರ್ಷಗಳಲ್ಲಿ ಸಂಪೂರ್ಣ ಯುವಕನಾಗಿ ಬೆಳೆದನು.

 

[ಇಲ್ಲಿ ‘ರಸಾಯನೈಃ ಕುಮಾರಕಂ’ ಎಂದು ಹೇಳಿದ್ದಾರೆ. ಈ ಕುರಿತಾದ ವಿವರಣೆಯನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೧೦೪.೧೨-೧೩) ಕಾಣಬಹುದು.  `  ಕಥಮಸ್ಯ ಸ್ತನಂ ದಾಸ್ಯೇ ಮಾತೃಭಾವೇನ ಜಾನತೀ । (ನನಗೆ ಅವನು ಯಾರೆಂಬುದು ಗೊತ್ತಿದೆ. ಹೀಗಿರುವಾಗ ಅವನಿಗೆ ಹೇಗೆ ಸ್ತನಪಾನ ಮಾಡಲಿ?) ಭರ್ತುರ್ಭಾರ್ಯಾ ತ್ವಹಂ ಭೂತ್ವಾ ವಕ್ಷ್ಯೇ ವಾ ಪುತ್ರ ಇತ್ಯುತಾ ।  (ಈತನ ಹೆಂಡತಿಯಾಗಿದ್ದು, ಅವನನ್ನು ‘ಮಗನೇ’ ಎಂದು ಯಾವರೀತಿ ಕರೆಯಲಿ?)  ಏವಂ ಸಞ್ಚಿಂತ್ಯ ಮನಸಾ ಧಾತ್ರ್ಯಾಸ್ತಂ ಸಾ ಸಮರ್ಪಯತ್ । (ಹೀಗೆ ಚಿಂತಿಸಿದ ಆಕೆ ಮಗುವಿನ ಆರೈಕೆಗಾಗಿ  ಒಬ್ಬ ದಾದಿಯನ್ನು ನೇಮಿಸಿದಳು). ರಸಾಯನಪ್ರಯೋಗೈಶ್ಚ ಶೀಘ್ರಮೇವ ವ್ಯವರ್ಧಯತ್’ (ರಸಾಯನ ಪ್ರಯೋಗದಿಂದ ಅವನನ್ನು ಶೀಘ್ರದಲ್ಲಿ  ದೊಡ್ಡವನನ್ನಾಗಿ ಬೆಳೆಸಿದಳು).