ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, November 7, 2021

Mahabharata Tatparya Nirnaya Kannada 21: 38-41

                        ಸಸ್ನಾವವಭೃಥಂ ಕೃಷ್ಣಃ ಸದಾರಃ ಸಸುಹೃಜ್ಜನಃ ।

ಆಯಾನ್ತಂ ದ್ವಾರಕಾಂ ಕೃಷ್ಣಂ ದನ್ತವಕ್ರೋ ರುರೋಧ ಹ           ॥೨೧.೩೮॥

 

ಜಘಾನ ಗದಯಾ ಕೃಷ್ಣಃ  ತಂ ಕ್ಷಣಾತ್ ಸವಿಡೂರಥಮ್ ।

ವಿಡೂರಥಸ್ತಮೋsಗಚ್ಛದ್ ದನ್ತವಕ್ರೇ ಚ ಯೋsಸುರಃ                ॥೨೧.೩೯॥

 

ಹರೇಃ ಪಾರ್ಷದಃ ಕ್ಷಿಪ್ರಂ ಹರಿಮೇವ ಸಮಾಶ್ರಿತಃ ।

ಕೃಷ್ಣೇ ಪ್ರಾಪ್ತೇ ಸ್ವಲೋಕಂ ಚ ನಿಸ್ಸೃತ್ಯಾಸ್ಮಾತ್ ಸ್ವರೂಪತಃ     ॥೨೧.೪೦॥

 

ಏಕೀಭಾವಂ ಸ್ವರೂಪೇಣ ದ್ವಾರಪೇನ ಗಮಿಷ್ಯತಿ ।                   

ತತಃ ಕೃಷ್ಣಃ ಪುರೀಮೇತ್ಯ ಬೋಧಯಾಮಾಸ ಫಲ್ಗುನಮ್         ॥೨೧.೪೧॥

 

ಕೃಷ್ಣನು ತನ್ನ ಹೆಂಡತಿಯರೊಂದಿಗೆ ಮತ್ತು ಮಿತ್ರರೊಂದಿಗೆ ಕೂಡಿದವನಾಗಿ ಅವಭೃಥ ಸ್ನಾನವನ್ನು(ಯಜ್ಞಾಂತ್ಯದಲ್ಲಿ ಮಾಡುವ ಸ್ನಾನವನ್ನು) ಮಾಡಿದ. [ಸಾಮಾನ್ಯವಾಗಿ ಯಜ್ಞ ನಡೆಸುವುದು ಊರ ಹೊರಗೆ ನದಿ ತೀರದಲ್ಲಿ. ಯಜ್ಞ ಮುಗಿದಮೇಲೆ ನದಿಯಲ್ಲಿ ಸ್ನಾನ ಮಾಡಿ(ಅವಭೃಥ ಸ್ನಾನ ಮುಗಿಸಿ) ಪಟ್ಟಣಕ್ಕೆ ಹಿಂತಿರುಗುತ್ತಾರೆ]. ದ್ವಾರಕಾಪಟ್ಟಣವನ್ನು ಕುರಿತು ಬರುತ್ತಿರುವ ಕೃಷ್ಣನನ್ನು ಶಿಶುಪಾಲನ ವೈಮಾತ್ರೇಯನು (ದಂತವಕ್ರನು) ವಿಡೂರಥನಿಂದೊಡಗೂಡಿ ತಡೆದ. ಕೃಷ್ಣನು ಅವರನ್ನು  ಕ್ಷಣದಲ್ಲಿ ತನ್ನ ಗದೆಯಿಂದ ಕೊಂದ. ವಿಡೂರಥನು ಅನ್ಧಂತಮಸ್ಸಿಗೆ ತೆರಳಿದ. ದಂತವಕ್ರನಲ್ಲಿ ಯಾವ ಅಸುರನಿದ್ದ, ಅವನೂ ಕೂಡಾ ಅನ್ಧಂತಮಸ್ಸಿಗೆ ತೆರಳಿದ. (ದಂತವಕ್ರನಲ್ಲಿ ಜೀವದ್ವಯ ಸಮಾವೇಶ. ಒಬ್ಬ ಭಗವಂತನ ದ್ವಾರಪಾಲಕನಾದ ವಿಜಯನಾದರೆ ಇನ್ನೊಬ್ಬ ಅಸುರ. ಆ ಅಸುರ ಅನ್ಧಂತಮಸ್ಸಿಗೆ ಹೋದ) ಪರಮಾತ್ಮನ ದ್ವಾರಪಾಲಕನಾಗಿರುವ ವಿಜಯನು ಕೂಡಲೇ ಕೃಷ್ಣನ ಉದರವನ್ನಾಶ್ರಯಿಸಿದ. ಮುಂದೆ ಕೃಷ್ಣ ತನ್ನ ಲೋಕವನ್ನು ಹೊಂದಲು ವಿಜಯನು ಕೃಷ್ಣನಿಂದ ಹೊರಬಂದು, ತನ್ನ ಮೂಲರೂಪದಲ್ಲಿ(ದ್ವಾರಪಾಲಕ ವಿಜಯನಲ್ಲಿ)  ಐಕ್ಯವನ್ನು ಹೊಂದುತ್ತಾನೆ. (ದೇವತೆಗಳಿಗಿರುವಂತೆ  ಹಲವಾರು ದೇಹ ಜಯ-ವಿಜಯರಿಗೂ ಇದೇ ಎನ್ನುವುದು ಇಲ್ಲಿ ನಮಗೆ ತಿಳಿಯುತ್ತದೆ. ಭೂಮಿಯಲ್ಲಿ ಹುಟ್ಟಿದಾಗಲೂ ಕೂಡಾ  ವೈಕುಂಠದಲ್ಲೂ ಅವರ ಉಪಸ್ಥಿತಿ ಇರುತ್ತದೆ. ಜಯ-ವಿಜಯರು ವೈಕುಂಠದಲ್ಲಿ ದ್ವಾರಪಾಲಕರಾಗಿ ಯಾವಾಗಲೂ ಒಂದು ರೂಪದಿಂದ ಇದ್ದೇ ಇದ್ದರು. ಇನ್ನೊಂದು ರೂಪದಿಂದ ಅವರು ಹಿರಣ್ಯಕಶಿಪು-ಹಿರಣ್ಯಾಕ್ಷ, ರಾವಣ-ಕುಂಭಕರ್ಣ, ದಂತವಕ್ರ-ಶಿಶುಪಾಲರಾಗಿ ಇಲ್ಲಿ ಪರಮಾತ್ಮನ ಕಾರ್ಯಕ್ಕೆ ನೆರವಾದರು.)

ತದನಂತರ ಕೃಷ್ಣನು ದ್ವಾರಕಾ ಪಟ್ಟಣವನ್ನು ಹೊಂದಿ ಅರ್ಜುನನಿಗೆ ಉಪದೇಶವನ್ನು ಮಾಡಿದ.

[ದಂತವಕ್ರ ಕೃಷ್ಣನನ್ನು ಎದುರಿಸಿದ ಪ್ರಸಂಗವನ್ನು ಭಾಗವತದಲ್ಲಿ(೧೦.೧೦೧.೧) ವಿವರಿಸಿರುವುದನ್ನು ನಾವು ಕಾಣಬಹುದು. ಉದ್ಯಾಪನಸ್ನಾನಹೇತೋರ್ಯಮುನಾತೀರಮಾಗತಮ್   ಶ್ರುತ್ವಾ ತೂರ್ಣಂ ಕಲಿಙ್ಗೇಶೋ ದನ್ತವಕ್ರಃ ಸಹಾನುಜಃ । ಮಹತ್ಯಾ ಸೇನಯಾ ಯುಕ್ತೋ ಗಜಾನೀಕಸಮನ್ವಿತಃ । ಗಚ್ಛನ್ತಂ ದ್ವಾರಕಾಂ ಕೃಷ್ಣಂ ಪಥಿ ರೋದ್ಧುಂ ಸಮಾಯಯೌ’ ದಂತವಕ್ರನು ಅನುಜನಾದ ವಿಡೂರಥನೊಂದಿಗೆ ಕೂಡಿ, ದೊಡ್ಡ ದೊಡ್ಡ ಆನೆಗಳ ಪಡೆಯನ್ನು ಕಟ್ಟಿಕೊಂಡು ದ್ವಾರಕೆಗೆ ಹೋಗುತ್ತಿರುವ ಕೃಷ್ಣನನ್ನು ಎದುರುಗೊಂಡ].

Tuesday, November 2, 2021

Mahabharata Tatparya Nirnaya Kannada 21: 34-37

             ದರ್ಪ್ಪಂ ನಿಹನ್ತುಂ ಹರಿರರ್ಜ್ಜುನಸ್ಯ ಸಮಾನಯದ್ ವಿಪ್ರಸುತಾನ್ ಪರೇಶಃ ।

ಪ್ರೀತಿರ್ಮ್ಮಹತ್ಯೇವ ಯತೋsರ್ಜ್ಜುನೇ ಹರೇಃ ಸಂಶಿಕ್ಷಯಾಮಾಸ ತತಃ ಸ ಏನಮ್ ॥೨೧.೩೪॥

 

ಪರಮಾತ್ಮನು ಅರ್ಜುನನ ದರ್ಪವನ್ನು(ಅಹಂಕಾರವನ್ನು) ನಾಶಮಾಡಲೆಂದು ಬ್ರಾಹ್ಮಣನ ಮಕ್ಕಳನ್ನು ತಂದನು. ಯಾವ ಕಾರಣದಿಂದ ಅರ್ಜುನನಲ್ಲಿ ಕೃಷ್ಣನಿಗೆ ಅತ್ಯಂತ ಪ್ರೀತಿಯೋ, ಆ ಕಾರಣದಿಂದಲೇ ಅವನು ಈ ರೀತಿ ಅರ್ಜುನನಿಗೆ ಭೋಧಿಸಿದನು(ಜ್ಞಾನೋದಯವಾಗುವಂತೆ ಮಾಡಿದನು).

 

ಅಪ್ರಾಕೃತಾತ್ ಸದನಾದ್ ವಾಸುದೇವೋ ನಿಸ್ಸೃತ್ಯ ಸೂರ್ಯ್ಯಾಧಿಕಲಕ್ಷದೀಧಿತೇಃ ।

ರಥಂ ಸಮಾರು̐ಹ್ಯ ಸಪಾರ್ತ್ಥವಿಪ್ರ ಆಗಾತ್ ಸುತಾಂಶ್ಚೈವ ದದೌ ದ್ವಿಜಾಯ             ॥೨೧.೩೫॥

 

ಕೃಷ್ಣನು ಅಪ್ರಾಕೃತವಾಗಿರುವ, ಅನಂತ ಸೂರ್ಯರ ಕಾಂತಿಯುಳ್ಳ ತನ್ನ ಮನೆಯಿಂದ ಹೊರ ಬಂದು, ರಥವನ್ನು ಏರಿ, ಅರ್ಜುನ ಹಾಗೂ ಬ್ರಾಹ್ಮಣನೊಂದಿಗೆ ಕೂಡಿಕೊಂಡು ಮರಳಿ ಬಂದ. ಬ್ರಾಹ್ಮಣನಿಗೆ ಮಕ್ಕಳನ್ನು ಕೊಟ್ಟ ಕೂಡಾ.

 

ಲೋಕಶಿಕ್ಷಾರ್ತ್ಥಮೇವಾಸೌ ಪ್ರಾಯಶ್ಚಿತ್ತಂ ಚ ಚಾಲನೇ ।

ಚಕ್ರೇ ಸಾರ್ದ್ಧಮುಹೂರ್ತೇನ  ಸಮಾಗಮ್ಯ ಪುನರ್ಮ್ಮಖಮ್    ॥೨೧.೩೬॥

 

ಶ್ರೀಕೃಷ್ಣನು ಲೋಕಶಿಕ್ಷಣಕ್ಕಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡ. (ಯಜ್ಞದಲ್ಲಿ ದೀಕ್ಷಿತನಾದ ಯಜಮಾನನು ಅನಿವಾರ್ಯ ಕಾರಣಗಳಿಂದ ಹೊರಗಡೆ ಹೋಗಬೇಕಾಗಿ ಬಂದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಷ್ಟೇ, ಲೋಕಶಿಕ್ಷಣಕ್ಕಾಗಿ ಶ್ರೀಕೃಷ್ಣ ಪ್ರಾಯಶ್ಚಿತವನ್ನು ಮಾಡಿಕೊಂಡ). ಇದೆಲ್ಲವೂ ನಡೆದಿರುವುದು ಕೇವಲ ಮೂರು ಘಳಿಗೆಯಲ್ಲಿ.  (ಸಾರ್ದ್ಧಂ ಮುಹೂರ್ತ್ತಮಿತಿ ಘಟಿಕಾತ್ರಯಮ್). 

 

ಬ್ರಹ್ಮಾದೀನಾಗತಾಂಶ್ಚೈವ ಸದಾ ಸ್ವಪರಿಚಾರಕಾನ್ ।

ಪೂಜಯಿತ್ವಾsಭ್ಯನುಜ್ಞಾಯ ಬ್ರಾಹ್ಮಣಾನಪ್ಯಪೂಜಯತ್           ॥೨೧.೩೭॥

 

ಬಂದಿರುವ, ತನ್ನ ಸೇವೆಯನ್ನು ಮಾಡುವ ಬ್ರಹ್ಮಾದಿಗಳನ್ನು ಗೌರವಿಸಿ, ಅವರಿಗೆ (ಇನ್ನು ನಿಮ್ಮ ಲೋಕಕ್ಕೆ ತೆರಳಿರಿ ಎನ್ನುವ) ಅನುಜ್ಞೆಯನ್ನು ಕೊಟ್ಟು, ಬ್ರಾಹ್ಮಣರನ್ನೂ ಕೃಷ್ಣ ಪೂಜಿಸಿದ. 

[ಈ ಕುರಿತಾದ ವಿವರಣೆಯನ್ನು ನಾವು ಭಾಗವತದಲ್ಲಿ(೧೦.೧೦೦.೭೨-೭೫) ಕಾಣಬಹುದು. ‘ಪ್ರಾಯಶ್ಚಿತ್ತಂ ತು ಚಲನೇ ದೀಕ್ಷಾಯಾಂ  ಯ ಉದಾಹೃತಃ   ತಂ ಚಕಾರ  ಯಥಾನ್ಯಾಯಂ ಬ್ರಾಹ್ಮಣೈರನುಮೋದಿತಃ । ಸಮಾಪ್ಯ ಯಜ್ಞಂ ವಿಧಿವತ್ ತರ್ಪಯಿತ್ವಾsರ್ಥಿನೋ ದ್ವಿಜಾನ್ । ಋತ್ವಿಜಃ ಪೂಜಯಿತ್ವಾsನ್ಯಾನೃಷಿಂಶ್ಚ ಕುರುಸತ್ತಮ । ಯಮುನಾಯಾಂ ಮಹಾನದ್ಯಾಂ ಕೃತ್ವಾsವಭೃಥಮಜ್ಜನಮ್ । ವಿಜಹಾರ ಯಥಾಕಾಮಂ ಮಹಿಷೀಭಿರ್ಯದೂತ್ತಮಃ’ ]

Monday, November 1, 2021

Mahabharata Tatparya Nirnaya Kannada 21: 29-33

 

ವಹ್ನಿಂ ವಿವಿಕ್ಷನ್ತಮಮುಂ ನಿವಾರ್ಯ್ಯ ಯಯೌ ಸವಿಪ್ರಃ  ಸಹಫಲ್ಗುನೋ ಹರಿಃ ।

ಆಶಾಮುದೀಚೀಂ ಬೃಹತಾ ರಥೇನ ಕ್ಷಣೇನ ತೀರ್ತ್ತ್ವೈವ ಚ ಸಪ್ತವಾರಿಧೀನ್             ॥೨೧.೨೯॥

 

ತದನಂತರ ಬೆಂಕಿಯನ್ನು ಪ್ರವೇಶಮಾಡಲು ಬಯಸುವ ಅರ್ಜುನನನ್ನು ತಡೆದ ಕೃಷ್ಣನು, ಬ್ರಾಹ್ಮಣ ಹಾಗೂ ಅರ್ಜುನನೊಂದಿಗೆ ಕೂಡಿಕೊಂಡು, ಬೃಹತ್ ರಥವನ್ನೇರಿ, ಉತ್ತರದಿಕ್ಕಿನಲ್ಲಿ, ಕ್ಷಣದಲ್ಲಿ ಏಳು ಸಮುದ್ರಗಳನ್ನು ದಾಟಿ ತೆರಳಿದನು.

 

ದದುಶ್ಚ ಮಾರ್ಗ್ಗಂ ಗಿರಯೋsಬ್ಧಯಸ್ತಥಾ ವಿದಾರ್ಯ್ಯ ಚಕ್ರೇಣ ತಮೋsನ್ಧಮೀಶಃ ।

ಘನೋದಕಂ ಚಾಪ್ಯತಿತೀರ್ಯ್ಯ ತತ್ರ ದದರ್ಶ ಧಾಮ ಸ್ವಮನನ್ತವೀರ್ಯ್ಯಃ             ॥೨೧.೩೦॥

 

ಪರ್ವತಗಳೂ ಸಮುದ್ರಗಳೂ ಅವರಿಗೆ ದಾರಿಯನ್ನು ಕೊಟ್ಟವು. ಕೃಷ್ಣನು ಚಕ್ರದಿಂದ ದಟ್ಟವಾದ ಕತ್ತಲನ್ನು(ಅನ್ಧಂತಮಸ್ಸನ್ನು) ಕತ್ತರಿಸಿ, ಘನೋದಕವನ್ನೂ ದಾಟಿ, ಅಪ್ರಾಕೃತವಾದ ತನ್ನ ಮನೆಯನ್ನು ಕಂಡನು.

[ಹರಿವಂಶದ ವಿಷ್ಣುಪರ್ವದಲ್ಲಿ(೧೧೨.೩೦) ಈ ಕುರಿತ ವಿವರವಿದೆ: ‘ತತಃ ಸಮಾಸ್ಥಾಯ ರಥಂ ಕೃಷ್ಣೋsಹಂ ಬ್ರಾಹ್ಮಣಃ ಸ ಚ । ಪ್ರಯಾತಾಃ ಸ್ಮ ದಿಶಂ ಸೌಮ್ಯಾಮುದೀಚೀಂ ಕೌರವರ್ಷಭ’  ‘ತದನಂತರ ನಾನು, ಬ್ರಾಹ್ಮಣ ಮತ್ತು ಕೃಷ್ಣ ರಥವನ್ನು ಏರಿ ಉತ್ತರ ದಿಕ್ಕನ್ನು ಕುರಿತು ಹೊರಟೆವು’ ಎಂದು ಅರ್ಜುನ ಯುಧಿಷ್ಠಿರನಲ್ಲಿ ಹೇಳಿದ ಮಾತು ಇದಾಗಿದೆ. ಇನ್ನು ಭಾಗವತ (೧೦.೧೦೦.೨೪) ಹೀಗೆ ಹೇಳುತ್ತದೆ: ಸಹೈವ ರಥಮಾಸ್ಥಾಯ ಪ್ರಾಚೀಂ ದಿಶಮವೀವಿಷತ್’ – ಇಲ್ಲಿ ಪೂರ್ವದಿಕ್ಕಿನತ್ತ ಹೊರಟರು ಎಂದು ಹೇಳಿದಂತೆ ಕಾಣುತ್ತದೆ. ವಸ್ತುತಃ ಪೂರ್ವದಿಕ್ಕಿನಿಂದ(ದ್ವಾರಕೆಯಿಂದ) ಹೊರಟರು ಎನ್ನುವುದನ್ನು ಭಾಗವತ ಹೇಳಿದೆ ಎಂದು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕು. ಭಾಗವತಲ್ಲೇ  ಮುಂದೆ (೧೦.೧೦೦.೫೫) ಸಪ್ತ ದ್ವೀಪಾನ್ ಸ ಸಿನ್ಧೂಂಶ್ಚ ಸಪ್ತ ಸಪ್ತ ಗಿರಿನಥ’ ಏಳು ಗಿರಿಗಳನ್ನು, ಏಳು  ಸಮುದ್ರಗಳನ್ನು ನಿರಾಯಾಸವಾಗಿ ದಾಟಿದರು ಎಂದು ಹೇಳಿರುವುದನ್ನು ನಾವು ಕಾಣಬಹುದು.

ಇಲ್ಲಿ ಆಚಾರ್ಯರು ‘ವಿದಾರ್ಯ ಚಕ್ರೇಣ ತಮೋsನ್ಧಮೀಶಃ’ ಎಂದು ಹೇಳಿದ್ದಾರೆ. ಅಂದರೆ ಗಟ್ಟಿಯಾದ ಕತ್ತಲನ್ನು ಕತ್ತರಿಸಿ ದೇವರು ಮುಂದೆ ಹೋದ ಎಂದರ್ಥ. ಭಾಗವತದಲ್ಲಿಯೂ ‘ಅನ್ಧಂತಮಃ’ ಎಂದು ಹೇಳಿರುವುದು ಕಾಣಸಿಗುತ್ತದೆ. ಇದನ್ನು ಹಿನ್ನೆಲೆಯಾಗಿ ಬಳಸಿ ವ್ಯಾಸತೀರ್ಥರು ‘ಕತ್ತಲಿಗೆ ಒಂದು ಪ್ರತ್ಯೇಕವಾದ ಅಸ್ತಿತ್ವವಿದೆ, ತಮಸ್ಸು ಎನ್ನುವುದು ಒಂದು ದ್ರವ್ಯ. ಅನ್ಧಂತಮಃ  ಎಂದರೆ ಕೇವಲ ಬೆಳಕು ಇಲ್ಲದಿರುವಿಕೆ ಅಲ್ಲ’ ಎಂದು ವಿವರಿಸಿರುವುದನ್ನು ನಾವು ಕಾಣಬಹುದು.]

 

ಸಂಸ್ಥಾಪ್ಯ ದೂರೇ ಸರಥಂ ಸವಿಪ್ರಂ ಪಾರ್ತ್ಥಂ ಸ್ವರೂಪೇ ದ್ವಿಚತುಷ್ಕಬಾಹೌ ।

ಸಮಸ್ತರತ್ನೋಜ್ಜ್ವಲದಿವ್ಯಭೂಷಣೇ ವಿವೇಶ ನಿತ್ಯೋರುಗುಣಾರ್ಣ್ಣವೇ ಪ್ರಭುಃ             ॥೨೧.೩೧॥

 

ದೂರದಲ್ಲಿ ರಥದಿಂದ ಕೂಡಿರುವ ಬ್ರಾಹ್ಮಣನಿಂದ ಕೂಡಿರುವ ಅರ್ಜುನನನ್ನು ನಿಲ್ಲಿಸಿ, ಎಂಟು ಕೈಗಳುಳ್ಳ, ಎಲ್ಲಾ ರತ್ನಗಳಿಂದ, ಉಜ್ವಲವಾಗಿ ಹೊಳೆಯುತ್ತಿರುವ ಭೂಷಣಗಳನ್ನು ಒಳಗೊಂಡ ತನ್ನ ಮೂಲರೂಪದಲ್ಲಿ ಸರ್ವಸಮರ್ಥನಾದ ಆ ಕೃಷ್ಣನು ಪ್ರವೇಶಿಸಿದನು.

[ಅರ್ಜುನ-ಬ್ರಾಹ್ಮಣರನ್ನು  ದೂರದಲ್ಲಿ ನಿಲ್ಲಿಸಿ ಕೃಷ್ಣ ತನ್ನ ಭವನವನ್ನು ಪ್ರವೇಶ ಮಾಡಿದ. ಆದರೆ ತನ್ನ ರೂಪಗಳೆಲ್ಲವನ್ನೂ ಅವರು ಕಾಣುವಂತೆ ಕರುಣಿಸಿದ.]    

 

ಸಹಸ್ರಮೂರ್ದ್ಧನ್ಯುರುಶೇಷಭೋಗ ಆಸೀನರೂಪೇsಮಿತಸೂರ್ಯ್ಯದೀಧಿತೌ ।

ರಮಾಸಹಾಯೇ ತಟಿದುಜ್ಜ್ವಲಾಮ್ಬರೇ ಮುಕ್ತೈರ್ವಿರಿಞ್ಚಾದಿಭಿರರ್ಚ್ಚಿತೇ ಸದಾ             ॥೨೧.೩೨॥

 

ಸ್ಥಿತ್ವೈಕರೂಪೇಣ ಮುಹೂರ್ತ್ತಮೀಶ್ವರೋ ವಿನಿರ್ಯ್ಯಯೌ ವಿಪ್ರಸುತಾನ್ ಪ್ರಗೃಹ್ಯ ।

ಸುನನ್ದನನ್ದಾದಯ ಏವ ಪಾರ್ಷದಾಸ್ತೇ ವೈಷ್ಣವಾ ಭೂಮಿತಳೇ ಪ್ರಜಾತಾಃ             ॥೨೧.೩೩॥

 

ಅನಂತವಾದ ತಲೆಗಳುಳ್ಳ, ಉತ್ಕೃಷ್ಟವಾಗಿರುವ ಮುಕ್ತಶೇಷನ ಮೈಯಲ್ಲಿ ಕುಳಿತಿರುವ, ಎಣೆಯಿರದಷ್ಟು  ನೇಸರರ ಕಾಂತಿಯುಳ್ಳ, ಲಕ್ಷ್ಮೀದೇವಿಯಿಂದ ಕೂಡಿರುವ, ಮಿಂಚಿನಂತಹ ಬಣ್ಣದ ಬಟ್ಟೆಯನ್ನು ತೊಟ್ಟಿರುವ, ಮುಕ್ತರಾಗಿರುವ ಬ್ರಹ್ಮಾದಿ ದೇವತೆಗಳಿಂದ ಪೂಜಿಸಲ್ಪಟ್ಟ ಆ ಮೂಲರೂಪದಲ್ಲಿ ಈ ಭೂವಿಷ್ಟವಾದ ಕೃಷ್ಣರೂಪದಿಂದ ಪ್ರವೇಶಿಸಿ,  ಸ್ವಲ್ಪಕಾಲ ಇದ್ದ ಸರ್ವಸಮರ್ಥನಾದ ಕೃಷ್ಣನು, ಬ್ರಾಹ್ಮಣನ ಮಕ್ಕಳೊಂದಿಗೆ ಹೊರಬಂದ. ಸುನಂದ, ನಂದ, ಕುಮುದ, ಕುಮುದಾಕ್ಷ ಎನ್ನುವ ಹೆಸರಿನ ಅವರು ವಿಷ್ಣುಲೋಕಪಾಲಕರು. ಭೂಮಿಯಲ್ಲಿ ಬ್ರಾಹ್ಮಣನ ಮನೆಯಲ್ಲಿ ಅವರೇ ಹುಟ್ಟಿರುವುದು. ಅವರೇ ಮಾಯವಾಗಿ ಅಲ್ಲಿಗೆ ಹೋಗುತ್ತಿದ್ದರು.

[ಇಲ್ಲಿ ಭಗವಂತನ ಅವತಾರ ರೂಪಕ್ಕೂ ಮೂಲರೂಪಕ್ಕೂ ಭೇದವಿಲ್ಲ ಎನ್ನುವುದನ್ನು ಭಗವಂತ ಮತ್ತೆ ತೋರಿಸಿರುವುದನ್ನು ಕಾಣಬಹುದು. ಭಗವಂತನ ಸಂಕಲ್ಪದಂತೆ ಈ ದ್ವಾರಪಾಲಕರು ಭೂಮಿಯಲ್ಲಿ ಹುಟ್ಟಿದಾಕ್ಷಣ ಮಾಯವಾಗಿ ಅಲ್ಲಿಗೆ ಹೋಗುತ್ತಿದ್ದರು. ಪರಮಾತ್ಮನ ಸಂಕಲ್ಪಕ್ಕೆ ವಿರುದ್ಧವಾಗಿ ಯಾವುದೇ ದಿಗ್ಬಂಧನ ಕೆಲಸ ಮಾಡಲು ಸಾಧ್ಯವಿಲ್ಲ.  

ಪೂಜೆಯಲ್ಲಿ ನಾವು ಸಂಕಲ್ಪಮಾಡುವ ದ್ವಾರಪಾಲಕರೆಲ್ಲರೂ ಆ ಕಾಲದಲ್ಲಿ ಭೂಮಿಯಲ್ಲಿ ಹುಟ್ಟಿರುವುದು ಇಲ್ಲಿ ನಮಗೆ ತಿಳಿಯುತ್ತದೆ. ಜಯ-ವಿಜಯರು ಶಿಶುಪಾಲ-ದಂತವಕ್ರರಾಗಿ, ಗದ-ಸಾರಣರು ಚಂಡ-ಪ್ರಚಂಡರಾಗಿ, ಸುನಂದ, ನಂದ, ಕುಮುದ ಮತ್ತು ಕುಮುದಾಕ್ಷ ಎನ್ನುವ ನಾಲ್ಕು ಜನ ಈ ಬ್ರಾಹ್ಮಣನ ಮಕ್ಕಳಾಗಿ  ಹುಟ್ಟಿದ್ದರು.

ಅರ್ಜುನ ತನಗಾದ ಈ ಅಚ್ಚರಿಯ ಅನುಭವವನ್ನು ಧರ್ಮರಾಜನೊಂದಿಗೆ ಹಂಚಿಕೊಳ್ಳುವ ವಿವರವನ್ನು ಹರಿವಂಶ(ವಿಷ್ಣುಪರ್ವ ೧೧೩.೧೮-೧೯) ವಿವರಿಸುತ್ತದೆ:  ಪ್ರದದುಃ ಕಾಮತೋ ಮಾರ್ಗಂ ಗಚ್ಛತೋ ಭರತರ್ಷಭ ತತ್ರೈವಾನ್ತರ್ಹಿತಾಃ  ಸರ್ವೇ ತದಾಶ್ಚರ್ಯತರಂ ಮಮ । ಅಸಕ್ತಂ ಚ ರಥೋ  ಯಾತಿ ಮೇಘಜಾಲೇಶ್ವಿವಾಂಶುಮಾನ್

ದ್ವಿಚತುಷ್ಕಬಾಹೌ’ ಎಂದು ಆಚಾರ್ಯರು ಇಲ್ಲಿ ಹೇಳಿರುವುದನ್ನು  ಭಾಗವತದಲ್ಲಿ(೧೦.೧೦೦.೬೩)  ಪ್ರಲಮ್ಬಚಾರ್ವಷ್ಟಭುಜಮ್’ ಎಂದು ವಿವರಿಸಿರುವುದನ್ನು ಕಾಣಬಹುದು. ಅದೇ ರೀತಿ  ಸಹಸ್ರಮೂರ್ದ್ಧನ್ಯುರುಶೇಷಭೋಗ’ ಎನ್ನುವ ಮಾತು ಭಾಗವತದಲ್ಲಿ(೧೦.೧೦೦.೬೧) ‘ಸಹಸ್ರಮೂರ್ಧನ್ಯಫಣಾಮಣಿದ್ಯುತಿಮ್’ ಎಂದು ಹೇಳಲ್ಪಟ್ಟಿದೆ.

ಶ್ರೀಕೃಷ್ಣ ಬ್ರಾಹ್ಮಣನ ನಾಲ್ಕು ಜನ ಮಕ್ಕಳೊಂದಿಗೆ  ತನ್ನ ಮನೆಯಿಂದ ಹೊರಬಂದ ಎಂದು ಹರಿವಂಶ (ವಿಷ್ಣುಪರ್ವ ೧೧೩.೨೭)  ವಿವರಿಸುವುದನ್ನು ಕಾಣಬಹುದು: ‘ಸ ಮಹೂರ್ತಾತ್ ತತಃ ಕೃಷ್ಣೋ ನಿಶ್ಚಕ್ರಾಮ ತದಾ ಪ್ರಭುಃ । ಚತುರೋ ಬಾಲಕಾನ್ ಗೃಹ್ಯ ಬ್ರಾಹ್ಮಣಾಸ್ಯಾsತ್ಮಜಾಂಸ್ತದ’ ]