ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 23, 2021

Mahabharata Tatparya Nirnaya Kannada 21: 55-59

 

ತತಃ ಕದಾಚಿತ್ ಪ್ರವರೇ ಸಭಾತಳೇ ಧರ್ಮ್ಮಾತ್ಮಜೋ ರಾಜಭಿರ್ಭ್ರಾತೃಭಿಶ್ಚ ।

ವೃತೋ ನಿಶಮ್ಯೈವ ಸಭಾಃ ಸುರಾಣಾಂ ಯಥಾ ಸ್ಥಿತಾ ನಾರದಮನ್ವಪೃಚ್ಛತ್ ೨೧.೫೫

 

ತದನಂತರ ಒಮ್ಮೆ ಮಯ ನಿರ್ಮಿತವಾದ ಶ್ರೇಷ್ಠವಾದ ಸಭಾತಳದಲ್ಲಿ, ರಾಜರಿಂದಲೂ ಅಣ್ಣತಮ್ಮಂದಿರರಿಂದಲೂ ಕೂಡಿದ ಧರ್ಮರಾಜನು ದೇವತೆಗಳ ಸಭೆಯ ಬಗ್ಗೆ ಕೇಳಿ, ನಾರದರನ್ನು ಕುರಿತು ಪ್ರಶ್ನೆ ಮಾಡಿದನು.

[ಈ ಕಥಾ ಭಾಗವನ್ನು ನಾವು ಮಹಾಭಾರತದಲ್ಲಿ ಕಾಣಬಹುದು. ಮಯ ನಿರ್ಮಿಸಿದ ಈ ಸಭೆಯೇ ಅದ್ಭುತವೋ ಅಥವಾ ಜಗತ್ತಿನಲ್ಲಿ ಇಂತಹ ಸಭೆ ಇನ್ನೂ ಇದೆಯೋ ಎಂದು ಧರ್ಮರಾಜ ನಾರದರನ್ನು ಕೇಳುತ್ತಾನೆ. ಆಗ ನಾರದರು ಎಲ್ಲಾ ದೇವತೆಗಳ ಸಭೆಯನ್ನು ಕುರಿತು ವಿವರಿಸುತ್ತಾರೆ. ದೇವತೆಗಳ ಸಭೆಯ ಕುರಿತು ನಾರದರಿಂದ ತಿಳಿದ ಧರ್ಮರಾಜ ಮತ್ತೆ ಪ್ರಶ್ನೆ ಮಾಡುತ್ತಾನೆ. ಮೂಲ ಭಾರತದಲ್ಲಿ ಧರ್ಮರಾಜನ ಪ್ರಶ್ನೆ ಸಂಕ್ಷಿಪ್ತವಾಗಿದ್ದರೆ ಇಲ್ಲಿ ಅದನ್ನು ಆಚಾರ್ಯರು ವಿಸ್ತಾರವಾಗಿ ಹೇಳಿದ್ದಾರೆ. ಬೇರೆ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಧರ್ಮರಾಜನ ಗ್ರಹಿಕೆಯನ್ನೂ ವ್ಯಾಖ್ಯಾನ ಮಾಡಿ, ಅದನ್ನು ಧರ್ಮರಾಜನ ಮಾತಿನಲ್ಲಿ ಆಚಾರ್ಯರು ಇಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು]

 

ಅನ್ತರಿಕ್ಷಂ ತ್ವಯಾ ಪ್ರೋಕ್ತಂ ಲಕ್ಷಯೋಜನಮುಚ್ಛ್ರಿತಮ್ ।

ಅರ್ದ್ಧಕೋಟ್ಯುಚ್ಛ್ರಿತಃ ಸ್ವರ್ಗ್ಗೋ ವಿಮಾನಾವಲಿಸಙ್ಕುಲಃ ೨೧.೫೬

 

ನಾರದರೇ, ನಿಮ್ಮಿಂದ ಅಂತರಿಕ್ಷವು ಭೂಮಿಯಿಂದ ಲಕ್ಷ ಯೋಜನ ಎತ್ತರದಲ್ಲಿದೆ ಎಂದು ಹೇಳಲ್ಪಟ್ಟಿತು. ನಂತರ ಸ್ವರ್ಗವು ಐವತ್ತು ಲಕ್ಷ ಯೋಜನ ವಿಸ್ತಾರ  ಎಂದು ನಿಮ್ಮಿಂದ ನಾನು ತಿಳಿದಿದ್ದೇನೆ. ಅಲ್ಲಿ ವಿಮಾನಗಳ ಸಾಲು ಸಾಲೇ ಇದೆಯೆಂದು ನಾವು ಕೇಳಿದ್ದೇವೆ.

[ಅಂದರೆ ಭೂಮೇರು ಊರ್ಧ್ವ- ಲಕ್ಷ ಯೋಜನ ಪರ್ಯಂತ  ಅಂತರಿಕ್ಷಲೋಕ. ಅನಂತರ ಅರ್ಧ ಕೋಟಿ ಯೋಜನ ಸ್ವರ್ಗಲೋಕ. ಒಟ್ಟು ೫೧,೦೦೦೦೦ ಯೋಜನ ವಿಸ್ತಾರ]

  

ಭುವಃ ಸ್ವರ್ಗ್ಗಶ್ಚ ಕೋಟ್ಯೈವ ಯೋಜನಾನಾಂ ಪ್ರವಿಸ್ತೃತೌ ।

ಮಹರ್ಜ್ಜನಸ್ತಪಶ್ಚೈವ ಕ್ರಮಾದದ್ಧ್ಯರ್ದ್ಧಯೋಜನಾಃ ೨೧.೫೭

 

ಭುವಃಲೋಕ ಮತ್ತು ಸ್ವರ್ಗಲೋಕ ಒಂದು ಕೋಟಿ ಯೋಜನ ವಿಸ್ತಾರವಾಗಿದೆ ಎಂದು ಹೇಳಲಾಗಿದೆ.  ಮಹರ್ಲೋಕ, ಜನಲೋಕ, ತಪೋಲೋಕ ಇವುಗಳೂ ಕೂಡಾ ಕ್ರಮವಾಗಿ ಅರ್ಧಕ್ಕಿಂತ ಮಿಗಿಲು (ಒಂದೂವರೆಪಟ್ಟು) ಹೆಚ್ಚುಹೆಚ್ಚು ಪರಿಮಾಣವನ್ನು ಹೊಂದಿವೆ.

 

ಪಞ್ಚಾಶತ್ಕೋಟಿವಿಸ್ತಾರಾ ಯೋಜನಾನಾಂ ಸಮಸ್ತಶಃ

ಯಾವನ್ತ ಏತೇ ಮಿಳಿತಾಸ್ತತ್ಪ್ರಮಾಣ ಉದೀರಿತಃ ೨೧.೫೮

 

ಸತ್ಯಾಖ್ಯೋ ಬ್ರಹ್ಮಲೋಕಸ್ತು ಯತ್ರ ಬ್ರಹ್ಮಾ ವಿ ರಾಜತೇ

ತತಶ್ಚ ದ್ವಿಗುಣಃ ಪ್ರೋಕ್ತೋ ವಿಷ್ಣುಲೋಕಃ ಸನಾತನಃ ೨೧.೫೯

 

ಎಲ್ಲವೂ ಸೇರಿದರೆ (ಊರ್ಧ್ವಲೋಕ ಸಮೂಹ ಒಟ್ಟಿಗೆ) ಐವತ್ತು ಕೋಟಿ ಯೋಜನ ಎಂದು ಹೇಳಲಾಗುತ್ತದೆ. ಮಹರ್ಲೋಕ, ಜನಲೋಕ ಮತ್ತು ತಪೋಲೋಕದ ನಂತರ ಚತುರ್ಮುಖನ ಸತ್ಯಲೋಕವಿದೆ ಮತ್ತು ಇದರ ವಿಸ್ತಾರ ಭೂಮಧ್ಯಬಿಂದುವಿನಿಂದ ತಪೋಲೋಕದ ತನಕದ ವಿಸ್ತಾರಕ್ಕೆ ಸಮನಾಗಿದೆ. ಸತ್ಯಲೋಕಕ್ಕಿಂತ  ಎರಡುಪಟ್ಟು ಮಿಗಿಲಾಗಿದೆ ವಿಷ್ಣುಲೋಕ,

 

[ಮಹರ್ಲೋಕ :- ೫೧,೦೦೦೦೦ + ೨೫೫೦೦೦೦ = ೭೬೫೦೦೦೦ ಯೋಜನ. ಜನರ್ಲೋಕ:- ೭೬೫೦೦೦೦ + ೩೮೨೫೦೦೦ = ೧೧೪೭೫೦೦೦ ಯೋಜನ. ತಪೋಲೋಕ:- ೧೧೪೭೫೦೦೦ + ೫೭೩೭೫೦೦ = ೧೭೨೧೨೫೦೦ ಯೋಜನ.  ಭೂಮಧ್ಯಬಿಂದುವಿನಿಂದ ತಪೋಲೋಕದ ತನಕ – ೫೦೦೦೦ + ೫೧೦೦೦೦೦ + ೭೬೫೦೦೦೦ + ೧೧೪೭೫೦೦೦ + ೧೭೨೧೨೫೦೦ = ೪೧೪೮೭೫೦೦ ಯೋಜನ. ಸತ್ಯಲೋಕ -  ೪೧೪೮೭೫೦೦ X ೨ = ೮೨೯೭೫೦೦೦ ಯೋಜನ. ಸತ್ಯಲೋಕದ ದ್ವಿಗುಣ ವಿಷ್ಣುಲೋಕ- ೮೨೯೭೫೦೦೦ X ೨ = ೧೬೫೯೫೦೦೦೦ ಯೋಜನ. ಒಟ್ಟು ೮೨೯೭೫೦೦೦ + ೧೬೫೯೫೦೦೦೦= ೨೪೮೯೨೫೦೦೦. ಹೀಗೆ ಭೂಮಿಯ ಮಧ್ಯದಿಂದ^ ಗಣನೆಗೆ ತೆಗೆದುಕೊಂಡಾಗ ಒಟ್ಟು  ೨೫೦೦೦೦೦೦೦ ಯೋಜನ. ( ^೧೦೭೫೦೦೦+ ೨೪೮೯೨೫೦೦೦).

 ಮೇರು ಪರ್ವತವನ್ನೂ ಲೆಕ್ಕ ಹಾಕಿದರೆ ಐವತ್ತು ಕೋಟಿ ಯೋಜನ ವಿಸ್ತಾರ. ಮೇರು ಪರ್ವತದಿಂದ ಲೆಕ್ಕ ಹಾಕಿದರೆ ಇಪ್ಪತ್ತೈದು ಕೋಟಿ ವಿಸ್ತಾರ. ಅದರಿಂದಾಗಿ ಪುರಾಣದ ಮಾತಿಗೂ ಮಹಾಭಾರತದ ಮಾತುಗಳಿಗೂ ವಿರೋಧವಿಲ್ಲ. ಎಲ್ಲಿಂದ ಲೆಕ್ಕ ಹಾಕಿರುವುದು ಎನ್ನುವುದು ಮುಖ್ಯ. ಹೀಗಾಗಿ ಪುರಾಣ ಬೇರೆಬೇರೆ ಗಣಿತವನ್ನು ಹೇಳಿದಾಗ ಅದರ ವಿವಕ್ಷೆ ಏನಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು].

Sunday, November 21, 2021

Mahabharata Tatparya Nirnaya Kannada 21: 50-54

 

ಅನನ್ತಶೀರ್ಷೋsನನ್ತಾಕ್ಷೋsನನ್ತಪಾದಕರೋರುಕಃ ।

ಅನನ್ತಗುಣಮಾಹಾತ್ಮ್ಯಶ್ಚಿದಾನನ್ದಶರೀರಕಃ                              ೨೧.೫೦

 

ಅನಂತವಾದ ತಲೆಯುಳ್ಳವನು, ಅನಂತವಾದ ಕಣ್ಗಳುಳ್ಳವನು, ಅನಂತ ಪಾದ-ಕರಕಮಲಗಳುಳ್ಳವನು. ಅನಂತವಾದ ಗುಣಮಹಾತ್ಮ್ಯನು. ಜ್ಞಾನಾನಂದವೇ ಮೈವೆತ್ತು ಬಂದವನು.

 

ಮದ್ವಶಾ ಏವ ಸರ್ವೇsಪಿ ತ್ವಂ ಚಾನ್ಯೇ ಚ ಧನಞ್ಜಯ।

ಮತ್ಪ್ರಸಾದಾದ್ ಬಲಂ ಚೈವ ವಿಜಯಶ್ಚಾಖಿಲಾ ಗುಣಾಃ ।

ತಸ್ಮಾನ್ನ ವಿಸ್ಮಯಃ ಕಾರ್ಯ್ಯೋ ನ ದರ್ಪ್ಪಶ್ಚ ತ್ವಯಾsನಘ         ೨೧.೫೧

 

ಎಲೋ ಧನಂಜಯ, ನೀನಾಗಲೀ, ಬೇರೊಬ್ಬರಾಗಲೀ, ಎಲ್ಲರೂ ಕೂಡಾ ನನ್ನ ಕೈಗೊಂಬೆಗಳು. ತನ್ನ ಅನುಗ್ರಹದಿಂದ ಬಲ, ವಿಜಯ, ಮೊದಲಾದ ಎಲ್ಲಾ ಗುಣಗಳೂ ಬರುತ್ತವೆ. ಆ ಕಾರಣದಿಂದ ಆಶ್ಚರ್ಯ ಪಡಬೇಡ. ಪಾಪವಿಲ್ಲದ ನೀನು(ಅನಘ) ದರ್ಪ(ಅಹಂಕಾರ)ವನ್ನೂ ಪಡಬೇಡ. (ದೈತ್ಯಾವೇಶವನ್ನು ತೊಡೆದುಕೋ).

 

‘ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ’      ೨೧.೫೨

 

ನನ್ನಲ್ಲೇ ಬಗೆಯನ್ನು ನೆಡು. ನನ್ನ ಭಕ್ತನಾಗು, ನನ್ನ ಪೂಜೆಯನ್ನು ಮಾಡು, ನನ್ನನ್ನು ಕುರಿತು ಪೊಡಮಡು. ನನ್ನನ್ನೇ ಹೊಂದುತ್ತೀಯ. ಇದು ಎಂದಿಗೂ ಹುಸಿಯಲ್ಲ. ನೀನು ನನಗೆ ಪ್ರಿಯನಾಗಿದ್ದೀಯ ಹಾಗಾಗಿ  ಪ್ರತಿಜ್ಞೆ ಮಾಡಿ ಹೇಳುತ್ತಿದ್ದೇನೆ’.  

 

ಇತ್ಯುಕ್ತಃ ಪ್ರಣಿಪತ್ಯೈನಂ ಕ್ಷಮಸ್ವೇತ್ಯಾಹ ಫಲ್ಗುನಃ

ಉಷಿತ್ವಾ ಕತಿಚಿನ್ಮಾಸಾನ್ ಯಯುಃ ಸರ್ವೇಪಿ ಪಾಣ್ಡವಾಃ         ೨೧.೫೩

 

ಅನುಜ್ಞಾತಾಃ ಕೇಶವೇನ ಭಕ್ತಿನಮ್ರಧಿಯೋsಚ್ಯುತೇ ।

ಸಮ್ಭಾವಿತಾಃ ಕೇಶವೇನ ಸೌಹಾರ್ದ್ದೇನಾಧಿಕೇನ ಚ                  ೨೧.೫೪

 

ಈರೀತಿಯಾಗಿ ಹೇಳಲ್ಪಟ್ಟ ಅರ್ಜುನನು ಕೃಷ್ಣನಿಗೆ ನಮಸ್ಕರಿಸಿ ಕ್ಷಮೆ ಬೇಡಿದ. ಎಲ್ಲಾ ಪಾಂಡವರೂ ಕೂಡಾ ಕೆಲವು ತಿಂಗಳುಗಳ ಕಾಲ ದ್ವಾರಕಾ ಪಟ್ಟಣದಲ್ಲೇ ಇದ್ದು, ಕೃಷ್ಣನಲ್ಲಿ ಭಕ್ತಿಯಿಂದ ಬಾಗಿದ ಬಗೆಯುಳ್ಳವರಾಗಿ, ನಾರಾಯಣನಿಂದ ಬಹುಮಾನಿಸಲ್ಪಟ್ಟು, ಅತ್ಯಂತ ಪ್ರೀತಿಯನ್ನು ಗಳಿಸಿದವರಾಗಿ, ಕೃಷ್ಣನ ಅನುಜ್ಞೆಯನ್ನು ಪಡೆದು ತಮ್ಮ ಪಟ್ಟಣಕ್ಕೆ ತೆರಳಿದರು.

[ಇದು ಭಾಗವತದ ೧೦ನೇ ಸ್ಕಂಧದ ೧೦೩ನೇ ಅಧ್ಯಾಯದಲ್ಲಿ ಬರುವ ಕಥೆಯಾಗಿದ್ದು, ಅದನ್ನು ಇಲ್ಲಿ ಆಚಾರ್ಯರು ಕಾಲಕ್ರಮದಲ್ಲಿ ಪ್ರಸ್ತುತಪಡಿಸಿರುವುದನ್ನು ನಾವು ಗಮನಿಸಬೇಕು]

Wednesday, November 17, 2021

Mahabharata Tatparya Nirnaya Kannada 21: 42-49

                        ಕಿಮೇತದ್ ದೃಷ್ಟಮಿತ್ಯೇವ ತೇನ ಪೃಷ್ಟೋ ರಮಾಪತಿಃ ।

ಅಯಂ ದ್ವೀಪಃ ಸಾಗರಶ್ಚ ಲಕ್ಷಯೋಜನವಿಸ್ತೃತೌ                      ॥೨೧.೪೨॥

 

‘ನಿನ್ನಿಂದ ನೋಡಲ್ಪಟ್ಟದ್ದು ಯಾವುದು ಎಂದು ಅರ್ಜುನನಿಂದ ಕೇಳಲ್ಪಟ್ಟ ರಮಾಪತಿ ಹೇಳುತ್ತಾನೆ: ‘ಜಂಬೂ ದ್ವೀಪವೂ ಇದನ್ನು ಆವರಿಸಿಕೊಂಡ ಸಾಗರವೂ ಲಕ್ಷಯೋಜನ ವಿಸ್ತಾರವುಳ್ಳದ್ದು.

[ವಿಷ್ಣುಪುರಾಣ(೨.೩.೨೭-೨೮): ‘ನವವರ್ಷಂ ತು ಮೈತ್ರೇಯ ಜಂಬೂ ದ್ವೀಪಮಿದಂ ಮಯಾ । ಲಕ್ಷಯೋಜನವಿಸ್ತಾರಂ ಸಙ್ಕ್ಷೇಪಾತ್ ಕಥಿತಂ ತವ । ಜಂಬೂದ್ವೀಪಂ ಸಮಾವೃತ್ಯ ಲಕ್ಷಯೋಜನಾವಿಸ್ತರಃ । ಮೈತ್ರೇಯ ವಲಯಾಕಾರಃ ಸ್ಥಿತಃ ಕ್ಷಾರೋದಧಿರ್ಭಹಿಃ’]

 

ತದನ್ಯೇ ತು ಕ್ರಮೇಣೈವ ದ್ವಿಗುಣೇನೋತ್ತರೋತ್ತರಾಃ ।

ಅನ್ತ್ಯಾದ್ಧ್ಯರ್ದ್ಧಸ್ಥಲಂ ಹೈಮಂ ಬಾಹ್ಯತೋ ವಾಜ್ರಲೇಪಿಕಮ್       ॥೨೧.೪೩॥

 

ಅದಕ್ಕಿಂತ ಅತಿರಿಕ್ತವಾದ ಎಲ್ಲಾ ದ್ವೀಪ-ಸಮುದ್ರಗಳೂ ಕೂಡಾ ಕ್ರಮವಾಗಿ ಒಂದಕ್ಕಿಂತ ಒಂದು ಎರಡುಪಟ್ಟು ಹೆಚ್ಚು ವಿಸ್ತಾರವುಳ್ಳದ್ದು. ಶುದ್ಧೋದಕದ ವಿಸ್ತಾರ ಏನಿದೆ, ಅದಕ್ಕಿಂತ ಒಂದೂವರೆ ಪಟ್ಟು ವಿಸ್ತಾರವಾಗಿ  ವಜ್ರಲೇಪವುಳ್ಳ ಪ್ರದೇಶವಿದೆ.

[ವಿಷ್ಣುಪುರಾಣ( ೨.೨.೫-೬) ಜಂಬೂಪ್ಲಕ್ಷಾಹ್ವಯೌ ದ್ವೀಪೌ ಶಾಲ್ಮಲಶ್ಚಾಪರೋ ದ್ವಿಜ । ಕುಶಃ ಕ್ರೌಞ್ಚಸ್ತಥಾ ಶಾಕಃ ಪುಷ್ಕರಶ್ಚೈವ ಸಪ್ತಮಃ ।  ಎತೇ ದ್ವೀಪಾಃ ಸಮುದ್ರೈಸ್ತು ಸಪ್ತ ಸಪ್ತಭಿರಾವೃತಾಃ । ಲವಣೇಕ್ಷುಸುರಾಸರ್ಪಿರ್ದಧಿದುಗ್ಧಜಲೈಃ ಸಮಮ್’ ಜಂಬೂ, ಪ್ಲಕ್ಷ, ಶಾಲ್ಮಲ, ಕುಶ,  ಕ್ರೌಞ್ಚ  ಶಾಕಃ ಮತ್ತು ಪುಷ್ಕರ ಎನ್ನುವ ಏಳುದ್ವೀಪಗಳಿವೆ. ಇವು ಏಳು ಸಮುದ್ರಗಳಿಂದ ಆವೃತವಾಗಿವೆ. ಅವುಗಳೆಂದರೆ: ಲವಣ(ಉಪ್ಪು), ಇಕ್ಷು(ಕಬ್ಬಿನರಸ), ಸುರಾ(ಮದ್ಯ), ಸರ್ಪಿಃ(ಘೃತ -ತುಪ್ಪ), ದಧಿ(ಮೊಸರು), ದುಗ್ಧ(ಹಾಲು) ಮತ್ತು ಶುದ್ಧೋದಕ].

 

ಏತತ್ ಸರ್ವಂ ಲೋಕನಾಮ ಹ್ಯೇತಸ್ಮಾದ್ ದ್ವಿಗುಣಂ ತಮಃ ।

ಅನ್ಧಂ ಯತ್ರ ಪತನ್ತ್ಯುಗ್ರಾ ಮಿಥ್ಯಾಜ್ಞಾನಪರಾಯಣಾಃ                 ॥೨೧.೪೪॥

 

ಇದೆಲ್ಲವೂ ಸೇರಿದರೆ ಅದು ಸೂರ್ಯನ ಬೆಳಕು ಓಡಾಡುವ ಪ್ರದೇಶ ಅಂದರೆ ‘ಲೋಕ. ಈ ಲೋಕಕ್ಕಿಂತ  ಎರಡುಪಟ್ಟು ಕತ್ತಲೆ (ಅನ್ಧಂತಮ) ಇದೆ. ಮಿಥ್ಯಾಜ್ಞಾನಪರಾಯಣರಾಗಿರುವವರು ಈ ಅನ್ಧಂತಮದಲ್ಲೇ ಬೀಳುತ್ತಾರೆ.

 

ಘನೋದಕಂ ತದ್ದ್ವಿಗುಣಂ ತದನ್ತೇ ಧಾಮ ಮಾಮಕಮ್ ।

ಯತ್ತದ್ ದೃಷ್ಟಂ ತ್ವಯಾ ಪಾರ್ತ್ಥ ತತ್ರ ಮುಕ್ತೈರಜಾದಿಭಿಃ           ॥೨೧.೪೫॥

 

ಸೇವ್ಯಮಾನಃ ಸ್ಥಿತೋ ನಿತ್ಯಂ ಸರ್ವೈಃ ಪರಮಪೂರುಷಃ ।

ಲೋಕಾಲೋಕಪ್ರದೇಶಸ್ತು ಪಞ್ಚಾಶಲ್ಲಕ್ಷವಿಸ್ತೃತಃ                       ॥೨೧.೪೬॥

 

ಸಪಞ್ಚಾಶತ್ಸಹಸ್ರಶ್ಚ ತಸ್ಯಾಪಿ ಗಣನಂ ತಥಾ ।

ಯೋಜನಾನಾಂ ಪಞ್ಚವಿಂಶತ್ಕೋಟಯೋ ಮೇರುಪರ್ವತಾತ್ ॥೨೧.೪೭॥

 

ಚತಸೃಷ್ವಪಿ ದಿಕ್ಷೂರ್ಧ್ವಮಧಶ್ಚಾಣ್ಡಂ ಪ್ರಕೀರ್ತ್ತಿತಮ್ ।  

ಅಬಗ್ನೀರನಭೋಹಙ್ಕೃನ್ಮಹತ್ತತ್ವಗುಣತ್ರಯೈಃ                           ॥೨೧.೪೮॥

 

ಕ್ರಮಾದ್ ದಶೋತ್ತರೈರೇತದಾವೃತಂ ಪರತಸ್ತತಃ ।

ವ್ಯಾಪ್ತೋsಹಂ ಸರ್ವಗೋsನನ್ತೋsನನ್ತರೂಪೋ ನಿರನ್ತರಃ      ॥೨೧.೪೯॥

 

ಅನ್ಧಂತಮಕ್ಕಿಂತ ಎರಡುಪಟ್ಟು ಮಿಗಿಲಾಗಿ ಘನೋದಕವಿದೆ. ಅದರ ನಂತರ ನನ್ನ ಧಾಮವಿದೆ. ಅದನ್ನೇ ನೀನು ನೋಡಿರುವುದು. ಅಲ್ಲಿ ಪರಮಪುರುಷನಾದ ನಾನು ಮುಕ್ತರಾದ ಸಮಸ್ತ ಬ್ರಹ್ಮಾದಿದೇವತೆಗಳಿಂದ,  ಇತರ ಮುಕ್ತರಿಂದ  ಸೇವ್ಯನಾಗಿದ್ದೇನೆ.

ಲೋಕಾಲೋಕ ಪ್ರದೇಶವಾದರೋ ಐವತ್ತುಸಾವಿರ ಯೋಜನದಿಂದ ಸಹಿತವಾದ ಐವತ್ತು ಲಕ್ಷ ಯೋಜನ ವಿಸ್ತಾರವಾಗಿದೆ. (ಇದೇ ಸರಿಯಾದ ಗುಣಿತವಾಗಿದೆ.ಪುರಾಣದ ಕೆಲವು ಕಡೆ ಪೂರ್ಣಾಂಕವಾಗಿ ಐವತ್ತುಲಕ್ಷ ಯೋಜನ ಎಂದು ಹೇಳಿರುವುದನ್ನು ಕಾಣುತ್ತೇವೆ.  ಅದನ್ನು ತಾತ್ಪರ್ಯ ಗ್ರಾಹಕವಾಗಿ ಈ ರೀತಿ ಸ್ವೀಕರಿಸಬೇಕು). ಇದೆಲ್ಲದಕ್ಕಿಂತ ಹಿರಿದಾದ ಪರ್ವತ ಮೇರುಪರ್ವತ. ಈ ಬ್ರಹ್ಮಾಂಡ  ಜಂಬೂ ದ್ವೀಪದ ಕೇಂದ್ರದಿಂದ  ಸುಮಾರು ಇಪ್ಪೈತೈದು ಕೋಟಿ ಯೋಜನ ಮೇಲೆ ಮತ್ತು ಕೆಳಗಿದೆ. ನಾಲ್ಕೂ ದಿಕ್ಕುಗಳಲ್ಲಿ ಮೇಲ್ಗಡೆಯೂ, ಕೆಳಗಡೆಯೂ ಈರೀತಿಯಾದ ಪರಿಮಾಣವನ್ನು ತಿಳಿಯತಕ್ಕದ್ದು. (ಅಂದರೆ ಆಳ ಎಷ್ಟಿದೆಯೋ ಅಗಲವೂ ಅಷ್ಟೇ ಇದೆ. ನಾಲ್ಕೂ ದಿಕ್ಕುಗಳಲ್ಲಿ ವ್ಯಾಪ್ತವಾಗಿದೆ. ಇದು ಬ್ರಹ್ಮಾಂಡದ ಸ್ಥೂಲವಾದ ಲೆಕ್ಕಾಚಾರ). ಇಂತಹ ಬ್ರಹ್ಮಾಂಡ ಆವರಣಗಳಿಂದ ಒಡಗೂಡಿದೆ. ನೀರಿನ ಆವರಣ, ಬೆಂಕಿಯ ಆವರಣ, ಗಾಳಿ-ಆಕಾಶದ ಆವರಣ, ಅಹಂಕಾರತತ್ವದ ಆವರಣ, ಮಹತತ್ವದ ಆವರಣ ಮತ್ತೆ ಮೂರು ಗುಣಗಳ(ತಮ, ರಜ ಮತ್ತು ಸತ್ವಗುಣಗಳ) ಆವರಣ. ಇಲ್ಲಿ ಪ್ರತಿಯೊಂದು ಆವರಣವೂ ಕೂಡಾ ಕ್ರಮವಾಗಿ ಒಂದಕ್ಕಿಂತ ಇನ್ನೊಂದು ಹತ್ತು ಪಟ್ಟು  ವಿಸ್ತಾರವಾಗಿದೆ. ಇವೆಲ್ಲವುದರ ಆಚೆ ನಾನು ವ್ಯಾಪ್ತನಾಗಿದ್ದೇನೆ. ಎಲ್ಲೆಡೆ ಇದ್ದೇನೆ. ನನಗೆ ಕೊನೆ ಎನ್ನುವುದಿಲ್ಲ.(ಅನಂತ ರೂಪವುಳ್ಳವನಾಗಿದ್ದೇನೆ. ಈ  ಬ್ರಹ್ಮಾಂಡದ ಪರಮಾಣು-ಪರಮಾಣುವನ್ನೂ  ಕೂಡಾ ನಾನು ವ್ಯಾಪಿಸಿದ್ದೇನೆ).  

 

[ಮೇರುಪರ್ವತದ ಕೇಂದ್ರದಿಂದ ಲವಣ ಸಾಗರದ ತನಕ  ಜಂಬೂದ್ವೀಪ  ೫೦,೦೦೦ ಯೋಜನ. ನಂತರ ಲವಣಸಮುದ್ರ ೧,೦೦೦೦೦ ಯೋಜನ ವಿಸ್ತಾರ.  ಹಾಗೆಯೇ ಪ್ಲಕ್ಷದ್ವೀಪ ೨,೦೦೦೦೦ ಯೋಜನ, ಅದನ್ನು ಆವರಿಸಿರುವ ಇಕ್ಷುಸಮುದ್ರದ ವಿಸ್ತಾರವೂ ೨,೦೦೦೦೦ ಯೋಜನ. ನಂತರ ಶಾಲ್ಮಲದ್ವೀಪ ೪,೦೦೦೦೦ ಯೋಜನ ಮತ್ತು ಅದನ್ನು ಆವರಿಸಿರುವ ಸುರಸಮುದ್ರವು ೪,೦೦೦೦೦ ಯೋಜನ ವಿಸ್ತಾರವುಳ್ಳದ್ದು. ಕುಶದ್ವೀಪ ೮,೦೦೦೦೦ ಯೋಜನವಾದರೆ ಘೃತಸಮುದ್ರ ೮,೦೦೦೦೦ ಯೋಜನ. ಕ್ರೌಞ್ಚದ್ವೀಪ ೧೬,೦೦೦೦೦ ಯೋಜನ ಮತ್ತು ದಧಿಸಮುದ್ರ ೧೬,೦೦೦೦೦ ಯೋಜನ. ಶಾಕದ್ವೀಪ ೩೨,೦೦೦೦೦ ಯೋಜನ ಮತ್ತು ಕ್ಷೀರಸಾಗರ ೩೨,೦೦೦೦೦ ಯೋಜನ,  ನಂತರ ಪುಷ್ಕರದ್ವೀಪ ೬೪,೦೦೦೦೦ ಯೋಜನವಾದರೆ ಶುದ್ಧೋದಕ  ೬೪,೦೦೦೦೦ ಯೋಜನ. ವಜ್ರಲೇಪಿತ ಪ್ರದೇಶ ೧.೫X೬೪,೦೦೦೦೦=೯೬,೦೦,೦೦೦ ಯೋಜನ ವಿಸ್ತಾರ. ಇವಿಷ್ಟನ್ನು ‘ಲೋಕ’ ಎಂದು ಕರೆಯುತ್ತಾರೆ. ಅಂದರೆ ಲೋಕದ ವಿಸ್ತಾರ ಜಂಬೂದ್ವೀಪದ ಮಧ್ಯದಿಂದ ೩,೪೯,೫೦,೦೦೦ ಯೋಜನ. ಲೋಕಾಲೋಕಪರ್ವತ ಪ್ರದೇಶ ೫೦,೫೦,೦೦೦ ಯೋಜನ. ಲೋಕಮಾನದ ದ್ವಿಗುಣ ಅನ್ಧಂತಮ. ಅಂದರೆ ೬,೯೯,೦೦,೦೦೦ ಯೋಜನ. ಇದರ ದ್ವಿಗುಣ ಘನೋದಕ. ಅಂದರೆ ೧೩,೯೮,೦೦,೦೦೦ ಯೋಜನ. ಒಟ್ಟಿನಲ್ಲಿ ಜಂಬೂದ್ವೀಪದ ಕೇಂದ್ರದಿಂದ ಘನೋದಕದ ಕೊನೆಯ ತನಕದ ವಿಸ್ತಾರ: ೨೪,೯೭,೦೦,೦೦೦ ಯೋಜನ.  {೩,೪೯,೫೦,೦೦೦(ಲೋಕ) + ೫೦,೫೦,೦೦೦(ಲೋಕಾಲೋಕ) + ೬,೯೯,೦೦,೦೦೦(ಅನ್ಧಂತಮ) + ೧೩,೯೮,೦೦,೦೦೦(ಘನೋದಕ) = ೨೪,೯೭,೦೦,೦೦೦ ಯೋಜನ}. ಅದರಾಚೆ ಇರುವುದು ಭಗವಂತನ ಧಾಮ. ಅದು ಮೂರುಲಕ್ಷ ಯೋಜನ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಕೇಂದ್ರಬಿಂದುವಿನಿಂದ ೨೫ ಕೋಟಿ ಯೋಜನ ಎಲ್ಲಾ ದಿಕ್ಕಿನಲ್ಲೂ ಎಂದು ಹೇಳಲಾಗುತ್ತದೆ. ಅಂದರೆ ಒಟ್ಟು ವಿಸ್ತಾರ ೫೦ ಕೋಟಿ ಯೋಜನ].