ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 16, 2022

Mahabharata Tatparya Nirnaya Kannada 21: 205-211

 

ಸ ವಿಪ್ರಯಾದವೇಶ್ವರಂ ದ್ವಿಧಾಸ್ಥಿತಂ ಜನಾರ್ದ್ದನಮ್ ।

ಪುರೋ ನಿಧಾಯ ತದ್ ವಸು ಪ್ರಭೂತಮಾನಮತ್ ತದಾ             ೨೧.೨೦೫

 

ಭೀಮಸೇನನು ವ್ಯಾಸ-ಕೃಷ್ಣ ಎನ್ನುವ ಎರಡು ರೂಪದಲ್ಲಿರುವ ಶ್ರೀಮನ್ನಾರಾಯಣನ ಮುಂದೆ ದಿಗ್ವಿಜಯದಲ್ಲಿ ಗಳಿಸಿದ, ಬಹಳವಾಗಿರುವ ಸಂಪತ್ತನ್ನಿಟ್ಟು, ಅವರಿಬ್ಬರಿಗೂ ನಮಸ್ಕರಿಸಿದನು.

 

ಸೋsಭಿವಾದ್ಯಾಗ್ರಜಂ ಚೈವ ಯಥಾವೃತ್ತಂ ನ್ಯವೇದಯತ್ ।

ಆತ್ಮನಃ ಕೃಷ್ಣಯೋಃ ಸರ್ವಂ ಧರ್ಮ್ಮರಾಜಾಗ್ರತೋ ಮುದಾ             ೨೧.೨೦೬

 

ಭೀಮಸೇನನು ತನ್ನ ಅಣ್ಣನಾದ ಧರ್ಮರಾಜನನ್ನು ನಮಸ್ಕರಿಸಿ, ದಿಗ್ವಿಜಯಕಾಲದಲ್ಲಿ ಏನು ನಡೆಯಿತೋ ಎಲ್ಲವನ್ನೂ ಹಾಗೇ ಯುಧಿಷ್ಠಿರನ ಮುಂಭಾಗದಲ್ಲಿ ವೇದವ್ಯಾಸರಿಗೆ ಮತ್ತು ಶ್ರೀಕೃಷ್ಣನಿಗೆ ಹೇಳಿದ.

 

ಯಥಾ ಜಿತಾಃ ಕೀಚಕಾದ್ಯಾ ಏಕಲವ್ಯಸಹಾಯವಾನ್ ।

ಯಥಾ ಜಿತಃ ಪೌಣ್ಡ್ರಕಶ್ಚ ಕರ್ಣ್ಣಾದ್ಯಾಶ್ಚ ತಥಾsಪರೇ       ೨೧.೨೦೭

 

ಯಥಾ ಸಿಂಹಾದಿತನವಃ ಶೇಷವೀನ್ದ್ರೇನ್ದ್ರಪೂರ್ವಕಾಃ ।

ಯಥಾ ಗಜತನುಃ ಶರ್ವಸ್ತಚ್ಚ ಸರ್ವಮವರ್ಣ್ಣಯತ್        ೨೧.೨೦೮

 

ಯಾವ ರೀತಿ ಕೀಚಕನೇ ಮೊದಲಾದವರು ಸೋತರೋ, ಏಕಲವ್ಯನ ಜೊತೆಗೂಡಿದ ಪೌಣ್ಡ್ರಕ ವಾಸುದೇವನು ಹೇಗೆ ಸೋತನೋ, ಕರ್ಣಾದಿಗಳೂ ಕೂಡಾ ದಿಗ್ವಿಜಯದಲ್ಲಿ ಹೇಗೆ ತನ್ನಿಂದ ಸೋತರೋ, ಸಿಂಹ-ಹುಲಿ ಮೊದಲಾದ ರೂಪ ಧರಿಸಿದ ಶೇಷ-ಗರುಡ-ಇಂದ್ರನೇ ಮೊದಲಾಗಿ ಉಳ್ಳ ದೇವತೆಗಳು ಹೇಗೆ ಪರಾಜಿತರಾದರೋ, ಆನೆಯ ರೂಪದಲ್ಲಿದ್ದ ರುದ್ರನು ಹೇಗೆ ತನ್ನಿಂದ ಪರಾಜಿತನಾದನೋ, ಅದೆಲ್ಲವನ್ನೂ ಕೂಡಾ ಭೀಮ ವಿವರಿಸಿ ಹೇಳಿದ.

 

ಸಮ್ಭಾವಿತಶ್ಚ ಕೃಷ್ಣಾಭ್ಯಾಂ ರಾಜ್ಞಾ ಚ ಸುಮಹಾಬಲಃ ।

ಆಜ್ಞಯಾ ವ್ಯಾಸದೇವಸ್ಯ ಯಜ್ಞಾಙ್ಗಾನಿ ಸಮಾರ್ಜ್ಜಯತ್             ೨೧.೨೦೯

 

ವೇದವ್ಯಾಸರು, ಶ್ರೀಕೃಷ್ಣ ಮತ್ತು ಯುಧಿಷ್ಠಿರನಿಂದಲೂ ಕೂಡಾ ಸತ್ಕೃತನಾದ, ಮಹಾಬಲನಾದ ಭೀಮಸೇನನು, ವೇದವ್ಯಾಸರ ಅಣತಿಯಿಂದ ಯಜ್ಞಕ್ಕೆ ಬೇಕಾದ ದ್ರವ್ಯಗಳನ್ನು(ಸಾಧನಗಳನ್ನು) ಒಂದೆಡೆ ಕೂಡಿಸಿದನು.

 

ಊಚೇ ತಂ ಭಗವಾನ್ ವ್ಯಾಸೋ ಜಿತಂ ಸರ್ವಂ ತ್ವಯಾsರಿಹನ್ ।

ಜಯೇ ಸರ್ವಸ್ಯ ಯಜ್ಞೋsಯಂ ಪೂರ್ಣ್ಣೋ ಭವತಿ ನಾನ್ಯಥಾ             ೨೧.೨೧೦

 

ವಿರಿಞ್ಚಃ ಸರ್ವಜಿತ್ ಪೂರ್ವಂ ದ್ವಿತೀಯಸ್ತ್ವಮಿಹಾಭವಃ ।

ಇತ್ಯುಕ್ತ್ವೈನಂ ಸಮಾಶ್ಲಿಷ್ಯ ಯಜ್ಞಾಙ್ಗಾನಿ ಸಮಾದಿಶತ್             ೨೧.೨೧೧

 

ಷಡ್ಗುಣೈಶ್ವರ್ಯ ಸಂಪನ್ನರಾದ ವೇದವ್ಯಾಸರು ಭೀಮಸೇನನನ್ನು ಕುರಿತು ಹೀಗೆ ಹೇಳಿದರು: ‘ಹಗೆಗಳನ್ನು ನಿಗ್ರಹಿಸುವವನೇ, ನಿನ್ನಿಂದ ಎಲ್ಲವೂ ಗೆಲ್ಲಲ್ಪಟ್ಟಿದೆ. ಎಲ್ಲರನ್ನೂ ಗೆದ್ದರೆ ಮಾತ್ರ ಈ ರಾಜಸೂಯಯಾಗವು ಪೂರ್ಣವಾಗುತ್ತದೆ ಹೊರತು ಬೇರೆ ರೀತಿ ಅಲ್ಲ.

ಮೊದಲು ಬ್ರಹ್ಮದೇವನು ಎಲ್ಲರನ್ನೂ ಗೆದ್ದು ರಾಜಸೂಯಯಾಗವನ್ನು ಮಾಡಿದ್ದ. ಈ ಯಾಗವನ್ನು ಮಾಡುವ ಎರಡನೆಯವನು ನೀನಾದೆ’. ಈರೀತಿಯಾಗಿ ಹೇಳಿದ ವೇದವ್ಯಾಸರು ಭೀಮಸೇನನನ್ನು ಆಲಂಗಿಸಿ, ಯಜ್ಞಸಾಧನಗಳನ್ನು ಸಿದ್ಧಗೊಳಿಸಲು  ಅವನಿಗೆ ಆಜ್ಞೆ ಮಾಡಿದರು.

Mahabharata Tatparya Nirnaya Kannada 21: 198-204

 

ಕ್ರಮೇಣ ಸರ್ವಾನ್ ನಿರ್ಜ್ಜಿತ್ಯ ಪೌಣ್ಡ್ರಕಂ ಚ ಮಹಾಬಲಮ್ ।

ವಿರಥೀಕೃತ್ಯ ಕರ್ಣ್ಣಂ ಚ ಕರಮಾದಾಯ ಸರ್ವತಃ         ೨೧.೧೯೮

 

ಭೀಮಸೇನನು ಕ್ರಮವಾಗಿ ಎಲ್ಲಾ ರಾಜರನ್ನು ಗೆಲ್ಲುತ್ತಾ, ಮಹಾಬಲಿಷ್ಠನಾದ ಪೌಂಡ್ರಕನನ್ನೂ ಗೆದ್ದು, ಕರ್ಣನನ್ನು ರಥಹೀನನನ್ನಾಗಿ ಮಾಡಿ, ಎಲ್ಲರಿಂದ ಕಪ್ಪವನ್ನು ಸ್ವೀಕರಿಸಿ ಮುನ್ನಡೆದ.

 

ಹಿಮವಚ್ಛಿಖರೇ ದೇವಾನ್ ಜಿತ್ವಾ ಶಕ್ರಪುರೋಗಮಾನ್ ।

ಕ್ರೀಡಾರ್ತ್ಥಂ ಯುದ್ಧ್ಯತಸ್ತೇಭ್ಯಸ್ತುಷ್ಟೇಭ್ಯೋ ರತ್ನಸಞ್ಚಯಮ್             ೨೧.೧೯೯

 

ಕೇವಲ ಕ್ರೀಡೆಗಾಗಿ ಯುದ್ಧಮಾಡಿದ ಇಂದ್ರನೇ ಮೊದಲಾದ ದೇವತೆಗಳನ್ನು ಹಿಮವತ್ಪರ್ವತದಲ್ಲಿ ಗೆದ್ದ ಭೀಮಸೇನ, ಅತ್ಯಂತ ಸಂತುಷ್ಟರಾದ ಅವರಿಂದ ರತ್ನಸಂಚಯವನ್ನು ಸ್ವೀಕರಿಸಿದ.

 

ಬಾಹುಯುದ್ಧೇನ ಶೇಷಂ ಚ ಗರುಡಂ ಚ ಮಹಾಬಲಮ್ ।

ಕ್ರೀಡಮಾನೌ ವಿನಿರ್ಜ್ಜಿತ್ಯ ಭೂಷಣಾನ್ಯಾಪ ತೋಷತಃ ।

ತಾಭ್ಯಾಂ ಚ ದೃಢಮಾಶ್ಲಿಷ್ಟಃ ಸ್ನೇಹವಿಕ್ಲಿನ್ನಯಾ ಧಿಯಾ             ೨೧.೨೦೦

 

ಕ್ರೀಡೆಗಾಗಿಯೇ  ಬಂದಿದ್ದ ಶೇಷನನ್ನೂ, ಮಹಾಬಲನಾದ ಗರುಡನನ್ನೂ  ಮಲ್ಲಯುದ್ಧದಿಂದ ಗೆದ್ದ ಭೀಮಸೇನ, ಅವರಿಂದ ಗಟ್ಟಿಯಾಗಿ ಆಲಿಂಗಿತನಾದ.  ಅವರನ್ನು ಸಂತೋಷಗೊಳಿಸಿ,  ಅವರಿಂದ ಆಭರಣಗಳನ್ನು ಪಡೆದ.

[ಭೀಮಸೇನ ದೇವತೆಗಳನ್ನು ಗೆದ್ದಿರುವ ವಿಷಯವನ್ನು ಮಹಾಭಾರತ ಗುಹ್ಯಭಾಷೆಯಲ್ಲಿ ಹೇಳಿರುವುದನ್ನು ನಾವು ಕಾಣುತ್ತೇವೆ. ‘ಕೌಶಿಕೀಕಚ್ಛನಿಲಯಂ ರಾಜಾನಂ ಚ ಮಹೌಜಸಮ್ ।  ಉಭೌ ಬಲಭೃತೌ ವೀರಾವುಭೌ ತೀವ್ರಪರಾಕ್ರಮೌ।  ನಿರ್ಜಿತ್ಯಾಜೌ ಮಹಾರಾಜ ವಙ್ಗರಾಜಮುಪಾದ್ರವತ್’ (ಸಭಾಪರ್ವ೩೧.೨೩-೨೪) - ಕೌಶಿಕೀ ನದಿ ತೀರದಲ್ಲಿರುವ ಒಬ್ಬ ಶ್ರೇಷ್ಠನಾದ ರಾಜನನ್ನು, ಇಬ್ಬರು ಬಲಿಷ್ಠ ವೀರರನ್ನು ಯುದ್ಧದಲ್ಲಿ ಗೆದ್ದು ವಙ್ಗದೇಶದತ್ತ ಮುನ್ನೆಡೆದ ಎಂದಿದೆ ಭಾರತ. ಹಿಮವತ್ಪರ್ವತದಲ್ಲಿ ಕೌಶಿಕೀ ನದಿ ಹರಿಯುತ್ತದೆ. ಅಲ್ಲಿ ಯಾವ ರಾಜ್ಯವೂ ಇರಲಿಲ್ಲ. ಯಾವ ಬುಡಕಟ್ಟು ಜನರೂ ಅಲ್ಲಿ ವಾಸಿಸುತ್ತಿರಲಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಒಬ್ಬ ಹಾಗೂ ತಕ್ಷಣ ಇನ್ನಿಬ್ಬರು ವೀರರು ಭೀಮಸೇನನೊಂದಿಗೆ ಯುದ್ಧ ಮಾಡಿದರು. ಇವರು ಯಾರು ಎನ್ನುವುದನ್ನು   ಮಹಾಭಾರತ ವಿವರಿಸುವುದಿಲ್ಲ. ಈ ಗುಹ್ಯ ಭಾಷೆಯನ್ನು ಆಚಾರ್ಯರು  ನಮಗಿಲ್ಲಿ ಬಿಡಿಸಿ ಹೇಳಿದ್ದಾರೆ. ಇಂದ್ರ, ತದನಂತರ ಶೇಷ ಮತ್ತು ಗರುಡರೊಂದಿಗೆ ಭೀಮ ಹಿಮವತ್ಪರ್ವತದಲ್ಲಿ ಯುದ್ಧ ಮಾಡಿದ.]

 

 

ಪೋಪ್ಲೂಯಮಾನಃ ಸ ತತೋsಮ್ಬುಧೌ ಬಲೀ ಜಗಾಮ ಬಾಣಸ್ಯ ಪುರಂ ಹರಂ ಚ ।

ರಣೇsಜಯದ್ ವಾರಣರೂಪಮಾಸ್ಥಿತಂ ಕ್ರೀಡನ್ತಮೇತೇನ ಚ ತೋಷಿತೋ ಹರಃ ೨೧.೨೦೧

 

ಭೀಮಸೇನನು ಸಮುದ್ರವನ್ನು ಈಜಿ ಬಾಣನ ಪಟ್ಟಣವನ್ನು ತಲುಪಿದ. ಅಲ್ಲಿ ಆನೆಯ ವೇಷವನ್ನು ಧರಿಸಿದ, ಕೇವಲ ಕ್ರೀಡೆಗಾಗಿಯೇ ಯುದ್ಧಮಾಡಲು ಬಂದ ಹರನನ್ನೂ ಕೂಡಾ ಗೆದ್ದ. ಇದರಿಂದ ರುದ್ರನು ಸಂತುಷ್ಟನಾದ.

 

ಪೃಷ್ಟಶ್ಚ ಗಿರೀಶೇನಾಸೌ ವಿಸ್ತರಂ ದಿಗ್ಜಯಸ್ಯ ಚ ।

ಸಿಂಹವ್ಯಾಘ್ರಾದಿರೂಪಾಶ್ಚ ಆತ್ಮನಾ ವಿಜಿತಾ ಯಥಾ ।

ಗರುತ್ಮಚ್ಛೇಷಶಕ್ರಾದ್ಯಾ ದೇವಾಃ ಸರ್ವೇ ತದಬ್ರವೀತ್   ೨೧.೨೦೨

 

ರುದ್ರದೇವರಿಂದ ಪ್ರಶ್ನೆಮಾಡಲ್ಪಟ್ಟ ಭೀಮಸೇನನು ದಿಗ್ವಿಜಯದ ವೃತ್ತಾಂತವನ್ನು ಶಿವನಿಗೆ ಹೇಳಿದ. ಸಿಂಹ, ವ್ಯಾಘ್ರ, ಇತ್ಯಾದಿ ರೂಪವನ್ನು ತೊಟ್ಟುಕೊಂಡ ಗರುಡ-ಶೇಷ-ಇಂದ್ರರೇ ಮೊದಲಾದ ದೇವತೆಗಳೆಲ್ಲರೂ ಕೂಡಾ ಹೇಗೆ ತನ್ನಿಂದ ಪರಾಜಿತರಾದರು ಎನ್ನುವುದನ್ನು ಭೀಮ ವಿವರಿಸಿದ.

[ಮಹಾಭಾರತದ ಸಭಾಪರ್ವದಲ್ಲಿ(೩೧. ೨೦೨, ೨೦೮) ಭೀಮಸೇನ ಹಿಮವತ್ಪರ್ವದದಲ್ಲಿ ಎಲ್ಲಾ ಸಿಂಹಗಳನ್ನೂ, ವ್ಯಾಘ್ರಗಳನ್ನೂ, ಆನೆಗಳನ್ನೂ ಗೆದ್ದು ಮುನ್ನೆಡೆದ ಎಂದು ಹೇಳಿದ್ದಾರೆ. ದಿಗ್ವಿಜಯದಲ್ಲಿ ಈ ರೀತಿ ವಿಶೇಷವಾಗಿ ಸಿಂಹಗಳನ್ನೂ, ಆನೆಗಳನ್ನೂ ಗೆದ್ದ ಎಂದು ಹೇಳಿದ್ದಾರೆ. ಇದು ದರ್ಶನ ಭಾಷೆ. ಬೇರೆಯವರು ಏನನ್ನು ಕಂಡರು ಎನ್ನುವುದನ್ನು ಅಲ್ಲಿ ವಿವರಿಸಲಾಗಿದೆ. ಆದರೆ ಈರೀತಿ ಮೃಗಗಳ ರೂಪದಲ್ಲಿ ಬೇರೆಯವರಿಗೆ ಕಾಣಿಸಿಕೊಂಡಿರುವುದು ಇಂದ್ರ, ಗರುಡ, ಶೇಷ ಇತ್ಯಾದಿ ದೇವತೆಗಳು ಎನ್ನುವುದನ್ನು ಆಚಾರ್ಯರು ಇಲ್ಲಿ ಬಿಡಿಸಿ ಹೇಳಿದ್ದಾರೆ].

 

ನಿಶಮ್ಯ ಶಙ್ಕರೋsಖಿಲಂ ಮಖಸ್ಯ ಚ ಪ್ರಸಾಧಕಮ್ ।

ಹರಿಂ ತತೋ ಬಲೇಃ ಸುತಾದ್ ದದೌ ಚ ರತ್ನಸಞ್ಚಯಮ್             ೨೧.೨೦೩

 

ರುದ್ರನು ಭೀಮಸೇನನಿಂದ ಪರಮಾತ್ಮನು ಯಜ್ಞವನ್ನು ಮಾಡಿಸುತ್ತಿದ್ದಾನೆ ಎನ್ನುವುದನ್ನು ಕೇಳಿ, ಬಲಿಯ ಮಗನಾದ ಬಾಣಾಸುರನಿಂದ ರತ್ನಸಂಚಯವನ್ನು ಕೊಡಿಸಿದನು.

 

ಸ ಬಾಣದೈತ್ಯತೋ ಮಹಚ್ಛಿವೇನ ದತ್ತಮುತ್ತಮಮ್ ।

ಪ್ರಗೃಹ್ಯ ರತ್ನಸಞ್ಚಯಂ ಸ್ವಕಂ ಪುರಂ ಸಮಾಯಯೌ   ೨೧.೨೦೪

 

ಭೀಮಸೇನನಾದರೋ, ಬಾಣ ದೈತ್ಯನ ಮುಖಾಂತರ ಸದಾಶಿವನಿಂದ ಕೊಡಲ್ಪಟ್ಟ, ಬಹಳವಾಗಿರುವ ರತ್ನಸಂಚಯಗಳನ್ನು ಸ್ವೀಕರಿಸಿ, ತನ್ನ ಪಟ್ಟಣಕ್ಕೆ ತೆರಳಿದ.

Saturday, January 15, 2022

Mahabharata Tatparya Nirnaya Kannada 21: 191-197

 

ಪ್ರಯಾಹಿ ಚ ತ್ವಂ ಧನದಪ್ರಪಾಲಿತಾಂ ದಿಶಂ ದ್ವೀಪಾನ್ ಸಪ್ತ ಚಾಶೇಷದಿಕ್ಷು ।

ನಾಗಾಂಶ್ಚ ದೈತ್ಯಾಂಶ್ಚ ತಥಾsಧರಸ್ಥಾನ್ ವಿಜಿತ್ಯ ಶೀಘ್ರಂ ಪುನರೇಹಿ ಚಾತ್ರ             ೨೧.೧೯೧

 

ನೀನು ಕುಬೇರನಿಂದ ಪಾಲಿಸಲ್ಪಟ್ಟ ಉತ್ತರದಿಕ್ಕನ್ನೂ, ಎಲ್ಲಾ ದಶೆಗಳಲ್ಲಿ ಇರುವ ಏಳುದ್ವೀಪಗಳನ್ನೂ,  ನಾಗರನ್ನೂ, ದೈತ್ಯರನ್ನೂ, ಪಾತಾಳಲೋಕದಲ್ಲಿರುವವರನ್ನೂ ಕೂಡಾ ಗೆದ್ದು ಬೇಗನೇ ಇಲ್ಲಿಗೆ ಬಾ.

 

ರಥೋ ಹಿ ದಿವ್ಯೋsಮ್ಬರಗಸ್ತವಾಸ್ತಿ ದಿವ್ಯಾನಿ ಚಾಸ್ತ್ರಾಣಿ ಧನುಶ್ಚ ದಿವ್ಯಮ್ ।

ಯೇsನ್ಯೇ ಚ ಬಾಣಪ್ರಮುಖಾ ಅಜೇಯಾಃ ಶರ್ವಾಶ್ರಯಾಸ್ತಾನಪಿ ಭೀಮ ಏತು             ೨೧.೧೯೨

 

ನಿನ್ನಲ್ಲಿ ಅಲೌಕಿಕವಾದ, ಆಕಾಶದಲ್ಲಿ ಓಡುವ ರಥವಿದೆ. ದಿವ್ಯವಾಗಿರುವ ಅಸ್ತ್ರವೂ, ಅಲೌಕಿಕವಾಗಿರುವ ಬಿಲ್ಲೂ ನಿನ್ನಲ್ಲಿದೆ. ಬಾಣನೇ ಮೊದಲಾದ ರುದ್ರದೇವರ ವರವನ್ನು ಪಡೆದು ಅವಧ್ಯರಾದವರಲ್ಲಿಗೆ ನೀನು ಹೋಗಬೇಡ. ಅವರನ್ನು ಕುರಿತು ಭೀಮಸೇನ ತೆರಳಲಿ.

 

ತಥಾ ಸುರಾಶ್ಚಾಪಿ ಸಮಸ್ತತೋsಸ್ಯ ಬಲಿಂ ಪ್ರಯಚ್ಛನ್ತಿ ಮದಾಜ್ಞಯೇತರೇ ।

ದಿಶಂ ಪ್ರತೀಚೀಮಥ ದಕ್ಷಿಣಾಂ ಚ ಯಾತಾಂ ಯಮೌ ಕ್ರಮಶೋ ಹ್ಯಧ್ವರಾರ್ತ್ಥೇ ೨೧.೧೯೩

 

ಹಾಗೆಯೇ, ದೇವತೆಗಳೂ ಕೂಡಾ ನನ್ನ ಆಜ್ಞೆಯಿಂದ ಭೀಮಸೇನನಿಗೆ ಕರವನ್ನು ಕೊಡುತ್ತಾರೆ. ಉಳಿದವರೂ (ಗಂಧರ್ವ, ಯಕ್ಷ, ಮೊದಲಾದವರು)ಕೂಡಾ.  ತದನಂತರ ಕ್ರಮವಾಗಿ ಪಶ್ಚಿಮದಿಕ್ಕನ್ನೂ, ದಕ್ಷಿಣದಿಕ್ಕನ್ನು ಕುರಿತು ನಕುಲ ಸಹದೇವರು ತೆರಳಲಿ.

 

ಯಶಶ್ಚ ಧರ್ಮ್ಮಶ್ಚ ತಯೋರಪಿ ಸ್ಯಾದಿತಿ ಸ್ಮ ಕೃಷ್ಣೇನ ಸುತೇನ ಕಾಳ್ಯಾಃ ।

ಉಕ್ತೇ ಯಯುಸ್ತೇ ತಮಭಿಪ್ರಣಮ್ಯ ದಿಶೋ ಯಥೋಕ್ತಾಃ ಪರಮೋರುಸದ್ಗುಣಾಃ ೨೧.೧೯೪

 

ನಕುಲ-ಸಹದೇವರಿಗೂ ಕೂಡಾ ಕೀರ್ತಿಯೂ ಪುಣ್ಯವೂ ಸಿಗಲಿ ಎಂದು ಸತ್ಯವತಿಯ ಮಗನಾದ ವೇದವ್ಯಾಸರಿಂದ ಹೇಳಲ್ಪಡುತ್ತಿರಲು, ಎಲ್ಲರೂ ಕೂಡಾ ವೇದವ್ಯಾಸರನ್ನು ನಮಸ್ಕರಿಸಿ, ಅವರು ಸೂಚಿಸಿರುವ ದಿಕ್ಕಿಗೆ ತೆರಳಿದರು.  

 

ವೃಕೋದರೋ ಜಯನ್ನೃಪಾನ್ ವಿರಾಟಮಾಸಸಾದ ಹ ।

ಜಿತೇsತ್ರ ಕೀಚಕೇ ರಣೇ ಸಮಾದದೇ ಕರಂ ತತಃ         ೨೧.೧೯೫

 

ಭೀಮಸೇನನು ರಾಜರನ್ನು ಗೆಲ್ಲುತ್ತಾ ವಿರಾಟರಾಜನನ್ನು ಹೊಂದಿದನು. ವಿರಾಟ ನಗರದಲ್ಲಿ  ಕೀಚಕನು ಸೋಲಲು, ಅವನಿಂದ ಕಪ್ಪವನ್ನು ಸ್ವೀಕರಿಸಿದನು.

 

ತತಃ ಕ್ರಮಾನ್ನೃಪಾನ್ ಜಿತ್ವಾ ಚೇದೀನಾಂ ವಿಷಯಂ ಗತಃ ।

ಮಾತೃವಾಕ್ಯಾದ್ ಭಯಾಚ್ಚೈವ ಶಿಶುಪಾಲೇನ ಪೂಜಿತಃ             ೨೧.೧೯೬

 

ತದನಂತರ ಕ್ರಮವಾಗಿ ರಾಜರನ್ನು ಗೆದ್ದ ಭೀಮಸೇನ, ಚೇದೀದೇಶಕ್ಕೆ ಬಂದನು. ಅಲ್ಲಿ ತಾಯಿಯ ಮಾತಿನಿಂದಲೂ, ಭಯದಿಂದಲೂ ಶಿಶುಪಾಲ ಭೀಮಸೇನನನ್ನು ಪೂಜಿಸಿದ. [ಭೀಮಸೇನ ಕೇವಲ ಪೂರ್ವದಿಕ್ಕಿಗೆ ಮಾತ್ರ ಹೋಗಿರುವುದಲ್ಲ. ಎಲ್ಲೆಲ್ಲಿ ಅರ್ಜುನ ಗೆಲ್ಲಲು ಸಾಧ್ಯವಿಲ್ಲವೋ ಆ ರಾಜರರಲ್ಲಿಗೆ  ಭೀಮಸೇನ ಹೋಗಿದ್ದ ಎನ್ನುವುದನ್ನು ಓದುಗರು ಗಮನಿಸಬೇಕು].

 

ಮಾತೃಷ್ವಸುರ್ಗ್ಗೃಹೇ ಚೋಷ್ಯ ದಿವಸಾನ್ ಕತಿಚಿತ್ ಸುಖಮ್

ಕರಂ ಸುಮಹದಾದಾಯ ತತಃ ಪೂರ್ವಾಂ ದಿಶಂ ಯಯೌ             ೨೧.೧೯೭

 

ಹಾಗೆಯೇ, ದೊಡ್ಡಮ್ಮನ ಮನೆಯಲ್ಲಿ ಕೆಲವು ದಿನಗಳ ಕಾಲ ಸುಖವಾಗಿ ವಾಸಮಾಡಿದ ಭೀಮಸೇನ, ಬಹಳ ಕಪ್ಪವನ್ನು ಸ್ವೀಕರಿಸಿ, ಅಲ್ಲಿಂದ ಪೂರ್ವದಿಕ್ಕಿಗೆ ತೆರಳಿದ.

[ಮಹಾಭಾರತದ ಸಭಾಪರ್ವದಲ್ಲಿ(೩೦.೧೬) ಈ ವಿವರಣೆ ಬರುತ್ತದೆ: ‘ತತೋ ಭೀಮಸ್ತತ್ರ ರಾಜನ್ನುಷಿತ್ವಾ ತ್ರಿದಶಾಃ ಕ್ಷಪಾಃ’ - ಭೀಮಸೇನನು ಚೇದೀದೇಶದಲ್ಲಿ ಹದಿಮೂರು ದಿನಗಳ ಕಾಲ(ಹತ್ತು ಮತ್ತು ಮೂರು ದಿನಗಳ ಕಾಲ) ವಾಸಮಾಡಿ, ನಂತರ ಅಲ್ಲಿಂದ ತೆರಳಿದ. (ಇಲ್ಲಿ ತ್ರಿದಶಾಃ ಎಂದರೆ ಹದಿಮೂರೋ ಅಥವಾ ಮೂವತ್ತು ದಿನಗಳೋ ತಿಳಿಯುವುದಿಲ್ಲ. ಆದರೆ ಆಚಾರ್ಯರು ನಿರ್ಣಯದಲ್ಲಿ ‘ಕೆಲವು ದಿನಗಳು’ ಎಂದು ಹೇಳಿರುವುದರಿಂದ ಇಲ್ಲಿ ನಾವು ಹದಿಮೂರು ದಿನ ಎಂದು ಊಹಿಸಬಹುದು ಅಷ್ಟೇ)].