ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 17, 2022

Mahabharata Tatparya Nirnaya Kannada 21: 368-373

 

ಅರ್ಜ್ಜುನಾರ್ಜ್ಜುನ ನೈವಾತ್ರ ಕ್ಷಮಾ ಮೇ ತಾತ ರೋಚತೇ ।

ಪತಿತಸ್ಯಾಸ್ಯ ದೇಹಸ್ಯ ಕಾಷ್ಠವಿಷ್ಠಾಸಮಸ್ಯ ಚ                           ॥೨೧.೩೬೮॥

 

'ಫಲಾನಿ ತ್ರೀಣಿ ಶಿಷ್ಯನ್ತೇ ವಿದ್ಯಾ ಕರ್ಮ್ಮ ಸುತಾ ಇತಿ ।

ಇತಿ ವೇದೋದಿತಂ ವಾಕ್ಯಂ ನ ಸುತೋ ದಾರದೂಷಣೇ              ॥೨೧.೩೬೯॥

 

ದುಷ್ಟದಾರೋ ನಚಾSಪ್ನೋತಿ ಲೋಕಾನರ್ದ್ಧೋ ಹಿ ದೂಷಿತಃ ।

ಅರಕ್ಷಣಾದ್ ದೂಷಿತಾಯಾ ನ ತ್ಯಾಗಾಚ್ಚ ಶುಭಂ ಭವೇತ್             ॥೨೧.೩೭೦॥

 

‘ಅರ್ಜುನಾ-ಅರ್ಜುನಾ—(ಎಲೈ ಪ್ರಿಯ ಅರ್ಜುನನೇ), ಈ ವಿಚಾರದಲ್ಲಿ ನನಗೆ ಇನ್ನು ಸಹನೆ ಇಷ್ಟವಾಗುವುದಿಲ್ಲ. (ಎಂದು ಹೇಳಿ ವೇದದ ಮಾತೊಂದನ್ನು ಹೇಳುತ್ತಾನೆ) ಎಂದೋ ಒಮ್ಮೆ ಬೀಳುವ, ಕಟ್ಟಿಗೆಯಂತೆ ಇರುವ ಈ ದೇಹದ ಫಲಗಳು ಮೂರು (ನಾಶವಾಗುವ ದೇಹದ ನಾಶವಾಗದ ಫಲ - ಈ ಮೂರು). ನಾವು ಸಂಪಾದಿಸಿದ ಜ್ಞಾನ, ನಾವು ಮಾಡುವ ಕರ್ಮ ಮತ್ತು ನಮ್ಮ ಮಕ್ಕಳು. ಇದು ವೇದದ ಮಾತು. ಹೆಂಡತಿಯನ್ನು ಇನ್ನೊಬ್ಬ ಸೆಳೆದಲ್ಲಿ (ಅಥವಾ ಹೆಂಡತಿಗೆ ದೋಷ ಉಂಟು ಮಾಡಿದರೆ),  ಹೆಂಡತಿ ಕಣ್ಣ ಮುಂದೆ ಕೆಡುತ್ತಿರುವಾಗ ಒಬ್ಬ ಪ್ರವೃತ್ತಿ ಮಾಡಿಲ್ಲವೆಂದರೆ ಅವನಿಗೆ ಒಳ್ಳೆಯ ಲೋಕ ಸಿಗುವುದಿಲ್ಲ. ಏಕೆಂದರೆ ಅರ್ಧ ಭಾಗವೇ ನಾಶವಾದಂತೆ ಅಲ್ಲವೇ? ನಿನ್ನಿಂದ ರಕ್ಷಣೆ ಮಾಡಲಾಗದೇ ಅವಳು ದೂಷಿತಳಾದರೆ ಅದರಿಂದ ಒಳ್ಳೆಯದಾಗುವುದಿಲ್ಲ. (ನಿನ್ನ ರಕ್ಷಣೆಯಲ್ಲಿದ್ದು, ನೀನು ರಕ್ಷಿಸದಿದ್ದರೆ- ನಿನಗೆ ಒಳ್ಳೆಯದಾಗುವುದಿಲ್ಲ)

 

ಅತೋSದ್ಯ ಸಾನುಬನ್ಧಕಾನ್ ನಿಹನ್ಮಿ ಧಾರ್ತ್ತರಾಷ್ಟ್ರಕಾನ್ ।

ಇತಿ ಬ್ರುವನ್ ವ್ಯಲೋಕಯದ್ ರಿಪೂನ್ ದಹನ್ನಿವೌಜಸಾ             ॥೨೧.೩೭೧॥

 

ಆ ಕಾರಣದಿಂದ ಈಗಲೇ ಎಲ್ಲರಿಂದ ಕೂಡಿರುವ ದುರ್ಯೋಧನ ಮೊದಲಾದವರನ್ನು ಕೊಲ್ಲುತ್ತೇನೆ’. ಈರೀತಿಯಾಗಿ ಹೇಳುತ್ತಾ ಭೀಮಸೇನ ಶತ್ರುಗಳನ್ನು ಸುಟ್ಟುಬಿಡುವನೋ ಎನ್ನುವಂತೆ ನೋಡಿದ.

 

ದದರ್ಶ ಚ ಮಹಾಘೋರಮಾದಾತುಂ ಪರಿಘಂ ರುಷಾ

ಕರ್ತ್ತುಂ ವ್ಯವಸಿತೋ ಬುದ್ಧ್ಯಾ ನಿಶ್ಶೇಷಾನ್ ಧೃತರಾಷ್ಟ್ರಜಾನ್             ॥೨೧.೩೭೨॥

 

ದುರ್ಯೋಧನಾದಿಗಳನ್ನು ನಿಶ್ಶೇಷರನ್ನಾಗಿ  ಮಾಡಲು ಮನಸ್ಸಿನಲ್ಲಿ ಸಂಕಲ್ಪ ಮಾಡಿದ ಭೀಮಸೇನನು, ಬಹಳ ಭಯಂಕರವಾಗಿರುವ, ಸಭಾಮಂಟಪಕ್ಕೆ ಆಧಾರವಾಗಿರುವ ಪರಿಘವನ್ನು(ಸಭಾಮಂಟಪಕ್ಕೆ ಆಧಾರವಾಗಿರುವ ದೊಡ್ಡಕಂಬವನ್ನು) ನೋಡಿದ.

 

ತದಾ ಶಿವಾ ವವಾಶಿರೇ ಸುಯೋಧನಾಗ್ನಿಗೇಹತಃ ।

ತಥೈವ ತತ್ಪಿತುರ್ಗ್ಗೃಹೇSಪ್ಯಭೂದ್ ಭಯಾನಕಂ ಬಹು             ॥೨೧.೩೭೩॥

 

ಆಗ ದುರ್ಯೋಧನನ ಅಗ್ನಿಹೋತ್ರದ ಕೋಣೆಯಿಂದ ಹೆಣ್ಣು ನರಿಗಳು ಊಳಿಟ್ಟವು. ಹಾಗೆಯೇ  ಧೃತರಾಷ್ಟ್ರನ ಮನೆಯಲ್ಲಿ ಅತ್ಯಂತ ಭಯವನ್ನು ಉಂಟುಮಾಡುವ ಬಹಳ ಶಕುನಗಳು ಉಂಟಾದವು.

Wednesday, March 16, 2022

Mahabharata Tatparya Nirnaya Kannada 21: 363-367

 

ವಸ್ತ್ರೋಚ್ಚಯೇ ಶೈಲನಿಭೇ ಪ್ರಜಾತೇ ದುರ್ಯ್ಯೋಧನಃ ಪ್ರಾಹ ಸಞ್ಜಾತಕೋಪಃ ।

ಪ್ರವೇಶಯೇಮಾಂ ಗೃಹಮೇವ ಶೀಘ್ರಂ ಕಿಂ ನಶ್ಚಿರೇಣೇತಿ ಸುಮನ್ದಬುದ್ಧಿಃ             ॥೨೧.೩೬೩॥

 

ಹೀಗೆ ವಸ್ತ್ರಗಳ ಸಮೂಹವು ಗುಡ್ಡದಂತಾಗಲು, ಅತ್ಯಂತ ಕೋಪಗೊಂಡ ಮಂದಬುದ್ಧಿಯ ದುರ್ಯೋಧನನು ‘ಈ ದ್ರೌಪದಿಯನ್ನು ಶೀಘ್ರದಲ್ಲಿ ನಮ್ಮ ಮನೆಗೆ ಕರೆದುಕೊಂಡು ಹೋಗು, ವಿಳಂಬದಿಂದೇನು ಪ್ರಯೋಜನ’ ಎಂದನು.

 

ತಚ್ಛ್ರುತ್ವಾ ವಚನಂ ಕೃಷ್ಣಾ ಪ್ರತಿಜ್ಞಾಮಕರೋತ್ ತದಾ ।

ಭೀಮೋ ದುರ್ಯ್ಯೋಧನಂ ಹನ್ತಾ ಕರ್ಣ್ಣಂ ಹನ್ತಾ ಧನಞ್ಜಯಃ             ॥೨೧.೩೬೪॥

 

ಶಕುನಿಂ ತ್ವಕ್ಷಕಿತವಂ ಸಹದೇವೋ ವಧಿಷ್ಯತಿ ।

ಇತ್ಯುಕ್ತೇ ತತ್ ತಥೇತ್ಯಾಹ ಭೀಮಸೇನಃ ಸಭಾತಳೇ                ॥೨೧.೩೬೫॥

 

ಆ ಮಾತನ್ನು ಕೇಳಿ ದ್ರೌಪದಿಯು ಆಗಲೇ ಪ್ರತಿಜ್ಞೆಯನ್ನು ಮಾಡಿದಳು: ‘ಭೀಮಸೇನನು ದುರ್ಯೋಧನನನ್ನು ಕೊಲ್ಲುತ್ತಾನೆ, ಅರ್ಜುನನು ಕರ್ಣನನ್ನು ಕೊಲ್ಲುತ್ತಾನೆ, ದಾಳ ಎಸೆಯುವುದರಲ್ಲಿ ನಿಪುಣನಾಗಿರುವ ಜೂಜುಕೋರ ಶಕುನಿಯನ್ನು ಸಹದೇವನು ಕೊಲ್ಲುತ್ತಾನೆ’. ಈರೀತಿಯಾಗಿ ಹೇಳಲು ‘ಹಾಗೇ ಆಗುತ್ತದೆ’ ಎಂದು ಸಭಾತಳದಲ್ಲಿ ಭೀಮಸೇನ ಹೇಳಿದ.

[ಮಹಾಭಾರತದಲ್ಲಿ (ಸಭಾಪರ್ವದಲ್ಲಿ ೯೨.೬೦) ಈ ಮಾತು ಬರುತ್ತದೆ: ‘ಅಹಂ ದುರ್ಯೋಧನಂ ಹನ್ತಾ ಕರ್ಣಂ ಹನ್ತಾ ಧನಞ್ಜಯಃ ।  ಶಕುನಿಂ ತ್ವಕ್ಷಕಿತವಂ ಸಹದೇವೋ ವದಿಷ್ಯತಿ’ ಇದು ಭೀಮಸೇನನ ಅಂಗೀಕಾರದ ಮಾತು. ಈ ಮಾತನ್ನು ಮೊದಲು ಹೇಳಿರುವುದು ದ್ರೌಪದಿ ಎನ್ನುವುದನ್ನು ಆಚಾರ್ಯರು ಇಲ್ಲಿ ತಿಳಿಸಿದ್ದಾರೆ].

 

ಪ್ರತಿಜ್ಞಾಮಾದದೇ ಪಾರ್ತ್ಥಸ್ತಾಂ ಮಾದ್ರೀನನ್ದನಸ್ತಥಾ ।

ನಕುಲಃ ಪ್ರತಿಜಜ್ಞೇSಥ ಶಾಕುನೇಯವಧಂ ಪ್ರತಿ           ॥೨೧.೩೬೬॥

 

ಅರ್ಜುನನೂ ಕೂಡಾ ಅವಳ ಪ್ರತಿಜ್ಞೆಯನ್ನು ಸ್ವೀಕರಿಸಿದ(ನಿನ್ನ ಪ್ರತಿಜ್ಞೆ ನನ್ನ ಪ್ರತಿಜ್ಞೆ ಎಂದ). ಅದೇ ತರದ ಪ್ರತಿಜ್ಞೆಯನ್ನು ಸಹದೇವನೂ ಮಾಡಿದ. ತದನಂತರ ನಕುಲನು ಶಕುನಿ ಪುತ್ರನ ಸಂಹಾರದ ಕುರಿತು   ಪ್ರತಿಜ್ಞೆ ಮಾಡಿದ.

 

ತತಃ ಸುಯೋಧನಾನುಜಶ್ಚಕರ್ಷ ಪಾರ್ಷತಾತ್ಮಜಾಮ್ ।

ಗೃಹಾಯ ತನ್ನಿಶಾಮ್ಯ ತು ಕ್ರುಧಾSSಹ ಮಾರುತಾತ್ಮಜಃ             ॥೨೧.೩೬೭॥

 

ತದನಂತರ ದುಶ್ಯಾಸನನು ದ್ರೌಪದಿಯನ್ನು ಮನೆಗೆ ಕರೆದುಕೊಂಡು ಹೋಗಲೆಂದು ಎಳೆದನು. ಅದನ್ನು ಕಂಡು ಭೀಮಸೇನ ಸಿಟ್ಟಿನಿಂದ ಹೇಳಿದ:

Tuesday, March 15, 2022

Mahabharata Tatparya Nirnaya Kannada 21: 357-362

 

ದುಃಶಾಸನೈಷಾಂ ವಾಸಾಂಸಿ ದಾಸಾನಾಂ ನೋ ವ್ಯಪಾಕುರು ।

ಇತ್ಯುಕ್ತೋSಭ್ಯಗಮತ್ ಪಾರ್ತ್ಥಾನ್ ಸ್ವವಾಸಾಂಸ್ಯಥ ತೇ ದದುಃ             ॥೨೧.೩೫೭॥

 

ತೇ ಚರ್ಮ್ಮವಸನಾ ಭೂತ್ವಾ ತಾನಶಿಷ್ಟಾನ್ ಪ್ರಕಾಶ್ಯ ಚ ।

ನಿಷೇದುಶ್ಚ ಕ್ಷಮಾಯಾನ್ತೇ ಕ್ಷಮಾಮಾಲಮ್ಬ್ಯ ವಿಸ್ತೃತಾಮ್                    ॥೨೧.೩೫೮॥

 

‘ಎಲೈ ದುಶ್ಯಾಸನನೇ, ಈ ನಮ್ಮ ಆಳುಗಳಾದ ಇವರೆಲ್ಲರ ಬಟ್ಟೆಗಳನ್ನು ತೆಗೆ’ ಎಂದು ಹೇಳಲ್ಪಟ್ಟ ದುಶ್ಯಾಸನನು ಪಾಂಡವರನ್ನು ಕುರಿತು ತೆರಳಿದ. ಆಗ ಪಾಂಡವರು ತಮ್ಮ-ತಮ್ಮ ಬಟ್ಟೆಗಳನ್ನು ಕೊಟ್ಟು (ರಾಜಯೋಗ್ಯ ಬಟ್ಟೆಯನ್ನು ಕೊಟ್ಟು) ಒರಟಾದ, ಚರ್ಮದಿಂದ ಮಾಡಿದ ಬಟ್ಟೆಯನ್ನು ಸುತ್ತಿಕೊಂಡರು. ಅವರು ದುರ್ಯೋಧನಾದಿಗಳು ಎಷ್ಟು ದುಷ್ಟರು ಎನ್ನುವುದನ್ನು ತೋರಿಸಿ, ತಾವು ಕುಳಿತಿದ್ದ ಉತ್ಕೃಷ್ಟ ಆಸನಗಳಿಂದ ಕೆಳಗಿಳಿದು, ನೆಲದಲ್ಲಿ ಅಗಾಧವಾದ ಸಹನೆಯನ್ನು ಹೊಂದಿ ಕುಳಿತರು.

 

ಪುನರ್ದ್ದುರ್ಯ್ಯೋಧನೇನೋಕ್ತಃ ಪಾರ್ತ್ಥಾನಾಮಥ ಪಶ್ಯತಾಮ್ ।

ಚಕರ್ಷ ವಾಸೋ ದ್ರೌಪದ್ಯಾಸ್ತದಾSವಾದೀದ್ ವೃಕೋದರಃ             ॥೨೧.೩೫೯॥

 

ಪುನಃ ದುರ್ಯೋಧನನಿಂದ (ದ್ರೌಪದಿಯ ವಸ್ತ್ರವನ್ನು ಅಪಹರಿಸು ಎಂದು) ಪ್ರಚೋದಿತನಾದ ದುಶ್ಯಾಸನನು ಪಾಂಡವರೆಲ್ಲ ನೋಡುತ್ತಿರುವಾಗಲೇ, ದ್ರೌಪದಿಯ ಬಟ್ಟೆಯನ್ನು ಎಳೆದನು. ಆಗ ಭೀಮಸೇನನು ಹೇಳಿದನು:

 

ಪಾಪೇಷು ಪೂರ್ವಸ್ಯ ತಥಾSಧಮಸ್ಯ ವಂಶೇ ಕುರೂಣಾಮುರುಧರ್ಮ್ಮಶೀಲಿನಾಮ್ ।

ದುಃಶಾಸನಸ್ಯಾಸ್ಯ ವಿದಾರ್ಯ್ಯ ವಕ್ಷಃ ಪಿಬಾಮಿ ರಕ್ತಂ ಜಗತಃ ಸಮಕ್ಷಮ್             ॥೨೧.೩೬೦॥

 

‘ಪಾಪಿಗಳಲ್ಲೇ ಅಗ್ರಗಣ್ಯನಾಗಿರುವ, ಉತ್ಕೃಷ್ಟವಾದ ಧರ್ಮವನ್ನು ಆಚರಿಸುವ ಕುರುವಂಶದಲ್ಲಿ ಬಂದಿರುವ, ಅತ್ಯಂತ ಅಧಮನಾದ ದುಶ್ಯಾಸನನ ಎದೆಯನ್ನು ಬಗೆದು ಎಲ್ಲರೂ ನೋಡುತ್ತಿರುವಂತೇ(ಜಗತ್ತಿನ ಸಮಕ್ಷಮದಲ್ಲಿ) ರಕ್ತವನ್ನು ಕುಡಿಯುತ್ತೇನೆ.

 

ವಿಕೃಷ್ಯಮಾಣೇ ವಸನೇ ತು ಕೃಷ್ಣಾ ಸಸ್ಮಾರ ಕೃಷ್ಣಂ ಸುವಿಶೇಷತೋSಪಿ ।

ತದಾSನ್ಯದಾಸೀದ್ ವಸನಂ ಚ ತಸ್ಯಾ ದಿವ್ಯಂ ಸುಸೂಕ್ಷ್ಮಂ ಕನಕಾವದಾತಮ್             ॥೨೧.೩೬೧॥

 

ಸದಾ ಕೃಷ್ಣನನ್ನು ಸ್ಮರಿಸುವ ದ್ರೌಪದಿಯು ತನ್ನ ಬಟ್ಟೆಯು ದುಶ್ಯಾಸನನಿಂದ ಎಳೆಯಲ್ಪಡುತ್ತಿರಲು ದ್ರೌಪದಿಯು ಅತ್ಯಂತ ವಿಶೇಷವಾಗಿ ಕೃಷ್ಣನನ್ನು ಸ್ಮರಣೆ ಮಾಡಿದಳು. ಆಗ ಅವಳಿಗೆ ಅಲೌಕಿಕವಾದ ಅತ್ಯಂತ ಮೃದುವಾಗಿರುವ ಹಳದಿ ಬಣ್ಣದ ಇನ್ನೊಂದು ಬಟ್ಟೆಯು ಅಲ್ಲಿತ್ತು. (ಒಂದೇ ಬಟ್ಟೆ ಉದ್ದವಾಗಿರುವುದಲ್ಲ. ಆಕೆ ಒಂದು ತುಂಡು ಬಟ್ಟೆ ಉಟ್ಟುಕೊಂಡಿದ್ದಳು, ಅದನ್ನು ಎಳೆದು ತೆಗೆದಾಗ ಅಲ್ಲಿ ಇನ್ನೊಂದು ಬಟ್ಟೆ ಇರುತ್ತಿತ್ತು)

 

ಪುನಃಪುನಶ್ಚೈವ ವಿಕರ್ಷಮಾಣೇ ದುಃಶಾಸನೇSನ್ಯಾನಿ ಚ ತಾದೃಶಾನಿ ।

ಬಭೂವುರನ್ತಂ ನ ಜಗಾಮ ಪಾಪಃ ಶ್ರಾನ್ತೋ ನ್ಯಷೀದತ್ ಸ್ವಿನ್ನಗಾತ್ರಃ ಸಭಾಯಾಮ್ ॥೨೧.೩೬೨॥

 

ಮತ್ತೆ ಮತ್ತೆ ಬಟ್ಟೆಯನ್ನು ಎಳೆಯುತ್ತಿರಲು, ಅಂತಹದ್ದೇ ಬಟ್ಟೆಗಳು ಅಲ್ಲಿ ಪ್ರಾದುರ್ಭವಿಸಿದವು. ಪಾಪಿಷ್ಠನಾದ ದುಶ್ಯಾಸನನಿಗೆ ಬಟ್ಟೆಯ ಕೊನೆಯೇ ಕಾಣಲಿಲ್ಲ. ಕೊನೆಗೆ ಬೆವರಿಳಿದ ಮೈಯುವನಾದ ಅವನು, ಬಹಳ ಬಳಲಿದವನಾಗಿ ಕುಕ್ಕರಿಸಿದನು.