ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 7, 2022

Mahabharata Tatparya Nirnaya Kannada 22-239-244

 

ಶ್ರುತ್ವೈವ ತದ್ ವೃಷ್ಣಯಃ ಸರ್ವ ಏವ ಸಮುದ್ಯಮಂ ಚಕ್ರಿರೇ ಕೌರವೇಷು ।

ನಿವಾರ್ಯ್ಯ ತಾನ್ ಬಲಭದ್ರಃ ಸ್ವಯಂ ಯಯೌ ಸಹೋದ್ಧವಃ ಕೌರವೇಯಾಞ್ಛಮಾರ್ತ್ಥೀ ॥೨೨.೨೩೯॥

 

ಸಾಂಬನನ್ನು ದುರ್ಯೋಧನಾದಿಗಳು ಬಂಧಿಸಿರುವ ಸುದ್ದಿಯನ್ನು ಕೇಳಿದೊಡನೆಯೇ ಎಲ್ಲಾ ಯಾದವರೂ ಕೂಡಾ ಕೌರವರನ್ನು ನಾಶಮಾಡಬೇಕೆಂದು ಸನ್ನಾಹವನ್ನು ಮಾಡಿದರು. ಅವರೆಲ್ಲರನ್ನೂ ತಡೆದ ಬಲರಾಮ, ಉದ್ಧವನಿಂದ ಕೂಡಿಕೊಂಡು ತಾನೇ ಕೌರವರನ್ನು ಕುರಿತು ಹೊರಟ.

 

ಪುರಸ್ಯ ಬಾಹ್ವೋಪವನೇ ಸ್ಥಿತಃ ಸ ಪ್ರಾಸ್ಥಾಪಯಚ್ಚೋದ್ಧವಂ ಕೌರವಾರ್ತ್ಥೇ ।

ಆಗತ್ಯ ಸರ್ವೇ ಕುರವೋSಸ್ಯ ಪೂಜಾಂ ಚಕ್ರುಃ ಸ ಚಾSಹೋಗ್ರಸೇನಸ್ಯ ಚಾSಜ್ಞಾಮ್             ॥೨೨.೨೪೦॥

 

ಹಸ್ತಿನಪುರದ ಹೊರಭಾಗದಲ್ಲಿರುವ ಉದ್ಯಾನ ಒಂದರಲ್ಲಿ ನಿಂತ ಬಲರಾಮ, ಕೌರವರ ಬಳಿಗೆ ಉದ್ಧವನನ್ನು ಕಳುಹಿಸಿದ. ಆಗ ಎಲ್ಲಾ ಕುರುಗಳೂ ಕೂಡಾ ಬಲರಾಮ ಇದ್ದಲ್ಲಿಗೆ ಬಂದು ಸತ್ಕಾರವನ್ನು ಮಾಡಿದರು. ಬಲರಾಮನಾದರೋ ಉಗ್ರಸೇನನ ಆಜ್ಞೇ ಎಂದು ಹೀಗೆ ಹೇಳಿದ:

 

ಆಜ್ಞಾಪಯದ್ ವೋ ನೃಪತಿಃ ಸ್ಮ ಯನ್ನಃ ಕುಮಾರಕಃ ಪ್ರಗೃಹೀತೋ ಭವದ್ಭಿಃ ।

ಏಕಃ ಸಮೇತೈರ್ಬಹುಭಿರ್ಬಾನ್ಧವಾರ್ತ್ಥಂ ಕ್ಷಾನ್ತಂ ತನ್ನೋ ಮುಞ್ಚತಾSಶ್ವೇವ ಸಾಮ್ಬಮ್ ॥೨೨.೨೪೧॥

 

ನಮ್ಮ ರಾಜ ಉಗ್ರಸೇನನು ನಿಮ್ಮನ್ನು ಕುರಿತು ಆಜ್ಞೆ ಮಾಡಿದ್ದಾನೆ: ಯಾವ ಕಾರಣದಿಂದ ನಮ್ಮ ಕುಮಾರನು ಒಬ್ಬನೇ ಇರುವಾಗ ಬಹಳ ಜನ ಸೇರಿಕೊಂಡು ಸೆರೆ ಹಿಡಿಯಲ್ಪಟ್ಟಿದ್ದಾನೋ, ನಮ್ಮ ಬಂಧುತ್ವ ನಾಶವಾಗಬಾರದು ಎನ್ನುವ ಉದ್ದೇಶದಿಂದ ನಾವು ಅದನ್ನು ಸಹಿಸಿದ್ದೇವೆ. ಹೀಗಾಗಿ ಸಾಂಬನನ್ನು ಕೂಡಲೇ ಬಿಟ್ಟುಬಿಡಿ.

[ಉಗ್ರಸೇನ ಧೃತರಾಷ್ಟ್ರನಿಗಿಂತ ಹಿರಿಯ. ಹಾಗಾಗಿ ಬಾಂಧವಾರ್ಥ ಅವನು ಆಜ್ಞೆ ಮಾಡುತ್ತಿದ್ದಾನೆ ಎಂದು ಹೇಳಿರುವುದು. ಇಲ್ಲಿ ದುರ್ಯೋಧನ ಬಲರಾಮನ ಶಿಷ್ಯ. ಹಾಗಾಗಿ ಬಲರಾಮ ವಯಕ್ತಿಕ ಗುರುತ್ವವನ್ನು ಉಪಯೋಗಿಸುವ ಬದಲು ಒಂದು ಸಮಗ್ರ ರಾಜ್ಯದ ಪ್ರತಿನಿಧಿಯಾಗಿ ಬಂದಿದ್ದೇನೆ ಎಂದು ಇಲ್ಲಿ ಮಾತನಾಡಿದ].

 

ಆಜ್ಞಾಪಯಾಮಾಸ ವ ಉಗ್ರಸೇನ ಇತ್ಯುಕ್ತಮೇವ ತು ನಿಶಮ್ಯ ಕುರುಪ್ರವೀರಾಃ ।

ಸಂಶ್ರಾವ್ಯ ದುಷ್ಟವಚನಾನಿ ಬಲಂ ಪುರಂ ಸ್ವಂ ಕ್ರೋಧಾತ್ ಸಮಾವಿವಿಶುರತ್ರ ಚುಕೋಪ ರಾಮಃ ॥೨೨.೨೪೨॥

 

‘ಉಗ್ರಸೇನನು ನಿಮಗೆ ಆಜ್ಞೆಮಾಡಿದ್ದಾನೆ’ ಎನ್ನುವ ಬಲರಾಮನ ಹೇಳಿಕೆಯನ್ನು ಕೇಳಿ ದುರ್ಯೋಧನ  ಮೊದಲಾದವರು ಕೋಪಗೊಂಡು ಬಲರಾಮನನ್ನು ಚೆನ್ನಾಗಿ ಬೈದರು. (ಭಾಗವತದಲ್ಲಿ ಹೇಳುವಂತೆ: ಕಾಲಿನ ಚಪ್ಪಲಿ ತಲೆ ಮೇಲೆ ಕುಳಿತುಕೊಳ್ಳಲು ಸಾಧ್ಯವೇ .... ಇತ್ಯಾದಿಯಾಗಿ ಬೈದರು). ಹೀಗೆ ಅತ್ಯಂತ ದುಷ್ಟ ವಚನಗಳನ್ನು ಅವನಿಗೆ ಕೇಳಿಸಿ, ಸಿಟ್ಟಿನಿಂದ ತಮ್ಮ ಪಟ್ಟಣಕ್ಕೆ ಹಿಂತಿರುಗಿದರು. ಆಗ ಬಲರಾಮ ಕ್ರೋಧಗೊಂಡ.

[ಕೌರವಾದಿಗಳಿಗೆ ಕೋಪ ಏಕೆ ಬಂತು ಎಂದರೆ- ಯಾದವ ವಂಶದವರಿಗೆ ರಾಜಸೂಯ ಯಾಗವಾಗಲೀ, ಅಶ್ವಮೇಧ ಯಾಗವಾಗಲೀ ಇಲ್ಲ. ಅವರದ್ದು ಗಣರಾಜ್ಯವೇ ವಿನಃ ಚಕ್ರವರ್ತಿತ್ವ ಅವರಿಗಿರಲಿಲ್ಲ. ಯಯಾತಿಯ ಶಾಪದ ಹಿನ್ನೆಲೆಯಲ್ಲಿ ಪುರು ನಂತರ ಯದುಕುಲದಲ್ಲಿ ಎಲ್ಲರೂ ಕೇವಲ ಅವರ ಗುಂಪಿಗಷ್ಟೇ ರಾಜರಾಗಿದ್ದರು. ಅದು ಒಂದು ರೀತಿಯ ಖಾಸಗೀ ದೇಶ ಇದ್ದಂತೆ ಇತ್ತು! ಅವರು ಇನ್ನೊಬ್ಬ ಚಕ್ರವರ್ತಿಗೆ  ಅಧೀನರಾಗಿರಲಿಲ್ಲ. ಕಪ್ಪ ಕೊಡುವುದಾಗಲೀ ಅಥವಾ ಬೇರೆಯವರಿಂದ ಕಪ್ಪ ತೆಗೆದುಕೊಳ್ಳುವುದಾಗಲೀ ಅವರಿಗೆ ಅನ್ವಯವಾಗಿರಲಿಲ್ಲ. (ಇದನ್ನು ಮೀರಿ ಯದುಕುಲದಲ್ಲಿ ಇಬ್ಬರು ಅಶ್ವಮೇಧ ಯಾಗ ಮಾಡಿದ್ದಾರೆ. ಮೊದಲನೆಯವನು  ಕಾರ್ತವೀರ್ಯಾರ್ಜುನ. ಅವನು ದತ್ತಾತ್ರಯ ನಾಮಕ ಪರಮಾತ್ಮನ ಪ್ರಸಾದದಿಂದ ಅಶ್ವಮೇಧಯಾಗ  ಮಾಡಿದ. ಎರಡನೆಯದಾಗಿ ಸ್ವಯಂ ಶ್ರೀಕೃಷ್ಣ ಮಾಡಿದ ಒಂದು ದಿನದ ಅಶ್ವಮೇಧಯಾಗ. ಇದನ್ನು ಬಿಟ್ಟರೆ ಯದು ವಂಶದಲ್ಲಿ ಪ್ರಸಿದ್ಧರಾದ ಇತರರು ಕಾಣಸಿಗುವುದಿಲ್ಲ). ಹೀಗಾಗಿ ಇಂತಹ ಯಾದವ ರಾಜನಾದ ಉಗ್ರಸೇನ ತಮಗೆ ಆಜ್ಞೆ ಮಾಡಿ ಕಳುಹಿಸಿದ್ದಾನೆ ಎಂದು ಬಲರಾಮ ಹೇಳಿದಾಗ ಸ್ವಾಭಾವಿಕವಾಗಿ ಕೌರವರಿಗೆ ಕೋಪ ಬಂತು.]

 

ಸ ಲಾಙ್ಗಲೇನ ತತ್ ಪುರಂ ವಿಕೃಷ್ಯ ಜಾಹ್ನವೀಜಲೇ ।

ನಿಪಾತಯನ್ ನಿವಾರಿತಃ ಪ್ರಣಮ್ಯ ಸರ್ವಕೌರವೈಃ       ॥೨೨.೨೪೩॥

 

ಬಲರಾಮನಾದರೋ ಸಿಟ್ಟಿನಿಂದ ಇಡೀ ಹಸ್ತಿನಾವತಿಯನ್ನು ಎಳೆದು ಗಂಗಾನದಿಯಲ್ಲಿ ಮುಳುಗಿಸುವವನಾಗಿ ತೊಡಗಿದ. ಆಗ ಎಲ್ಲಾ ಕೌರವರು ಬಂದು  ನಮಸ್ಕರಿಸಿ ಬೇಡಿಕೊಂಡು -ತಡೆಹಿಡಿಯಲ್ಪಟ್ಟ.

[ಹಸ್ತಿನಪುರ ಗಂಗಾನದಿಗೆ ಬಾಗಿ ಇದೆ ಎನ್ನುತ್ತದೆ ಭಾಗವತ. ಇಂದು ಹಸ್ತಿನಪುರ ಪಟ್ಟಣ ನಶಿಸಿಹೋಗಿ  ‘ದೋಅಬ್’ ಎನ್ನುವ  ಒಂದು ಹಳ್ಳಿಯಾಗಿ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಂದಿಗೂ ಇಂದ್ರಪ್ರಸ್ಥ ಒಂದು ಶಕ್ತಿಕೇಂದ್ರವಾಗಿರುವುದು ವಿಶೇಷ.] 

 

ಸಭಾರ್ಯ್ಯಮಾಶು ಪುತ್ರಕಂ ಸುಯೋಧನಾಭಿಪೂಜಿತಮ್ ।

ಸಪಾರಿಬರ್ಹಮಾಪ್ಯ ಚ ಪ್ರಜಗ್ಮಿವಾನ್ ಸ್ವಕಾಂ ಪುರಮ್             ॥೨೨.೨೪೪॥

 

ಬಲರಾಮನು ದುರ್ಯೋಧನನಿಂದ ಸತ್ಕೃತನಾದ.  ಹೆಂಡತಿಯೊಂದಿಗೆ ಕೂಡಿದ ಮಗನಾದ ಸಾಂಬನನ್ನು ದುರ್ಯೋಧನ ಗೌರವದಿಂದ, ವಿವಾಹಕಾಲದ ಬಳುವಳಿಗಳೊಂದಿಗೆ ತಂದೊಪ್ಪಿಸಿದ. ಅವರನ್ನು ಕಂಡು ಪ್ರಸನ್ನನಾದ ಬಲರಾಮ ಮಗ ಮತ್ತು ಸೊಸೆಯೊಂದಿಗೆ ತನ್ನ ಪಟ್ಟಣಕ್ಕೆ ಹಿಂತಿರುಗಿದ.

Mahabharata Tatparya Nirnaya Kannada 22-233-238

 

ತದೈವ ಮೈನ್ದೋ ವಿವಿದಶ್ಚ ಭೌಮೇ ಹತೇ ಸಖಾಯೌ ದಾನವಾವೇಶಯುಕ್ತೌ ।

ಆನರ್ತ್ತರಾಷ್ಟ್ರಂ ವಾಸುದೇವಪ್ರತೀಪೌ ವ್ಯನಾಶಯೇತಾಂ ವಾಸುದೇವೋsಥ ಚೋಚೇ             ॥೨೨.೨೩೩॥

 

ಇದೇ ಸಮಯದಲ್ಲಿ ಮೈನ್ದ ಮತ್ತು ವಿವಿದ ಎನ್ನುವ ಕಪಿಗಳು ದಾನವರ ಆವೇಶದಿಂದ ಕೂಡಿದವರಾಗಿ,  ತಮ್ಮ ಮಿತ್ರ ನರಕಾಸುರನನ್ನು ಶ್ರೀಕೃಷ್ಣ ಸಂಹಾರ ಮಾಡಿರುವುದರಿಂದ, ಕೃಷ್ಣನ ಮೇಲೆ ಸೇಡಿರಿಸಿಕೊಂಡು, ಅನರ್ತದೇಶವಾದ ದ್ವಾರಕೆಯನ್ನು ನಾಶಮಾಡಿದರು.

[ಮೈನ್ದ ಮತ್ತು ವಿವಿದ ಇವರು  ರಾಮಾಯಣ ಕಾಲದಲ್ಲಿ ರಾಮನಿಗೆ ಸೇವೆ ಸಲ್ಲಿಸಿದ ಆಶ್ವೀದೇವತೆಗಳ ಅವತಾರ ರೂಪ. ಇವರು ಅನೇಕ ಜನ ರಾಕ್ಷಸರನ್ನು ಕೊಂದವರು.    ಸಮುದ್ರಮಥನದ ಕಾಲದಲ್ಲಿ ದೈತ್ಯಾವೇಷದಿಂದಾಗಿ ದೇವರ ಅನುಮತಿ ಇಲ್ಲದೇ ಅಮೃತವನ್ನು ಪಾನ ಮಾಡಿದರು. ಅದರಿಂದಾಗಿ ಅವರಿಗೆ ಧೀರ್ಘಾಯುಷ್ಯ ಬಂದಿತ್ತು. ದೈತ್ಯಾವೇಶ ಇದ್ದುದರಿಂದ ರಾಮಚಂದ್ರ ಪರಂದಾಮಕ್ಕೆ ತೆರಳುವಾಗ ಅವರು ಅವನ ಜೊತೆಗೆ ಹೋಗಲಾಗಲಿಲ್ಲ. ಕಾಲಾನಂತರ ಅವರು ನರಕಾಸುರನ ಗೆಳೆಯರಾದರು.  ಕೃಷ್ಣ ನರಕಾಸುರನನ್ನು ಕೊಂದದ್ದರಿಂದ ಕೃಷ್ಣನ ಮೇಲೆ ದ್ವೇಷ ಬೆಳೆಸಿದರು. ಸಮಯ ಕಾದುಕೊಂಡಿದ್ದ ಅವರಿಗೆ ಸಾಯುವ ಕಾಲ ಬಂದುದರಿಂದ ಬುದ್ಧಿ ಪ್ರಚೋದನೆಯಾಯಿತು. ಅವರು ಯಾದವ ಪಟ್ಟಣವನ್ನು ನಾಶಮಾಡಲು ಪ್ರಾರಂಭಿಸಿದರು.]

 

ರಾಮಾಯ ಸೋSದಾದ್ ವರಮಬ್ಜನಾಭೋ ವದ್ಧ್ಯಾವೇತೌ ಭವತಾಂ ತೇsಪ್ಯವದ್ಧ್ಯೌ ।

ವರಾದ್ ವಿರಿಞ್ಚಸ್ಯ ತಥಾSಮೃತಾಶನಾದುಭೌ ಚ ಮೈನ್ದೋ ವಿವಿದೋ ಬ್ರಜೇತಿ             ॥೨೨.೨೩೪॥

 

ಯಾವಾಗ  ಈರೀತಿ ಮೈನ್ದ ಮತ್ತು ವಿವಿದ ದ್ವಾರಕೆಯನ್ನು ನಾಶಮಾಡಲಾರಂಭಿಸಿದರೋ, ಆಗ ಬಲರಾಮನನ್ನು ಕುರಿತು ಶ್ರೀಕೃಷ್ಣ ‘ಇವರಿಬ್ಬರೂ ಕೂಡಾ ನಿನ್ನಿಂದ ಸಾಯಬೇಕು’ ಎಂದು ಹೇಳಿದ. ವಸ್ತುತಃ ಅಮೃತವನ್ನು ಪಾನ ಮಾಡಿದ್ದುದರಿಂದಲೂ, ಬ್ರಹ್ಮ ದೇವರ ವರದಿಂದಲೂ ಅವರು ಅವಧ್ಯರಾಗಿದ್ದರು. ಆದರೆ ನಾರಾಯಣನು ಹಿಂದೆ  ‘ಬ್ರಹ್ಮನ ವರದಿಂದ ಅವಧ್ಯರಾದ ಮೈನ್ದ ವಿವಿದರು ಬಲರಾಮನಿಂದ ಸಾಯುತ್ತಾರೆ’ ಎನ್ನುವ ವರವನ್ನು ನೀಡಿದ್ದ.

 

ಗತ್ವಾ ಸ ಮೈನ್ದಂ ಪ್ರಥಮಂ ಜಘಾನ ಕ್ರೋಧಾತ್ ಯುದ್ಧಾಯಾSಗತಂ ರೈವತಾಗ್ರೇ ।

ದಿನೇ ಪರಸ್ಮಿನ್ ವಿವಿದಂ ಜಘಾನ ಶಿಲಾ ವರ್ಷನ್ತಂ ಮುಸಲೇನಾಗ್ರ್ಯಕರ್ಮ್ಮಾ                 ॥೨೨.೨೩೫॥

 

ಯಾದವರ ಕ್ರೀಡಾವಿಹಾರ ಸ್ಥಳವಾದ  ರೈವತ ಪರ್ವತದ ಮೇಲ್ಗಡೆ ಮೊದಲದಿನ ಕ್ರೋಧದಿಂದ, ಯುದ್ಧಕ್ಕೆಂದು ಬಂದ ಮೈನ್ದನನ್ನು ಬಲರಾಮ ಕೊಂದ. ಮರುದಿನ ಕಲ್ಲುಗಳ ಮಳೆಗರೆಯುತ್ತಿರುವ  ವಿವಿದನನ್ನು  ತನ್ನ ಒನಕೆಯಿಂದ ಕೊಂದ.

 

ತಯೋರಾವಿಷ್ಟೌ ತಾವಸುರೌ ತಮೋSನ್ಧಂ ಪ್ರಾಪ್ತೌ ಚ ತಾವಶಿವನೌ ಸ್ವಂ ಚ ಲೋಕಮ್ ।

ದುರ್ಯ್ಯೋಧನಸ್ಯಾSಸ ಪುತ್ರೀ ರತಿರ್ಯ್ಯಾ ಪೂರ್ವಂ ನಾಮ್ನಾ ಲಕ್ಷಣಾ ಕಾನ್ತರೂಪಾ             ॥೨೨.೨೩೬॥

 

ಮೈನ್ದ-ವಿವಿದರಲ್ಲಿ  ಆವೇಶವನ್ನು ಹೊಂದಿ, ಕೆಟ್ಟ ಕೆಲಸವನ್ನು ಮಾಡಿಸುತ್ತಿದ್ದ ಅಸುರರು ಅನ್ದಂತಮಸ್ಸನ್ನು ಹೊಂದಿದರೆ,  ಆಶ್ವೀದೇವತೆಗಳು ತಮ್ಮ ಲೋಕಕ್ಕೆ ತೆರಳಿದರು.

ದುರ್ಯೋಧನನಿಗೆ ಒಬ್ಬಳು ಮಗಳಿದ್ದಳು. ಅವಳು ಹಿಂದೆ ರತಿಯೇ ಆಗಿದ್ದಳು. ತುಂಬಾ ಸುಂದರವಾಗಿದ್ದ ಅವಳ ಹೆಸರು ‘ಲಕ್ಷಣಾ’ ಎಂದಿತ್ತು.

 

ಸ್ವಯಮ್ಬರಸ್ಥಾಂ ತಾಂ ಬಲಾದೇವ ಸಾಮ್ಬೋ ಜಗ್ರಾಹ ಸಾ ಚೈನಮಾಸಾನುರಕ್ತಾ ।

ಬಲಾದ್ ಗೃಹೀತಾಂ ವೀಕ್ಷ್ಯ ತಾಂ ಕರ್ಣ್ಣಮುಖ್ಯಾ ದುರ್ಯ್ಯೋಧನಾದ್ಯಾ ಯುಯುಧುಃ ಕ್ರೋಧದೀಪ್ತಾಃ ॥೨೨.೨೩೭॥

 

ಸ್ವಯಮ್ಬರದಲ್ಲಿರುವ ಅವಳನ್ನು ಕೃಷ್ಣನ ಮಗನಾಗಿರುವ ಸಾಂಬನು ಬಲಾತ್ಕಾರದಿಂದ ಅಪಹರಿಸಿದ. ಅವಳಾದರೋ ಸಾಂಬನಲ್ಲಿ ಆಸಕ್ತಳಾಗಿದ್ದಳು. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ ಕೂಡಾ, ಉಳಿದವರನ್ನು ಧಿಕ್ಕರಿಸಿ ಬಲಾತ್ಕಾರದಿಂದ ಅಪಹರಿಸುವುದನ್ನು ಕಂಡು ಕರ್ಣ-ದುರ್ಯೋಧನ ಮೊದಲಾದವರು ಸಿಟ್ಟುಗೊಂಡು ಯುದ್ಧಮಾಡಿದರು.

 

ಕೃಚ್ಛ್ರೇಣ ತಂ ವಿರಥೀಕೃತ್ಯ ಚೈಕಂ ಸರ್ವೇ ಸಮೇತಾ ಜಗೃಹುರ್ದ್ಧಾರ್ತ್ತರಾಷ್ಟ್ರಾಃ ।

ಕರ್ಣ್ಣೇನ ಭೂರಿಶ್ರವಸಾ ಚ ಸಾರ್ದ್ಧಂ ಬಾಹ್ವೋರ್ಬಲಾದೇವ ದುರ್ಯ್ಯೋಧನಸ್ಯ             ॥೨೨.೨೩೮॥

 

ಕರ್ಣ ಹಾಗೂ ಭೂರಿಶ್ರವಸ್ಸಿನಿಂದ ಕೂಡಿದ ದುರ್ಯೋಧನಾದಿಗಳು ತಮ್ಮ ತೋಳ್ಬಲದಿಂದ, ಕಷ್ಟದಿಂದ ಸಾಂಬನನ್ನು  ರಥಹೀನನನ್ನಾಗಿ ಮಾಡಿ ಬಂಧಿಸಿದರು.

Tuesday, August 2, 2022

Mahabharata Tatparya Nirnaya Kannada 22-227-232

 

ಕೃಷ್ಣಃ ಕ್ರೀಡನ್ ದ್ವಾರವತ್ಯಾಂ ಸುಪೂರ್ಣ್ಣನಿತ್ಯಾನನ್ದಃ ಕ್ವಚಿದಾಹ ಸ್ಮ ಭೈಷ್ಮೀಮ್ ।

ವಿಡಮ್ಬಯನ್ ಗೃಹಿಣಾಮೇವ ಚೇಷ್ಟಾ ನಿತ್ಯಾವಿರೋಧೋSಪಿ ತಯಾ ವಿದೋಷಯಾ ॥೨೨.೨೨೭॥

 

ಪರಿಪೂರ್ಣವಾದ ನಿತ್ಯಾನಂದವುಳ್ಳ ಶ್ರೀಕೃಷ್ಣಪರಮಾತ್ಮನು  ದ್ವಾರಕೆಯಲ್ಲಿ ತನ್ನ ಲೀಲೆಗಳನ್ನು ತೋರುತ್ತಾ,  ಒಮ್ಮೆ, ಸಾಮಾನ್ಯ ಗೃಹಸ್ಥರ ಚರ್ಯಗಳನ್ನು ಅನುಕರಿಸುವವನಾಗಿ(ಸಾಮಾನ್ಯ ಗೃಹಸ್ಥರು ಹೆಂಡತಿಯೊಡನೆ ಯಾವ ರೀತಿ ಹಾಸ್ಯ ಮೊದಲಾದವುಗಳನ್ನು ಮಾಡುತ್ತಾರೋ, ಆ ರೀತಿಯ ಗೃಹಸ್ಥರ ಕ್ರಿಯೆಗಳನ್ನು ಅನುಕರಿಸುತ್ತಾ), ಪರಸ್ಪರ ನಿತ್ಯ ವಿರೋಧರಹಿತರಾಗಿದ್ದರೂ ಕೂಡಾ,  ರುಗ್ಮಿಣಿ ಜೊತೆಗೆ ಹೀಗೆ ಮಾತನಾಡಲು ಪ್ರಾರಂಭಿಸಿದ:  

 

ತ್ವಯಾ ನ ಕಾರ್ಯ್ಯಂ ಮಮ ಕಿಞ್ಚ ಭದ್ರೇ ಮಯಾSರೀಣಾಂ ಮಾನಭಙ್ಗಾರ್ತ್ಥಮೇವ ।

ಸಮಾಹೃತಾSಸೀತಿ ಸಾ ಚಾವಿಯೋಗಂ ಸದಾ ಕೃಷ್ಣೇನಾSತ್ಮನೋSಪ್ಯೇವ ವೇತ್ರೀ             ॥೨೨.೨೨೮॥

 

ಸ್ತ್ರಿಯಾ ಭೇತವ್ಯಂ ಭರ್ತ್ತುರಿತ್ಯೇವ ಧರ್ಮ್ಮಂ ವಿಜ್ಞಾಪಯನ್ತೀ ದುಃಖಿತೇವಾSಸ ದೇವೀ ।

ತಾಂ ಸಾನ್ತ್ವಯಾಮಾಸ ಗೃಹಸ್ಥಧರ್ಮ್ಮಂ ವಿಜ್ಞಾಪಯನ್ ದೇವದೇವೋSಪ್ಯದುಃಖಾಮ್ ॥೨೨.೨೨೯॥

 

‘ಮಂಗಳಕರಳಾದ ರುಗ್ಮಿಣಿಯೇ, ನಿನ್ನಿಂದ ನನಗೆ ಯಾವ ಕಾರ್ಯ ಪ್ರಯೋಜನವೂ ಇಲ್ಲ. ಆದರೂ ಶತ್ರುಗಳಾಗಿರುವ ಜರಾಸಂಧ ಮೊದಲಾದವರ ಅಹಂಕಾರ ನಾಶಕ್ಕಾಗಿಯೇ ನಿನ್ನನ್ನು ತಂದಿರುವುದು’ ಎಂದು ಕೃಷ್ಣ ಹೇಳಿದಾಗ, ತನಗೆ ನಾರಾಯಣನಿಂದ ವಿಯೋಗ ಇಲ್ಲವೆನ್ನುವುದನ್ನು ತಿಳಿದವಳಾಗಿದ್ದರೂ ಕೂಡಾ, ಹೆಣ್ಣು ಗಂಡನಿಗೆ ವಿಧೇಯಳಾಗಿ ಇರಬೇಕು ಎನ್ನುವ ಧರ್ಮವನ್ನು ಜನರಿಗೆ ತೋರಿಸುವವಳಾಗಿ  ರುಗ್ಮಿಣಿ ದುಃಖಪಟ್ಟವಳಂತೆ ಕಂಡಳು. ಆರೀತಿಯಾಗಿ ದುಃಖಪಡುವಂತೆ ಕಾಣುವ ಅವಳನ್ನು, ಹೆಂಡತಿಗೆ ಒಬ್ಬ ಗಂಡ ಹೇಗೆ ರಕ್ಷಣೆ ಕೊಡಬೇಕು, ಹೇಗೆ ದುಃಖ ನಿವಾರಣೆ ಮಾಡಬೇಕು  ಎನ್ನುವ ಗೃಹಸ್ಥಧರ್ಮವನ್ನು ತೋರಿಸುತ್ತಾ ಶ್ರೀಕೃಷ್ಣ  ಸಮಾಧಾನ ಮಾಡಿದ. [ಭಾಗವತದಲ್ಲಿ ಈ ಕುರಿತು ವಿಸ್ತಾರವಾದ ವಿವರಣೆಯನ್ನು ನಾವು ಕಾಣಬಹುದು.]

 

ಏವಂ ಕ್ರೀಡತ್ಯಬ್ಜನಾಭೇ ರಮಾಯಾಂ ಕೃಷ್ಣಾದಿಷ್ಟೋ ಗೋಕುಲಂ ರೌಹಿಣೇಯಃ ।

ಪ್ರಾಯಾದ್ ದೃಷ್ಟ್ವಾ ತತ್ರ ನನ್ದಂ ಯಶೋದಾಂ ತತ್ಪೂಜಿತಃ ಕೃಷ್ಣವಾರ್ತ್ತಾಂ ಚ ಪೃಷ್ಟಃ ॥೨೨.೨೩೦॥

 

ಈರೀತಿಯಾಗಿ ಲಕ್ಷ್ಮೀಸ್ವರೂಪಳಾದ ರುಗ್ಮಿಣಿಯಲ್ಲಿ ಶ್ರೀಕೃಷ್ಣನು ಕ್ರೀಡಿಸುತ್ತಿರಲು, ಕೃಷ್ಣನ ನಿರ್ದೇಶನದಂತೆ  ಬಲರಾಮನು ಗೋಕುಲಕ್ಕೆ ತೆರಳಿದ. ಅಲ್ಲಿ ನಂದಗೋಪನನ್ನೂ, ಸಾಕುತಾಯಿ ಯಶೋದೆಯನ್ನೂ ಕಂಡು, ಅವರಿಂದ ಸತ್ಕರಿಸಲ್ಪಟ್ಟ. ಅವರಿಂದ ಶ್ರೀಕೃಷ್ಣನ ಕುರಿತಾಗಿ ಕೇಳಲ್ಪಟ್ಟವನಾದ.

 

ಮಾಸೌ ತತ್ರ ನ್ಯವಸದ್ ಗೋಪಿಕಾಭೀ ರೇಮೇ ಕ್ಷೀಬೋ ಯಮುನಾಮಾಹ್ವಯಚ್ಚ ।

ಮತ್ತೋsಯಮಿತ್ಯೇವ ನದೀಮನಾಗತಾಂ ಚಕರ್ಷ ರಾಮೋ ಲಾಙ್ಗಲೇನಾಗ್ರ್ಯವೀರ್ಯ್ಯಃ ॥೨೨.೨೩೧॥

 

ನಂದಗೋಕುಲದಲ್ಲಿ ಗೋಪಿಕೆಯರೊಂದಿಗೆ ಕ್ರೀಡಿಸಿಸುತ್ತಾ ಎರಡು ತಿಂಗಳುಗಳ ಕಾಲ ವಾಸಮಾಡಿದನು. ಒಂದು ದಿನ ಯಮುನಾ ನದಿ ತಟದಲ್ಲಿ ಮದೋನ್ಮತ್ತನಾಗಿದ್ದ ಬಲರಾಮನು ಯಮುನೆಯನ್ನು ಕರೆದನು. ‘ಇವನು ಮತ್ತಿನಲ್ಲಿದ್ದಾನೆ’ ಎಂದು ಬಾರದೇ ಇದ್ದ ಯಮುನಾ ನದಿಯನ್ನು ಬಲರಾಮ ತನ್ನ ನೇಗಿಲಿನಿಂದ ತನ್ನೆಡೆಗೆ ಎಳೆದ.

 

ಪುನಸ್ತಯಾ ಪ್ರಣತಃ ಸಂಸ್ತುತಶ್ಚ ವ್ಯಸರ್ಜ್ಜಯತ್ ತಾಮಥ ನನ್ದಗೋಪಮ್ ।

ಆಪೃಚ್ಛ್ಯ ಚಾಗಾದ್ ದ್ವಾರಕಾಂ ಕೇಶವಾಯ ನ್ಯವೇದಯನ್ನನ್ದಗೋಪಾದಿಭಕ್ತಿಮ್             ॥೨೨.೨೩೨॥

 

ಆಗ ಯಮುನಾದೇವಿಯಿಂದ (ನದಿಯ ಅಭಿಮಾನಿ ದೇವತೆಯಿಂದ) ನಮಸ್ಕರಿಸಲ್ಪಟ್ಟು, ಸ್ತೋತ್ರ ಮಾಡಲ್ಪಟ್ಟವನಾಗಿ, ಅವಳನ್ನು ಬಿಟ್ಟನು. ತದನಂತರ ನಂದಗೋಪನಿಗೆ ‘ಹೋಗಿ ಬರುತ್ತೇನೆ’ ಎಂದು ಹೇಳಿ, ದ್ವಾರಕಾಪಟ್ಟಣಕ್ಕೆ ಬಂದು, ಶ್ರೀಕೃಷ್ಣನಿಗೆ ನಂದಗೋಪಾದಿಗಳ ಭಕ್ತಿಯನ್ನು ಒಪ್ಪಿಸಿದನು.