ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 3, 2022

Mahabharata Tatparya Nirnaya Kannada 23-27-35

 

ಅವದ್ಧ್ಯಂ ತಂ ನಿಹತಂ ವೀಕ್ಷ್ಯ ತಸ್ಯ ಪಞ್ಚೋತ್ತರಂ ಶತಮೇವಾನುಜಾನಾಮ್ ।

ಸರ್ವಂ ವರಾಚ್ಛಙ್ಕರಸ್ಯ ಹ್ಯವದ್ಧ್ಯಂ ಸಹೈವ ಕೃಷ್ಣಾಂ ತೇನ ದಗ್ಧುಂ ಬಬನ್ಧ ॥೨೩.೨೭॥

 

ಯಾರಿಂದಲೂ ಸಾಯಿಸಲಾಗದ ಕೀಚಕನನ್ನು ಸತ್ತವನನ್ನಾಗಿ ಕಂಡು, ರುದ್ರನ ವರದಿಂದ ಅವಧ್ಯರಾಗಿದ್ದ ಕೀಚಕನ ನೂರಐದು ಜನ ಉಪಕೀಚಕರು ದ್ರೌಪದಿಯನ್ನು ಕೀಚಕನ ಜೊತೆಗೇ ಸುಡಲೆಂದು ಕಟ್ಟಿಹಾಕಿದರು.  

 

ಸಾ ನೀಯಮಾನಾ ಕೀಚಕೈಃ ಸಂರುರಾವ ಶ್ರುತ್ವೈವ ತಂ ಭೀಮಸೇನೋ ಮಹಾನ್ತಮ್ ।

ಉದ್ಧೃತ್ಯ ವೃಕ್ಷಂ  ತೇನ ಜಘಾನ ಸರ್ವಾನಾದಾಯ ಕೃಷ್ಣಾಂ ಪುನರಾಗಾತ್ ಪುರಂ ಚ ॥೨೩.೨೮॥

 

ಉಪಕೀಚಕರಿಂದ ಕೊಂಡೊಯ್ಯಲ್ಪಡುತ್ತಿರುವ ಅವಳು ಗಟ್ಟಿಯಾಗಿ ಕಿರುಚಿದಳು. ಆ ಕೂಗನ್ನು ಕೇಳಿ ಭೀಮಸೇನನು ದೊಡ್ಡ ಮರವೊಂದನ್ನು ಕಿತ್ತು ಅದರಿಂದ ಎಲ್ಲರನ್ನೂ ಕೂಡಾ ಕೊಂದು, ದ್ರೌಪದಿಯನ್ನು ಕರೆದುಕೊಂಡು ಮತ್ತೆ ಪಟ್ಟಣಕ್ಕೆ ಬಂದ.

 

ಏವಂ ಯತ್ನಾತ್ ತಪಸಾ ತೈರವಾಪ್ತೋ ವರಃ ಶಿವಾದಜಯತ್ವಂ ರಣೇಷು ।

ಅವದ್ಧ್ಯತಾ ಚೈವ ಷಡುತ್ತರಾಸ್ತೇ ಶತಂ ಹತಾ ಭೀಮಸೇನೇನ ಸಙ್ಖೇ ॥೨೩.೨೯॥

 

ಈರೀತಿಯಾಗಿ, ಕೀಚಕನಂತೆಯೇ ಪ್ರಯತ್ನಪಟ್ಟು ತಪಸ್ಸನ್ನಾಚರಿಸಿ ಶಿವನಿಂದ ಯುದ್ಧದಲ್ಲಿ ಅಜೇಯತ್ವ ಮತ್ತು ಅವಧ್ಯತ್ವವನ್ನು ಪಡೆದಿದ್ದ ಆ ನೂರಾ ಐದು ಮಂದಿ ಉಪಕೀಚಕರು ಮುಖ್ಯಕೀಚಕನಿಂದ ಕೂಡಿಕೊಂಡು(ಒಟ್ಟು ೧೦೬ ಮಂದಿ) ಭೀಮಸೇನನಿಂದ ಸಂಹರಿಸಲ್ಪಟ್ಟರು.

 

ಗನ್ಧರ್ವ ಇತ್ಯೇವ ನಿಹತ್ಯ ಸರ್ವಾನ್ ಮುಮೋದ ಭೀಮೋ ದ್ರೌಪದೀ ಚಾsಥ ಕೃಷ್ಣಾಮ್ ।

ಯಾಹೀತ್ಯೂಚೇ ತಾಂ ಸುದೇಷ್ಣಾ ಭಯೇನ ತ್ರಯೋದಶಾಹಂ ಪಾಲಯೇತ್ಯಾಹ ತಾಂ ಸಾ ॥೨೩.೩೦॥

 

ಅವರೆಲ್ಲರನ್ನೂ ಕೂಡಾ ಕೊಂದ ಭೀಮಸೇನ  ‘ಗಂಧರ್ವ ಕೊಂದ’ ಎಂದು ಹೇಳುತ್ತಾ ಆನಂದದಿಂದಿದ್ದ.  ದ್ರೌಪದಿಯೂ ಸಂತೋಷಗೊಂಡಳು. ಇಷ್ಟೆಲ್ಲಾ ಆದಮೇಲೆ ಭಯಗೊಂಡ ಸುದೇಷ್ಣೆಯು ದ್ರೌಪದಿಯನ್ನು  ‘ಹೋಗು’ ಎಂದು ಹೇಳಿದಳು. ಆಗ ದ್ರೌಪದಿ ‘ಇನ್ನು ಹದಿಮೂರು ದಿನ ತಡೆದುಕೋ’ ಎಂದಳು.

 

ಅಸ್ತ್ವೀತ್ಯೇನಾಮಾಹ ಭಯಾತ್ ಸುದೇಷ್ಣಾ ತಥಾSವಸನ್ ಪೂರ್ಣಮಬ್ದಂ ಚ ತೇSತ್ರ ।

ತದಾ ಪಾರ್ತ್ಥಾನ್ ಪ್ರವಿಚಿತ್ಯಾಖಿಲಾಯಾಂ ಪೃಥ್ವ್ಯಾಂ ಛನ್ನಾನ್ ಧಾರ್ತ್ತರಾಷ್ಟ್ರಸ್ಯ ದೂತಾಃ ॥೨೩.೩೧॥

 

 

ಅವಿಜ್ಞಾಯ ಪ್ರಯಯುರ್ದ್ಧಾರ್ತ್ತರಾಷ್ಟ್ರಮೂಚುರ್ಹತಂ ಕೀಚಕಂ ಯೋಷಿದರ್ತ್ಥೇ ।

ತೇನಾವದದ್ ದ್ರೌಪದೀಕಾರಣೇನ ದುರ್ಯ್ಯೋಧನೋ ನಿಹತಂ ಕೀಚಕಂ ತಮ್ ॥೨೩.೩೨॥

 

ದ್ರೌಪದಿಯ ಮಾತಿಗೆ ಭಯದಿಂದ ಸುದೇಷ್ಣಾ ಒಪ್ಪಿಕೊಂಡಳು. ಹೀಗೆ ಪಾಂಡವರು ವಿರಾಟನಗರಿಯಲ್ಲಿ ಒಂದು ವರ್ಷ ಪೂರ್ತಿ ವಾಸಮಾಡಿದರು.

ಇತ್ತ ದುರ್ಯೋಧನನ ದೂತರು ಇಡೀ ಭೂಮಿಯಲ್ಲಿ ಹುಡುಕಿದರೂ  ಪಾಂಡವರು ಎಲ್ಲಿದ್ದಾರೆ ಎಂದು ತಿಳಿಯದೇ, ದುರ್ಯೋಧನನಲ್ಲಿಗೆ ತೆರಳಿ ‘ಪಾಂಡವರು ಸಿಗಲಿಲ್ಲ, ಆದರೆ ಒಂದು ಹೆಣ್ಣಿಗಾಗಿ ಕೀಚಕನು ಕೊಲ್ಲಲ್ಪಟ್ಟಿದ್ದಾನೆ’  ಎಂದು ಹೇಳಿದರು. ಆಗ ದುರ್ಯೋಧನನು  ದ್ರೌಪದಿಗಾಗಿಯೇ ಕೀಚಕ ಸತ್ತಿದ್ದು ಎಂದು ಹೇಳಿದ.

 

ಭೀಮೇನಾಗುಸ್ತತ್ರ ದುರ್ಯ್ಯೋಧನಾದ್ಯಾ ಭೀಷ್ಮಾದಿಭಿಃ ಸಹ ಕರ್ಣ್ಣೇನ ಚೈವ ।

ಅಗ್ರೇ ಯಯೌ ತತ್ರ ಯೋದ್ಧುಂ ಸುಶರ್ಮ್ಮಾ ಸ ಗಾ ವಿರಾಟಸ್ಯ ಸಮಾಜಹಾರ ॥೨೩.೩೩॥

 

‘ಭೀಮಸೇನನೇ ಕೀಚಕನನ್ನು ಕೊಂದಿರುವುದು’ ಎಂದು ಹೇಳಿದ ದುರ್ಯೋಧನ, ಭೀಷ್ಮಾಚಾರ್ಯ, ಕರ್ಣ, ಮೊದಲಾದವರೊಂದಿಗೆ ಕೂಡಿಕೊಂಡು ವಿರಾಟನಗರಿಗೆ ತೆರಳಿದ. ಅವರಿಗೂ ಮೊದಲು ಸುಶರ್ಮ ಎನ್ನುವ ರಾಜನು ಯುದ್ಧಮಾಡಲೆಂದು ಎರಡು ದಿನ ಮೊದಲೇ ತೆರಳಿದ ಮತ್ತು ವಿರಾಟನ ಗೋವುಗಳನ್ನು ಆಕ್ರಮಿಸಿದ.   

 

ಶ್ರುತ್ವಾ ವಿರಾಟೋSನುಯಯೌ ಸಸೇನಸ್ತಂ ಪಾಣ್ಡವಾಶ್ಚಾನುಯಯುರ್ವಿನಾSರ್ಜ್ಜುನಮ್ ।

ವಿಜಿತ್ಯ ಸಙ್ಖೇ ಜಗೃಹೇ ವಿರಾಟಂ ತದಾ ಸುಶರ್ಮ್ಮಾ ತಮಯಾದ್ ವೃಕೋದರಃ ॥೨೩.೩೪॥

 

ತ್ರಿಗರ್ತದೇಶದ ರಾಜ ಸುಶರ್ಮ ಆಕ್ರಮಣ ಮಾಡಿದ್ದಾನೆ ಎಂದು ಕೇಳಿದ ವಿರಾಟರಾಜನು ಸೇನೆಯಿಂದ ಕೂಡಿಕೊಂಡು ಸುಶರ್ಮನ ಬೆನ್ನಟ್ಟಿದನು. ಅವನನ್ನು ಅರ್ಜುನನನ್ನು ಬಿಟ್ಟು ಉಳಿದ ಪಾಂಡವರು ಅನುಸರಿಸಿದರು. ಯುದ್ಧದಲ್ಲಿ ಸುಶರ್ಮ ವಿರಾಟನನ್ನು ಗೆದ್ದು ಸೆರೆಹಿಡಿದ. ಆಗ ಭೀಮಸೇನ ಸುಶರ್ಮನನ್ನು ಕುರಿತು ತೆರಳಿದ.

 

ಸ ತಸ್ಯ ಸೇನಾಂ ವಿನಿಹತ್ಯ ಮಾತ್ಸ್ಯಂ ವಿಮೋಚ್ಯ ಜಗ್ರಾಹ ಸುಶರ್ಮ್ಮರಾಜಮ್ ।

ಯುಧಿಷ್ಠಿರೋ ಮೋಚಯಮಾಸ ತಂ ಚ ತತೋ ರಾತ್ರೌ ನ್ಯವಸನ್ ಬಾಹ್ಯತಸ್ತೇ ॥೨೩.೩೫॥

 

ಭೀಮಸೇನನು ಸುಶರ್ಮನ ಸೇನೆಯನ್ನು ಕೊಂದು, ವಿರಾಟರಾಜನನ್ನು ಬಿಡಿಸಿ, ಸುಶರ್ಮನನ್ನು ಹಿಡಿದುಕೊಂಡ. ಯುಧಿಷ್ಠಿರನು ಸುಶರ್ಮನನ್ನು ಬಿಡಿಸಿದನು. ಅಂದು ಅವರೆಲ್ಲರೂ ನಗರದ ಆಚೆ ಭಾಗದಲ್ಲಿ ರಾತ್ರಿಯನ್ನು ಕಳೆದರು(ಯುದ್ಧದಲ್ಲಿ ಗೆದ್ದ ಅವರು ಆ ರಾತ್ರಿ ಪಟ್ಟಣದಿಂದ ಹೊರಭಾಗದಲ್ಲೇ ವಾಸಮಾಡಿದರು).

Mahabharata Tatparya Nirnaya Kannada 23-19-26

 

ಏವಂ ನಿವಸತಾಂ ತತ್ರ ಪಾಣ್ಡವಾನಾಂ ಮಹಾತ್ಮನಾಮ್ ।

ಸಂವತ್ಸರೇ ದ್ವಿಮಾಸೋನೇ ವಿಜಿತ್ಯ ದಿಶ ಆಗತಃ ।

ಕೀಚಕೋ ಮತ್ಸ್ಯನೃಪತೇಃ ಸ್ಯಾಲೋ ಬಲವತಾಂ ವರಃ ॥೨೩.೧೯॥

 

ಈರೀತಿಯಾಗಿ ವಿರಾಟನಗರದಲ್ಲಿ ವಾಸಮಾಡುತ್ತಿರುವ ಶ್ರೇಷ್ಠರಾದ ಪಾಂಡವರು ಅಲ್ಲಿ ಹತ್ತು ತಿಂಗಳು ಕಳೆದಿರಲು, ಆ ಸಮಯದಲ್ಲಿ, ಮತ್ಸ್ಯರಾಜನ ಹೆಂಡತಿಯ ತಮ್ಮ, ಅತ್ಯಂತ ಬಲಿಷ್ಠನಾದ ಕೀಚಕ  ದಿಕ್ಕುಗಳನ್ನು ಗೆದ್ದು  ವಿರಾಟನಗರಕ್ಕೆ ಬಂದನು.

 

ಸ ದ್ರೌಪದೀಮೀಕ್ಷ್ಯ ಮಾನೋಭವಾರ್ತ್ತಃ ಸಮ್ಪ್ರಾರ್ತ್ಥಯಾಮಾಸ ತಯಾ ನಿರಸ್ತಃ ।

ಮಾಸೇ ಗತೇ ಭಗನೀಂ ಸ್ವಾಂ ಸುದೇಷ್ಣಾಂ ಸಮ್ಪ್ರಾರ್ತ್ಥಯಾಮಾಸ ತದರ್ತ್ಥಮೇವ ॥೨೩.೨೦॥

 

ಕೀಚಕನು ದ್ರೌಪದಿಯನ್ನು ಕಂಡು ಕಾಮದಿಂದ ಪೀಡಿತನಾಗಿ ಅವಳನ್ನು ಬೇಡಿದ. ದ್ರೌಪದಿಯಿಂದ  ತಿರಸ್ಕೃತನಾಗಿ ಒಂದು ತಿಂಗಳು ಕಳೆದಮೇಲೆ ಅಕ್ಕನಾಗಿರುವ ಸುದೇಷ್ಣಾಳಲ್ಲಿ ದ್ರೌಪದಿಯನ್ನು ತನ್ನಲ್ಲಿಗೆ ಕಳುಹಿಸಿಕೊಡುವಂತೆ ಬಹಳವಾಗಿ ಬೇಡಿಕೊಂಡ.

[‘ಸ ತು ಮೂರ್ಧ್ನ್ಯಞ್ಜಲಿಂ ಕೃತ್ವಾ ಭಗಿನ್ಯಾಶ್ಚರಣಾವುಭೌ । ಸಮ್ಮೋಹಾಭಿಹತಸ್ತೂರ್ಣಂ ವಾತೋದ್ಧೂತ ಇವಾರ್ಣವಃ’ (ವಿರಾಟಪರ್ವ ೧೮.೩) – ಕೈಕಾಲು ಹಿಡಿಯುವುದು, ತಲೆಮೇಲೆ ಕೈಇಟ್ಟು ಪ್ರಾರ್ಥನೆ ಮಾಡುವುದು, ಇತ್ಯಾದಿಯಾಗಿ ಅಕ್ಕನಲ್ಲಿ ಕೀಚಕ ಬೇಡುತ್ತಿದ್ದ ಎನ್ನುತ್ತದೆ ಮಹಾಭಾರತ]  

 

ತಯಾ ನಿಷಿದ್ಧೋSಪಿ ಪುನಃಪುನಸ್ತಾಂ ಯದಾ ಯಯಾಚೇSಥ ಚ ಸಾSSಹ ಕೃಷ್ಣಾಮ್ ।

ಸಮಾನಯಾSಶ್ವೇವ ಸುರಾಂ ಮದರ್ತ್ಥಮಿತೀರಿತಾ ನೇತಿ ಭೀತಾSವದತ್ ಸಾ॥೨೩.೨೧॥

 

ಸುದೇಷ್ಣಾಳಿಂದ ನಿಷಿದ್ಧನಾದರೂ, ಮತ್ತೆ ಮತ್ತೆ ಅವಳಲ್ಲಿ ಕೀಚಕ ಬೇಡಿಕೊಂಡ. ಆಗ ಅವಳು ‘ವೇಗದಲ್ಲಿಯೇ ನನಗಾಗಿ (ಕೀಚಕನ ಮನೆಯಿಂದ)ಮದ್ಯವನ್ನು ತೆಗೆದುಕೊಂಡು ಬಾ’ ಎಂದು ದ್ರೌಪದಿಗೆ ಹೇಳಿದಳು. ದ್ರೌಪದಿ ಅಳುಕಿದವಳಾಗಿ ‘ನಾನು ಹೋಗುವುದಿಲ್ಲ’ ಎನ್ನುತ್ತಾಳೆ.

 

ಬಲಾತ್ ತಯಾ ಪ್ರೇಷಿತಾ ತದ್ಗೃಹಾಯ ಯದಾSಗಮತ್ ತೇನ ಹಸ್ತೇ ಗೃಹೀತಾ ।

ವಿಧೂಯ ತಂ ಪ್ರಾದ್ರವತ್ ಸಾ ಸಭಾಯೈ ಸ್ಮೃತ್ವಾSSದಿತ್ಯಸ್ಥಂ ವಾಸುದೇವಂ ಪರೇಶಮ್ ॥೨೩.೨೨॥

 

ಸುದೇಷ್ಣಾಳಿಂದ ಬಲಾತ್ಕಾರವಾಗಿ ಕಳುಹಿಸಲ್ಪಟ್ಟ ದ್ರೌಪದಿಯು ಕೀಚಕನ ಮನೆಗೆ ಯಾವಾಗ ತೆರಳಿದಳೋ, ಆಗ ಅವನ ಕೈಯಲ್ಲಿ ಹಿಡಿಯಲ್ಪಟ್ಟವಳಾದಳು. ಅವನನ್ನು ಕೊಡವಿ, ಸೂರ್ಯನ ಅಂತರ್ಯಾಮಿಯಾದ ನಾರಾಯಣನನ್ನು ಸ್ಮರಿಸಿ,    ಸಭೆ ನಡೆಯುತ್ತಿರುವಲ್ಲಿಗೆ ದ್ರೌಪದಿ ಓಡಿದಳು. 

 

ಅನುದ್ರುತ್ಯೈತಾಂ ಪಾತಯಿತ್ವಾ ಪದಾ ಸ ಸನ್ತಾಡಯಾಮಾಸ ತದಾ ರವಿಸ್ಥಿತಃ ।

ನಾರಾಯಣೋ ಹೇತಿನಾಮೈವ ರಕ್ಷೋ ನ್ಯಯೋಜಯತ್ ತದದೃಶ್ಯಂ ಸಮಾಗಾತ್ ॥೨೩.೨೩॥

 

ಕೀಚಕನಾದರೋ, ದ್ರೌಪದಿಯನ್ನು ಹಿಂಬಾಲಿಸಿಕೊಂಡು ಬಂದು, ಅವಳನ್ನು ಬೀಳಿಸಿ, ಕಾಲಿನಿಂದ ಒದ್ದ. ಆಗ ಸೂರ್ಯಾಂತರ್ಯಾಮಿ ನಾರಾಯಣನು ‘ಹೇತಿ’ ಎನ್ನುವ ಹೆಸರಿನ ರಾಕ್ಷಸನನ್ನು ನಿಯೋಜಿಸಿದನು. ಹೇತಿ ಯಾರಿಗೂ ಕಾಣದಂತೆ ಅಲ್ಲಿಗೆ ಬಂದ.

[ಹೇತಿ ಒಬ್ಬ ಸಾತ್ವಿಕ. ಆದರೆ ರಾಕ್ಷಸ ಶರೀರವುಳ್ಳವನು. ಅವನು ಸೂರ್ಯನ ಸೇವಕ. ಇದೇ ಹೇತಿ ಕರ್ಣನ ತೊಡೆಯನ್ನು ಕೊರೆದು ರಕ್ತಬರುವಂತೆ ಮಾಡಿ, ಪರಶುರಾಮನಿಂದ ಕರ್ಣನಿಗೆ ಶಾಪ ಬರುವಂತೆ ಮಾಡಿರುವುದು].

 

ವಾಯುಸ್ತಮಾವಿಶ್ಯ ತು ಕೀಚಕಂ ತಂ ನ್ಯಪಾತಯತ್ ತಾಂ ಸಮೀಕ್ಷ್ಯೈವ ಭೀಮಃ ।

ಚುಕೋಪ ವೃಕ್ಷಂ ಚ ಸಮೀಕ್ಷಮಾಣಂ ತಂ ವಾರಯಾಮಾಸ ಯುಧಿಷ್ಠಿರೋsಗ್ರಜಃ ॥೨೩.೨೪॥

 

ಮುಖ್ಯಪ್ರಾಣನು ಆ ಹೇತಿ ಎನ್ನುವ ರಾಕ್ಷಸನನ್ನು ಹೊಕ್ಕು ಕೀಚಕನನ್ನು ಬೀಳಿಸಿದನು. ದ್ರೌಪದಿ ಸಭೆಗೆ ಬಂದಾಗ ಅಲ್ಲಿದ್ದ ಭೀಮಸೇನ ದ್ರೌಪದಿಯ ಆ ಸ್ಥಿತಿಯನ್ನು ಕಂಡು ಸಿಟ್ಟುಗೊಂಡು ಅಲ್ಲಿರುವ ದೊಡ್ಡ ಮರವೊಂದನ್ನು ನೋಡುತ್ತಿರಲು, ಅಣ್ಣನಾದ ಯುಧಿಷ್ಠಿರ ಅವನನ್ನು ತಡೆದ.

[‘ವಾಯುಸ್ತಮಾವಿಶ್ಯ ತು ಕೀಚಕಂ ತಂ ನ್ಯಪಾತಯತ್’ ಎನ್ನುವುದಕ್ಕೆ ಪ್ರಮಾಣ ಮೂಲ ಭಾರತದಲ್ಲೇ ಇದೆ: ‘ಉಪಾತಿಷ್ಠತ ಸಾ ಸೂರ್ಯಂ ಮುಹೂರ್ತಮಬಲಾ ತದಾ । ತದಸ್ಯಾಸ್ತನುಮಧ್ಯಾಯಾಃ ಸರ್ವಂ ಸೂರ್ಯೋSವಬುದ್ಧವಾನ್ ।  ಅಂತರ್ಹಿತಂ ತತಸ್ತಸ್ಯಾ ರಕ್ಷೋ ರಕ್ಷಾರ್ಥಮಾದಿಶತ್’ (ವಿರಾಟಪರ್ವ ೧೯.೩-೪) ‘ತತೋ ದಿವಾಕರೇಣಾSಶು ರಾಕ್ಷಸಃ ಸನ್ನಿಯೋಜಿತಃ । ಸ ಕೀಚಕಮಪೋವಾಹ ವಾತವೇಗೇನ ಭಾರತ (೧೯.೨೫) ದ್ರೌಪದಿ ಸೂರ್ಯನನ್ನು ನಮಸ್ಕರಿಸಿದಳು. ಅವನು ರಾಕ್ಷಸನನ್ನು ಆದೇಶಿಸಿದ. ಸೂರ್ಯನಿಂದ ಪ್ರಚೋದಿತನಾದ ರಾಕ್ಷಸನು ಕೀಚಕನನ್ನು ವಾಯುವೇಗದಲ್ಲಿ ಎಳೆದುಕೊಂಡು ಹೋದ. ಇಲ್ಲಿ ‘ವಾತವೇಗೇನ’ ಎನ್ನುವ ವಿಶೇಷಣ ಬಳಕೆಯಾಗಿದೆ. ಇದನ್ನು  ವಾತಸ್ಯ-ಮುಖ್ಯಪ್ರಾಣಸ್ಯ-ವೇಗಃ-ಬಲಮ್ ಎಂದು ವ್ಯಾಖ್ಯಾನ ಮಾಡಿದಂತಾಗುತ್ತದೆ. ಮುಖ್ಯಪ್ರಾಣನ ಆವೇಶವಿದ್ದುದರಿಂದ ಹೇತು ಕೀಚಕನನ್ನು ಆರೀತಿ ಬೀಳಿಸಲು ಸಾಧ್ಯವಾಯಿತು.

 

ಕೃಷ್ಣಾ ರಾತ್ರೌ ಭೀಮಸಕಾಶಮೇತ್ಯ ಹನ್ತುಂ ಪಾಪಂ ಕೀಚಕಂ ಪ್ರೈರಯತ್ ತಮ್ ।

ಭೀಮಸ್ಯ ಬುದ್ಧ್ಯಾ ನಿಶಿ ಸಾ ಕೀಚಕಂ ಚ ಜಗಾದ ಗನ್ತುಂ ಶೂನ್ಯಗೃಹಂ ಸ ಚಾಗಾತ್ ॥೨೫.೨೫॥

 

ದ್ರೌಪದಿಯು ಆರಾತ್ರಿ ಭೀಮನ ಬಳಿಗೆ ತೆರಳಿ, ಪಾಪಿಷ್ಠನಾದ ಕೀಚಕನನ್ನು ಕೊಲ್ಲಲು ಅವನನ್ನು ಪ್ರೇರಿಸಿದಳು. ಭೀಮಸೇನನ ಸಲಹೆಯಂತೆ ಅವಳು ಕೀಚಕನನ್ನು ರಾತ್ರಿಯಲ್ಲಿ ಯಾರೂ ಇಲ್ಲದ ಮನೆಗೆ(ನೃತ್ಯಗೃಹಕ್ಕೆ ) ಬರಲು ಹೇಳಿದಳು ಮತ್ತು ಕೀಚಕನು ಅಲ್ಲಿಗೆ ಬಂದ ಕೂಡಾ.

 

ತತ್ರೈನಮಾಸಾದ್ಯ ತು ಭೀಮಸೇನೋ ವಿಜಿತ್ಯ ತಂ ಬಾಹುಯುದ್ಧೇ ನಿಹತ್ಯ ।

ಶಿರೋ ಗುದೇ ಪಾಣಿಪಾದೌ ಚ ತಸ್ಯ ಪ್ರವೇಶಯಾಮಸ ವಿಮೃದ್ಯ ವೀರಃ ॥೨೩.೨೬॥

 

ಶೂನ್ಯಗೃಹದಲ್ಲಿದ್ದ ಕೀಚಕನ ಬಳಿ ಬಂದ ಭೀಮಸೇನನು ಮಲ್ಲಯುದ್ಧದಲ್ಲಿ ಅವನನ್ನು ಸೋಲಿಸಿದ. ಕೈಯಿಂದ ಗುದ್ದಿ, ತಲೆಯನ್ನೂ, ಪೃಷ್ಟಭಾಗವನ್ನೂ, ಕೈ-ಕಾಲುಗಳನ್ನು ಒಂದರ ಒಳಗೆ ಒಂದನ್ನು ಹೊಗಿಸಿ ಭೀಕರವಾಗಿ ಕೀಚಕನನ್ನು ಭೀಮಸೇನ ಕೊಂದುಹಾಕಿದ.

[ಮಹಾಭಾರತ: ‘ಅಥ ಪಾಣೀ ಚ ಪಾದೌ ಚ ಶಿರೋ ಗ್ರೀವಾಂ ಸಕುಣ್ಡಲಾಮ್ । ಗುದೇ ಪ್ರವೇಶಯಾಮಾಸ ಮೃದಿತ್ವಾSಙ್ಗಾನಿ ಸರ್ವಶಃ’ (ವಿರಾಟಪರ್ವ ೨೬.೪೦). ಇಷ್ಟು ಭೀಕರವಾಗಿ ಕೀಚಕ ಭೀಮನಿಂದ ಕೊಲ್ಲಲ್ಪಟ್ಟ].   

Sunday, November 27, 2022

Mahabharata Tatparya Nirnaya Kannada 23-11-18

 

ಅಥಾSಜಗಾಮ ಮಲ್ಲಕಃ ಸಮಸ್ತಭೂಮಿಮಣ್ಡಲೇ ।

ವರೇಣ ಯೋSಜಿತೋ ಜಯೀ ಶಿವಸ್ಯ ಸಙ್ಜಗರ್ಜ್ಜ ಚ ॥೨೩.೧೧॥

 

ಒಮ್ಮೆ ಭೂಮಿಯಲ್ಲಿರುವ ಎಲ್ಲಾ ಮಲ್ಲರನ್ನು ಗೆದ್ದಿರುವ, ಶಿವನ ವರವಿರುವುದರಿಂದ ಯಾರಿಂದಲೂ  ಗೆಲ್ಲಲಾಗದಿರುವ ಮಲ್ಲನೊಬ್ಬ ವಿರಾಟನಗರಕ್ಕೆ ಬಂದ ಮತ್ತು ಗರ್ಜಿಸಿದ(ವಿರಾಟ ನಗರದಲ್ಲಿರುವ ಮಲ್ಲರೆಲ್ಲರನ್ನೂ ಅವನು ಯುದ್ಧಕ್ಕೆ ಕರೆದ. ಮಹಾಭಾರತದಲ್ಲಿ ಆ ಮಲ್ಲನನ್ನು ಜೀಮೂತಃ ಎಂದು ಹೇಳಿದ್ದಾರೆ).

 

ತಮೀಕ್ಷ್ಯ ಸರ್ವಮಲ್ಲಕಾ ವಿರಾಟರಾಜಸಂಶ್ರಯಾಃ ।

ಪ್ರದುರ್ದ್ರುವುರ್ಭಯಾರ್ದ್ದಿತಾಸ್ತದಾSವದದ್ ಯುಧಿಷ್ಠಿರಃ ॥೨೩.೧೨ ॥

 

ಅವನನ್ನು ಕಂಡು ವಿರಾಟರಾಜನನ್ನು ಆಶ್ರಯಿಸಿಕೊಂಡಿರುವ ಎಲ್ಲಾ ಮಲ್ಲರೂ ಕೂಡಾ ಅಳುಕಿನಿಂದ ಓಡಿಹೋದರು. ಆಗ ಯುಧಿಷ್ಠಿರನು ವಿರಾಟರಾಜನಿಗೆ ಹೀಗೆ ಹೇಳಿದ-

 

ಯ ಏಷ ಸೂದ ಆಶು ತಂ ನಿಹತ್ಯ ಮಲ್ಲಮೋಜಸಾ ।

ಯಶಸ್ತವಾಭಿವರ್ದ್ಧಯೇತ್ ಸಮಾಹ್ವಯಾದ್ಯ ತಂ ನೃಪ ॥೨೩.೧೩॥

 

ರಾಜನೇ, ನಿನ್ನ ಆಸ್ಥಾನದಲ್ಲಿ ಅಡಿಗೆಯವನಿದ್ದಾನಲ್ಲ, ಅವನು ಈ ಮಲ್ಲನನ್ನು ತನ್ನ ಶಕ್ತಿಯಿಂದ ಕೊಂದು ನಿನ್ನ ಕೀರ್ತಿಯನ್ನು ಬೆಳೆಸಿಯಾನು. ಅವನನ್ನು ಈಗಲೇ ಕರೆ.

 

ಇತೀರಿತೇ ಸಮಾಹುತೋ ಜಗಾದ ಮಾರುತಿರ್ವಚಃ ।

ಪ್ರಸಾದತೋ ಹರೇರಹಂ ನಿಸೂದಯೇSದ್ಯ ಮಲ್ಲಕಮ್ ॥೨೩.೧೪॥

 

ಈರೀತಿಯಾಗಿ ಯುಧಿಷ್ಠಿರನಿಂದ ಹೇಳಲು, ಕರೆಯಲ್ಪಟ್ಟ ಭೀಮಸೇನನು ‘ನಾರಾಯಣನ ಅನುಗ್ರಹದಿಂದ ಈ ಮಲ್ಲನನ್ನು ಕೊಲ್ಲುತ್ತೇನೆ’ ಎಂದನು.

[ಮಹಾಭಾರತದಲ್ಲಿ ಹೀಗೊಂದು ಮಾತಿದೆ: ‘ಮಹಾದೇವಸ್ಯ ಭಕ್ತ್ಯಾ ಚ ತಂ ಮಲ್ಲಂ ಪಾತಯಾಮ್ಯಹಮ್’ - ಮಹಾದೇವನ ಭಕ್ತಿಯಿಂದ ಆ ಮಲ್ಲನನ್ನು ಕೊಲ್ಲುತ್ತೇನೆ(ವಿರಾಟಪರ್ವ-೧೫.೩೨).  ನರೇಂದ್ರ ತೇ ಪ್ರಭಾವೇನ ಶ್ರೀಯಾ ಶಕ್ತ್ಯಾ ಚ ಶಾಸನಾತ್ ।  ಅನೇನ ಸಹ ಮಲ್ಲೇನ ಯೋದ್ಧುಂ ರಾಜೇಂದ್ರ ಶಕ್ನುಯಾಮ್ । ಯುಧಿಷ್ಠಿರಕೃತಂ ಜ್ಞಾತ್ವಾ ಶ್ರೀಯಾ ತವ ವಿಶಾಮ್ಪತೇ’- ಓ ನರೇಂದ್ರ, ನಿನ್ನ ಪ್ರಭಾವದಿಂದ, ನಿನ್ನ ಮೇಲಿನ ಭಕ್ತಿಯಿಂದ, ನಿನ್ನ ಅನುಗ್ರಹದಿಂದ, ನಿನ್ನ ಅಣತಿಯಂತೆ ಈ ಮಲ್ಲನೊಡನೆ ನಾನು ಯುದ್ಧ ಮಾಡುತ್ತೇನೆ  (ವಿರಾಟಪರ್ವ ೧೫.೩೧), ಇಲ್ಲಿ ಭೀಮ ಈಶ್ವರನ ಅನುಗ್ರಹದಿಂದ ಎಂದಿದ್ದಾನೆ; ಇನ್ನು ವಿರಾಟನಲ್ಲಿ ನಿನ್ನ ಅನುಗ್ರಹದಿಂದ ಎಂದಿದ್ದಾನೆ, ಇದಕ್ಕೆ ಆಚಾರ್ಯರು ಹೀಗೆ ವಿವರಣೆಯನ್ನು ಕೊಡುತ್ತಾರೆ-]

 

ಸಮಸ್ತದೇವವೃನ್ದತೋ ಮಹಾನ್ ಯ ಏವ ಕೇಶವಃ ।

ಸಮಸ್ತದೇವನಾಮವಾಂಸ್ತದೀಯಭಕ್ತಿತೋ ಬಲಮ್ ॥೨೩.೧೫॥

 

ಎಲ್ಲಾ ದೇವತೆಗಳ ಸಮೂಹದಿಂದ ಯಾರು ಶ್ರೇಷ್ಠನೋ ಅವನು ಮಹಾದೇವ. ಎಲ್ಲಾ ದೇವತೆಗಳ ನಾಮ ಮುಖ್ಯವಾಗಿರುವುದು ನಾರಾಯಣನಲ್ಲಿಯೇ. ಹೀಗಾಗಿ ‘ಅಂತಹ ಭಗವಂತನ ಭಕ್ತಿಯಿಂದಲೇ ನನಗೆ ಬಲವಿದೆ’

 

ಯ ಏವ ದೇವನಾಮಧಾ ಇತಿ ಶ್ರುತಿರ್ಜ್ಜಗಾದ ಹಿ ।

ಮಹಾಂಶ್ಚ ದೇವ ಏಷ ತತ್ ಸ ಮೇ ಜಯಂ ವಿಧಾಸ್ಯತಿ ॥೨೩.೧೬॥

 

ಯಾರು ಎಲ್ಲಾ ದೇವತೆಗಳ ನಾಮವನ್ನು ಧರಿಸಿದ್ದಾನೋ, ಅಂತಹ ನಾರಾಯಣನಿಗೆ ನಮಸ್ಕಾರ ಎಂದು ಶ್ರುತಿಗಳಲ್ಲಿ ಹೇಳಿದ್ದಾರೆ. ಅವನು ಮಹಾನ್-ದೇವ. ಅದರಿಂದಾಗಿ ಅವನು ನನಗೆ ಜಯವನ್ನು ಕೊಡುತ್ತಾನೆ.

 [‘ಯೋ ದೇವಾನಾಂ ನಾಮಧಾ ಏಕ ಏವ’ (ಋಗ್ವೇದ ೧೦.೮೨.೩)  ತಾಥಾಚ ದೇವ ನಾಮಕ್ಕೆ ಧಾರಕತ್ವ ಎನ್ನುವುದು ನಾರಾಯಣನಿಗಿದೆ. ಹೀಗಾಗಿ ಎಲ್ಲಾ ದೇವತೆಗಳ ನಾಮವೂ ಅವನದಾಗಿರುವುದರಿಂದ ಮಹಾದೇವ ನಾಮವೂ ಮೂಲತಃ ಅವನದೇ. ಇಲ್ಲಿ ಭೀಮಸೇನ ಈ ಮಹಾದೇವ ನಾಮಕ ಭಗವಂತನಿಗೆ ನಮಸ್ಕಾರ ಮಾಡಿರುವುದು].

 

ಯುಧಿಷ್ಠಿರಾಭಿಧಶ್ಚ ಯೋ ಯುಧಿಷ್ಠಿರೇ ಸ್ಥಿತಃ ಸದಾ ।

ತ್ವಯಿ ಸ್ಥಿತಸ್ತ್ವಮಿತ್ಯಸೌ ಸದಾSಭಿಧೀಯತೇ ಹರಿಃ ॥೨೩.೧೭॥

 

ಯುಧಿಷ್ಠಿರನ ಒಳಗಿರುವ ಭಗವಂತ ‘ಯುಧಿಷ್ಠಿರ ನಾಮಕ.  ತ್ವಮ್ ಎಂದರೂ ದೇವರೇ. ತ್ವಮ್ ಎಂದರೆ ನಿನ್ನೊಳಗಿರುವ ದೇವರು. (ಅಹಮ್ ಎಂದರೂ ದೇವರೇ. ಅಹಮ್ ಎಂದರೆ ನನ್ನೊಳಗಿರುವ ದೇವರು). ದೇವರು ಎಲ್ಲಾ ನಾಮಗಳಿಂದ ಪ್ರತಿಪಾದ್ಯ. ಹೀಗಾಗಿ ಜಗತ್ತಿನ ಯಾವುದೇ ಶಬ್ದಗಳು ದೇವರನ್ನು ಹೇಳುತ್ತವೆ. [ಹೀಗೆ ಭೀಮಸೇನ ಭಗವಂತನನ್ನೇ ಮುಖ್ಯವಾಗಿರಿಸಿಕೊಂಡು ಮಾತನಾಡಿರುವುದು]

 

ಇತಿ ಬ್ರುವಾಣೋ ಮಲ್ಲಂ ತಮಭಿಯಾತೋ ವೃಕೋದರಃ ।

ಅನಯನ್ಮೃತ್ಯುಲೋಕಾಯ ಬಲಾಢ್ಯೈರಪಿ ದುರ್ಜ್ಜಯಮ್ ॥೨೩.೧೮॥

 

ಈರೀತಿಯಾಗಿ ಹೇಳುತ್ತಾ ಆ ಮಲ್ಲನನ್ನು ಕುರಿತು ತೆರಳಿದ ಭೀಮಸೇನನು, ಬಲಾಢ್ಯರಿಂದಲೂ ಕೂಡಾ ಗೆಲ್ಲಲಾಗದ ಆ ಮಲ್ಲನನ್ನು ಯಮಲೋಕಕ್ಕೆ ಕಳುಹಿಸಿದ.