ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 2, 2023

Mahabharata Tatparya Nirnaya Kannada 28-19-25

 

ಶಲ್ಯೋ ಗದಾಂ ಸಮಾವಿದ್ಧ್ಯ ಚಿಕ್ಷೇಪಾರ್ಜ್ಜುನವಕ್ಷಸಿ ।

ತದಾ ಮುಮೋಹ ಬೀಭತ್ಸುಸ್ತತ ಉಚ್ಚುಕ್ರುಶುಃ ಪರೇ ॥೨೮.೧೯॥

 

ಶಲ್ಯನು ಗದೆಯನ್ನು ತಿರುಗಿಸುತ್ತಾ, ಅರ್ಜುನನ ಎದೆಗೆ ಗುರಿಯಿಟ್ಟು ಹೊಡೆದ. ಆಗ ಅರ್ಜುನನು ಮೂರ್ಛೆಹೋದ. ಇದನ್ನು ಕಂಡು ಶತ್ರುಗಳು ಸಂತೋಷದಿಂದ ಗಟ್ಟಿಯಾಗಿ ಕಿರುಚಿದರು. (ಜಯಘೋಷ ಮಾಡಿದರು)

 

ಪ್ರಾಪ್ಯ ಸಞ್ಜ್ಞಾಂ ಪುನಃ ಪಾರ್ತ್ಥಃ ಶಲ್ಯಂ ವಿವ್ಯಾಧ ವಕ್ಷಸಿ ।

ಸ ವಿಹ್ವಲಿತಸರ್ವಾಙ್ಗಃ ಶಿಶ್ರಿಯೇ ಧ್ವಜಮುತ್ತಮಮ್ ॥೨೮.೨೦॥

 

ಮೂರ್ಛೆಯಿಂದ ಎದ್ದ ಅರ್ಜುನನು ಚೇತರಿಸಿಕೊಂಡು ಮತ್ತೆ  ಶಲ್ಯನ ವಕ್ಷಸ್ಥಳದಲ್ಲಿ ಹೊಡೆದನು. ಶಲ್ಯನಾದರೋ, ನೊಂದ ಅವಯವವುಳ್ಳವನಾಗಿ  ಧ್ವಜದ ದಂಡವನ್ನು ಹಿಡಿದು ನಿಂತನು,

 

ಸಮಾಶ್ವಸ್ತಃ ಪುನರ್ಬಾಣಂ ಯಮದಣ್ಡನಿಭಂ ರಣೇ ।

ಮುಮೋಚ ಪಾರ್ತ್ಥಸ್ಯ ಸ ಚ ನಿರ್ಬಿಭೇದ ಸ್ತನಾನ್ತರಮ್ ॥೨೮.೨೧॥

 

ಪುನಃ ಚೇತರಿಸಿಕೊಂಡ ಶಲ್ಯನು ಯಮನ ದಂಡದಂತೆ ತೀಕ್ಷ್ಣವಾಗಿರುವ ಬಾಣವನ್ನು ಅರ್ಜುನನ ಮೇಲೆ ಬಿಟ್ಟನು. ಆ ಬಾಣವು ಅರ್ಜುನನ ಎದೆಭಾಗವನ್ನು(ಸ್ತನಗಳ ನಡುವಿನ ಭಾಗವನ್ನು) ಛೇದಿಸಿತು.

 

ತೇನ ವಿಹ್ವಲಿತಃ ಪಾರ್ತ್ಥೋ ಧ್ವಜಯಷ್ಟಿಂ ಸಮಾಶ್ರಿತಃ ।

ಸಮಾಶ್ವಸ್ತಃ ಪ್ರಚಿಚ್ಛೇದ ಮದ್ರರಾಜಸ್ಯ ಕಾರ್ಮ್ಮುಕಮ್ ॥೨೮.೨೨॥

 

ಅದರಿಂದ ನೊಂದ ಅರ್ಜುನನು ಧ್ವಜದಂಡವನ್ನು ಹಿಡಿದುಕೊಂಡ. ಸ್ವಲ್ಪ ಹೊತ್ತು ವಿಶ್ರಾಂತಿಪಡೆದು ಚೇತರಿಸಿಕೊಂಡ ಅರ್ಜುನನು ಶಲ್ಯನ ಬಿಲ್ಲನ್ನು ಮತ್ತೆ ಕತ್ತರಿಸಿದ.

 

ಛತ್ರಂ ಧ್ವಜಂ ಚ ತರಸಾ ಸಾರಥಿಂ ಚ ನ್ಯಪಾತಯತ್ ।

ತದಾSನ್ಯಂ ರಥಮಾಸ್ಥಾಯ ಧರ್ಮ್ಮರಾಜಃ ಶರೋತ್ತಮೈಃ ॥೨೮.೨೩॥

 

ಚತುರ್ಭಿಶ್ಚತುರೋ ವಾಹಾಞ್ಛಲ್ಯಸ್ಯ ನಿಜಘಾನ ಹ ।

ಶಲ್ಯೋSನ್ಯಂ ರಥಮಾಸ್ಥಾಯ ಸರ್ವಾಂಸ್ತಾಞ್ಛರವೃಷ್ಟಿಭಿಃ ॥೨೮.೨೪॥

 

ಛಾದಯಾಮಾಸ ರಾಜಾನಂ ವಿರಥಂ ಚ ಚಕಾರ ಹ ।

ನಿಹತ್ಯಾಶ್ವಾನ್ ಸಾತ್ಯಕೇಶ್ಚ ಧೃಷ್ಟದ್ಯುಮ್ನಸ್ಯ ಚಾಭಿಭೂಃ ।

ಚಾಪೇ ಚ್ಛಿತ್ವಾ ಚ ಯಮಯೋರ್ದ್ದಧ್ಮೌ ಶಙ್ಖಂ ಮಹಾಸ್ವನಮ್ ॥೨೮.೨೫॥

 

ಆಗಲೇ ಅರ್ಜುನನು ಶಲ್ಯನ ಛತ್ರವನ್ನೂ, ಧ್ವಜವನ್ನೂ ಕತ್ತರಿಸಿ, ಅವನ ಸಾರಥಿಯನ್ನೂ ಕೊಂದುಹಾಕಿದ. ಆಗ (ಹಿಂದೆ ಶಲ್ಯನಿಂದ ರಥಹೀನನಾಗಿದ್ದ) ಧರ್ಮರಾಜನು ಬೇರೊಂದು ರಥವನ್ನೇರಿ ಬಂದು ನಾಲ್ಕು ಉತ್ಕೃಷ್ಟ ಬಾಣಗಳಿಂದ ಶಲ್ಯನ ನಾಲ್ಕು ಕುದುರೆಗಳನ್ನು ಕೊಂದುಹಾಕಿದ.  ಶಲ್ಯನು ಇನ್ನೊಂದು ರಥವನ್ನೇರಿ ಬಂದು  ಅವರೆಲ್ಲರನ್ನೂ ಬಾಣಗಳಿಂದ ಮುಚ್ಚಿದ. ಧರ್ಮರಾಜನನ್ನು ಶಲ್ಯ ಮತ್ತೆ ರಥಹೀನನನ್ನಾಗಿ ಮಾಡಿದನು. ಸಾತ್ಯಕಿಯ ಮತ್ತು ಧೃಷ್ಟದ್ಯುಮ್ನನ ಅಶ್ವಗಳನ್ನೂ ಶಲ್ಯ ಕೊಂದುಹಾಕಿದ. ನಕುಲ ಸಹದೇವರ ಬಿಲ್ಲುಗಳನ್ನು ಕತ್ತರಿಸಿದ ಶಲ್ಯನು ಮಹಾಧ್ವನಿಯುಳ್ಳ ಶಂಖವನ್ನೂದಿದನು.

Thursday, June 29, 2023

Mahabharata Tatparya Nirnaya Kannada 28-09-18

 

ತಯೋರಾಸೀನ್ಮಹದ್ ಯುದ್ಧಮದ್ಭುತಂ ರೋಮಹರ್ಷಣಮ್ ।

ರಥಮನ್ಯಂ ಸಮಾಸ್ಥಾಯ ದ್ರೌಣಿರ್ಭೀಮಂ ಸಮಭ್ಯಯಾತ್ ॥೨೮.೦೯॥

 

ಶಲ್ಯ ಹಾಗೂ ಅರ್ಜುನರಿಬ್ಬರ ನಡುವೆ ವಿಸ್ಮಯಕರವಾಗಿರುವ, ರೋಮಾಂಚನಕಾರಿ, ಭಯಂಕರವಾದ ಯುದ್ಧವು ನಡೆಯಿತು. ಇತ್ತ ಅಶ್ವತ್ಥಾಮ ಇನ್ನೊಂದು ರಥವನ್ನೇರಿ ಮತ್ತೆ ಭೀಮಸೇನನನ್ನು ಎದುರುಗೊಂಡ.

 

ದುರ್ಯ್ಯೋಧನಶ್ಚ ಭೀಮಸ್ಯ ಶರೈರಾವಾರಯದ್ ದಿಶಃ ।

ತಾವುಭೌ ಶರವರ್ಷೇಣ ವಾರಯಾಮಾಸ ಮಾರುತಿಃ ॥೨೮.೧೦॥

 

ದುರ್ಯೋಧನನೂ ಕೂಡಾ ಭೀಮನ ಸುತ್ತಲೂ ಬಾಣಗಳಿಂದ ಮುಚ್ಚಿದ. ಆಗ ಅಶ್ವತ್ಥಾಮ ಮತ್ತು ದುರ್ಯೋಧನನನ್ನು  ಭೀಮಸೇನ ತನ್ನ ಬಾಣಗಳಿಂದ ತಡೆದ.

 

 

ತಾಭ್ಯಾಂ ತಸ್ಯಾಭವದ್ ಯುದ್ಧಂ ಸುಘೋರಮತಿಮಾನುಷಮ್ ।

ದುರ್ಯ್ಯೋಧನಸ್ಯಾವರಜಾನ್ ದ್ರೌಪದೇಯಾ ಯುಯುತ್ಸುನಾ ॥೨೮.೧೧॥

 

ಶಿಖಣ್ಡ್ಯಾದ್ಯೈರ್ಮ್ಮಾತುಲೈಶ್ಚ ಸಹ ಸರ್ವಾನ್ ನ್ಯವಾರಯನ್ ।

ಸಹದೇವಸ್ತು ಶಕುನಿಮುಲೂಕಂ ನಕುಲಸ್ತದಾ  ॥೨೮.೧೨॥

 

ಧೃಷ್ಟದ್ಯುಮ್ನಶ್ಚ ಹಾರ್ದ್ದಿಕ್ಯಂ ಸಾತ್ಯಕಿಃ ಕೃಪಮೇವ ಚ ।

ತೇಷಾಂ ತದಭವದ್ ಯುದ್ಧಂ ಚಿತ್ರಂ ಲಘು ಚ ಸುಷ್ಠು ಚ ॥೨೮.೧೩॥

 

ಭೀಮಸೇನ ಮತ್ತು ಅವರಿಬ್ಬರ ನಡುವೆ ಅತ್ಯಂತ ಘೋರವಾಗಿರುವ, ಅತಿಮಾನುಷವಾದ ಯುದ್ಧವು ನಡೆಯಿತು. ದುರ್ಯೋಧನನ ತಮ್ಮಂದಿರರನ್ನು ದ್ರೌಪದಿಯ ಮಕ್ಕಳು, ಯುಯುತ್ಸುವಿನೊಂದಿಗೆ ಕೂಡಿಕೊಂಡು, ಹಾಗೇ ಶಿಖಂಡಿ ಮೊದಲಾಗಿರುವ ಸೋದರಮಾವಂದಿರೊಂದಿಗೆ ಸೇರಿ  ತಡೆದರು.  ಸಹದೇವನು ಶಕುನಿಯನ್ನೂ, ನಕುಲನು ಉಲೂಕ ಎನ್ನುವ ಶಕುನಿಯ ಮಗನನ್ನೂ, ಧೃಷ್ಟದ್ಯುಮ್ನ ಕೃತವರ್ಮನನ್ನೂ, ಸಾತ್ಯಕಿಯು ಕೃಪಾಚಾರ್ಯರನ್ನೂ ಎದುರಿಸಿದರು. ಅವರ ನಡುವೆ ನಡೆದ ಆ ಯುದ್ಧ ಆಶ್ಚರ್ಯಕರವೂ, ವೇಗಭರಿತವೂ ಆಗಿತ್ತು. ಪ್ರಾಣವನ್ನು ತೆಗೆಯುವ ಗಟ್ಟಿ ನಿರ್ಧಾರವನ್ನು ಹೊಂದಿತ್ತು.  

 

ಶಲ್ಯಸ್ತು ಶರಸಙ್ಘಾತೈಃ ಪಾರ್ತ್ಥಸ್ಯಾSವಾರಯದ್ ದಿಶಃ ।

ಸೋSಪಿ ವಿವ್ಯಾಧ ವಿಶಿಖೈಃ ಶಲ್ಯಮಾಹವಶೋಭಿನಮ್ ॥೨೮.೧೪॥

 

ಶಲ್ಯನಾದರೋ ಬಾಣಗಳಿಂದ ಅರ್ಜುನನ ದಿಕ್ಕುಗಳನ್ನು ತಡೆದನು. ಆಗ ಅರ್ಜುನ ಯುದ್ಧದಲ್ಲಿ ಶೋಭಿಸುತ್ತಿರುವ ಶಲ್ಯನನ್ನು ಬಾಣಗಳಿಂದ ಹೊಡೆದನು.

 

ತಯೋಃ ಸುಸಮಮೇವಾSಸೀಚ್ಚಿರಂ ದೇವಾಸುರೋಪಮಮ್ ।

ತತಃ ಶರಂ ವಜ್ರನಿಭಂ ಮದ್ರರಾಜಃ ಸಮಾದದೇ ॥೨೮.೧೫॥

 

ಅವರಿಬ್ಬರಿಗೂ ಧೀರ್ಘಕಾಲ, ದೇವತೆಗಳಿಗೆ ಮತ್ತು ಅಸುರರಿಗೆ ಆದ ಯುದ್ಧಕ್ಕೆ ಸದೃಶವಾದ ಯುದ್ಧವು ಸಮವಾಗಿ ನಡೆಯಿತು. ತದನಂತರ ವಜ್ರಾಯುಧಕ್ಕೆ ಸಮನಾದ ಬಾಣವನ್ನು ಶಲ್ಯನು ತೆಗೆದುಕೊಂಡ.

 

ತೇನ ವಿವ್ಯಾಧ ಬೀಭತ್ಸುಂ ಹೃದಯೇ ಸ ಮುಮೋಹ ಚ ।

ಉಪಲಭ್ಯ ಪುನಃ ಸಂಜ್ಞಾಂ ವಾಸವಿಃ ಶತ್ರುತಾಪನಃ  ॥೨೮.೧೬॥

 

ಚಿಚ್ಛೇದ ಕಾರ್ಮ್ಮುಕಂ ಸಙ್ಖೇ ಮದ್ರರಾಜಸ್ಯ ಧೀಮತಃ ।

ಸೋSನ್ಯತ್ ಕಾರ್ಮ್ಮುಕಮಾದಾಯ ಮುಮೋಚಾಸ್ತ್ರಾಣಿ ಫಲ್ಗುನೇ ॥೨೮.೧೭॥

 

ಆ ಬಾಣದಿಂದ ಶಲ್ಯ ಅರ್ಜುನನ ಎದೆಗೆ ಹೊಡೆದ. ಆಗ ಅರ್ಜುನ ಮೂರ್ಛೆಹೊಂದಿದ. ಶತ್ರುಗಳನ್ನು ಕಂಗೆಡಿಸುವ ಆ  ಅರ್ಜುನ ಮತ್ತೆ ಅರಿವನ್ನು ಪಡೆದು, ಬುದ್ಧಿವಂತನಾದ ಶಲ್ಯನ ಬಿಲ್ಲನ್ನು ಯುದ್ಧದಲ್ಲಿ ಕತ್ತರಿಸಿದ. ಶಲ್ಯನಾದರೋ, ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಅರ್ಜುನನಲ್ಲಿ ಅಸ್ತ್ರಗಳನ್ನು ಬಿಟ್ಟ.

 

ಸೌರಂ ಯಾಮ್ಯಂ ಚ ಪಾರ್ಜ್ಜನ್ಯಂ ತಾನ್ಯೈನ್ದ್ರೇಣ ಜಘಾನ ಸಃ ।

ಪುನರ್ನ್ನ್ಯಕೃನ್ತತ್ ತಚ್ಚಾಪಮಿನ್ದ್ರಸೂನುರಮರ್ಷಿತಃ ॥೨೮.೧೮॥

 

ಶಲ್ಯನ ಸೂರ್ಯದೇವತಾಕವಾದ, ಯಮದೇವತಾಕವಾದ, ಪರ್ಜನ್ಯದೇವತಾಕವಾದ ಅಸ್ತ್ರಗಳನ್ನು ಅರ್ಜುನನು ಐನ್ದ್ರಾಸ್ತ್ರದಿಂದ ನಾಶಮಾಡಿದ ಮತ್ತು ಮುನಿದ ಆ ಇಂದ್ರನ ಮಗನಾದ ಅರ್ಜುನನು ಶಲ್ಯನ ಬಿಲ್ಲನ್ನು ಮತ್ತೆ ಕತ್ತರಿಸಿದ.

Tuesday, June 27, 2023

Mahabharata Tatparya Nirnaya Kannada 28-01-08

 

೨೮. ಪಾಣ್ಡವರಾಜ್ಯಲಾಭಃ

 

̐

ಪ್ರಭಾತಾಯಾಂ ತು ಶರ್ವರ್ಯ್ಯಾಂ ಗುರುಪುತ್ರಾನುಮೋದಿತಃ ।

ಶಲ್ಯಂ ಸೇನಾಪತಿಂ ಕೃತ್ವಾ ಯೋದ್ಧುಂ ದುರ್ಯ್ಯೋಧನೋSಭ್ಯಯಾತ್ ॥೨೮.೦೧॥

 

ರಾತ್ರಿ ಕಳೆದು ಬೆಳಗಾಗುತ್ತಿರಲು(ಯುದ್ಧದ ಹದಿನೆಂಟನೇ ದಿನದಂದು), ದುರ್ಯೋಧನ ಅಶ್ವತ್ಥಾಮಾಚಾರ್ಯರ ಅನುಮತಿಯನ್ನು ಪಡೆದು, ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ, ಯುದ್ಧಮಾಡಲು ತೆರಳಿದನು.

 

ತಮಭ್ಯಯುಃ ಪಾಣ್ಡವಾಶ್ಚ ಹೃಷ್ಟಾ ಯುದ್ಧಾಯ ದಂಸಿತಾಃ ।

ತತ್ರಾSಸೀತ್ ಸುಮಹದ್ ಯುದ್ಧಂ ಪಾಣ್ಡವಾನಾಂ ಪರೈಃ ಸಹ ॥೨೮.೦೨॥

 

ಪಾಂಡವರಾದರೋ, ಅತ್ಯಂತ ಸಂತಸದಿಂದ, ತಮ್ಮ ಕವಚಗಳನ್ನು ತೊಟ್ಟು ಯುದ್ಧಕ್ಕೆಂದು ತೆರಳಿದರು. ಆ ಹದಿನೆಂಟನೆಯ ದಿನ ಪಾಂಡವರಿಗೆ ಇತರರಾದ ಕೌರವರ ಜೊತೆಗೆ ಘೋರವಾದ ಯುದ್ಧ ನಡೆಯಿತು.

 

ಅಗ್ರೇ ಭೀಮಃ ಪಾಣ್ಡವಾನಾಂ ಮದ್ಧ್ಯೇ ರಾಜಾ ಯುಧಿಷ್ಠಿರಃ ।

ಪೃಷ್ಠೇ ಗಾಣ್ಡೀವಧನ್ವಾSSಸೀದ್ ವಾಸುದೇವಾಭಿರಕ್ಷಿತಃ ॥೨೮.೦೩॥

 

ಚಕ್ರರಕ್ಷೌ ಯಮೌ ರಾಜ್ಞೋ ಧೃಷ್ಟದ್ಯುಮ್ನಶ್ಚ ಸಾತ್ಯಕಿಃ ।

ನೃಪಸ್ಯ ಪಾರ್ಶ್ವಯೋರಾಸ್ತಾಮಗ್ರೇSನ್ಯೇಷಾಂ ಗುರೋಃ ಸುತಃ ॥೨೮.೦೪॥

 

ಮದ್ಧ್ಯೇ ಶಲ್ಯಃ ಪೃಷ್ಠತೋSಭೂದ್ ಭ್ರಾತೃಭಿಶ್ಚ ಸುಯೋಧನಃ ।

ಚಕ್ರರಕ್ಷೌ ತು ಶಲ್ಯಸ್ಯ ಶಕುನಿಸ್ತತ್ಸುತಸ್ತಥಾ ॥೨೮.೦೫॥

 

ಕೃಪಶ್ಚ ಕೃತವರ್ಮ್ಮಾ ಚ ಪಾರ್ಶ್ವಯೋಃ ಸಮವಸ್ಥಿತೌ ।

ತತ್ರಾಭವನ್ಮಹದ್ ಯುದ್ಧಂ ಭೀಮಸ್ಯ ದ್ರೌಣಿನಾ ಸಹ  ॥೨೮.೦೬॥

 

ಪಾಂಡವರ ಮುಂಭಾಗದಲ್ಲಿ ಭೀಮಸೇನನೂ, ಮಧ್ಯಭಾಗದಲ್ಲಿ ರಾಜನಾದ ಯುಧಿಷ್ಠಿರನೂ ಇದ್ದನು. ಹಿಂಭಾಗದಲ್ಲಿ ಗಾಣ್ಡೀವ ಹಿಡಿದಿರುವ ಧನುರ್ಧಾರಿ ಅರ್ಜುನನು ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟವನಾಗಿ ಇದ್ದನು. ಯುಧಿಷ್ಠಿರನ ಚಕ್ರರಕ್ಷಕರಾಗಿ ನಕುಲ-ಸಹದೇವರಿದ್ದರು. ಧೃಷ್ಟದ್ಯುಮ್ನ ಮತ್ತು ಸಾತ್ಯಕಿಯೂ ಕೂಡಾ ರಕ್ಷಣೆಗಾಗಿ ಯುಧಿಷ್ಠಿರನ ಪಾರ್ಶ್ವಭಾಗದಲ್ಲಿದ್ದರು. ಹಾಗೆಯೇ ಇತರರಾದ ಕೌರವರ ಮುಂಭಾಗದಲ್ಲಿ ಗುರುಸುತ ಅಶ್ವತ್ಥಾಮನೂ, ಮಧ್ಯದಲ್ಲಿ ಶಲ್ಯನೂ, ಬಹಳ ಹಿಂಭಾಗದಲ್ಲಿ ತನ್ನ ತಮ್ಮಂದಿರರಿಂದ ಕೂಡಿದ ಸುಯೋಧನನೂ ಇದ್ದನು. ಶಲ್ಯನ ಚಕ್ರ ರಕ್ಷಣೆಗೆ ಶಕುನಿ ಮತ್ತವನ ಮಗ ನಿಂತಿದ್ದರು. ಕೃಪ ಮತ್ತು ಕೃತವರ್ಮ ಇಬ್ಬರೂ ಪಾರ್ಶ್ವಭಾಗದಲ್ಲಿದ್ದರು. ಅಲ್ಲಿ ಭೀಮಸೇನ ಹಾಗೂ ಅಶ್ವತ್ಥಾಮನಿಗೆ ಬಹಳ ಮಹತ್ತಾದ ಯುದ್ಧವಾಯಿತು.  

 

ರಾಜ್ಞಃ ಶಲ್ಯೇನ ಚ ತಥಾ ಘೋರರೂಪಂ ಭಯಾನಕಮ್ ।

ತತ್ರ ನಾತಿಪ್ರಯತ್ನೇನ ದ್ರೌಣಿರ್ಭೀಮೇನ ಸಾಯಕೈಃ  ॥೨೮.೦೭॥

 

ವಿರಥೀಕೃತಸ್ತಥಾ ಧರ್ಮ್ಮಸೂನುಃ ಶಲ್ಯೇನ ತತ್ಕ್ಷಣಾತ್ ।

ಆಸಸಾದ ತದಾ ಶಲ್ಯಂ ಕಪಿಪ್ರವರಕೇತನಃ ॥೨೮.೦೮॥

 

ಧರ್ಮರಾಜನಿಗೆ ಶಲ್ಯನೊಂದಿಗೆ ಘೋರವಾದ, ಭಯಾನಕ ಯುದ್ಧ ನಡೆಯಿತು. ಅಲ್ಲಿ ಯಾವುದೇ ಪ್ರಯಾಸವಿಲ್ಲದೇ ಭೀಮಸೇನನ ಬಾಣಗಳಿಂದ ಅಶ್ವತ್ಥಾಮ ರಥಹೀನನಾದ. ಹಾಗೆಯೇ ಶಲ್ಯನಿಂದ ತತ್ಕ್ಷಣದಲ್ಲಿ ಧರ್ಮರಾಜನು ರಥಹೀನನಾದ. ಆಗ ಕಪಿಶ್ರೇಷ್ಠ ಹನುಮಂತನನ್ನು ಧ್ವಜದಲ್ಲಿ ಹೊಂದಿರುವ  ಅರ್ಜುನನು ಶಲ್ಯನನ್ನು ಹೊಂದಿದ.