ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 4, 2023

Mahabharata Tatparya Nirnaya Kannada 28-33-42

 

ಮದ್ರರಾಜೇ ಹತೇ ವೀರೇ ಸುಶರ್ಮ್ಮಾSರ್ಜ್ಜುನಮಭ್ಯಯಾತ್ ।

ಸಂಶಪ್ತಕಾವಶಿಷ್ಟೈಸ್ತಮನಯನ್ಮೃತ್ಯವೇSರ್ಜ್ಜುನಃ ॥೨೮.೩೩॥

 

ವೀರನಾಗಿರುವ ಮದ್ರರಾಜ ಶಲ್ಯನು ಸಾಯಲು, ತ್ರಿಗರ್ತರಾಜ ಸುಶರ್ಮ ಅಳಿದುಳಿದ ಸಂಶಪ್ತಕರೊಡಗೂಡಿ ಅರ್ಜುನನನ್ನು ಎದುರುಗೊಂಡ. ಅರ್ಜುನನು ಸುಶರ್ಮನನ್ನು ಅವನ ಸೇನೆಯ ಜೊತೆಗೆ ಯಮನಲ್ಲಿಗೆ ಕಳುಹಿಸಿದನು.

 

ದುರ್ಯ್ಯೋಧನಸ್ಯಾವರಜಾನವಿಶಿಷ್ಟಾನ್ ವೃಕೋದರಃ ।

ಸರ್ವಾನ್ ಜಘಾನ ಸೇನಾಂ ಚ ನಿಶ್ಯೇಷಮಕರೋದ್ ರಣೇ ॥೨೮.೩೪॥

 

ಭೀಮಸೇನನು ಉಳಿದ ಎಲ್ಲಾ ದುರ್ಯೋಧನನ ತಮ್ಮಂದಿರರನ್ನು ಕೊಂದು ಹಾಕಿ, ಶತ್ರು ಸೇನೆಯನ್ನೂ ಕೂಡಾ ನಿಶ್ಯೇಷ ಮಾಡಿದನು.

 

ಉಲೂಕಂ ಸಹದೇವೋSಥ ಶಕುನಿಂ ಚಾತಿಪಾಪಿನಮ್ ।

ಜಘಾನ ದ್ರೌಣಿಹಾರ್ದ್ದಿಕ್ಯಕೃಪಾನ್ ಭೀಮಾರ್ಜ್ಜುನೌ ತತಃ ॥೨೮.೩೫॥

 

ಬಹುಶೋ ವಿರಥೀಕೃತ್ಯ ಪೀಡಯಿತ್ವಾ ಪುನಃಪುನಃ ।

ದ್ರಾವಯಾಮಾಸತುಸ್ತೇ ತು ಭೀಷಿತಾ ವಿವಿಶುರ್ವನಮ್ ॥೨೮.೩೬॥

 

ಉಲೂಕನನ್ನು, ಅತ್ಯಂತ ಪಾಪಿಷ್ಠನಾದ ಶಕುನಿಯನ್ನೂ ಕೂಡಾ ಸಹದೇವ ಕೊಂದ. ತದನಂತರ ಭೀಮಸೇನ ಹಾಗೂ ಅರ್ಜುನರು ಅಶ್ವತ್ಥಾಮ, ಕೃತವರ್ಮ, ಕೃಪಾಚಾರ್ಯರನ್ನು ಬಹಳ ಬಾರಿ ರಥಹೀನರನ್ನಾಗಿ ಮಾಡಿ, ಮತ್ತೆ ಮತ್ತೆ ಪೀಡಿಸಿ ಓಡಿಸಿದರು. ಆ ಮೂವರೂ ಭಯಗೊಂಡು ಕಾಡನ್ನು ಪ್ರವೇಶಿಸಿದರು(ಕಾಡಿನಲ್ಲಿ ಅವಿತುಕೊಂಡರು).   

 

ಶೈನೇಯೇನ ಗೃಹೀತೋSಥ ಸಞ್ಜಯೋSನನ್ತಶಕ್ತಿನಾ ।

ವ್ಯಾಸೇನ ಮೋಚಿತೋSಥೈಕಃ ಪಾರ್ತ್ಥಾನ್ ದುರ್ಯ್ಯೋಧನೋSಭ್ಯಯಾತ್ ॥೨೮.೩೭॥

 

ತದನಂತರ ಸಾತ್ಯಕಿಯಿಂದ ಹಿಡಿಯಲ್ಪಟ್ಟ ಸಂಜಯನು, ಅನಂತಶಕ್ತಿಯುಳ್ಳ ವ್ಯಾಸರಿಂದ ಬಿಡಿಸಲ್ಪಟ್ಟನು. ಉಳಿದ ಒಬ್ಬನೇ ದುರ್ಯೋಧನನು ಪಾಂಡವರನ್ನು ಎದುರುಗೊಂಡನು.

 

ತೇಷಾಮಭೂತ್ ತಸ್ಯ ಚ ಘೋರರೂಪಂ ಯುದ್ಧಂ ಸ ಬಾಣೈರ್ಬಹುಶೋSರ್ಜ್ಜುನಂ ಚ ।

ಚಕಾರ ಮೂರ್ಚ್ಛಾಭಿಗತಂ ಯುಧಿಷ್ಠಿರಂ ಯಮಾವಯತ್ನಾದ್ ವಿರಥಾಂಶ್ಚಕಾರ ॥೨೮.೩೮॥

 

ಪಾಂಡವರಿಗೂ ಮತ್ತು ದುರ್ಯೋಧನನಿಗೂ ಘೋರರೂಪವಾಗಿರುವ ಯುದ್ಧವಾಯಿತು. ಅವನು ಬಹಳ ಬಾರಿ ಅರ್ಜುನನನ್ನು ಬಾಣಗಳಿಂದ ಮೂರ್ಛೆಗೊಳಗಾಗುವಂತೆ ಮಾಡಿದನು. ಯುಧಿಷ್ಠಿರನನ್ನೂ, ನಕುಲ ಸಹದೇವರನ್ನೂ, ಯಾವುದೇ ಪ್ರಯತ್ನವಿಲ್ಲದೇ ರಥಹೀನರನ್ನಾಗಿ ಮಾಡಿದನು.

 

ತಂ ಭೀಮಸೇನೋ ವಿರಥಂ ಚಕಾರ ಗಜಂ ಸಮಾರುಹ್ಯ ಪುನಃ ಸಮಭ್ಯಯಾತ್ ।

ಪುನಶ್ಚ ಶೈನೇಯಶಿಖಣ್ಡಿಪಾರ್ಷತಾನ್  ಯಮೌ ನೃಪಂ ಚ ವ್ಯದಧಾನ್ನಿರಾಯುಧಾನ್ ॥೨೮.೩೯॥

 

ಭೀಮಸೇನನು ದುರ್ಯೋಧನನನ್ನು ರಥಹೀನನನ್ನಾಗಿ ಮಾಡಿದನು. ಆಗ ಆನೆಯೊಂದನ್ನು ಏರಿ ಬಂದ ದುರ್ಯೋಧನ ಮತ್ತೆ ಸಾತ್ಯಕಿ, ಶಿಖಂಡಿ, ಧೃಷ್ಟದ್ಯುಮ್ನ, ಇವರನ್ನೂ, ನಕುಲ ಸಹದೇವರನ್ನೂ, ಧರ್ಮರಾಜನನ್ನೂ ಕೂಡಾ ನಿರಾಯುಧರನ್ನಾಗಿ ಮಾಡಿದನು.

 

ಗಜೇ ಚ ಭೀಮೇನ ಶರೈರ್ನ್ನಿಪಾತಿತೇ ಸಮಾರುಹದ್ ವಾಜಿವರಂ ಸುನಿರ್ಭಯಃ ।

ಸ ತೇನ ಚ ಪ್ರಾಸಕರೋ ರಣೇSರಿಹಾ ಚಚಾರ ಶೈನೈಯಮತಾಡಯಚ್ಚ ॥೨೮.೪೦॥

 

ಭೀಮಸೇನನಿಂದ ದುರ್ಯೋಧನನ ಆನೆಯು ಬೀಳಿಸಲ್ಪಡಲು(ಕೊಲ್ಲಲ್ಪಡಲು), ಯಾವುದೇ ಭಯವಿಲ್ಲದೇ ಕುದುರೆಯನ್ನು ಏರಿದ ಅವನು, ಪ್ರಾಸವೆಂಬ ಆಯುಧವನ್ನು ಹಿಡಿದು ಸಂಚರಿಸಿದ ಮತ್ತು ಸಾತ್ಯಕಿಯನ್ನು ಹೊಡೆದ. 

 

ಮುಮೋಹ ತೇನಾಭಿಹತಃ ಸ ಸಾತ್ಯಕಿರ್ಯ್ಯಮಾವಪಿ ಪ್ರಾಸನಿಪೀಡಿತೌ ರಥೇ ।

ನಿಷೀದತರ್ದ್ಧರ್ಮ್ಮಸುತಂ ಪ್ರಯಾನ್ತಂ ಸಮೀಕ್ಷ್ಯ ಭೀಮೋSಸ್ಯ ಜಘಾನ ವಾಜಿನಮ್ ॥೨೮.೪೧॥

 

ಅವನಿಂದ ಹೊಡೆಯಲ್ಪಟ್ಟ ಸಾತ್ಯಕಿಯು ಮೂರ್ಛೆ ಹೊಂದಿದನು. ನಕುಲ ಸಹದೇವರೂ ಕೂಡಾ ರಥದಲ್ಲಿ ಪ್ರಾಸದಿಂದ ಹೊಡೆಯಲ್ಪಟ್ಟವರಾಗಿ ಕುಸಿದರು. ಧರ್ಮರಾಜನನ್ನು ಕುರಿತು ತೆರಳುತ್ತಿರುವ ದುರ್ಯೋಧನನನ್ನು ನೋಡಿ ಭೀಮಸೇನನು ಅವನ ಕುದುರೆಯನ್ನು ಕೊಂದುಹಾಕಿದನು.

 

ಪ್ರಾಸೇ ನಿಕೃತ್ತೇ ಚ ವೃಕೋದರೇಣ ವಿವಾಹನಃ ಸೋSಪಯಯೌ ಸುಯೋಧನಃ ।

ಆದಾಯ ಗುರ್ವೀಂ ಚ ಗದಾಂ ಪ್ರಯಾತೋ ದ್ವೈಪಾಯನಸ್ಯೋರು ಸರೋ ವಿವೇಶ ॥೨೮.೪೨॥

 

ಭೀಮಸೇನನಿಂದ ಪ್ರಾಸವೂ ಕೂಡಾ ಕತ್ತರಿಸಲ್ಪಡಲು, ವಾಹನವಿಲ್ಲದೇ ಆ ಸುಯೋಧನನು ದೊಡ್ಡ ಗದೆಯನ್ನು ಹಿಡಿದುಕೊಂಡು ಓಡಿ ಹೋದನು. ಹಾಗೆ ತೆರಳುತ್ತಾ, ದ್ವೈಪಾಯನ ಎಂಬ ಹೆಸರಿನ ಅಗಾಧವಾದ ಸರೋವರವನ್ನು ಪ್ರವೇಶ ಮಾಡಿದನು.

Monday, July 3, 2023

Mahabharata Tatparya Nirnaya Kannada 28-26-32

ತತಸ್ತು ಶಲ್ಯಂ ಸಮುದೀರ್ಯ್ಯಮಾಣಂ ದೃಷ್ಟ್ವಾ ರಣೇ ಭೀಮಸೇನಸ್ತರಸ್ವೀ ।

ನ್ಯವಾರಯದ್ ಬಾಣವರೈರನೇಕೈಶ್ಚಕಾರ ಚೈನಂ ವಿರಥಂ ಕ್ಷಣೇನ ॥೨೮.೨೬॥

 

ತದನಂತರ ನುಗ್ಗುತ್ತಿರುವ ಶಲ್ಯನನ್ನು ಕಂಡ ಪರಾಕ್ರಮಿಯಾದ ಭೀಮಸೇನನು ಅನೇಕ ಬಾಣಗಳಿಂದ ಅವನನ್ನು ತಡೆದನು. ಶಲ್ಯನನ್ನು ಭೀಮಸೇನ ಕ್ಷಣದಲ್ಲಿ ರಥಹೀನನನ್ನಾಗಿ ಮಾಡಿದನು.  

 

ಆಸ್ಥಾಯ ಚಾನ್ಯಂ ರಥಮಾಪತನ್ತಂ ಪುನಶ್ಚ ಶಲ್ಯಂ ಭೃಶಮೇವ ಮರ್ಮ್ಮಸು ।

ನಿರ್ಭಿದ್ಯ ಬಾಣೈರ್ವಿರಥಂ ಚಕಾರ ಪುನಸ್ತೃತೀಯಂ ಚ ರಥಂ ರುರೋಜ ॥೨೮.೨೭॥

 

ಪುನಃ ಇನ್ನೊಂದು ರಥವನ್ನೇರಿ ಬರುತ್ತಿರುವ ಶಲ್ಯನ ಮರ್ಮಸ್ಥಾನದಲ್ಲಿ ಬಾಣಗಳಿಂದ ಹೊಡೆದ ಭೀಮಸೇನ, ಮತ್ತೆ ಅವನನ್ನು ರಥಹೀನನನ್ನಾಗಿ ಮಾಡಿದನು. ಹೀಗೆ ಪುನಃ ರಥವನ್ನೇರಿ ಬಂದ ಶಲ್ಯನ ಮೂರನೆಯ ರಥವನ್ನು ಕೂಡಾ ಭೀಮಸೇನ ನಾಶಮಾಡಿದನು.

 

ಆತ್ತಾನ್ಯಾತ್ತಾನ್ಯಾಯುಧಾನ್ಯಸ್ಯ ಭೀಮಃ ಸರ್ವಾಣಿ ಚಿಚ್ಛೇದ ಬಿಭೇದ ಚಾಸ್ಯ।

ಮರ್ಮ್ಮಾಣಿ ಬಾಣೈರ್ನ್ನಿತರಾಂ ಪುನಶ್ಚ ಸ ಮುಷ್ಟಿಮುದ್ಯಮ್ಯ ಜಗಾಮ ಧರ್ಮ್ಮಜಮ್ ॥೨೮.೨೮॥

 

ಶಲ್ಯ ಆಯುಧವನ್ನು ತೆಗೆದುಕೊಂಡಾಗಲೆಲ್ಲಾ ಭೀಮಸೇನನು ಅವನ ಎಲ್ಲಾ ಆಯುಧಗಳನ್ನು ಕತ್ತರಿಸಿ,  ಅವನ ಮರ್ಮಸ್ಥಾನಗಳನ್ನು ಬಾಣಗಳಿಂದ ಸೀಳಿದನು. ಶಲ್ಯನು ಬೇರೆ ದಾರಿ ಕಾಣದೇ ಕೈಯನ್ನು ಎತ್ತಿಕೊಂಡು(ಮುಷ್ಟಿಕಟ್ಟಿಕೊಂಡು) ಧರ್ಮರಾಜನನ್ನು ಮುಷ್ಟಿಯಿಂದಲೇ ಕೊಲ್ಲುತ್ತೇನೆಂದು ಅವನನ್ನು ಕುರಿತು ಹೋದನು.

 

ತಂ ಭೀಮಭಿನ್ನಮರ್ಮ್ಮಾಣಂ ವಿವರ್ಮ್ಮಾಣಂ ನಿರಾಯುಧಮ್ ।

ಶ್ವಾಸಮಾತ್ರಾವಶಿಷ್ಟಂ ಚ ಮರಣಾಯೈವ ಕೇವಲಮ್ ॥೨೮.೨೯॥

 

ಆತ್ಮಾನಮಭಿಗಚ್ಛನ್ತಂ ದೃಷ್ಟ್ವಾSನ್ಯಂ ರಥಮಾಸ್ಥಿತಃ ।

ಹನ್ತುಕಾಮೋ ರಣೇ ವೀರಮಮೋಘಾಂ ಶಕ್ತಿಮಾದದೇ ॥೨೮.೩೦॥

 

ಭೀಮಸೇನನಿಂದ ಭೇದಿಸಲ್ಪಟ್ಟ ಮರ್ಮಸ್ಥಾನಗಳುಳ್ಳ, ಕವಚರಹಿತನಾದ, ನಿರಾಯುಧನಾದ, ಉಸಿರು ಮಾತ್ರ ಉಳಿದಿರುವ, ಕೇವಲ ಸಾಯಬೇಕೆಂದು ತನ್ನನ್ನು ಕುರಿತು ಬರುತ್ತಿರುವ ಶಲ್ಯನನ್ನು ಕಂಡು, ಇನ್ನೊಂದು ರಥವನ್ನೇರಿದ ಧರ್ಮರಾಜನು, ವೀರಗ್ರೇಸರ ಶಲ್ಯನನ್ನು ಕೊಲ್ಲಬೇಕೆಂದು ಬಯಸಿ, ಎಂದೂ ವ್ಯರ್ಥವಾಗದ ಶಕ್ತ್ಯಾಯುಧವನ್ನು(ಈಟಿಯನ್ನು) ತೆಗೆದುಕೊಂಡ.

 

ದಿವ್ಯಾಸ್ತ್ರೈರಪಿ ಸಂಯೋಜ್ಯ ತಾಂ ತದಾ ಧರ್ಮ್ಮನನ್ದನಃ ।

ಸತ್ಯಧರ್ಮ್ಮಫಲೈಶ್ಚೈವ ಚಿಕ್ಷೇಪಾಸ್ಯ ಹೃದಿ ತ್ವರನ್ ॥೨೮.೩೧॥

 

ಧರ್ಮರಾಜನು ಆ ಶಕ್ತಿಯನ್ನು ಶ್ರೇಷ್ಠವಾದ ಅಸ್ತ್ರ ಮಂತ್ರಗಳಿಂದ ಅಭಿಮಂತ್ರಣಮಾಡಿ, ಸತ್ಯದಿಂದಲೂ, ಧರ್ಮದಿಂದಲ್ಲೂ,  ಅವುಗಳ ಪುಣ್ಯಗಳಿಂದಲೂ ಕೂಡಿಸಿ (‘ನಾನು ಸತ್ಯವನ್ನು ನುಡಿದದ್ದೇ ಆದರೆ, ಇಲ್ಲಿಯ ತನಕ ಧರ್ಮವನ್ನು ಮಾಡಿದ್ದೇ ಆದರೆ, ಈ ಅಸ್ತ್ರವು ಶಲ್ಯನನ್ನು ಕೊಲ್ಲಲಿ’ ಎನ್ನುವ ಫಲದಿಂದ ಈಟಿಯನ್ನು  ಅಭಿಮಂತ್ರಣ ಮಾಡಿ) ಶಲ್ಯನ ಹೃದಯದಲ್ಲಿ ಶೀಘ್ರದಲ್ಲಿ ಎಸೆದನು.   

 

ಸ ಭಿನ್ನಹೃದಯೋ ಭೂಮೌ ಪಪಾತಾಭಿಮುಖೋ ನೃಪಮ್ ।

ಸತ್ಯಧರ್ಮ್ಮರತಃ ಶಲ್ಯ ಇನ್ದ್ರಸ್ಯಾತಿಥಿತಾಮಗಾತ್ ॥೨೮.೩೨॥

 

ಆ ಶಲ್ಯನು ಸೀಳಲ್ಪಟ್ಟ ಎದೆಯುಳ್ಳವನಾಗಿ,  ಧರ್ಮರಾಜನಿಗೆ ಅಭಿಮುಖವಾಗಿ ಭೂಮಿಯಲ್ಲಿ ಬಿದ್ದನು. ಹೀಗೆ ಸತ್ಯ-ಧರ್ಮದಲ್ಲಿ ರಥನಾಗಿರುವ ಶಲ್ಯನು ಇಂದ್ರನ ಅತಿಥಿಯಾದನು(ಇಂದ್ರಲೋಕವನ್ನು ಹೊಂದಿದನು). 

Sunday, July 2, 2023

Mahabharata Tatparya Nirnaya Kannada 28-19-25

 

ಶಲ್ಯೋ ಗದಾಂ ಸಮಾವಿದ್ಧ್ಯ ಚಿಕ್ಷೇಪಾರ್ಜ್ಜುನವಕ್ಷಸಿ ।

ತದಾ ಮುಮೋಹ ಬೀಭತ್ಸುಸ್ತತ ಉಚ್ಚುಕ್ರುಶುಃ ಪರೇ ॥೨೮.೧೯॥

 

ಶಲ್ಯನು ಗದೆಯನ್ನು ತಿರುಗಿಸುತ್ತಾ, ಅರ್ಜುನನ ಎದೆಗೆ ಗುರಿಯಿಟ್ಟು ಹೊಡೆದ. ಆಗ ಅರ್ಜುನನು ಮೂರ್ಛೆಹೋದ. ಇದನ್ನು ಕಂಡು ಶತ್ರುಗಳು ಸಂತೋಷದಿಂದ ಗಟ್ಟಿಯಾಗಿ ಕಿರುಚಿದರು. (ಜಯಘೋಷ ಮಾಡಿದರು)

 

ಪ್ರಾಪ್ಯ ಸಞ್ಜ್ಞಾಂ ಪುನಃ ಪಾರ್ತ್ಥಃ ಶಲ್ಯಂ ವಿವ್ಯಾಧ ವಕ್ಷಸಿ ।

ಸ ವಿಹ್ವಲಿತಸರ್ವಾಙ್ಗಃ ಶಿಶ್ರಿಯೇ ಧ್ವಜಮುತ್ತಮಮ್ ॥೨೮.೨೦॥

 

ಮೂರ್ಛೆಯಿಂದ ಎದ್ದ ಅರ್ಜುನನು ಚೇತರಿಸಿಕೊಂಡು ಮತ್ತೆ  ಶಲ್ಯನ ವಕ್ಷಸ್ಥಳದಲ್ಲಿ ಹೊಡೆದನು. ಶಲ್ಯನಾದರೋ, ನೊಂದ ಅವಯವವುಳ್ಳವನಾಗಿ  ಧ್ವಜದ ದಂಡವನ್ನು ಹಿಡಿದು ನಿಂತನು,

 

ಸಮಾಶ್ವಸ್ತಃ ಪುನರ್ಬಾಣಂ ಯಮದಣ್ಡನಿಭಂ ರಣೇ ।

ಮುಮೋಚ ಪಾರ್ತ್ಥಸ್ಯ ಸ ಚ ನಿರ್ಬಿಭೇದ ಸ್ತನಾನ್ತರಮ್ ॥೨೮.೨೧॥

 

ಪುನಃ ಚೇತರಿಸಿಕೊಂಡ ಶಲ್ಯನು ಯಮನ ದಂಡದಂತೆ ತೀಕ್ಷ್ಣವಾಗಿರುವ ಬಾಣವನ್ನು ಅರ್ಜುನನ ಮೇಲೆ ಬಿಟ್ಟನು. ಆ ಬಾಣವು ಅರ್ಜುನನ ಎದೆಭಾಗವನ್ನು(ಸ್ತನಗಳ ನಡುವಿನ ಭಾಗವನ್ನು) ಛೇದಿಸಿತು.

 

ತೇನ ವಿಹ್ವಲಿತಃ ಪಾರ್ತ್ಥೋ ಧ್ವಜಯಷ್ಟಿಂ ಸಮಾಶ್ರಿತಃ ।

ಸಮಾಶ್ವಸ್ತಃ ಪ್ರಚಿಚ್ಛೇದ ಮದ್ರರಾಜಸ್ಯ ಕಾರ್ಮ್ಮುಕಮ್ ॥೨೮.೨೨॥

 

ಅದರಿಂದ ನೊಂದ ಅರ್ಜುನನು ಧ್ವಜದಂಡವನ್ನು ಹಿಡಿದುಕೊಂಡ. ಸ್ವಲ್ಪ ಹೊತ್ತು ವಿಶ್ರಾಂತಿಪಡೆದು ಚೇತರಿಸಿಕೊಂಡ ಅರ್ಜುನನು ಶಲ್ಯನ ಬಿಲ್ಲನ್ನು ಮತ್ತೆ ಕತ್ತರಿಸಿದ.

 

ಛತ್ರಂ ಧ್ವಜಂ ಚ ತರಸಾ ಸಾರಥಿಂ ಚ ನ್ಯಪಾತಯತ್ ।

ತದಾSನ್ಯಂ ರಥಮಾಸ್ಥಾಯ ಧರ್ಮ್ಮರಾಜಃ ಶರೋತ್ತಮೈಃ ॥೨೮.೨೩॥

 

ಚತುರ್ಭಿಶ್ಚತುರೋ ವಾಹಾಞ್ಛಲ್ಯಸ್ಯ ನಿಜಘಾನ ಹ ।

ಶಲ್ಯೋSನ್ಯಂ ರಥಮಾಸ್ಥಾಯ ಸರ್ವಾಂಸ್ತಾಞ್ಛರವೃಷ್ಟಿಭಿಃ ॥೨೮.೨೪॥

 

ಛಾದಯಾಮಾಸ ರಾಜಾನಂ ವಿರಥಂ ಚ ಚಕಾರ ಹ ।

ನಿಹತ್ಯಾಶ್ವಾನ್ ಸಾತ್ಯಕೇಶ್ಚ ಧೃಷ್ಟದ್ಯುಮ್ನಸ್ಯ ಚಾಭಿಭೂಃ ।

ಚಾಪೇ ಚ್ಛಿತ್ವಾ ಚ ಯಮಯೋರ್ದ್ದಧ್ಮೌ ಶಙ್ಖಂ ಮಹಾಸ್ವನಮ್ ॥೨೮.೨೫॥

 

ಆಗಲೇ ಅರ್ಜುನನು ಶಲ್ಯನ ಛತ್ರವನ್ನೂ, ಧ್ವಜವನ್ನೂ ಕತ್ತರಿಸಿ, ಅವನ ಸಾರಥಿಯನ್ನೂ ಕೊಂದುಹಾಕಿದ. ಆಗ (ಹಿಂದೆ ಶಲ್ಯನಿಂದ ರಥಹೀನನಾಗಿದ್ದ) ಧರ್ಮರಾಜನು ಬೇರೊಂದು ರಥವನ್ನೇರಿ ಬಂದು ನಾಲ್ಕು ಉತ್ಕೃಷ್ಟ ಬಾಣಗಳಿಂದ ಶಲ್ಯನ ನಾಲ್ಕು ಕುದುರೆಗಳನ್ನು ಕೊಂದುಹಾಕಿದ.  ಶಲ್ಯನು ಇನ್ನೊಂದು ರಥವನ್ನೇರಿ ಬಂದು  ಅವರೆಲ್ಲರನ್ನೂ ಬಾಣಗಳಿಂದ ಮುಚ್ಚಿದ. ಧರ್ಮರಾಜನನ್ನು ಶಲ್ಯ ಮತ್ತೆ ರಥಹೀನನನ್ನಾಗಿ ಮಾಡಿದನು. ಸಾತ್ಯಕಿಯ ಮತ್ತು ಧೃಷ್ಟದ್ಯುಮ್ನನ ಅಶ್ವಗಳನ್ನೂ ಶಲ್ಯ ಕೊಂದುಹಾಕಿದ. ನಕುಲ ಸಹದೇವರ ಬಿಲ್ಲುಗಳನ್ನು ಕತ್ತರಿಸಿದ ಶಲ್ಯನು ಮಹಾಧ್ವನಿಯುಳ್ಳ ಶಂಖವನ್ನೂದಿದನು.