ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 9, 2023

Mahabharata Tatparya Nirnaya Kannada 28-57-62

 

ಉವಾಚ ಚೈಕ ಏವಾಹಮಕಿರೀಟೋ ವಿವರ್ಮ್ಮಕಃ ।

ಭವನ್ತೋ ಬಹವೋ ವರ್ಮ್ಮಶಿರಸ್ತ್ರಾಣಯುತಾ ಅಪಿ ॥೨೮.೫೭॥

 

ಯದ್ಯೇವಮಪಿ ಮೇ ಯುದ್ಧಂ ಭವದ್ಭಿರ್ಮ್ಮನ್ಯಸೇ ಸಮಮ್ ।

ಸರ್ವೈರೇಕೇನ ವಾ ಯುದ್ಧಂ ಕರಿಷ್ಯೇ ನಚ ಭೀರ್ಮ್ಮಮ ॥೨೮.೫೮॥

 

ನೀರಿನಿಂದ ಮೇಲೆ ಬಂದ ದುರ್ಯೋಧನನು ಹೇಳುತ್ತಾನೆ- ‘ನಾನು ಒಬ್ಬನೇ ಇದ್ದೇನೆ. ನನ್ನಲ್ಲಿ ಕಿರೀಟವಿಲ್ಲ, ಕವಚವೂ ಇಲ್ಲ. ನೀವು ಬಹಳ ಜನರಿದ್ದೀರಿ. ನಿಮಗೆ ಕವಚವಿದೆ, ಶಿರಸ್ತ್ರಾಣವಿದೆ. ಇಷ್ಟಿದ್ದರೂ ಕೂಡಾ ನಿಮ್ಮ ಜೊತೆಗೆ ನನ್ನ ಯುದ್ಧವನ್ನು ಸಮ ಎಂದು ತಿಳಿದುಕೊಳ್ಳುವುದಾದರೆ, ನಿಮ್ಮೆಲ್ಲರ ಜೊತೆಗೆ ಅಥವಾ ನಿಮ್ಮಲ್ಲಿ ಒಬ್ಬನ ಜೊತೆಗಾದರೂ ನಾನು ಯುದ್ಧವನ್ನು ಮಾಡುತ್ತೇನೆ. ನನಗೆ ಸರ್ವಥಾ ಭಯವಿಲ್ಲ’.

 

ಇತ್ಯುಕ್ತ ಆಹ ಧರ್ಮ್ಮಾತ್ಮಾ ವರ್ಮ್ಮಾದ್ಯಂ ಚ ದದಾಮಿ ತೇ ।

ವೃಣೀಷ್ವ ಪ್ರತಿವೀರಂ ಚ ಪಞ್ಚಾನಾಂ ಯಂ ತ್ವಮಿಚ್ಛಸಿ ॥೨೮.೫೯॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜನು ಹೇಳುತ್ತಾನೆ- ‘ನಿನಗೆ ಕವಚ ಮೊದಲಾದವುಗಳನ್ನು ಕೊಡುತ್ತೇನೆ. ನಮ್ಮ ಐದು ಜನರಲ್ಲಿ ಯಾರನ್ನು ನೀನು  ಪ್ರತಿವೀರ ಎಂದು ತಿಳಿಯುತ್ತೀಯೋ ಅವನನ್ನು ಆಯ್ಕೆ ಮಾಡಿಕೋ.  

 

ಹತ್ವೈಕಂ ತ್ವಂ ಭುಙ್ಕ್ಷ್ವ ರಾಜ್ಯಮನ್ಯೇ ಯಾಮ ವಯಂ ವನಮ್ ।

ಹತೇ ವಾ ತ್ವಯೀ ತೇನೈವ ಭುಞ್ಜೀಮಶ್ಚಾಖಿಲಾಂ ಭುವಮ್ ।

ಆದತ್ಸ್ವ ಚಾSಯುಧಂ ಯೇನ ಜೇತುಮಿಚ್ಛಸಿ ಶಾತ್ರವಾನ್ ॥೨೮.೬೦॥

 

ನಮ್ಮಲ್ಲಿ ನೀನು ಆರಿಸಿಕೊಂಡ ಒಬ್ಬನನ್ನು ಕೊಂದು ನೀನು ರಾಜ್ಯವನ್ನಾಳು. ಉಳಿದ ನಾವೆಲ್ಲರೂ ಕೂಡಾ ಕಾಡಿಗೆ ಹೋಗುತ್ತೇವೆ. ಆದರೆ ಆರಿಸಿಕೊಂಡವನಿಂದ ನೀನು ಸತ್ತರೆ ಆಗ ನಾವು ಇಡೀ ಭೂಮಿಯನ್ನು ಅನುಭವಿಸುತ್ತೇವೆ. ಯಾವ ಆಯುಧದಿಂದ ನೀನು ಶತ್ರುಗಳನ್ನು ಜಯಿಸಲು ಬಯಸುತ್ತೀಯೋ, ಆ ಆಯುಧವನ್ನು ತೆಗೆದುಕೋ’.

 

ಇತ್ಯುಕ್ತ ಊಚೇ ನಹಿ ದುರ್ಬಲೈರಹಂ ಯೋತ್ಸ್ಯೇ ಚತುರ್ಭಿರ್ಭವದರ್ಜ್ಜುನಾದಿಭಿಃ ।

ಭೀಮೇನ ಯೋತ್ಸ್ಯೇ ಗದಯಾ ಸದಾ ಹಿ ಮೇ ಪ್ರಿಯಾ ಗದಾ ನಾನ್ಯದಥಾSಯುಧಂ ಸ್ಪೃಶೇ ॥೨೮.೬೧॥

 

ಈರೀತಿಯಾಗಿ ಹೇಳಲ್ಪಟ್ಟ ದುರ್ಯೋಧನನು- ‘ನಾನು ದುರ್ಬಲರಾದ ನೀನು, ಅರ್ಜುನ, ಮೊದಲಾದ ಈ ನಾಲ್ಕು ಜನರ ಜೊತೆಗೆ ಯುದ್ಧ ಮಾಡುವುದಿಲ್ಲ. ನನಗೆ ಯಾವಾಗಲೂ ಗದೆಯು ಪ್ರಿಯವು.  ಆದ್ದರಿಂದ ಗದೆಯಿಂದ ಭೀಮಸೇನನೊಂದಿಗೆ ಯುದ್ಧಮಾಡುತ್ತೇನೆ. ಇನ್ನೊಂದು ಆಯುಧವನ್ನು ನಾನು ಮುಟ್ಟುವುದಿಲ್ಲ’.

 

ಶ್ರುತ್ವಾSಸ್ಯ ವಾಕ್ಯಂ ರಭಸೋ ವೃಕೋದರೋ ಗದಾಂ ತದಾSದ್ಧ್ಯರ್ದ್ಧಭರಾಧಿಕಾಂ ಮುದಾ ।

ರಾಜ್ಞೋ ಗದಾಯಾಃ ಪರಿಗೃಹ್ಯ ವೀರಃ ಸಮುತ್ಥಿತೋ ಯುದ್ಧಮನಾಃ ಸಮುನ್ನದನ್ ॥೨೮.೬೨॥

 

ದುರ್ಯೋಧನನ ಮಾತನ್ನು ಕೇಳಿ, ವೇಗಯುಕ್ತನಾದ ವೃಕೋದರನು, ಭಾರದಲ್ಲಿ ಬೇರೆ ಗದೆಗಳಿಗಿಂತ ಒಂದೂವರೆಪಟ್ಟು ಹೆಚ್ಚಿನದಾದ ಗದೆಯನ್ನು ಹಿಡಿದುಕೊಂಡು ಸಂತೋಷದಿಂದ ಎದ್ದು ಯುದ್ಧಕ್ಕೆ ಸನ್ನದ್ಧನಾಗಿ ಗರ್ಜಿಸುತ್ತಾ ಬಂದನು.  

Mahabharata Tatparya Nirnaya Kannada 28-50-56

 

ತದಾ ಜಲಾತ್ ಸಮುನ್ಮಜ್ಜ್ಯ ತ್ರಿಭಿರ್ದ್ದ್ರೌಣಿಪುರಸ್ಸರೈಃ ।

ಮನ್ತ್ರಯನ್ತಂ ಸ್ಮ ದದೃಶುಸ್ತಾನ್ ದೃಷ್ಟ್ವಾ ತೇ ಪ್ರದುದ್ರುವುಃ ॥೨೮.೫೦॥

 

ಆ ಸಮಯದಲ್ಲಿ ನೀರಿನಿಂದ ಮೇಲೆದ್ದು, ಆ ಮೂರು ಜನರೊಂದಿಗೆ (ಅಶ್ವತ್ಥಾಮ, ಕೃಪಾ ಮತ್ತು ಕೃತವರ್ಮರೊಂದಿಗೆ) ಮಂತ್ರಾಲೋಚನೆ ಮಾಡುತ್ತಿದ್ದ ದುರ್ಯೋಧನನನ್ನು ಪಾಂಡವರು ದೂರದಿಂದ ನೋಡಿದರು. ಪಾಂಡವರನ್ನು ಕಂಡ ಆ ಮೂರು ಜನ ಅಲ್ಲಿಂದ ಮತ್ತೆ ಓಡಿಹೋದರು.

 

ದುರ್ಯ್ಯೋಧನೋSವಿಶತ್ ತೋಯಂ ದೃಷ್ಟ್ವಾ ತಂ ಕೇಶವಾಜ್ಞಯಾ ।

ಯುಧಿಷ್ಠಿರಃ ಸುಪರುಷೈರ್ವಾಕ್ಯೈರೇನಮಥಾSಹ್ವಯತ್ ॥೨೮.೫೧॥

 

ಪಾಂಡವರನ್ನು ಕಂಡ ದುರ್ಯೋಧನನು ನೀರನ್ನು ಪ್ರವೇಶಿಸಿದನು. ಅವನನ್ನು ನೋಡಿದ ಧರ್ಮರಾಜನು, ಪರಮಾತ್ಮನ ಆಜ್ಞೆಯಂತೆ, ಅತ್ಯಂತ ಕಠೋರ ಮಾತುಗಳಿಂದ ಆಹ್ವಾನಮಾಡಿದನು.

 

ಅಮರ್ಷಿತೋSಸೌ ಧೃತರಾಷ್ಟ್ರಪುತ್ರಃ ಶ್ವಸಂಸ್ತದಾ ದಣ್ಡಹತೋ ಯಥಾSಹಿಃ ।

ಉವಾಚ ಶಾಠ್ಯಾತ್ ತಪಸೇ ವನಾಯ ಯಾಯಾಂ ಭವಾಞ್ಛಾಸತು ಸರ್ವಪೃಥ್ವೀಮ್ ॥೨೮.೫೨॥

 

ಆಗ ಸಿಟ್ಟುಗೊಂಡ ಧೃತರಾಷ್ಟ್ರಪುತ್ರ ದುರ್ಯೋಧನನು ಕೋಲಿನಿಂದ ಹೊಡೆಯಲ್ಪಟ್ಟ ಹಾವಿನಂತೆ ಬುಸುಗುಡುತ್ತಾ, ಮೊಂಡುತನದಿಂದ(ಕಪಟದಿಂದ) ‘ನಾನು ಕಾಡಿಗೆ ತಪಸ್ಸು ಮಾಡಲೆಂದು ಹೋಗುತ್ತಿದ್ದೇನೆ. ನೀನು ಎಲ್ಲಾ ಭೂಮಿಯನ್ನು ಆಳು’ ಎಂದನು.

 

ತಮಾಹ ಧರ್ಮ್ಮಜೋ ರಾಜಾ ಯಸ್ತ್ವಂ ಕೃಷ್ಣೇ ಸಮಾಗತೇ ।

ಸೂಚ್ಯಗ್ರವೇದ್ಧ್ಯಾಂ ಪೃಥಿವೀಂ ದಾತುಂ ನೈಚ್ಛಃ ಕಥಂ ಪುನಃ ॥೨೮.೫೩॥

 

ಆಗ ಅವನನ್ನು ಕುರಿತು ಧರ್ಮರಾಜ ‘ಯಾವ ನೀನು ಕೃಷ್ಣನೇ ಸಂಧಾನಕ್ಕೆಂದು ಬರಲು ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡಲು ಬಯಸಲಿಲ್ಲವೋ, ಹಾಗಿರುವಾಗ ಈಗೆ ಹೇಗೆ ಒಪ್ಪಿಕೊಳ್ಳುತ್ತಿರುವೆ’ ಎಂದು ಕೇಳಿದನು.

 

ಘಾತಯಿತ್ವಾ ಸರ್ವಪೃಥ್ವೀಂ ಭೀಷ್ಮದ್ರೋಣಮುಖಾನಪಿ ।

ದಾತುಮಿಚ್ಛಸಿ ಸರ್ವಾಂ ಚ ಪೃಥ್ವೀಂ ನಾದ್ಯ ವಯಂ ಪುನಃ ॥೨೮.೫೪॥

 

ಅಹತ್ವಾ ಪ್ರತಿಗೃಹ್ಣೀಮ ಏಹಿ ಯುದ್ಧೇ ಸ್ಥಿರೋ ಭವ ।

ನ ಕುರೂಣಾಂ ಕುಲೇ ಜಾತಸ್ತ್ವಂ ಯೋ ಭೀತೋ ಹ್ಯಪೋSವಿಶಃ ॥೨೮.೫೫॥

 

‘ಎಲ್ಲಾ ಭೂಮಿಯನ್ನೂ ಭೀಷ್ಮ-ದ್ರೋಣ ಮೊದಲಾದವರನ್ನು ಸಂಹಾರಮಾಡಿಸಿ ಈಗ ಕೊಡಬೇಕೆಂದು ಬಯಸುತ್ತಿರುವೆಯಷ್ಟೇ.  ಆದರೆ ನಾವು ಈಗ ನಿನ್ನನ್ನು ಕೊಲ್ಲದೇ ಅದನ್ನು ತೆಗೆದುಕೊಳ್ಳುವುದಿಲ್ಲ. ಬಾ, ಯುದ್ಧದಲ್ಲಿ ಗಟ್ಟಿಯಾಗಿ ನಿಲ್ಲು. ಯಾವ ನೀನು ಭಯಗೊಂಡು ನೀರನ್ನು ಪ್ರವೇಶಮಾಡಿರುವೆಯೋ, ಪ್ರಾಯಃ ಕುರುಗಳ ಕುಲದಲ್ಲಿ ನೀನು ಹುಟ್ಟಿದವನಲ್ಲ. ಇಲ್ಲದಿದ್ದರೆ ಹೀಗೆ ನಪುಂಸಕನಂತೆ ಅಡಗಿಕೊಳ್ಳುತ್ತಿರಲಿಲ್ಲ.’

 

ಇತ್ಯಾದಿ ರೂಕ್ಷವಚನಂ ಶ್ರುತ್ವಾ ದುರ್ಯ್ಯೋಧನೋ ರುಷಾ ।

ಜಲಸ್ತಮ್ಭಾತ್ ಸಮುತ್ತಸ್ಥೌ ಶ್ವಸನ್ನಾಶೀವಿಷೋ ಯಥಾ ॥೨೮.೫೬॥

 

ಇವೇ ಮೊದಲಾದ ಕಠಿಣವಾದ ಮಾತನ್ನು ಕೇಳಿಸಿಕೊಂಡ ದುರ್ಯೋಧನನು ಸಿಟ್ಟಿನಿಂದ ಬುಸುಗುಡುವ ಹಾವಿನಂತೆ  ಸರೋವರದಿಂದ ಮೇಲೆದ್ದು ಬಂದ.

Thursday, July 6, 2023

Mahabharata Tatparya Nirnaya Kannada 28-43-49

 

ಏವಮಕ್ಷೋಹಿಣೀಷಟ್-ಕಂ ಭೀಮೇನ ನಿಹತಂ ರಣೇ ।

ಪಞ್ಚ ಪಾರ್ತ್ಥೇನ ನಿಹತಾ ಅರ್ದ್ಧಂ ಕಾಲಿಙ್ಗಕಾನೃತೇ ॥೨೮.೪೩॥

 

ಏಕಾದಶಾಕ್ಷೋಹಿಣೀಭ್ಯಃ ಶಿಷ್ಟಮನ್ಯೈರ್ನ್ನಿಸೂದಿತಮ್ ।

ಅಕ್ಷೋಹಿಣೀಚತುಷ್ಕಂ ಚ ಪಾರ್ತ್ಥಾನಾಂ ದ್ರೌಣಿನಾ ಹತಮ್ ॥೨೮.೪೪॥

 

ಅನ್ಯೈರನ್ಯಾಃ ಸಮಸ್ತೈಶ್ಚ ದ್ರೋಣಕರ್ಣ್ಣಮಹಾಬ್ರತಾಃ ।

ದುರ್ಯ್ಯೋಧನೋ ಭೌಮಸೂನುಃ ಪ್ರಾಯಃ ಸೇನಾಹನಃ ಕ್ರಮಾತ್  ॥೨೮.೪೫॥

 

ಈ ಪ್ರಕಾರವಾಗಿ ಭೀಮಸೇನನಿಂದ ಯುದ್ಧದಲ್ಲಿ ಆರು ಅಕ್ಷೋಹಿಣಿ ಸಂಹರಿಸಲ್ಪಟ್ಟಿತು. ಕಾಲಿಂಗ ದೇಶದವರನ್ನು ಬಿಟ್ಟು, ಅರ್ಜುನನಿಂದ ಕೌರವರ ಒಟ್ಟು ಸೈನ್ಯದ ಅರ್ಧಾಂಶ ಕೊಲ್ಲಲ್ಪಟ್ಟಿತು.

ಇನ್ನು ಕೌರವರ ಹನ್ನೊಂದು ಅಕ್ಷೋಹಿಣಿಯಲ್ಲಿ ಉಳಿದ ಭಾಗವನ್ನು ಉಳಿದ ಎಲ್ಲರೂ ಸೇರಿ ಕೊಂದರೆ,  ಪಾಂಡವರ ನಾಲ್ಕು ಅಕ್ಷೋಹಿಣಿ ಸೇನೆಯನ್ನು ಅಶ್ವತ್ಥಾಮ ಕೊಂದ. ಉಳಿದ ಮೂರು ಅಕ್ಷೋಹಿಣಿ ಸೇನೆ ಕ್ರಮವಾಗಿ ದ್ರೋಣ, ಕರ್ಣ, ದುರ್ಯೋಧನ, ಭಗದತ್ತರಿಂದ ಕೊಲ್ಲಲ್ಪಟ್ಟಿತು.    

[ಆರು ಅಕ್ಷೋಹಿಣಿ ಸೇನೆ ಎಂದರೆ: ೧,೩೧,೨೨೦ ರಥಗಳು, ಅಷ್ಟೇ ಗಜಗಳು,,೯೩,೬೬೦ ಕುದುರೆಗಳು, ೬,೫೬,೧೦೦ ಪದಾತಿಗಳು. ಹಾಗೆಯೇ ಐದು ಅಕ್ಷೋಹಿಣಿ ಸೇನೆ ಎಂದರೆ: ೧,೦೯,೩೫೦ ರಥಗಳು ಮತ್ತು ಅಷ್ಟೇ ಗಜಗಳು,,೨೮,೦೫೦ ಕುದುರೆಗಳು,,೪೬,೭೫೦ ಪದಾತಿಗಳು.  ಕೌರವ ಸೇನೆಯ ಹನ್ನೊಂದು ಅಕ್ಷೋಹಿಣಿ ಸೇನೆಯಲ್ಲಿ ಒಂದು ಅಕ್ಷೋಹಿಣಿ ಸೇನೆ ಕಾಲಿಂಗ ದೇಶದವರದ್ದಾಗಿತ್ತು. ಈ ಸೇನೆಯನ್ನು ಕೇವಲ ಭೀಮಸೇನ ಕೊಂದ. ಇನ್ನು ಉಳಿದ ಹತ್ತು ಅಕ್ಷೋಹಿಣಿ ಸೇನೆಯಲ್ಲಿ ಸಂಕೀರ್ಣವಾಗಿ ಐದು ಅಕ್ಷೋಹಿಣಿ ಸೇನೆಯನ್ನು ಭೀಮನೂ, ಐದು ಅಕ್ಷೋಹಿಣಿ ಸೇನೆಯನ್ನು ಅರ್ಜುನನೂ ಕೊಂದಿರುವುದು.  ಒಟ್ಟು ಸೇನೆ ಹನ್ನೊಂದು ಅಕ್ಷೋಹಿಣಿ ಅಷ್ಟೇ ಅಲ್ಲದೇ ಇನ್ನೂ ಸ್ವಲ್ಪ ಶೇಷ ಭಾಗವಿದ್ದು, ಅದನ್ನು  ಪಾಂಡವರ ಕಡೆಯ ಇತರ ಎಲ್ಲರೂ ಸೇರಿ ಕೊಂದಿರುವುದು]

 

ಜಯಂ ಲಬ್ಧ್ವಾ ನದತ್ಸೂಚ್ಚೈಃ ಪಾಣ್ಡವೇಷು ಮಹಾತ್ಮಸು ।

ದುರ್ಯ್ಯೋಧನೋ ಜಲಸ್ತಮ್ಭಂ ಕೃತ್ವಾ ಮನ್ತ್ರಾನ್ ಜಜಾಪ ಹ ॥೨೮.೪೬॥

 

ಹೀಗೆ ಗೆಲುವನ್ನು ಹೊಂದಿ, ಎಲ್ಲಾ ಪಾಂಡವರೂ ಕೂಡಾ ಗಟ್ಟಿಯಾಗಿ ಘರ್ಜಿಸುತ್ತಿರಲು, ದುರ್ಯೋಧನನು ಜಲಸ್ತಮ್ಭಾನ ಮಾಡಿಕೊಂಡು ಮಂತ್ರ ಜಪ ಮಾಡಲಾರಮ್ಭಿಸಿದ.

 

ಮನ್ತ್ರಾ ದುರ್ವಾಸಸಾ ದತ್ತಾ ಮೃತಸಞ್ಜೀವನಪ್ರದಾಃ ।

ಜಲೇ ಸ್ಥಿತ್ವಾ ಜಪನ್ ಸಪ್ತದಿನೈಃ ಸರ್ವಾನ್ ಮೃತಾನಪಿ ॥೨೮.೪೭॥

 

ಉದ್ಧರೇದ್ ಧಾರ್ತ್ತರಾಷ್ಟ್ರೋSಯಂ ಸ್ಯುರವದ್ಧ್ಯಾಶ್ಚ ತೇ ಪುನಃ ।

ಇತಿ ವಿದ್ಯಾಬಲಂ ತಸ್ಯ ಜ್ಞಾತ್ವಾ ಪಾಣ್ಡುಸುತಾಸ್ತತಃ ॥೨೮.೪೮॥

 

ಅನ್ವೇಷನ್ತಃ ಶುಶ್ರುವುಶ್ಚ ವ್ಯಾಧೇಭ್ಯಸ್ತಂ ಜಲೇ ಸ್ಥಿತಮ್ ।

ಅಗಚ್ಛಂಶ್ಚ ತತಸ್ತತ್ರ ಪುರಸ್ಕೃತ್ಯ ಜನಾರ್ದ್ದನಮ್ ॥೨೮.೪೯॥

 

ಅವನಿಗೆ ದುರ್ವಾಸರಿಂದ ಕೊಡಲ್ಪಟ್ಟ ಮಂತ್ರಗಳು ಸತ್ತವರನ್ನು ಬದುಕಿಸುವ ಶಕ್ತಿ ಉಳ್ಳವುಗಳಾಗಿದ್ದವು. ನೀರಿನಲ್ಲಿ ಇದ್ದು, ಏಳುದಿವಸಗಳ ಕಾಲ ಜಪಮಾಡುತ್ತಾ, ಈತನಕ ಸತ್ತ ಎಲ್ಲರನ್ನೂ ಕೂಡಾ ಅವನು ಬದುಕಿಸಬಹುದಿತ್ತು ಮತ್ತು ಹಾಗೆ ಬದುಕಿ ಬಂದವರನ್ನು ಅವಧ್ಯರನ್ನಾಗಿಯೂ ಮಾಡಬಹುದಿತ್ತು. ಈ ವಿದ್ಯಾಬಲ ದುರ್ಯೋಧನನಲ್ಲಿ ಇದೇ ಎಂದು ತಿಳಿದ ಪಾಂಡವರು ಅವನನ್ನು ಹುಡುಕುತ್ತಾ ತೆರಳಿದರು. ಆಗ ಕೆಲವು ಬೇಡರಿಂದ ‘ನೀರಿನಲ್ಲಿ ಅವನಿದ್ದಾನೆ’ ಎನ್ನುವುದನ್ನು ತಿಳಿದ ಪಾಂಡವರು ಕೃಷ್ಣನನ್ನು ಮುಂದೆ ಮಾಡಿಕೊಂಡು ಅವನಿದ್ದ ಸ್ಥಳಕ್ಕೆ ಬಂದರು.

[ದುರ್ಯೋಧನ ಈ ರೀತಿ ಮಂತ್ರ ಬಲದಿಂದ ಸತ್ತವರನ್ನು ಬದುಕಿಸಲು ಜಪಮಾಡುತ್ತಿದ್ದ ಎನ್ನುವುದನ್ನು ಮಹಾಭಾರತದಲ್ಲಿ ಸ್ಫುಟವಾಗಿ ಹೇಳಿಲ್ಲ. ಆದರೆ ಅದನ್ನು ನಾವು ಅರ್ಥಾಪತ್ತಿರೂಪವಾದ ಪ್ರಮಾಣದಿಂದ ಊಹಿಸಬೇಕಾಗುತ್ತದೆ. ಶಲ್ಯಪರ್ವದಲ್ಲಿ ‘ಅಸ್ತಂಭಯತ ತೋಯಂ ಚ ಮಾಯಯಾ ಮನುಜಾಧಿಪಃ’(೨೯.೪೪) ಎಂದು ಹೇಳಿದ್ದಾರೆ. ಇಲ್ಲಿ ಬಂದಿರುವ ‘ಮಾಯಯಾ’ ಎನ್ನುವ ಪದವನ್ನು ಆಚಾರ್ಯರು ‘ವಿದ್ಯಾಬಲ’ ಎಂದು ವ್ಯಾಖ್ಯಾನ ಮಾಡಿರುವುದನ್ನು ನಾವು ಕಾಣುತ್ತೇವೆ. ದುರ್ಯೋಧನ ತನ್ನ ಮಂತ್ರಬಲ ಅಥವಾ ವಿದ್ಯಾಬಲದಿಂದ ನೀರನ್ನು ಸ್ತಂಭನಗೊಳಿಸಿದ. ದುರ್ಯೋಧನನಲ್ಲಿ ಈರೀತಿಯ ಮಂತ್ರಬಲ ಇರುವುದನ್ನು ತಿಳಿದಿರುವ ಪಾಂಡವರು ಅದಕ್ಕಾಗಿಯೇ ಅವನನ್ನು ಹುಡುಕಿಕೊಂಡು ಹೋದರು]