ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 10, 2018

Mahabharata Tatparya Nirnaya Kannada 11.51-11.55


ಮೀಮಾಂಸಮಾನಂ ತಮವಾಪ ಗಙ್ಗಾ ಸುತಂ ಸಮಾದಾಯ ಪತಿಂ ಜಗಾದ ಚ ।
ಅಯಂ ಸುತಸ್ತೇ ಪರಮಾಸ್ತ್ರವೇತ್ತಾ ಸಮರ್ಪ್ಪಿತೋ ವೀರ್ಯ್ಯಬಲೋಪಪನ್ನಃ ॥೧೧.೫೧

‘ಇವನು ಯಾರಿರಬಹುದು’ ಎಂದು ಶನ್ತನು ವಿಚಾರ ನಡೆಸುತ್ತಿರುವ ಸಮಯದಲ್ಲೇ, ಗಂಗೆಯು ಮಗನನ್ನು ಕರೆದುಕೊಂಡು, ಶನ್ತನುವಿನ ಬಳಿ ಬಂದಳು. “ಇವನು ನಿನ್ನ ಮಗನು. ಅಸ್ತ್ರವೇತ್ತನಾದ ನಿನ್ನ ಸುತನೀತ. ವೀರ್ಯಬಲದಿಂದ ಕೂಡಿರುವ ಇವನು ನಿನಗೆ ಸಮರ್ಪಿತನಾಗುತ್ತಿದ್ದಾನೆ” ಎಂದು ಗಂಗೆ ದೇವವ್ರತನನ್ನು ಶನ್ತನುವಿಗೆ ಒಪ್ಪಿಸಿದಳು.

ಅಸ್ಯಾಗ್ರಜಾಃ ಸ್ವಾಂ ಸ್ಥಿತಿಮೇವ ಯಾತಾ ಹರೇಃ ಪದಾಮ್ಭೋಜಸುಪಾವಿತೇ ಜಲೇ ।
ತನೂರ್ಮ್ಮದೀಯೇ ಪ್ರಣಿಧಾಯ ತತ್ ತ್ವಂ ತಾನ್ ಮಾ ಶುಚೋsನೇನ ಚ ಮೋದಮಾನಃ ॥೧೧.೫೨

ಇತಿ ಪ್ರದಾಯಾಮುಮದೃಶ್ಯತಾಮಗಾದ್ ಗಙ್ಗಾ ತಮಾದಾಯ ಯಯೌ ಸ್ವಕಂ ಗೃಹಮ್ ।
ರಾಜಾsಭಿಷಿಚ್ಯಾಥ ಚ ಯೌವರಾಜ್ಯೇ ಮುಮೋದ ತತ್ಸದ್ಗುಣತರ್ಪ್ಪಿತೋ ಭೃಶಮ್ ॥೧೧.೫೩

“ಈ ದೇವವ್ರತನ ಅಣ್ಣಂದಿರು, ಪರಮಾತ್ಮನ ಪಾದಕಮಲದಿಂದ ಪವಿತ್ರವಾದ ನನ್ನ ನೀರಿನಲ್ಲಿ ತಮ್ಮ  ದೇಹವನ್ನು ಇಟ್ಟು, ಅವರ ಮೂಲ ಸ್ವರೂಪವನ್ನು ಪಡೆದರು. ಆದ್ದರಿಂದ ನೀನು ಇವನ ಅಣ್ಣಂದಿರರ ಬಗೆಗೆ ಸಂಕಟಪಡಬೇಡ. ಇವನಿಂದ ಸಂತಸಗೊಳ್ಳುವವನಾಗು” ಎಂದು ನುಡಿದ ಗಂಗೆ, ದೇವವ್ರತನನ್ನು ಶನ್ತನುವಿಗೆ ಒಪ್ಪಿಸಿ, ಅದೃಶ್ಯಳಾಗುತ್ತಾಳೆ. ಶನ್ತನು  ದೇವವ್ರತನನ್ನು ತನ್ನ ಅರಮನೆಗೆ ಕೊಂಡೊಯ್ದು, ಯುವರಾಜ ಪದವಿಯಲ್ಲಿ ಅಭಿಷೇಕ ಮಾಡಿ, ಅವನ ಒಳ್ಳೆಯ ಗುಣಗಳಿಂದ ಸಂತುಷ್ಟನಾಗಿ, ಬಹಳ ಸಂತೋಷಪಟ್ಟನು.

ಪುನಃ ಸ ಪಿತ್ರಾsನುಮತೋ ಬೃಹಸ್ಪತೇರವಾಪ ವೇದಾನ್ ಪುರುಷಾಯುಷೋsರ್ದ್ಧತಃ ।
ರಾಮಾತ್ ತಥಾsಸ್ತ್ರಾಣಿ ಪುನಸ್ತ್ವವಾಪ ತಾವದ್ಭಿರಬ್ದೈಸ್ತ್ರಿಶತೈಶ್ಚ ತತ್ತ್ವಮ್ ॥೧೧.೫೪

ಮತ್ತೆ, ದೇವವ್ರತನು ತಂದೆಯಿಂದ ಅನುಮತಿಯನ್ನು ಪಡೆದು, ಬೃಹಸ್ಪತ್ಯಾಚಾರ್ಯರಿಂದ ಐವತ್ತು ವರ್ಷಗಳ ಕಾಲ  ವೇದಾಭ್ಯಾಸ  ಮಾಡಿದನು. ಹಾಗೆಯೇ, ಮತ್ತೆ ಐವತ್ತು ವರ್ಷಗಳ ಕಾಲ ಪರಶುರಾಮನಲ್ಲಿ  ಅಸ್ತ್ರವಿದ್ಯೆಯನ್ನೂ,  ಮುನ್ನೂರು ವರ್ಷಗಳ ತನಕ ತತ್ತ್ವವಿದ್ಯೆಯನ್ನೂ ಪಡೆದನು.

ಸ ಸರ್ವವಿತ್ತ್ವಂ ಸಮವಾಪ್ಯ ರಾಮಾತ್ ಸಮಸ್ತವಿದ್ಯಾಧಿಪತೇರ್ಗ್ಗುಣಾರ್ಣ್ಣವಾತ್ ।
ಪಿತುಃ ಸಮೀಪಂ ಸಮವಾಪ್ಯ ತಂ ಚ ಶುಶ್ರೂಷಮಾಣಃ ಪ್ರಮುಮೋದ ವೀರಃ ॥೧೧.೫೫

ಹೀಗೆ ದೇವವ್ರತನು ಎಲ್ಲಾ ವಿದ್ಯೆಗಳ ಒಡೆಯನಾದನು. ಗುಣಗಳಿಗೆ ಕಡಲಿನಂತಿರುವ ಪರಶುರಾಮನಿಂದ ಸರ್ವಜ್ಞತೆಯನ್ನು ಹೊಂದಿ, ತಂದೆಯ ಬಳಿ ಬಂದು, ತಂದೆಯ ಸೇವೆ ಮಾಡುತ್ತಾ, ತಾನೂ ಸಂತಸಪಟ್ಟನು.

ಪದ್ಯ ರೂಪ:  https://go-kula.blogspot.com/

Mahabharata Tatparya Nirnaya Kannada 11.46-11.50


ದೇವವ್ರತೋsಸಾವನುಶಾಸನಾಯ ಮಾತ್ರಾ ದತ್ತೋ ದೇವಗುರೌ ಶತಾರ್ದ್ಧಮ್ ।
ಸಂವತ್ಸರಾಣಾಮಖಿಲಾಂಶ್ಚ ವೇದಾನ್ ಸಮಭ್ಯಸತ್ ತದ್ವಶಗಾನ್ತರಾತ್ಮಾ ॥೧೧.೪೬

ತಾಯಿ ಗಂಗೆಯಿಂದ ವಿದ್ಯಾಭಾಸಕ್ಕಾಗಿ ಬೃಹಸ್ಪಿತಿಯಲ್ಲಿ ಬಿಡಲ್ಪಟ್ಟ ದೇವವ್ರತ ನಾಮಕ ಶನ್ತನು ಪುತ್ರನು, ಐವತ್ತು ವರ್ಷಗಳ ಕಾಲ ಬೃಹಸ್ಪತಿಯ ವಶದಲ್ಲಿ ಇದ್ದು, ವೇದಾಭ್ಯಾಸ ಮಾಡಿದನು.

ತತಶ್ಚ ಮಾತ್ರಾ ಜಗತಾಂ ಗರೀಯಸ್ಯನನ್ತಪಾರೇsಖಿಲಸದ್ಗುಣಾರ್ಣ್ಣವೇ ।
ರಾಮೇ ಭೃಗೂಣಾಮಧಿಪೇ ಪ್ರದತ್ತಃ ಶುಶ್ರಾವ ತತ್ತ್ವಂ ಚ ಶತಾರ್ದ್ಧವರ್ಷಮ್ ॥೧೧.೪೭

ಬೃಹಸ್ಪತಿಯಲ್ಲಿ ವೇದಾಭ್ಯಾಸವನ್ನು ಮುಗಿಸಿದ ಮೇಲೆ,   ಮತ್ತೆ ತಾಯಿ ಗಂಗೆಯಿಂದ, ಸಂಪೂರ್ಣವಾಗಿ ತಿಳಿದುಕೊಳ್ಳಲಾಗದ, ನಿರ್ದುಷ್ಟ ಗುಣಗಳಿಗೆ ಕಡಲಿನಂತಿರುವ, ಭೃಗುಕುಲದಲ್ಲಿ ಬಂದಿರುವ, ಜಗತ್ತಿನಲ್ಲಿ ಎಲ್ಲರಿಗಿಂತ ಮಿಗಿಲಾದ ಶಕ್ತಿ ಎಣಿಸಿದ   ಪರಶುರಾಮನಲ್ಲಿ ಕೊಡಲ್ಪಟ್ಟವನಾದ ದೇವವ್ರತ, ಅಲ್ಲಿ  ಐವತ್ತು ವರ್ಷಗಳ ಕಾಲ ತತ್ತ್ವವನ್ನು(ಭಗವಂತನ ಸ್ವರೂಪವನ್ನು ಪ್ರತಿಪಾದಿಸತಕ್ಕ ಶಾಸ್ತ್ರವನ್ನು) ಅಭ್ಯಾಸ ಮಾಡಿದನು.

ಸ ಪಞ್ಚವಿಂಶತ್ ಪುನರಬ್ದಕಾನಾಮಸ್ತ್ರಾಣಿ ಚಾಭ್ಯಸ್ಯ ಪತೇರ್ಭೃಗೂಣಾಮ್ ।
ಮಾತ್ರಾ ಸಮಾನೀಯ ತಟೇ ನಿಜೇ ತು ಸಂಸ್ಥಾಪಿತಃ ಪ್ರಾರ್ಪ್ಪಯಿತುಂ ಸ್ವಪಿತ್ರೇ ॥೧೧.೪೮

ಅವನು ಮತ್ತೆ ಇಪ್ಪತ್ತೈದು ವರ್ಷಗಳ ಕಾಲ, ಭೃಗುಗಳ ಒಡೆಯನಾಗಿರುವ ಭಾರ್ಗವರಾಮನ ಬಳಿಯಲ್ಲೇ ಇದ್ದು,  ಅಸ್ತ್ರಗಳನ್ನೆಲ್ಲಾ ಅಭ್ಯಾಸ ಮಾಡಿದನು. ನಂತರ,  ತಾಯಿಯಿಂದ ಕರೆತಂದು, ತನ್ನ ನದಿಯ ತಟದಲ್ಲಿ ಶನ್ತನುವಿಗೆ ಅರ್ಪಿಸಲು ಇಡಲ್ಪಟ್ಟನು (ಅಂದರೆ: ಮಗನನ್ನು ತಂದೆಗೆ ಒಪ್ಪಿಸುವುದಕ್ಕಾಗಿ ಗಂಗೆ, ಅವನನ್ನು ತನ್ನ(ಗಂಗಾನದಿ)  ತೀರಕ್ಕೆ ಕರೆತಂದು ಅಲ್ಲಿ ನಿಲ್ಲಿಸಿದಳು)

ಸ ತತ್ರ ಬಧ್ವಾ ಶರಪಞ್ಜರೇಣ ಗಙ್ಗಾಂ ವಿಜಹ್ರೇsಸ್ಯ ಪಿತಾ ತದೈವ ।
ವ್ರಜನ್ ಮೃಗಾರ್ತ್ಥೀ ತೃಷಿತೋ ವಿಲೋಕಯನ್ ಗಙ್ಗಾಮತೋಯಾಮಭವತ್ ಸುವಿಸ್ಮಿತಃ    ॥೧೧.೪೯

ದೇವವ್ರತನು ಗಂಗಾತೀರದಲ್ಲಿ ನಿಂತು, ನದಿಯನ್ನು  ತನ್ನ ಬಾಣಗಳ ಅಣೆಕಟ್ಟಿನಿಂದ ತಡೆದು, ಆಟವಾಡಿದನು. ಆಗಲೇ ದೇವವ್ರತನ ತಂದೆಯಾದ ಶನ್ತನು ಭೇಟೆಯಾಡಲು ತೆರಳುತ್ತಾ, ಬಾಯಾರಿದವನಾಗಿ,  ನೀರಿಲ್ಲದೇ ಇರುವ ಗಂಗೆಯನ್ನು ನೋಡಿ ಬಹಳ ಅಚ್ಚರಿಗೊಂಡನು.

ಸ ಮಾರ್ಗ್ಗಯಾಮಾಸ ತತೋsಸ್ಯ ಹೇತುಜ್ಞಪ್ತ್ಯೈ ತದಾ ಸ್ವಂ ಚ ದದರ್ಶ ಸೂನುಮ್ ।
ಕ್ರೀಡನ್ತಮಸ್ತ್ರೇಣ ಬಭೂವ ಸೋsಪಿ ಕ್ಷಣಾದದೃಶ್ಯಃ ಪಿತೃದರ್ಶನಾದನು                 ॥೧೧.೫೦

ನದಿಯಲ್ಲಿ ನೀರಿಲ್ಲದಿರುವಿಕೆಯ ಕಾರಣವನ್ನು ತಿಳಿಯಬೇಕೆಂದು ಹುಡುಕಾಡಿದ ಶನ್ತನು, ಅಸ್ತ್ರದೊಂದಿಗೆ ಆಟವಾಡುತ್ತಿರುವ ತನ್ನ ಮಗನನ್ನು ಕಂಡನು. ದೇವವ್ರತನಾದರೋ, ತಂದೆ ಕಂಡಕೂಡಲೇ, ಕ್ಷಣಕಾಲ ಅದೃಶ್ಯನಾದನು.

ಪದ್ಯ ರೂಪ:  https://go-kula.blogspot.com/

Mahabharata Tatparya Nirnaya Kannada 11.39-11.45


ತಾಂ ಪುತ್ರನಿಧನೋದ್ಯುಕ್ತಾಂ ನ್ಯವಾರಯತ್ ಶನ್ತನುಃ ।
ಕಾsಸಿ ತ್ವಂ ಹೇತುನಾ ಕೇನ ಹನ್ಸಿ ಪುತ್ರಾನ್ ನೃಶಂಸವತ್  ॥೧೧.೩೯

ರೂಪಂ ಸುರವರಸ್ತ್ರೀಣಾಂ ತವ ತೇನ ನ ಪಾಪಕಮ್       
ಭವೇತ್ ಕರ್ಮ್ಮ  ತ್ವದೀಯಂ ತನ್ಮಹತ್ ಕಾರಣಮತ್ರ ಹಿ         ೧೧.೪೦

ತತ್ ಕಾರಣಂ ವದ ಶುಭೇ ಯದಿ ಮಚ್ಛ್ರೋತ್ರಮರ್ಹತಿ ।
ಇತೀರಿತಾsವದತ್ ಸರ್ವಂ ಪ್ರಯಯೌ ಚ ಸುರಾಪಗಾ  ॥೧೧.೪೧

ಏಳು ಜನ ಪುತ್ರರನ್ನು ಕಳೆದುಕೊಂಡ ಶನ್ತನು, ತನ್ನ ಎಂಟನೇ ಪುತ್ರನನ್ನು ಕೊಲ್ಲಲು ಉದ್ಯುಕ್ತಳಾದ ಪತ್ನಿ ಗಂಗೆಯನ್ನು ತಡೆದು ಕೇಳುತ್ತಾನೆ:  “ನೀನು ಯಾರು? ಏತಕ್ಕಾಗಿ ಹೀಗೆ  ಕಟುಕರಂತೆ ಮಕ್ಕಳನ್ನು ಕೊಲ್ಲುತ್ತಿದ್ದೀಯ? ನೋಡಿದರೆ ದೇವತಾ ಸ್ತ್ರೀ ರೂಪವನ್ನು ಹೊಂದಿರುವೆ. ಆ ಕಾರಣದಿಂದ ನಿನ್ನ ಕೆಲಸ ಪಾಪಿಷ್ಠವಾಗಿರಲಾರದು. ಇದರ ಹಿಂದೆ ಇನ್ನೇನೋ ಒಳ್ಳೆಯ ಕಾರಣ ಇರಲೇಬೇಕು. ಮಂಗಳೆಯೇ, ಒಂದು ವೇಳೆ  ನನ್ನ ಕಿವಿ ಅದನ್ನು ಕೇಳಲು ಯೋಗ್ಯವಾಗಿದ್ದರೆ, ಆ ಕಾರಣವನ್ನು ಹೇಳು” ಎಂದು. ಈ ರೀತಿಯಾಗಿ ಶನ್ತನು ಕೇಳಿದಾಗ, ಗಂಗೆ ವಸುಕೃತವಾದ ಎಲ್ಲವನ್ನೂ ವಿವರಿಸುತ್ತಾಳೆ ಮತ್ತು ತಕ್ಷಣ ಅಲ್ಲಿಂದ ದೇವಲೋಕಕ್ಕೆ ತೆರಳುತ್ತಾಳೆ  ಕೂಡಾ.

ನ ಧರ್ಮ್ಮೋ ದೇವತಾನಾಂ ಹಿ ಜ್ಞಾತವಾಸಶ್ಚಿರಂ ನೃಷು ।
ಕಾರಣಾದೇವ ಹಿ ಸುರಾ ನೃಷು ವಾಸಂ ಪ್ರಕುರ್ವತೇ  ೧೧.೪೨

ಕಾರಣಾಪಗಮೇ ಯಾನ್ತಿ ಧರ್ಮ್ಮೋsಪ್ಯೇಷಾಂ ತಥಾವಿಧಃ
ಅದೃಶ್ಯತ್ವಮಸಂಸ್ಪರ್ಶೋ ಹ್ಯಸಮ್ಭಾಷಣಮೇವ ಚ             ೧೧.೪೩

ಸುರೈರಪಿ ನೃಜಾತೈಸ್ತು ಗುಹ್ಯಧರ್ಮ್ಮೋ ದಿವೌಕಸಾಮ್
ಅತಃ ಸಾ ವರುಣಂ ದೇವಂ ಪೂರ್ವಭರ್ತ್ತಾರಮಪ್ಯಮುಮ್        ೧೧.೪೪

ನೃಜಾತಂ ಶನ್ತನುಂ ತ್ಯಕ್ತ್ವಾ ಪ್ರಯಯೌ ವರುಣಾಲಯಮ್
ಸುತಮಷ್ಟಮಮಾದಾಯ ಭರ್ತ್ತುರೇವಾಪ್ಯನುಜ್ಞಯಾ ।
ವಧೋದ್ಯೋಗಾನ್ನಿವೃತ್ತಾ ಸಾ ದದೌ ಪುತ್ರಂ ಬೃಹಸ್ಪತೌ        ೧೧.೪೫

ಏಕೆ ಗಂಗೆ ತನ್ನ ಪತಿಯನ್ನು ಬಿಟ್ಟು ತೆರಳಿದಳು ಎನ್ನುವುದನ್ನು ಆಚಾರ್ಯರು ಇಲ್ಲಿ ವಿವರಿಸಿದ್ದಾರೆ: ದೇವತೆಗಳಿಗೆ ಮನುಷ್ಯರಲ್ಲಿ ಪ್ರತ್ಯಕ್ಷವಾಗಿ ತನ್ನ ಸ್ವರೂಪವು ತಿಳಿಯಲ್ಪಟ್ಟ ಮೇಲೆ ಬಹುಕಾಲ  ವಾಸಮಾಡುವುದು ಧರ್ಮವಲ್ಲ. ಅವರು ಯಾವುದೋ ಒಂದು ವಿಶಿಷ್ಟ ಕಾರಣದಿಂದಲೇ ಮನುಷ್ಯರಲ್ಲಿ ವಾಸ ಮಾಡುತ್ತಾರೆ. ದೇವತೆಗಳು ಯಾವ ಕಾರಣಕ್ಕೆ ಬರುತ್ತಾರೋ, ಅದು ಈಡೇರಿದ ಮೇಲೆ ಅವರು ಹಿಂತಿರುಗುತ್ತಾರೆ. ಇದು ದೇವತೆಗಳಿಗೆ ಧರ್ಮವೂ ಕೂಡಾ ಹೌದು. ಕಾಣದಿರುವಿಕೆ, ಮುಟ್ಟದಿರುವಿಕೆ, ಮಾತನಾಡದಿರುವಿಕೆ, ಇತ್ಯಾದಿಗಳು ಮನುಷ್ಯರಾಗಿ ಬಂದ ದೇವತೆಗಳಿಗೆ ಧರ್ಮವಾಗಿರುತ್ತದೆ. ಇದು ದೇವತೆಗಳ  ಗುಹ್ಯಧರ್ಮ. ಆ ಕಾರಣದಿಂದ ಗಂಗೆ  ಮನುಷ್ಯ ಯೋನಿಯಲ್ಲಿ ಬಂದಿರುವ ತನ್ನ ಗಂಡ ವರುಣನನ್ನು(ಶನ್ತನುವನ್ನು) ಬಿಟ್ಟು, ವರುಣಲೋಕಕ್ಕೆ ತೆರಳುತ್ತಾಳೆ. ಈ ರೀತಿ ತೆರಳುವಾಗ, ಕೊಲ್ಲುವ ಉದ್ಯೋಗದಿಂದ ನಿವೃತ್ತಳಾದ  ಗಂಗೆ,  ಗಂಡನಾದ ಶನ್ತನುವಿನ ಅನುಜ್ಞೆಯಿಂದ, ತನ್ನ ಎಂಟನೆಯ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ಬೃಹಸ್ಪತಿಯ ಅಧೀನಕ್ಕೆ ಒಪ್ಪಿಸುತ್ತಾಳೆ.

ಪದ್ಯ ರೂಪ:  https://go-kula.blogspot.com/