ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, February 28, 2019

Mahabharata Tatparya Nirnaya Kannada 12.11-12.14

ಯೇಯೇ ಹಿ ದೇವಾಃ ಪೃಥಿವೀಂ ಗತಾಸ್ತೇ ಸರ್ವೇ ಶಿಷ್ಯಾಃ ಸತ್ಯವತೀಸುತಸ್ಯ ।  
ವಿಷ್ಣುಜ್ಞಾನಂ ಪ್ರಾಪ್ಯ ಸರ್ವೇsಖಿಲಜ್ಞಾಸ್ತಸ್ಮಾದ್ ಯಥಾಯೋಗ್ಯತಯಾ ಬಭೂವುಃ೧೨.೧೧

ಯಾವಯಾವ ದೇವತೆಗಳು ಭೂಮಿಯಲ್ಲಿ ಅವತಾರ ಮಾಡಿದರೋ, ಅವರೆಲ್ಲರೂ ಕೂಡಾ ವೇದವ್ಯಾಸರ ಶಿಷ್ಯರಾಗಿ ಪರಮಾತ್ಮನ ಬಗೆಗಿನ ಜ್ಞಾನವನ್ನು ಹೊಂದಿ, ಎಲ್ಲರೂ ಕೂಡಾ ಅವರ ಯೋಗ್ಯತೆಗನುಗುಣವಾಗಿ ಎಲ್ಲವನ್ನೂ ಬಲ್ಲವರಾದರು.

ಮರೀಚಿಜಾಃ ಷಣ್ ಮುನಯೋ ಬಭೂವುಸ್ತೇ ದೇವಕಂ ಪ್ರಾಹಸನ್ ಕಾರ್ಶ್ಯಹೇತೋಃ ।
ತಚ್ಛಾಪತಃ ಕಾಲನೇಮಿಪ್ರಸೂತಾ ಅವಧ್ಯತಾರ್ತ್ಥಂ ತಪ ಏವ ಚಕ್ರುಃ ॥೧೨.೧೨

ಮರೀಚಿ ಋಷಿಗೆ ಆರುಜನ ಮಕ್ಕಳಿದ್ದರು. ಈ ಋಷಿಗಳು ಗಂಧರ್ವಮುನಿಯಾಗಿರುವ ದೇವಕ ಮುನಿಯನ್ನು ‘ಕೃಶಾಂಗ’  ಎಂಬ ಕಾರಣಕ್ಕೆ ಅಪಹಾಸ್ಯ ಮಾಡಿದರು. ಇದರಿಂದಾಗಿ ದೇವಕನಿಂದ ಶಾಪಗ್ರಸ್ತರಾದ ಅವರು ಕಾಲನೇಮಿಯ ಮಕ್ಕಳಾಗಿ  ಹುಟ್ಟಿದರು ಮತ್ತು ಅವಧ್ಯತ್ವಕ್ಕಾಗಿ ತಪಸ್ಸನ್ನು ಮಾಡಿದರು.
[ಮೊದಲ ಮನ್ವಂತರದಲ್ಲಿ(ಸ್ವಾಯಮ್ಭುವ ಮನ್ವಂತರದಲ್ಲಿ) ಮರೀಚಿ ಮತ್ತು ಊರ್ಜೆಯಲ್ಲಿ  ಸ್ಮರಃ, ಗೀಥಃ, ಪರಿಶ್ವಙ್ಗಃ, ಪತಙ್ಗಃ, ಶುದ್ರಭ್ರುದ್ ಮತ್ತು ಘ್ರುಣಿ ಎನ್ನುವ ಆರು ಮಂದಿ ಮಕ್ಕಳು ಹುಟ್ಟಿದರು. ಒಮ್ಮೆ  ದೇವಕನೆಂಬ ಗಂಧರ್ವಮುನಿ ತನ್ನ ಮಕ್ಕಳೊಂದಿಗೆ ಜಗಳಮಾಡುತ್ತಿರುವುದನ್ನು ಕಂಡ ಇವರು,  ‘ಇಷ್ಟು ಕೃಷನಾಗಿರುವ ಈತ ಇದೇನು ಹೀಗೆ ಜಗಳವಾಡುತ್ತಿದ್ದಾನೆ’ ಎಂದು ಆತನನ್ನು ಅಪಹಾಸ್ಯ ಮಾಡಿದರು. ದೊಡ್ಡವರನ್ನು ಅಪಹಾಸ್ಯ ಮಾಡುವುದು ಅತಿದೊಡ್ಡ ಆಸುರೀ ಪ್ರವೃತ್ತಿ. ಆದ್ದರಿಂದ, ದೇವಕನ ಅಂತರ್ಯಾಮಿಯಾದ ಚತುರ್ಮುಖಬ್ರಹ್ಮ ಆ ಆರು ಮಂದಿ ಮರೀಚಿ ಪುತ್ರರಿಗೆ  ‘ದೈತ್ಯರಾಗಿ ಹುಟ್ಟಿ’ ಎಂದು ಶಾಪಕೊಡುತ್ತಾನೆ. ಈ ಶಾಪದಿಂದಾಗಿ ಅವರು ಕಾಲನೇಮಿಯ ಮಕ್ಕಳಾಗಿ ಹುಟ್ಟುವಂತಾಗುತ್ತದೆ. ಮನುಷ್ಯಯೋನಿಯಲ್ಲಿ ಹುಟ್ಟುವುದೇ ದೇವತೆಗಳಿಗೆ  ದೊಡ್ಡ ಶಾಪ. ಇನ್ನು ದೈತ್ಯಯೋನಿಯಲ್ಲಿ ಹುಟ್ಟುವುದು ಅದಕ್ಕಿಂತಲೂ ಪ್ರಬಲವಾದ ಶಾಪ].

ಧಾತಾ ಪ್ರಾದಾದ್ ವರಮೇಷಾಂ ತಥೈವ ಶಶಾಪ ತಾನ್ ಕ್ಷ್ಮಾತಳೇ ಸಮ್ಭವಧ್ವಮ್ ।   
ತತ್ರ ಸ್ವತಾತೋ ಭವತಾಂ ನಿಹನ್ತೇತ್ಯಾತ್ಮಾನ್ಯತೋ ವರಲಿಪ್ಸೂನ್ ಹಿರಣ್ಯಃ ॥೧೨.೧೩      

ಬ್ರಹ್ಮದೇವನು ಕಾಲನೇಮಿಯಿಂದ ಹುಟ್ಟಿದ ಇವರಿಗೆ  ಅವಧ್ಯತ್ವದ ವರವನ್ನು ನೀಡಿದನು. ಆದರೆ ಇದರಿಂದ ಸಿಟ್ಟುಗೊಂಡ  ಹಿರಣ್ಯಕಶಿಪುವು ‘ನನಗಿಂತ ಬೇರೊಬ್ಬನಿಂದ ವರವನ್ನು ಪಡೆಯಲು ಬಯಸಿದ ನೀವು ಭೂಮಿಯಲ್ಲಿ ಹುಟ್ಟಿ.  ಅಲ್ಲಿ ನಿಮ್ಮ ಅಪ್ಪನೇ ನಿಮ್ಮ ಕೊಲೆಗಾರನಾಗಲಿ’ ಎಂದು ಶಾಪಕೊಟ್ಟನು.
[ದೈತ್ಯರಿಗೆ ತಮ್ಮ ದೇಹದ ಮೇಲೆ ಪ್ರಬಲವಾದ ಅಭಿಮಾನ. ಹಾಗಾಗಿ ದೈತ್ಯರಾಗಿ ಹುಟ್ಟಿದ ಈ ಆರುಮಂದಿ  ಅವಧ್ಯರಾಗಬೇಕು(ಯಾರಿಂದಲೂ ನಮ್ಮ ವಧೆ ಆಗಬಾರದು) ಎಂದು ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಿ ಅವಧ್ಯತೆಯ ವರವನ್ನು ಪಡೆಯುತ್ತಾರೆ. ಈ ಸುದ್ದಿ ಕಾಲನೇಮಿಯ ದೊಡ್ಡಪ್ಪನಾದ ಹಿರಣ್ಯಕಶಿಪುವಿಗೆ ತಲುಪುತ್ತದೆ. (ಕಾಲನೇಮಿ ಹಿರಣ್ಯಾಕ್ಷನ ಮಗ). ನನ್ನನ್ನು ಬಿಟ್ಟು ಬ್ರಹ್ಮನಲ್ಲಿ ವರವನ್ನು ಪಡೆದ ಈ ಆರುಮಂದಿಯ ಮೇಲೆ ಕೋಪಗೊಂಡ ಹಿರಣ್ಯಕಶಿಪು, ‘ನಿಮ್ಮ ಅಪ್ಪನಿಂದಲೇ ನಿಮಗೆ ಸಾವು ಪ್ರಾಪ್ತವಾಗಲಿ’ ಎಂದು ಶಾಪ ಕೊಡುತ್ತಾನೆ.
ಸತ್ಯವಚನನಾದ ಬ್ರಹ್ಮನ ಮಾತು ಎಂದೂ ಸುಳ್ಳಾಗುವುದಿಲ್ಲ. ಆತ ಅವಧ್ಯರಾಗಿ ಎಂದು ಶಾಪ ಕೊಟ್ಟಿದ್ದಾನೆ. ಆದರೆ ಹಿರಣ್ಯಕಶಿಪು ಅದಕ್ಕೆ ವ್ಯತಿರಿಕ್ತವಾಗಿ ತಂದೆಯಿಂದಲೇ ನಿಮಗೆ ಸಾವು ಎಂದು ಶಪಿಸಿದ್ದಾನೆ. ಹಿರಣ್ಯಕಶಿಪುವಿನ ಶಾಪವೇ ಮುಂದೆ ಅವರ ಮೂಲಶಾಪ ವಿಮೋಚನೆಯ ಮಾರ್ಗವಾಗಿರುವುದರಿಂದ,    ಪರಸ್ಪರ ವಿರುದ್ಧವಾದ ಈ ಎರಡನ್ನೂ ಘಟಿಸುವುದಕ್ಕೊಸ್ಕರ ಅಘಟಿತ ಘಟನಾ ಸಮರ್ಥನಾದ ಭಗವಂತನಿಂದ ಒಂದು ಲೀಲಾನಾಟಕ ನಡೆಯುತ್ತದೆ.]     


ದುರ್ಗ್ಗಾ  ತದಾ ತಾನ್ ಭಗವತ್ಪ್ರಚೋದಿತಾ ಪ್ರಸ್ವಾಪಯಿತ್ವಾ ಪ್ರಚಕರ್ಷ ಕಾಯಾತ್ ।
ಕ್ರಮಾತ್ ಸಮಾವೇಶಯದಾಶು ದೇವಕೀಗರ್ಭಾಶಯೇ ತಾನ್ಯಹನಚ್ಚ ಕಂಸಃ ॥೧೨.೧೪

ಪರಮಾತ್ಮನಿಂದ ಪ್ರಚೋದಿತಳಾದ ದುರ್ಗಾದೇವಿಯು ಕಾಲನೇಮಿಯ ಮಕ್ಕಳಾಗಿ ಹುಟ್ಟಿದ್ದ ಆರುಮಂದಿ ಮರೀಚೀಪುತ್ರರನ್ನು ಧೀರ್ಘನಿದ್ರೆಗೆ ಒಳಪಡಿಸಿ, ಆ ದೇಹದಿಂದ ಅವರ ಅಂಶವನ್ನು ಸೆಳೆದು, ಕ್ರಮವಾಗಿ ದೇವಕಿಯ ಗರ್ಭದ ಒಳಗೆ ಒಬ್ಬೊಬ್ಬರನ್ನಾಗಿ ಪ್ರವೇಶ ಮಾಡಿಸುತ್ತಾಳೆ. ಈರೀತಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಅವರನ್ನು ಕಾಲನೇಮಿಯ ಅಂಶನಾದ ಕಂಸ ಕೊಲ್ಲುತ್ತಾನೆ.
[ಭಾಗವತದಲ್ಲಿ(೧೦.೭೪.೪೭) ಈ ಕಥೆಯ ಕುರಿತಾದ ವಿವರ ಕಾಣಸಿಗುತ್ತದೆ: ಆಸನ್ ಮರೀಚೇಃ ಷಟ್ ಪುತ್ರಾ  ಊರ್ಜಾಯಾಂ ಪ್ರಥಮೇsನ್ತರೇ   ದೇವಕಂ ಜಹಸುರ್ವೀಕ್ಷ್ಯ  ಸುತಾನ್ಛಪಿತುಮುಧ್ಯತಂ ತೇನಾsಸುರಿಮಗುರ್ಯೋನಿಮಮುನಾsವಧ್ಯಕರ್ಮಣಾ ಹಿರಣ್ಯಕಷಿಪೋಃ ಶಾಪಾತ್  ಪುತ್ರಾಸ್ತೇ ಯೋಗಮಾಯಯಾ   ದೇವಕ್ಯಾ ಜಠರೇ ಜಾತಾ ರಾಜನ್ ಕಂಸವಿಹಿಂಸಿತಾಃ’. ಸ್ವಾಯಮ್ಭುವ ಮನ್ವಂತರದಲ್ಲಿ ಮರೀಚಿಗೆ ಆರುಜನ ಮಕ್ಕಳಿದ್ದರು. ಅವರು ದೇವಕಋಷಿಯನ್ನು ಅಪಹಾಸ್ಯ ಮಾಡಿದರು. ಈರೀತಿಯಾದ ದೋಷಯುಕ್ತವಾದ ಕರ್ಮದಿಂದ ಅವರು ಆಸುರೀ ಯೋನಿಯನ್ನು ಹೊಂದಿದರು. ಹಿರಣ್ಯಕಶಿಪುವಿನ ಶಾಪದ ಫಲದಿಂದ, ಯೋಗಮಾಯೆಯಿಂದ ಅವರು ದೇವಕಿಯ ಗರ್ಭದಲ್ಲಿ ಹುಟ್ಟಿದರು ಮತ್ತು ಕಂಸನಿಂದ ಕೊಲ್ಲಲ್ಪಟ್ಟರು. ಕಂಸನಿಂದ ಕೊಲ್ಲಲ್ಪಟ್ಟ ನಂತರ ಅವರು ಮತ್ತೆ ತಮ್ಮ ಅವಧ್ಯ ಶರೀರವನ್ನೇ ಸೇರಿ ನಿದ್ದೆಯಿಂದ ಮೇಲೆದ್ದರು. ಹೀಗೆ ಇಲ್ಲಿ ಭಗವಂತನ ಇಚ್ಛೆಯಂತೆ ಪರಸ್ಪರ ವಿರುದ್ಧವಾದ ಬ್ರಹ್ಮನ ವರ ಮತ್ತು ಹಿರಣ್ಯಕಶಿಪುವಿನ ಶಾಪ ನಿಜವಾದಂತಾಯಿತು.
 ಈ ಆರು ಮಂದಿ ಮುಂದೆ ಹೇಗೆ ಶಾಪ ವಿಮೋಚನೆಯನ್ನು ಹೊಂದಿ ಆತ್ಮದರ್ಶನವನ್ನುಪಡೆದರು ಎನ್ನುವುದನ್ನು ಭಾಗವತ ವಿವರಿಸುತ್ತದೆ.  ಪೀತ್ವಾsಮೃತಂ ಪಯಸ್ತಸ್ಯಾ ಪೀತಶೇಷಂ ಗದಾಭೃತಃ ನಾರಾಯಣಾಂಗಸಂಸ್ಪರ್ಶ ಪ್ರತಿಲಬ್ಧಾತ್ಮದರ್ಶನಾಃ    ತೇ ನಮಸ್ಕೃತ್ಯ ಗೋವಿಂದಂ ದೇವಕೀಂ ಪಿತರಂ ಬಲಂ ಮಿಷತಾಂ ಸರ್ವಭೂತಾನಾಂ ಯಯುರ್ಧಾಮ ವಿಹಾಯಸಾ’ ಕೃಷ್ಣ ಕುಡಿದ ದೇವಕಿಯ ಹಾಲನ್ನು ಅವರೂ ಕೂಡಾ ಕುಡಿದರು. ದೇವರು ಸ್ಪರ್ಶಿಸಿದ ದೇವಕಿಯ ಸ್ತನಪಾನಮಾಡಿದ್ದರಿಂದಾಗಿ ಅವರೆಲ್ಲರಿಗೆ ಆತ್ಮದರ್ಶನ ಮತ್ತೆ ಪ್ರಾಪ್ತವಾಯಿತು.
ಈ ಆರುಮಂದಿ ದೇವಕಿಯಲ್ಲಿ  ಶ್ರೀಕೃಷ್ಣನಿಗಿಂತ ಮೊದಲೇ ಹುಟ್ಟಿದವರು ಮತ್ತು ಕೃಷ್ಣ ಹುಟ್ಟುವ ಮೊದಲೇ ಕಂಸನಿಂದ ಹತರಾದವರು. ಹೀಗಿರುವಾಗ ಶ್ರೀಕೃಷ್ಣ ಸ್ಪರ್ಶಿಸಿದ ದೇವಕಿಯ ಮೊಲೆಹಾಲನ್ನು ಇವರು ಹೇಗೆ ಕುಡಿದರು ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಹೌದು, ಕೃಷ್ಣ ಸ್ಪರ್ಶಿದ ದೇವಕಿಯ ಮೊಲೆಹಾಲನ್ನು ಕುಡಿಯುವ ಭಾಗ್ಯ ಇವರಿಗೆ ಪ್ರಾಪ್ತವಾಯಿತು. ಶ್ರೀಕೃಷ್ಣ ಬೆಳೆದು ದೊಡ್ಡವನಾಗಿ ತನ್ನ ದೈವಿಕಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿದಾಗ ದೇವಕಿ ಆತನಲ್ಲಿ ತನ್ನ ಒಂದು ಆಸೆಯನ್ನು ವ್ಯಕ್ತಪಡಿಸುತ್ತಾಳೆ. ತಾನು ಈ ಹಿಂದೆ ಕಳೆದುಕೊಂಡ ಆರುಮಂದಿ ಮಕ್ಕಳನ್ನು ನಾನು ಒಮ್ಮೆ ನೋಡಿ ಮುದ್ದಿಸಬೇಕು ಎನ್ನುವ ಆಸೆ ಅವಳದ್ದಾಗಿತ್ತು. ಆಗ ಶ್ರೀಕೃಷ್ಣ ಬಲಿಲೋಕದಲ್ಲಿ ಅವಧ್ಯರಾಗಿದ್ದ  ಆ ಆರು ಜನರ ದೇಹವನ್ನು ನಾಶಪಡಿಸಿ(ಬ್ರಹ್ಮವರವನ್ನು ತನ್ನ ಶಕ್ತಿಯಿಂದ ಉಲ್ಲಂಘಿಸಿ), ಅವರನ್ನು ಶಿಶುರೂಪದಲ್ಲಿ ತಂದು ದೇವಕಿಗೆ  ನೀಡುತ್ತಾನೆ. ಈ ಘಟನೆಯಿಂದ ಅವರೆಲ್ಲರಿಗೂ ಅಂಗಪಾವಿತ್ರ್ಯ ಪ್ರಾಪ್ತವಾಗುತ್ತದೆ ಮತ್ತು ಇದರಿಂದಾಗಿ ಅವರು ಮತ್ತೆ ಆತ್ಮದರ್ಶನವನ್ನು ಪಡೆಯುವಂತಾಗುತ್ತದೆ.
ಪುರಾಣದಲ್ಲಿ ಬರುವ ಈ ಕಥೆಯಲ್ಲಿ ಸ್ವಲ್ಪ ವ್ಯತ್ಯಾಸವನ್ನು ನಾವು ಕಾಣುತ್ತೇವೆ.  ಈ ಆರುಮಂದಿ ಬ್ರಹ್ಮನ ಶಾಪದಿಂದ ಕಾಲನೇಮಿಯ ಮಕ್ಕಳಾಗಿ ದೈತ್ಯಯೋನಿಯಲ್ಲಿ ಹುಟ್ಟಿದರು ಎನ್ನುವುದನ್ನು ನಾವಿಲ್ಲಿ  ತಿಳಿದೆವು. ಆದರೆ ಕೆಲವು ಪುರಾಣಗಳಲ್ಲಿ  ಇವರನ್ನು ಹಿರಣ್ಯಕಶಿಪುವಿನ ಮಕ್ಕಳು ಎಂದು ಹೇಳಿದ್ದಾರೆ. ಬ್ರಾಹ್ಮಪುರಾಣದಲ್ಲಿ(೧೮೧.೩೬) ‘ಹಿರಣ್ಯಕಶಿಪೋಃ ಪುತ್ರಾಃ ಷಡ್ ಗರ್ಭಾ ಇತಿ ವಿಶ್ರುತಾಃ’ ಎಂದೂ, ಅಗ್ನಿಪುರಾಣದಲ್ಲಿ(೧೨.೪)  ಹಿರಣ್ಯಕಶಿಪೋಃ ಪುತ್ರಾಃ  ಷಡ್ ಗರ್ಭಾ ಯೋಗನಿದ್ರಯಾ’   ಎಂದೂ  ಹೇಳಿದ್ದಾರೆ.
ಇಲ್ಲಿ ಹಿರಣ್ಯಕಶಿಪು ಕಾಲನೇಮಿಯ ಆರುಮಂದಿ ಮಕ್ಕಳನ್ನು ತನ್ನ ಮಕ್ಕಳಂತೇ ಕಾಣುತ್ತಿದ್ದ ಎಂಬ ಭಾವದಿಂದ ಹಿರಣ್ಯಕಶಿಪೋಃ ಪುತ್ರಾಃ  ಎಂದು ಹೇಳಿದ್ದಾರೆ ಎಂದು ನಾವು ತಿಳಿಯಬೇಕು.
ಇನ್ನು ಪಾದ್ಮಪುರಾಣದಲ್ಲಿ(ಉತ್ತರಖಂಡ ೨೪೫.೨೬)   ಹಿರಣ್ಯಾಕ್ಷಸ್ಯ ಷಟ್ ಪುತ್ರಾಃ –ಎಂದು, ‘ಇವರು ಹಿರಣ್ಯಾಕ್ಷನ ಮಕ್ಕಳು’  ಎಂದಿದ್ದಾರೆ.  ಇಲ್ಲಿ ಹಿರಣ್ಯ-ಅಕ್ಷ ಎಂದರೆ ಬಂಗಾರದ ಮೇಲೆ ಕಣ್ಣಿಟ್ಟವನು ಎಂದರ್ಥ. ಸದಾ ತನ್ನ ಸುಖಕ್ಕಾಗಿ ಒದ್ದಾಡುವ ಆಸುರೀ ಪ್ರವೃತ್ತಿ ಉಳ್ಳವನು ಹಿರಣ್ಯಾಕ್ಷ. ಹೀಗಾಗಿ ಕಾಮಕ್ಕೆ ಅಭಿಮಾನಿ ದೈತ್ಯನಾದ  ಕಾಲನೇಮಿಯೂ ಹಿರಣ್ಯಾಕ್ಷ. ಈ ಭಾವದೊಂದಿಗೆ ಮೇಲಿನ ಮಾತನ್ನು ನಾವು ಕಾಣಬೇಕಾಗುತ್ತದೆ.
ದೇವೀ ಭಾಗವತದಲ್ಲೂ(೪.೨೨.೮-೨೨) ಈ ಕಥೆಯ ಕುರಿತಾದ ವಿವರಣೆ ಕಾಣಸಿಗುತ್ತದೆ.

Monday, February 25, 2019

Mahabharata Tatparya Nirnaya Kannada 12.08-12.10


ಯೋ ಮನ್ಯತೇ ವಿಷ್ಣುರೇವಾಹಮಿತ್ಯಸೌ ಪಾಪೋ ವೇನಃ ಪೌಣ್ಡ್ರಕೋ ವಾಸುದೇವಃ ।
ಜಾತಃ ಪುನಃ ಶೂರಜಾತ್ ಕಾಶಿಜಾಯಾಂ ನಾನ್ಯೋ ಮತ್ತೋ ವಿಷ್ಣುರಸ್ತೀತಿ ವಾದೀ ॥೧೨.೦೮॥      

ಧುನ್ಧುರ್ಹತೋ ಯೋ ಹರಿಣಾ ಮಧೋಃ ಸುತ ಆಸೀತ್ ಸುತಾಯಾಂ ಕರವೀರೇಶ್ವರಸ್ಯ।     
ಸೃಗಾಲನಾಮಾ ವಾಸುದೇವೋsಥ ದೇವಕೀಮುದೂಹ್ಯ ಶೌರಿರ್ನ್ನ ಯಯಾವುಭೇ ತೇ ॥೧೨.೦೯॥     

ನಾನೇ ವಿಷ್ಣುಎಂದು ಯಾರು ತನ್ನನ್ನು ತಾನು ತಿಳಿಯುತ್ತಾನೋ, ಅಂತಹ ಪಾಪಿಷ್ಠನಾಗಿರುವ ವೇನನು ವಸುದೇವನಿಂದ ಕಾಶಿರಾಜನ ಮಗಳಲ್ಲಿ, ‘ನನಗಿಂತ ವಿಲಕ್ಷಣನಾಗಿರುವ  ಇನ್ನೊಬ್ಬ ವಾಸುದೇವನೆನ್ನುವವನು  ಇಲ್ಲಾ, ನಾನೇ ವಿಷ್ಣುಎಂದು ನಿರಂತರವಾಗಿ ಹೇಳುತ್ತಿರುವ  ಪೌಣ್ಡ್ರಕ ವಾಸುದೇವನಾಗಿ ಹುಟ್ಟಿದನು.
ಕರವೀರರಾಜನ ಮಗಳಲ್ಲಿ ಹಿಂದೆ  ನಾರಾಯಾಣನಿಂದಲೇ ಕೊಲ್ಲಲ್ಪಟ್ಟ ಮಧುವಿನ ಮಗನಾದ ಧುನ್ಧುಎನ್ನುವ ರಾಕ್ಷಸನು ಸೃಗಾಲವಾಸುದೇವಎನ್ನುವ ಹೆಸರಿನವನಾಗಿ ಹುಟ್ಟಿದನು. ಇವರಿಬ್ಬರು ಹುಟ್ಟಿದ ನಂತರ  ದೇವಕಿಯನ್ನು ಮದುವೆಮಾಡಿಕೊಂಡ ವಸುದೇವ, ಮತ್ತೆ ಅವರಿಬ್ಬರನ್ನು(ಕಾಶಿರಾಜ ಮತ್ತು ಕರವೀರೇಶ್ವರ ಪುತ್ರಿಯರನ್ನು) ಸಂಪರ್ಕಿಸಲೇ ಇಲ್ಲಾ.
[ನಾವು ಕುವಲಾಶ್ವ ಧುನ್ಧುವನ್ನು ಕೊಂದು ಧುನ್ಧುಮಾರ ಎನ್ನುವ ಹೆಸರನ್ನು ಪಡೆದಎಂದು ತಿಳಿದಿದ್ದೇವೆ. ವಾಯುಪುರಾಣದಲ್ಲಿ(ಉತ್ತರಖಂಡ, ೨೬.೨೮) ಈ ಕುರಿತು ಉಲ್ಲೇಖವಿದೆ: ಬೃಹದಶ್ವಸುತಶ್ಚಾಪಿ ಕುವಲಾಶ್ವ ಇತಿಶ್ರುತಿಃ । ಯಃ ಸ ಧುನ್ಧುವಧಾದ್ ರಾಜ ಧುನ್ಧುಮಾರತ್ವಮಾಗತಃ’. ಆದರೆ ಇಲ್ಲಿ ಆಚಾರ್ಯರು ಧುನ್ಧು ಹರಿಯಿಂದ ಕೊಲ್ಲಲ್ಪಟ್ಟಎಂದು ಹೇಳಿರುವುದನ್ನು ಕಾಣುತ್ತೇವೆ.  ಈ ಹಿನ್ನೆಲೆಯಲ್ಲಿ ಮಹಾಭಾರತದಲ್ಲಿ ಒಂದು ಕಥೆ ಬರುತ್ತದೆ. ಉದಂಕನೆಂಬ ಋಷಿ  ತಪಸ್ಸುಮಾಡುತ್ತಿದ್ದ ಪ್ರದೇಶದಲ್ಲಿ ಒಬ್ಬ ರಾಕ್ಷಸನಿಂದ. ಅವನು ಸಮುದ್ರದ ಉಸುಕಿನಲ್ಲಿ ಸೇರಿಕೊಂಡು ಆಕ್ರಮಿಸಿಕೊಂಡು ಬರುತ್ತಿದ್ದ. ಈರೀತಿ ಮಾಡುತಿದ್ದ ಈತನನ್ನು ಧುನ್ಧುಎಂದು ಕರೆಯುತ್ತಿದ್ದರು. ನಾರಾಯಣನನ್ನು ಕುರಿತು ತಪಸ್ಸು ಮಾಡಿದ ಉದಂಕ, ಪ್ರತ್ಯಕ್ಷನಾದ ನಾರಾಯಣನಲ್ಲಿ ಈ ಧುನ್ಧುವನ್ನು ಕೊಲ್ಲಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ನಾರಾಯಣನು  ನೀನು ಯಾರಿಗೆ ಅನುಗ್ರಹ ಮಾಡುತ್ತೀಯೋ, ಅವನಲ್ಲಿ ನನ್ನ ತೇಜಸ್ಸು ಪ್ರವೇಶ ಮಾಡುತ್ತದೆ ಮತ್ತು ಆತ  ಧುನ್ಧುವನ್ನು  ಕೊಲ್ಲುತ್ತಾನೆಎನ್ನುತ್ತಾನೆ.  ಇದೇ ಸಮಯದಲ್ಲಿ ರಾಜ್ಯವನ್ನು ಮಗನಿಗೆ ಕೊಟ್ಟು, ವಾನಪ್ರಸ್ಥಾಶ್ರಮ ಸ್ವೀಕಾರಕ್ಕೆಂದು ಬರುತ್ತಿದ್ದ ಬೃಹದಶ್ವರಾಜನನ್ನು ಉದಂಕ ಎದುರುಗೊಳ್ಳುತ್ತಾನೆ. ಬೃಹದಶ್ವರಾಜನನ್ನು ಕಂಡ ಉದಂಕ ನನ್ನ ಅನುಗ್ರಹದಿಂದ ನಿನ್ನಲ್ಲಿ ವಿಷ್ಣುವಿನ ತೇಜಸ್ಸು ಪ್ರವೇಶವಾಗುತ್ತದೆ. ಆ ತೇಜಸ್ಸಿನ ಬಲದಿಂದ  ಧುನ್ಧುವನ್ನು ನೀನು ಕೊಂದು ಲೋಕದಲ್ಲಿ ಖ್ಯಾತಿಯನ್ನು ಗಳಿಸಬೇಕುಎಂದು ಹೇಳುತ್ತಾನೆ. ಅದಕ್ಕೆ ಬೃಹದಶ್ವ ನಾನು ಈಗಾಗಲೇ ರಾಜ್ಯವನ್ನು ತ್ಯಜಿಸಿ ಬಂದವನು. ಹಾಗಾಗಿ ಈ ಕಾರ್ಯವನ್ನು ನನ್ನ ಮಗನಾದ ಕುವಲಾಶ್ವ ಮಾಡಲಿಎನ್ನುತ್ತಾನೆ. ಆಗ  ಉದಂಕ ಕುವಲಾಶ್ವನಲ್ಲಿಗೆ ಹೋಗಿ ಅವನಿಗೆ ಆಶೀರ್ವದಿಸುತ್ತಾನೆ. ಕುವಲಾಶ್ವ ತನ್ನ ಸಾವಿರಮಂದಿ ಮಕ್ಕಳೊಂದಿಗೆ ಧುನ್ಧುವಿನೊಂದಿಗೆ ಹೋರಾಡುತ್ತಾನೆ. ಈ ಯುದ್ಧದಲ್ಲಿ ಕುವಲಾಶ್ವನ ಸಾವಿರ ಮಕ್ಕಳಲ್ಲಿ ಎಲ್ಲರೂ ಸತ್ತು ಕೇವಲ ಮೂರೇ ಮಂದಿ ಬದುಕುಳಿಯುತ್ತಾರೆ. ಕುವಲಾಶ್ವನಲ್ಲಿ ವಿಷ್ಣುವಿನ ತೇಜಸ್ವಿನ ಪ್ರವೇಶದಿಂದಾಗಿ ಅವನಿಗೆ ಧುನ್ಧುವನ್ನು ಕೊಲ್ಲುವ ಶಕ್ತಿ ಬರುತ್ತದೆ. ಹೀಗೆ ವಿಷ್ಣು ತೇಜಸ್ಸಿನಿಂದ ದುನ್ಧುವನ್ನು ಕೊಂದ ಕುವಲಾಶ್ವನಿಗೆ ಧುನ್ಧುಮಾರ ಎನ್ನುವ ಹೆಸರು ಬರುತ್ತದೆ. ಈ ಕಥೆಯ ಹಿನ್ನೆಲೆಯಲ್ಲಿ ಇಲ್ಲಿ ಆಚಾರ್ಯರು ಕುವಲೇಶ್ವನೊಳಗೆ ಪ್ರವೇಶಿಸಿರುವ ವಿಷ್ಣುತೇಜಸ್ಸನ್ನು ಬಿಂಬಿಸಿ  ಹರಿಣಾ ಮಧೋಃಸುತಃಎಂದಿದ್ದಾರೆ.

ಇನ್ನು ದುನ್ಧು ಮಧುವಿನ ಮಗ ಎಂದು ಯಾವ ಹಿನ್ನೆಲೆಯಲ್ಲಿ ಹೇಳಲಾಗಿದೆ ಎನ್ನುವ ಪ್ರಶ್ನೆ ಬರುತ್ತದೆ.  ಮಹಾಭಾರತದ ವನಪರ್ವದಲ್ಲಿ(೨೦೫.೧೭) ಒಂದು ಮಾತು ಬರುತ್ತದೆ: ಮಧುಕೈಟಭಯೋಃ ಪುತ್ರೋ ಧುನ್ಧುರ್ನಾಮಾ ಮಹಾಸುರಃ’ . ಇಲ್ಲಿ ಮಧು-ಕೈಟಭ ಇಬ್ಬರ ಹೆಸರೂ ಬಂದಿದೆ(ಉಪಕ್ರಮ). ಆದರೆ ದುನ್ಧು  ಮಧುವಿನ ಮಗ ಎನ್ನುವುದಕ್ಕೆ ನಿರ್ಣಯ ಯಾವುದು? ಹರಿವಂಶಪರ್ವದಲ್ಲಿ (೧೧.೩೩) ರಾಕ್ಷಸಾಸ್ಯ ಮಧೋಃ ಪುತ್ರೋ ಧನ್ಧುರ್ನಾಮಮಹಾಸುರಃ. ಎಂದಿದ್ದಾರೆ. ಇಲ್ಲಿ  ಉಪಸಂಹಾರ ಪ್ರಾಭಲ್ಯವಿರುವುದರಿಂದ ದುನ್ಧು ಮಧುವಿನ ಪುತ್ರ ಎನ್ನುವುದನ್ನು ನಾವು ತಿಳಿಯಬಹುದು. ಇದಲ್ಲದೇ ಬ್ರಾಹ್ಮಪುರಾಣದಲ್ಲೂ(೫.೬೩)ಕೂಡಾ ರಾಕ್ಷಸಸ್ಯ ಮಧೋಃ ಪುತ್ರೋ ಧುನ್ಧುರ್ನಾಮಮಹಾಸುರಃಎಂದು ಹೇಳಿರುವುದರಿಂದ ಕೈಟಭನಿಗೆ ಔಪಚಾರಿಕಪುತ್ರತ್ವ, ಮಧುವಿಗೆ ಔರಸಪುತ್ರತ್ವ ಎಂದು ನಿರ್ಣಯಮಾಡಿ ಆಚಾರ್ಯರು ಮಧೋಃಸುತಃಎಂದಿದ್ದಾರೆ ಎಂದು ತಿಳಿಯಬಹುದು]


ತತಸ್ತು ತೌ ವೃಷ್ಣಿಶತ್ರೂ ಬಭೂವತುರ್ಜ್ಜ್ಯೇಷ್ಠೌ ಸುತೌ ಶೂರಸುತಸ್ಯ ನಿತ್ಯಮ್ ।          
ಅನ್ಯಾಸು  ಚ ಪ್ರಾಪ ಸುತಾನುದಾರಾನ್ ದೇವಾವತಾರಾನ್ ವಸುದೇವೋsಖಿಲಜ್ಞಃ ॥೧೨.೧೦॥ 


ದೇವಕಿಯನ್ನು ಮದುವೆಯಾದ ವಸುದೇವನು ತಮ್ಮ ತಾಯಂದಿರನ್ನು ಪರಿತ್ಯಾಗ ಮಾಡಿದ್ದರಿಂದ, ಪೌಣ್ಡ್ರಕ ವಾಸುದೇವ ಮತ್ತುಸೃಗಾಲವಾಸುದೇವ ಇವರಿಬ್ಬರು ತಮಗೆ ಅಪ್ಪನ ಪ್ರೀತಿ ಸಿಗಲಿಲ್ಲಾ ಎಂದು ಯಾದವರ ದೊಡ್ಡ ಶತ್ರುಗಳಾದರು. ಎಲ್ಲವನ್ನು ಬಲ್ಲ(ಜ್ಞಾನಿಯಾದ) ವಸುದೇವನು ತನ್ನ ಇತರ ಪತ್ನಿಯರಲ್ಲಿ  ಶ್ರೇಷ್ಠರಾಗಿರುವ, ದೇವತೆಗಳ ಅವತಾರವಾಗಿರುವ ಮಕ್ಕಳನ್ನು ಪಡೆದನು.  

Friday, February 22, 2019

Mahabharata Tatparya Nirnaya Kannada 12.04-12.07


ವಿನಾsಪರಾಧಂ ನ ತತೋ ಗರೀಯಸೋ ನ ಮಾತುಲೋ ವಧ್ಯತಾಮೇತಿ ವಿಷ್ಣೋಃ ।
ಲೋಕಸ್ಯ ಧರ್ಮ್ಮಾನನುವರ್ತ್ತತೋsತಃ ಪಿತ್ರೋರ್ವಿರೋಧಾರ್ತ್ಥಮುವಾಚ ವಾಯುಃ ॥೧೧.೦೪   

ಮೃತ್ಯುಸ್ತವಾಸ್ಯಾ ಭವಿತಾsಷ್ಟಮಃ ಸುತೋ ಮೂಢೇತಿ ಚೋಕ್ತೋ ಜಗೃಹೇ ಕೃಪಾಣಮ್ । 
ಪುತ್ರಾನ್ ಸಮರ್ಪ್ಯಾಸ್ಯ ಚ ಶೂರಸೂನುರ್ವಿಮೋಚ್ಯ ತಾಂ ತತ್ಸಹಿತೋ ಗೃಹಂ ಯಯೌ॥೧೨.೫    

ಲೋಕಧರ್ಮದಂತೆ ಅಪರಾಧ ಇಲ್ಲದೇ ಅಥವಾ ಅದಕ್ಕಿಂತಲೂ ಮುಖ್ಯವಾಗಿ ತನಗಿಂತಲೂ ಉತ್ತಮರಾದವರೊಂದಿಗೆ ಅಪರಾಧ ಮಾಡದೇ ಹೋದರೆ, ಸೋದರಮಾವನು ವಧಾರ್ಹನು ಆಗುವುದಿಲ್ಲ. ಹೀಗಾಗಿ ಕಂಸ ಇಂತಹ ಅಪರಾಧ ಮಾಡದೇ ಹೋದಲ್ಲಿ  ಲೋಕದ ಧರ್ಮವನ್ನು ಅನುಸರಿಸುವ ಕೃಷ್ಣನಿಂದ ಕೊಲ್ಲುವಿಕೆಯನ್ನು ಹೊಂದುವುದಿಲ್ಲ. ಆ ಕಾರಣದಿಂದ ಶ್ರೀಕೃಷ್ಣನ ತಂದೆ-ತಾಯಿಯಾಗಲಿರುವ ವಸುದೇವ-ದೇವಕಿಯನ್ನು  ಕಂಸ ವಿರೋಧಿಸಲಿ ಎಂದು ಮುಖ್ಯಪ್ರಾಣನು ಹೇಳುತ್ತಾನೆ:   ‘ಎಲೋ ಮೂಢನೇ, ದೇವಕಿಯ  ಎಂಟನೆಯ ಮಗನು ನಿನಗೆ ಮೃತ್ಯುವಾಗಲಿದ್ದಾನೆ’ ಎಂದು. ಹೀಗೆ ಹೇಳಲ್ಪಟ್ಟವನಾದ ಕಂಸನು ಕತ್ತಿಯನ್ನು ತೆಗೆದುಕೊಂಡ. ವಸುದೇವನಾದರೋ, ಕಂಸನಿಗೆ ತನ್ನ ಮಕ್ಕಳನ್ನು ಒಪ್ಪಿಸಿ, (ಮುಂದೆ ದೇವಕಿಯಲ್ಲಿ ಹುಟ್ಟಲಿರುವ ಎಲ್ಲಾ ಮಕ್ಕಳನ್ನು ನಿನಗೆ ಕೊಡುವೆನೆಂದು ಹೇಳಿ)  ದೇವಕಿಯನ್ನು (ಮೃತ್ಯುವಿನಿಂದ)  ಬಿಡುಗಡೆಮಾಡಿ, ಅವಳಿಂದ ಕೂಡಿಕೊಂಡು ತನ್ನ ಮನೆಗೆ ತೆರಳಿದನು. 

ಷಟ್ ಕನ್ಯಕಾಶ್ಚಾವರಜಾ ಗೃಹೀತಾಸ್ತೇನೈವ ತಾಭಿಶ್ಚ ಮುಮೋದ ಶೂರಜಃ ।
ಬಾಹ್ಲೀಕಪುತ್ರೀ ಚ ಪುರಾ ಗೃಹೀತಾ ಪುರಾsಸ್ಯ ಭಾರ್ಯ್ಯಾ ಸುರಭಿಸ್ತು ರೋಹಿಣೀ ॥೧೧.೦೬॥       

ದೇವಕಿಯ ಆರುಜನ ತಂಗಿಯಂದಿರು ವಸುದೇವನಿಂದಲೇ ಪರಿಗ್ರಹಿಸಲ್ಪಟ್ಟಿದ್ದರು. ಅವರಿಂದಲೂ ಕೂಡಾ ವಸುದೇವನು ಕ್ರೀಡಿಸಿದನು. ಯಾರು ಹಿಂದೆ ಗೋಮಾತೆ ಸುರಭಿಯಾಗಿದ್ದಳೋ ಅವಳೇ ಬಾಹ್ಲೀಕರಾಜನ ಮಗಳಾಗಿ ಹುಟ್ಟಿದ್ದಳು. ಅಂತಹ ರೋಹಿಣಿಯನ್ನು ವಸುದೇವ ದೇವಕಿಯ ಆರು ಮಂದಿ ತಂಗಿಯರನ್ನು  ಮದುವೆಯಾಗುವುದಕ್ಕೂ ಮೊದಲೇ ಮದುವೆ ಮಾಡಿಕೊಂಡಿದ್ದ.

[ಷಟ್ ಕನ್ಯಕಾಶ್ಚಾವರಜಾ ಎನ್ನುವುದಕ್ಕೆ ಸಂವಾದವನ್ನು ಅನೇಕ ಕಡೆ ಕಾಣುತ್ತೇವೆ. ಭಾಗವತದಲ್ಲಿ(೯.೧೯.೨೩-೨೪) ಹೇಳುವಂತೆ: ತೇಷಾಂ ಸ್ವಸಾರಃ ಸಪ್ತಾsಸನ್ ಧೃತದೇವಾದಯೋ ನೃಪ ಶಾನ್ತಿದೇವೋಪದೇವಾ ಚ ಶ್ರೀದೇವಾ ದೇವರಕ್ಷಿತಾ ಸಹದೇವಾ ದೇವಕೀ ಚ ವಸುದೇವ ಉವಾಹ ತಾಃ’. ಮೇಲಿನ ಶ್ಲೋಕದಲ್ಲಿ ಆಚಾರ್ಯರು ದೇವಕಿ ಮತ್ತು ಅವಳ ಆರು ಜನ ತಂಗಿಯಂದಿರು ಎಂದು ಹೇಳಿದ್ದಾರೆ. ಜ್ಯೇಷ್ಠತೆಯಿಂದ ಗಣನೆ ಮಾಡುವಾಗ ದೇವಕೀಯಿಂದ ಆರಂಭಿಸಿ ಗಣನೆ ಮಾಡಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ‘ಅವರಜಾ’ (ಆದಮೇಲೆ ಹುಟ್ಟಿದವರು)ಎಂದು ವಿವರಿಸಿದ್ದಾರೆ. (ಜ್ಯೇಷ್ಠತೆಯಿಂದ ಗಣನೆ ಮಾಡುವಾಗ ದೇವಕೀ, ಸಹದೇವಾ, ದೇವರಕ್ಷಿತಾ, ಶ್ರೀದೇವಾ, ಉಪದೇವಾ, ಶಾನ್ತಿದೇವಾ ಮತ್ತು  ದೃತದೇವಾ, ಈ ರೀತಿಯಾಗಿ ನೋಡಬೇಕು). ಇದಕ್ಕೆ ಪೂರಕವಾಗಿ ಹರಿವಂಶಪರ್ವದಲ್ಲಿ(೩೭.೨೯) ಈ ರೀತಿ ಹೇಳಿದ್ದಾರೆ: ದೇವಕೀ ಶಾನ್ತದೇವಾ ಚ  ಸುದೇವಾ ದೇವರಕ್ಷಿತಾ ವೃಕದೇವ್ಯುಪದೇವಿ ಚ ಸುನಾಮ್ನೀ ಚೈವ ಸಪ್ತಮೀ’. ಬ್ರಾಹ್ಮಪುರಾಣದಲ್ಲೂ(೧೨.೩೭)  ದೇವಕಿಯ ಆರುಜನ ತಂಗಿಯಂದಿರ ಕುರಿತು ಹೇಳಿರುವುದನ್ನು ಕಾಣಬಹುದು ‘ಸಹದೇವಾ ಶಾನ್ತಿದೇವಾ ಶ್ರೀದೇವೀ ದೇವರಕ್ಷಿತಾ ವೃಕದೇವ್ಯುಪದೇವೀ  ಚ ದೇವಕೀ ಚೈವ ಸಪ್ತಮೀ’].   

ರಾಜ್ಞಶ್ಚ ಕಾಶಿಪ್ರಭವಸ್ಯ ಕನ್ಯಾಂ ಸ ಪುತ್ರಿಕಾಪುತ್ರಕಧರ್ಮ್ಮತೋsವಹತ್ ।
ಕನ್ಯಾಂ ತಥಾ ಕರವೀರೇಶ್ವರಸ್ಯ ಧರ್ಮ್ಮೇಣ ತೇನೈವ ದಿತಿಂ ಧನುಂ ಪುರಾ ॥೧೧.೦೭॥

ಮೊದಲು ಪುತ್ರಿಕಾಪುತ್ರಕಧರ್ಮ್ಮದಂತೆ ದಿತಿಯ ಅವತಾರವಾಗಿರುವ  ಕಾಶಿದೇಶದ ರಾಜನ ಮಗಳನ್ನು ಹಾಗು ಧನುವಿನ ಅವತಾರವಾಗಿರುವ  ಕರವೀರರಾಜನ[1] ಮಗಳನ್ನು ವಸುದೇವ ಮದುವೆಯಾಗಿದ್ದ.




[1] ಈಗಿನ ಗೋವಾದ ಹತ್ತಿರವಿರುವ ಕೊಲ್ಲ್ಹಾಪುರ