ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 10, 2022

Mahabharata Tatparya Nirnaya Kannada 22-181-187

 

ಅಭ್ಯೇತ್ಯ ಪಾದಯುಗಳಂ ಜಗದೇಕಭರ್ತ್ತುಃ ಕೃಷ್ಣಸ್ಯ ಭಕ್ತಿಭರಿತಃ ಶಿರಸಾ ನನಾಮ ।

ಚಕ್ರೇ ಸ್ತುತಿಂ ಚ ಪರಮಾಂ ಪರಮಸ್ಯ ಪೂರ್ಣ್ಣಷಾಡ್ಡ್ಗುಣ್ಯವಿಗ್ರಹವಿದೋಷಮಹಾವಿಭೂತೇಃ ॥೨೨.೧೮೧॥

 

ತುಂಬಿರುವ, ಜ್ಞಾನ ವೈರಾಗ್ಯ ಮೊದಲಾದ ಗುಣಗಳೇ ಮೈವೆತ್ತು ಬಂದಿರುವ, ದೋಷವಿಲ್ಲದ, ಐಶ್ವರ್ಯವನ್ನು ಹೊಂದಿರುವ, ಎಲ್ಲಕ್ಕೂ ಮಿಗಿಲಾದ, ಜಗತ್ತಿಗೇ ಮುಖ್ಯ ಒಡೆಯನಾದ ಕೃಷ್ಣನ ಪಾದಗಳೆರಡನ್ನು ಹೊಂದಿದ ಸದಾಶಿವ,  ಭಕ್ತಿಯಿಂದ ಕೂಡಿಕೊಂಡು, ತಲೆಯಿಂದ  ನಮಸ್ಕರಿಸಿದ (ಸಾಷ್ಟಾಂಗ ನಮಸ್ಕಾರ ಮಾಡಿದ).  ಉತ್ಕೃಷ್ಟವಾದ ಸ್ತುತಿಯನ್ನು ಮಾಡಿದ.

[ಹರಿವಂಶದಲ್ಲಿ ಶಿವಸ್ತುತಿ ಕುರಿತಾಗಿ ಹೀಗೆ ಹೇಳಿದ್ದಾರೆ: ‘ಕ ಇತಿ ಬ್ರಹ್ಮಣೋ ನಾಮ ಈಶೋSಹಂ ಸರ್ವದೇಹಿನಾಮ್ । ಆವಾಂ ತವಾಙ್ಗಸಮ್ಭೂತೌ ತಸ್ಮಾತ್ ಕೇಶವನಾಮವಾನ್’ (೮೮.೪೮).  ಬ್ರಹ್ಮ ಹಾಗು ನನ್ನ ಒಡೆಯ ನೀನು. ಅದರಿಂದಾಗಿ ಕೇಶವ ಎಂದು ನಿನ್ನನ್ನು ಕರೆಯುತ್ತಾರೆ. (ಕ ಎಂದರೆ ಬ್ರಹ್ಮ, ಈಶ ಎಂದರೆ ಶಿವ). ‘ನಮಃ ಸರ್ವಾತ್ಮನಾ ದೇವ ವಿಷ್ಣೋ ಮಾಧವ ಕೇಶವ । ನಮಸ್ಕರೋಮಿ ಸರ್ವಾತ್ಮನ್ ನಮಸ್ತೇSಸ್ತು  ಸದಾ ಹರೇ । ನಮಃ ಪುಷ್ಕರನಾಭಾಯ ವನ್ದೇ ತ್ವಾಮಹಮೀಶ್ವರ’ (೮೮.೬೭). ‘ನಮೋ ವಿಷ್ಣೋ ನಮೋ ವಿಷ್ಣೋ ನಮೋ ವಿಷ್ಣೋ ನಮೋ ಹರೇ । ನಮಸ್ತೇ ವಾಸುದೇವಾಯ ವಾಸುದೇವಾಯ ಧೀಮತೇ’ (೯೦.೨೭) ].

 

ಕೃಷ್ಣೋsಪ್ಯಯೋಗ್ಯಜನಮೋಹನಮೇವ ವಾಂಞ್ಛಸ್ತುಷ್ಟಾವ ರುದ್ರಹೃದಿಗಂ ನಿಜಮೇವ ರೂಪಮ್ ।

ರೂದ್ರೋ ನಿಶಮ್ಯ ತದುವಾಚ ಸುರಾನ್ ಸಮಸ್ತಾನ್ ಸತ್ಯಂ ವದಾಮಿ ಶೃಣುತಾದ್ಯ ವಚೋ ಮದೀಯಮ್ ॥೨೨.೧೮೨॥

 

ವಿಷ್ಣುಃ ಸಮಸ್ತಸುಜನೈಃ ಪರಮೋ ಹ್ಯುಪೇಯಸ್ತತ್ಪ್ರಾಪ್ತಯೇsಹಮನಿಲೋsಥ ರಮಾsಭ್ಯುಪಾಯಾಃ ।

ಏಷ ಹ್ಯಶೇಷನಿಗಮಾರ್ತ್ಥವಿನಿರ್ಣ್ಣಯೋತ್ಥೋ ಯದ್ ವಿಷ್ಣುರೇವ ಪರಮೋ ಮಮ ಚಾಬ್ಜಯೋನೇಃ ॥೨೨.೧೮೩॥

 

ಅವ್ಯಕ್ತತಃ ಸಕಲಜೀವಗಣಾಚ್ಚ ನಿತ್ಯ ಇತ್ಯೇವ ನಿಶ್ಚಯ ಉತೈತದನುಸ್ಮರಧ್ವಮ್ ।

ಇತ್ಯುಕ್ತವತ್ಯಖಿಲದೇವಗಣಾ ಗಿರೇಶೇ ಕೃಷ್ಣಂ ಪ್ರಣೇಮುರತಿವೃದ್ಧರಮೇಶಭಕ್ತ್ಯಾ ॥೨೨.೧೮೪॥

 

ಕೃಷ್ಣನೂ ಕೂಡಾ ಯಾರು ತತ್ತ್ವಜ್ಞಾನಕ್ಕೆ ಯೋಗ್ಯರಲ್ಲವೋ, ಆ ರೀತಿಯ ಜನರಿಗೆ ಮೋಹನ ಮಾಡಬೇಕು ಎಂದು ಬಯಸುತ್ತಾ, ರುದ್ರನ ಹೃದಯದ ಒಳಗಡೆ ಇರುವ, ತನ್ನದೇ ಆದ ಅಂತರ್ಯಾಮಿ ರೂಪವನ್ನೇ ಸ್ತೋತ್ರ ಮಾಡಿದ. ರುದ್ರನು ಆ ಪರಮಾತ್ಮನ ಸ್ತೋತ್ರವನ್ನು ಕೇಳಿ, ಎಲ್ಲ ದೇವತೆಗಳನ್ನು ಕುರಿತು, ಹೀಗೆ ಹೇಳಿದ: ‘ನಾನು ಸತ್ಯವನ್ನು ಹೇಳುತ್ತೇನೆ ಕೇಳಿ. ಈ ನನ್ನ ಮಾತು ಬಹಳ ಪ್ರಮುಖವಾದುದು-ಕೇಳಿ, ಎಲ್ಲಾ ಸಜ್ಜನರೂ ಕೂಡಾ ನಾರಾಯಣನನ್ನು ಚಿಂತಿಸಬೇಕು. ಪರಮಾತ್ಮನನ್ನು ಹೊಂದಲು ರುದ್ರನಾಗಿರುವ ನಾನು, ಮುಖ್ಯಪ್ರಾಣ, ಲಕ್ಷ್ಮೀದೇವಿಯು ಸಾಧನಗಳು ಅಷ್ಟೇ.  ಇದು ಎಲ್ಲಾ ವೇದಾಂತದ ನಿರ್ಣಯದಿಂದ ಬಂದಿರುವುದು. ನನಗಾಗಲೀ, ಬ್ರಹ್ಮನಿಗಾಗಲೀ ನಾರಾಯಣನೇ ಧೇಯ್ಯ’ ಎಂದು.

‘ಪ್ರಕೃತಿಯಿಂದಲೂ, ಸಕಲ ಜೀವಗಣಗಳಿಗಿಂತಲೂ ನಾರಾಯಣನು ಯಾವಾಗಲೂ ಉತ್ಕೃಷ್ಟನಾಗಿದ್ದಾನೆ ಮತ್ತು ನಿತ್ಯನಾಗಿದ್ದಾನೆ. ಇದು ಎಲ್ಲಾ ವೇದದ ನಿಶ್ಚಯ. ಶ್ರೀಹರಿಯ ಸರ್ವೋತ್ತಮತ್ವವನ್ನು ನಿರಂತರವಾಗಿ ಸ್ಮರಣೆ ಮಾಡಿ’ ಎಂದು ಸಮಸ್ತ ದೇವತೆಗಳಿಗೆ ಗಿರೀಶನು ಹೇಳುತ್ತಿರಲು, ಎಲ್ಲಾ ದೇವತೆಗಳ ಸಮೂಹವು ಪರಮಭಕ್ತಿಯಿಂದ ಕೃಷ್ಣನಿಗೆ ನಮಸ್ಕಾರ ಮಾಡಿದರು.

[ಹರಿವಂಶದಲ್ಲಿ ಪರಮಾತ್ಮನ ಸ್ತೋತ್ರದ ಕುರಿತು ಹೀಗೆ ಹೇಳಿದ್ದಾರೆ: ‘ನಮೋ ಹರಾಯ ವಿಪ್ರಾಯ ನಮೋ ಹರಿಹರಾಯಾ ಚ । ನಮೋSಘೋರಾಯ ಘೋರಾಯ ಘೋರಘೋರಪ್ರಿಯಾಯ ಚ (೮೭.೧೭)    ಹರಾಯ ಹರಿರೂಪಾಯ ನಮಸ್ತೇ ತಿಗ್ಮತೇಜಸೇ । ಭಕ್ತಿಪ್ರಿಯಾಯ ಭಕ್ತಾಯ ಭಕ್ತಾನಾಮ್ ವರದಾಯಿನೇ’ (೨೧).

  ಶಿವನು ಅಲ್ಲಿ ನೆರೆದಿರುವ ಎಲ್ಲರನ್ನು ಕುರಿತು ಹೇಳಿರುವ ಮಾತು ಹೀಗಿದೆ: ‘ಹರಿರೇಕಃ ಸದಾ ಧ್ಯೇಯೋ ಭವದ್ಭಿಃ ಸತ್ವಮಾಸ್ಥಿತೈಃ ।  ನಾನ್ಯೋ ಜಗತಿ ದೇವೋSಸ್ತಿ ವಿಷ್ಣೋರ್ನಾರಾಯಣಾದೃತೇ । ಓಮಿತ್ಯೇವಂ ಸದಾ ವಿಪ್ರಾ ಪಠತ ಧ್ಯಾತ ಕೇಶವಮ್’(೮೯.೯)  ಸತ್ವಗುಣವನ್ನು ಹೊಂದಿರುವ ನೀವೆಲ್ಲರೂ ಕೂಡಾ ಪರಮಾತ್ಮನನ್ನು ಮಾತ್ರ ಧ್ಯಾನ ಮಾಡಬೇಕು. ನಾರಾಯಣನಿಗಿಂತ ಮಿಗಿಲಾಗಿರುವ ಒಬ್ಬ ದೇವತೆಯೂ ಇಲ್ಲ. ಓಂಕಾರ ಪ್ರತಿಪಾಧ್ಯನಾಗಿರುವ ನಾರಾಯಣನನ್ನು ಧ್ಯಾನ ಮಾಡಿ, ಅವನನ್ನು ಕುರಿತು ಹಾಡಿರಿ- ಎನ್ನುತ್ತಾನೆ ಶಿವ].

 

ಉಕ್ತೈರನೈಶ್ಚ ಗಿರಿಶವಾಕ್ಯೈಸ್ತತ್ವವಿನಿರ್ಣ್ಣಯೈಃ ।

ಕೃಷ್ಣಸ್ಯೈವ ಗುಣಾಖ್ಯಾನೈಃ ಪುನರಿನ್ದ್ರಾದಿದೇವತಾಃ                   ॥೨೨.೧೮೫॥

 

ಜ್ಞಾನಾಭಿವೃದ್ಧಿಮಗಮನ್ ಪುರಾsಪಿ ಜ್ಞಾನಿನೋsಧಿಕಮ್ ।

ಸರ್ವದೇವೋತ್ತಮಂ ತಂ ಹಿ ಜಾನನ್ತ್ಯೇವ ಸುರಾಃ ಸದಾ             ॥೨೨.೧೮೬॥

 

ತಥಾsಪಿ ತತ್ಪ್ರಮಾಣಾನಾಂ ಬಹುತ್ವಾದ್ ಯೇSತ್ರ ಸಂಶಯಾಃ ।

ಯುಕ್ತಿಮಾತ್ರೇ ತೇsಪಿ ರುದ್ರವಾಕ್ಯಾದಪಗತಾಸ್ತದಾ ॥೨೨.೧೮೭॥

 

ಈರೀತಿಯಾದ ಸದಾಶಿವನ ಮಾತುಗಳಿಂದ, ತತ್ವ ವಿನಿರ್ಣಯ ಮಾಡಿಕೊಡುವ ಬೇರೆ ಮಾತುಗಳಿಂದಲೂ ಕೂಡಾ, ಕೃಷ್ಣನ ಗುಣವನ್ನು ಪ್ರತಿಪಾದನೆ ಮಾಡುವ ಬೇರೆ ವೇದಮಂತ್ರಗಳಿಂದಲೂ ಕೂಡಾ, ಹಿಂದೆಯೂ ಜ್ಞಾನಿಗಳಾಗಿರುವ ಇಂದ್ರ ಮೊದಲಾದ ದೇವತೆಗಳು ಇನ್ನಷ್ಟು ಅರಿವನ್ನು ಪಡೆದರು.

ಪರಮಾತ್ಮನನ್ನು ದೇವತೆಗಳು ಎಲ್ಲಾ ದೇವತೆಗಳಿಗೂ ಮಿಗಿಲು ಎಂದೇ ತಿಳಿಯುತ್ತಾರೆ. ಆದರೂ  ಪಾಶುಪತಾದಿ ಆಗಮಗಳು ಬಹಳವಿದೆ ಮತ್ತು ಅದರಿಂದಾಗಿ ಯುಕ್ತಿಯಿಂದ ಸಂಶಯಗಳು ಬರುತ್ತವೆ. ಇಲ್ಲಿ ದೇವತೆಗಳಿಗೆ ರುದ್ರನ ಮಾತಿನಿಂದ ಅಂತಹ ಕೆಲವು ಸಂಶಯಗಳು ದೂರವಾದವು.

[ಹರಿವಂಶದಲ್ಲಿ ಈ ಕುರಿತ ವಿವರ ಕಾಣಸಿಗುತ್ತದೆ: ಹರೇ ಕುರ್ವತಿ ತತ್ರೈವಮಞ್ಜಲಿಂ ಕುರುಸತ್ತಮ । ಮುನಯೇ ದೇವಗನ್ಧರ್ವಾಃ ಸಿದ್ಧಾಶ್ಚ ಸಹಕಿನ್ನರಾಃ ।  ಅಞ್ಜಲಿಂ ಚಕ್ರಿರೇ ವಿಷ್ಣೌ ದೇವದೇವೇಶ್ವರೇ ಹರೌ’(೮೮.೧೭).  

ದೇವತೆಗಳ ಜ್ಞಾನವೂ, ವಿಶೇಷತಃ ಋಜುಯೋಗಿಗಳ ಜ್ಞಾನವೂ ಕೂಡಾ ಮುಕ್ತಿ ಪರ್ಯಂತ ಹೆಚ್ಚುತ್ತಾ ಹೋಗುತ್ತದೆ ಎನ್ನುವುದನ್ನು ನಾವಿಲ್ಲಿ ತಿಳಿದಿರಬೇಕು. ಈರೀತಿಯ ಪ್ರಸಂಗವನ್ನು ಮಧ್ವವಿಜಯದಲ್ಲಿಯೂ  ನಾವು ಕಾಣಬಹುದು: ಇತಿಹಾಸ-ಸುನ್ದರ-ಪುರಾಣ-ಸೂತ್ರ-ಸತ್-ಪ್ರಿಯ-ಪಙ್ಚರಾತ್ರ-ನಿಜ-ಭಾವ-ಸಂಯುತಮ್ । ಅಶೃಣೋದನನ್ತ - ಹೃದನನ್ತ- ತೋsಚಿರಾತ್ ಪರಮಾರ್ಥಮಪ್ಯಗಣಿತಾಗಮಾವಲೇಃ ॥೦೮.೦೪॥ ಋಜು-ಪುಙ್ಗವಸ್ಯ ಪರಿ-ಜಾನತಃ ಸ್ವಯಂ ಸಕಲಂ ತದಪ್ಯಲಮನನ್ತ-ಜನ್ಮಸು । ಸ್ವ-ಕೃತೋರ್ವನುಗ್ರಹ-ಬಲಾದಮುಷ್ಯ ತಾಂ  ವಿಶಿಶೇಷ ಶೇಷ-ಶಯನಃ ಪುನರ್ಧಿಯಮ್ ॥೦೮.೦೫॥   ಹೀಗೆ ದೇವತೆಗಳಿಗೂ ಕೂಡಾ ಬೇರೆಬೇರೆ ಪ್ರಸಂಗಗಳಲ್ಲಿ ಜ್ಞಾನಾಭಿವೃದ್ಧಿ ಯಾವುದೋ ಒಂದು ಮುಖದಿಂದ ಆಗುತ್ತಿರುತ್ತದೆ].

Saturday, July 9, 2022

Mahabharata Tatparya Nirnaya Kannada 22: 173-180

 

ಪೂರ್ವಂ ತೇನೋದಿತಂ ಯತ್ತಲ್ಲೋಕಾನ್ ಮೋಹಯತಾSಞ್ಚಸಾ ।

ಶರ್ವಂ ಪ್ರತಿ ತವಾಹಂ ತು ಕುರ್ಯ್ಯಾಂ ದ್ವಾದಶವತ್ಸರಮ್ ॥೨೨.೧೭೩॥

 

ತಪೋSಸುರಾಣಾಂ ಮೋಹಾಯ ಸುರಾಃ ಸನ್ತು ಗತಜ್ವರಾಃ ।

ಇತಿ ತಸ್ಮಾತ್ ತದಾ ಕೃಷ್ಣ ಏಕಾಹೇನ ಬೃಹಸ್ಪತಿಮ್ ॥೨೨.೧೭೪॥

 

ಆಜ್ಞಯಾ ಚಾರಯಾಮಾಸ ಕ್ಷಿಪ್ರಂ ದ್ವಾದಶರಾಶಿಷು ।

ದ್ವಾದಶಾಬ್ದಮಭೂತ್ ತೇನ ತದಹಃ ಕೇಶವೇಚ್ಛಯಾ ॥೨೨.೧೭೫॥

 

'ಅಸುರರನ್ನು ಮೋಹಿಸತಕ್ಕ ಭಗವಂತನಿಂದ ದೇವತೆಗಳು ನಿಶ್ಚಿಂತರಾಗಿರಲಿ' ಎನ್ನುವ ಅಭಿಪ್ರಾಯದಿಂದ, ‘ಅಸುರರನ್ನು ಮೋಹಿಸುವುದಕ್ಕಾಗಿ ನಾನೂ ಕೂಡಾ ಹನ್ನೆರಡು ವರ್ಷ ಪರ್ಯಂತ ನಿನ್ನ ಕುರಿತಾದ ತಪಸ್ಸನ್ನು ಮಾಡುವೆ’ ಎಂದು ರುದ್ರನನ್ನು ಕುರಿತು ಯಾವ ಕಾರಣಕ್ಕೆ ಹೇಳಲ್ಪಟ್ಟಿತ್ತೋ,  ಆ ಕಾರಣದಿಂದ ಹನ್ನೆರಡು ವರ್ಷಗಳ ತಪಸ್ಸನ್ನು ಮಾಡುವ ಸಲುವಾಗಿ  ಶ್ರೀಕೃಷ್ಣನು ಒಂದೇ ದಿವಸದಲ್ಲಿ ಬೃಹಸ್ಪತಿಯನ್ನು ತನ್ನ ಆಜ್ಞೆಯಿಂದ ಕೂಡಲೇ ಹನ್ನೆರಡು ರಾಶಿಗಳಲ್ಲಿ ಓಡಾಡಿಸಿದ. ಅದರಿಂದ ಆ ಒಂದು ದಿವಸವು ಕೇಶವನ ಇಚ್ಛೆಯಿಂದ ಹನ್ನೆರಡು ವರ್ಷಗಳಂತೆ ಪರಿಗಣಿತವಾಯಿತು.

[ಆಚಾರ್ಯರ ಈ ವಿವರಣೆಯಿಂದ  ಅನೇಕ  ವಿರೋಧ ಪರಿಹಾರವಾಗುತ್ತದೆ. ಭಾಗವತದಲ್ಲಿ ‘ಮೂರು ದಿನ ಹೋಗಿ ಬಂದ’ ಎಂದು ಹೇಳಿದಂತೆ ಕಾಣುತ್ತದೆ. ಹರಿವಂಶ ಹಾಗೂ ಇತರ ಕಡೆ ‘ಹನ್ನೆರಡು ವರ್ಷ ತಪಸ್ಸು ಮಾಡಿದ’ ಎಂದು ಹೇಳಿದಂತೆ ಕಾಣುತ್ತದೆ. ಪಾಂಡವರು ಕಾಡಿಗೆ ಹೋದಮೇಲೆ ಶ್ರೀಕೃಷ್ಣ ಹನ್ನೆರಡು ವರ್ಷ ತಪಸ್ಸು ಮಾಡಿದ ಎಂದು ತೆಗೆದುಕೊಂಡರೆ ವನಪರ್ವದ ವಿವರಣೆಗೆ ವಿರೋಧ ಬರುತ್ತದೆ. ಏಕೆಂದರೆ ಪಾಂಡವರು ಕಾಡಿನಲ್ಲಿದ್ದಾಗ ಶ್ರೀಕೃಷ್ಣ ನಡುವೆ ಬಂದು ಹೋಗುವ ವಿವರವನ್ನು ನಾವು ಕಾಣುತ್ತೇವೆ. ಹೀಗಾಗಿ ಕೃಷ್ಣ ತಪಸ್ಸು ಮಾಡಿರುವುದು ಖಗೋಳಶಾಸ್ತ್ರೀಯವಾಗಿ ಹನ್ನೆರಡು ವರ್ಷವಾದರೆ, ಜೀವಶಾಸ್ತ್ರೀಯವಾಗಿ ಒಂದೇ ದಿನ. ಒಂದೊಂದು ರಾಶಿಯಲ್ಲಿ ಒಂದು ವರ್ಷ ಇರತಕ್ಕ ಬೃಹಸ್ಪತಿ, ಒಂದೇ ದಿನದಲ್ಲಿ ಹನ್ನೆರಡು ರಾಶಿಗಳನ್ನು ಸಂಚಾರ ಮಾಡಿದ್ದರಿಂದ ಆ ಒಂದು ದಿನ ಖಗೋಳಶಾಸ್ತ್ರೀಯವಾಗಿ ಹನ್ನೆರಡು ವರ್ಷಕ್ಕೆ ಸದೃಶವಾಯಿತು].  

 

ಏಕಸ್ಮಿನ್ನಹ್ನಿ ಭಗವಾನ್ ರಾಶಿಂರಾಶಿಂ ಚ ವತ್ಸರಮ್ ।

ಕಲ್ಪಯಿತ್ವೋಪವಾಸಾದೀನ್ ಮನಸಾ ನಿಯಮಾನಪಿ             ॥೨೨.೧೭೬॥

 

ಮಾಸಬ್ರತಂ ಸಾರ್ದ್ಧಶತಶ್ವಾಸಕಾಲೈರಕಲ್ಪಯತ್ ।

ಮನಸೈವ ಸ್ವಭಕ್ತಾನಾಂ ದ್ವಾದಶಾಬ್ದವ್ರತಾಪ್ತಯೇ                   ॥೨೨.೧೭೭॥

 

ಆ ಒಂದು ದಿವಸದಲ್ಲಿ ಶ್ರೀಕೃಷ್ಣನು ಕೆಲವೊಂದು ಉಸಿರುಗಳನ್ನು ವರ್ಷವೆಂದು ಕಲ್ಪಿಸಿ, ಉಪವಾಸ ಮೊದಲಾದ ನಿಯಮಗಳನ್ನು ಅನುಸರಿಸಿ ತೋರಿದ. ಹನ್ನೆರಡು ವರ್ಷದ ವ್ರತದ ಲಾಭವನ್ನು ತೋರಿಸುವುದಕ್ಕೋಸ್ಕರ ತನ್ನ ಮನಸ್ಸಿನಲ್ಲಿಯೇ ಶ್ವಾಸಕಾಲಗಳಿಂದ ಮಾಸಾತ್ಮಕ ವ್ರತವನ್ನು ಕಲ್ಪಿಸಿದ.

[ ಹರಿವಂಶದಲ್ಲಿ ಈ ಕುರಿತು ಹೀಗೆ ಹೇಳಿದ್ದಾರೆ: ‘ಏಕಸ್ಮಿನ್ನೇಕದಾ ಮಾಸೇ ಭುಞ್ಜಾನೋ ನಿಯತಾತ್ಮವಾನ್ । ದ್ವಿತೀಯೇ ತ್ವಥ ಪರ್ಯಾಯೇ  ಭುಞ್ಜನ್ನೇಕೇನ ಕೇಶವಃ’ (ಭ. ಪ. ೮೪.೨೫)

ಮೇಲೆ ಹೇಳಿದ ಮಾಸಾತ್ಮಕ ವ್ರತದ ಸಮಯವನ್ನು  ಈರೀತಿ ಹೊಂದಿಸಿ ನೋಡಬಹುದು: ಒಂದು ದಿವಸ ಎಂದರೆ ೨೧,೬೦೦ ಉಸಿರುಗಳು. ಒಂದು ದಿನವನ್ನು ಹನ್ನೆರಡು ವರ್ಷ ಎಂದು ಕಲ್ಪಿಸಿದಾಗ ಒಂದು ವರ್ಷ ಎಂದರೆ ೧೮೦೦ ಉಸಿರು. ಒಂದು ತಿಂಗಳು ಎಂದರೆ ೧೫೦ ಉಸಿರು. ಹೀಗೆ ಆ ಒಂದು ದಿವಸವನ್ನು ಹನ್ನೆರಡು ವರ್ಷವೆಂಬಂತೆ ಪರಿಗಣಿಸಿ, ಉಸಿರಿನ ಮಾಪನದಂತೆ ಮಾಸವನ್ನು ಪರಿಗಣಿಸಿ, ಆ ಮಾಸಮಾಸಗಳಲ್ಲಿ ಭಗವಂತ ಯಾಗ ಮಾಡಿದ. (ಇಲ್ಲಿ ದೇವರು ಹೇಗೆ ಯಾಗ ಮಾಡಿದ ಎನ್ನುವುದು ನಮಗೆ ತಿಳಿಯುತ್ತದೆ. ಭಗವಂತ ಅನುಸರಿಸಿದ ಉಸಿರಿನ ಕಾಲವನ್ನು ನಾವು ಮಾಸ ಕಾಲಕ್ಕೆ ವಿಸ್ತರಿಸಿಕೊಂಡು ಆ ಪ್ರಕಾರ ಅನುಷ್ಠಾನವನ್ನು ಮಾಡಬೇಕು) ]

 

ತತ್ರಾಸ್ಯ ಗರುಡಾದ್ಯಾಶ್ಚ ಪರಿಚರ್ಯ್ಯಾಂ ಸ್ವಪಾರ್ಷದಾಃ ।

ಚಕ್ರುರ್ಹೋಮಾದಿಕಾಶ್ಚೈವ ಕ್ರಿಯಾಶ್ಚಕ್ರೇ ಜನಾರ್ದ್ದನಃ ।

ಸ್ವಾತ್ಮಾನಂ ಪ್ರತಿ ಪಾಪಾನಾಂ ಶಿವಾಯೇತಿ ಪ್ರಕಾಶಯನ್ ॥೨೨.೧೭೮॥

 

ಆ ಸಂದರ್ಭದಲ್ಲಿ ಗರುಡನೇ ಮೊದಲಾದ ಪರಮಾತ್ಮನ ಸೇವಕರು ಭಗವಂತನ ಸೇವೆಯನ್ನು ಮಾಡಿದರು. ಪಾಪಿಷ್ಠರಿಗೆ ‘ಶಿವನನ್ನುದ್ದೇಶಿಸಿ ತಪಸ್ಸು ಮಾಡಿದೆ’ ಎಂದು ತೋರಿಸಲು ಕೃಷ್ಣ ಹೋಮ ಮೊದಲಾದ ಕ್ರಿಯೆಗಳಿಂದ ತನ್ನನ್ನು ತಾನೇ ಪೂಜೆ ಮಾಡಿಕೊಂಡ. (ಆದರೆ ಕಾಣುವವರಿಗೆ ಅದು ಸದಾಶಿವನ ಪೂಜೆ ಎನ್ನುವಂತೆ ಕಾಣುತ್ತಿತ್ತು).

[ಹರಿವಂಶದಲ್ಲಿ ಯಾರು ಭಗವಂತನ ಸೇವೆ ಮಾಡಿದರು ಎನ್ನುವ ವಿವರ ಕಾಣಸಿಗುತ್ತದೆ: ‘ಗರುಡಃ ಕಾಶ್ಯಪಸುತ ಇನ್ಧನಾನಿ ಸಮಾಚಿನೋತ್  । ಹೋಮಾರ್ಥಂ ವಾಸುದೇವಸ್ಯ ಚರತಸ್ತಪ ಉತ್ತಮಮ್ । ಚಕ್ರರಾಜೋSಥ ಪುಷ್ಪಾಣಿ ಸಞ್ಚಿನೋತಿ ತದಾ ಹರೇಃ । ದಿಕ್ಷು ಸರ್ವಾಸು ಸರ್ವತ್ರ  ರರಕ್ಷ ಜಲಜಸ್ತದಾ । ಖಡ್ಗ ಆಹೃತ್ಯ ಯತ್ನೇನ ಕುಶಾನ್ ಸುಬಹು ಶಸ್ತದಾ ।  ಗದಾ ಕೌಮೋದಕೀ ಚೈವ ಪರಿಚರ್ಯಾಂ  ಚಕಾರ ಹ ಧನುಃಪ್ರವರಮತ್ಯುಗ್ರಂ ಶಾಙ್ಗಂ ದಾನವಭೀಷಣಮ್ । ಸ್ಥಿತಂ ಹಿ ಪುರುತಸ್ತಸ್ಯ ಯಥೇಷ್ಟಂ ಭೃತ್ಯವತ್ ಸ್ವಯಮ್’ (೮೩.೨೦-೨೩) ‘ಜುಹೋತಿ ಭಗವಾನ್ ವಿಷ್ಣುರೇಧೋಭಿರ್ಬಹುಭಿಃ ಸದಾ । ಆಜ್ಯಾದಿಭಿಸ್ತದಾ ಹವ್ಯೈರಗ್ನಿಂ ಸಮ್ಪೂಜ್ಯ ಮಾಧವಃ’ (೨೪). ಈ ಮಾತಿನ ಸಾರವನ್ನು ಆಚಾರ್ಯರು ಸಾರ ಸಂಗ್ರಹವಾಗಿ ಸೇವೆಯನ್ನು ಎಲ್ಲರೂ ಕೂಡಾ ಮಾಡಿದರು ಎಂದು ಹೇಳಿದ್ದಾರೆ. ಗರುಡ ಕಟ್ಟಿಗೆಗಳನ್ನು ತಂದ. ಸಾಕ್ಷಾತ್ ಕಾಮದೇವ ಪುಷ್ಪಗಳನ್ನು ತಂದ. ಶಂಖಾಭಿಮಾನಿ ಅನಿರುದ್ಧ ಎಲ್ಲಾ ದಿಕ್ಕುಗಳಲ್ಲಿ ರಕ್ಷಿಸಿದ. ಶಾರ್ಙ್ಗ ಅಭಿಮಾನಿನಿಯಾದ ಲಕ್ಷ್ಮೀದೇವಿಯೂ ಕೂಡಾ ದರ್ಭೆ ಮೊದಲಾದವುಗಳನ್ನು ತಂದು, ಎಲ್ಲಾ ಸೇವಯನ್ನು ಮಾಡಿದಳು].

 

ಏವಂ ಸ್ಥಿತಂ ತಮರವಿನ್ದದಲಾಯತಾಕ್ಷಂ ಬ್ರಹ್ಮೇನ್ದ್ರಪೂರ್ವಸುರಯೋಗಿವರಪ್ರಜೇಶಾಃ ।

ಅಭ್ಯಾಯಯುಃ ಪಿತೃಮುನೀನ್ದ್ರಗಣೈಃ ಸಮೇತಾ ಗನ್ಧರ್ವಸಿದ್ಧವರಯಕ್ಷವಿಹಙ್ಗಮಾದ್ಯಾಃ ॥೨೨.೧೭೯॥

 

ಈರೀತಿಯಾಗಿ ತಪಸ್ಸಿನಲ್ಲಿರುವ, ಕಮಲದಂತೆ ಕಣ್ಗಳುಳ್ಳ ಆ ಪರಮಾತ್ಮನಲ್ಲಿಗೆ ಬ್ರಹ್ಮ-ಇಂದ್ರ ಮೊದಲಾಗಿರುವ ಎಲ್ಲಾ ದೇವತೆಗಳೂ, ಪಿತೃದೇವತೆಗಳು, ಪ್ರಜಾಪತಿಗಳು, ಬ್ರಹ್ಮರ್ಷಿಗಳು ಮೊದಲಾದವರ ಸಮೂಹದಿಂದ ಕೂಡಿದವರಾಗಿ  ಗಂಧರ್ವರು, ಸಿದ್ಧರು, ಯಕ್ಷರು ಎಲ್ಲರೂ ಕೂಡಾ ಬಂದರು.

 

ಶರ್ವೋsಪಿ ಸರ್ವಸುರದೈವತಮಾತ್ಮದೈವಮಾಯಾತಮಾತ್ಮಗೃಹಸನ್ನಿಧಿಮಾಶ್ವವೇತ್ಯ ।

ಅಭ್ಯಾಯಯೌ ನಿಜಗಣೈಃ ಸಹಿತಃ ಸಭಾರ್ಯ್ಯೋ ಭಕ್ತ್ಯಾsತಿಸಮ್ಭ್ರಮಗೃಹೀತಸಮರ್ಹಣಾಗ್ರ್ಯಃ ॥೨೨.೧೮೦॥

 

ಎಲ್ಲಾ ದೇವತೆಗಳ  ಮನದೇವರಾದ, ತನ್ನ ದೈವವೂ ಆಗಿರುವ ಪರಮಾತ್ಮನು ತನ್ನ ಮನೆಯ ಸನ್ನಿಧಿಗೆ (ಕೈಲಾಸ ಪರ್ವತದ ಸನ್ನಿಧಿಗೆ) ಬಂದಿದ್ದಾನೆ ಎಂದು ತಿಳಿದ ರುದ್ರನೂ ಕೂಡಾ, ಭೂತಗಣಗಳಿಂದ ಕೂಡಿಕೊಂಡು, ಪತ್ನಿಯೊಂದಿಗೆ ಅತ್ಯಂತ ಸಂಭ್ರಮದಿಂದ ಎಲ್ಲಾ ಪೂಜಾ ಸಾಮಗ್ರಿಗಳೊಂದಿಗೆ ಬಂದು ಭಕ್ತಿಯಿಂದ ಪರಮಾತ್ಮನನ್ನು ಎದುರುಗೊಂಡ.

[ ಹರಿವಂಶದಲ್ಲಿ ಈ ವಿವರ ಕಾಣಸಿಗುತ್ತದೆ: ‘ದ್ರಷ್ಟುಂ ಹರಿಂ ಲೋಕಹಿತೈಷಿಣಂ ಪ್ರಭುಂ ಯಯೌ ಭವಾನ್ಯಾ ಸಹ ಭೂತಸಙ್ಘೈಃ’ (೮೫.೯)]

Saturday, June 11, 2022

Mahabharata Tatparya Nirnaya Kannada 22: 167-172

 

ರಾತ್ರೌ ಕೃಷ್ಣೇ ಮುನಿಮದ್ಧ್ಯೇ ನಿವಿಷ್ಟೇ ಘಣ್ಟಾಕರ್ಣ್ಣಃ  ಕರ್ಣ್ಣನಾಮಾ ಪಿಶಾಚೌ ।

ಸಮಾಯಾತಾಂ ಗಿರಿಶೇನ ಪ್ರದಿಷ್ಟೌ ಕೃಷ್ಣಂ ದ್ರಷ್ಟುಂ ದ್ವಾರಕಾಂ ಗನ್ತುಕಾಮೌ ॥೨೨.೧೬೭॥

 

ಆ ರಾತ್ರಿಯಲ್ಲಿ ಕೃಷ್ಣನು ಮುನಿಗಳ ನಡುವಿನಲ್ಲಿ ಇರಲು, ಘಣ್ಟಾಕರ್ಣ ಮತ್ತು ಕರ್ಣ ಎಂಬ ಹೆಸರಿನ ಎರಡು ಪಿಶಾಚಿಗಳು, ಸದಾಶಿವನ ಆದೇಶಕ್ಕೆ ಒಳಗಾಗಿ, ಕೃಷ್ಣನನ್ನು ಕಾಣಲು ದ್ವಾರಕೆಗೆ ತೆರಳಲು ಇಚ್ಛೆಯುಳ್ಳವರಾಗಿ ಬದರಿಕಾಶ್ರಮಕ್ಕೆ ಬಂದವು.

 

ತೌ ದೃಷ್ಟ್ವಾ ಮುನಿಮದ್ಧ್ಯಸ್ಥಂ ಕೇಶವಂ ತದಬೋಧತಃ ।

ಕೃತ್ವಾ ಸ್ವಜಾತಿಚೇಷ್ಟಾಶ್ಚ ದ್ಧ್ಯಾನೇನೈನಮಪಶ್ಯತಾಮ್             ॥೨೨.೧೬೮॥

 

ಆ ಎರಡು ಪಿಶಾಚಿಗಳು ಮುನಿಗಳ ನಡುವೆ ಇರುವ ಕೃಷ್ಣನನ್ನು ನೋಡಿ, ಅಜ್ಞಾನದಿಂದ ಸ್ವಜಾತಿ ಚೇಷ್ಟೆಗಳನ್ನು  ಮಾಡಿದವು. ನಂತರ ಧ್ಯಾನದಲ್ಲಿ ಕೃಷ್ಣ ಯಾರು ಎನ್ನುವುದನ್ನು ತಿಳಿದವು.

 

ದೃಷ್ಟ್ವಾ ಹೃದಿ ಸ್ಥಿತಂ ತಂ ತು ಕೌತೂಹಲಸಮನ್ವಿತೌ ।

ಸ್ತುತ್ವಾ ಭಕ್ತ್ಯಾ ಪ್ರಣಾಮಂ ಚ ಬಹುಶಶ್ಚಕ್ರತುಃ ಶುಭೌ                  ॥೨೨.೧೬೯॥

 

ತಮ್ಮ ಹೃದಯದಲ್ಲಿ ಇರುವ ಕೃಷ್ಣನನ್ನು ಅತ್ಯಂತ ಕುತೂಹಲದಿಂದ ಕಂಡ ಆ ಪಿಶಾಚಿಗಳು, ಸ್ತೋತ್ರಮಾಡಿ, ಭಕ್ತಿಯಿಂದ ಬಹಳ ಸಲ ನಮಸ್ಕಾರ ಮಾಡಿದವು.

 

ತಯೋಃ ಪ್ರಸನ್ನೋ ಭಗವಾನ್ ಸ್ಪೃಷ್ಟ್ವಾ ಗನ್ಧರ್ವಸತ್ತಮೌ ।

ಚಕಾರ ಕ್ಷಣಮಾತ್ರೇಣ ದಿವ್ಯರೂಪಸ್ವರಾನ್ವಿತೌ                         ॥೨೨.೧೭೦॥

 

ಅವರಿಬ್ಬರಿಗೆ ಪ್ರಸನ್ನನಾದ ಭಗವಂತನು, ಆ ಪಿಶಾಚಿಗಳನ್ನು ಮುಟ್ಟಿ, ಕ್ಷಣಮಾತ್ರದಲ್ಲಿ ಅಲೌಕಿಕವಾದ ರೂಪ ಹಾಗೂ ಸ್ವರದಿಂದ ಕೂಡಿರುವ ಗಂಧರ್ವರನ್ನಾಗಿ ಮಾಡಿದನು.

 

ತಾಭ್ಯಾಂ ಪುನರ್ನ್ನೃತ್ತಗೀತಸಂಸ್ತವೈಃ ಪೂಜಿತಃ ಪ್ರಭುಃ ।

ಯಯೌ ಕೈಲಾಸಮದ್ರೀಶಂ ಚಕಾರೇವ ತಪೋSತ್ರ ಚ             ॥೨೨.೧೭೧॥

 

ಅವರಿಬ್ಬರ ಕುಣಿತ, ಹಾಡು, ಸ್ತೋತ್ರಗಳಿಂದ ಪೂಜಿತನಾದ ಸರ್ವಸಮರ್ಥನಾದ ಕೃಷ್ಣನು, ಬೆಟ್ಟಗಳಲ್ಲಿಯೇ ಶ್ರೇಷ್ಠವಾದ ಕೈಲಾಸ ಪರ್ವತವನ್ನು ಕುರಿತು ತೆರಳಿದ ಮತ್ತು ಅಲ್ಲಿ ತಪಸ್ಸನ್ನು ಮಾಡಿದಂತೆ ತೋರಿಸಿದ.

 

ಸ್ವೀಯಾನೇವ ಗುಣಾನ್ ವಿಷ್ಣುರ್ಭುಞ್ಜನ್ ನಿತ್ಯೇನ ಶೋಚಿಷಾ ।

ಶಾರ್ವಂ ತಪಃ ಕರೋತೀವ ಮೋಹಯಾಮಾಸ ದುರ್ಜ್ಜನಾನ್             ॥೨೨.೧೭೨॥

 

ವಿಷ್ಣುವು ತನ್ನ ಒಳಗಿನ ಗುಣವನ್ನೇ ನಿತ್ಯವಾಗಿರುವ ಜ್ಞಾನದಿಂದ ಅನುಭವಿಸುತ್ತಾ  (ತನ್ನ ಗುಣಗಳಿಂದಲೇ ಆನಂದಿಸುತ್ತಾ) ರುದ್ರದೇವರನ್ನು ಕುರಿತಾದ ತಪಸ್ಸನ್ನು ಮಾಡುತ್ತಿರುವನೋ ಎಂಬಂತೆ ದುರ್ಜನರನ್ನು ಮೋಹಗೊಳಿಸಿದ.