ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 7, 2018

Mahabharata Tatparya Nirnaya Kannada 10.09-10.12


ಕೃತಶ್ಚ ಕದ್ರ್ವಾಸ್ತನಯೋsತ್ರ ವಾಸುಕಿರ್ನ್ನೇತ್ರಂ ತ್ವಯಾ ಕಶ್ಯಪಜಃ ಸ ನಾಗರಾಟ್
ಮಮನ್ಥುರಬ್ಧಿಂ ಸಹಿತಾಸ್ತ್ವಯಾ ಸುರಾಃ ಸಹಾಸುರಾ ದಿವ್ಯಪಯೋ ಘೃತಾಧಿಕಮ್ ೧೦.೦೯

ಓ ಪರಮಾತ್ಮನೇ, ನಿನ್ನಿಂದಾಗಿ   ಸಮುದ್ರಮಥನದಲ್ಲಿ ಕದ್ರು ಮತ್ತು ಕಶ್ಯಪರ ದಾಂಪತ್ಯದಲ್ಲಿ ಹುಟ್ಟಿರುವ, ನಾಗರ ಒಡೆಯನಾದ ವಾಸುಕಿಯು ಹಗ್ಗವಾಗಿ ಬಳಸಲ್ಪಟ್ಟನು  (ವಾಸುಕಿಯನ್ನು ಹಗ್ಗದಂತೆ ಬಳಸಿ ಕಡಲನ್ನು ಕಡೆದರು). ನಿನ್ನಿಂದಾಗಿ ದೈತ್ಯರಿಂದೊಡಗೂಡಿದ ದೇವತೆಗಳು ಅಲೌಕಿಕವಾಗಿರುವ, ತುಪ್ಪದಂತೆ ಸಾಂದ್ರತೆಯನ್ನು ಹೊಂದಿರುವ  ಆ ಹಾಲನ್ನು  ಕಡೆದರು[ತಥಾಚ: ದೇವತೆಗಳು ಮತ್ತು ದೈತ್ಯರು ಪರಮಾತ್ಮನ ಜೊತೆಗೇ ಕ್ಷೀರ ಸಮುದ್ರವನ್ನು, ಮಂದರವೇ ಕಡಗೋಲಾಗಿ, ವಾಸುಕಿಯನ್ನು ಹಗ್ಗವಾಗಿ ಬಳಸಿ  ಕಡೆದರು]  

ನೈಚ್ಛನ್ತ ಪುಚ್ಛಂ ದಿತಿಜಾ ಅಮಙ್ಗಲಂ ತದಿತ್ಯಥಾಗ್ರಂ ಜಗೃಹುರ್ವಿಷೋಲ್ಬಣಮ್
ಶ್ರಾನ್ತಾಶ್ಚ ತೇsತೋ ವಿಬುಧಾಸ್ತು ಪುಚ್ಛಂ ತ್ವಯಾ ಸಮೇತಾ ಜಗೃಹುಸ್ತ್ವದಾಶ್ರಯಾಃ ೧೦.೧೦

ಹೀಗೆ ಕಡೆಯುವಾಗ  ದೈತ್ಯರು ಅಮಂಗಲ ಎಂದು ಭಾವಿಸಿ, ಬಾಲವನ್ನು ಬಯಸದೇ, ವಿಷದಿಂದ ಕೂಡಿರುವ ವಾಸುಕಿಯ ಮುಂಭಾಗವನ್ನು ಹಿಡಿದರು. ಆ ಕಾರಣದಿಂದ ದೈತ್ಯರು ಆಯಾಸಗೊಂಡರು. (ಮುಂಭಾಗದಿಂದ ಹಾವಿನ ವಿಷ ಅವರನ್ನು ಸ್ಪರ್ಶಿಸುತ್ತಿತ್ತು) . ನಿನ್ನಿಂದ ಸಹಿತರಾದ,  ನಿನ್ನನ್ನೇ ಆಶ್ರಯವಾಗಿ ಹೊಂದಿರುವ(ನಿನ್ನ ಭಕ್ತರಾದ) ದೇವತೆಗಳು ಬಾಲವನ್ನು ಹಿಡಿದರು.

ಅಥಾತಿಭಾರಾದವಿಶತ್ ಸುಕಾಞ್ಚನೋ ಗಿರಿಃ ಸ ಪಾತಾಳಮಥ ತ್ವಮೇವ
ತಂ ಕಚ್ಛಪಾತ್ಮಾ ತ್ವಭರಃ ಸ್ವಪೃಷ್ಠೇ ಹ್ಯನನ್ಯಧಾರ್ಯ್ಯಂ ಪುರುಲೀಲಯೈವ ೧೦.೧೧

ತದನಂತರ, ಬಂಗಾರಮಯವಾದ  ಆ ಬೆಟ್ಟವು  ಅತ್ಯಂತ ಒತ್ತಡ ಬಿದ್ದುದರಿಂದ ಪಾತಾಳದತ್ತ ಕುಸಿಯಲಾರಂಭಿಸಿತು. ಆಗ  ನೀನೇ, ಯಾರಿಗೂ ಹೊರಲಾಗದ ಆ ಪರ್ವತವನ್ನು ಅತ್ಯಂತ ಲೀಲೆಯಿಂದ, ಕೂರ್ಮಾವತಾರವನ್ನು ತಾಳಿ, ನಿನ್ನ ಬೆನ್ನಿನ ಮೇಲೆ ಹೊತ್ತೆಯಷ್ಟೇ.

ಉಪರ್ಯ್ಯಧಶ್ಚಾsತ್ಮನಿ ನೇತ್ರಗೋತ್ರಯೋಸ್ತ್ವಯಾ ಪರೇಣಾsವಿಶತಾ ಸಮೇಧಿತಾಃ
ಮಮಂಥುರಬ್ಧಿಂ ತರಸಾ ಮದೋತ್ಕಟಾಃ ಸುರಾಸುರಾಃ ಕ್ಷೋಭಿತನಕ್ರಚಕ್ರಮ್ ೧೦.೧೨

ಹಗ್ಗ ಮತ್ತು ಪರ್ವತಗಳೆರಡರಲ್ಲೂ(ಪರ್ವತದ ಮೇಲೆ ಮತ್ತು  ಪರ್ವತದ ಕೆಳಗೂ) ನೀನು  ಪ್ರವೇಶಿಸಿದ್ದುದರಿಂದ , ಎಲ್ಲರ ಅಂತರ್ಯಾಮಿಯಾಗಿಯೂ ಕೂಡಾ ನೀನು ಪ್ರವೇಶ ಮಾಡಿದುದರಿಂದ, ಬಲದಿಂದ ಕೂಡಿರುವ ದೇವತೆಗಳು ಮತ್ತು ದೈತ್ಯರು, ಜಲಚರ ಪ್ರಾಣಿಗಳಿಂದ ಕೂಡಿದ ಆ ಸಮುದ್ರವನ್ನು ವೇಗದಿಂದ ಕಡೆದರು.[ ಕಡಲಿನಲ್ಲಿ ಆ ಬೆಟ್ಟವನ್ನು ಇಟ್ಟಿದ್ದರು. ಬೆಟ್ಟಕ್ಕೆ ಆ ಹಾವನ್ನು ಸುತ್ತಿದ್ದರು. ಆ ಹಾವಿನ ಒಳಗೆ ಭಗವಂತ ಸನ್ನಿಹಿತನಾಗಿದ್ದ. ಆದ್ದರಿಂದ ಅದು ತುಂಡಾಗಲಿಲ್ಲಾ.  ಇನ್ನು ಪರ್ವತದ ಒಳಗೂ ಭಗವಂತ ಸನ್ನಿಹಿತನಾಗಿದ್ದ. ಕೂರ್ಮರೂಪಿಯಾಗಿ ಪರ್ವತದ ಕೆಳಭಾಗದಲ್ಲಿ ಭಗವಂತ ಪರ್ವತವನ್ನು ಬೆನ್ನಿನ ಮೇಲೆ ಹೊತ್ತು ನಿಂತಿದ್ದ.  ಹೀಗೆ ಮದೋತ್ಕಟರಾಗಿ ದೇವತೆಗಳು ಹಾಗು ದೈತ್ಯರು ಕಡಲನ್ನು ಕಡೆದರು].

No comments:

Post a Comment