ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, September 10, 2018

Mahabharata Tatparya Nirnaya Kannada 10.28-10.32


ಇತಿ ಪ್ರಹಸ್ಯಾಭಿಹಿತಂ ನಿಶಮ್ಯ ಸ್ತ್ರೀಭಾವಮುಗ್ಧಾಸ್ತು ತಥೇತಿ ತೇsವದನ್
ತತಶ್ಚ ಸಂಸ್ಥಾಪ್ಯ ಪೃಥಕ್ ಸುರಾಸುರಾಂಸ್ತವಾತಿರೂಪೋಚ್ಚಲಿತಾನ್ ಸುರೇತರಾನ್ ೧೦.೨೮

ಸರ್ವಾನ್ ಭವದ್ದರ್ಶಿನ ಈಕ್ಷ್ಯ ಲಜ್ಜಿತಾsಸ್ಮ್ಯಹಂ ದೃಶೋ ಮೀಲಯತೇತ್ಯವೋಚಃ
ನಿಮೀಲಿತಾಕ್ಷೇಷ್ವಸುರೇಷು ದೇವತಾ ನ್ಯಪಾಯಯಃ ಸಾಧ್ವಮೃತಂ ತತಃ ಪುಮಾನ್ ೧೦.೨೯

ಈರೀತಿಯಾಗಿ ನೀನು ಮುಗುಳ್ನಗುತ್ತಾ ಹೇಳಿದ್ದನ್ನು ಕೇಳಿ, ನಿನ್ನಲ್ಲಿರುವ ಲಾವಣ್ಯದಿಂದ ಮುಗ್ಧರಾಗಿ, ‘ಹಾಗೆಯೇ ಆಗಲಿ’ ಎಂದೊಪ್ಪಿದರು ದೈತ್ಯರು.  ಆಗ ನೀನು ದೇವತೆಗಳು ಹಾಗು  ದೈತ್ಯರನ್ನು ಪ್ರತ್ಯೇಕವಾಗಿರಿಸಿದೆ. ನಿನ್ನ ರೂಪವನ್ನು ಕಾಮದ ಕಣ್ಣಿನಿಂದ ಕಾಣುತ್ತಿದ್ದ ದೈತ್ಯರನ್ನು ಕುರಿತು: ‘ನನ್ನನ್ನೇ ನೋಡುವ ನಿಮ್ಮಿಂದ ನನಗೆ ನಾಚಿಕೆಯಾಗುತ್ತಿದೆ. ನೀವು ನಿಮ್ಮ ಕಣ್ಗಳನ್ನು ಮುಚ್ಚಿ’ ಎಂದು ಹೇಳಿದೆ,  ಅಸುರರೆಲ್ಲಾ ಕಣ್ಮುಚ್ಚಿರಲು, ದೇವತೆಗಳಿಗೆ ಅಮೃತವನ್ನು ಕುಡಿಸಿದೆ.

ಕ್ಷಣೇನ ಭೂತ್ವಾ ಪಿಬತಃ ಸುಧಾಂ ಶಿರೋ ರಾಹೋರ್ನ್ನ್ಯಕೃನ್ತಶ್ಚ ಸುದರ್ಶನೇನ
ತೇನಾಮೃತಾರ್ತ್ಥಂ ಹಿ ಸಹಸ್ರಜನ್ಮಸು ಪ್ರತಪ್ಯ ಭೂಯಸ್ತಪ ಆರಿತೋ ವರಃ
ಸ್ವಯಮ್ಭುವಸ್ತೇನ ಭವಾನ್ ಕರೇsಸ್ಯ ಬಿನ್ದುಂ ಸುಧಾಂ ಪ್ರಾಸ್ಯ ಶಿರೋ ಜಹಾರ    ೧೦.೩೦

ಕ್ಷಣಮಾತ್ರದಲ್ಲಿ ಪುರುಷರೂಪದಿಂದ ಆವಿರ್ಭವಿಸಿ, ದೇವತೆಗಳ ಮಧ್ಯದಲ್ಲಿದ್ದು ಸುಧೆಯನ್ನು ಕುಡಿಯಲು ಬಯಸಿದ ರಾಹುವಿನ ಶಿರವನ್ನು ಸುದರ್ಶನದಿಂದ ಕತ್ತರಿಸಿದೆಯಷ್ಟೇ. (ಆದರೆ ಭಗವಂತ ಅಯೋಗ್ಯನಿಗೆ ಅಜ್ಞಾನದಿಂದ ಅಮೃತ ಕೊಟ್ಟಿರುವುದಲ್ಲ). ಆತ ಹಿಂದೆ ಅಮೃತಕ್ಕಾಗಿ ಸಾವಿರ ಜನ್ಮಗಳಲ್ಲಿ ಚನ್ನಾಗಿ ತಪಸ್ಸುಮಾಡಿ, ಸ್ವಯಂಭುವಿನಿಂದ(ಬ್ರಹ್ಮನಿಂದ) ವರವನ್ನು ಪಡೆದಿದ್ದ. ಬ್ರಹ್ಮನ ವರವನ್ನು ಗೌರವಿಸಿದ ನೀನು, ರಾಹುವಿನ ಕೈಯಲ್ಲಿ  ಸುಧಾ ಬಿಂದುವನ್ನು ಕೊಟ್ಟು, ತಲೆಯನ್ನು ಛೇದಿಸಿದೆ.

ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಟಮಥೋ ಸಬಾಹು
ಕ್ಷಿಪ್ತಃ ಕಬನ್ಧೋsಸ್ಯ ಶುಭೋದಸಾಗರೇ ತ್ವಯಾ ಸ್ಥಿತೋsದ್ಯಾಪಿ ಹಿ ತತ್ರ ಸಾಮೃತಃ       ೧೦.೩೧

ಆ ರಾಕ್ಷಸನ ಶಿರವು ದೇವತೆಗಳಿಂದ ಪ್ರವಿಷ್ಟವಾಗಿ ಗ್ರಹವಾಯಿತು.(ಆದ್ದರಿಂದ ರಾಹು ಎಂದರೆ ದೈತ್ಯ ಎಂದುಕೊಳ್ಳಬಾರದು. ಏಕೆಂದರೆ ರಾಹುವಿನ ತಲೆಯ ಒಳಗೆ ದೇವತೆಗಳ ಪ್ರವೇಶವಿರುವುದನ್ನು ನಾವು ತಿಳಿದಿರಬೇಕು). ಆತನ ದೇಹದ ಕೆಳಗಿನ ಭಾಗ  ನಿನ್ನಿಂದ ಶುಭೋದಸಾಗರಕ್ಕೆಸೆಯಲ್ಪಟ್ಟಿತು. ಅದು ಇಂದಿಗೂ ಕೂಡಾ  ಅಮೃತದಿಂದ ಕೂಡಿ  ಅಲ್ಲಿದೆ.

ಅಥಾಸುರಾಃ ಪ್ರತ್ಯಪತನ್ನುದಾಯುಧಾಃ ಸಮಸ್ತಶಸ್ತೇ ಚ ಹತಾಸ್ತ್ವಯಾ ರಣೇ
ಕಲಿಸ್ತು ಸ ಬ್ರಹ್ಮವರಾದಜೇಯೋ ಹ್ಯೃತೇ ಭವನ್ತಂ ಪುರುಷೇಷು ಸಂಸ್ಥಿತಃ ೧೦.೩೨


ತದನಂತರ  ದೈತ್ಯರೆಲ್ಲರು ತಮ್ಮ ಆಯುಧಗಳನ್ನು ಎತ್ತಿಕೊಂಡು ನಿನ್ನ ಎದುರಾಗಿ  ಬಂದರು.  ಹಾಗೆ ಬಂದ  ಅವರೆಲ್ಲರೂ ನಿನ್ನಿಂದ ಸಂಹರಿಸಲ್ಪಟ್ಟರು.  ಬ್ರಹ್ಮನ ವರದಿಂದ, ನಿನ್ನೊಬ್ಬನನ್ನು ಬಿಟ್ಟು ಇನ್ನೊಬ್ಬರಿಂದ ಗೆಲ್ಲಲಾಗದ ಕಲಿ, ನೀನು ಹಾಗು ಬ್ರಹ್ಮ-ವಾಯುವನ್ನು ಬಿಟ್ಟು  ಸಮಸ್ತ ಪುರುಷರಲ್ಲಿರುತ್ತಾನೆ. [ಇಲ್ಲಿ ಹೇಳಿದ 'ಬ್ರಹ್ಮ-ವಾಯುವನ್ನು ಬಿಟ್ಟು  ಇತರ ಸಮಸ್ತ ಪುರುಷರು'  ಎಂದರೆ: ಮನುಷ್ಯರು ಮತ್ತು ದೇವತೆಗಳು. ಸರ್ವಸಮರ್ಥನಾದ ಭಗವಂತನನ್ನು ಕಲಿ ಎದುರಿಸಲಾರ. ಅದೇ ರೀತಿ, ಚತುರ್ಮುಖನ ವರದಿಂದ ಅಜೇಯತ್ವವನ್ನು ಪಡೆದ ಕಲಿ,  ಚತುರ್ಮುಖನನ್ನು (ಮತ್ತು ಮುಖ್ಯಪ್ರಾಣನನ್ನು) ಎದುರಿಸಲು ಅಶಕ್ಯ. ಆದರೆ ಕಲಿಯ ಆವೇಶ ಮನುಷ್ಯರಲ್ಲಿ ಚನ್ನಾಗಿ ಇರುತ್ತದೆ. ದೇವತೆಗಳಲ್ಲೂ ಕೂಡಾ ಕೆಲವೊಮ್ಮೆ ಕಲ್ಯಾವೇಶದ  ಸಾಧ್ಯತೆಯನ್ನು ಇಲ್ಲಿ ಹೇಳಿದ್ದಾರೆ]      

No comments:

Post a Comment