ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 18, 2018

Mahabharata Tatparya Nirnaya Kannada 10.56-10.60



ಸ ಲೋಕಧರ್ಮ್ಮಾಭಿರಿರಕ್ಷಯಾ ಪಿತುರ್ದ್ದ್ವಿಜತ್ವಮಾಪ್ಯಾsಶು ಪಿತುರ್ದ್ದದೌ ನಿಜಮ್
ಜ್ಞಾನಂ ತಯೋಃ ಸಂಸ್ಮೃತಿಮಾತ್ರತಃ ಸದಾ ಪ್ರತ್ಯಕ್ಷಭಾವಂ ಪರಮಾತ್ಮನೋ ದದೌ ೧೦.೫೬

ವೇದವ್ಯಾಸರೂಪಿ ನಾರಾಯಣನು ಲೋಕದ ಧರ್ಮವನ್ನು ರಕ್ಷಿಸಬೇಕು ಎನ್ನುವ ಇಚ್ಛಿಯಿಂದ, ಶೀಘ್ರದಲ್ಲಿ ತಂದೆಯಿಂದ ಬ್ರಾಹ್ಮಣತ್ವವನ್ನು ಹೊಂದಿ(ಅಂದರೆ ಲೋಕದ ನಿಯಮದಂತೆ ತಂದೆಯಿಂದಲೇ ಉಪನಯನವನ್ನು ಮಾಡಿಸಿಕೊಂಡು), ತಂದೆಗೇ ಜ್ಞಾನವನ್ನು ಉಪದೇಶಿಸಿದನು.  ಸತ್ಯವತಿಗೆ ಮತ್ತು ಪರಾಶರರಿಗೆ ಜ್ಞಾನವನ್ನು ನೀಡಿದ್ದಲ್ಲದೇ, ‘ನೀವು ನೆನಪಿಸಿಕೊಂಡಾಗ ತಾನು  ಪ್ರತ್ಯಕ್ಷವಾಗುತ್ತೇನೆ’ ಎನ್ನುವ ವರವನ್ನೂ  ಅವರಿಗೆ ನೀಡಿದನು. 

ದ್ವೈಪಾಯನಃ ಸೋsಥ ಜಗಾಮ ಮೇರುಂ ಚತುರ್ಮ್ಮುಖಾದ್ಯೈರನುಗಮ್ಯಮಾನಃ
ಉದ್ಧೃತ್ಯ ವೇದಾನಖಿಲಾನ್ ಸುರೇಭ್ಯೋ ದದೌ ಮುನಿಭ್ಯಶ್ಚ ಯಥಾssದಿಸೃಷ್ಟೌ ೧೦.೫೭

ಆ ದ್ವೀಪದಲ್ಲಿ ಅವತರಿಸಿ ಬಂದ ವೇದವ್ಯಾಸರು, ಬ್ರಹ್ಮಾದಿ ದೇವತೆಗಳಿಂದ ಅನುಸರಿಸಲ್ಪಟ್ಟವರಾಗಿ, ಮೇರುವನ್ನು ಕುರಿತು ತೆರಳಿದರು. ಯಾವ ರೀತಿ ಆದಿ ಸೃಷ್ಟಿಯಲ್ಲಿ ಪರಮಾತ್ಮ ವೇದಾದಿ ವಿದ್ಯೆಗಳನ್ನು ಉಪದೇಶಿಸಿದ್ದನೋ ಹಾಗೇ, ಮತ್ತೆ ದೇವತೆಗಳಿಗೂ, ಶ್ರೇಷ್ಠ ಮುನಿಗಳಿಗೂ ಉಪದೇಶ ಮಾಡಿ,  ಅವರನ್ನು ಉದ್ಧರಿಸಿದನು.

ಸರ್ವಾಣಿ ಶಾಸ್ತ್ರಾಣಿ ತಥೈವ ಕೃತ್ವಾ ವಿನಿರ್ಣ್ಣಯಂ ಬ್ರಹ್ಮಸೂತ್ರಂ ಚಕಾರ
ತಚ್ಛುಶ್ರುವುರ್ಬ್ರಹ್ಮಗಿರೀಶಮುಖ್ಯಾಃ ಸುರಾ ಮುನೀನಾಂ ಪ್ರವರಾಶ್ಚ ತಸ್ಮಾತ್       ೧೦.೫೮

ಹಾಗೆಯೇ, ಎಲ್ಲಾ ಶಾಸ್ತ್ರಗಳನ್ನೂ ರಚನೆ ಮಾಡಿ, ಎಲ್ಲಾ ಶಾಸ್ತ್ರದ ನಿರ್ಣಯ ಎನಿಸಿಕೊಂಡಿರುವ ಬ್ರಹ್ಮಸೂತ್ರವನ್ನು ರಚಿಸಿದರು. ಬ್ರಹ್ಮ-ರುದ್ರ ಮೊದಲಾದ ದೇವತೆಗಳು, ಮುನಿ ಶ್ರೇಷ್ಠರೂ ಕೂಡಾ,  ವೇದವ್ಯಾಸರಿಂದ ಬ್ರಹ್ಮಸೂತ್ರವನ್ನು ಕೇಳಿದರು. (ಬ್ರಹ್ಮ-ರುದ್ರಾದಿ ದೇವತೆಗಳಿಗೆ  ಬ್ರಹ್ಮಸೂತ್ರವನ್ನು ವೇದವ್ಯಾಸರು ಉಪದೇಶ ಮಾಡಿದರು).

ಸಮಸ್ತಶಾಸ್ತ್ರಾರ್ತ್ಥನಿದರ್ಶನಾತ್ಮಕಂ ಚಕ್ರೇ ಮಹಾಭಾರತನಾಮಧೇಯಮ್
ವೇದೋತ್ತಮಂ ತಚ್ಚ ವಿಧಾತೃಶಙ್ಕರಪ್ರಧಾನಕೈಸ್ತನ್ಮುಖತಃ ಸುರೈಃ ಶ್ರುತಮ್     ೧೦.೫೯

ವೇದ ಮೊದಲಾದ ಎಲ್ಲಾ ಶಾಸ್ತ್ರಗಳು ಏನನ್ನು ಹೇಳುತ್ತವೋ,  ಅದಕ್ಕೆ ಉದಾಹರಣೆಯಾಗಿರುವ ವೇದಗಳಿಗೂ ಮಿಗಿಲಾದ ಮಹಾಭಾರತ ಎಂಬ ಹೆಸರಿನ ಗ್ರಂಥವನ್ನು ಭಗವಂತ ವೇದವ್ಯಾಸರೂಪದಿಂದ ಸಂಕಲಿಸಿದ. ಬ್ರಹ್ಮ-ರುದ್ರ ಮೊದಲಾದವರನ್ನೇ ಮುಖ್ಯವಾಗಿ ಹೊಂದಿರುವ ದೇವತೆಗಳಿಂದ ವೇದವ್ಯಾಸರ ಮುಖದಿಂದಲೇ ಅದು ಕೇಳಲ್ಪಟ್ಟಿತು. (ಬ್ರಹ್ಮಾದಿ ದೇವತೆಗಳಿಗೆ  ಮಹಾಭಾರತವನ್ನು  ವೇದವ್ಯಾಸರು ಉಪದೇಶ ಮಾಡಿದರು).

ಅಥೋ ಗಿರೀಶಾದಿಮನೋನುಶಾಯೀ ಕಲಿರ್ಮ್ಮಮಾರಾsಶು ಸುವಾಙ್ಮಯೈಃ ಶರೈಃ
ನಿಕೃತ್ತಶೀರ್ಷೋ ಭಗವನ್ಮುಖೇರಿತೈಃ ಸುರಾಶ್ಚ ಸಜ್ಜ್ಞಾನಸುಧಾರಸಂ ಪಪುಃ        ೧೦.೬೦

ತದನಂತರ, ರುದ್ರದೇವರೇ ಮೊದಲಾದ ದೇವತೆಗಳ ಮನಸ್ಸಿನಲ್ಲಿ ನೆಲೆಸಿರುವ ಕಲಿಯು, ಪರಮಾತ್ಮನ ಮುಖದಿಂದ ಹೇಳಲ್ಪಟ್ಟ  ಜ್ಞಾನವೆಂಬ ಬಾಣಗಳಿಂದ ತಲೆಯನ್ನು ಕಳೆದುಕೊಂಡವನಾಗಿ ಸತ್ತನು. ದೇವತೆಗಳಾದರೋ, ನಿರ್ಮಲವಾದ ಜ್ಞಾನವೆಂಬ ಅಮೃತವನ್ನು ಪಡೆದರು.

No comments:

Post a Comment