ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 13, 2018

Mahabharata Tatparya Nirnaya Kannada 10.42-10.46


ವಸಿಷ್ಠನಾಮಾ ಕಮಳೋದ್ಭವಾತ್ಮಜಃ ಸುತೋsಸ್ಯ ಶಕ್ತಿಸ್ತನಯಃ ಪರಾಶರಃ
ತಸ್ಯೋತ್ತಮಂ ಸೋsಪಿ ತಪೋsಚರದ್ಧರಿಃ ಸುತೋ ಮಮ ಸ್ಯಾದಿತಿ ತದ್ಧರಿರ್ದ್ದದೌ        ೧೦.೪೨

ಬ್ರಹ್ಮನ ಮಗ  ವಸಿಷ್ಠ. ವಸಿಷ್ಠರ ಮಗ ಶಕ್ತಿ ಎನ್ನುವ ಹೆಸರಿನವನು.  ಶಕ್ತಿಗೆ ಪರಾಶರನು ಮಗನು. ಈ ಪರಾಶರರು ನಾರಾಯಣನು ತನ್ನ ಮಗನಾಗಲಿ ಎಂದು  ಉತ್ಕೃಷ್ಟವಾದ ತಪಸ್ಸನ್ನು ಮಾಡಿದರು. ಶ್ರೀಹರಿಯು ಪರಾಶರರಿಗೆ ಅವರ ಅಭೀಷ್ಟವನ್ನು ಅನುಗ್ರಹಿಸಿದನು.

ಉವಾಚ ಚೈನಂ ಭಗವಾನ್ ಸುತೋಷಿತೋ ವಸೋರ್ಮ್ಮದೀಯಸ್ಯ ಸುತಾsಸ್ತಿ ಶೋಭನಾ
ವನೇ ಮೃಗಾರ್ತ್ಥಂ ಚರತೋsಸ್ಯ ವೀಯ್ಯಂ ಪಪಾತ ಭಾರ್ಯ್ಯಾಂ ಮನಸಾ ಗತಸ್ಯ   ೧೦.೪೩

ತಚ್ಛ್ಯೇನಹಸ್ತೇ ಪ್ರದದೌ ಸ ತಸ್ಯೈ ದಾತುಂ ತದನ್ಯೇನ ತು ಯುದ್ಧ್ಯತೋsಪತತ್
ಜಗ್ರಾಸ ತನ್ಮತ್ಸ್ಯವಧೂರ್ಯ್ಯಮಸ್ವಸುರ್ಜ್ಜಲಸ್ಥಮೇನಾಂ ಜಗೃಹುಶ್ಚ ದಾಶಾಃ    ೧೦.೪೪

ತದ್ಗರ್ಭತೋsಭೂನ್ಮಿಥುನಂ ಸ್ವರಾಜ್ಞೇ ನ್ಯವೇದಯನ್ ಸೋsಪಿ ವಸೋಃ ಸಮರ್ಪ್ಪಯತ್
ಪುತ್ರಂ ಸಮಾದಾಯ ಸುತಾಂ ಸ ತಸ್ಮೈ ದದೌ ಸುತೋsಭೂದಥ ಮತ್ಸ್ಯರಾಜಃ ೧೦.೪೫

ಕನ್ಯಾ ತು ಸಾ ದಾಶರಾಜಸ್ಯ ಸದ್ಮನ್ಯವರ್ದ್ಧತಾತೀವ ಸುರೂಪಯುಕ್ತಾ
ನಾಮ್ನಾ ಚ ಸಾ ಸತ್ಯವತೀತಿ ತಸ್ಯಾಂ ತವಾsತ್ಮಜೋsಹಂ ಭವಿತಾಸ್ಮ್ಯಜೋsಪಿ    ೧೦.೪೬

ಪರಾಶರರ ತಪಸ್ಸಿನಿಂದ ಅತ್ಯಂತ ಸಂತಸಗೊಂಡ ನಾರಾಯಣನು ಅವರನ್ನು  ಕುರಿತು ಹೀಗೆ ಹೇಳುತ್ತಾನೆ: “ನನ್ನ ಭಕ್ತನಾದ ವಸುರಾಜನಿಗೆ ಅತ್ತ್ಯಂತ ಸಾತ್ತ್ವಿಕಳಾದ ಮಗಳೊಬ್ಬಳಿದ್ದಾಳೆ. ಅವಳಲ್ಲಿ ನಿನ್ನ ಮಗನಾಗಿ ಅವತರಿಸುತ್ತೇನೆ” ಎಂದು.
ಆಕೆಯ ಉತ್ಪತ್ತಿಪೂರ್ವಕ ಕಥೆಯನ್ನು ಇಲ್ಲಿ ಹೇಳಲಾಗಿದೆ: ಒಮ್ಮೆ ಕಾಡಿನಲ್ಲಿ ಬೇಟೆಗೆಂದು ತಿರುಗುತ್ತಿದ್ದ ವಸುರಾಜ, ಕಾಡಿನ ಸೌಂದರ್ಯವನ್ನು ನೋಡಿ, ಮಾನಸಿಕವಾಗಿ ತನ್ನ ಹೆಂಡತಿಯನ್ನು ಸೇರಿದ. ಆಗ  ಆತನ ವೀರ್ಯ ಸ್ಕಲನಗೊಂಡಿತು.
ಈ ರೀತಿ ಸ್ಕಲನಗೊಂಡ ರೇತಸ್ಸನ್ನು  ವಸುವು ಗಿಡುಗದ ಕೈಯಲ್ಲಿ  ಕೊಟ್ಟು, ಅದನ್ನು  ತನ್ನ ಹೆಂಡತಿಗೆ ಕೊಡಲು ಹೇಳಿ ಕಳುಹಿಸಿದ.  ಗಿಡುಗ ಆ ರೇತಸ್ಸನ್ನು ಹೊತ್ತು ಆಕಾಶದಲ್ಲಿ ಸಾಗುತ್ತಿರುವಾಗ, ಇನ್ನೊಂದು ಗಿಡುಗ ಈ ಗಿಡುಗದೊಂದಿಗೆ ಯುದ್ಧಕ್ಕೆ ನಿಂತಿತು. ಹೀಗೆ ಯುದ್ಧ ಮಾಡುವಾಗ ಗಿಡುಗದ ಕೈಯಲ್ಲಿದ್ದ  ರೇತಸ್ಸು ಯಮುನಾ ನದಿಯ ನೀರಿನಲ್ಲಿ ಬಿದ್ದಿತು. ಆ ರೀತಿ ಬಿದ್ದ ರೇತಸ್ಸನ್ನು  ಒಂದು ಹೆಣ್ಣು ಮೀನು ನುಂಗಿತು. ಆ ಮೀನನ್ನು ಅಂಬಿಗರು ಹಿಡಿದರು.
ಆ ಮೀನಿನ ಹೊಟ್ಟೆಯಲ್ಲಿ ಬೆಸ್ತರು  ಅವಳಿ ಜವಳಿ ಮಕ್ಕಳಿರುವುದನ್ನು ಕಂಡರು ಮತ್ತು ಅದನ್ನು ಅವರು ತಮ್ಮ ಒಡೆಯನಾದ ದಾಶರಾಜನಿಗೆ ಒಪ್ಪಿಸಿದರು. ದಾಶರಾಜ ಆ ಮಕ್ಕಳನ್ನು ತನ್ನ ರಾಜನಾದ ವಸುವಿಗೇ ನಿವೇದನೆ ಮಾಡಿದನು. ಅವನಾದರೋ, ಗಂಡುಮಗುವನ್ನು ತಾನಿಟ್ಟುಕೊಂಡು,  ಮಗಳನ್ನು ದಾಶರಾಜನಿಗೆ ಕೊಟ್ಟನು. ಆ ಗಂಡುಮಗುವೇ ಮುಂದೆ  ಮತ್ಸ್ಯರಾಜನಾದ. ಅವನೇ ವಿರಾಟ.
ಭಗವಂತ ಹೇಳುತ್ತಾನೆ: “ಈ ಹೆಣ್ಣು ಮಗಳು ಅಂಬಿಗರ ಒಡೆಯನ ಮನೆಯಲ್ಲಿ ಬೆಳೆದಿದ್ದಾಳೆ. ಆಕೆ ಅತ್ಯಂತ ರೂಪವತಿ. ಅವಳ ಹೆಸರು ಸತ್ಯವತಿ. ನಿನ್ನ ಮೇಲಿನ ಅನುಗ್ರಹದಿಂದ ಹುಟ್ಟಿಲ್ಲದ ನಾನು ಅವಳಲ್ಲಿ ನಿನ್ನ ಮಗನಾಗಿ ಅವತರಿಸುತ್ತೇನೆ” ಎಂದು.

No comments:

Post a Comment