ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, September 17, 2018

Mahabharata Tatparya Nirnaya Kannada 10.52-10.55


[ಈ ರೀತಿ ವ್ಯಾಸರೂಪದಿಂದ ಭೂಮಿಯಲ್ಲಿ ಅವತರಿಸಿದ ಶ್ರೀಮನ್ನಾರಾಯಣನ ಸ್ವರೂಪ-ಸಾಮರ್ಥ್ಯದ ಸುಂದರ ಚಿತ್ರಣವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ:]

ಅಗಣ್ಯದಿವ್ಯೋರುಗುಣಾರ್ಣ್ಣವಃ ಪ್ರಭುಃ ಸಮಸ್ತವಿದ್ಯಾಧಿಪತಿರ್ಜ್ಜಗದ್ಗುರುಃ
ಅನನ್ತಶಕ್ತಿರ್ಜ್ಜಗದೀಶ್ವರೇಶ್ವರಃ ಸಮಸ್ತದೋಷಾತಿವಿದೂರವಿಗ್ರಹಃ         ೧೦.೫೨


ಶುಭಮರತಕವರ್ಣ್ಣೋ ರಕ್ತಪಾದಾಭ್ಜನೇತ್ರಾಧರಕರನಖರಸನಾಗ್ರಶ್ಚಕ್ರಶಙ್ಖಾಬ್ಜರೇಖಃ
ರವಿಕರವರಗೌರಂ ಚರ್ಮ್ಮ ಚೈಣಂ ವಸಾನಸ್ತಟಿದಮಲಜಟಾಸನ್ದೀಪ್ತಜೂಟಂ ದಧಾನಃ        ೧೦.೫೩

ಎಣಿಸಲಾಗದ, ಅಲೌಕಿಕವಾದ, ಉತ್ಕೃಷ್ಟವಾದ ಗುಣಗಳಿಗೆ ಕಡಲಿನಂತೆ ಇರುವವನು; ಸರ್ವಸಮರ್ಥನಾಗಿರುವವನು; ಎಲ್ಲಾ ವಿದ್ಯೆಗೆ ಅಧಿಪತಿಯಾಗಿರುವವನು; ಜಗತ್ತಿಗೇ ಉಪದೇಶಕನಾಗಿರುವವನು;  ಎಣೆಯಿಲ್ಲದ ಶಕ್ತಿ ಉಳ್ಳವನು; ಜಗತ್ತಿಗೆ ಒಡೆಯರಾದವರಿಗೇ ಒಡೆಯನಾಗಿರುವವನು; ಎಲ್ಲಾ ದೋಷದಿಂದ ದೂರವಾಗಿರುವ ಸ್ವರೂಪಭೂತವಾದ ಶರೀರವುಳ್ಳವನು; 
ಮರತಕಮಣಿಯಂತೆ ನೀಲಿಯಾದ ಮೈಬಣ್ಣ ಉಳ್ಳವನು; ಕೆಂಪಾಗಿರತಕ್ಕಂತಹ ಪಾದ, ಕಣ್ಣಿನ ತುದಿ, ತುಟಿ, ಕೈ, ನಾಲಿಗೆಯ ತುದಿ ಉಳ್ಳವನು; ಕೈಗಳಲ್ಲಿ ಮತ್ತು ಕಾಲಿನಲ್ಲಿ ಶಂಖ-ಚಕ್ರ-ಕಮಲದ ರೇಖೆಯುಳ್ಳವನು; ಸೂರ್ಯನ ಕಾಂತಿಯಂತೆ ಹಳದಿಯಾಗಿ,  ಜಿಂಕೆಯ ಚರ್ಮವನ್ನು ಹೊದ್ದು, ಮಿಂಚಿನಂತೆ ನಿರ್ಮಲವಾಗಿರುವ ಜಟಾಜೂಟವನ್ನು ಧರಿಸಿದವನಾಗಿ ಭಗವಂತ ಆವಿರ್ಭವಿಸಿದ.

ವಿಸ್ತೀರ್ಣ್ಣವಕ್ಷಾಃ  ಕಮಳಾಯತಾಕ್ಷೋ ಬೃಹದ್ಭುಜಃ ಕಮ್ಬುಸಮಾನಕಣ್ಠಃ
ಸಮಸ್ತವೇದಾನ್ ಮುಖತಃ ಸಮುದ್ಗಿರನ್ನನ್ತಚನ್ದ್ರಾಧಿಕಕಾನ್ತಸನ್ಮುಖಃ      ೧೦.೫೪

ಪ್ರಬೋಧಮುದ್ರಾಭಯದೋರ್ದ್ಧ್ವಯಾನ್ವಿತೋ ಯಜ್ಞೋಪವೀತಾಜಿನಮೇಖಲೋಲ್ಲಸನ್
ದೃಶಾ ಮಹಾಜ್ಞಾನಭುಜಙ್ಗದಷ್ಟಮುಜ್ಜೀವಯಾನೋ ಜಗದತ್ಯರೋಚತ ೧೦.೫೫

ಅಗಲವಾದ ವಕ್ಷಃಸ್ಥಳ; ತಾವರೆಯಂತಹ ವಿಶಾಲವಾದ ಕಣ್ಣು; ಅಗಲವಾದ ಭುಜ; ಶಂಖದಂತೆ ನುಣುಪಾದ ಕೊರಳು; ಸಮಸ್ತ ವೇದಗಳನ್ನು ಹುಟ್ಟುತ್ತಲೇ ಹೇಳುತ್ತಿದ್ದವನು; ಅಸಂಖ್ಯಾತ ಚಂದ್ರರಂತೆ ಸುಖವನ್ನು ಉಂಟುಮಾಡುವ ಮುಖವುಳ್ಳವನು;
ಜ್ಞಾನಮುದ್ರೆ ಮತ್ತು ಅಭಯಮುದ್ರೆಯಿಂದ ಯುಕ್ತನಾದವನು;  ಯಜ್ಞೋಪವೀತ,  ಕೃಷ್ಣಾಜಿನ, ಹೀಗೆ ಎಲ್ಲವುದರಿಂದ ಕಂಗೊಳಿಸುತ್ತಿರುವವನು;  ಅಜ್ಞಾನವೆಂಬ ಹಾವಿನಿಂದ ಕಚ್ಚಲ್ಪಟ್ಟ ಭಕ್ತ ಸಮೂಹವನ್ನು ತನ್ನ ಪ್ರಸನ್ನದೃಷ್ಟಿಯಿಂದ ಬದುಕಿಸುತ್ತಿರುವ ವೇದವ್ಯಾಸರೂಪಿ ಭಗವಂತ  ಶೋಭಿಸಿದನು.

No comments:

Post a Comment