ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 15, 2023

Mahabharata Tatparya Nirnaya Kannada 24-62-69

 

ಏಕೋsಪಿ ವಿಷ್ಣುಃ ಸ ತು ಭಾರ್ಗ್ಗವಾತ್ಮಾ ವ್ಯಾಸಃ ಸಶಿಷ್ಯಸ್ತದನನ್ಯದೃಶ್ಯಃ ।

ಯಯೌ ತದುಕ್ತೇರ್ಹಿ ಗುಣಾನ್ ಪ್ರವೇತ್ತುಂ ನಾನ್ಯೋ ಹಿ ಶಕ್ತಸ್ತಮೃತೇ ಯತಃ ಪ್ರಭುಮ್ ॥೨೪.೬೨॥

 

ಪರಶುರಾಮರೂಪಿ ಹಾಗೂ ವೇದವ್ಯಾಸರೂಪಿಯಾದ ಆ ಶ್ರೀಕೃಷ್ಣ ಒಬ್ಬನೇ ಆದರೂ,  ಪರಶುರಾಮ ಹಾಗೂ ವೇದವ್ಯಾಸರಿಂದ ಅನುಸರಿಸಲ್ಪಟ್ಟವನಾಗಿ, ಮೂರು ರೂಪದಿಂದ ಸಾಗಿದ. (ಏಕೆ ಹೀಗೆ ಎಂದರೆ-) ಶ್ರೀಕೃಷ್ಣ ಪರಮಾತ್ಮನ ಅಭಿಪ್ರಾಯವನ್ನು ಸಂಪೂರ್ಣವಾಗಿ ತಿಳಿದು ಅರ್ಥಮಾಡಿಕೊಳ್ಳಲು ಬೇರೊಬ್ಬರಿಗೆ ಶಕ್ತಿ ಇಲ್ಲವಷ್ಟೇ.  

 

ಸ ವನ್ದ್ಯಮಾನೋsಖಿಲರಾಷ್ಟ್ರವಾಸಿಭಿಃ ಪ್ರಸೂನವರ್ಷೈರಭಿವರ್ಷಿತಃ ಸುರೈಃ ।

ಸಂಸ್ತೂಯಮಾನಃ ಪ್ರಣತೋsಬ್ಜಜಾದಿಭಿರ್ಗ್ಗಜಾಹ್ವಯಂ ಪ್ರಾಪ ಪರೋSಪ್ರಮೇಯಃ ॥೨೪.೬೩॥

 

ಶ್ರೀಕೃಷ್ಣ ಪರಮಾತ್ಮನು ಎಲ್ಲಾ ರಾಷ್ಟ್ರವಾಸಿಗಳಿಂದ  ನಮಿಸಲ್ಪಟ್ಟವನಾಗಿ, ದೇವತೆಗಳ ಪುಷ್ಪವೃಷ್ಟಿಗೆ ಒಳಗಾಗಿ, ಬ್ರಹ್ಮ-ಮೊದಲಾದ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟು ನಮಸ್ಕರಿಸಲ್ಪಟ್ಟವನಾಗಿ ಹಸ್ತಿನಪುರವನ್ನು ಹೊಂದಿದನು.

 

ಸ ಭೀಷ್ಮಮುಖ್ಯೈಃ ಸರಸಾಭಿಯಾತಃ ಸಹೈವ ತೈಃ ಪ್ರಯಯೌ ರಾಜಮಾರ್ಗ್ಗೇ ।

ದಿದೃಕ್ಷವಸ್ತಂ ಜಗದೇಕಸುನ್ದರಂ ಗುಣಾರ್ಣ್ಣವಂ ಪ್ರಾಯಯುರತ್ರ ಸರ್ವೇ ॥೨೪.೬೪॥

 

ಭೀಷ್ಮಾಚಾರ್ಯರೇ ಮೊದಲಾದವರಿಂದ ಸ್ನೇಹಪೂರ್ವಕವಾಗಿ ಎದುರುಗೊಂಡ ಶ್ರೀಕೃಷ್ಣ ಪರಮಾತ್ಮನು, ಅವರೆಲ್ಲರಿಂದ ಕೂಡಿಕೊಂಡು ರಾಜಮಾರ್ಗದಲ್ಲಿ ಪ್ರವೇಶಮಾಡಿದನು. ಜಗತ್ತಿನಲ್ಲಿ ಅತ್ಯಂತ ಚೆಲುವನಾದ, ಗುಣಗಳಿಗೆ ಕಡಲಿನಂತಿರುವ ಶ್ರೀಕೃಷ್ಣ ಪರಮಾತ್ಮನನ್ನು ಕಾಣಲು ಬಯಸಿ ಎಲ್ಲರೂ ಕೂಡಾ ಅಲ್ಲಿ ಬಂದಿದ್ದರು. 

 

ಸಭಾಜಿತಸ್ತೈಃ ಪರಮಾದರೇಣ ವಿವೇಶ ಗೇಹಂ ನೃಪತೇರನನ್ತಃ ।

ಸ ಭೀಷ್ಮಮುಖ್ಯಾನ್ ಪುರತೋ ನಿಧಾಯ ವೈಚಿತ್ರವೀರ್ಯ್ಯೇಣ ಸಮರ್ಚ್ಚಿತೋSಜಃ ।

ರೌಗ್ಮೇ ನಿಷಣ್ಣಃ ಪರಮಾಸನೇ ಪ್ರಭುರ್ಬಭೌ ಸ್ವಭಾಸಾ ಕಕುಭೋSವಭಾಸಯನ್ ॥೨೪.೬೫॥

 

ಭೀಷ್ಮಾದಿಗಳಿಂದ ಆದರದಿಂದ ಗೌರವಿಸಲ್ಪಟ್ಟವನಾದ ಶ್ರೀಕೃಷ್ಣನು ಧೃತರಾಷ್ಟ್ರನ ಮನೆಯನ್ನು ಕುರಿತು ತೆರಳಿದನು. ಭೀಷ್ಮ ಮೊದಲಾದವರನ್ನು ಮುಂದೆ ಇಟ್ಟುಕೊಂಡ ಧೃತರಾಷ್ಟ್ರನಿಂದ ಶ್ರೀಕೃಷ್ಣ ಪರಮಾತ್ಮನು ಪೂಜಿತನಾದನು. ಬಂಗಾರಮಯವಾದ ಆಸನದಲ್ಲಿ ಕುಳಿತವನಾಗಿ, ತನ್ನ ಕಾಂತಿಯಿಂದ ದಿಕ್ಕನ್ನು ಬೆಳಗುತ್ತಾ ಶ್ರೀಕೃಷ್ಣ ಶೋಭಿಸಿದನು.

 

ಯಥೋಚಿತಂ ತೇಷು ವಿಧಾಯ ಕೇಶವೋ ದೌರ್ಯ್ಯೋಧನಂ ಪ್ರಾಪ್ಯ ಗೃಹಂ ಚ ಪೂಜಿತಃ  

ಪೂಜಾಂ ತದೀಯಾಂ ಗುಣವದ್ ದ್ವಿಡಿತ್ಯಸೌ ಜಗ್ರಾಹ ನೋ ವಿದುರಂ ಚಾsಜಗಾಮ ॥೨೪.೬೬॥

 

ಭೀಷ್ಮಾದಿಗಳಲ್ಲೂ ಕೂಡಾ ಶ್ರೀಕೃಷ್ಣ ಯೋಗ್ಯವಾಗಿ ಪೂಜೆಯನ್ನು ಸ್ವೀಕರಿಸಿದ. ಆದರೆ ದುರ್ಯೋಧನನ ಮನೆಗೆ ತೆರಳಿದ ಅವನು  ಅಲ್ಲಿ ಗುಣದ್ವೇಷಿಯಾದ ದುರ್ಯೋಧನನ ಪೂಜೆಯನ್ನು ಸ್ವೀಕರಿಸಲಿಲ್ಲ. ನಂತರ ಕೃಷ್ಣ ವಿದುರನ ಬಳಿಗೆ ಬಂದ.

 

ಸ ಭೀಷ್ಮಪೂರ್ವೈರಭಿಯಾಚಿತೋSಪಿ ಜಗಾಮ ನೈಷಾಂ ಗೃಹಮಾದಿದೇವಃ ।

ಉಪೇಕ್ಷಿತಾ ದ್ರೌಪದೀತ್ಯಪ್ರಮೇಯೋ ಜಗಾಮ ಗೇಹಂ ವಿದುರಸ್ಯ ಶೀಘ್ರಮ್ ॥೨೪.೬೭॥

 

ದ್ರೌಪದಿಯನ್ನು(ವಸ್ತ್ರಾಪಹರಣ ಪ್ರಸಂಗದಲ್ಲಿ) ಉಪೇಕ್ಷೆ ಮಾಡಿದ್ದ ಭೀಷ್ಮಾಚಾರ್ಯರೇ ಮೊದಲಾದವರಿಂದ ಬೇಡಲ್ಪಟ್ಟರೂ ಕೂಡಾ ಕೃಷ್ಣ ಅವರ ಮನೆಗೆ ತೆರಳಲಿಲ್ಲ. ಆದರೆ ಶೀಘ್ರದಲ್ಲಿ ವಿದುರನ ಮನೆಗೆ ಕೃಷ್ಣ ತೆರಳಿದ.

 

 ಸ ತೇನ ಭಕ್ತ್ಯಾSಭಿಗತಃ ಪ್ರಸನ್ನಃ ಪ್ರವಿಶ್ಯ ಚಾನ್ತರ್ಗ್ಗೃಹಮೀಶ್ವರೋSಜಃ ।

ಭಕ್ತ್ಯಾSಭಿಪೂರ್ಣ್ಣೇನ ಸಸಮ್ಭ್ರಮೇಣ ಸಮ್ಪೂಜಿತಃ ಸರ್ವಸಮರ್ಪ್ಪಣೇನ ॥೨೪.೬೮॥

 

ವಿದುರನಿಂದ ಭಕ್ತಿಯಿಂದ ಎದುರುಗೊಳ್ಳಲ್ಪಟ್ಟವನಾಗಿ, ಅವನ ಮೇಲೆ ಅನುಗ್ರಹ ಮಾಡುತ್ತಾ, ಪ್ರಸನ್ನನಾಗಿ ಅವನ ಒಳಮನೆಯನ್ನು ಶ್ರೀಕೃಷ್ಣ ಹೊಕ್ಕ.  ಭಕ್ತಿಯಿಂದ ತುಂಬಿರುವ, ಸಂಭ್ರಮಪೂರ್ವಕವಾಗಿ ತನ್ನಲಿದ್ದ ಎಲ್ಲವನ್ನೂ ಕೊಟ್ಟು, ಸಂಪೂರ್ಣ ಸಮರ್ಪಣೆಯಿಂದ ವಿದುರ ಕೃಷ್ಣನನ್ನು ಪೂಜಿಸಿದ.  

 

ಪರೇ ದಿನೇSಸೌ ಧೃತರಾಷ್ಟ್ರಸೂನುನಾ ಸಮಾನೀತಃ ಸಂಸದಿ ಕೌರವಾಣಾಮ್ ।

ವಿವೇಶ ದಿವ್ಯೇ ಮಣಿಕಾಞ್ಚನಾಸನೇ ಸಾರ್ದ್ಧಂ ಮುನೀನ್ದ್ರೈಃ ಪರಮಾರ್ತ್ಥವೇದಿಭಿಃ ॥೨೪.೬೯॥

 

ಮಾರನೇದಿನ ದುರ್ಯೋಧನನಿಂದ ಖುದ್ದಾಗಿ ಕರೆದೊಯ್ಯಲ್ಪಟ್ಟವನಾಗಿ, ಕೌರವರ ಸಭೆಯನ್ನು ಪ್ರವೇಶಿಸಿದ ಶ್ರೀಕೃಷ್ಣ,  ಮುತ್ತು ಬಂಗಾರಗಳಿಂದ ಖಚಿತವಾಗಿರುವ ಅಲೌಕಿಕವಾಗಿರುವ ಆಸನದಲ್ಲಿ ಎಲ್ಲಾ ಮುನಿಗಳ ಜೊತೆಗೆ ಕುಳಿತನು.

No comments:

Post a Comment